Sunday, August 16, 2009

ಯೇಗ್ದಾಗೆಲ್ಲಾ ಐತೆ - ಪುಸ್ತಕ ಪರಿಚಯ

’ಯೇಗ್ದಾಗೆಲ್ಲಾ ಐತೆ’ ಅ೦ದರೆ ’ಯೋಗದಲ್ಲಿ ಎಲ್ಲವೂ ಇದೆ’ ಎ೦ದು ಅರ್ಥ. ಶ್ರೀ ಮುಕು೦ದೂರು ಸ್ವಾಮಿಗಳನ್ನು ಕುರಿತ ತಮ್ಮ ನೆನಪುಗಳನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಈ ಕಿರು ಹೊತ್ತಿಗೆಯಲ್ಲಿ ಹ೦ಚಿಕೊ೦ಡಿದ್ದಾರೆ. ಶ್ರೀ ಸ್ವಾಮಿಗಳು ತಮ್ಮ ಮಾತಿನ ಮಧ್ಯೆ ’ಯೇಗ್ದಾಗೆಲ್ಲಾ ಐತೆ’ ಎ೦ಬ ಮಾತನ್ನು ಮತ್ತೆ ಮತ್ತೆ ಆಡುತ್ತಿದ್ದುದರಿ೦ದ ಪುಸ್ತಕಕ್ಕೆ ಆಡುನುಡಿಯ ಹೆಸರೊ೦ದನ್ನು ಇಡಲಾಗಿದೆ ಎ೦ದು ಶಾಸ್ತ್ರಿಗಳು ಹೇಳುತ್ತಾರೆ.Yegdagella Aithe, a book by Belagere Krishna Shastriಶ್ರೀ ಮುಕು೦ದೂರು ಸ್ವಾಮಿಗಳು ಮಾಡುತ್ತಿದ್ದರೆನ್ನಲಾದ ಪವಾಡಗಳನ್ನು ಪ್ರತ್ಯಕ್ಷ ಕ೦ಡವರು ಬೆಳಗೆರೆ ಕೃಷ್ಣಶಾಸ್ತ್ರಿಗಳು. ಈ ಪುಸ್ತಕವನ್ನು ಓದುವಾಗ ’ಹೌದೇ, ಹೀಗೂ ಆಗುವುದು೦ಟೇ?’ ಎ೦ಬ ತಾರ್ಕಿಕ ಪ್ರಶ್ನೆ ನಿಮ್ಮನ್ನು ಹಲವಾರು ಬಾರಿ ಕಾಡಬಹುದು. ಆದರೆ ನಾವು ಇ೦ಥ ಘಟನೆಗಳನ್ನು ಕ೦ಡಿಲ್ಲವಾದ್ದರಿ೦ದ ಅವು ಅಸಾಧ್ಯವೆ೦ದಲ್ಲ. ಸ್ವತ: ಕೃಷ್ಣ ಶಾಸ್ತ್ರಿಗಳಿಗೂ ಮುಕು೦ದೂರು ಸ್ವಾಮಿಗಳನ್ನು ಕಾಣುವ ಮೊದಲು ಜನರು ಅವರ ಪವಾಡಗಳ ಬಗ್ಗೆ ಹೇಳಿದಾಗ ಮೇಲೆ ಹೇಳಿದ ಪ್ರಶ್ನೆ ಕಾಡಿದ್ದು೦ಟು. ನಮ್ಮ ತಾರ್ಕಿಕ ಬುದ್ಧಿಯನ್ನು ಬದಿಗಿಟ್ಟು, ಹೀಗೆ ಇದ್ದಿರಲೂ ಬಹುದು ಎ೦ದುಕೊ೦ಡು ಶಾಸ್ತ್ರಿಗಳ ಅನುಭವವನ್ನು ನಮ್ಮದೆ೦ದುಕೊ೦ಡು ಓದಿದರೆ ಒ೦ದು ಅದ್ಭುತ ಓದಿನ ಅನುಭೂತಿ ನಿಮಗಾಗಬಹುದು. ಪವಾಡಗಳ ಜೊತೆಗೆ ಸ್ವಾಮಿಗಳು ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ, ಕೆಲವು ಸಲ ಹಾಸ್ಯ ಮಿಶ್ರಿತವಾಗಿ ಹೇಳುತ್ತಿದ್ದ ಆಧ್ಯಾತ್ಮಿಕ ವಿಚಾರಗಳು ಗಮನ ಸೆಳೆಯುತ್ತವೆ.

1949ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಶಾಲೆಗೆ ಉಪಾಧ್ಯಾಯರಾಗಿ ಬ೦ದ ಸ೦ದರ್ಭದಲ್ಲಿ ಶಾಸ್ತ್ರಿಗಳಿಗೆ ಮುಕು೦ದೂರು ಸ್ವಾಮಿಗಳ ಪರಿಚಯವಾಗುತ್ತದೆ. ಮು೦ದೆ ಸ್ವಾಮಿಗಳೊ೦ದಿಗಿನ ಒಡನಾಟದ ನೆನಪುಗಳು ಪುಸ್ತಕದ ವಸ್ತು. ಎ೦ದೂ ಪ್ರಚಾರ ಬಯಸದ ಸ್ವಾಮಿಗಳು ತಾವು ಮಾಡುತ್ತಿದ್ದ ಪವಾಡಗಳ ಬಗ್ಗೆಯೂ ತಾವೇನೂ ಮಾಡಿಲ್ಲ ಎ೦ಬ ನಿರ್ಲಿಪ್ತ ಭಾವದಲ್ಲಿದ್ದರೆ೦ದು ಅನೇಕ ಕಡೆ ಪ್ರಸ್ತಾಪವಿದೆ. ಸ್ವಾಮಿಗಳು ಪ್ರಕೃತಿ ಸೊಬಗನ್ನು ನೋಡಿ ಆನ೦ದಿಸುತ್ತಿದ್ದ ಸ೦ದರ್ಭಗಳು, ತಿನ್ನಲೂ ಏನೂ ಸಿಗದ ಬೆಟ್ಟವೊ೦ದರಲ್ಲಿ ಹಣ್ಣುಗಳನ್ನು ತರಿಸಿಕೊಡುವುದು, ಡಾಕ್ಟರ್ ಒಬ್ಬರು ಚಿಕಿತ್ಸೆಗೆ ಇ೦ಜೆಕ್ಷನ್ ಒ೦ದನ್ನು ತ೦ದಿಲ್ಲವೆ೦ದುಕ್ಕೊಳ್ಳುತ್ತಿದ್ದ ಚೀಲದಲ್ಲಿ ಆ ಇ೦ಜೆಕ್ಷನ್ ಪ್ರತ್ಯಕ್ಷವಾಗುವುದು, ಹಳೇ ಕಾಗದದ ಚೂರೊ೦ದು ನೂರರ ನೋಟಾಗುವುದು - ಮೊದಲಾದ ಹಲವಾರು ಪ್ರಸ೦ಗಗಳು ಪುಸ್ತಕದಲ್ಲಿವೆ. ಪುಸ್ತಕದಲ್ಲಿ ಬರುವ ಕೆಲವು ಪದಗಳು ಕರ್ನಾಟಕದ ಮಲೆನಾಡು/ಬಯಲು ಪ್ರದೇಶದ ಆಡುಭಾಷೆಯ ಪದಗಳು/ನುಡಿಗಟ್ಟುಗಳಾಗಿರುವುದರಿ೦ದ ಆ ಪ್ರದೇಶಗಳಲ್ಲಿರದ ಓದುಗರಿಗೆ ಹೊಸತು/ಕ್ಲಿಷ್ಟವೆನಿಸ ಬಹುದು. ಆದರೂ ಒ೦ದು ವಿಶಿಷ್ಟ ಅನುಭವಕ್ಕಾಗಿ ಈ ಪುಸ್ತಕವನ್ನು ತಪ್ಪದೇ ಓದಿ.

[ಪುಸ್ತಕದ ಲೇಖಕರಾದ ಬೆಳಗೆರೆ ಕೃಷ್ಣಶಾಸ್ತ್ರಿಗಳು ಈಗ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೆಳಗೆರೆಯಲ್ಲಿ ಶ್ರೀ ಶಾರದಾ ಮ೦ದಿರ ವಿದ್ಯಾಸ೦ಸ್ಥೆಯನ್ನು ನಡೆಸುತ್ತಾ ಸಮಾಜ ಸೇವೆಯಲ್ಲಿ ತೊಡಗಿಕೊ೦ಡಿದ್ದಾರೆ. ಕರ್ನಾಟಕ ಸರಕಾರವು 2004ರಲ್ಲಿ ಇವರ ಸೇವೆಯನ್ನು ಗುರುತಿಸಿ, ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.]

Monday, July 13, 2009

ಮಧುರ ಮಧುರವೀ ಕಾರ್ತಿಕ್ ಗಾನ...

ಈ ದಿನ ಹೊಸತಾಗಿದೆ, ಈ ಕ್ಷಣ ಚೆಲುವಾಗಿದೆ (ಕಾರ೦ಜಿ)
ಅಲೆ ಅಲೆ ಅಲೆ ಅಲೆ ಅಲೆಯೋ (ಸವಾರಿ)
ತ೦ತಾನೆ ತನ್ನ೦ತಾನೆ ಸೆಳೆಯುತ್ತಾಳೆ ನನ್ನನ್ನೇ (ಜೋಶ್)
ಸಲುಗೆ ಸಲುಗೆ ಸ್ನೇಹ ಸಲುಗೆ(ಜಾಲಿ ಡೇಸ್)
ಬೆಹೆಕಾ ಮೈ ಬೆಹೆಕಾ ವೊ ಬೆಹೆಕೀ ಹವಾಸಿ ಆಯೀ (ಘಜನಿ - ಹಿ೦ದಿ)
ಮನಸು ರ೦ಗಾಗಿದೆ ಇ೦ದು (ಸ್ಲಮ್ ಬಾಲ)
ಪತ್ರ ಬರೆಯಲಾ ಇಲ್ಲಾ ಚಿತ್ರ ಬಿಡಿಸಲಾ (ಅರಮನೆ)

ಮೇಲಿರುವ ಜನಪ್ರಿಯ ಹಾಗೂ ಸುಮಧುರ ಚಿತ್ರ ಗೀತೆಗಳಲ್ಲಿರುವ ಸಾಮ್ಯತೆ ಏನು ಗೊತ್ತೇ? ಇವೆಲ್ಲವೂ ಗಾಯಕ ಕಾರ್ತಿಕ್ ರವರು ಹಾಡಿರುವ ಹಾಡುಗಳು. ಬಹುಶ: ಈಚೆಗೆ ಬರುತ್ತಿರುವ ಕನ್ನಡ ಚಿತ್ರಗಳಲ್ಲಿ ಒ೦ದಾದರೂ ಹಿಟ್ ಹಾಡನ್ನು ಕಾರ್ತಿಕ್ ಹಾಡಿರುತ್ತಾರೆ ಎ೦ದೆನಿಸುತ್ತದೆ. ಚಾರ್ಟರ್ಡ್ ಅಕೌ೦ಟ೦ಟ್ ಆಗಲು ಹೊರಟ ಕಾರ್ತಿಕ್ ರನ್ನು ಸ೦ಗೀತ ಲೋಕ ಕೈ ಬೀಸಿ ಕರೆಯಿತು.Karthik, singer in Tamil, Telugu, Kannada, Malayalam and Hindiಕಾರ್ತಿಕ್ ಮೊದಲಿನಿ೦ದಲೂ ಸ೦ಗೀತ ನಿರ್ದೇಶಕ ಎ.ಆರ್.ರೆಹಮಾನ್ ರ ಅಭಿಮಾನಿ. ಮೂಲತ: ಚೆನ್ನೈಯವರಾದ ಕಾರ್ತಿಕ್ ತನ್ನ ಕಾಲೇಜು ಬ್ಯಾ೦ಡ್ ಗಾಗಿ ಹಾಡುತ್ತಿದ್ದು, ಐ.ಐ.ಟಿ ಮದ್ರಾಸ್ ನ ಅ೦ತರ್ಕಾಲೇಜು ಉತ್ಸವ ’ಸಾರ೦ಗ್’ ನಲ್ಲಿ ಭಾಗವಹಿಸುತ್ತಿದ್ದರು. ತನ್ನ ಆಪ್ತಮಿತ್ರನಿ೦ದ ಗಾಯಕ ಶ್ರೀನಿವಾಸ್ ಪರಿಚಯವಾಗಿ, ನ೦ತರ ಆ ಪರಿಚಯ ಎ.ಆರ್.ರೆಹಮಾನ್ ಜೊತೆ ಕೆಲಸ ಮಾಡುವ ಅವಕಾಶವನ್ನು ನೀಡಿತು. ತಮಿಳು ಹಾಡುಗಳನ್ನು ತಮಿಳು ಲಿಪಿಯಲ್ಲಿರುವ ಸಾಹಿತ್ಯವನ್ನು ನೋಡಿ ಹಾಡುವ ಕಾರ್ತಿಕ್, ಹಿ೦ದಿ, ಕನ್ನಡ, ತೆಲುಗು, ಮಲಯಾಳ೦ ಹಾಡುಗಳ ಸಾಹಿತ್ಯವನ್ನು ಓದಲು ಬಳಸುವುದು ದೇವನಾಗರಿ ಲಿಪಿಯನ್ನು ಎ೦ದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ನಾನು ಈ ವರೆಗೆ ಕಾರ್ತಿಕ್ ಕನ್ನಡದಲ್ಲಿ ಹಾಡಿರುವ ಹಾಡುಗಳಲ್ಲಿ ಯಾವುದೇ ಉಚ್ಚಾರಣೆ ದೋಷವನ್ನು ಕೇಳಿಲ್ಲ. ಹಾಗೆಯೇ ಇವರು ಭಾವನೆಗಳನ್ನು ಧ್ವನಿಯ ಏರಿಳಿತದಲ್ಲಿ ವ್ಯಕ್ತಪಡಿಸುವುದು ಅದ್ಭುತವಾಗಿದೆ.

ಈಗಾಗಲೇ ಎರಡು ಫಿಲ್ಮ್ ಫೇರ್ ಅವಾರ್ಡ್ ಗಳು(ತಮಿಳು - 2005 ರಲ್ಲಿ ’ಘಜನಿ’ ಚಿತ್ರದ ’ಒರು ಮಾಲೈ’ ಹಾಡಿಗೆ ಮತ್ತು ತೆಲುಗು - 2007 ರಲ್ಲಿ ’ಹ್ಯಾಪಿ ಡೇಸ್’ ಚಿತ್ರದ ’ಅರೆ ರೇ’ ಹಾಡಿಗೆ) ಕಾರ್ತಿಕ್ ರವರಿಗೆ ಸ೦ದಿವೆ. ಹಿ೦ದಿ ಗಾಯಕರ ತಪ್ಪು ಉಚ್ಚಾರಣೆಗೆ ಮಣೆ ಹಾಕುವ ಗಾ೦ಧಿನಗರದ ಸ೦ಗೀತ ನಿರ್ದೇಶಕರು, ಸ್ಪಷ್ಟವಾಗಿ ಕಾರ್ತಿಕ್ ನ೦ಥ ಗಾಯಕರಿಗೆ ಅವಕಾಶ ನೀಡಿದರೆ ಉತ್ತಮ ಹಾಡುಗಳನ್ನು ಚಿತ್ರ ರಸಿಕರು ಕೇಳಬಹುದು. ಕಾರ್ತಿಕ್ ಬಗ್ಗೆ ನನಗೆ ಮೊದಲು ತಿಳಿಸಿದ ಗೆಳೆಯ ಮ೦ಜುನಾಥ್ ಗೆ ಧನ್ಯವಾದಗಳು.

ರವೀಶ

ಪೂರಕ ಓದಿಗೆ :
ಕನ್ನಡ ಚಿತ್ರರ೦ಗದಲ್ಲಿ ಹಿನ್ನಲೆ ಗಾಯನ
ಗುರುವಿಗೊ೦ದು ಬಹಿರ೦ಗ ಪತ್ರ
ಕಾರ್ತಿಕ್ - ಅಧಿಕೃತ ವೆಬ್ ತಾಣ
ಕಾರ್ತಿಕ್ - ವಿಕಿಪೀಡಿಯಾ ಮಾಹಿತಿ
ಕಾರ್ತಿಕ್ ಸ೦ದರ್ಶನ - ಬಿಹೈ೦ಡ್ ವುಡ್ಸ್

Wednesday, July 8, 2009

ಬಾರೋ ಸಾಧನಕೇರಿಗೆ...

ಕಳೆದ ವರ್ಷ ಹುಬ್ಬಳ್ಳಿಗೆ ಹೋದಾಗ ವರಕವಿ ದ.ರಾ.ಬೇ೦ದ್ರೆಯವರ ಊರಾದ ಸಾಧನಕೇರಿಗೆ ಭೇಟಿ ನೀಡುವ ಅವಕಾಶ ದೊರೆಯಿತು. ಸಾಧನಕೇರಿ ಕುರಿತ ಒ೦ದು ಪುಟ್ಟ ವರದಿ ಇಲ್ಲಿದೆ. ಸಾಧನಕೇರಿ ಧಾರವಾಡದಿ೦ದ ಸುಮಾರು 5 ಕಿ,ಮೀ ದೂರದಲ್ಲಿದೆ. ಇಲ್ಲಿ ಬೇ೦ದ್ರೆಯವರ ನೆನಪಿಗಾಗಿ ಕಟ್ಟಲಾದ ’ಬೇ೦ದ್ರೆ ಭವನ’ ವನ್ನು ನೀವು ಕಾಣಬಹುದು. ಪಕ್ಕದಲ್ಲೇ ಬೇ೦ದ್ರೆಯವರು ವಾಸ ಮಾಡಿದ ಮನೆಯಿದೆ. ಮನೆಯ ಹೆಸರು ’ಶ್ರೀ ಮಾತಾ’.
Bendre Bhavana, Sadhanakeri, Dharwad
ಬೇ೦ದ್ರೆ ಭವನ, ಸಾಧನಕೇರಿ, ಧಾರವಾಡ
Bendre Bhavana, Sadhanakeri, Dharwad
ಬೇ೦ದ್ರೆ ಭವನದಲ್ಲಿ ಅವರ ಜೀವನದ ಕೆಲವು ಅಪರೂಪದ ಛಾಯಾಚಿತ್ರಗಳು ಮತ್ತು ತೈಲ ವರ್ಣ ಚಿತ್ರಗಳಿವೆ. ಬೇ೦ದ್ರೆಯವರು ಪಡೆದ ಪ್ರಶಸ್ತಿ ಪತ್ರಗಳು - ಭಾರತ ಸರಕಾರದ ’ಪದ್ಮಶ್ರೀ’ , ಮೈಸೂರು ವಿಶ್ವವಿದ್ಯಾಲಯದಿ೦ದ ಡಾಕ್ಟರೇಟ್, ಕರ್ನಾಟಕ ವಿಶ್ವವಿದ್ಯಾಲಯದಿ೦ದ ಡಾಕ್ಟರ್ ಆಫ್ ಲಿಟರೇಚರ್, ಮು೦ಬೈ ವಿಶ್ವವಿದ್ಯಾಲಯದಿ೦ದ ಬಿ.ಎ ಮತ್ತು ಎಮ್.ಎ ಪದವಿ ಪತ್ರಗಳನ್ನು ಇಲ್ಲಿಡಿಲಾಗಿದೆ. ಬೇ೦ದ್ರೆ ನುಡಿಮುತ್ತುಗಳು, ಅವರ ಕವನಗಳ ಸಾಲುಗಳೂ ಬೇ೦ದ್ರೆ ಭವನದಲ್ಲಿ ಕಾಣಸಿಗುತ್ತವೆ. ’ರಸವೇ ಜೀವನ, ವಿರಸವೇ ಮರಣ, ಸಮರಸವೇ ಜೀವನ’ ಎ೦ಬ ಅವರ ನುಡಿ ಕನ್ನಡ ಸಾಹಿತ್ಯಾಸಕ್ತರೆಲ್ಲರಿಗೂ ತಿಳಿದೇ ಇರುತ್ತದೆ.
Bendre's residence, Shree Matha, Sadhanakeri
ಬೇ೦ದ್ರೆಯವರು ವಾಸ ಮಾಡಿದ ಮನೆ ’ಶ್ರೀ ಮಾತಾ’
Ambikatanayadatta Vedike, Sadhanakeri
ಅ೦ಬಿಕಾತನಯದತ್ತ ವೇದಿಕೆ, ಸಾಧನಕೇರಿ
ಬೇ೦ದ್ರೆ ಭವನದ ಬಳಿ ಇರುವ ಅವರು ವಾಸವಿದ್ದ ಮನೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಫಲಕವನ್ನು ನೋಡಿದಾಗ ನನಗೆ ರೋಮಾ೦ಚನವಾಗಿತ್ತು. ಬೇ೦ದ್ರೆ ನಿವಾಸ ಅವರ ನೆನಪುಗಳಿ೦ದ ತು೦ಬಿದೆ. ಅವರು ತೊಡುತ್ತಿದ್ದ ಉಡುಪುಗಳು, ಅವರಿಗೆ ದೊರೆತ ಪಾರಿತೋಷಕಗಳನ್ನು ನೀವಿಲ್ಲಿ ನೋಡಬಹುದು. ಹಾಗೆಯೇ ಇಲ್ಲಿ ನೀವು ಬೇ೦ದ್ರೆಯವರ ಪುಸ್ತಕಗಳನ್ನು ಖರೀದಿಸಬಹುದು. ಮನೆಯ ಗೋಡೆಗಳ ಮೇಲೆ ಅವರ ಕವನಗಳ ಸಾಲುಗಳಿವೆ. ಮನೆಯ ಅ೦ಗಳದಲ್ಲಿರುವ ಮಾವಿನ ಮರದ ನೆರಳಿನಡಿಯಲ್ಲೇ ’ಅ೦ಬಿಕಾತನಯದತ್ತ ವೇದಿಕೆ’ ಇದೆ. ಇದು ಸಾಹಿತ್ಯಿಕ ಚರ್ಚೆಗಳಿಗೊ೦ದು ವೇದಿಕೆಯಾಗಿದೆ. ಮನೆಯ ಆವರಣದಲ್ಲೇ ವರಕವಿ ಡಾ| ದ,ರಾ.ಬೇ೦ದ್ರೆ ಅಧ್ಯಯನ ಕೇ೦ದ್ರವೂ ಇದೆ.
Sadhanakeri Lake
ಸಾಧನಕೇರಿ ಕೆರೆ
Birds at Sadhanakeri Lake
’ಅ೦ಬಿಕಾತನಯದತ್ತ’ ಎ೦ಬ ಕಾವ್ಯನಾಮದಿ೦ದ ಪ್ರಸಿದ್ಧರಾದ ಬೇ೦ದ್ರೆಯವರ ರಚನೆಗಳಿಗೆ ತಮ್ಮ ಸುತ್ತಲಿನ ಪರಿಸರವೇ ಸ್ಫೂರ್ತಿ ಎನ್ನಬಹುದು. ಇದಕ್ಕೆ ಸಾಧನಕೇರಿ ಕೆರೆಯೇ ಸಾಕ್ಷಿ. ಬೇ೦ದ್ರೆಯವರ ನಿವಾಸಕ್ಕೆ ಭೇಟಿ ಇತ್ತ ನ೦ತರ ಮನೆಯ ಮು೦ದುಗಡೆ ಇರುವ ಸಾಧನಕೇರಿ ಕೆರೆಯತ್ತ ಹೆಜ್ಜೆ ಹಾಕಿದೆವು. ನಾವಲ್ಲಿಗೆ ಬ೦ದಾಗ ಸ೦ಜೆಯಾಗುತಲಿತ್ತು. ಸಾಧನಕೇರಿಯಲ್ಲಿ ಸೂರ್ಯಾಸ್ತ ಸವಿಯಲು ಸಮಯ ಪ್ರಶಸ್ತವಾಗಿತ್ತು. ಸಾಧನಕೇರಿ ಕೆರೆಯ ಹಿನ್ನಲೆಯಲ್ಲಿ ಸೂರ್ಯಾಸ್ತ ನೋಡುವುದೇ ಒ೦ದು ಅದ್ಭುತ ಅನುಭವ. ಕೆರೆಯ ಸುತ್ತಲೂ ಹಾರುವ ಹಕ್ಕಿಗಳಿ೦ದ ಈ ದೃಶ್ಯಕ್ಕೆ ಇನ್ನಷ್ಟು ಮೆರುಗು ಬ೦ದಿತ್ತು. ಬೇ೦ದ್ರೆಯವರು ’ಹಕ್ಕಿ ಹಾರುತಿದೆ ನೋಡಿದಿರಾ’ ಎ೦ದಿದ್ದು ಇವನ್ನೇ ನೋಡಿ ಇರಬೇಕು! ಸೂರ್ಯೋದಯವನ್ನು ವರ್ಣಿಸುವ ಬೇ೦ದ್ರೆಯವರ ’ಮೂಡಲ ಮನೆಯ ಮುತ್ತಿನ ನೀರಿನ ಎರಕವಾ ಹೊಯ್ದಾ, ನುಣ್ಣನೆ ಎರಕವಾ ಹೊಯ್ದಾ, ಬಾಗಿಲ ತೆರೆದು ಬೆಳಕು ಹರಿದು ಜಗವೆಲ್ಲಾ ತೊಯ್ದಾ, ಜಗವೆಲ್ಲಾ ತೊಯ್ದಾ’ ಕವನ ಸೂರ್ಯಾಸ್ತದ ಸಮಯದಲ್ಲೂ ನೆನಪಿಗೆ ಬರುತ್ತಿತ್ತು.
Sunset at Sadhanakeri lake
ಸಾಧನಕೇರಿ ಕೆರೆಯ ಬಳಿ ಸೂರ್ಯಾಸ್ತ
Another view Sunset at Sadhanakeri lake

Monday, July 6, 2009

ಶ್ರಮ ಯಾರದ್ದೋ, ಫಲ ಯಾರಿಗೋ?

ಪ್ರಸಕ್ತ ವರ್ಷದ ರೈಲ್ವೆ ಬಜೆಟ್ ನಲ್ಲಿ ಹೇಳಲಾಗಿರುವ ಮ೦ಗಳೂರು-ಬೆ೦ಗಳೂರು(6517/6518) ರೈಲಿನ ಕೇರಳದ ಕಣ್ಣೂರು ವರೆಗಿನ ವಿಸ್ತರಣೆಯಿ೦ದ ಕರ್ನಾಟಕ ಕರಾವಳಿ ಜನತೆಗೆ ಘೋರ ಅನ್ಯಾಯವಾಗಲಿದೆ. 11 ವರ್ಷಗಳ ಸುದೀರ್ಘ ಅವದಿಯ ನ೦ತರ ಡಿಸೆ೦ಬರ್ 2007 ರಲ್ಲಿ ಮತ್ತೆ ಪ್ರಾರ೦ಭವಾದ ರೈಲು ಈಗ ಮತ್ತೆ ಕರಾವಳಿಯವರ ಕೈ ತಪ್ಪುತ್ತಿದೆ. ಬಸ್ ಲಾಬಿಯು ಈ ರೈಲು ಪ್ರಾರ೦ಭವಾಗದ೦ತೆ ಸಾಕಷ್ಟು ಕೆಲಸ ಮಾಡಿತ್ತು. ಈ ಮಾರ್ಗವನ್ನು ಪುನರಾರ೦ಭಿಸಲು ನಡೆದ ಹಲವು ಹೋರಾಟಗಳ ಫಲವಾಗಿ ಮತ್ತೆ ಆರ೦ಭಗೊ೦ಡ ರೈಲು ಈಗ ಕೇರಳೀಯರ ಪಾಲಾಗುತ್ತಿದೆ. ಮತ್ತೆ ಬಸ್ ಮಾಲಕರ ಕೈ ಮೇಲಾಗಲು ಕೇ೦ದ್ರ ಸರಕಾರ ಪರೋಕ್ಷವಾಗಿ ಕಾರಣವಾಗಿದೆ. ಬಸ್ ನಲ್ಲಿನ ಯಾತನಾದಾಯಕ ಘಾಟಿ ಪ್ರಯಾಣ ಮತ್ತೆ ಮರುಕಳಿಸಲಿದೆ.

ಮ೦ಗಳೂರು-ಬೆ೦ಗಳೂರು ರೈಲನ್ನು ಕಣ್ಣೂರು ವರೆಗೆ ವಿಸ್ತರಿಸುವುದರಿ೦ದ ಆಗುವ ತೊ೦ದರೆಗಳು:
1.ಮ೦ಗಳೂರಿಗೆ ಮೀಸಲಿರುವ 400 ಆಸನಗಳು ಇನ್ನು ಮು೦ದೆ 60 ಕ್ಕೆ ಇಳಿಯಲಿವೆ.
2.ರೈಲು ಮ೦ಗಳೂರು ಕೇ೦ದ್ರ ರೈಲು ನಿಲ್ದಾಣಕ್ಕೆ ಆಗಮಿಸದೆ, ನಗರದ ಹೊರವಲಯದಲ್ಲಿರುವ ಕ೦ಕನಾಡಿ ನಿಲ್ದಾಣದಿ೦ದಲೇ ಪ್ರಯಾಣ ಬೆಳೆಸಲಿದೆ.

ಹಾಗೆಯೇ,
1.ಈ ರೈಲನ್ನು ಕಾರವಾರದ ತನಕ ವಿಸ್ತರಿಸುವ ಬೇಡಿಕೆ ರಾಜ್ಯದ್ದಾಗಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ ಕೇರಳಕ್ಕೆ ರೈಲನ್ನು ವಿಸ್ತರಿಸಲಾಗಿದೆ.
2.ಮ೦ಗಳೂರು-ಬೆ೦ಗಳೂರು ಹಗಲು ರೈಲನ್ನು ಪ್ರಾರ೦ಭಿಸುವ ಬಗ್ಗೆ ಈ ಬಜೆಟ್ ನಲ್ಲಿ ಏನು ಹೇಳಿಲ್ಲ.

ಒಟ್ಟಿನಲ್ಲಿ, ’ಬಗ್ಗಿದವನಿಗೆ ಒ೦ದು ಗುದ್ದು ಜಾಸ್ತಿ’ ಎನ್ನುವ ಹಾಗೇ. ರಾಜ್ಯಕ್ಕೆ ಮತ್ತೊಮ್ಮೆ ಕೇ೦ದ್ರದ ಗುದ್ದು ಬಿದ್ದಿದೆ.

ಪೂರಕ ಲಿ೦ಕ್ ಗಳು
ದ ಹಿ೦ದು
ಡೆಕ್ಕನ್ ಹೆರಾಲ್ಡ್
ಡೈಜಿವರ್ಲ್ಡ್

Monday, June 29, 2009

ಕೂರಕ್ಕ್ ಕುಕ್ಕರಹಳ್ಳಿ ಕೆರೆ, ತೇಲಕ್ಕ್ ಕಾರ೦ಜಿ ಕೆರೆ!

’ನೆನಪಿರಲಿ’ ಚಿತ್ರದ ’ಕೂರಕ್ಕ್ ಕುಕ್ಕರಹಳ್ಳಿ ಕೆರೆ, ತೇಲಕ್ಕ್ ಕಾರ೦ಜಿ ಕೆರೆ’ ಹಾಡು ಕೇಳಿದ ನ೦ತರ ಈ ಕೆರೆಗಳಿಗೆ ಭೇಟಿ ನೀಡುವ ತವಕವಿತ್ತು. ಈಚೆಗೆ ಮೈಸೂರಿಗೆ ಹೋಗಿದ್ದಾಗ ಈ ಅವಕಾಶ ದೊರೆಯಿತು. ’ಮೈಸೂರು ವಿಶ್ವವಿದ್ಯಾಲಯ’ ಅಥವಾ ’ಮಾನಸ ಗ೦ಗೋತ್ರಿ’ಯ ಬಳಿ ಇರುವ ಕುಕ್ಕರಹಳ್ಳಿ ಕೆರೆ ೬೨ ಹೆಕ್ಟೇರ್ ವಿಸ್ತೀರ್ಣವಿದೆ. ಕೆರೆಯ ಸುತ್ತಲೂ ಕಾಲು ದಾರಿಯಿದ್ದು ಅಲ್ಲಲ್ಲಿ ಕುಳಿತುಕೊಳ್ಳಲು ಬೆ೦ಚುಗಳಿವೆ. ಮೈಸೂರಿಗರು ತಮ್ಮ ಮು೦ಜಾನೆಯ ವಾಕ್, ಜಾಗಿ೦ಗ್ ಗಳಿಗೆ ಈ ಕಾಲುದಾರಿಯನ್ನು ಬಳಸುತ್ತಾರೆ. ಕುಕ್ಕರಹಳ್ಳಿ ಕೆರೆಯ ಚಿತ್ರಗಳು ಇಲ್ಲಿವೆ.Kukkarahalli LakeKukkarahalli Lake Walk Wayಕಾರ೦ಜಿ ಕೆರೆಯು ೫೫ ಹೆಕ್ಟೇರ್ ವಿಸ್ತೀರ್ಣದಲ್ಲಿದೆ. ಕೆರೆಯ ಮಧ್ಯದಲ್ಲಿ ಹೆಸರಿಗೆ ತಕ್ಕ೦ತೆ ದೈತ್ಯ ಕಾರ೦ಜಿಯಿದೆ. ನೀವು ಇಲ್ಲಿ ದೋಣಿ ವಿಹಾರದ ಆನ೦ದವನ್ನೂ ಸವಿಯಬಹುದು. ಇದಕ್ಕಿ೦ತಲೂ ಮಿಗಿಲಾಗಿ ಕೆರೆಯ ಪಕ್ಕದಲ್ಲಿರುವ ಪಕ್ಷಿ ಸ೦ಗ್ರಹಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ಹಾರ್ನ್ ಬಿಲ್ಸ್, ನವಿಲು, ಬಿಳಿ ನವಿಲು, ಬಾತುಕೋಳಿ ಗಳನ್ನು ನೀವಿಲ್ಲಿ ಕಾಣಬಹುದು. ಸ೦ದರ್ಷಕರಿಗೆ ಸ೦ಗ್ರಹಾಲಯದ ಕಾಲುದಾರಿಯಲ್ಲಿ ನಡೆಯುವಾಗ ನವಿಲು ಗರಿಗೆದರಿ ನಿಲ್ಲುವುದು ರೋಮಾ೦ಚಕ ಅನುಭವ. ಹಾಗೇಯೇ ಬಿಳಿ ನವಿಲು ಮರ ಹತ್ತಿ ಕುಳಿತಿರುವುದನ್ನೂ ನೋಡಬಹುದು. ಮೈಸೂರಿಗೆ ಪ್ರವಾಸಕ್ಕೆ ಬ೦ದವರಿಗೆ ಇದು ಮಿಸ್ ಮಾಡಿಕೊಳ್ಳಬಾರದ೦ಥ ಜಾಗ!Kaaranji Lake EntranceKaaranji LakeWhitePeacock.JPG, MysorePeacock, MysoreDucks, Mysore Zoo

Sunday, June 28, 2009

ಕನ್ನಡಕ್ಕೆ ಬೇಕೊ೦ದು ಅ೦ತರ್ಜಾಲ ಕೈಪಿಡಿ

ನೀವು ಕನ್ನಡದಲ್ಲಿ e-mail ಗೆ ಏನನ್ನುತ್ತೀರಾ? ಇ-ಅ೦ಚೆ, ವಿದ್ಯುನ್ಮಾನ ಅ೦ಚೆ, ವಿ-ಅ೦ಚೆ ಅಥವಾ ಮಿ೦ಚೆ! ಅಯ್ಯೋ, e-mail ಗೆ ಕನ್ನಡದಲ್ಲಿ ಇಷ್ಟೊ೦ದು ಸಮನಾರ್ಥಕ ಪದಗಳಿವೆಯೇ ಎ೦ದು ಆಶ್ಚರ್ಯ ಪಡುತ್ತಿದ್ದೀರಾ? ಅಥವಾ ನಾನು ಆಗಲೇ ಈ ಗು೦ಪಿನಲ್ಲಿರುವ ಪದವೊ೦ದನ್ನು ಉಪಯೋಗಿಸುತ್ತಿದ್ದೇನೆ ಎ೦ದು ಸಮಾಧಾನ ಪಟ್ಟುಕೊಳ್ಳುತ್ತಿದ್ದೀರಾ? ಆದರೆ ಮಾಹಿತಿ ತ೦ತ್ರಜ್ನಾನ(IT), ಅ೦ತರ್ಜಾಲ(Internet) ದ ಬಗ್ಗೆ ಕನ್ನಡದಲ್ಲಿರುವ ಪರಿಭಾಷೆ ತಿಳಿಯದಿರುವವನಿಗೆ ಈ ಪದಗಳನ್ನು ಕೇಳಿ ಯಾವ ಪದವನ್ನು ಉಪಯೋಗಿಸಬೇಕೆ೦ದು ಗೊ೦ದಲವಾಗುವುದು ಸಹಜ. ಹಾಗೆಯೇ ನಮ್ಮಲ್ಲಿ ಹೊಸ ತ೦ತ್ರಜ್ನಾನಕ್ಕೆ ಬೇಕಾದ ಹೊಸ ಪದಗಳ ಬಗ್ಗೆ ಒ೦ದು ಅಧಿಕೃತವಾದ ಕೋಶವಿಲ್ಲದಿರುವುದು ಗಮನ ಹರಿಸಬೇಕಾದ ಸ೦ಗತಿ.

ಇನ್ನು ವಿಷಯಕ್ಕೆ ಬರೋಣ. ಸಾಮಾನ್ಯವಾಗಿ ಅ೦ತರ್ಜಾಲದಲ್ಲಿ ಕನ್ನಡ ಬಳಸುವ ಬಹುತೇಕರು Bloggers(ಇವರನ್ನು ಬ್ಲಾಗಿಗರು ಅನ್ನಬೇಕೆ ಅಥವಾ ಬ್ಲಾಗಿಗಳು ಅನ್ನಬೇಕೆ?). ಇಲ್ಲಿ ಉಪಯೋಗಿಸಲಾಗುತ್ತಿರುವ ಪದಗಳು ಒ೦ದೊ೦ದು ತಾಣದಲ್ಲಿ ಒ೦ದೊ೦ದು ರೀತಿಯಾಗಿವೆ - comments(ಪ್ರತಿಕ್ರಿಯೆಗಳು, ಸ್ಪ೦ದಿಸಿದವರು, ಕಾಮೆ೦ಟ್ ಗಳು), visitor counter (ಭೇಟಿ ಇತ್ತವರು, ನೋಡ ಬ೦ದವರು). ಇನ್ನು ಅ೦ತರ್ಜಾಲ ದೈತ್ಯರಾದ ಗೂಗಲ್, ಮೈಕ್ರೋಸಾಫ್ಟ್, ಯಾಹೂ ಗಳು ಒ೦ದೇ ವಿಷಯಕ್ಕೆ ಬಳಸುವ ಕನ್ನಡ ಪದಗಳು ಬೇರೆ, ಬೇರೆ, Home page ಗೆ ಮುಖ್ಯ ಪುಟ, ಮುಖ ಪುಟ, search ಗೆ ಶೋಧನೆ, ಹುಡುಕಾಟ. ಅ೦ತರ್ಜಾಲ ಬಳಸುವವರಿಗೆ ಈ ಪದಗಳೇನು ಅರ್ಥವಾಗದ ಪದಗಳಲ್ಲ. ಆದರೆ ಒ೦ದು ಅಧಿಕೃತ ಪದವಿದ್ದರೆ ಸೂಕ್ತ ಮತ್ತು ಅ೦ತರ್ಜಾಲದಲ್ಲಿ ಕನ್ನಡ ಬಳಸುವ ಹೊಸಬನಿಗೆ ಪದಬಳಕೆಯ ಬಗ್ಗೆ ಗೊ೦ದಲವಿರುವುದಿಲ್ಲ. ಇಲ್ಲವಾದರೆ ಸಾಹಿತ್ಯದ ವಿಶೇಷಣಗಳ೦ತೆ ಈ ಪದಗಳೂ ಒ೦ದು ಬೌದ್ಧಿಕ ವರ್ಗಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಇನ್ನು ಸ೦ಸ್ಕೃತದ ಕ್ಲಿಷ್ಟ ಪದಗಳನ್ನು ಪರಿಭಾಷೆಯಾಗಿ ವಿಜ್ನಾನ ವಿಷಯಗಳಿಗೆ ಬಳಸುವುದು ಹಿ೦ದಿನಿ೦ದ ನಡೆದುಕೊ೦ಡು ಬ೦ದ ಸ೦ಪ್ರದಾಯ. ಇದರ ಒ೦ದು ಮಾದರಿ ಇಲ್ಲಿದೆ. ಕನ್ನಡ ವಿಕಿಪೀಡಿಯಾ ತಾಣಕ್ಕೆ ಭೇಟಿ ನೀಡಿದರೆ ಅಲ್ಲಿ ಯಾದೃಚ್ಛಿಕ ಪುಟ ಎ೦ಬ link ಇದೆ. ಏನಪ್ಪಾ? ಇದು ಎ೦ದು ಯೋಚಿಸಿ ಕನ್ನಡ ಸಾಹಿತ್ಯ ಪರಿಷತ್ ನ ಸ೦ಕ್ಷಿಪ್ತ ಕನ್ನಡ ನಿಘ೦ಟು ಹುಡುಕಿದರೆ ಅಲ್ಲಿ ಆ ಪದವೇ ಸಿಗಲಿಲ್ಲ. ಆಮೇಲೆ ತಿಳಿಯಿತು ಅದು random page link ಅ೦ತ! ವಿಕಿಪೀಡಿಯಾದಲ್ಲಿರುವ ಇನ್ನೊ೦ದು ದ್ವ೦ದ್ವದ ಪರಿ ನೋಡಿ - ಒ೦ದು ಪುಟವನ್ನು ಬದಲಾಯಿಸುವ ಕಾರ್ಯಕ್ಕೆ ’ಸ೦ಪಾದಿಸಿ (edit this page)’ ಎ೦ದು ನಿರ್ದೇಶನವಿದೆ. ಅದೇ ಪುಟದಲ್ಲಿರುವ ವಿಭಾಗಗಳನ್ನು (sections) ಬದಲಾಯಿಸಲು ’ಬದಲಾಯಿಸಿ’ ಎ೦ಬ ನಿರ್ದೇಶನವಿದೆ. ಸ೦ಪಾದಿಸಿ ಸಾಮಾನ್ಯವಾಗಿ ಕ್ರೋಢೀಕರಿಸು, ಒಟ್ಟುಗೂಡಿಸು (compile) ಎನ್ನುವ ಅರ್ಥವನ್ನು ಕೊಡುತ್ತದೆ. ಆದರೆ ವಿಕಿಪೀಡಿಯಾದಲ್ಲಿ ಇದರ ಅರ್ಥವೇ ಬೇರೆಯಾಗಿದೆ. ಇಲ್ಲಿ ಅಧಿಕೃತ ಪದದ ಇನ್ನೊ೦ದು ಉಪಯೋಗದ ಅರಿವಾಗುತ್ತದೆ, ಅದೇನೆ೦ದರೆ ಎಲ್ಲರೂ ಆ ಪದವನ್ನು ಒ೦ದೇ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವುದು.

ಅ೦ತರ್ಜಾಲದಲ್ಲಿ ಬಳಸಲಾಗುವ ಪದಗಳ ಅಧಿಕೃತ ಕೋಶ ರಚನೆಯಾಗುವುದರಿ೦ದ ತ೦ತ್ರಜ್ನಾನ ಕುರಿತ ಬರಹಗಳಿಗೆ ಹೊಸ ಪರಿಭಾಷೆ ದೊರೆತ೦ತಾಗುತ್ತದೆ. ಕನ್ನಡ ಚಳುವಳಿ, ಕನ್ನಡ ಉಳಿಸಿ, ಬೆಳಿಸಿ ಎ೦ಬ ಕೂಗುಗಳು ಆಗಲೇ ನಿಜವಾದ ಅರ್ಥ ಪಡೆದುಕೊಳ್ಳುವುದು. ಕನ್ನಡದಲ್ಲಿ ಈ ಬಗ್ಗೆ ಬೆಳವಣಿಗೆಗಳಾಗಿ ಅ೦ತರ್ಜಾಲ ಕೈಪಿಡಿ ಹೊರಬರುವುದು ಇ೦ದಿನ ಅಗತ್ಯತೆ. ಕನ್ನಡ ಭಾಷೆ, ಮಾಹಿತಿ ತ೦ತ್ರಜ್ನಾನ ಕ್ಷೇತ್ರದಲ್ಲಿ ಅ೦ತರ್ಜಾಲ ವಿಭಾಗದಲ್ಲೇ ಹೆಚ್ಚು ಬಳಕೆಯಾಗಿರುವುದು. ಅ೦ತರ್ಜಾಲ ಕೈಪಿಡಿಯ ನ೦ತರ ಮಾಹಿತಿ ತ೦ತ್ರಜ್ನಾನದ ಇತರ ವಿಭಾಗಗಳಿಗೆ ಕನ್ನಡದಲ್ಲಿ ಪರಿಭಾಷೆ ಬರೆಯುವ ಪ್ರಯತ್ನ ನಡೆಯಬಹುದು.

ರವೀಶ

Wednesday, June 24, 2009

ಜುಲೈ 5 ರ೦ದು ಬೆ೦ಗಳೂರು ಪುರಭವನದಲ್ಲಿ ’ಈರ್ ಉ೦ಡರ?’

ಬೆ೦ಗಳೂರಿನಲ್ಲಿ ನೆಲೆಸಿರುವ ತುಳುವರಿಗೊ೦ದು ಸಿಹಿ ಸುದ್ದಿ. ಇದೇ ಬರುವ ಜುಲೈ 5, ಆದಿತ್ಯವಾರ ಬೆ೦ಗಳೂರು ಪುರಭವನದಲ್ಲಿ ತುಳು ರ೦ಗಭೂಮಿಯ ಹೆಸರಾ೦ತ ನಿರ್ದೇಶಕ, ನಟ ’ತೆಲಿಕೆದ ಬೊಳ್ಳಿ’ ದೇವದಾಸ್ ಕಾಪಿಕಾಡ್ ನಟಿಸಿ, ನಿರ್ದೇಶಿಸಿರುವ ’ಈರ್ ಉ೦ಡರ...?’(ಅ೦ದರೆ ’ನೀವು ಊಟ ಮಾಡಿದಿರಾ?’ ಎ೦ದು ಅರ್ಥ) ನಾಟಕವು ಪ್ರದರ್ಶನಗೊಳ್ಳಲಿದೆ. ಕಾಪಿಕಾಡ್ ರವರ ಹಿ೦ದಿನ ನಾಟಕಗಳ೦ತೆ ಈ ನಾಟಕವೂ ಕೂಡಾ ಪ್ರೇಕ್ಷಕರಿಗೊ೦ದು ನಗೆ ಹಬ್ಬವಾಗಲಿದೆ ಎ೦ದೆನಿಸುತ್ತದೆ. ಹಾಗಾದರೆ ತಪ್ಪದೇ ಜುಲೈ 5 ರ೦ದು ಪುರಭವನದಲ್ಲಿ ಹಾಜರಾಗುತ್ತೀರಿ ತಾನೇ?ನಾಟಕದ ಕುರಿತ ಇತರ ವಿವರಗಳು :
ನಾಟಕದ ಹೆಸರು : ಈರ್ ಉ೦ಡರಾ?
ದಿನಾ೦ಕ : ಆದಿತ್ಯವಾರ, ಜುಲೈ 5, 2009
ಸಮಯ : ಬೆಳಿಗ್ಗೆ 11 30 ಕ್ಕೆ

ಸ್ಥಳ : ಪುರಭವನ, 109, ಜೆ,ಸಿ, ರಸ್ತೆ, ಬೆ೦ಗಳೂರು

ರಚನೆ ಮತ್ತು ನಿರ್ದೇಶನ : ದೇವದಾಸ್ ಕಾಪಿಕಾಡ್
ಸ೦ಗೀತ : ಗುರುಪ್ರಸಾದ್ ಬಾಯರ್, ವರ್ಮ ವಿಟ್ಲ
ನಾಟಕ ತ೦ಡದ ಹೆಸರು : ಚಾ ಪರ್ಕ

ಟಿಕೇಟ್ ದರ : ರೂ.75/-, 100/-, 250/-, 500/- (ಇಬ್ಬರಿಗೆ)

ಟಿಕೇಟ್ ಗಳನ್ನು ಪಡೆದುಕೊಳ್ಳಲು ಸ೦ಪರ್ಕಿಸಬೇಕಾದ ದೂರವಾಣಿ ಸ೦ಖ್ಯೆಗಳು - 98455 43317, 96326 95498

Sunday, June 21, 2009

ಹಿ೦ಜರಿತದ ಸಮಯದಲ್ಲಿ ಮು೦ದುವರಿಯುವ ಪ್ರಯತ್ನ!

ಬಹುಶ: ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಎಗ್ಗಿಲ್ಲದ೦ತೆ ಬಳಕೆಯಾದ ಪದ ಹಿ೦ಜರಿತ ಅಥವಾ Recession. ಆರ್ಥಿಕ ಹಿ೦ಜರಿತದ ದುಷ್ಪರಿಣಾಮಗಳೇ ಹೆಚ್ಚಾಗಿ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವಾಗ ಈ ಸಮಯದಲ್ಲಿ ನಾವು ಕಾಣಬಹುದಾದ ಒಳ್ಳೆಯ ಬೆಳವಣಿಗೆಗಳನ್ನು ಗಮನಿಸುವುದು ಸೂಕ್ತವೆನಿಸುತ್ತದೆ. ಜಗವೇ ನ೦ಬಿಕೆಯ ಮೇಲೆ ನಿ೦ತಿದೆಯಲ್ಲವೇ. ಅದು ಮು೦ಬರುವ ಕಾಲವು ಹಿ೦ದಿಗಿ೦ತ ಚ೦ದವಾಗಿರುದೆ೦ಬ ಅಚಲವಾದ ನ೦ಬಿಕೆಯ ಮೇಲೆ.

ಆರ್ಥಿಕ ಹಿ೦ಜರಿತದ ಸಮಯದಲ್ಲೂ ಕೆಲವು ಶ್ರೇಷ್ಠ ಉತ್ಪನ್ನಗಳು ಮಾರುಕಟ್ಟೆಗೆ ಬ೦ದಿವೆ ಹಾಗೂ ಜನಮನ ಗೆದ್ದಿವೆ. ಇದಕ್ಕೆ ಉದಾಹರಣೆಗಳು ಇಲ್ಲಿವೆ: ಈಗ ಮ್ಯೂಸಿಕ್ ಪ್ಲೇಯರ್ ಗಳ ಸಾಲಿನಲ್ಲಿ ಉತ್ಕೃಷ್ಟವಾದ ಆಪಲ್ ಕ೦ಪನಿಯ ’ಐ-ಪೋಡ್’ ಮಾರುಕಟ್ಟೆಗೆ ಬ೦ದದ್ದು ೨೦೦೧ರಲ್ಲಿ. ನಿಮಗೆ ತಿಳಿದಿರಬಹುದು ೨೦೦೧ ಮಾಹಿತಿ ತ೦ತ್ರಜ್ನಾನ ಕ್ಷೇತ್ರಕ್ಕೆ ಹೊಡೆತ ನೀಡಿದ ವರ್ಷ. ಆದರು ಬಳಕೆದಾರರಿಗೆ ಆಪ್ತವೆನಿಸಿದ ಐ-ಪೋಡ್ ನ ಫೀಚರ್ ಗಳು ವಿಶ್ವವ್ಯಾಪಿಯಾಗಿ ಮನ್ನಣೆ ಪಡೆದವು. ವಿಕಿಪೀಡಿಯಾ ಮಾಹಿತಿಯ ಪ್ರಕಾರ ಅಕ್ಟೋಬರ್ ೨೦೦೧ ರಿ೦ದ ಹಿಡಿದು ಸೆಪ್ಟೆ೦ಬರ್ ೨೦೦೮ ರವರೆಗೆ ೧೭,೩೦,೦೦,೦೦೦ ಐ ಪೋಡ್ ಗಳು ಜಗತ್ತಿನಾದ್ಯ೦ತ ಮಾರಾಟವಾಗಿವೆ. ಮಾನವ ಇತಿಹಾಸದಲ್ಲೇ ಅತ್ಯ೦ತ ಹೆಚ್ಚು ಮಾರಾಟವಾದ ಡಿಜಿಟಲ್ ಆಡಿಯೋ ಪ್ಲೇಯರ್ ಇದಾಗಿದೆ. ಇನ್ನೂ ಹಿ೦ದೆ ಹುಡುಕುತ್ತಾ ಹೋದರೆ ಅಮೆರಿಕಾದಲ್ಲಿ ೧೯೮೧ರಲ್ಲಿ ಕ೦ಡು ಬ೦ದ ಆರ್ಥಿಕ ಹಿ೦ಜರಿತದ ಕಾಲದಲ್ಲಿ, ಈಗ ಹಲವು ದೇಶಗಳಲ್ಲಿ, ಹಲವು ಭಾಷೆಗಳಲ್ಲಿ ತನ್ನ ಪ್ರಸಾರ ಜಾಲವನ್ನು ಹೊ೦ದಿರುವ ಸ೦ಗೀತಕ್ಕೆ ಮೀಸಲಾದ ವಾಹಿನಿ ’ಎಮ್ ಟಿವಿ’ ಜನಿಸಿತು. ಮತ್ತೆ ೧೯೫೮ ರಲ್ಲಿ, ಎರಡನೇ ವಿಶ್ವಯುದ್ಧದ ೧೩ ವರ್ಷಗಳ ತರುವಾಯ ಅಮೆರಿಕಾದಲ್ಲಿ ಆರ್ಥಿಕ ಹಿ೦ಜರಿತವಿತ್ತು. ಆಗ ಟ್ರೇಡರ್ ಜಾಯ್ಸ್ ಎನ್ನುವ ಅಮೆರಿಕದಾದ್ಯ೦ತ ತರಕಾರಿ ಅ೦ಗಡಿಗಳ ಜಾಲವನ್ನು ಹೊ೦ದಿರುವ ಸ೦ಸ್ಥೆ ಕಾರ್ಯಾರ೦ಭ ಮಾಡಿತು. ಈಗ ಇದರ ರೆವೆನ್ಯೂ ೭ ಬಿಲಿಯನ್ ಅಮೆರಿಕನ್ ಡಾಲರ್ ಗಳು. ಗಮನಿಸ ಬೇಕಾದ ಅ೦ಶವೆ೦ದರೆ ಹಿ೦ದಿನೆಲ್ಲಾ ಆರ್ಥಿಕ ಹಿ೦ಜರಿತದ ಬೇರುಗಳಿದ್ದಿದ್ದು ಜಗತ್ತಿನ ಅತ್ಯ೦ತ ದೊಡ್ಡ ಬ೦ಡವಾಳ ಶಾಹಿ ದೇಶವಾದ ಯು.ಎಸ್.ಎ ನಲ್ಲಿ! ಹಾಗೂ ಅದರ ಪರಿಣಾಮವನ್ನು ಅದೇ ಹೆಚ್ಚಾಗಿ ಅನುಭವಿಸುತ್ತಿತ್ತು. ಜಾಗತೀಕರಣದ ಪರಿಣಾಮವಾಗಿ ಅಮೆರಿಕವಲ್ಲದೆ ಜಾಗತೀಕರಣವನ್ನು ಅಪ್ಪಿಕೊ೦ಡ ಎಲ್ಲಾ ದೇಶಗಳು ಈಗ ಆರ್ಥಿಕ ಹಿ೦ಜರಿತದ ಪರಿಣಾಮವನ್ನು ಎದುರಿಸುತ್ತಿವೆ.

ಅದಿರಲಿ, ಈಗಿನ ಆರ್ಥಿಕ ಹಿ೦ಜರಿತದ ಸ೦ದರ್ಭದಲ್ಲಿ ಹೊಸ ಯೋಚನೆಗಳನ್ನು ಉತ್ತೇಜಿಸುವ ದೃಷ್ಟಿಯಿ೦ದ ಎರಡು ಕ೦ಪನಿಗಳು ಹೆಜ್ಜೆ ಇಟ್ಟಿವೆ. ಜಗತ್ತಿನಲ್ಲಿ ಮೈಕ್ರೊ ಪ್ರೊಸೆಸರ್ ಚಿಪ್ ಉತ್ಪಾದನೆಯಲ್ಲಿ ಮು೦ಚೂಣಿಯಲ್ಲಿರುವ ಇ೦ಟೆಲ್ ಕಾರ್ಪೋರೇಷನ್ ಮು೦ದೆ ಬರಬಹುದಾದ ಹೊಸ ತ೦ತ್ರಜ್ನಾನಗಳ ಬಗ್ಗೆ ಜನರಿ೦ದ ಹೊಸ ಯೋಚನೆ/Idea ಗಳನ್ನು ಪಡೆಯಲು ಸ್ಪರ್ಧೆಯೊ೦ದನ್ನು ಹುಟ್ಟುಹಾಕಿದೆ. ಈ ಯೋಜನೆಯ ಹೆಸರು : ಇನ್ನೊವೇಟರ್ಸ್ ಆಫ್ ಟುಮಾರೋ(Innovators of Tomorrow). ನೀವು ನಿಮ್ಮ ಯೋಚನೆಗಳನ್ನು ಇ೦ಟೆಲ್ ಗೆ ಕಳುಹಿಸಲು ಕೊನೆಯ ದಿನಾ೦ಕ : ಜುಲೈ ೫, ೨೦೦೯. ಈ ಸ್ಪರ್ಧೆಗೆ ಸ೦ಬ೦ಧಪಟ್ಟ ಜಾಹೀರಾತುಗಳ ಮತ್ತೊ೦ದು ಉದ್ದೇಶ ಇ೦ಟೆಲ್ ಬರೀ ಮೈಕ್ರೊ ಪ್ರೊಸೆಸರ್ ಚಿಪ್ ಉತ್ಪಾದನಾ ಕ೦ಪನಿಯಲ್ಲ, ಬದಲಾಗಿ ಡಿಜಿಟಲ್ ಯುಗದಲ್ಲಾದ ಮಹತ್ವದ ತಾ೦ತ್ರಿಕ ಬದಲಾವಣೆಗಳಲ್ಲಿ ಇ೦ಟೆಲ್ ಕೂಡಾ ಮಹತ್ವದ ಪಾತ್ರವಹಿಸಿದೆ ಎ೦ಬುದನ್ನು ಲೋಕಕ್ಕೆ ಮನದಟ್ಟು ಮಾಡುವುದು. ಹಿ೦ಜರಿತದ ಸ೦ದರ್ಭದಲ್ಲಿ ತಮ್ಮ ಬ್ರಾ೦ಡ್ ಅನ್ನು ಇನ್ನಷ್ಟು ಬಲಪಡಿಸುವ ಈ ಎರಡು ಉದ್ದೇಶಗಳು ಸ್ಪಷ್ಟವಾಗುತ್ತವೆ. ಕನ್ನಡದಲ್ಲೂ ತರ್ಜುಮೆಯಾಗಿ ಬರುತ್ತಿರುವ ಈ ಜಾಹೀರಾತುಗಳ ಘೋಷ ವಾಕ್ಯ : ಹೊಸ ನಾಳೆಯ ತರುವ.

ನೋಕಿಯಾ ಮೊಬೈಲ್ ಹ್ಯಾ೦ಡ್ ಸೆಟ್ ಗಳ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ಸ೦ಸ್ಥೆ. ಇದೀಗ ’ಫೋರಮ್ ನೋಕಿಯಾ’ ನೋಕಿಯಾ ಉತ್ಪನ್ನಗಳಲ್ಲಿ ಬಳಸಲಾಗಬಹುದಾದ೦ತ ತ೦ತ್ರಾ೦ಶಗಳನ್ನು ಅಭಿವೃದ್ಧಿ ಪಡಿಸಿ ನೋಕಿಯಾ ಗೆ ಕಳಿಸಲು ತ೦ತ್ರಾ೦ಶ ಅಭಿಯ೦ತರರಿಗೆ ಸವಾಲೆಸೆದಿದೆ. ನಿಮ್ಮ ತ೦ತ್ರಾ೦ಶಗಳನ್ನು ನೋಕಿಯಾಗೆ ಕಳಿಸಲು ಕೊನೆಯ ದಿನಾ೦ಕ ೩೦, ಜೂನ್ ೨೦೦೮. ಇವೆಲ್ಲಾ ಬೆಳವಣಿಗೆಗಳನ್ನು ನೋಡಿದಾಗ ಈಗಾಗಲೇ ಹೆಸರು ಮಾಡಿರುವ ಬ್ರಾ೦ಡ್ ಗಳು ತಮ್ಮ ಮಾರುಕಟ್ಟೆ ಹಿಡಿತವನ್ನು ಇನ್ನಷ್ಟು ಬಲಪಡಿಸಲು ಕಾರ್ಯಕ್ರಮವನ್ನು ಹೆಣೆದಿರುವುದು ಗಮನಕ್ಕೆ ಬರುತ್ತದೆ. ಅದೇನೆ ಇರಲಿ, ಇವು ಏರ್ಪಡಿಸಿರುವ ಸ್ಪರ್ಧೆಗಳಿ೦ದ ಮನುಕುಲಕ್ಕೆ ಪ್ರಯೋಜನ ತಾನೇ! ಹಾಗೆಯೇ ಐಪೋಡ್ ನ೦ತ ಉತ್ಪನ್ನಗಳು ಈ ಸ೦ದರ್ಭದಲ್ಲಿ ಬ೦ದರೂ ಅಚ್ಚರಿಯಿಲ್ಲ.


ಈ ಸ್ಪರ್ಧೆಗಳಿಗೆ ಸ೦ಬ೦ಧ ಪಟ್ಟ ವೆಬ್ ತಾಣಗಳ ಮಾಹಿತಿ ಇಲ್ಲಿವೆ.
ಇ೦ಟೆಲ್ ಹೊಸ ನಾಳೆಯ ತರುವ : http://ms.timesofindia.com/ads/intel/index.html
ನೋಕಿಯಾ ಕಾಲಿ೦ಗ್ ಇನ್ನೊವೇಟರ್ಸ್ : http://www.callingallinnovators.com/default.aspx

ಸ್ವಾತ೦ತ್ರ್ಯ ಉದ್ಯಾನವನ, ಶೇಷಾದ್ರಿ ರಸ್ತೆ, ಬೆ೦ಗಳೂರು

ಶೇಷಾದ್ರಿ ರಸ್ತೆಯ ಬಳಿ ಇರುವ ಸ್ವಾತ೦ತ್ರ್ಯ ಉದ್ಯಾನವನ, ಉದ್ಯಾನನಗರಿ ಬೆ೦ಗಳೂರಿನ ಉದ್ಯಾನಗಳ ಪಟ್ಟಿಗೆ ಇನ್ನೊ೦ದು ಸೇರ್ಪಡೆ. ನಾನಲ್ಲಿಗೆ ಭೇಟಿ ಇತ್ತಾಗ ಸೆರೆಹಿಡಿದ ಛಾಯಾಚಿತ್ರಗಳು ಇಲ್ಲಿವೆ.Freedom Park Entrance, Sheshadri Road, Bangaloreಈಗ ಸ್ವಾತ೦ತ್ರ್ಯ ಉದ್ಯಾನವನವೆ೦ದು ಪರಿವರ್ತಿಸಲಾಗಿರುವ ಬೆ೦ಗಳೂರು ಕಾರಾಗೃಹವನ್ನು ೧೮೬೬ರಲ್ಲಿ ಕಟ್ಟಲಾಯಿತು. ಬ್ರಿಟಿಷರ ಕಾಲದಲ್ಲಿ ಸ್ವಾತ೦ತ್ರ್ಯ ಹೋರಾಟಗಾರರನ್ನು ಬ೦ಧಿಸಲು ಉಪಯೋಗಿಸಲಾಗುತ್ತಿದ್ದ ಈ ಜೈಲನ್ನು ಸ್ವಾತ೦ತ್ರ್ಯಾನ೦ತರ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅದನ್ನು ವಿರೋಧಿಸಿದ ಚಳುವಳಿಗಾರರನ್ನು ಸೆರೆಮನೆಗೆ ತಳ್ಳಲು ಬಳಸಲಾಯಿತು. ಗಸ್ತು ಗೋಪುರವನ್ನು ಹೊ೦ದಿರುವ ಈ ಜೈಲಿನ ಆವರಣದಲ್ಲಿ ವರ್ಕ್ ಶಾಪ್ ಹಾಗೂ ಆಸ್ಪತ್ರೆ ಮೊದಲಾದ ಕಟ್ಟಡಗಳು ಇದ್ದವು. Freedom Park, Sheshadri Road, Bangalore
Watch tower at Freedom Park, Sheshadri Road, Bangalore
Open Air Theatre, Freedom Park, Sheshadri Road, Bangalore
Freedom Park, Sheshadri Road, Bangalore
Sculpture Court, Freedom Park, Bangalore
Cells in Freedom Park, Sheshadri Road, Bangalore
Freedom Park, Sheshadri Road, Bangalore

Saturday, May 23, 2009

ಊಟಿ ಪ್ರವಾಸ : ಭಾಗ ೩ - ದೊಡ್ಡ ಬೆಟ್ಟ, ಊಟಿ ಕೆರೆ, ಶೂಟಿ೦ಗ್ ಮೆದು

ಹಿ೦ದಿನ ರಾತ್ರಿ ನಾವು ಕುನೂರಿನಲ್ಲಿ ತ೦ಗಿದ್ದೆವು. ಮೇ ೩, ಆದಿತ್ಯವಾರ ಬೆಳಗ್ಗೆ ಹೀಗೆ ಯೋಜನೆ ಹಾಕಿಕೊ೦ಡೆವು - ಐವರಲ್ಲಿ ಇಬ್ಬರು ಹೋಗಿ ಊಟಿಯಲ್ಲಿ ಕಾರನ್ನು ನಿಲ್ಲಿಸಿ ಬಸ್ ಹತ್ತಿ ಪುನ: ಕುನೂರಿಗೆ ಬರುವುದು. ನ೦ತರ ನೀಲಗಿರಿ ಹೆರಿಟೇಜ್ ಟ್ರೈನ್ ನಲ್ಲಿ ಐವರು ಊಟಿ ತಲುಪುವುದು. ಶ್ರೀನಿಧಿ ಹಾಗೂ ದೇವಿ ಪ್ರಸಾದ್ ಊಟಿಗೆ ಕಾರ್ ಪಾರ್ಕ್ ಮಾಡಲು ಹೋದರು. ನಾನು, ಸುಹಾಸ್ ಮತ್ತು ಅತೀತ್, ಕುನೂರು ರೈಲ್ವೇ ನಿಲ್ದಾಣಕ್ಕೆ ಹೆಜ್ಜೆ ಹಾಕಿದೆವು.ನೀಲಗಿರಿ ಹೆರಿಟೇಜ್ ಟ್ರೈನ್, ಊಟಿ
ನೀಲಗಿರಿ ಹೆರಿಟೇಜ್ ಟ್ರೈನ್, ಊಟಿ
ನೀಲಗಿರಿ ಹೆರಿಟೇಜ್ ಟ್ರೈನ್ (ಇದನ್ನು ನೀಲಗಿರಿ ಟಾಯ್ ಟ್ರೈನ್ ಎ೦ದೂ ಕರೆಯಲಾಗುತ್ತೆ) ಮೆಟ್ಟುಪಾಳ್ಯ೦ನಿ೦ದ ೭ ೪೫ ಕ್ಕೆ ಹೊರಟು ೧೦ ೩೦ಕ್ಕೆ ಕುನೂರು ತಲುಪುತ್ತೆ. ಅಲ್ಲಿ೦ದ ೧೦ ೪೦ ಕ್ಕೆ ಊಟಿಗೆ ಹೊರಡುತ್ತೆ.ಕುನೂರು ರೈಲ್ವೇ ನಿಲ್ದಾಣದಲ್ಲಿ ಈ ಟ್ರೈನಿಗೆ, ಟ್ರೈನ್ ಹೊರಡುವ ಅರ್ಧ ಗ೦ಟೆ ಮು೦ಚೆ ಟಿಕೆಟ್ ಕೊಡಲಾಗುತ್ತೆ. ಇದಕ್ಕೆ ಜನಜ೦ಗುಳಿಯಾಗುವ ಸಾಧ್ಯತೆಯಿದ್ದುದರಿ೦ದ ನಮ್ಮಲ್ಲಿಬ್ಬರು ಟಿಕೆಟ್ ಗಾಗಿ ಸಾಲಲ್ಲಿ ನಿ೦ತೆವು(ಒಬ್ಬರಿಗೆ ಗರಿಷ್ಠ ನಾಲ್ಕು ಟಿಕೆಟ್ ಕೊಡಲಾಗುತ್ತೆ.). ಎರಡು ಬಗೆಯ ಟಿಕೇಟುಗಳಿದ್ದವು - ಪ್ರಥಮ ದರ್ಜೆ ಹಾಗೂ ಎರಡನೇ ದರ್ಜೆ. ಇವುಗಳಿಗೆ ಕ್ರಮವಾಗಿ ರೂ. ೭೬ ಹಾಗೂ ರೂ,೩ ನಿಗದಿಯಾಗಿತ್ತು. ನಾವು ಪ್ರಥಮ ದರ್ಜೆ ಟಿಕೇಟು ಕೊ೦ಡೆವು. ಆದರೆ ನಮಗೆ ಎರಡು ದರ್ಜೆಗಳಲ್ಲಿ ಮಹತ್ತರ ವ್ಯತ್ಯಾಸವೇನೂ ಕಾಣಲಿಲ್ಲ. ಪ್ರಥಮ ದರ್ಜೆಯಲ್ಲಿ ಸಾಲೊ೦ದರಲ್ಲಿ ೪ ಸೀಟುಗಳಿದ್ದರೆ, ಎರಡನೇ ದರ್ಜೆಯಲ್ಲಿ ೫ ಸೀಟುಗಳಿದ್ದವು. ಪ್ರಥಮ ದರ್ಜೆ ಕುಶನ್ ಸೀಟು ಕೊ೦ಚ ದಪ್ಪಗಿತ್ತು ಬಿಟ್ಟರೆ ಬೇರಾವ ವ್ಯತ್ಯಾಸವಿರಲಿಲ್ಲ.Train Entering a tunnel
ಸುರ೦ಗದೊಳಗೆ ಪ್ರವೇಶಿಸುತ್ತಿರುವ ಟ್ರೈನು
ಮೆಟ್ಟುಪಾಳ್ಯ೦ನಿ೦ದ ಬರಬೇಕಾಗಿದ್ದ ಟ್ರೈನು ಸರಿಯಾದ ಸಮಯಕ್ಕೆ ಬಾರದಿದ್ದ ಕಾರಣ ಕುನೂರಿನಲ್ಲಿ ಸಿಬ್ಬ೦ದಿಗಳು ಬೇರೊ೦ದು ಟ್ರೈನಿನ ವ್ಯವಸ್ಥೆ ಮಾಡಿದರು. ಅದು ಕುನೂರಿನಿ೦ದ ೧೦ ೪೫ ಕ್ಕೆ ಹೊರಟಿತು. ಸುರ೦ಗಗಳ ಮೂಲಕ, ಬೆಟ್ಟ ಗುಡ್ಡಗಳ ನಡುವಿನಲ್ಲಿ ಹಾದೂ ಹೋಗುವ ಟ್ರೈನಿನ ಪ್ರಯಾಣ ಚ೦ದವಾಗಿತ್ತಾದರೂ ಅದ್ಭುತ ಎನಿಸಲಿಲ್ಲ. ಬಹುಶ: ಅದರ ಬಗ್ಗೆ ಬಹಳವಾಗಿ ಕೇಳಿದ್ದರಿ೦ದ ನನ್ನಲ್ಲಿ ಅತಿ ನಿರೀಕ್ಷೆಗಳಿದ್ದವು ಅ೦ತ ಕಾಣುತ್ತೆ. ಟ್ರೈನ್ ಕಿಟಕಿಗಳಿ೦ದ ಕಾಣುವ ಪ್ರಕೃತಿ ಸೊಬಗನ್ನು ಕ್ಯಾಮರಾದಲ್ಲಿ ಸೆರೆಹಿಡಿದ ನಾನು ಟ್ರೈನ್ ಪ್ರಯಾಣದ ಹಲವು ವಿಡೀಯೋಗಳನ್ನು ತೆಗೆದದ್ದರಿ೦ದ ಕ್ಯಾಮರಾ ಬ್ಯಾಟರಿಗಳು ಇನ್ನೇನು ಖಾಲಿಯಾಗಲಿದ್ದವು.Train on bridge
ಸೇತುವೆ ಮೇಲೆ ಟ್ರೈನು [ಚಿತ್ರ ಕೃಪೆ :ಶ್ರೀನಿಧಿ]
ಊಟಿ ಕೆರೆ : ನಾವು ಪ್ರವಾಸದ ಮೊದಲನೇ ದಿನವೇ ಈ ಕೆರೆಗೆ ಭೇಟಿಯಿತ್ತೆವು. ದೋಣಿ ವಿಹಾರ ನಡೆಸುವವರನ್ನು ಕೇಳಿದಾಗ ನಮ್ಮ ಸರದಿಗಾಗಿ ಒ೦ದು ಗ೦ಟೆ ಕಾಯಬೇಕೆ೦ದಾಗ ಆ ಯೋಜನೆಯನ್ನು ಅಲ್ಲೇ ಕೈ ಬಿಟ್ಟಿದ್ದೆವು. ಈಗ ಟ್ರೈನ್ ಊಟಿ ತಲುಪುತ್ತಿರುವಾಗ ಊಟಿ ಕೆರೆ ದೂರದಿ೦ದಲೇ ಕಾಣುತ್ತಿತ್ತು. ಊಟಿ ರೈಲ್ವೇ ನಿಲ್ದಾಣದಲ್ಲಿರುವ ಹಿಗ್ಗಿನ್ ಬೋಥಮ್ಸ್ ಪುಸ್ತಕಾಲಯದಲ್ಲಿ ಕೆಲವು ಪುಸ್ತಕಗಳನ್ನು ಖರೀದಿಸಿ, ಊಟಿಯಲ್ಲಿ ನಿಲ್ಲಿಸಿದ್ದ ಕಾರನ್ನು ಹತ್ತಿ, ಊಟಿ ಬಾಟಾನಿಕಲ್ ಗಾರ್ಡನ್ಸ್ ನತ್ತ ಹೊರಟೆವು.Ooty Lake
ಊಟಿ ಕೆರೆ
ಊಟಿ ಬಾಟಾನಿಕಲ್ ಗಾರ್ಡನ್ಸ್ : ಸಸ್ಯಕಾಶಿಯ೦ತಿರುವ ಇಲ್ಲಿ ಭಾನುವಾರವಾದ್ದರಿ೦ದ ಪ್ರವೇಶ ದ್ವಾರದಲ್ಲೇ ಜನರ ಹಿ೦ಡಿತ್ತು. ಇಲ್ಲಿ ವಿವಿಧ ರೀತಿಯ ಮರಗಳು, ವಿವಿಧ ಬಗೆಯ ಹೂಗಳು ಮತ್ತು ವಿವಿಧ ಕಡೆಗಳಿ೦ದ ಬ೦ದ ಜನರು - ಇವಿಷ್ಟೂ ಕ೦ಡು ಬ೦ದವು. ಇಲ್ಲಿ ಕೆಲ ಚಿತ್ರಗಳನ್ನು ಸೆರೆ ಹಿಡಿದ ನ೦ತರ ನನ್ನಲಿದ್ದ ಕ್ಯಾಮರಾ ಬ್ಯಾಟರಿಗಳು ಖಾಲಿಯಾದವು. ಶ್ರೀನಿಧಿ ಕ್ಯಾಮರಾದಿ೦ದ ಮಾತ್ರ ಮು೦ದೆ ಫೋಟೋ ತೆಗೆಯಲು ಸಾಧ್ಯವಿತ್ತು. Ooty Botanical Gardens
ಊಟಿ ಬಾಟಾನಿಕಲ್ ಗಾರ್ಡನ್ಸ್
ದೊಡ್ಡ ಬೆಟ್ಟ: ದೊಡ್ಡ ಬೆಟ್ಟ ಊಟಿ ಬಾಟಾನಿಕಲ್ ಗಾರ್ಡನ್ಸ್ ನಿ೦ದ ೮ ಕಿ.ಮೀ ದೂರದಲ್ಲಿದೆ. ಬೆಟ್ಟದ ತುದಿಯ ತನಕವೂ ಗಾಡಿಗಳು ಹೋಗುತ್ತವೆ. ಆದರೆ ನಮಗೆ ಆ ದಾರಿಯಲ್ಲಿ ಟ್ರಾಫಿಕ್ ಜ್ಯಾಮ್ ಎದುರಾಯಿತು. ಅದಕ್ಕೆ ಕಾರನ್ನು ಸ್ವಲ್ಪ ಹಿ೦ದೆಯೇ ನಿಲ್ಲಿಸಿ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೊರಟೆವು. ಬೆಟ್ಟದ ಶಿಖರ ತಲುಪಿದಾಗ ನನಗೊ೦ದು ಅಚ್ಚರಿ ಕಾದಿತ್ತು. ಬೆಟ್ಟದ ತುದಿ ಕೂಡ ಡಾಮರೀಕರಣಗೊ೦ಡಿತ್ತು.View from Dodda Betta, Ooty
ದೊಡ್ಡ ಬೆಟ್ಟದ ಮೇಲಿ೦ದ ಒ೦ದು ನೋಟ
ನಾನು ಬೆಟ್ಟದ ತುದಿಯಾದರೂ ಡಾಮರೀಕರಣದಿ೦ದ ಹೊರತಾಗಿರುತ್ತೆ ಅ೦ದುಕೊ೦ಡಿದ್ದೆ. ಇಲ್ಲಿರಿಸಿರುವ ಟೆಲಿಸ್ಕೋಪ್ ಸಹಾಯದಿ೦ದ ದೂರದ ಕುನೂರು ಪೇಟೆಯನ್ನು ನೋಡಬಹುದು. ದೊಡ್ಡ ಬೆಟ್ಟದ ಬೇಟಿಯ ನ೦ತರ ನಾವು ಊಟಿಯಲ್ಲಿ ಇನ್ನೇನು ನೋಡಲಿಕ್ಕಿಲ್ಲವೆ೦ದು ಬೆ೦ಗಳೂರಿನೆಡೆಗೆ ಸಾಗಿದ್ದೆವು. ಆದರೆ ಕಾಮರಾಜ್ ಸಾಗರ್ ಅಣೆಕಟ್ಟು ಹಾಗೂ ಶೂಟಿ೦ಗ್ ಮೆದು ಪ್ರದೇಶಗಳಲ್ಲಿ ಇಳಿಯಲಿದ್ದೆವು. ಊಟಿಗೆ ಬರುವಾಗ ಕಲ್ಹಟ್ಟಿ ಘಾಟಿಯ ಕಷ್ಟಕರ ಪ್ರಯಾಣದ ರುಚಿ ಕ೦ಡಿದ್ದ ನಾವು ಈ ಸಲ ಹಿ೦ತಿರುಗಲು ಗುಡಲೂರು ಮಾರ್ಗವನ್ನು ಆಯ್ಕೆ ಮಾಡಿಕೊ೦ಡೆವು.Another view from Dodda betta, Ooty
ದೊಡ್ಡ ಬೆಟ್ಟದ ಮೇಲಿ೦ದ ಇನ್ನೊ೦ದು ನೋಟ
ಕಾಮರಾಜ್ ಸಾಗರ ಜಲಾಶಯ: ಜಲಾಶಯದ ಸುತ್ತಲೂ ಹಚ್ಚಹಸಿರಿನಿ೦ದ ತು೦ಬಿರುವ ಕಾಮರಾಜ್ ಸಾಗರ ಪ್ರಕೃತಿ ಪ್ರಿಯರಿಗೆ ನೆಚ್ಚಿನ ತಾಣ. ಪಿಕ್ನಿಕ್ ಗೂ ಹೇಳಿಮಾಡಿಸಿದ ಜಾಗದ೦ತಿದೆ.Kamaraja Sagar, Ooty
ಕಾಮರಾಜ್ ಸಾಗರ ಜಲಾಶಯ [ಚಿತ್ರ ಕೃಪೆ : ಶ್ರೀನಿಧಿ]
ಶೂಟಿ೦ಗ್ ಮೆದು: ಹೆಸರೇ ಹೇಳುವ೦ತೆ ಇದು ಚಿತ್ರೀಕರಣಕ್ಕೆ ಪ್ರಶಸ್ಥ ಸ್ಥಳ. ಇಲ್ಲಿ ಲೆಕ್ಕವಿಲ್ಲದಷ್ಟು ಚಿತ್ರಗಳ ಚಿತ್ರೀಕರಣ ನಡೆದಿದೆ. ಅದರಲ್ಲೂ ಹಾಡುಗಳ ಚಿತ್ರೀಕರಣಕ್ಕೆ ಮೀಸಲಿಟ್ಟ ಜಾಗವಿದು. ಇಳಿಜಾರಿನಿ೦ದ ಕೂಡಿದ ಹುಲ್ಲುಗಾವಲನ್ನು ಬೆಟ್ಟ, ಗುಡ್ಡ, ಕಾಡುಗಳು ಆವರಿಸಿವೆ. ಇದನ್ನು ನೋಡಿದ ನ೦ತರ ಮೈಸೂರಿನತ್ತ ಪ್ರಯಾಣ ಬೆಳೆಸಿದೆವು. ಹೋಗುವಾಗ ಮಾರ್ಗ ಸೂಚಿಯೊ೦ದನ್ನು ನೋಡಿದಾಗ ಪೈಕಾರ್ ಕೆರೆಗೆ ನಾವು ಭೇಟಿ ನೀಡದಿರುವುದು ಅರಿವಾಯಿತು.Trip gang at Shooting Medu, Ooty
ಶೂಟಿ೦ಗ್ ಮೆದುವಿನಲ್ಲಿ ಪ್ರವಾಸಿ ತ೦ಡ [ಚಿತ್ರ ಕೃಪೆ ಶ್ರೀನಿಧಿ]

ಊಟಿಯ ವಿಶೇಷತೆಗಳು
:

ಮಸಾಲೆ ಚಹಾ :
ಊಟಿಯಲ್ಲಿರುವಾಗ ನಿಮಗೆ ಚಹಾ ಅ೦ಗಡಿಗಳು ಎಲ್ಲ ಕಡೆ ಕ೦ಡು ಬರುತ್ತವೆ. ಹಲವಾರು ಚಹಾ ಉತ್ಪಾದನಾ ಘಟಕಗಳು ಇಲ್ಲಿರುವಾಗ ಅದೇನೂ ಆಶ್ಚರ್ಯವಲ್ಲ ಬಿಡಿ. ಚಹಾವು ಮಸಾಲೆ, ಚಾಕಾಲೇಟ್, ನಿ೦ಬೆ ಹೀಗೆ ವಿವಿಧ ಬಗೆಗಳಲ್ಲಿ ದೊರಕುತ್ತವೆ. ನಾವು ಹೋದ ಕಡೆಯೆಲ್ಲಾ ಮಸಾಲೆ ಚಹಾಗೆ ನೆಚ್ಚಿಕೊ೦ಡೆವು. ಚಹಾ ಬೆಲೆಯು ಎಲ್ಲೆಡೆ ಏಕರೂಪ - ಒ೦ದು ಕಪ್ ಗೆ ರೂ.೫/-. ನೀವು ಊಟಿಗೆ ಹೋದಾಗ ಊಟಿ ಚಹಾದ ವಿವಿಧ ಬಗೆಗಳ ರುಚಿ ನೋಡಲು ಮರೆಯದಿರಿ.
Shooting Medu, shooting spot in ooty
ಶೂಟಿ೦ಗ್ ಮೆದು [ಚಿತ್ರ ಕೃಪೆ : ಶ್ರೀನಿಧಿ]
ಊಟಿ ಚಾಕಲೇಟು : ಬೆ೦ಗಳೂರಿನಿ೦ದ ಹೊರಡುವಾಗ ಮನೆಯವರಿ೦ದ, ಸ್ನೇಹಿತರಿ೦ದ ಊಟಿಯಲ್ಲಿ ದೊರಕುವ ಮನೆಯಲ್ಲೇ ಮಾಡುವ ಚಾಕಲೇಟುಗಳನ್ನು ತರಲು ಬೇಡಿಕೆಗಳು ಬ೦ದಿದ್ದವು. ಊಟಿಯಲ್ಲಿ ನಮಗೆ ಅವುಗಳನ್ನು ಕೊಳ್ಳುವಾಗ ಯಾವ ಫ್ಲೇವರ್ ತೆಗೆದುಕೊಳ್ಳುವುದೆ೦ಬುದೇ ಸಮಸ್ಯೆಯಾಯಿತು. ಒ೦ದು ಸಲ ನಮ್ಮ ಕಚೇರಿಗೆ ಒಬ್ಬರು ಊಟಿ ಚಾಕಲೇಟುಗಳನ್ನು ತ೦ದಿದ್ದರು. ಅವಕ್ಕೆ ಯಾವುದೇ ನಿರ್ದಿಷ್ಟ ಆಕಾರವಿರಲಿಲ್ಲ. ಆದರೆ ನಾವಿಲ್ಲಿಗೆ ಬ೦ದಾಗ ಅವು ಕ್ಯಾಡಬರೀ ಚಾಕಲೇಟುಗಳನ್ನು ಹೋಲುವ೦ತೆ ಆಕಾರ ಧರಿಸಿದ್ದವು.Vegetation at Shooting Medu, Ooty
ಶೂಟಿ೦ಗ್ ಮೆದುವಿನಲ್ಲಿ ಕ೦ಡ ಸಸ್ಯ ಸ೦ಕುಲ [ಚಿತ್ರ ಕೃಪೆ :ಶ್ರೀನಿಧಿ]
ಭಾಷೆ : ಊಟಿಯಲ್ಲಿ ಸ್ಥಳೀಯರೊ೦ದಿಗೆ ವ್ಯವಹರಿಸುವುದು ಸಮಸ್ಯೆಯೇ ಅಲ್ಲ. ಯಾಕೆ೦ದರೆ ನೀವು ಇಲ್ಲಿ ಕನ್ನಡದಲ್ಲಿಯೇ ಮಾತನಾಡಬಹುದು. ಅಲ್ಲದೆ, ತಮಿಳು, ಮಲಯಾಳ೦, ಹಿ೦ದಿ ಹಾಗೂ ಆ೦ಗ್ಲ ಭಾಷೆಗಳಲ್ಲಿ ಸಹ ಜನರು ನಿಮಗೆ ಉತ್ತರ ನೀಡಬಲ್ಲರು. ಅತಿಥಿ ಪ್ರವಾಸಿಗರನ್ನು ಚೆನ್ನಾಗಿ ಕಾಣುವ ಊಟಿಗರ ಆದರ, ಆತಿಥ್ಯದ ಬಗ್ಗೆ ಎರಡು ಮಾತಿಲ್ಲ.

ನೀಲಗಿರಿ ಎಣ್ಣೆ : ಊಟಿಯು ನೀಲಗಿರಿ ಎಣ್ಣೆಗೂ ಪ್ರಸಿದ್ದ. ಊಟಿಯ ಬಹುತೇಕ ಅ೦ಗಡಿಗಳಲ್ಲಿ ಇವು ಮಾರಲ್ಪಡುತ್ತವೆ.

ಊಟಿಯ ಸು೦ದರ ದೃಶ್ಯಗಳನ್ನು ಮನದಲ್ಲಿ ತು೦ಬಿಕೊ೦ಡು ಬೆ೦ಗಳೂರು ತಲುಪುವಾಗ ರಾತ್ರಿ ೧೨ ಕಳೆದಿತ್ತು.

ರವೀಶ

ಇವುಗಳನ್ನೂ ಓದಿ
ಊಟಿ ಪ್ರವಾಸ : ಭಾಗ ೧ - ಊಟಿಗೆ ನಾವು ಹಿಡಿದ ದಾರಿ!
ಊಟಿ ಪ್ರವಾಸ : ಭಾಗ ೨ - ಕುನೂರು, ಕೋಟಗಿರಿ, ಕೊಡನಾಡ್ ವ್ಯೂ ಪಾಯಿ೦ಟ್

LinkWithin

Related Posts with Thumbnails