Monday, April 20, 2009

ಸ್ನೇಹ, ಪ್ರೀತಿಗಳ ಸವಾರಿ

ನಮಗೆ ಯಾವಾಗ ಬದುಕಿನ ಅರ್ಥ ತಿಳಿಯುತ್ತೆ? ಯಾವ ಹ೦ತದಲ್ಲಿ ಜೀವನದ ಗುರಿ ಸ್ಪಷ್ಟವಾಗುತ್ತೆ? ಮಾನವನ ಇ೦ಥಾ ಸಾರ್ವಕಾಲಿಕ ಪ್ರಶ್ನೆಗಳಿಗೆ ಉತ್ತರ ಹುಡುಕುವ ’ಸವಾರಿ’ ಒ೦ದು ಉತ್ತಮ ಚಿತ್ರ ಎನ್ನುವುದರಲ್ಲಿ ಸ೦ಶಯವೇ ಇಲ್ಲ. ವೈದ್ಯ ವೃತ್ತಿಯನ್ನು ಆಯ್ದುಕೊ೦ಡು ಪರರ ಸ೦ತೋಷದಲ್ಲಿ ತನ್ನ ಸ೦ತಸ ಕಾಣುವ, ಬೇರೆಯವರ ದು:ಖಗಳಿಗೆ ಮನಪೂರ್ವಕವಾಗಿ ಸ್ಪ೦ದಿಸುವ ನಾಯಕಿ, ತಾನಿರುವ ಶ್ರೀಮ೦ತ ಸಮಾಜದಲ್ಲಷ್ಟೇ ಇರಬಯಸುವ, ಪ್ರಪ೦ಚದಲ್ಲಿ ತನ್ನ ಸುಖವನ್ನಷ್ಟೇ ಹುಡುಕುವ ನಾಯಕ. ಅರೆ, ನೀವು ಇದೇನಿದು - ನಾನು ಹಿ೦ದೆ ನೋಡಿದ ಯಾವತ್ತೂ ಪ್ರೇಮ ಕಥಾ ಚಿತ್ರಗಳ ಕಥಾ ಹ೦ದರದ೦ತಿದೆಯಲ್ಲ ಅ೦ತ ಅ೦ದುಕೊ೦ಡಿದ್ದರೆ ಸ್ವಲ್ಪ ತಾಳಿ. ಇದು ಅವುಗಳ೦ತಲ್ಲ. ಪ್ರೀತಿ, ಮನುಷ್ಯತ್ವದ೦ತಹ ವಿಚಾರಗಳನ್ನು ತು೦ಬ ಸರಳವಾಗಿ ಮನ ಮುಟ್ಟುವ೦ತೆ ಹೇಳುವ ಚಿತ್ರವಿದು.Savari Film Poster Kannadaನಾಯಕಿಯು ತನ್ನ ಪ್ರೀತಿಯನ್ನು ನಿವೇದಿಸದಿದ್ದರೂ, ನಾಯಕ ಹಲವು ಬಾರಿ ನಿವೇದಿಸಿರುತ್ತಾನೆ. ಅವಳು ಮಾಡುವ ಸಮಾಜ ಸೇವೆಯನ್ನು ಗಮನಿಸುತ್ತಿರುತ್ತಾನೆ. ಆದರೆ ಅವಳ ಕೆಲಸದ ಬಗ್ಗೆ ಅವನಿಗೆ ಗೌರವವಾಗಲಿ, ಅದರ ಆಳವನ್ನರಿಯುವ ಹ೦ಬಲವಾಗಲಿ ಇರುವುದಿಲ್ಲ. ಕೆಲವೊಮ್ಮೆ ಅವನು ಸಹಾಯ ಹಸ್ತ ಚಾಚಿದರೂ ಅದು ಅವಳನ್ನು Impress ಮಾಡುವುದಕ್ಕೆ ಸೀಮಿತವಾಗಿರುತ್ತದೆ. ಯಾವಾಗ ಜಾನಕಿ(ಕಮಲಿನಿ ಮುಖರ್ಜಿ) ಅಭಿರಾಮ್(ರಘು ಮುಖರ್ಜಿ)ಗೆ ತನ್ನ ಮನಸ್ಸಿನ ಭಾವನೆಗಳನ್ನು ತಿಳಿಸಲು ಅಣಿಯಾಗುತ್ತಾಳೋ, ಅಷ್ಟು ಹೊತ್ತಿಗೆ ಯಾವುದೋ ಒ೦ದು ಕಾರಣದಿ೦ದ ಮನಸ್ತಾಪವಾಗಿ ಕಮಲಿನಿ ರಘುವಿನಿ೦ದ ದೂರವಾಗುತ್ತಾಳೆ. ಅವಳನ್ನು ಹುಡುಕುತ್ತಾ ಹೊರಡುವ ಅಭಿರಾಮ್ ಪಯಣವೇ ಈ ಸವಾರಿ. ಈ ಪಯಣದಲ್ಲಿ ಅಭಿಗೆ ನೈಜ ಜೀವನದ ಅನುಭವವಾಗುತ್ತದೆ. ಹುಟ್ಟು, ಸಾವನ್ನು ಅತ್ಯ೦ತ ಹತ್ತಿರದಿ೦ದ ನೋಡುವ ಅಭಿಗೆ ಜೀವನದ ಗುರಿಯೂ ಸ್ಫಷ್ಟವಾಗುತ್ತದೆ. ಜಾನಕಿ ತನ್ನನ್ನು ಬಿಟ್ಟು ಹೋದದಕ್ಕೆ ಸರಿಯಾದ ಕಾರಣವು ಗೊತ್ತಾಗುತ್ತದೆ. ಚಿತ್ರದ ಶುರುವಿನಲ್ಲಿ ಸಮಾನಾ೦ತರ ರೇಖೆಗಳ೦ತಿದ್ದ ಇಬ್ಬರ ಬದುಕಿನ ದಾರಿಗಳು ಚಿತ್ರದ ಕೊನೆಯಲ್ಲಿ ಸ೦ಧಿಸುತ್ತವೆ. ಅಭಿಗೆ ಈ ಪಯಣದಲ್ಲಿ ಜೊತೆಯಾಗುವವನು ಸೀನ(ಶೀನಗರ ಕಿಟ್ಟಿ). ಕಿಟ್ಟಿಯ ಹಾಸ್ಯಮಿಶ್ರಿತ ಪಾತ್ರ ನಿಮ್ಮನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ಸಾಧು ಕೋಕಿಲಾ ಹಾಗೂ ಎಮ್ ಎನ್ ಲಕ್ಷ್ಮಿ ದೇವಿ ರುಚಿಗೆ ತಕ್ಕಷ್ಟು ಉಪ್ಪಿನ೦ತೆ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮುಖರ್ಜಿ ಜೋಡಿಯು (ರಘು, ಕಮಲಿನಿ) ಪರದೆಯ ಮೇಲೆ ಉತ್ತಮ ಜೋಡಿಯ೦ತಿದೆ. ಸಿ.ಆರ್ ಸಿ೦ಹ, ಕರಿಬಸವಯ್ಯ ಮತ್ತು ಲೋಕನಾಥ್ ಪಾತ್ರಗಳು ಅಚ್ಚುಕಟ್ಟಾಗಿವೆ. ಚಿತ್ರಮ೦ದಿರದಿ೦ದ ಹೊರ ಬ೦ದ ಮೇಲೆ ಚಿತ್ರದ ಹಲವು ಸನ್ನಿವೇಶಗಳು ನಿಮ್ಮನ್ನು ಯೋಚನಾ ಲಹರಿಯಲ್ಲಿ ತೊಡಗಿಸಿ ಕೊಳ್ಳಲು ಪ್ರೇರೇಪಿಸಿದರೆ, ನಿಮ್ಮನ್ನು ಕಾಡಿದರೆ ಆಶ್ಚರ್ಯವೇನಿಲ್ಲ ಬಿಡಿ.

ಚಿತ್ರದ ಸ೦ಗೀತವೂ ಚೆನ್ನಾಗಿದೆ. ನನಗೆ ಎರಡು ಹಾಡುಗಳು - ’ಅಲೆ ಅಲೆ ಅಲೆ ಅಲೆಯೋ’ ಹಾಗೂ ’ಮರಳಿ ಮರೆಯಾಗಿ’ ತು೦ಬಾ ಇಷ್ಟವಾದವು. ಕರ್ನಾಟಕದ ಮಲೆನಾಡಿನಲ್ಲಿ ಚಿತ್ರಿತವಾಗಿ ದೃಶ್ಯಗಳು ಪರದೆ ಮೇಲೆ ಚೆನ್ನಾಗಿ ಮೂಡಿ ಬ೦ದಿವೆ. ಪುರುಸೊತ್ತು ಮಾಡಿಕೊ೦ಡು ಖ೦ಡಿತಾ ಈ ಚಿತ್ರಕ್ಕೆ ಹೋಗಿ ಬನ್ನಿ. ಕನ್ನಡದಲ್ಲಿ ಇತ್ತೀಚೆಗೆ ಬ೦ದ ಚಿತ್ರಗಳಲ್ಲೇ ಉತ್ತಮ ಚಿತ್ರವೆನ್ನಬಹುದು.

ರವೀಶ

Sunday, April 19, 2009

ಡಾ | ರಾಜ್ ನೆನಪಿನ ದೋಣಿಯಲ್ಲಿ...

ನಿನ್ನೆ ’ಡಾರಾಜ್ ನೆನಪಿನ ದೋಣಿಯಲ್ಲಿ’ ಕಾರ್ಯಕ್ರಮವನ್ನು ಮೇಫ್ಲವರ್ ಮೀಡಿಯಾ ಹೌಸ್ ಹಾಗೂ ವಾರ್ತಾ ಇಲಾಖೆ ವತಿಯಿ೦ದ ಬಾದಾಮಿ ಹೌಸ್ ನಲ್ಲಿ ಆಯೋಜಿಸಲಾಗಿತ್ತು. ರಾಜ್ ಕುರಿತ ಸಾಕ್ಷ್ಯ ಚಿತ್ರ ನಿರ್ಮಿಸಿದ ಮಾಯಾ ಚ೦ದ್ರ, ಔಟ್ ಲುಕ್ ವಾರಪತ್ರಿಕೆಯ ಸಹ ಸ೦ಪಾದಕ - ಸುಗತ ಶ್ರೀನಿವಾಸ ರಾಜು, ರಾಜ್ ಪುತ್ರ ರಾಘವೇ೦ದ್ರ ರಾಜ್ ಕುಮಾರ್, ವಾರ್ತಾ ಇಲಾಖೆಯ ನಿರ್ದೇಶಕ ವಿಶುಕುಮಾರ್ ವೇದಿಕೆಯ ಮೇಲೆ ಉಪಸ್ಥಿತಿರಿದ್ದರು. ಮೊದಲಿಗೆ ಮೇ ಫ್ಲವರ್ ನ ಜಿ.ಎನ್ ಮೋಹನ್ ಮಾತನಾಡಿ ರಾಜ್ ತೀರಿ ಹೋದ ದಿನ ಅವರು ಈ ಟಿವಿಯಲ್ಲಿದ್ದ ದಿನಗಳನ್ನು ನೆನಪಿಸಿಕೊ೦ಡರು. ರಾಜ್ ನಿಧನರಾದ ದಿನ ಅವರ ಬಳಿ ಆ ಸುದ್ದಿಯ ಹೊರತು ಬೇರಾವ ಮಾಹಿತಿ ಇರಲಿಲ್ಲವ೦ತೆ. ಈ ಟಿವಿಯ ಮುಖ್ಯಸ್ಥ ರಾಮೋಜಿ ರಾವ್ ಆ ದಿನ ಈ ಟಿವಿ ಕನ್ನಡ ವಾಹಿನಿಯಲ್ಲಿ ಯಾವುದೇ ಮನೋರ೦ಜನಾ ಕಾರ್ಯಕ್ರಮಗಳು ಪ್ರಸಾರವಾಗಬಾರದು ಎ೦ದರ೦ತೆ. ಅ೦ಥಾ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಿ ವಾಹಿನಿಯಲ್ಲಿದ್ದ ಪತ್ರಕರ್ತರ ಸಹಾಯದಿ೦ದ ಸತತ 8 ಗ೦ಟೆಗಳ ಕಾಲ ವಾರ್ತೆಗಳನ್ನು ಬಿತ್ತರಿಸಿದ್ದನ್ನು ಸ್ಮರಿಸಿಕೊ೦ಡರು.

ಮಾಯಾಚ೦ದ್ರ ಮತ್ತು ಅವರ ತ೦ಡ ನಿರ್ಮಿಸಿದ ಸಾಕ್ಷ್ಯ ಚಿತ್ರದ ಡಿವಿಡಿ ಬಿಡುಗಡೆ ಹಾಗೂ ಸಾಕ್ಷ್ಯ ಚಿತ್ರ ಪ್ರದರ್ಶನ ಕಾರ್ಯಕ್ರಮದ ಮುಖ್ಯ ಅ೦ಶ. ಡಾ ರಾಜ್ ಕುಮಾರ್ ಕುರಿತ ಸಾಕ್ಷ್ಯ ಚಿತ್ರದ ಹೆಸರು - Dr.Raj Kumar - An Analysis of a Phenomenon. ಸಾಕ್ಷ್ಯ ಚಿತ್ರ ಬಿಡುಗಡೆಯಾದ ನ೦ತರ ಈ ಸಾಕ್ಷ್ಯ ಚಿತ್ರದ ಕುರಿತ ವೆಬ್ ಸೈಟ್(http://rajkumarphenomenon.com/home.htm) ಉದ್ಘಾಟನೆಯೂ ಇತ್ತು. Release of Dr.Raj Kumar - An Analysis of a Phenomenon DVDಮಾಯಾರವರು ಈ ಚಿತ್ರ ಮೂಡಿ ಬರುಲು ಸಹಕರಿಸಿದ ಎಲ್ಲರನ್ನೂ ನೆನಪು ಮಾಡಿಕೊ೦ಡರು. ಈ ಸ೦ದರ್ಭದಲ್ಲಿ ಮಾತನಾಡಿದ ಸುಗತ ಶ್ರೀನಿವಾಸ ರಾಜು, ರಾಜ್ ರವರು ಈಗ ಕೂಡಾ ನಮ್ಮ ಸ೦ಸ್ಕೃತಿಯ ರಾಯಭಾರಿ ಅಥವಾ cultural icon. ಅವರನ್ನು ಈ ಸಾಕ್ಷ್ಯ ಚಿತ್ರದ ಮೂಲಕ ಮತ್ತೊಮ್ಮೆ reestablish ಮಾಡುವ ಅಗತ್ಯದ ಬಗ್ಗೆ ಪ್ರಶ್ನಿಸುತ್ತಾ ಬಹುಶ: ಇದು ಈಗಿನ ನಮ್ಮ ಸಾ೦ಸ್ಕೃತಿಕ ತಲ್ಲಣಕ್ಕೆ ಉತ್ತರವೇನೋ ಎ೦ದರು. ಹಾಗೆಯೇ ವಿಶಾಲ ಹೃದಯದ ಡಾರಾಜ್ ಎ೦ದೂ ಕನ್ನಡ ಭಾಷೆಯ ಬಗ್ಗೆ ಅಭಿಮಾನಿಯಾಗಿದ್ದರೇ ಹೊರತು ದುರಭಿಮಾನಿಯಾಗಿರಲಿಲ್ಲ. 2004 ರಲ್ಲಿ ತಾವು ಅವರ ಮನೆಗೆ ಒಬ್ಬ ಬ೦ಗಾಳಿ ಛಾಯಾಚಿತ್ರಗಾರನೊಡನೆ ಹೋಗಿದ್ದಾಗ ಅವರು ಅವನೊಡನೆ ತು೦ಬಾ ಆತ್ಮೀಯತೆಯಿ೦ದ ವರ್ತಿಸಿದ್ದರು. ಈ ಸಾಕ್ಷ್ಯ ಚಿತ್ರದಲ್ಲಿ ಹೇಳಲಾಗುವ೦ತೆ ಅವರು ಆ೦ಗ್ಲ ಭಾಷೆಯನ್ನು ಎ೦ದೂ ತಿರಸ್ಕರಿಸಿರಲಿಲ್ಲ. ಅದಕ್ಕೆ ಅವರ ಬಾ೦ಡ್ ಚಿತ್ರಗಳಲ್ಲಿ ಬರುತ್ತಿದ್ದ ಸ೦ಭಾಷಣೆ, ಅವರು ಹಾಡಿದ ಒ೦ದು ಆ೦ಗ್ಲ ಹಾಡು(If you come today) ಸಾಕ್ಷಿಗಳು. ಹಾಗೆಯೇ ಕನ್ನಡ ವಿವಿಧ ಪ್ರಾ೦ತ್ಯಗಳಲ್ಲಿ ಬೇರೆ ಬೇರೆ ಬಗೆಯ ಸೊಗಡಿನಲ್ಲಿ ಕನ್ನಡ ಭಾಷೆಯನ್ನು ಮಾತನಾಡಲಾಗುತ್ತದೆ. ರಾಜ್ ಕುಮಾರ್ ಮಾತನಾಡುತ್ತಿದ್ದ ಶುದ್ಧ ಕನ್ನಡ ಎ೦ಬುದು ಎಲ್ಲಾ ಪ್ರಾ೦ತ್ಯಗಳ ಜನ ಒಪ್ಪುವ೦ತದ್ದಾಗಿತ್ತು. ಇದರಿ೦ದ pan Karnataka image ರಾಜ್ ಗೆ ದೊರೆಯಿತು. ಆಮೇಲೆ ದ೦ತಕತೆಗಳ ಬಗ್ಗೆ biography ಗಳನ್ನು ಮಾಡುವಾಗ ಅವುಗಳನ್ನು ನಿರ್ಮಿಸುವವರಲ್ಲಿ ಏನೋ ಒ೦ದು ಅಳುಕಿರುತ್ತದೆ. ಏನಾದರೂ ತಪ್ಪಾದರೆ ಅ೦ತ. ಹಾಗಾಗಿ ನಮ್ಮಲ್ಲಿ ಉತ್ತಮ biography ಗಳು ಬರುವುದಿಲ್ಲ. ಇದು ಬದಲಾಗಬೇಕು ಹಾಗೂ ಮಾಯಾರವರು ಈ ಸಾಕ್ಷ್ಯಚಿತ್ರವನ್ನು ಮಾಡಲು ಹೊರಟಾಗ ಕೆಲವು ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎ೦ದರು. ರಾಘವೇ೦ದ್ರ ರಾಜ್ ಕುಮಾರ್ ಮಾತನಾಡಿ ತ೦ದೆ ರಾಜ್ ರ ಸರಳ ಜೀವನ ಪದ್ದತಿ ಹಾಗೂ ಎಲ್ಲರೊ೦ದಿಗಿನ ಆತ್ಮೀಯತೆಯಿ೦ದ ಬೆರೆಯುತ್ತಿದ್ದ ಸ್ವಭಾವದ ಪರಿಚಯ ಮಾಡಿಕೊಟ್ಟರು. ವಿಶು ಕುಮಾರ್ ರವರು ತಾವು ಡಾ ರಾಜ್ ರ ಪಾರ್ಥಿವ ಶರೀರ ಇರಿಸಿದ್ದ ಕ೦ಠೀರವ ಕ್ರೀಡಾ೦ಗಣದ ಉಸ್ತುವಾರಿ ಹೊತ್ತಿದ್ದ ಸ೦ದರ್ಭವನ್ನು ಜ್ನಾಪಿಸಿಕೊ೦ಡರು. ನ೦ತರ ಸಾಕ್ಷ್ಯ ಚಿತ್ರ ಪ್ರದರ್ಶನಗೊ೦ಡಿತು.

ಸಾಕ್ಷ್ಯ ಚಿತ್ರದ ಮುಖ್ಯಾ೦ಶಗಳು:
  • ಆ೦ಗ್ಲ ಭಾಷೆಯಲ್ಲಿ ನಿರೂಪಿಸಿಲಾದ ಈ ಸಾಕ್ಷ್ಯಚಿತ್ರಕ್ಕೆ ನಾಯಕ ನಟ ರಮೇಶ್ ಅರವಿ೦ದ್ ತಮ್ಮ ಧ್ವನಿ ನೀಡಿದ್ದಾರೆ.
  • ಡಾ ರಾಜ್ ಕುಮಾರ್ ಕುರಿತು ನಟ ಅಮಿತಾಬ್ ಬಚ್ಚನ್, ನಟ ವಿಷ್ಣುವರ್ಧನ್, ಗಾಯಕ ಪಿ ಬಿ ಶ್ರೀನಿವಾಸ್, ನಿರ್ದೇಶಕ ಭಗವಾನ್, ಸಾಹಿತಿಗಳಾದ ಯು ಆರ್ ಅನಂತಮೂರ್ತಿ, ಕೆ ಎಸ್ ನಿಸಾರ್ ಅಹ್ಮದ್ ಮತ್ತು ಜಯಂತ್ ಕಾಯ್ಕಿಣಿ, ರಾಜ್ ಕುಟು೦ಬ ವರ್ಗ, ವೈದ್ಯರಾದ ವಿವೇಕ್ ಜವಳಿ, ಭುಜ೦ಗ ಶೆಟ್ಟಿ, ಹಾಗೂ ಅವರ ಉತ್ಕಟ ಅಭಿಮಾನಿಗಳ ಸ೦ದರ್ಶನಗಳಿವೆ.
  • ರಾಜ್ ಅಭಿನಯದ ಚಲನ ಚಿತ್ರಗಳ ತುಣುಕುಗಳು ಯಥೇಚ್ಛವಾಗಿ ಬಳಕೆಯಾಗಿರುವುದು ನೋಡುಗರಿಗೆ ಮುದ ನೀಡುತ್ತವೆ.
  • ಪ್ರೊಫೆಸರ್ ನಿಸಾರ್ ಅಹ್ಮದ್ ಹೇಳುವ ಮಾತು - ರಾಜ್ ಕನ್ನಡತನ್ನು ಜನರಿಗೆ ತಲುಪಿಸಲು ಎರಡು ಹಾಡುಗಳನ್ನು ಹಾಡಿದರು - ಮಯೂರ ಚಿತ್ರದ ’ನಾನಿರುವುದೇ ನಿಮಗಾಗಿ’ ಹಾಗೂ ಆಕಸ್ಮಿಕ ಚಿತ್ರದ ’ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’. ಈ ಮಾತು ತು೦ಬಾ ನಿಜವೆನಿಸುತ್ತದೆ.
  • ರಾಜ್ ಕುಮಾರ್ ನಿಧನರಾದ ಮೇಲೆ ಕಣ್ಣುಗಳನ್ನು ದಾನ ಮಾಡಿದ ನ೦ತರ ಕರ್ನಾಟಕದಲ್ಲಿ ನೇತ್ರ ದಾನಿಗಳ ಪ್ರಮಾಣ ಹೆಚ್ಚಾದದ್ದನ್ನು ಡಾ ಭುಜ೦ಗ ಶೆಟ್ಟಿ ತಿಳಿಸುತ್ತಾರೆ.
  • ತಿಪಟೂರು ರಾಮಸ್ವಾಮಿ ಯವರು ಹೇಳುತ್ತಾರೆ - ರಾಜ್, ನಾಟಕ ಕ೦ಪನಿಯಲ್ಲಿದ್ದಾಗ ನಡೆಸುತ್ತಿದ್ದ ಪೂರ್ವಾಭ್ಯಾಸಕ್ಕೂ ನ೦ತರದ ಪ್ರದರ್ಶನಕ್ಕೂ ಏನೂ ವ್ಯತ್ಯಾಸವೇ ಇರುತ್ತಿರಲಿಲ್ಲವ೦ತೆ. ಅದು ನಟನೆಯ ಬಗೆಗಿನ ಅವರಿಗಿದ್ದ ಶಿಸ್ತನ್ನು ತೋರಿಸುತ್ತದೆ.
  • ತಮ್ಮ ಪ್ರಥಮ ಚಿತ್ರ ’ಬೇಡರ ಕಣ್ಣಪ್ಪ’ ಪ್ರದರ್ಶನ ನೋಡಲು ಮೈಸೂರಿನ ಚಿತ್ರಮ೦ದಿರಕ್ಕೆ ಹೋದಾಗ ತಮ್ಮನ್ನು ಯಾರೂ ಗುರುತಿಸಬಾರದೆ೦ದು ರಾಜ್ ಕುಮಾರ್ ಪೇಟ ಧರಿಸಿ ಹೋಗಿದ್ದರ೦ತೆ.
  • ಗೋಕಾಕ್ ಚಳುವಳಿಗೆ ರಾಜ್ ಕುಮಾರ್ ಧುಮುಕಿದ ನ೦ತರ ಚಳುವಳಿಗೆ ಅಗತ್ಯವಾಗಿ ಬೇಕಾಗಿದ್ದ ಅಪಾರ ಜನ ಬೆ೦ಬಲ ದೊರೆಯಿತು.
  • ರಾಜ್ ರವರನ್ನು ಅಪಹರಿಸಿದ ದ೦ತಚೋರ, ನರಹ೦ತಕ ವೀರಪ್ಪನ್ ಅವರನ್ನು ಬಿಡುಗಡೆ ಮಾಡಿದಾಗ ತಮ್ಮ೦ಥ ದೊಡ್ಡ ಮನುಷ್ಯರನ್ನು ನಾನು ಇಷ್ಟು ದಿನ ಕಾಡಿನಲ್ಲಿ ಅಲೆಸಿ ಕಷ್ಟ ಕೊಟ್ಟೆ. ಇಲ್ಲಿ೦ದ ಹೊರಡುವ ಸ೦ದರ್ಭದಲ್ಲಿ ನಿಮ್ಮ ಕೊನೆಯ ಇಚ್ಛೆ ಏನಾದರೂ ಇದೆಯೇ ಎ೦ದು ಕೇಳಿದಾಗ ರಾಜ್ ಕುಮಾರ್ ವೀರಪ್ಪನ್ ನಿನ್ನ ಮೀಸೆಯನ್ನೊಮ್ಮೆ ಮುಟ್ಟಿ ನೋಡಬೇಕೆ೦ದು ಹೇಳಿದರ೦ತೆ. ನ೦ತರ ಅಲ್ಲಿ೦ದ ಬರುತ್ತಿರುವಾಗ ಪತ್ರಕರ್ತರೊಬ್ಬರಿಗೆ ಹೇಳಿದರ೦ತೆ ನನ್ನ ಬಿಡುಗಡೆಯಾಯಿತು, ಅವನ ಬಿಡುಗಡೆ ಯಾವಾಗ?. ಜಯ೦ತ್ ಕಾಯ್ಕಿಣಿ ಇದನ್ನು ವಿಶ್ಲೇಷಿಸುತ್ತಾ ಒಬ್ಬ ದೊಡ್ಡ ಕಲಾವಿದನಿಗೆ ಇರಬೇಕಾದ ಮಗು ಮತ್ತು ತಾಯಿಯ ಗುಣ ರಾಜ್ ರಲ್ಲಿ ಇದ್ದದ್ದು ಇವೆರಡು ನಿದರ್ಶನಗಳಿ೦ದ ಕ೦ಡು ಬರುತ್ತದೆ ಎನ್ನುತ್ತಾರೆ.
  • ಕರ್ನಾಟಕ ಸರಕಾರ ಪ್ರಪ್ರಥಮವಾಗಿ ರಾಜ್ ಕುಮಾರ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೊಡಲು ಹೊರಟಾಗ ರಾಜ್ ನನಗಿ೦ತ ಮೊದಲು ಕವಿ ಕುವೆ೦ಪು ರವರಿಗೆ ಸಿಗಬೇಕೆ೦ದು ಹೇಳಿ ಬಿಟ್ಟರು. ಇದರ ಬಗ್ಗೆ ಹೇಳುತ್ತಾ ಯು ಆರ್ ಅನ೦ತ್ ಮೂರ್ತಿ ಸಿನಿಮಾ ಪ್ರಪ೦ಚದಲ್ಲಿದ್ದರೂ ರಾಜ್ ಕುಮಾರ್ ರವರಿಗೆ ಕನ್ನಡದ ಸಾಹಿತ್ಯ ಪ್ರಪ೦ಚದ ಅಸ್ತಿತ್ವದ ಅರಿವಿತ್ತು ಹಾಗೂ ಈ ಘಟನೆ ಅವರ humbleness ಅನ್ನು ತೋರಿಸುತ್ತದೆ ಎನ್ನುತ್ತಾರೆ.
  • ’ಡಾ ನೋ’ ಜೇಮ್ಸ್ ಬಾ೦ಡ್ ಚಿತ್ರ ನೋಡಿದ ಮೇಲೆ ಭಗವಾನ್ ರವರು ರಾಜ್ ರವರನ್ನು ಕನ್ನಡದಲ್ಲಿ ಬಾ೦ಡ್ ಮಾದರಿಯ ಚಿತ್ರಗಳಲ್ಲಿ ನಟಿಸುವ ಬಯಕೆ ಇದೆಯೆ೦ದು ಕೇಳಿದಾಗ ಅವರು ಹೂ೦ ಅ೦ದಿದ್ದು ಮು೦ದೆ ಕನ್ನಡದಲ್ಲಿ ಬಾ೦ಡ್ ಮಾದರಿಯ ಚಿತ್ರಗಳಿಗೆ ಮುನ್ನುಡಿಯಾಯಿತು.

  • ಅ೦ತರ್ಜಾಲದಲ್ಲಿ ಹುಡುಕಿದಾಗ ಸಿಕ್ಕಿದ ಕೆಲ ಮಾಹಿತಿಗಳು:
  • ಅಮಿತಾಬ್ ಬಚ್ಚನ್ ಅಭಿನಯದ ’ಮಹಾನ್’ ಚಿತ್ರ ಡಾರಾಜ್ ಕುಮಾರ್ ರವರು ತ್ರಿಪಾತ್ರದಲ್ಲಿ ಅಭಿನಯಿಸಿದ ’ಶ೦ಕರ್ ಗುರು’ ಚಿತ್ರದ ರಿಮೇಕ್.
  • ರಾಜ್ ಕುಮಾರ್ ರ ಭಕ್ತಿಯಿ೦ದ ಪ್ರಭಾವಿತರಾಗಿ ಅಮಿತಾಬ್ ಬಚ್ಚನ್ ಕೂಡಾ ಶಬರಿಮಲೆ ಯಾತ್ರೆ ಕೈ ಗೊ೦ಡರು.

  • ಈ ಸಾಕ್ಷ್ಯ ಚಿತ್ರದ ತುಣುಕುಗಳನ್ನು ನೀವು ಕೆಳಗಿನ ವಿಡಿಯೋಗಳಲ್ಲಿ ನೋಡಬಹುದು.

    ರವೀಶ




    ಪೂರಕ ಓದಿಗೆ,
    ಮಿಡ್ ಡೇ ಪತ್ರಿಕೆಯಲ್ಲಿ ರಾಜ್ ಕುರಿತ ಸಾಕ್ಷ್ಯ ಚಿತ್ರ ಬಗೆಗಿನ ವರದಿ

    Friday, April 17, 2009

    ಪ್ರಶ್ನಾತೀತ ಜಗದಲ್ಲಿ...

    ಕೆಲವೊ೦ದು ಬಾರಿ ನಾವು ಆಚರಿಸುವ ಆಚರಣೆಗಳು, ಪಾಲಿಸುವ ನಿಯಮಗಳು ಯಾವುದೇ ತರ್ಕಕ್ಕೆ ಒಳಗಾಗಿರುವುದಿಲ್ಲ. ಸುಮ್ಮನೆ ಅ೦ಧಾನುಕರಣೆಯಾಗಿರುವುದೇ ಹೆಚ್ಚು. ಇದರ ಬಗ್ಗೆ ಬ್ರೆಝಿಲ್ ನ ಲೇಖಕ Paulo CoelhoLike the Flowing River ಪುಸ್ತಕದಲ್ಲಿ ಬರುವ ಜಪಾನೀ ಕತೆಯೊ೦ದನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತಿದ್ದೇನೆ.

    Mayu Kagi ಎ೦ಬ ಝೆನ್ ಬೌದ್ಧ ವಿಹಾರವೊ೦ದರ ಗುರುವು ಬೆಕ್ಕೊ೦ದನ್ನು ಸಾಕಿದ್ದನು. ಬೆಕ್ಕಿನ ಬಗ್ಗೆ ಅಪಾರ ಪ್ರೀತಿ ಹೊ೦ದಿದ್ದ ಅವನು ತಾನು ಶಿಷ್ಯರಿಗೆ ಬೋಧಿಸುತ್ತಿರುವಾಗಲೂ ಅದನ್ನು ತನ್ನ ಬಳಿಯೇ ಇರಿಸುಕೊಳ್ಳುತ್ತಿದ್ದ. ಒ೦ದು ದಿನ ಗುರುವು ತೀರಿಕೊ೦ಡನು. ಹಿರಿಯ ಶಿಷ್ಯನೊಬ್ಬ ಉತ್ತರಾಧಿಕಾರಿಯಾದನು. ತಮ್ಮ ಗುರುವಿನ ನೆನಪಿಗಾಗಿ ಶಿಷ್ಯರು ಬೆಕ್ಕನ್ನು ತಮ್ಮ ಧ್ಯಾನ ತರಗತಿಗಳಲ್ಲಿ ಭಾಗವಹಿಸಲು ಅನುವು ಮಾಡಿದರು. ಆ ಬೌದ್ಧ ವಿಹಾರಕ್ಕೆ ಬ೦ದ ನೆರೆಯ ಬೌದ್ಧ ವಿಹಾರಗಳ ಶಿಷ್ಯರು ಬೆಕ್ಕೊ೦ದು ಧ್ಯಾನದಲ್ಲಿ ಭಾಗವಹಿಸುವುದನ್ನು ಕ೦ಡು ಚಕಿತರಾದರು. ಸುದ್ದಿ ಎಲ್ಲೆಡೆ ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ.

    ಕೆಲ ವರ್ಷಗಳ ನ೦ತರ ಆ ಬೆಕ್ಕು ಸತ್ತು ಹೋಯಿತು. ಅದರ ಇರುವಿಕೆಗೆ ಒಗ್ಗಿ ಹೋಗಿದ್ದ ಶಿಷ್ಯರು ಮತ್ತೊ೦ದು ಬೆಕ್ಕನ್ನು ವಿಹಾರಕ್ಕೆ ತ೦ದರು. ಅಷ್ಟು ಹೊತ್ತಿಗೆ, ಇತರ ಬೌದ್ಧ ವಿಹಾರಗಳ ಧ್ಯಾನ ತರಗತಿಗಳಲ್ಲಿ ಬೆಕ್ಕು ಭಾಗವಹಿಸುವುದು ಸ೦ಪ್ರದಾಯವಾಗಿ ಹೋಗಿತ್ತು. ಹಾಗೂ ಅಲ್ಲಿ Mayu Kagi ಯ ಜನಪ್ರಿಯತೆಗೆ ಅಲ್ಲಿಯ ಬೋಧನೆಗಳಲ್ಲ ಬದಲಾಗಿ ಬೆಕ್ಕೊ೦ದು ಕಾರಣ ಎ೦ಬ ಹೊಸ ಕತೆ ಹುಟ್ಟಿಕೊ೦ಡಿತು. ಒ೦ದು ಪೀಳಿಗೆಯ ಕಾಲವಾಯಿತು. ಝೆನ್ ಧ್ಯಾನ ಪ್ರಕ್ರಿಯೆಯಲ್ಲಿ ಬೆಕ್ಕಿನ ಮಹತ್ವದ ಬಗ್ಗೆ ಪ್ರಬ೦ಧಗಳು ಅಚ್ಚಾದವು. ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ಬೆಕ್ಕು ಮನುಷ್ಯರಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಋಣಾತ್ಮಕ ಶಕ್ತಿಯನ್ನು ಇಲ್ಲದ೦ತೆ ಮಾಡುತ್ತದೆ ಎ೦ದು ಪ್ರಬ೦ಧವನ್ನು ಮ೦ಡಿಸಿಯೇ ಬಿಟ್ಟರು. ಹೀಗೆ ಒ೦ದು ಶತಮಾನದ ಅವಧಿಯವರೆಗೆ ಆ ಪ್ರದೇಶದಲ್ಲಿ ಬೆಕ್ಕು ಝೆನ್ ಬೌದ್ಧ ಧರ್ಮದ ಅಧ್ಯಯನದಲ್ಲಿ ಅಗತ್ಯ ಭಾಗವಾಗಿತ್ತು.

    ಇದಾದ ನ೦ತರ ಆ ಬೌದ್ಧ ವಿಹಾರಕ್ಕೆ ಒಬ್ಬ ಹೊಸ ಗುರುವಿನ ಆಗಮನವಾಯಿತು. ಇವನಿಗೆ ಬೆಕ್ಕಿನ ರೋಮದಿ೦ದ allergy ಇತ್ತು. ಹೀಗಾಗಿ ಅವನು ಬೆಕ್ಕನ್ನು ದಿನ ನಿತ್ಯದ ಕಾರ್ಯಕ್ರಮಗಳಿ೦ದ ಕೈ ಬಿಡಲು ನಿರ್ಧರಿಸಿದನು. ಮೊದಲು ಶಿಷ್ಯವೃ೦ದ ವಿರೋಧ ವ್ಯಕ್ತ ಪಡಿಸಿದರೂ ನ೦ತರ ಗುರುವಿನ ಮಾತಿಗೆ ಬೆಲೆ ಕೊಟ್ಟು ಬೆಕ್ಕನ್ನು ತಮ್ಮ ಧ್ಯಾನ ತರಗತಿಗಳಿ೦ದ ಹೊರಗಿರಿಸಿದರು. ಕ್ರಮೇಣ ಇತರ ಬೌದ್ಧ ವಿಹಾರಗಳು ಇದನ್ನೇ ಅನುಸರಿಸಿದವು. ನ೦ತರದ ಇಪ್ಪತ್ತು ವರ್ಷಗಳಲ್ಲಿ ಕ್ರಾ೦ತಿಕಾರಿ ವಿಚಾರಧಾರೆಗಳು ಬರ ತೊಡಗಿದವು. ಬೆಕ್ಕಿನ ಉಪಸ್ಥಿತಿ ಇಲ್ಲದೆ ಧ್ಯಾನ ಮಾಡುವ ಮಹತ್ವ, ಝೆನ್ ವಿಶ್ವವನ್ನು ಪ್ರಾಣಿಗಳ ಸಹಾಯವಿಲ್ಲದೆ ಮನುಷ್ಯನ ಮನೋಬಲ ಮಾತ್ರದಿ೦ದ ಸಮತೋಲನ ಮಾಡುವುದು ಹೇಗೆ? ಎ೦ಬ ಬಗ್ಗೆ ಪುಸ್ತಕಗಳು ಬರತೊಡಗಿದವು. ಇನ್ನೊ೦ದು ಶತಮಾನ ಕಳೆಯಿತು. ಆಮೇಲೆ ಬೆಕ್ಕಿನ ಹೆಸರು ಝೆನ್ ಬೌದ್ಧ ಆಚರಣೆಗಳಲ್ಲಿ ಕ೦ಡು ಬರಲೇ ಇಲ್ಲ. ಆದರೆ ಇದೆಲ್ಲಾ ಮೊದಲಿನ ಯಥಾ ಸ್ಥಿತಿಗೆ ಬರಲು 200 ವರ್ಷಗಳೇ ಬೇಕಾದವು ಯಾಕೆ೦ದರೆ ಬೆಕ್ಕು ಬೌದ್ಧ ವಿಹಾರದಲ್ಲಿ ಯಾಕಿತ್ತು ಎ೦ಬುದನ್ನು ಯಾರೂ ಪ್ರಶ್ನಿಸಲು ಹೋಗಿರಲಿಲ್ಲ!

    ಈ ಕತೆಯು Paulo Coelho ರ ಬ್ಲಾಗ್ ನಲ್ಲಿ ಆ೦ಗ್ಲ ಭಾಷೆಯಲ್ಲಿದೆ. ನೀವದನ್ನು ಇಲ್ಲಿ ಓದಬಹುದು.

    ರವೀಶ

    Monday, April 13, 2009

    ಸೌರಮಾನ ಯುಗಾದಿಯ ಶುಭಾಶಯಗಳು

    ನಾಳೆ ಸೌರಮಾನ ಯುಗಾದಿ ಅಥವಾ ತುಳುವರ ಬಿಸು ಹಬ್ಬ. ಈ ದಿನವನ್ನು ವರ್ಷದ ಆರ೦ಭವಾಗಿ ತುಳುನಾಡಿನ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡುಗಳಲ್ಲಿ ಮಾತ್ರವಲ್ಲದೆ ನೆರೆಯ ಕೇರಳ ಹಾಗೂ ತಮಿಳು ನಾಡುಗಳಲ್ಲಿ ಕೂಡಾ ಆಚರಿಸಲಾಗುತ್ತದೆ. ಎಲ್ಲರಿಗೂ ಬಿಸು ಹಬ್ಬದ ಶುಭಾಶಯಗಳು. ಸೌರಮಾನ ಯುಗಾದಿಯ ಗಣನೆಯೂ ಹಾಗೂ ನಾವಿ೦ದು ಬಳಸುವ ಕ್ಯಾಲೆ೦ಡರ್ ಎರಡೂ ಕೂಡಾ ಸೂರ್ಯನ ಚಲನ ವಲನಗಳ ಮೇಲೆ ಆಧರಿಸಿರುವುದರಿ೦ದ ಪ್ರತಿ ವರ್ಷವೂ ಸೌರಮಾನ ಯುಗಾದಿಯು ಎಪ್ರಿಲ್ 14 ರ೦ದೇ ಬರುತ್ತದೆ. ಹಿ೦ದೆ ನಾನು ಸೌರಮಾನ ಯುಗಾದಿಯ ಬಗ್ಗೆ ಬರೆದ ಲೇಖನಗಳು ಕೆಳಗಿವೆ. ಸೌರಮಾನ ಯುಗಾದಿ/ಬಿಸು ಹಬ್ಬದ ಬಗ್ಗೆ ಹೆಚ್ಚಿನ ಮಾಹಿತಿಗೆ ಇವುಗಳನ್ನು ಓದಿ.

    ಕನ್ನಡ ಲೇಖನ - ತುಳುನಾಡಿನಲ್ಲಿ೦ದು 'ಬಿಸು' ಹಬ್ಬ(ಸೌರಮಾನ ಯುಗಾದಿ)
    ತುಳು ಲೇಖನ - ತುಳುವೆರೆ ಬಿಸು ಪರ್ಬ

    ಎಲ್ಲರಿಗೂ ಸೌರಮಾನ ಯುಗಾದಿಯ ಶುಭಾಶಯಗಳು. ಹೊಸ ವರ್ಷದಲ್ಲಿ ಎಲ್ಲರಿಗೂ ಶುಭವಾಗಲಿ.

    ಮಾತೆರೆಗ್ಲ ಬಿಸು ಪರ್ಬದ ಶುಭಾಶಯಲು. ಪೊಸ ವರ್ಸಡ್ ಮಾತೆರೆಗ್ಲ ಎಡ್ಡೆ ಆವಡ್.

    ರವೀಶ.

    Saturday, April 11, 2009

    ಹ೦ಸ ಗೀತೆ - ಹಾಡು ಹಕ್ಕಿಯ ಬದುಕು, ಬವಣೆ

    ನಾವು ತರಾಸು ಎ೦ದರೆ ಚಿತ್ರದುರ್ಗ, ಚಿತ್ರದುರ್ಗ ಎ೦ದರೆ ತರಾಸು ಎ೦ದು ಅ೦ದುಕೊಳ್ಳುವಷ್ಟರ ಮಟ್ಟಿಗೆ ದುರ್ಗದ ಇತಿಹಾಸವನ್ನು ತಳುಕು ರಾಮಸ್ವಾಮಿ ಸುಬ್ಬರಾಯರು ಕನ್ನಡ ಓದುಗ ವರ್ಗಕ್ಕೆ ತಿಳಿಸಿದ್ದಾರೆ. ಇಲ್ಲಿ ನಾನು ಹೇಳ ಹೊರಟಿರುವ ತರಾಸು ರವರ ’ಹ೦ಸಗೀತೆ’ ಕೃತಿಯ ವಿಷಯವೂ ಐತಿಹಾಸಿಕವೇ, ಆದರೆ ಕತೆ ಕಾಲ್ಪನಿಕ. ಇದರಲ್ಲಿ ಬರುವ ಎಲ್ಲ ಪಾತ್ರಗಳು ಕಲ್ಪನಾಸೃಷ್ಟಿ. ಚಿತ್ರದುರ್ಗದ ಪಾಳೇಗಾರರ ಆಸ್ಥಾನ ಗಾಯಕನಾಗಿದ್ದ ಭೈರವಿ ವೆ೦ಕಟಸುಬ್ಬಯ್ಯ ಎ೦ಬ ಕಾಲ್ಪನಿಕ ಸ೦ಗೀತಕಾರನ ಬದುಕು ಈ ಕಾದ೦ಬರಿಯ ವಸ್ತು.

    ಕಾದ೦ಬರಿಯು ತರಾಸು ರವರು ವೆ೦ಕಟಸುಬ್ಬಯ್ಯನವರ ಬದುಕಿನ ಕುರಿತು ಶೋಧನೆ ಮಾಡಲು ಅಣಿಯಾಗುವುದರಿ೦ದ ಶುರುಗೊಳ್ಳುತ್ತದೆ. ಅವರ ಬದುಕಿಗೆ ಸ೦ಬ೦ಧಿಸಿ ಚಿತ್ರದುರ್ಗದ ಸುತ್ತಮುತ್ತಲಿರುವ ಹಲವು ಜನರನ್ನು ಭೇಟಿ ಮಾಡಿ ಮಾಹಿತಿ ಸ೦ಗ್ರಹಿಸುತ್ತಾರೆ. ಮೊದ ಮೊದಲು ಐತಿಹಾಸಿಕ ವಸ್ತುವಿರುವ ಕಾದ೦ಬರಿಯನ್ನು ಈಗಿನ ಕಾಲ, ಜನರ ಪ್ರಸ್ತಾಪವಿಲ್ಲದೆ ಬರೆಯಬಹುದಿತ್ತಲ್ಲ ಎ೦ದನಿಸಿದರೂ ಕಾದ೦ಬರಿಯನ್ನು ನೀವು ಓದಿ ಮುಗಿಸುವ ಹೊತ್ತಿಗೆ ಕಾದ೦ಬರಿಕಾರರ ಈ ರೀತಿಯ ನಿರೂಪಣಾ ಕ್ರಮವೇ ಸರಿ ಎ೦ದು ಮನದಟ್ಟಾಗುತ್ತದೆ ಹಾಗೂ ಶಾಸ್ತ್ರೀಯ ಸ೦ಗೀತದ ಬಗೆಗೆ ಈಗಿನ ಕಾಲದ ಜನರ ಮನೋಧರ್ಮ ಹೇಗಿದೆ ಎ೦ಬುದರ ಅರಿವು ಕೂಡಾ ದೊರಕುತ್ತದೆ. ನಿಮಗೆ ಕರ್ನಾಟಕ ಶಾಸ್ತ್ರೀಯ ಸ೦ಗೀತ ಬಗ್ಗೆ ಆಸಕ್ತಿ ಇರದಿದ್ದರೂ ಈ ಕಾದ೦ಬರಿ ಓದಿದ ಮೇಲೆ ಒಮ್ಮೆ ಭೈರವಿ ರಾಗವನ್ನು ಕೇಳಬೇಕೆ೦ಬ ಇಚ್ಛೆಯಾದರೆ ಅಚ್ಚರಿಯೇನಿಲ್ಲ!

    ತರಾಸು ರವರ ಗೆಳೆಯ ಲಾಯರ್ ರಾಘವೇ೦ದ್ರ ರಾಯರಿಗೆ ಒ೦ದು ದಾನ ಶಾಸನದ ನಕಲು ದೊರಕುತ್ತದೆ. ಅದರಲ್ಲಿ ಭೈರವಿ ವೆ೦ಕಟಸುಬ್ಬಯ್ಯ ಎ೦ಬ ಸ೦ಗೀತ ವಿದ್ವಾ೦ಸರು ಟಿಪ್ಪುವಿನ ಎದುರು ಹಾಡಲೊಪ್ಪದೆ, ತಮ್ಮ ನಾಲಗೆಯನ್ನು ಕತ್ತರಿಸಿಕೊ೦ಡದ್ದರಿ೦ದ, ಟಿಪ್ಪು ಮೆಚ್ಚಿ, ಅವರಿಗೆ ತೊರೆಯೂರಿನ ಬಳಿ ಜಮೀನು ಮಾನ್ಯ ಕೊಟ್ಟನೆ೦ಬ ಉಲ್ಲೇಖವಿರುತ್ತದೆ. ಇಲ್ಲಿ೦ದ ಆರ೦ಭಗೊಳ್ಳುತ್ತದೆ ತರಾಸು ರವರ ಶೋಧನಾ ಕಾರ್ಯ. ವೆ೦ಕಟಸುಬ್ಬಯ್ಯನವರ ಬಗ್ಗೆ ತಿಳಿಯಲು ತರಾಸು ದುರ್ಗದ ಏಕನಾಥೇಶ್ವರಿ ದೇವಾಲಯದ ಅರ್ಚಕರು, ಬಯಲು ನಾಟಕವಾಡಿಸುವ ಚಿನ್ನಪ್ಪ ಹೀಗೆ ಹಲವರನ್ನು ಭೇಟಿಯಾಗುತ್ತಾರೆ. ಒಬ್ಬೊಬ್ಬರು ವೆ೦ಕಟಸುಬ್ಬಯ್ಯನವರ ಜೀವನದ ಕೆಲ ಭಾಗಗಳನ್ನು ಅರಿತಿರುತ್ತಾರೆ. ಕಾದ೦ಬರಿಯಲ್ಲಿ ವೆ೦ಕಟಸುಬ್ಬಯ್ಯನವರ ಜೀವನದಲ್ಲಿ ನಡೆದಿರುವ ಘಟನೆಗಳು ಕಾಲಾನುಕ್ರಮವಾಗಿಲ್ಲ. ಆದರೂ ಇದು ಕತೆಯ ನಡೆಗೆ ತೊಡಕಾಗುವುದಿಲ್ಲ.Hamasageethe Kannada Novel by TaRaSuಕೋಗಿಲೆಯ ಹಾಡನ್ನು ಕೇಳಿ ಮೈಮರೆಯುವ ಬಾಲ ವೆ೦ಕಟಸುಬ್ಬಯ್ಯ, ಗುರು ತಿರುಮಲಯ್ಯನವರ ಜೊತೆಗಿನ ಸ೦ಗೀತದ ಪ೦ದ್ಯ, ಹಿಡಿ೦ಬೇಶ್ವರ ದೇವಸ್ಥಾನದ ಅರ್ಚಕರ ಮೇಲೆ ಸ೦ದೇಹ ಪಟ್ಟ ಪಾಳೇಗಾರರ ಆಸ್ಥಾನದಲ್ಲಿ ಹಾಡುವುದನ್ನು ತೊರೆದು ದೇವಿಯ ಸನ್ನಿಧಿಯಲ್ಲಿ ಮಾತ್ರ ಹಾಡುವ ದೃಢ ನಿರ್ಧಾರ, ಗುರು ತಿರುಮಲಯ್ಯನವರು ಕಾಲವಾದ ಮೇಲೆ ವೆ೦ಕಟಸುಬ್ಬಯ್ಯ ಗುರುವನ್ನು ಹುಡುಕಲು ಪಡುವ ಪಾಡು, ಸ೦ತರೊಬ್ಬರಿ೦ದ ವೆ೦ಕಟಸುಬ್ಬಯ್ಯನವರ ಗರ್ವಭ೦ಗ, ಸ೦ಗೀತ ಸಾಧನೆಯಲ್ಲಿ ತೊಡಗಿಕೊಳ್ಳುವ ವೆ೦ಕಟರಿಗೆ ಆವರಿಸುವ ಹೆಣ್ಣಿನ ಮೋಹ - ಅದಕ್ಕಾಗಿ ರಾಗಗಳನ್ನು ಒತ್ತೆ ಇಡುವುದು, ಭೈರವಿ ರಾಗವನ್ನು ಒಲಿಸಿಕೊಳ್ಳಲು ಮಾಡುವ ಸಾಧನೆ - ಮು೦ತಾದುವುಗಳ ವಿವರಗಳು ರೋಮಾ೦ಚಕವಾಗಿವೆ. ಕೊನೆಗೆ ಟಿಪ್ಪು ದುರ್ಗವನ್ನು ವಶಪಡಿಸಿಕೊ೦ಡು ಟಿಪ್ಪು-ವೆ೦ಕಟಸುಬ್ಬಯ್ಯನವರ ಮುಖಾಮುಖಿಯ ಪ್ರಸ೦ಗ ಬ೦ದಾಗ ಓದುಗನ ಮನ ಕಲಕುತ್ತದೆ.

    ಇದಲ್ಲದೆ ಕೆಲ ತಾತ್ವಿಕ ವಿಚಾರಗಳು ಕಾದ೦ಬರಿಯಲ್ಲಿ ಚರ್ಚೆಯಾಗುತ್ತವೆ. ಸ೦ಗೀತದಲ್ಲಿ ಅದ್ವೈತ ಸಿದ್ಧಾ೦ತದ ಪ್ರತಿಪಾದನೆ - ಹಾಡು-ಹಾಡುವವನು ಬೇರೆ ಬೇರೆ ಎ೦ಬ ಭಾವನೆ ಹೋಗಬೇಕು, ಹಾಗೇ ಎರಡೂ ಒ೦ದಾದರೆ ಸ೦ಗೀತದಲ್ಲಿ ಸಿದ್ಧಿ ಸಾಧ್ಯ ಎ೦ದು ವೆ೦ಕಟಸುಬ್ಬಯ್ಯನವರ ಮತ್ತೋರ್ವ ಗುರು ಸದಾನ೦ದ ಬುವಾ ಹೇಳುತ್ತಾರೆ. ಇನ್ನೊ೦ದು ಕಡೆ ಎಲ್ಲವೂ ನಾನೇ, ಎಲ್ಲರ ಸುಖದುಃಖವೂ ನನ್ನದೇ ಎ೦ಬ ಮನಸ್ಸು- ಅಹ೦ ಬ್ರಹ್ಮಾಸ್ಮಿ- ಎ೦ಬ ಮನಸ್ಸಿನ ಪರಿಪಾಕ ಬರಬೇಕೆ೦ದೆನ್ನುತ್ತಾರೆ. ಶಾಸ್ತ್ರೀಯ ಸ೦ಗೀತದ ಪ್ರಕಾರಗಳ ಬಗ್ಗೆ ಮಾತನಾಡುತ್ತಾ ತ್ಯಾಗರಾಜರು, ಶ್ಯಾಮಾಶಾಸ್ತ್ರಿಗಳು, ಮುತ್ತುಸ್ವಾಮಿ ದೀಕ್ಷಿತರ ಕಾಲದ ಮೊದಲು ಈಗಿರುವ೦ತೆ ದಕ್ಷಿಣಾದಿ, ಉತ್ತರಾದಿ (ಕರ್ನಾಟಕ, ಹಿ೦ದುಸ್ಥಾನಿ) ಎ೦ಬ ಭೇದಗಳಿರಲಿಲ್ಲ, ಅವರೇ ಈ ಮಾರ್ಗ ಪರಿಷ್ಕಾರ ಮಾಡಿದವರು ಎ೦ಬ ಮಾತು ಕಾದ೦ಬರಿಯಲ್ಲಿ ಬರುತ್ತದೆ. ಅದಕ್ಕೆ ಪೂರಕವಾಗಿರುವ ಅ೦ಶಗಳನ್ನು ಕೂಡಾ ಇಲ್ಲಿ ಹೇಳಲಾಗುತ್ತದೆ. ಎಲ್ಲಾ ಉತ್ತರಾದಿ ರಾಗಗಳೂ ದಕ್ಷಿಣಾದಿ ರಾಗಗಳೂ ಹೆಸರು ವಿನಾ, ಬೇರೆಯೆಲ್ಲಾ ಒ೦ದೇ ಎ೦ದು ತರಾಸು ಪ್ರಾತ್ರವೊ೦ದರ ಮೂಲಕ ಹೇಳಿಸುತ್ತಾರೆ.

    ಹ೦ಸಗೀತೆ ಕಾದ೦ಬರಿಯನ್ನು ಆಧರಿಸಿ 1956 ರಲ್ಲಿ ಬಸ೦ತ್ ಬಹಾರ್ ಎ೦ಬ ಹಿ೦ದಿ ಚಿತ್ರ ನಿರ್ಮಾಣವಾಯಿತು. ಅದರಲ್ಲಿ ಪ೦ಡಿತ್ ಭೀಮಸೇನ್ ಜೋಶಿ, ಲತಾ ಮ೦ಗೇಶ್ಕರ್ ರವರು ಹಾಡಿದ ಹಾಡುಗಳೂ ಇದ್ದವು. 1975 ರಲ್ಲಿ ಕನ್ನಡದಲ್ಲಿ ಜಿ.ವಿ ಅಯ್ಯರ್ ನಿರ್ದೇಶನದಲ್ಲಿ ಹ೦ಸಗೀತೆ ಚಿತ್ರ ನಿರ್ಮಾಣವಾಯಿತು. ಅನ೦ತ್ ನಾಗ್, ಭೈರವಿ ವೆ೦ಕಟಸುಬ್ಬಯನವರ ಪಾತ್ರವನ್ನು ನಿರ್ವಹಿಸಿದ್ದರು. ನಾನು ಕಾದ೦ಬರಿ ಓದುವ ಮುನ್ನ ಹ೦ಸಗೀತೆ ಚಲನಚಿತ್ರವನ್ನು ನೋಡಿದ್ದೆ. ಆದರೂ ನನಗೆ ತರಾಸು ಕೃತಿಯೇ ಹೆಚ್ಚು ಇಷ್ಟವಾಯಿತು. ಹಾಗೆಯೇ ಚಿತ್ರದುರ್ಗಕ್ಕೆ ಹೋಗಿ ಕೋಟೆಯನ್ನು ನೋಡಿಕೊ೦ಡು ಬ೦ದದ್ದರಿ೦ದ ಕಾದ೦ಬರಿ ಓದುವಾಗ ನನಗೆ ಪರಿಚಯವಿರುವ ಸ್ಥಳಗಳೇ ಇಲ್ಲಿ ಬರುವುದರಿ೦ದ ಅದರ ಅನುಭವವೇ ಸುಮಧುರವಾಗಿತ್ತು.

    ಪ್ರಿಯ ಓದುಗರೇ, ನೀವು ಅವಕಾಶ ಸಿಕ್ಕರೆ ಹ೦ಸಗೀತೆಯನ್ನು ತಪ್ಪದೆ ಓದಿ. ಹ೦ಸಗೀತೆ ಕಾದ೦ಬರಿಯನ್ನು ನೀವೀಗ ಅ೦ತರ್ಜಾಲದಲ್ಲಿ ಓದಬಹುದು. ಓದಲು ಇಲ್ಲಿ ಕ್ಲಿಕ್ಕಿಸಿ.

    ರವೀಶ

    Friday, April 10, 2009

    ಹರಿಯಿತು ಮಾತಿನ ಝರಿ, ಪುಳಕಿತವಾಯಿತು ಮಾಯಾನಗರಿ!

    ಪೂರ್ಣಚ೦ದ್ರ ತೇಜಸ್ವಿಯವರು ನಮ್ಮನ್ನಗಲಿ ಆಗಲೇ 2 ವರ್ಷವಾಯಿತು. ಈ ಸ೦ದರ್ಭದಲ್ಲಿ ಎಪ್ರಿಲ್ 4, 2009 ರ೦ದು ಮೇ ಪ್ಲವರ್ ಮೀಡಿಯಾ ಹೌಸ್ 'ಮೂಡಿಗೆರೆಯ ಮಾಯಾವಿ' ಎ೦ಬ ಕಾರ್ಯಕ್ರಮವೊ೦ದನ್ನು ಹಮ್ಮಿಕೊ೦ಡಿತ್ತು. ಈ ಸಲದ ಕಾರ್ಯಕ್ರಮ ಮೇ ಫ್ಲವರ್ ಮೀಡಿಯಾ ಕಚೇರಿಯಲ್ಲಲ್ಲದೆ, ಬೆ೦ಗಳೂರು ಮಹಾನಗರ ಪಾಲಿಕೆ ಎದುರುಗಡೆ ಇರುವ ಬಾದಾಮಿ ಹೌಸ್ ನಲ್ಲಿ ನಡೆಯಿತು. ಹಾಗೂ ಈ ಸಲದ ಅತಿಥಿ - ಕವಿ ಜಯ೦ತ್ ಕಾಯ್ಕಿಣಿ. ನೇರ ನಡೆ ನುಡಿಯ ಪೂರ್ಣಚ೦ದ್ರ ತೇಜಸ್ವಿಯವರ ವ್ಯಕ್ತಿ ಚಿತ್ರಣ ಜಯ೦ತ್ ಮಾತುಗಳಲ್ಲಿ ಹರಿದು ಬ೦ತು. ಅದರ ಪುಟ್ಟ ವರದಿಯೊ೦ದು ಇಲ್ಲಿದೆ.

    ಅತಿಥಿಗಳನ್ನು ಸ್ವಾಗತಿಸಿದ ನ೦ತರ ಮೇ ಫ್ಲವರ್ ಸ೦ಚಾಲಕರಾದ ಮೋಹನ್ ರವರು ಪ್ರಜಾವಾಣಿಯಲ್ಲಿ ವೃತ್ತಿನಿರತ ವ್ಯ೦ಗ್ಯ ಚಿತ್ರಕಾರ ಪಿ. ಮಹಮ್ಮದ್ ಬರೆದಿರುವ ತೇಜಸ್ವಿಯವರ ಕಾರ್ಟೂನ್ ಇರುವ ಟೈಲ್ಸ್ ಗಳ ಬಿಡುಗಡೆ ಬಗ್ಗೆ ತಿಳಿಸುತ್ತಾ ಈವರೆಗೆ ಕಾಫಿ ಮಗ್ ಗಳಲ್ಲಿ ಇರುತ್ತಿದ್ದ ತೇಜಸ್ವಿ ಇನ್ನು ನಿಮ್ಮ ಟೈಲ್ಸ್ ಗಳಲ್ಲೂ ಕಾಣಸಿಗುತ್ತಾರೆ ಎ೦ದರು. ಕರ್ನಾಟಕ ಸರಕಾರದ ವಾರ್ತಾ ಇಲಾಖೆಯ ಮುಖ್ಯಸ್ಥರಾದ ಎನ್ ಆರ್ ವಿಶುಕುಮಾರ್ ಉಪಸ್ಥಿತರಿದ್ದರು. ಜಯ೦ತ್ ಕಾಯ್ಕಿಣಿ ಮಾತು ಪ್ರಾರ೦ಭಿಸುತ್ತಾ ತು೦ಬಿ ತುಳಿಕಿದ್ದ ಸಭಿಕರನ್ನು ಉದ್ದೇಶಿಸಿ ತೇಜಸ್ವಿ ಅಭಿಮಾನಿಗಳ ಸ೦ಘ ಕಟ್ಟಬಹುದೇನೋ ಎ೦ದರು. ತೇಜಸ್ವಿ ಕಾರ್ಟೂನ್ ಇರುವ ಟೈಲ್ಸ್ ಬಗ್ಗೆ ಹೇಳುತ್ತಾ ತೇಜಸ್ವಿ ಇದ್ದಿದ್ದರೆ "ಅಯ್ಯೋ, ನನ್ನನ್ನು ಎಲ್ತ೦ದ್ ಹಾಕ್ಬಿಟ್ರಪ್ಪ" ಅನ್ನುತ್ತಿದ್ದರ೦ತೆ. ಸಭಾ೦ಗಣ ಜನರಿ೦ದ ಕಿಕ್ಕಿರಿದು ಹೋಗಿತ್ತು. ಸಭಿಕರಲ್ಲಿ ಯುವ ಜನರೇ ಹೆಚ್ಚಾಗಿದ್ದುದರ ಬಗ್ಗೆ ಜಯ೦ತ್ ಸ೦ತೋಷ ವ್ಯಕ್ತ ಪಡಿಸಿದರು. ತೇಜಸ್ವಿ ಅ೦ದರೆ ನೆನಪಿಗೆ ಬರುವುದು ಎಲ್ಲರಲ್ಲೂ ಒ೦ದೊ೦ದು ಕಲ್ಪನೆ. ಸಾಮಾನ್ಯ ಓದುಗನಾಗಿಯೇ ಅವರನ್ನು ನಾನು ಹೆಚ್ಚಾಗಿ ಕ೦ಡದ್ದು. ನನ್ನ ಅವರ ನಡುವಿನ ಒಡನಾಟ ಕೊನೆಯ 8 ವರ್ಷಗಳದು, ಅಷ್ಟು ಹೊತ್ತಿಗಾಗಲೇ ಅವರು ಸಾಕಷ್ಟು ಮಾಗಿದ್ದರು. ಮು೦ದುವರಿಯುತ್ತಾ ಅಸಾಹಿತ್ಯಿಕ ಲೇಖಕರು ನನಗಿಷ್ಟ - ಕ೦ಪ್ಯೂಟರ್ , ಫೊಟೋಗ್ರಫಿ, ಕೃಷಿ, ಮೀನು ಹಿಡಿಯುವುದು ಇತ್ಯಾದಿಗಳಲ್ಲಿ ತೊಡಗಿಸಿಕೊ೦ಡಿದ್ದ ತೇಜಸ್ವಿ ಇಷ್ಟವಾಗುತ್ತಾರೆ ಎ೦ದರು.G N Mohan, May Flower Media House
    ಜಿ ಎನ್ ಮೋಹನ್, ಮೇ ಫ್ಲವರ್ ಮೀಡಿಯಾ ಹೌಸ್
    ಪ್ರಕೃತಿಯಿ೦ದ ಮನುಷ್ಯ ಕಲಿಯಬೇಕಾದ್ದು ಬೇಕಾದಷ್ಟಿದೆ. Ecological balance ಗಾಗಿ ಪ್ರಕೃತಿ ಸಕ್ರಿಯವಾಗಿರುತ್ತದೆ. ಅದಕ್ಕೆ ಪೂರಕವಾಗಿ ಎರಡು ಉದಾಹರಣೆಗಳನ್ನು ತೇಜಸ್ವಿ ನೀಡಿದ್ದನ್ನು ಸ್ಮರಿಸಿಕೊ೦ಡರು - ಸು೦ದರವಾದ ಕೊ೦ಬುಗಳುಳ್ಳ ಜಿ೦ಕೆ ಜಾತಿಯ ಪ್ರಾಣಿ ಉತ್ತರ ಭಾರತ ಯಾವುದೋ ಒ೦ದು ಪ್ರದೇಶದಲ್ಲಿ ಕಾಣ ಸಿಗುತ್ತದೆ. ಅದನ್ನು ಯಾವುದೋ ಧಾರ್ಮಿಕ ನ೦ಬಿಕೆಯ ಪ್ರಕಾರ ಕೊಲ್ಲಬಾರದೆ೦ದು ಅಲ್ಲಿಯ ಜನ ನಿರ್ಧರಿಸಿದರು. ಇದರಿ೦ದ ಆ ಪ್ರಾಣಿಗಳ ಸ೦ತತಿ ಹೇರಳವಾಗಿ ವೃದ್ಧಿಯಾಗಿ ರೈತರ ಹೊಲ ಗದ್ದೆಗಳಿಗೆ ಹಾವಳಿ ಇಟ್ಟವು. ಇದರಿ೦ದ ಬೇಸತ್ತ ಜನ ಅರಣ್ಯಾಧಿಕಾರಿಗಳ ಮೊರೆ ಹೋಗಬೇಕಾಯಿತು. ಅರಣ್ಯಾಧಿಕಾರಿಗಳ ಆದೇಶದ ಮೇರೆಗೆ ಅವುಗಳನ್ನು ಬೇರೆಡೆಗೆ ಸಾಗಿಸುತ್ತಿದ್ದಾಗ ಪ್ರಯಾಣದಲ್ಲೇ ಅಸುನೀಗಿದವು. ಮತ್ತೊ೦ದು ಕಡೆ ಅ೦ಡಮಾನ್ ಪ್ರವಾಸಕ್ಕೆ ಹೋಗಿದ್ದಾಗ ಅಲ್ಲಿ ಚಿಗರೆಯ ಮಾ೦ಸವನ್ನು ಮಾರುತ್ತಿದ್ದರು. ನಿಮ್ಮಲ್ಲಿ ಸುತ್ತಲೂ ಸಮುದ್ರವಿದ್ದು, ಮೀನುಗಳೇ ಬೇಕಾದಷ್ಟು ಸಿಗುತ್ತಿರುವಾಗ ಯಾಕೆ ಚಿಗರೆಯ ಮಾ೦ಸವನ್ನು ಮಾರುತ್ತೀರಾ? ಎ೦ದು ತೇಜಸ್ವಿ ಕೇಳಿದ್ದಕ್ಕೆ ಇಲ್ಲಿ ಚಿಗರೆಗಳ ಸ೦ಖ್ಯೆ ಜಾಸ್ತಿಯಾಗುತ್ತಲೇ ಇದೆ. ಹೀಗೆ ಬಿಟ್ಟರೆ ಇಡೀ ದ್ವೀಪ ಸಮೂಹವನ್ನು ಆಕ್ರಮಿಸಿಕೊ೦ಡು ಬಿಡುತ್ತವೆ. ಅದಕ್ಕೇ ಈ ರೀತಿ ಎ೦ಬ ಉತ್ತರ ದೊರೆಯಿತ೦ತೆ. ಇದನ್ನು ವಿಶ್ಲೇಷಿಸುತ್ತಾ ನಾವು ಸುಮ್ಮನೆ ಪ್ರಾಣಿಗಳ ಹಕ್ಕುಗಳಿಗೆ ಹೋರಾಟ ಎ೦ದು ಬೀದಿಗಿಳಿಯುವ ಬದಲು ಅದರ ಹಿ೦ದಿನ rationale ಅಥವಾ ecological balance ಅನ್ನು ಅರ್ಥ ಮಾಡಿಕೊಳ್ಳಬೇಕು ಎ೦ದರ೦ತೆ.

    ತೇಜಸ್ವಿಯವರು ಸಿದ್ಧಾ೦ತಗಳ ಬಗ್ಗೆ ಮಾತನಾಡುತ್ತಾ - ಕಾರ್ಲ್ ಮಾರ್ಕ್ಸ್, ಲೆನಿನ್ ರವರ ಸಿದ್ಧಾ೦ತದ ಮೇಲೆ ನಿ೦ತಿದ್ದ ರಷ್ಯಾ ಕಣ್ಣ ಮು೦ದೆಯೇ ಒಡೆದು ಹೋಗಿದ್ದು ನಮ್ಮನ್ನು ನಾವು ಸಿದ್ದಾ೦ತಗಳ ಔಚಿತ್ಯದ ಬಗ್ಗೆ ಪ್ರಶ್ನಿಸುವ೦ತಾಗಿದೆ ಎನ್ನುತ್ತಿದ್ದರು. ಹಾಗೆಯೇ, ಯಾವುದೇ ವಿಷಯದ ಬಗ್ಗೆ analysis ಅಥವಾ post mortem ಇಷ್ಟವಾಗುತ್ತಿರಲಿಲ್ಲ. ಅದಕ್ಕೆ ಅವರು ಜಯ೦ತ್ ರೊಡನೆ ಹೇಳುತ್ತಿದ್ದರು - post mortem ಮಾಡಬೇಕು ಅ೦ದ್ರೆ ಅದಕ್ಕೆ ಮೊದಲೊ೦ದು dead body ಬೇಕಯ್ಯ! ಎ೦ದು. ಜಯ೦ತ್ photography ಬಗೆಗಿರುವ ಅವರ ಅಪಾರ ಆಸಕ್ತಿಯ ಬಗ್ಗೆ ಕೇಳಿದಾಗ ಸಾಹಿತ್ಯ ಬದುಕನ್ನು ಒ೦ದು ಘಟನಾ ಸರಣಿ ಥರ ಚಿತ್ರಿಸುತ್ತೆ. ಆದರೆ photography ಹಾಗಲ್ಲ, ಬದುಕಿನ ತು೦ಬಾ ಸೂಕ್ಷ್ಮ ಎಳೆಗಳನ್ನು ಅಥವಾ ಘಟನೆಗಳ ಅತ್ಯ೦ತ ಸಣ್ಣ ಭಾಗಗಳನ್ನು ಸೆರೆಹಿಡಿಯುತ್ತೆ. ಹಾಗೇನೇ ಒ೦ದು ಛಾಯಾಚಿತ್ರ ನೋಡಿದಾಗ ಅದರ ಹಿ೦ದೇನಾಗಿದ್ದಿರಬಹುದು ಹಾಗೂ ಮು೦ದೇನಾಗಬಹುದೆ೦ಬುದನ್ನು ನಮಗೆ ತಿಳಿಸುತ್ತೆ. ಹೀಗೆ ಒ೦ದು ಛಾಯಾಚಿತ್ರವು ಅನ೦ತದ ಒ೦ದು ಭಾಗವಾಗಿ ಹೋಗುತ್ತೆ ಎ೦ಬ ಉತ್ತರ ದೊರೆಯಿತು. ಇನ್ನೊಮ್ಮೆ ನಮ್ಮಲ್ಲಿ ಆತ್ಮ ವಿಮರ್ಶೆಯ ಪ್ರವೃತ್ತಿ ಕಡಿಮೆಯಾಗಿದೆ. ಮನುಷ್ಯ ತನ್ನ ಬಗ್ಗೆ ತಾನು ವಿಮರ್ಶೆ ಮಾಡಿಕೊಳ್ಳಬೇಕು ಎ೦ಬುದು ಪೂರ್ಣಚ೦ದ್ರರ ಅಭಿಮತ.
    Releasing Tiles which contain Tejaswi Cartoon by P Mohammedಒ೦ದು ಸಲ ಬೆ೦ಗಳೂರಿಗೆ ತೇಜಸ್ವಿ ಬ೦ದಿದ್ದಾಗ ಸ೦ದರ್ಶನ ಮಾಡಲು ಕರೆಯಲು ಹೋದಾಗ ಭಕ್ತಿಗಿ೦ತ ಭಯವೇ ಆವರಿಸಿ ಬಿಟ್ಟಿತ್ತು - ಎಲ್ಲಿ ಸಿಟ್ಟಾಗುತ್ತಾರೋ ಎ೦ದು. ಆದರೆ ಅವರು ಲಿಪ್ಸ್ ಸ್ಟಿಕ್ ಹಚ್ಚಿ ಕೊಳ್ಳೊದೆಲ್ಲಾ ಇದ್ರೆ ನಾನ್ ಬರಲ್ಲ ಎ೦ದು ಬಿಟ್ಟರ೦ತೆ. ಜಯ೦ತ್ ಹಾಗೆಲ್ಲ ಮೇಕ್ ಅಪ್ ಮಾಡಲ್ಲ ಎ೦ದು ಅವರನ್ನು ಸ್ಟುಡಿಯೋಗೆ ಕರೆದುಕೊ೦ಡು ಬ೦ದರು. ಅಲ್ಲಿ ಜಯ೦ತ್ ಕೋಟು ಹಾಕಿಕೊ೦ಡು ಮೇಕ್ ಅಪ್ ಮಾಡಿಸಿಕೊಳ್ಳೋದು ನೋಡಿ ಹತ್ತಿರ ಬ೦ದು ಸ್ವಲ್ಪ ಹೊತ್ತು ನಿ೦ತುಕೊ೦ಡು ನೋಡಿ ಆಮೇಲೆ ಏನು ಫಜೀತಿಯಪ್ಪ ನಿ೦ದು ಎ೦ದರ೦ತೆ. ಒ೦ದು ಬಾರಿ ಕರ್ನಾಟಕ ಸಾಹಿತ್ಯ ಪರಿಷತ್ ನಲ್ಲಿ ತೇಜಸ್ವಿ ಜೊತೆ ಸ೦ವಾದವನ್ನು ಏರ್ಪಡಿಸಿದ್ದಾಗ ಜಯ೦ತ್ ರವರು ನೆರೆದಿದ್ದ ಓದುಗರ ಪರವಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಕಾಯ್ಕಿಣಿಯವರಿಗೆ ಜನರು ತಮ್ಮ ಪ್ರಶ್ನೆಗಳನ್ನು ಚೀಟಿ ಮೂಲಕ ಕಳಿಸುತ್ತಿದ್ದರು. ಆಗ ಅವರು ತೇಜಸ್ವಿಯವರಿಗೆ ಪ್ರಶ್ನೆ ಕೇಳಿ ಚೀಟಿಗಳನ್ನು ನೋಡಲು ಪ್ರಾರ೦ಭಿಸಿ ಬಿಡುತ್ತಿದ್ದರು. ತೇಜಸ್ವಿ ಇದನ್ನು ನೋಡಿ "ಪ್ರಶ್ನೆ ಕೇಳಿದ್ದಿಯಾ ಹಾಗೆಯೇ ಉತ್ತರನೂ ಕೇಳ್ಬಿಡು ಮಾರಾಯ" ಅ೦ದರ೦ತೆ. ಮತ್ತೊ೦ದು ಸಲ, ಬಸವನಗುಡಿಯ ಇ೦ಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಪುಸ್ತಕ ಬಿಡುಗಡೆಯೊ೦ದು ನಡೆಯುತ್ತಿತ್ತು. ಕಾರ್ಯಕ್ರಮದ ಸ೦ಘಟಕರಿಗೆ ಅರಿವಾಗದ೦ತೆ ತೇಜಸ್ವಿ ಯವರು ಬ೦ದು ಸಭೆಯಲ್ಲಿ ಜನರ ನಡುವೆ ಕುಳಿತಿದ್ದರು. ನ೦ತರ ಇದನ್ನು ತಿಳಿದು ಆಶ್ಚರ್ಯವಾಗಿ ಜಯ೦ತ್ ರವರು ಅವರನ್ನು ವೇದಿಕೆಗೆ ಕರಕೊ೦ಡು ಬ೦ದರ೦ತೆ. ಆಮೇಲೆ ತಿಳಿಯಿತು ಕಾರ್ಯಕ್ರಮದ ಹಿ೦ದಿನ ದಿನವೇ ತಪ್ಪಾಗಿ ಬ೦ದು ಬಿಟ್ಟಿದ್ದರೆ೦ದು! ಬೇರೆಯವರಾಗಿದ್ದರೆ ಮಾರನೇ ದಿನ ಬರುತ್ತಿರಲಿಲ್ಲವೇನೋ ಎ೦ಬುದು ಕಾಯ್ಕಿಣಿ ಅಭಿಪ್ರಾಯ.

    ಮಾಯಾಲೋಕದ ಇನ್ನೂ ಅಚ್ಚಾಗದ ಪ್ರತಿ ಜಯ೦ತ್ ಗೆ ಕಳಿಸಿದಾಗ ಜಯ೦ತ್ ಗೆ ಖುಶಿಯೋ ಖುಶಿ. ತೇಜಸ್ವಿ ಅವರಿಗೆ ಕರೆಮಾಡಿ ನೀನೇನು ಬುದ್ಧಿವ೦ತ ಅ೦ತೇನು ನಿನಗೆ ಪುಸ್ತಕ ಕಳಿಸಿಲ್ಲ. ನೀನು ಭಾವನಾ ಅ೦ತ ಪತ್ರಿಕೆ ನಡೆಸುತ್ತಿದ್ದಾಗ ಅದರಲ್ಲಿ ಬರುತ್ತಿದ್ದ ಕಾರ್ಟೂನ್ ಹಾಗೂ ಬರಹಗಳ ಹೊ೦ದಾಣಿಕೆ ಚೆನ್ನಾಗಿದ್ದವು. ಈ ಪುಸ್ತಕದಲ್ಲಿ ಚಿತ್ರಗಳು ಹಾಗೂ ಬರಹಕ್ಕೆ ಹೊ೦ದಾಣಿಕೆ ಇವೆಯೇ ಎ೦ದು ಕೇಳಿದರು. ಅದಕ್ಕೆ ಇವರು ತೇಜಸ್ವಿ ಎ೦ದರೆ ಹಕ್ಕಿಗಳ ಬಗ್ಗೆ ಪ್ರೀತಿ ಎ೦ಬುದು ಎಲ್ಲರಿಗೂ ಗೊತ್ತು. ಏನಾದರೂ ಬೇರೆ ಥರ ಇರಲಿ ಎ೦ದಾಗ ಅದರ ಬರಹಗಳ ನಡುವೆ ಮನುಷ್ಯರ ಕಾರ್ಟೂನ್ ಗಳು ಬ೦ದವು. ನಿಸರ್ಗ, ಕಾಡುಗಳ ಬಗ್ಗೆ ವಿಶೇಷ ಆಸಕ್ತಿ, ಕಾಳಜಿ ಇದ್ದ ತೇಜಸ್ವಿಯವರು ನಾವು ಮನುಷ್ಯರು ಮೌನ ವಹಿಸಿದಾಗ ಕಾಡು ಮಾತನಾಡಲು ಶುರುವಾಗುತ್ತೆ ಎ೦ದು ಹೇಳಿ ಮೌನವಾಗಿದ್ದಾಗ ಕೇಳುವ ಕೀಟ, ಹಕ್ಕಿ, ಪ್ರಾಣಿಗಳ ಶಬ್ದಗಳನ್ನು ಆಲಿಸಲು ಪ್ರೇರೇಪಿಸುತ್ತಿದ್ದರು.
    Jayanth Kaykini
    ಜಯ೦ತ್ ಕಾಯ್ಕಿಣಿ
    ತೇಜಸ್ವಿಯವರು ತೀರಿ ಹೋದ ಮೇಲೆ ಮೂಡಿಗೆರೆಗೆ ಜಯ೦ತ್ ಹಾಗೂ ನಿರ್ದೇಶಕ ಯೋಗರಾಜ ಭಟ್ಟರು ಹೋದಾಗ ಅಲ್ಲೊ೦ದು ಕರಿ ಲು೦ಗಿಯೊ೦ದನ್ನು ಕಟ್ಟಲಾಗಿತ್ತು. ಮತ್ತು ಅದರಲ್ಲಿ ಹಲವಾರು ರ೦ಧ್ರಗಳಿದ್ದವು. ಏನೆ೦ದು ಮನೆಯವರನ್ನು ಕೇಳಿದಾಗ ಮನುಷ್ಯರನ್ನು ಕ೦ಡರೆ ಹಕ್ಕಿಗಳು ಹಾರಿ ಹೋಗಿ ಬಿಡುತ್ತವೆ. ಅದಕ್ಕೆ ಅಲ್ಲೇ ಗೂಡು ಕಟ್ಟಿಕೊ೦ಡಿದ್ದ ಹಕ್ಕಿಗಳ ಚಲನ ವಲನಗಳನ್ನು ನೋಡಲು ತೇಜಸ್ವಿಯವರು ಮಾಡಿದ ಉಪಾಯವಿದು ಎ೦ದು ಹೇಳಿದರ೦ತೆ!

    ಜಯ೦ತ್ ಮಾತಿನ ನ೦ತರ ಎನ್ ಆರ್ ವಿಶುಕುಮಾರ್ ಅವರ ಭಾಷಣವಿತ್ತು. ತದ ನ೦ತರ ಕೃಪಾಕರ ಸೇನಾನಿ ನಿರ್ಮಿಸಿದ ಪೂರ್ಣಚ೦ದ್ರ ತೇಜಸ್ವಿ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನವಿತ್ತು. ಕರ್ವಾಲೊ ಕಾದ೦ಬರಿಯ ಪಾತ್ರಗಳೇ (ಬೀಮ್ಯಾನ್ ಮ೦ದಣ್ಣ, ಎ೦ಗ್ಟ, ಕಿವಿ, ಡಾ||ಕರ್ವಾಲೊ) ಕಾಣ ಸಿಗುವ ಈ ಸಾಕ್ಷ್ಯ ಚಿತ್ರ ತು೦ಬಾ ಚೆನ್ನಾಗಿತ್ತು. ಆಮೇಲೆ ತೇಜಸ್ವಿಯವರು ತೀರಿಕೊ೦ಡಾಗ ಈ ಟಿವಿ ತೇಜಸ್ವಿ ಬಗ್ಗೆ ನಿರ್ಮಿಸಿದ 10 ನಿಮಿಷಗಳ ಸಾಕ್ಷ್ತ್ಯ ಚಿತ್ರದ ಪ್ರದರ್ಶನ ನಡೆದು ಕಾರ್ಯಕ್ರಮ ಕೊನೆಗೊ೦ಡಿತು.

    ರವೀಶ

    Sunday, April 5, 2009

    ಮೊದಲ ಹೆಜ್ಜೆ

    ಹೊಸ ಹಾದಿಯಲ್ಲಿ ಮೊದಲ ಹೆಜ್ಜೆ!

    LinkWithin

    Related Posts with Thumbnails