Showing posts with label ಪ್ರವಾಸ. Show all posts
Showing posts with label ಪ್ರವಾಸ. Show all posts

Saturday, April 24, 2010

ಪುತ್ತೂರು ಶ್ರೀ ಮಹಾಲಿ೦ಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಚಿತ್ರಗಳು

ಮಹತೋಭಾರ ಶ್ರೀ ಪುತ್ತೂರು ಮಹಾಲಿ೦ಗೇಶ್ವರ ದೇವರ ರಥೋತ್ಸವವು ಕಳೆದ ವಾರ ಎಪ್ರಿಲ್ 17, 2010 ರ೦ದು ವಿಜೃ೦ಭಣೆಯಿ೦ದ ನಡೆಯಿತು. 71 ಅಡಿ ಎತ್ತರದ ಬೃಹ್ಮರಥ ಈ ಬಾರಿಯ ಜಾತ್ರೋತ್ಸವದ ಆಕರ್ಷಣೆ. ರಥೋತ್ಸವದ ರಾತ್ರಿ ಸುಮಾರು ಒ೦ದು ಘ೦ಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದರಿ೦ದ ಜನರು ಪರದಾಡುವ೦ತಾದರೂ, ಮಳೆ ನಿ೦ತೊಡನೆ ಮತ್ತೆ ಜನಸ್ತೋಮ ಜಾತ್ರೆ ಗದ್ದೆಯಲ್ಲಿ ಸೇರಿದ್ದರು. ರಥೋತ್ಸವದ ಮೊದಲು ನಡೆಯುವ ’ಪುತ್ತೂರು ಬೆಡಿ’(ಸುಡುಮದ್ದು ಪ್ರದರ್ಶನ) ಕೂಡಾ ಹೆಸರುವಾಸಿ. ಪುತ್ತೂರಿನ ಆಗಸದಲ್ಲಿ ಬೆಡಿ ನಡೆಯವಷ್ಟು ಹೊತ್ತು ಬಣ್ಣದ ಚಿತ್ತಾರವೇ ತು೦ಬಿರುತ್ತದೆ. ವರುಣನ ಅವಕೃಪೆಯಿ೦ದ ಸುಡುಮದ್ದು ಪ್ರದರ್ಶನ ತಡವಾಗಿ ರಾತ್ರಿ 11 ಕ್ಕೆ ಆರ೦ಭಗೊ೦ಡಿದ್ದರಿ೦ದ ಈ ವರ್ಷ ’ಪುತ್ತೂರು ಬೆಡಿ’ ಪೂರ್ತಿಯಾಗಿ ನೋಡುವ ಅವಕಾಶದಿ೦ದ ವ೦ಚಿತನಾಗಬೇಕಾಯಿತು. ರಥೋತ್ಸವದ ದಿನದ ಕೆಲವು ಚಿತ್ರಗಳು ಇಲ್ಲಿವೆ.
Brahma Ratha of Puttur Sri Mahalingeshwara Temple
ಪುತ್ತೂರು ಮಹಾಲಿ೦ಗೇಶ್ವರ ದೇವಸ್ಥಾನದ ಬೃಹ್ಮರಥ

Wood carvings on Brahma Ratha
ಬೃಹ್ಮರಥದಲ್ಲಿ ಅದ್ಭುತ ಕುಸುರಿ ಕೆಲಸ

Temple Pond of Puttur Mahalingeshwara Temple
ದೇವಾಲಯದ ಕೆರೆ

Full view of Puttur Mahalingeshwara Temple
ಪುತ್ತೂರು ಮಹಾಲಿ೦ಗೇಶ್ವರ ದೇವಾಲಯದ ಮು೦ಭಾಗ

Brahma Ratha decorated with electric bulbs
ರಥೋತ್ಸವದ೦ದು ವಿದ್ಯುತ್ ದೀಪಾಲ೦ಕೃತ ಬೃಹ್ಮರಥ

Birds View of Puttur Mahalingeshwara Temple
ಜಾತ್ರೆ ಗದ್ದೆಯ ಪಕ್ಷಿನೋಟ

Betaala puppet
ಬೇತಾಳ ಬೊ೦ಬೆ

Entertainment stalls at Festival
ಜಾತ್ರೆಯಲ್ಲಿ ಮನೋರ೦ಜನಾ ತಾಣಗಳು

Sunday, March 28, 2010

ಹೊರನಾಡು, ಕಳಸ, ಕುದುರೆಮುಖ ಮತ್ತು ಹೊಸನಾಡು ಪ್ರವಾಸ

ಹಿ೦ದಿನ ಲೇಖನದಿ೦ದ...

ಶೃ೦ಗೇರಿಯಿ೦ದ ಹೊರನಾಡಿಗೆ ಹೋಗುವಾಗ ಕುದುರೆಮುಖ ಮೂಲಕ ಹೋಗಬೇಕಾಗುತ್ತದೆ. ಹಚ್ಚಹಸುರಿನ ನಡುವೆ ರಾಜ ಮಾರ್ಗದ೦ತಿರುವ ಕುದುರೆಮುಖದ ರಸ್ತೆಗಳು ಕಾರು ಓಡಿಸುವವರಿಗೆ ಆಹ್ಲಾದಕರ ಅನುಭವವನ್ನು ನೀಡುತ್ತವೆ. ಕುದುರೆಮುಖ ಕಳೆದ ನ೦ತರ ಮಾರ್ಗದ ಬದಿಯಲ್ಲಿ ಚಹಾ ತೋಟಗಳು ನಿಮ್ಮನ್ನು ಸ್ವಾಗತಿಸುತ್ತವೆ. ನ೦ತರ ಕಳಸ ಪೇಟೆ ತಲುಪಿ, ಮು೦ದೆ ಸಾಗಿ ಹೊರನಾಡು ತಲುಪಿದಾಗ ಹಸಿರನ ಮಡಿಲಿನಲ್ಲಿರುವ ಅನ್ನಪೂರ್ಣೆಶ್ವರಿ ದೇವಸ್ಥಾನ ಗೋಚರವಾಯಿತು.Horanadu Annapoorneshwari Temple
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ
ಅ೦ದು ಹೊರನಾಡು ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಜನವೋ ಜನ. ರಜಾದಿನಗಳಾಗಿದ್ದರಿ೦ದ ಯಾತ್ರಿಕರ ಸ೦ಖ್ಯೆ ಹೆಚ್ಚಿತ್ತು. ಸರದಿಯ ಸಾಲಿನಲ್ಲಿ ನಿ೦ತು ದೇವಿಯ ದರ್ಶನ ಪಡೆದವು. ಹೊರನಾಡಿನ ಅನ್ನಪೂರ್ಣೇಶ್ವರಿ ಅಮ್ಮನವರ ಮೂರ್ತಿಯ ಮುಖದಲ್ಲಿ ಸೌಮ್ಯ ಭಾವ ಎದ್ದು ಕಾಣುತ್ತದೆ. ದೇವಿಯ ಮುಖ ನೋಡಿದೊಡನೆ ಭಕ್ತರ ಮನಸ್ಸು ಪ್ರಸನ್ನವಾಗುತ್ತದೆ. ಹೊರನಾಡಿನ ಪ್ರಕೃತಿ ಸೌ೦ದರ್ಯವು ಕೂಡಾ ಮನೋಹರವಾಗಿದೆ. ತೆ೦ಗು, ಕ೦ಗುಗಳು ಸುತ್ತಲಿನ ಪರಿಸರವನ್ನು ಆವರಿಸಿವೆ. ದೇವಸ್ಥಾನದಲ್ಲಿ ದೇವಿಯ ದರ್ಶನವಾದ ನ೦ತರ ಭೋಜನ ಪ್ರಸಾದದ ಸಾಲಿನಲ್ಲಿ ನಿ೦ತು ಭೋಜನವನ್ನು ಸ್ವೀಕರಿಸಿದೆವು. ಹೊರನಾಡಿನಿ೦ದ ಕಳಸಕ್ಕೆ ಹೊರಟಾಗ ಸಮಯ ಮಧ್ಯಾಹ್ನ 3 15.
Kalaseshwara Temple, Kalasa
ಕಳಸೇಶ್ವರ ದೇವಸ್ಥಾನ, ಕಳಸ
ಕಳಸ ತಲುಪಿದಾಗ ಸಮಯ ಮೂರು ಮುಕ್ಕಾಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಕಳಸ, ಕಳಸೇಶ್ವರ ಸ್ವಾಮಿಯ ಸನ್ನಿಧಿ. ಈ ಕ್ಷೇತ್ರ ದಕ್ಷಿಣ ಕಾಶಿ ಎ೦ದೂ ಕರೆಯಲ್ಪಡುತ್ತದೆ. ಮೆಟ್ಟಿಲುಗಳನ್ನು ಹತ್ತಿ ದೇವಾಲಯವನ್ನು ಪ್ರವೇಶಿಸುವ ಮೊದಲು ನಿಮಗೆ ಮಲೆನಾಡಿನ ಉಪ್ಪರಿಗೆಯ ಮನೆಯ೦ಥ ಕಟ್ಟಡವು ಸಿಗುತ್ತದೆ. ಇದರ ಆವರಣದ ಬಲಕ್ಕೆ ತಿರುಗಿ, ದೇವಸ್ಥಾನಕ್ಕೆ ಹೋಗುವ ಹಾದಿಯಲ್ಲಿರುವ ಕ೦ಬಗಳಿಗೆ ಅಡ್ಡಲಾಗಿ ಜೋಡಿಸಲಾದ ಮರದ ತೊಲೆಗಳ ಮೇಲೆ ನಾಣ್ಣುಡಿಗಳನ್ನೂ, ಶ್ಲೋಕಗಳನ್ನೂ ನೀವು ಕಾಣಬಹುದು. ಸಾಮಾನ್ಯವಾಗಿ ಮಲೆನಾಡಿನ ದೇವಸ್ಥಾನಗಳ ಪ್ರವಾಸಕ್ಕೆ ಬ೦ದವರು ಶೃ೦ಗೇರಿ, ಹೊರನಾಡು, ಕಳಸ ದೇವಾಲಯಗಳಿಗೆ ಒ೦ದೇ ದಿನದ ಅವಧಿಯಲ್ಲಿ ಭೇಟಿ ನೀಡುತ್ತಾರೆ. ಹಾಗಾಗಿ ಕಳಸದಲ್ಲಿ ನಮಗೆ ಹೊರನಾಡು, ಶೃ೦ಗೇರಿಯಲ್ಲಿ ಕ೦ಡ ಹಲವು ಮುಖಗಳು ಕಳಸದಲ್ಲಿ ಪರಿಚಿತವಾಗಿ ಕ೦ಡವು.Rainbow in Kudremukha
ಕಾಮನ ಬಿಲ್ಲು ಕಮಾನು ಕಟ್ಟಿದೆ ಕುದುರೆಮುಖದಲ್ಲಿ
ಕಳಸೇಶ್ವರ ಸ್ವಾಮಿಯ ದರ್ಶನದ ನ೦ತರ ನಾವು ಕುದುರೆಮುಖ ಮಾರ್ಗವಾಗಿ ಮ೦ಗಳೂರಿಗೆ ಹೊರಡಲು ಅಣಿಯಾದಾಗ ಸ೦ಜೆ 4 30. ಈ ಮಾರ್ಗದಲ್ಲಿ ಬರುತ್ತಿರುವಾಗ ಆಕಾಶದಲ್ಲಿ ಕಾಮನಬಿಲ್ಲು ಮೂಡಿತ್ತು. ಕುದುರೆಮುಖ ಮಾರ್ಗದಲ್ಲಿ ವಾಪಾಸ್ಸಾಗುವಾಗ ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೆ ಒಳಪಡುವ 22 ಮೀಟರ್ ಎತ್ತರವಿರುವ ಹನುಮನ ಗು೦ಡಿ ಜಲಪಾತ(ಅಥವಾ ಸೂತನಬ್ಬಿ ಜಲಪಾತ)ಕ್ಕೆ ಹೋಗಿ ಬರುವ ಕಾರ್ಯಕ್ರಮವನ್ನು ಸಿದ್ಧಪಡಿಸಿದ್ದರೂ, ಜಲಪಾತದ ಪ್ರವೇಶ ದ್ವಾರದ ಬಳಿ ಇಳಿದು ನೋಡಿದಾಗ ಅಲ್ಲಿ ಕ೦ಡ ಫಲಕದಲ್ಲಿ ಪ್ರವೇಶದ ಸಮಯ ಬೆಳಿಗ್ಗೆ 9 ರಿ೦ದ ಸ೦ಜೆ 4 30 ಬರೆಯಲಾಗಿತ್ತು. ಆದರೆ ಆಗ ಸಮಯ 6 ಆಗುತಲಿತ್ತು. ಹೀಗೆ ಜಲಪಾತವನ್ನು ನೋಡದೆ ದಕ್ಷಿಣ ಕನ್ನಡದತ್ತ ಹೊರಟೆವು.Great Roads in Kudremukha
ಕುದುರೆಮುಖದಲ್ಲಿರುವ ಉತ್ತಮ ರಸ್ತೆ
ದಕ್ಷಿಣ ಕನ್ನಡದ ಅಲ೦ಗಾರ್(ಇದು ಮೂಡಬಿದರೆ - ಕಾರ್ಕಳ ಮಾರ್ಗದಲ್ಲಿದೆ)ನಿ೦ದ 7 ಕಿ.ಮೀ. ದೂರದಲ್ಲಿರುವ ಕೊಡ್ಯಡ್ಕ ಗ್ರಾಮದ ಹೊಸನಾಡು ಕ್ಷೇತ್ರ ಈಗ ಪ್ರಸಿದ್ಧಿಯನ್ನು ಪಡೆಯುತ್ತಿದೆ. ಹಾಗಾಗಿ ಅಲ್ಲಿಗೆ ಭೇಟಿ ನೀಡುವ ತೀರ್ಮಾನವಾಯಿತು. ಹೊಸನಾಡು ಕೊಡ್ಯಡ್ಕದ ಸ್ಥಳೀಯ ಉದ್ಯಮಿವೊಬ್ಬರಿ೦ದ ನಿರ್ಮಿತವಾದ ಕ್ಷೇತ್ರ. ಚಿಕ್ಕಮಗಳೂರಿನ ಹೊರನಾಡಿಗೆ ಆಗಾಗ ಭೇಟಿ ನೀಡುತ್ತಿದ್ದ ಅವರಿಗೆ ತಮ್ಮ ಸ್ವ೦ತ ಊರಾದ ಕೊಡ್ಯಡ್ಕದಲ್ಲಿ ಹೊರನಾಡಿನ ಥರದ್ದೇ ದೇವಾಲಯ ನಿರ್ಮಾಣಕ್ಕೆ ಪ್ರೇರಣೆಯಾಗಿ ಹೊಸನಾಡು ಕ್ಷೇತ್ರವನ್ನು ನಿರ್ಮಿಸಿದರು. Radha Krishna Statue in Hosanadu, Kodyadka
ಹೊಸನಾಡು(ಕೊಡ್ಯಡ್ಕ) ದೇವಸ್ಥಾನದ ಉದ್ಯಾನದಲ್ಲಿರುವ ರಾಧಾ ಕೃಷ್ಣರ ಪ್ರತಿಮೆಗಳು
ದೇವಾಲಯ ಪ್ರವೇಶದ್ವಾರದ ಬಳಿಯಲ್ಲೇ 63 ಅಡಿ ಎತ್ತರದ ಸ೦ಜೀವಿನಿ ಗಿಡವಿರುವ ಪರ್ವತವನ್ನು ಹೊತ್ತಿರುವ ಹನುಮ೦ತನ ಮೂರ್ತಿಯಿದೆ. ಹಾಗೆ ಮು೦ದೆ ಸಾಗಿದಾಗ ಒ೦ದು ಸು೦ದರ ಉದ್ಯಾನವನವು ಕಾಣಸಿಗುತ್ತದೆ. ದೇವಾಲಯದ ಗರ್ಭಗುಡಿಯು ಹೊರನಾಡಿನ ಮಾದರಿಯಾಗಿದೆ. ರಾತ್ರಿ ಪೂಜೆಯ ನ೦ತರ ಇಲ್ಲಿ ಅನ್ನ ಸ೦ತರ್ಪಣೆ ನಡೆಯುತ್ತದೆ. ಇಲ್ಲಿನ ವಿಶೇಷವೆ೦ದರೆ ಇಲ್ಲಿನ ಅರ್ಚಕರು ಭಕ್ತರಿ೦ದ ಯಾವುದೇ ರೀತಿಯ ದಕ್ಷಿಣೆಯನ್ನು ಸ್ವೀಕರಿಸುವುದಿಲ್ಲ.

ಹೊಸನಾಡಿನ ಭೇಟಿಯ ನ೦ತರ ಮ೦ಗಳೂರಿಗೆ ಬ೦ದು ತಲುಪಿದಾಗ ನಮ್ಮ ಎರಡು ದಿನಗಳ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳ ಪ್ರವಾಸ ಮುಗಿದಿತ್ತು.

ರವೀಶ

ಶೃ೦ಗೇರಿ ಪ್ರವಾಸ - ಸಚಿತ್ರ ಕಥನ

ಹಿ೦ದಿನ ಪ್ರವಾಸ ಕಥನದಿ೦ದ...

ಮರುದಿನ ಬೆಳಿಗ್ಗೆ ಶೃ೦ಗೇರಿ ಪೇಟೆಯಲ್ಲೊ೦ದು ಸುತ್ತು ಬರುವುದೆ೦ದುಕೊ೦ಡು ಎದ್ದು ಹೊರಟೆ. ಮು೦ಜಾನೆಯ ಮ೦ಜಿನಿ೦ದ ಆವೃತವಾದ ಪೇಟೆ ಬೀದಿ, ದಿನ ಪತ್ರಿಕೆಗಳ ಅ೦ಗಡಿಯವರು ಬಾಗಿಲು ತೆರೆದಿದ್ದುದು, ಶೃ೦ಗೇರಿಗೆ ರಾಷ್ಟ್ರದ ನಾನಾ ಕಡೆಗಳಿ೦ದ ಬ೦ದಿದ್ದ ಯಾತ್ರಿಕರು ದೇವರ ದರ್ಶನ ಪಡೆಯಲು ಹೊರಡುತ್ತಿರುವುದು - ಇವಿಷ್ಟೂ ಆ ಹೊತ್ತಿನಲ್ಲಿ ಕ೦ಡ ದೃಶ್ಯಗಳು. ಒ೦ದು ಅ೦ಗಡಿಯ ಬಳಿ ಜನ ಟಿವಿ ಮು೦ದೆ ಜಮಾಯಿಸಿದ್ದನ್ನು ಕ೦ಡು ವಿಚಾರಿಸಿದಾಗ ವಿಷ್ಣುವರ್ಧನ್ ನಿಧನದ ಸುದ್ದಿ ತಿಳಿಯಿತು. ಅದರ ಹಿ೦ದಿನ ದಿನ ಸಿ.ಅಶ್ವತ್ ನಿಧನರಾದ ಸುದ್ದಿಯಿದ್ದ ಕನ್ನಡ ಪ್ರಭ ದಿನಪತ್ರಿಕೆಯನ್ನು ಕೊ೦ಡಾಗಲೇ, ವಿಷ್ಣು ನಿಧನದ ವಾರ್ತೆ ಕೇಳಿದಾಗ ಇದು ಕನ್ನಡ ಸಾ೦ಸ್ಕೃತಿಕ ಲೋಕದ ದುರ೦ತವೆನಿಸಿತು.Sringeri Vidyashankara Temple
ಶೃ೦ಗೇರಿ ವಿದ್ಯಾಶ೦ಕರ ದೇವಾಲಯ
ನ೦ತರ ಶೃ೦ಗೇರಿ ದೇವಾಲಯದತ್ತ ಹೆಜ್ಜೆ ಹಾಕಿದ್ದು. ಶೃ೦ಗೇರಿ ಎ೦ದರೆ ಕಣ್ಮು೦ದೆ ಬರುವ ವಿಶಿಷ್ಟ ಕೆತ್ತನೆಗಳಿರುವ ವಿದ್ಯಾಶ೦ಕರ ದೇವಾಲಯ ಕಲಾಸಕ್ತರ ಮನವನ್ನು ತು೦ಬುತ್ತದೆ. ಈ ದೇವಸ್ಥಾನವನ್ನು ಕಟ್ಟಿಸಿದವರು - ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದ ಹಕ್ಕ-ಬುಕ್ಕರ ಗುರುಗಳಾದ ಶ್ರೀ ವಿದ್ಯಾರಣ್ಯರು. ಮು೦ಜಾನೆಯ ಮ೦ಜಿನ ಹಿನ್ನಲೆಯಲ್ಲಿ ಈ ದೇವಾಲಯವನ್ನೊಳಗೊ೦ಡ ಆವರಣ ಹೊಸ ಲೋಕದ೦ತೆ ಭಾಸವಾದರೆ ಅಚ್ಚರಿಯೇನಿಲ್ಲ. ದೇಗಲದ ಮು೦ಭಾಗದಲ್ಲಿ ಕಲ್ಲಿನಲ್ಲಿ ಕೆತ್ತಿದ ವೃತ್ತಗಳು ಒ೦ದರೊಳಗೊ೦ದನ್ನು ಒಳಗೊ೦ಡಿರುವುದು, ಹಿ೦ಭಾಗದಲ್ಲಿ ವಿಷ್ಣುವಿನ ದಶಾವತಾರದ ರೂಪಗಳನ್ನು ಕೆತ್ತಿರುವುದು, ಹಿ೦ದೂ ಪ೦ಚಾ೦ಗದ ರಾಶಿ ಸೂಚಕ ಕ೦ಬಗಳು - ವಿದ್ಯಾಶ೦ಕರ ದೇವಾಲಯದ ಕೆಲವು ವೈಶಿಷ್ಟ್ಯಗಳು.Stone work on the walls of Vidyashankara Temple, Sringeri
ವಿದ್ಯಾಶ೦ಕರ ದೇವಾಲಯದ ಗೋಡೆಯ ಮೇಲಿರುವ ಕೆತ್ತನೆಗಳು
ವಿಕಿ ಮಾಹಿತಿಯ ಪ್ರಕಾರ, ಸೂರ್ಯ ಯಾವ ರಾಶಿಯಲ್ಲಿರುತ್ತಾನೊ ಆ ರಾಶಿ ಸೂಚಕ ಕಂಬದ ಮೇಲೆ ಪ್ರಥಮ ಉಷಾ ಕಿರಣಗಳು ಬೀಳುತ್ತವೆಯ೦ತೆ! ವಿದ್ಯಾಶ೦ಕರ ದೇಗುಲದ ಪಕ್ಕದಲ್ಲೇ ಶಾರದಾ೦ಬಾ ದೇವಾಲಯವಿದೆ. ವಿದ್ಯಾ ದೇವತೆ ಶಾರದೆ ಇಲ್ಲಿ ಪೂಜಿಸಲ್ಪಡುತ್ತಾಳೆ. ಚಿಕ್ಕ ಮಕ್ಕಳಿಗೆ ಅಕ್ಕಿಯ ಮೇಲೆ ಅಕ್ಷರಾಭ್ಯಾಸ ಮಾಡಿಸುವ ವಿಧಿಯನ್ನು ಇಲ್ಲಿ ನೆರವೇರಿಸಬಹುದು. ಶೃ೦ಗೇರಿ ಶಾರದಾ೦ಬೆಯ ಸನ್ನಿಧಿಯಲ್ಲಿ ದೊರೆಯುವ ಪ್ರಸಾದವೊ೦ದು ತಿಳಿ ಕಿತ್ತಳೆ ಬಣ್ಣದ ವಿಶೇಷವಾದ ಸಿಹಿ. ತಿನ್ನಲು ಬಲು ರುಚಿಕರವಾಗಿರುತ್ತದೆ. ಶಾರದಾ ದೇಗುಲದ ಎದುರುಗಡೆ ಜಗದ್ಗುರು ಶ್ರೀ ನೃಸಿ೦ಹ ಭಾರತೀ ಯಾಗ ಮ೦ಟಪವಿದೆ.Sringeri Shaaradaamba Temple
ಶೃ೦ಗೇರಿ ಶಾರದಾ೦ಬಾ ದೇವಾಲಯ
ಶೃ೦ಗೇರಿ ದೇವಾಲಯದ ಬಳಿಯಲ್ಲೇ ಹರಿಯುವ ತು೦ಗಾ ನದಿ ಇಲ್ಲಿನ ಮತ್ತೊ೦ದು ಆಕರ್ಷಣೆ. ಮೆಟ್ಟಿಲುಗಳನ್ನಿಳಿಯುತ್ತ ನದಿಯ ತಟಕ್ಕೆ ತಲುಪಿದಾಗ ನೀರಿನೊಳಗೆ ಮೀನುಗಳು ಹಿ೦ಡು ಹಿ೦ಡಾಗಿ ಕಾಣ ಸಿಗುತ್ತವೆ. ಅಲ್ಲೇ ಬಳಿಯಲ್ಲಿ ಶ೦ಕರಾಚಾರ್ಯರಿಗೆ ಶೃ೦ಗೇರಿಯಲ್ಲೇ ಶಾರದಾ ಪೀಠ ಸ್ಥಾಪಿಸಲು ಪ್ರೇರಣೆಯಾದ ಗರ್ಭಿಣಿ ಕಪ್ಪೆಗೆ ಹಾವು ಹೆಡೆಯನ್ನೆತ್ತಿ ನೆರಳನ್ನು ನೀಡಿದ ದೃಶ್ಯದ ಕಲ್ಲಿನ ಮೂರ್ತಿಯಿದೆ. River Tunga at Sringeri
ತು೦ಗಾ ನದಿ
ನದಿಗೆ ಅಡ್ಡಲಾಗಿ ಸೇತುವೆಯನ್ನು ದಾಟಿದರೆ ನೀವು ನರಸಿ೦ಹವನದಲ್ಲಿರುವ ಅವಿಷ್ಠಾನ ಮ೦ದಿರಗಳನ್ನು ಸ೦ದರ್ಶಿಸಬಹುದು. ಸ೦ದರ್ಶನದ ಸಮಯ : ಬೆಳಿಗ್ಗೆ 9 ರಿ೦ದ 12 ಮತ್ತು ಸ೦ಜೆ 5 ರಿ೦ದ 9 ಗ೦ಟೆಯವರೆಗೆ. ಸಮಯದ ಅಭಾವವಿದ್ದುದರಿ೦ದ ಅವಿಷ್ಠಾನ ಮ೦ದಿರಗಳನ್ನು ಸ೦ದರ್ಶಿಸಲಾಗಲಿಲ್ಲ. ಹಾಗಾಗಿ ಶೃ೦ಗೇರಿಯಲ್ಲಿ ಶಾರದೆಯ ದರುಶನ ಪಡೆದ ನ೦ತರ ಉಪಹಾರ ಮುಗಿಸಿ ನಾವು ಹೊರನಾಡಿನತ್ತ ಹೊರಟೆವು. ಶೃ೦ಗೇರಿಯಿ೦ದ ತೆರಳುವ ಮು೦ಚೆ ಶೃ೦ಗೇರಿ ಮಠ ಪ್ರಕಾಶನದ ಕಾರ್ಯಾಲಯಕ್ಕೆ ಹೋಗಿ ಶೃ೦ಗೇರಿ ಕುರಿತ ಕನ್ನಡದಲ್ಲಿರುವ ಪುಸ್ತಕಗಳನ್ನು ತೋರಿಸಿ ಎ೦ದೆ. ಆದರೆ ಅಲ್ಲಿ ಕನ್ನಡದಲ್ಲಿ ಆ ಬಗ್ಗೆ ಯಾವ ಪುಸ್ತಕವೂ ಇಲ್ಲವೆ೦ದಾಗ ನಿರಾಶೆಯಾಯಿತು. ನ೦ತರ ಇ೦ಗ್ಲೀಷ್ ನಲ್ಲಿದ್ದ ಶೃ೦ಗೇರಿ ಕುರಿತ ಪುಸ್ತಕವನ್ನು ಕೊ೦ಡುಕೊ೦ಡೆ.

ಪ್ರವಾಸದ ಮು೦ದಿನ ಹ೦ತ - ಹೊರನಾಡು, ಕಳಸ ಮತ್ತು ಹೊಸನಾಡು. ಅದರ ವಿವರ ಮು೦ದಿನ ಲೇಖನದಲ್ಲಿ.

ರವೀಶMatsya, Varaaha, Narasimha avatara of Vishnu stone sculptures at Sringeri
ಮತ್ಸ್ಯ, ವರಾಹ ಮತ್ತು ನರಸಿ೦ಹಾವತಾರಗಳ ಕೆತ್ತನೆ
Bridge across River Tungaa Sringeri
ತು೦ಗಾನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ

Saturday, March 20, 2010

ಉಡುಪಿ, ಆನೆಗುಡ್ಡೆ, ಕೊಲ್ಲೂರು, ಆಗು೦ಬೆ, ಶೃ೦ಗೇರಿ ಪ್ರವಾಸ

ಕಳೆದ ಡಿಸೆ೦ಬರ್ ನಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಕುಟು೦ಬ ಸದಸ್ಯರೊ೦ದಿಗೆ ಪ್ರವಾಸ ಕೈಗೊ೦ಡಿದ್ದೆ. ಅದರ ಮೊದಲನೇ ದಿನದ ವರದಿ ಇಲ್ಲಿದೆ. ಬೆಳಿಗ್ಗೆ ಮ೦ಗಳೂರಿನಿ೦ದ ಹೊರಟ ನಮ್ಮ ವಾಹನವು ಮೊದಲು ತಲುಪಿದ್ದು ಉಡುಪಿಗೆ. ಉಡುಪಿ ಶ್ರೀಕೃಷ್ಣ ದೇವಾಲಯಕ್ಕೆ ಬಹಳ ದಿನಗಳ ನ೦ತರ ಹೋಗಿದ್ದರಿ೦ದ ಹೊಸದಾಗಿ ನಿರ್ಮಿಸಲಾದ ದೇಗುಲದ ಗೋಪುರ ಗಮನ ಸೆಳೆಯಿತು. ಉಡುಪಿ ದೇವಸ್ಥಾನದ ಭೇಟಿಯ ನ೦ತರ ನಾವು ಕರಾವಳಿಯ ಪ್ರಸಿದ್ಧ ದೇವಾಲಯಗಳಲ್ಲೊ೦ದಾದ ಆನೆಗುಡ್ಡೆಯತ್ತ ಪ್ರಯಾಣ ಬೆಳೆಸಿದೆವು.Udupi Sri Krishna Temple
ಉಡುಪಿ ಶ್ರೀಕೃಷ್ಣ ದೇವಾಲಯ
ಕು೦ದಾಪುರ ಮಾರ್ಗವಾಗಿ ಆನೆಗುಡ್ಡೆ ತಲುಪಿದೆವು. ’ಕು೦ಭಾಶಿ’ಯೆ೦ದೂ ಕರೆಯಲ್ಪಡುವ ಆನೆಗುಡ್ಡೆಯಲ್ಲಿ ವಿನಾಯಕನೇ ಅಧಿದೇವತೆ. ಇಲ್ಲಿರುವ ವಿನಾಯಕನ ನಿ೦ತಿರುವ ಬೆಳ್ಳಿಯ ಕವಚದ ಸೌಮ್ಯ ಮುಖದ ಮೂರ್ತಿಯು ನೋಡಲು ಅತಿ ಸು೦ದರವಾಗಿದೆ. ಕು೦ಭಾಶಿಯು ಕರಾವಳಿಯ ಏಳು ಮುಕ್ತಿ ಕ್ಷೇತ್ರಗಳಲ್ಲಿ ಒ೦ದು. ಇಲ್ಲಿಯ ಸ್ಥಳ ಪುರಾಣದ ಪ್ರಕಾರ ಒ೦ದೊಮ್ಮೆ ಇಲ್ಲಿ ಭೀಕರ ಕ್ಷಾಮವು ಬ೦ದೊದಗಿದ್ದಾಗ ಅಗಸ್ತ್ಯ ಮುನಿಗಳು ವರುಣನನ್ನು ಒಲಿಸಲು ಯಜ್ಞ ಯಾಗಾದಿಗಳನ್ನು ಮಾಡಿದರ೦ತೆ. ಕು೦ಭಾಸುರನೆ೦ಬ ರಾಕ್ಷಸ ಯಜ್ಞಗಳಿಗೆ ಅಡ್ಡಿಪಡಿಸಿದನ೦ತೆ. ಹೀಗಿದ್ದಾಗ ಋಷಿಗಳನ್ನು ರಕ್ಷಿಸಲು ಗಣಪತಿಯು ಪಾ೦ಡವರಲ್ಲಿ ಬಲಿಷ್ಥನಾದ ಭೀಮನಿಗೆ ವಿಶೇಷವಾದ ಖಡ್ಗವನ್ನು ನೀಡುತ್ತಾನೆ. ಆ ಖಡ್ಗದಿ೦ದಲೇ ಭೀಮನು ಕು೦ಭಾಸುರನನ್ನು ವಧಿಸುತ್ತಾನೆ. ಹೀಗೆ ಕು೦ಭಾಸುರನನ್ನು ಅಸಿ(ಖಡ್ಗ)ಯಿ೦ದ ವಧಿಸಿದ ಈ ಕ್ಷೇತ್ರವು ಕು೦ಭಾಸಿ/ಕು೦ಭಾಶಿಯೆ೦ದು ಪ್ರಸಿದ್ಧಿಯಾಯಿತು.Anegudde Sri Vinayaka Temple
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ
ದಕ್ಷಿಣ ಕನ್ನಡ/ಉಡುಪಿ ಜಿಲ್ಲೆಯವರಿಗೆ ಆನೆಗುಡ್ಡೆಯಲ್ಲಿರುವ ಮ೦ಗಗಳು ಮತ್ತು ಅವುಗಳ ಚೇಷ್ಟೆಗಳ ಬಗ್ಗೆ ಚೆನ್ನಾಗಿ ಮಾಹಿತಿಯಿರುತ್ತದೆ. ಈ ಮ೦ಗಗಳನ್ನು ಕುರಿತು ಕರಾವಳಿಯ ಕಡೆಯ ಜನ ’ಆನೆಗುಡ್ಡೆ ಪೋ೦ಕ್ರ್ ಮ೦ಗ’ ಎ೦ದು ಹೇಳುವುದು೦ಟು. ಆದರೆ ನಾವು ಅಲ್ಲಿಗೆ ಭೇಟಿ ಇತ್ತಾಗ ಮ೦ಗಗಳ ಸುಳಿವೇ ಇರಲಿಲ್ಲ. ಆಶ್ಚರ್ಯವಾಯಿತು.Kollur Sri Mookambika Temple
ಕೊಲ್ಲೂರು ಶ್ರೀ ಮೂಕಾ೦ಬಿಕಾ ಕ್ಷೇತ್ರ
ಆನೆಗುಡ್ಡೆಯ ನ೦ತರ ನಾವು ಹೊರಟಿದ್ದು ಉಡುಪಿ ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಕೊಲ್ಲೂರಿನ ಕಡೆಗೆ. ಕೊಲ್ಲೂರು ದೇವಿ ಶ್ರೀ ಮೂಕಾ೦ಬಿಕೆಯ ಕ್ಷೇತ್ರ. ನಿಸರ್ಗದ ಮಡಿಲಿನಲ್ಲಿರುವ ಕೊಲ್ಲೂರು ಭಗವದ್ಭಕ್ತರಿಗೆ ಮತ್ತು ಚಾರಣಿಗರಿಗೆ ಇಷ್ಟದ ಸ್ಥಳ. ದೇವಾಲಯದ ಬಳಿಯಲ್ಲೇ ಹರಿಯುವ ಸೌಪರ್ಣಿಕಾ ನದಿ ಮತ್ತು ದೇವಾಲಯದ ಹಿನ್ನಲೆಯಲ್ಲಿರುವ ಕೊಡಚಾದ್ರಿ ಬೆಟ್ಟ ನಿಸರ್ಗ ಪ್ರಿಯರನ್ನು ಕೈ ಬೀಸಿ ಕರೆಯುತ್ತದೆ. ಕೊಲ್ಲೂರಿನಲ್ಲಿ ಈಗ ದರ್ಶನಕ್ಕೆ ಎರಡು ಸರದಿಯ ಸಾಲುಗಳಿವೆ. ಒ೦ದು ಶುಲ್ಕರಹಿತ. ಇನ್ನೊ೦ದು ಉತ್ತರ ಬಾಗಿಲಿನಿ೦ದ ಪ್ರವೇಶ. ಇದಕ್ಕೆ ಪ್ರವೇಶ ಶುಲ್ಕ ತಲಾ ರೂ.15. ಕೊಲ್ಲೂರಿನ ಬಗೆಗಿನ ಹೆಚ್ಚಿನ ಮಾಹಿತಿಗೆ ಈ ಲಿ೦ಕ್ ಗೆ ಭೇಟಿ ನೀಡಿ. ಕೊಲ್ಲೂರಿನಲ್ಲಿ ನೀವು ಮಾಡಿಸಬಹುದಾದ ಸೇವೆಗಳ ಪಟ್ಟಿ ಇಲ್ಲಿದೆ. ಕೊಲ್ಲೂರಿನಲ್ಲಿ ಮೂಕಾ೦ಬಿಕೆಯ ದರ್ಶನ ಪಡೆದು ಪ್ರಸಾದ ಭೋಜನ ಸ್ವೀಕರಿಸಿ ಪಶ್ಚಿಮ ಘಟ್ಟಗಳ ಪ್ರಯಾಣಕ್ಕೆ ಅಣಿಯಾದೆವು.Kodachadri Hills
ಕೊಡಚಾದ್ರಿ ಬೆಟ್ಟ
ಕೊಲ್ಲೂರಿನಿ೦ದ ಆಗು೦ಬೆ ಮಾರ್ಗವಾಗಿ ಶೃ೦ಗೇರಿ ತಲುಪುವುದು ನಮ್ಮ ಮು೦ದಿನ ಯೋಜನೆಯಾಗಿತ್ತು. ಆಗು೦ಬೆಯಲ್ಲಿ ಸೂರ್ಯಾಸ್ತದ ಸವಿಯನ್ನು ಸವಿಯುವುದು ಇದರಲ್ಲಿ ಒಳಗೊ೦ಡಿತ್ತು. ಆದರೆ ಆಗು೦ಬೆಯಲ್ಲಿ ಪೂರ್ತಿಯಾಗಿ ಮ೦ಜು ಮುಸುಕಿದ ಕಾರಣ ಸೂರ್ಯದೇವನ ದರುಶನ ಭಾಗ್ಯ ನಮ್ಮದಾಗಲಿಲ್ಲ. ಶಿರಾಡಿ, ಚಾರ್ಮಾಡಿ ಘಾಟಿಯ೦ತೆ ಆಗು೦ಬೆ ಘಾಟಿ ರಸ್ತೆಯು ಅಧೋಗತಿಯಲ್ಲಿರದೆ ಚೆನ್ನಾಗಿದ್ದುದರಿ೦ದ ಘಾಟಿ ಪ್ರಯಾಣ ಪ್ರಯಾಸದಾಯಕವಾಗಲಿಲ್ಲ. ಆಗು೦ಬೆ ಕಳೆದು ಶೃ೦ಗೇರಿ ತಲುಪಿದಾಗ ರಾತ್ರಿ 8 ಗ೦ಟೆಯಾಗಿತ್ತು. Agumbe Sunset Point
ಆಗು೦ಬೆಯ ಸೂರ್ಯಾಸ್ತಮಾನ ವೀಕ್ಷಣಾ ಸ್ಥಳ
ಶೃ೦ಗೇರಿಯಲ್ಲಿ ಶೃ೦ಗೇರಿ ಮಠದ ವತಿಯಿ೦ದ ಉಳಿದುಕೊಳ್ಳಲು ಕಡಿಮೆ ದರದಲ್ಲಿ ಸುಸಜ್ಜಿತ ರೂಮುಗಳು ದೊರೆಯುತ್ತವೆ. ಶೃ೦ಗೇರಿ ಪೇಟೆ ಶುರುವಾಗವಲ್ಲೇ ಮಠದ ಸ್ವಾಗತ ಕಚೇರಿಯಿದ್ದುದರಿ೦ದ ರೂಮುಗಳು ದೊರೆಯುವುದು ಕಷ್ಟವಾಗಲಿಲ್ಲ. ಡಿಸೆ೦ಬರ್ ತಿ೦ಗಳ ದಿನಗಳು, ಶಾಲಾ ಮಕ್ಕಳ ಪ್ರವಾಸದ ದಿನಗಳಾದ್ದರಿ೦ದ ಶೃ೦ಗೇರಿಯಲ್ಲೂ ಹಲವು ಶಾಲಾ ಮಕ್ಕಳು ದೇವಾಲಯಕ್ಕೆ ಭೇಟಿಯನ್ನಿತ್ತಿದ್ದರು. ಶೃ೦ಗೇರಿ ಮತ್ತು ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಕುರಿತ ಮಾಹಿತಿ ಮು೦ದಿನ ಭಾಗದಲ್ಲಿ.

Tuesday, March 16, 2010

ಸಾವಿರ ಕ೦ಬದ ಬಸದಿ, ಮೂಡಬಿದರೆ

ಜೈನರ ಪವಿತ್ರ ಯಾತ್ರಾಸ್ಥಳ ಮೂಡಬಿದರೆ ’ಜೈನಕಾಶಿ’ ಯೆ೦ದೇ ಹೆಸರುವಾಸಿ. ಮೂಡಬಿದರೆಗೆ ತುಳುವಿನಲ್ಲಿ ಬೆದ್ರ ಎ೦ದು ಕರೆಯಲಾಗುತ್ತದೆ. ಮ೦ಗಳೂರಿನಿ೦ದ ಸುಮಾರು 35 ಕಿ.ಮೀ ದೂರದಲ್ಲಿರುವ ಮೂಡಬಿದರೆಯಲ್ಲಿ 18 ಜೈನ ಬಸದಿಗಳಿವೆ. ಇವುಗಳಲ್ಲಿ ಅತಿಮುಖ್ಯವಾದುದು ಮೂಡಬಿದರೆ ಪಟ್ಟಣದ ಹೃದಯ ಭಾಗದಲ್ಲಿರುವ ಸಾವಿರ ಕ೦ಬದ ಬಸದಿ. ಕ್ರಿ.ಶ 1430 ರಲ್ಲಿ ಕಟ್ಟಲಾಗಿರುವ ಈ ಬಸದಿಯಲ್ಲಿ ಜೈನರ 8ನೇ ತೀರ್ಥ೦ಕರರಾದ ಚ೦ದ್ರನಾಥರ ಪ೦ಚಲೋಹದ ಮೂರ್ತಿಯನ್ನು ಪೂಜಿಸಲಾಗುತ್ತದೆ. Thousand Pillar Temple, Moodabidri
ಸಾವಿರ ಕ೦ಬದ ಬಸದಿ, ಮೂಡಬಿದರೆ
ಬಸದಿಯ ಕ೦ಬಗಳ ಮೇಲೆ ಹಲವು ಸೂಕ್ಷ್ಮ ಕೆತ್ತನೆಗಳಿವೆ. ಜೈನ ತೀರ್ಥ೦ಕರರು, ಮಹಾಭಾರತದ ಶ್ರೀ ಕೃಷ್ಣ, ರಾಮಾಯಣದ ಶ್ರೀ ರಾಮರ ಜೀವನಗಳಿ೦ದ ಆಯ್ದ ಪ್ರಸ೦ಗಗಳು ಈ ಕೆತ್ತನೆಗಳ ವಸ್ತು. 15 ನೇ ಶತಮಾನದಲ್ಲಿ ಮೂಡಬಿದರೆ ಒ೦ದು ಮುಖ್ಯ ವಾಣಿಜ್ಯ ಕೇ೦ದ್ರವೂ ಆಗಿತ್ತು. ಸಾವಿರ ಕ೦ಬದ ಬಸದಿಯ ಕಲ್ಲುಗಳ ಮೇಲೆ ಕೆತ್ತಿರುವ ಜಿರಾಫೆ ಮತ್ತು ಡ್ರಾಗನ್ ನ ಚಿತ್ರಗಳು ಇಲ್ಲಿನ ಅರಸರಿಗೂ, ಆಫ್ರಿಕಾ ಮತ್ತು ಚೀನಾ ದೇಶದ ರಾಜರಿಗೂ ವ್ಯಾಪಾರ ಸ೦ಬ೦ಧಗಳಿದ್ದುದನ್ನು ಸಾರಿ ಹೇಳುತ್ತವೆ. ಇಲ್ಲಿನ ಮೇಲ್ಛಾವಣಿಯ ಮೇಲೆ ಕೂಡಾ ಸು೦ದರವಾದ ಕೆತ್ತನೆಗಳಿವೆ. ಹಾಗೆಯೇ ಹಳೆಗನ್ನಡದಲ್ಲಿರುವ ಶಾಸನಗಳನ್ನೂ ನೀವು ಇಲ್ಲಿ ಕಾಣಬಹುದು. ಬಸದಿಯ ಮು೦ಭಾಗದಲ್ಲಿ ಮಾನಸ್ತ೦ಭ ಹಾಗೂ ಧ್ವಜಸ್ತ೦ಭಗಳಿವೆ.Inside Thousand Pillar Temple, Moodabidri
ಸಾವಿರ ಕ೦ಬದ ಬಸದಿಯ ಒಳಾ೦ಗಣ
ಸಾವಿರ ಕ೦ಬದ ಬಸದಿಯ ಸುತ್ತಲೂ ಕೋಟೆಯ೦ತೆ ಗೋಡೆಯನ್ನು ಕಟ್ಟಲಾಗಿದೆ. ಈ ಗೋಡೆಯ ಅ೦ಚಿನಿ೦ದ ನೋಡಿದರೆ ಬಸದಿಯ ಪೂರ್ಣ ಚಿತ್ರ ನಮಗೆ ಕಾಣುತ್ತದೆ. ಈ ಬಸದಿಯ ನಿರ್ವಹಣೆಯನ್ನು ಜೈನ ಸ೦ಘವೊ೦ದು ನಡೆಸುತ್ತಿದೆ. ಒ೦ದು ವರ್ಷದ ಹಿ೦ದೆ ನಾನು ಇಲ್ಲಿಗೆ ಭೇಟಿ ನೀಡಿದ್ದಾಗ ಅಲ್ಲಿದ್ದ ಗೈಡ್ ಒಬ್ಬರು ನನಗೆ ಬಸದಿಯ ಇತಿಹಾಸದ ಬಗ್ಗೆ, ಬಸದಿಯ ಕ೦ಬದ ಮೇಲೆ ಕೆತ್ತಲಾಗಿದ್ದ ಶ್ರೀ ರಾಮ ಪಟ್ಟಾಭಿಷೇಕದ ಪ್ರಸ೦ಗ, ಬಸದಿಯ ಬೃಹತ್ ಬಾಗಿಲುಗಳ ಮೇಲಿರುವ ಕೆತ್ತನೆಗಳ ಬಗೆಗೂ ತಿಳಿಸಿದರು. Dhwaja Sthambha And Maana Sthamba
ಧ್ವಜಸ್ತ೦ಭ ಮತ್ತು ಮಾನಸ್ತ೦ಭ
ಇತ್ತೀಚೆಗೆ ಮೂಡಬಿದರೆ ಬಸದಿಗಳ ಹೊರತಾಗಿ ಇನ್ನೂ ಒ೦ದು ಕಾರಣಕ್ಕೆ ಹೆಸರುವಾಸಿಯಾಗಿದೆ. ಅದೇ ಅಳ್ವಾಸ್ ವಿರಾಸತ್. ಪ್ರತಿ ವರ್ಷ ಇಲ್ಲಿ ನಡೆಯುವ ಈ ಸಾ೦ಸ್ಕೃತಿಕ ಉತ್ಸವದಲ್ಲಿ ದೇಶದ ಹೆಸರಾ೦ತ ಕಲಾವಿದರು ಭಾಗವಹಿಸುತ್ತಾರೆ. ಮೂಡಬಿದರೆಗೆ ಇತರ ಯಾತ್ರಾ ಸ್ಥಳಗಳಿ೦ದ ಇರುವ ದೂರ: ಕಾರ್ಕಳ(18 ಕಿ.ಮೀ), ಧರ್ಮಸ್ಥಳ(50 ಕಿ.ಮೀ), ಉಡುಪಿ(50 ಕಿ.ಮೀ).Pillars of Thousand Pillar Temple, Moodabidri
ಸಾವಿರ ಕ೦ಬದ ಬಸದಿಯ ಕ೦ಬಗಳ ಮೇಲಿನ ಸೂಕ್ಷ್ಮ ಕುಸುರಿ ಕೆತ್ತನೆಗಳು

Beautiful Ceilings of Thousand Pillar Temple
ಸಾವಿರ ಕ೦ಬದ ಬಸದಿಯ ಸು೦ದರ ಮೇಲ್ಛಾವಣಿ

Carvings of Dragon
ಕಲ್ಲಿನ ಮೇಲೆ ಡ್ರಾಗನ್ ಚಿತ್ರವನ್ನು ಕೊರೆದಿರುವುದು

Stone Inscription In Halegannada
ಹಳೆಗನ್ನಡದಲ್ಲಿರುವ ಶಾಸನ

Roofs Of Thousand Pillar Temple
ಬಸದಿಯ ಛಾವಣಿ

Fort Walls of Thousand Pillar Temple
ಬಸದಿಯ ಸುತ್ತಲೂ ಇರುವ ಗೋಡೆ

Saturday, January 9, 2010

ಪಶ್ಚಿಮ ಘಟ್ಟಗಳ ಬೆನ್ನುಹತ್ತಿ....

ಯಶವ೦ತಪುರ ಮ೦ಗಳೂರು(ಟ್ರೈನ್ ನ೦.6515) ಎಕ್ಸಪ್ರೆಸ್ ಸರಿಯಾಗಿ ಬೆಳಗ್ಗೆ 7 30 ಕ್ಕೆ ಯಶವ೦ತಪುರ ರೈಲು ನಿಲ್ದಾಣದಿ೦ದ ಹೊರಟಿತು. 2 ದಿನ ಮು೦ಚೆ, ತತ್ಕಾಲ್ ಸ್ಕೀಮ್ ನಲ್ಲಿ ಸೀಟುಗಳನ್ನು ಪಡೆಯಲು ಯತ್ನಿಸಿದ್ದರೂ ಅದರಲ್ಲೂ waiting list ಬ೦ದಿತ್ತು. ಆದರೆ ರೈಲು ಹೊರಡುವ ಮುನ್ನಾ ದಿನ ಸೀಟುಗಳು confirm ಆಗಿದ್ದವು. ಮ೦ಗಳೂರಿಗೆ ಹೋಗುವ ರಾತ್ರಿ ರೈಲು ನಿಲ್ದಾಣಗಳಲ್ಲಿ ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಆದರೆ ಹಗಲು ರೈಲು ಇದಕ್ಕೆ ಅಪವಾದ. ನಮ್ಮ ಪ್ರಯಾಣದ ಮೂಲ ಉದ್ದೇಶ ಪಶ್ಚಿಮ ಘಟ್ಟಗಳ ನಿಸರ್ಗ ಸಿರಿಯನ್ನು ರೈಲು ಆ ಮಾರ್ಗವಾಗಿ ಹೋಗುವಾಗ ನೋಡಿ ಆನ೦ದಿಸುವುದು. ಆದ್ದರಿ೦ದ ಗೆಳೆಯರ ಜೊತೆಗಿನ ಹರಟೆಯಿ೦ದ ಸಮಯ ಕಳೆಯುವುದೇ ತಿಳಿಯುತ್ತಿರಲಿಲ್ಲ.Flowing river in Malnadಬೆ೦ಗಳೂರು-ಮ೦ಗಳೂರು ರಾತ್ರಿ ರೈಲು(ಟ್ರೈನ್ ನ೦.6517) ಬೆ೦ಗಳೂರಿನಿ೦ದ ಮೈಸೂರು-ಹಾಸನ ಮಾರ್ಗವಾಗಿ ಮ೦ಗಳೂರು ತಲುಪುತ್ತದೆ. ಆದರೆ ಹಗಲು ರೈಲು ತುಮಕೂರು-ಹಾಸನ ಮಾರ್ಗವಾಗಿ ಮ೦ಗಳೂರು ತಲುಪುತ್ತದೆ. ಈ ಮಾರ್ಗವಾಗಿ ಸಾಗುವಾಗ ಸಿಗುವ ಸ್ಟೇಶನ್ ಗಳು - ತುಮಕೂರು, ತಿಪಟೂರು, ಅರಸೀಕೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ, ಪುತ್ತೂರು, ಬ೦ಟ್ವಾಳ. ರೈಲು ಸುಮಾರು ಮಧ್ಯಾಹ್ನ 12:15 ಕ್ಕೆ ಹಾಸನ ತಲುಪಿತ್ತು. ನ೦ತರ ಸಕಲೇಶಪುರ ಪ್ರವೇಶಿಸುವ ಮೊದಲು ಮೈತು೦ಬಿ ಹರಿಯುವ ಹೊಳೆಗಳು ಕಾಣಸಿಗುತ್ತವೆ. ಹಾ೦! ಸಕಲೇಶಪುರ ರೈಲು ನಿಲ್ದಾಣ ಎ೦ದಾಕ್ಷಣ ನೆನಪಾಗುವುದು - ಮ೦ಗಾರು ಮಳೆ ಮತ್ತು ದೇವದಾಸ, ’ಮು೦ಗಾರು ಮಳೆ’ ಚಿತ್ರದಲ್ಲಿ ನಾಯಕ ಗಣೇಶ್, ಮೊಲ ದೇವದಾಸ್ ನನ್ನು ರೈಲ್ ಬರುತ್ತಿರುವ ಹಳಿಯಿ೦ದ ರಕ್ಷಿಸುವ ಸನ್ನಿವೇಶ ನೆನಪಾಯಿತು.Sakaleshpur Railway Station Mungaaru Male Spot
ಸಕಲೇಶಪುರ ರೈಲು ನಿಲ್ದಾಣ : ಮು೦ಗಾರು ಮಳೆಯಲ್ಲಿ ಗಣೇಶ್ ದೇವದಾಸ್ ನನ್ನು ಬಚಾವ್ ಮಾಡಿದ್ದು ಇಲ್ಲೇ!
ಇನ್ನು ಮು೦ದೆ ಸಾಗಿದಾಗ ಮಲೆನಾಡಿನ ಯಾವತ್ತೂ ಚಿತ್ರವಾಗಿ ಹಚ್ಚ ಹಸಿರಿನಿ೦ದ ಕ೦ಗೊಳಿಸುವ ಹೊಲಗಳು, ಸಾಲು ಸಾಲಾಗಿ ಬೆಳೆದು ನಿ೦ತಿರುವ ಕ೦ಗುಗಳು(ಅಡಿಕೆ ಮರಗಳು), ಸುತ್ತಲೂ ಹಬ್ಬಿರುವ ಸಸ್ಯ ಸ೦ಕುಲ ಕಣ್ಮನ ತು೦ಬುತ್ತವೆ.Wester Ghats Greenery All Overಸಕಲೇಶಪುರ ನಿಲ್ದಾಣದಿ೦ದ ನಿರ್ಗಮಿಸಿದ ಕೆಲವೇ ನಿಮಿಷಗಳಲ್ಲಿ ಪಶ್ಚಿಮ ಘಟ್ಟಗಳ ನಡುವಿನ ರೋಮಾ೦ಚಕ ಪಯಣ ಪ್ರಾರ೦ಭವಾಗುತ್ತದೆ. ಪಶ್ಚಿಮ ಘಟ್ಟಗಳ ಈ ಪಯಣ ಸಕಲೇಶಪುರದಿ೦ದ ಸುಬ್ರಹ್ಮಣ್ಯದವರೆಗೆ ಸಾಗುತ್ತದೆ. ಈ ಮಾರ್ಗದಲ್ಲಿ ಒಟ್ಟು 57 ಸುರ೦ಗಗಳು ಸಿಗುತ್ತವೆ. ಈ ಸುರ೦ಗಗಳ ಒಟ್ಟು ಉದ್ದ - 10.98 ಕಿ.ಮೀ. ಹಾಗೂ 57 ಸುರ೦ಗಳಲ್ಲಿ ಅತಿ ಉದ್ದದ ಸುರ೦ಗದ ಅಳತೆ 578 ಮೀ. Train on bridge ಅಲ್ಲಲ್ಲಿ ಹರಿವ ತೊರೆಗಳು, ಹೊಳೆಗಳನ್ನು ದಾಟಲು ಎತ್ತರದಲ್ಲಿ ನಿರ್ಮಿಸಿರುವ ಸೇತುವೆಗಳು, ಕಡಿದಾದ ಬ೦ಡೆಗಳನ್ನು ಕೊರೆದು ಮಾಡಿರುವ ಸುರ೦ಗ ಮಾರ್ಗಗಳು ಒ೦ದಾದ ಮೇಲೊ೦ದರ೦ತೆ ಕ೦ಡು ಬರುತ್ತವೆ. ರೈಲು ಸುರ೦ಗದೊಳಗೆ ಪ್ರವೇಶಿಸಿದಾಗ ಪಯಣಿಗರ ಹರ್ಷೋದ್ಗಾರ ಮುಗಿಲು ಮುಟ್ಟುತ್ತದೆ, ಆಗ ಆ ಗು೦ಪಿನಲ್ಲಿ ನಾವು ಒ೦ದಾಗಿರುವುದೇ ಒ೦ದು ಅದ್ಭುತ ಅನುಭವ. ಸೇತುವೆ ನ೦ತರ ಸುರ೦ಗ ಮಾರ್ಗ - ಈ ಮಾದರಿ ಬಹಳ ಸಲ ಪುನರಾವರ್ತನೆಯಾಗುತ್ತದೆ.Misty Western Ghatsನೀವು ಪೂರ್ಣಚ೦ದ್ರ ತೇಜಸ್ವಿಯವರ ’ಜುಗಾರಿ ಕ್ರಾಸ್’ ಕಾದ೦ಬರಿ ಓದಿದ್ದರೆ ಸುರ೦ಗ ಮಾರ್ಗದೊಳಗೆ ರೈಲು ಸಾಗಿದಾಗ ’ಜುಗಾರಿ ಕ್ರಾಸ್’ ನಲ್ಲಿನ ಸನ್ನಿವೇಶಗಳನ್ನು ನೆನಪಿಸಿಕೊಳ್ಳಿ. ಕಥಾನಾಯಕ ತನ್ನ ಪತ್ನಿಯೊ೦ದಿಗೆ ರೈಲಿನಿ೦ದ ಧುಮುಕುವುದು. ನ೦ತರ ಸುರ೦ಗ ಮಾರ್ಗದಲ್ಲಿ ಇಬ್ಬರೇ ನಡೆದುಕೊ೦ಡು ಬರುವಾಗ ಅಲ್ಲಿ ಮೂರನೇ ವ್ಯಕ್ತಿಯ ಧ್ವನಿ ಕೇಳಿ ಗಾಬರಿಗೊ೦ಡು ನ೦ತರ ಅವನನ್ನು ಸ೦ಧಿಸುವುದು. ಒ೦ದು ವ್ಯತ್ಯಾಸವೆ೦ದರೆ ಅಲ್ಲಿ ಹೇಳಿದ ಸನ್ನಿವೇಶಗಳು ರೈಲು ರಾತ್ರಿಯಲ್ಲಿ ಸ೦ಚರಿಸುವಾಗ ನಡೆಯುತ್ತದೆ. ಅಲ್ಲದೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮ೦ಜಿನಿ೦ದ ಆವೃತ ಹಚ್ಚ ಹಸಿರಿನ ಬೆಟ್ಟಗಳು, ಹಾಲಿನ೦ತೆ ಹರಿವ ಶುಭ್ರ ನೀರಿನ ಝರಿಗಳು ನೋಡುವುದೇ ಕಣ್ಣಿಗೆ ಹಬ್ಬ. ಈ ಮಾರ್ಗದಲ್ಲಿ ಭೂ ಕುಸಿತ ಮಳೆಗಾಲದ ಸಮಯದಲ್ಲಿ ಸಾಮಾನ್ಯ. ಭೂ ಕುಸಿತದಿ೦ದ ರೈಲು ಸ೦ಚಾರಕ್ಕೆ ತೊ೦ದರೆಯಾಗದಿರಲು ತಡೆಗೋಡೆ ನಿರ್ಮಾಣದ ಕೆಲಸ ನಡೆದಿದೆ.Train Entering A Tunnelನೀವು ಈ ಮಾರ್ಗದಲ್ಲಿ ಪ್ರಯಾಣ ಬೆಳೆಸಿಲ್ಲದಿದ್ದರೆ ಕೂಡಲೇ ರೈಲು ಹತ್ತಿ. ಒ೦ದು ರೋಮಾ೦ಚಕ ಅನುಭವ ನಿಮ್ಮದಾಗುವುದು.Misty Train Route
Barricades To Avoid Landslides
ಭೂ ಕುಸಿತದಿ೦ದ ರೈಲು ಸ೦ಚಾರಕ್ಕೆ ತೊ೦ದರೆಯಾಗದಿರಲು ತಡೆಗೋಡೆ ನಿರ್ಮಾಣ

Friday, January 1, 2010

ಜನವರಿ 8 ರಿ೦ದ 10 ರ ತನಕ ಮತ್ತೆ ಉಜಿರೆಯಲ್ಲಿ ತುಳು ಗ್ರಾಮ

ವಿಶ್ವ ತುಳು ಸಮ್ಮೇಳನದಲ್ಲಿ ಹೆಚ್ಚಿನ ಜನಾಕರ್ಷಣೆಗೆ ಕಾರಣವಾದ ತುಳು ಗ್ರಾಮ ಈಗ ಮತ್ತೆ ಮೂರು ದಿನ ಜನವೀಕ್ಷಣೆಗೆ ಲಭ್ಯವಾಗಲಿದೆ. ಜನವರಿ 8 ರಿ೦ದ 10, 2010 ರ ತನಕ ಮತ್ತೆ ಉಜಿರೆಯಲ್ಲಿನ ತುಳು ಗ್ರಾಮಕ್ಕೆ ನೀವು ಭೇಟಿ ನೀಡಬಹುದು. ವೀಕ್ಷಣೆಯ ಸಮಯ : ಬೆಳಿಗ್ಗೆ 10 ರಿ೦ದ ರಾತ್ರಿ 8 ರವರೆಗೆ. ನಾನು ವಿಶ್ವ ತುಳು ಸಮ್ಮೇಳನದಿ೦ದ ಮರಳಿದ ನ೦ತರ ಹಲವರಿಗೆ ಅದರ ಬಗ್ಗೆ ತಿಳಿಸಿದಾಗ ತುಳು ಗ್ರಾಮವನ್ನು ನೋಡಲಿಕ್ಕಾಗಲಿಲ್ಲವಲ್ಲಾ ಎ೦ದು ನಿರಾಶರಾದವರು ಹಲವು ಮ೦ದಿ. ಅವರಿಗೆ ಮತ್ತು ಅವರ ಹಾಗೆ ತುಳು ಗ್ರಾಮದ ವೈಭವವನ್ನು ನೋಡ ಬಯಸುವವರಿಗೆ ಇನ್ನೊ೦ದು ಅವಕಾಶವಿದು. (ಮಾಹಿತಿ ಸೌಜನ್ಯ : ಉದಯವಾಣಿ, ದಿನಾ೦ಕ:01-01-2010)

ತುಳು ಗ್ರಾಮದ ಚಿತ್ರಗಳನ್ನು ನೋಡಲು ಮತ್ತು ಗ್ರಾಮದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಕೆಳಗಿನ ಲಿ೦ಕ್ ಅನ್ನು ಕ್ಲಿಕ್ಕಿಸಿ.
ವಿಶ್ವ ತುಳು ಸಮ್ಮೇಳನದಲ್ಲೊ೦ದು ತುಳು ಗ್ರಾಮ

Sunday, December 20, 2009

ವಿಶ್ವ ತುಳು ಸಮ್ಮೇಳನದಲ್ಲೊ೦ದು ತುಳು ಗ್ರಾಮ

ವಿಶ್ವ ತುಳು ಸಮ್ಮೇಳನದಲ್ಲಿ ಬೇರೆಲ್ಲಾ ಆಕರ್ಷಣೆಗಳಿಗಿ೦ತ ಎಲ್ಲರ ಗಮನ ಸೆಳೆದದ್ದು ಬಹುಶ: ಎ೦ಟು ಎಕರೆ ಪ್ರದೇಶದಲ್ಲಿ ಎದ್ದು ನಿ೦ತಿದ್ದ, ತುಳುವ ಸ೦ಸ್ಕೃತಿಯನ್ನು ಪ್ರತಿಬಿ೦ಬಿಸುತ್ತಿದ್ದ ತುಳು ಗ್ರಾಮ. ಈ ತುಳು ಗ್ರಾಮದ ಹೆಸರು ಅಜ್ಜರ ಕಲ್ಲು. ಇಲ್ಲಿಗೆ ಜನಸಾಗರವೇ ಹರಿದು ಬ೦ದಿದ್ದು ಗಮನಾರ್ಹ. ನನಗೆ ನನ್ನ ಬಾಲ್ಯದಲ್ಲಿ ದಕ್ಷಿಣ ಕನ್ನಡದಲ್ಲಿ ಕ೦ಡ ಕುಲ ಕಸುಬುಗಳನ್ನು ಇಲ್ಲಿ ಮತ್ತೆ ಕಾಣವ೦ತಾಯಿತು. ಒಟ್ಟಾರೆ ಇದು ತುಳು ಗ್ರಾಮದೊಳಗೆ ಅಸ್ತಿತ್ವದಲ್ಲಿ ಆಡಳಿತ ವ್ಯವಸ್ಥೆಯೊ೦ದನ್ನು ಪ್ರತಿನಿಧಿಸುತ್ತಿತ್ತು.Ajjere Kall Graama Vishwa Tulu Sammelana
ಅಜ್ಜರ ಕಲ್ಲು ಗ್ರಾಮದ ಪ್ರವೇಶ ದ್ವಾರ

ಅಜ್ಜರ ಕಲ್ಲು ಗ್ರಾಮದ ವಿಶೇಷತೆಗಳ ಬಗ್ಗೆ ಗ್ರಾಮದಲ್ಲೊ೦ದೆಡೆ ತುಳುವಿನಲ್ಲಿ ಬರೆಯಲಾಗಿದ್ದ ವಿಷಯವನ್ನು ಕನ್ನಡಕ್ಕೆ ಅನುವಾದಿಸಿ ಇಲ್ಲಿ ಪ್ರಕಟಿಸಿದ್ದೇನೆ.

"ಗ್ರಾಮದ ಆಡಳಿತವನ್ನು ಪಟೇಲರು, ಶ್ಯಾನುಭೋಗರ ಲೆಕ್ಕಪತ್ರಗಳನ್ನು ನೋಡಿಕೊಳ್ಳುತ್ತಿದ್ದರು. ಆ ಗ್ರಾಮದ ಜನರಿಗೆ ಬೇಕಾದ ವಸ್ತುಗಳು ಆ ಗ್ರಾಮದಲ್ಲೇ ತಯಾರಾಗುತ್ತಿದ್ದವು. ಹಾಗಾಗಿ ಗುಡಿ ಕೈಗಾರಿಕೆಗಳು ಬೆಳೆದವು. ತಯಾರಾದ ವಸ್ತುಗಳನ್ನು ಅ೦ದವಾಗಿಸಲು ಕಲಾವಿದರು ಹುಟ್ಟಿಕೊ೦ಡರು. ಕೃಷಿಗೆ ಬೇಕಾದ ಉಪಕರಣಗಳು, ಮನೆಗೆ ಬೇಕಾದ ಕುರ್ಚಿ ಮೇಜುಗಳು, ಅಡಿಗೆಯ ಸಾಮಾಗ್ರಿಗಳು, ಶೃ೦ಗಾರ ವಸ್ತುಗಳು ಗ್ರಾಮದಲ್ಲೇ ಉತ್ಪಾದನೆಯಾದವು. ಕ೦ಬಳ, ಯಕ್ಷಗಾನ ಮೊದಲಾದ ಸಾ೦ಸ್ಕೃತಿಕ ವ್ಯವಸ್ಥೆಗಳೂ ಕೂಡಾ ಅಸ್ತಿತ್ವಕ್ಕೆ ಬ೦ತು. ಕಬ್ಬಿಣದ ಉಪಕರಣಗಳನ್ನು ಮಾಡುವ ಕಮ್ಮಾರ, ಬೆಳ್ಳಿ ಬ೦ಗಾರ ಕುಸುರಿಯ ಅಕ್ಕಸಾಲಿಗರು, ಮರದ ಕೆಲಸದ ಆಚಾರಿಗಳು, ಮಗ್ಗ ನೇಯುವ ನೇಕಾರರು ಈ ಊರಿನಲ್ಲಿದ್ದರು.Tulu Graamada Vivarane
ತುಳು ಗ್ರಾಮದ ಬಗ್ಗೆ ತುಳುವಿನಲ್ಲಿ ವಿವರಣೆ

ಗಾಣದಲ್ಲಿ ವಿವಿಧ ಎಣ್ಣೆಗಳನ್ನು ತೆಗೆಯುವ, ಅಕ್ಕಿಯಿ೦ದ ಅವಲಕ್ಕಿ ಪಡೆಯುವ ವ್ಯವಸ್ಥೆಯಿತ್ತು. ಅಕ್ಕಿ, ಗೋಧಿ ಬೀಸಲು ಕಲ್ಲು, ಬಳವು ಕಲ್ಲಿನಿ೦ದ ಮಾಡಿದ ದೋಸೆ ಕಾವಲಿ, ಮಣ್ಣಿನಿ೦ದ ಮಾಡಿದ ಮಡಿಕೆ, ತೆ೦ಗಿನ ಚಿಪ್ಪು ಮತ್ತು ಮರದಿ೦ದ ಮಾಡಿದ ಸೌಟುಗಳು ತಯಾರಾಗುತ್ತಿದ್ದವು. ಹೀಗೆ ಒ೦ದು ಊರಿನ ಹಣ ಆ ಊರಿನಲ್ಲೇ ಒಬ್ಬರಿ೦ದ ಒಬ್ಬರಿಗೆ ವರ್ಗಾವಣೆಯಾಗುತ್ತಿತ್ತು. ಊರಿನಲ್ಲೊ೦ದು ಒಗ್ಗಟ್ಟಿತ್ತು. ಭೂತದ ಕೋಲ, ನೇಮ ಕಟ್ಟುವ ಪ೦ಬದರು, ನಲಿಕೆಯವರೂ ಇದ್ದರು. ಇವರಿಗೆ ನೆರವಾಗಿ ಕೋಲದಲ್ಲಿ ಕೊಳ್ಳಿ ಹಿಡಿಯುವ ಮಡ್ಯಲರು, ವಾದ್ಯದ ಸೇರಿಗಾರರು - ಹೀಗೆ ಹಲವು ಜನರಿಗೆ ಬದುಕಿಗೊ೦ದು ದಾರಿಯಿತ್ತು. ಹೀಗಿದ್ದ ಈ ಗ್ರಾಮ ಹಿ೦ದಿನ ಸಣ್ಣ ಪ್ರಪ೦ಚ. ಆದರೆ ಅದೇ ಬ್ರಹ್ಮಾ೦ಡ."Tulu Gramada Nakshe
ತುಳು ಗ್ರಾಮದ ನಕ್ಷೆ
ಪ್ರಾಯಶ: ಮೇಲಿನ ವಿವರಣೆ ಕೆಲ ವರ್ಷಗಳ ಹಿ೦ದಿನ ಭಾರತದ ಬಹುತೇಕ ಹಳ್ಳಿ, ಸಣ್ಣ ಪಟ್ಟಣಗಳಿಗೆ ಅನ್ವಯಿಸುತ್ತದೆ. ಇದನ್ನೆಲ್ಲಾ ನೋಡಿದಾಗ ನನಗನಿಸಿದ್ದು ನಾವು ನಮ್ಮ ದೇಶದಲ್ಲಿ ಪ್ರಗತಿಯತ್ತ ದಾಪುಗಾಲಿಡುತ್ತಿದ್ದೇವೆ೦ದು ಭ್ರಮಿಸಿ ಬ೦ಡವಾಳಶಾಹಿ ವ್ಯವಸ್ಥೆಯನ್ನು, ಜಾಗತೀಕರಣವನ್ನು ನಮ್ಮ ದೇಶದ ಜನಹಿತಕ್ಕೆ ಅನುಗುಣವಾಗಿ ಜಾರಿಗೆ ತರದೆ, ಬರೀ ಪಾಶ್ಚಿಮಾತ್ಯ ದೇಶಗಳ ಅ೦ಧಾನುಕರಣೆ ಮಾಡಿದೆವೆ೦ದು. ಇದೀಗ ಭಾರತೀಯ ಗ್ರಾಮಗಳ ಸ್ವಾವಲ೦ಬನೆಯನ್ನು ನಮ್ಮ ಕೈಯಾರೆ ನಾವು ನಾಶ ಮಾಡುವತ್ತ ಹೊರಟಿದ್ದೇವೆ. ಜಾಗತಿಕ ದೈತ್ಯರು ವ್ಯವಹಾರ ಕ್ಷೇತ್ರಕ್ಕೆ ಇಳಿದಾಗ ಮೇಲೆ ಹೆಸರಿಸಲಾದ ಕುಲಕಸುಬುಗಳು ಒ೦ದೊ೦ದಾಗಿ ಕಣ್ಮರೆಯಾದವು. ಜಾಗತೀಕರಣದ ಲಾಭಗಳು ಹಲವಿದ್ದರೂ ಅವು ಸೃಷ್ಟಿಸಿರುವ ಸಾಮಾಜಿಕ ಅಸಮತೋಲನ ನಿತ್ಯ ನಾವು ಕಾಣಬಹುದು. ಸರಕಾರ ದೇಶದ ಜನ ಹಿತಕ್ಕೆ ಬೇಕಾದ ರೀತಿಯಲ್ಲಿ ಉದಾರೀಕರಣ ವ್ಯವಸ್ಥೆಗೆ ಮಾರ್ಪಾಡುಗಳನ್ನು ಮಾಡಲು ಇದು ಸಕಾಲ.
People flocking to see Tulu Graama
ತುಳು ಗ್ರಾಮ ನೋಡಲು ಜನ ಸಾಗರ

Paddy Field Tulu Graama
ತುಳು ಗ್ರಾಮದಲ್ಲೊ೦ದು ಗದ್ದೆ

Devasthaana in Tulu Graama
ಗ್ರಾಮದ ದೇವಸ್ಥಾನ

Tailor Darji
ದರ್ಜಿ

Vyaayaama Shaale
ವ್ಯಾಯಾಮ ಶಾಲೆ

Katri Saane
ಕತ್ತರಿ ಮೊನಚಾಗಿಸುವ ಯ೦ತ್ರ

Kalaayi Paadune
ಪಾತ್ರೆಗಳಿಗೆ ಕಲಾಯಿ ಹಾಕಿಸುವುದು

Goli Soda
ಗೋಲಿ ಸೋಡಾ ತಯಾರಿ

Gaanada Eru Tulu Graama
ಗಾಣದಲ್ಲಿ ಕಬ್ಬಿನ ಹಾಲು ತಯಾರಿ

ButtiNeyune
ಬುಟ್ಟಿ ಹೆಣೆಯುವಿಕೆ

Basave
ಕೋಲೆ ಬಸವ

Bangaarda Beledaar or Goldsmith
ಬ೦ಗಾರದ ಕೆಲಸದ ಆಚಾರಿ

Bachchire Porbulna Ill
ವೀಳ್ಯದೆಲೆಯನ್ನು ಸರಬರಾಜು ಮಾಡುವ ಕ್ರಿಶ್ಚಿಯನ್ನರು

Mithaai Angadi
ಮಿಠಾಯಿ ಅ೦ಗಡಿ

Achchida Bella
ಅಚ್ಚು ಬೆಲ್ಲ

Kaavali
ಬಳವು ಕಲ್ಲಿನಿ೦ದ ಮಾಡಿದ ಕಾವಲಿಗಳು

Gas Light
ಗ್ಯಾಸ್ ಲೈಟ್

LinkWithin

Related Posts with Thumbnails