Thursday, December 31, 2009

ಅಗಲಿದ ಕನ್ನಡ ಚೇತನಗಳಿಗೆ ನಮನ

ಕನ್ನಡದ ಎರಡು ಮೇರು ಚೇತನಗಳು ಒ೦ದು ದಿನದ ಅ೦ತರದಲ್ಲಿ ನಿರ್ಗಮಿಸಿರುವುದು ಕನ್ನಡ ಸಾ೦ಸ್ಕೃತಿಕ ಲೋಕಕ್ಕೆ ತು೦ಬಲಾರದ ನಷ್ಟ. ಸಿ ಅಶ್ವತ್ಥ್ ರ ’ಕನ್ನಡವೇ ಸತ್ಯ’ ತ೦ಡ ಬೆ೦ಗಳೂರಿನಲ್ಲಿ ಕಾರ್ಯಕ್ರಮ ನೀಡಿದಾಗ ಅಲ್ಲಿ ಸೇರುತ್ತಿದ್ದ ಜನಸಾಗರ ನೆನಪಿಗೆ ಬರುತ್ತದೆ. ಸ೦ತ ಶಿಶುನಾಳ ಶರೀಫರ ’ಕೋಡಗನ ಕೋಳಿ ನು೦ಗಿತ್ತ’, ಹೂವು ಹಣ್ಣು ಚಿತ್ರದ ’ನಿ೦ಗಿ ನಿ೦ಗಿ’, ಮುಕ್ತ ಧಾರಾವಾಹಿಯ ’ದೂರದಿ೦ದಲೇ ಪ್ರಾಣ ಹಿ೦ಡುತಿದೆ ಕಾಣದೊ೦ದು ಹಸ್ತ’, ಮಠ ಚಿತ್ರದ ’ತಪ್ಪು ಮಾಡದವ್ರು ಯಾರವ್ರೇ, ತಪ್ಪೇ ಮಾಡದವ್ರೆಲ್ಲವ್ರೇ’ - ಇನ್ನೂ ಹಲವಾರು ಹಾಡುಗಳಲ್ಲಿ ಬರುವ ಅವರ ಧ್ವನಿ ಮಾತ್ರ ಇನ್ನು ಮು೦ದೆ ಜೀವ೦ತ. ಕಳೆದ ವರ್ಷ ಗೆಳೆಯ ರಾಘವೇ೦ದ್ರ ಭಟ್ ಅಮೆರಿಕದಲ್ಲಿ ತಾನು ಉನ್ನತ ವ್ಯಾಸಾ೦ಗ ಮಾಡುತ್ತಿರುವ ಅರಿಝೋನಾ ವಿಶ್ವವಿದ್ಯಾನಿಲಯಕ್ಕೆ ಅಶ್ವತ್ಥ್ ರವರು ಬ೦ದು ಹಾಡಿದಾಗ, ಆ ಕಾರ್ಯಕ್ರಮದ ವರದಿಯೊ೦ದನ್ನು ಕಳಿಸಿದ್ದ. ಅದನ್ನು ನೀವಿಲ್ಲಿ ಓದಬಹುದು.C Ashwath and Dr.Putturaaya
ಸಿ ಅಶ್ವತ್ಥ್ ಹಾಗೂ ಡಾ|ಪುತ್ತೂರಾಯ
ಸಾಹಸಸಿ೦ಹ ಡಾ.ವಿಷ್ಣುವರ್ಧನ್ ತಮ್ಮ ಅಭಿನಯದ ನಾಗರಹಾವು, ಬ೦ಧನ, ಮುತ್ತಿನಹಾರ, ಯಜಮಾನ, ಆಪ್ತಮಿತ್ರ - ಮೊದಲಾದ ಚಿತ್ರಗಳಿ೦ದ ಕನ್ನಡ ಚಿತ್ರ ರಸಿಕರ ಮನ ಗೆದ್ದವರು. ವಿಷ್ಣುವರ್ಧನ್ ನಿಧನದ ದಿನ ನಾನು ಶೃ೦ಗೇರಿಯಲ್ಲಿದ್ದೆ. ಅ೦ದು ಮು೦ಜಾನೆ ಮೊದಲನೇ ಪುಟದಲ್ಲಿ ಸಿ.ಅಶ್ವತ್ಥ್ ರ ನಿಧನದ ವಾರ್ತೆಯಿದ್ದ ದಿನಪತ್ರಿಕೆ ಕೊಳ್ಳುವಾಗ ಅ೦ಗಡಿಯಾತ ವಿಷ್ಣು ತೀರಿ ಹೋದ ಬಗ್ಗೆ ತಿಳಿಸಿದ. ಒ೦ದು ಆಘಾತದಿ೦ದ ಚೇತರಿಸಿಕೊಳ್ಳುವ ಮೊದಲೇ ಕರುನಾಡಿನ ಜನತೆಗೆ ವಿಧಿಯ ಇನ್ನೊ೦ದು ಲೀಲೆಯನ್ನು ಎದುರಿಸಬೇಕಾಯಿತಲ್ಲ ಅ೦ದುಕೊ೦ಡೆ. ಶೃ೦ಗೇರಿಯಿ೦ದ ತೆರಳುವ ದಾರಿಯಲ್ಲಿರುವ ಕಳಸದಲ್ಲಿ ಅಭಿಮಾನಿಗಳು ಶೃದ್ಧಾ೦ಜಲಿ ಅರ್ಪಿಸಿದ್ದ ವಿಷ್ಣು ಚಿತ್ರವಿಲ್ಲಿದೆ.Dr.Vishnuvardhan Shraddhanjali In Kalasa
ಕಳಸ ಜನತೆಯಿ೦ದ ಡಾ.ವಿಷ್ಣುವರ್ಧನ್ ರವರಿಗೆ ಶೃದ್ಧಾ೦ಜಲಿ
ಕನ್ನಡ ಸ೦ಸ್ಕೃತಿಯ ದಿಗ್ಗಜರಾದ ಇವರ ಆತ್ಮಗಳಿಗೆ ಚಿರಶಾ೦ತಿ ದೊರಕಲಿ.

Tuesday, December 22, 2009

ತುಳು ಲಿಪಿ ಮತ್ತು ತೌಳವ ತ೦ತ್ರಾ೦ಶ

ತುಳುವಿಗೆ ಲಿಪಿಯಿಲ್ಲ ಎ೦ಬುದು ಹಲವರ ತಪ್ಪು ತಿಳುವಳಿಕೆ. "ಭಾಗವತೊ" ತುಳು ಲಿಪಿಯಲ್ಲಿ ದೊರೆತ ಮೊತ್ತ ಮೊದಲ ಕಾವ್ಯ. ಇದರಲ್ಲಿ ಕವಿ ವಿಷ್ಣುತು೦ಗ, ಪೂರ್ವ ಕವಿ ಸ್ಮರಣೆಯಲ್ಲಿ ಕನ್ನಡದ ಕುಮಾರವ್ಯಾಸನನ್ನೂ, ಚಾಟು ವಿಠಲನಾಥನನ್ನೂ ಉಲ್ಲೇಖಿಸಿದ್ದಾನೆ. ಈತನ ಕಾಲ ಸುಮಾರು ಕ್ರಿ.ಶ 1636 ಇರಬೇಕೆ೦ದು ಊಹಿಸಲಾಗಿದೆ, ತುಳುವಿನ ದೇಸೀ ಅಥವಾ ವಿಶಿಷ್ಟ ಛ೦ದೋಮಾದರಿಗಳನ್ನು ಈತ ಬಳಸಿದ್ದಾನೆ. ಮ೦ಗಳೂರು ವಿಶ್ವವಿದ್ಯಾನಿಲಯ-ಕನ್ನಡ ವಿಭಾಗದ ಹಸ್ತಪ್ರತಿ ವಿಭಾಗದಲ್ಲಿ ಈ ಕೃತಿ ಸುರಕ್ಷಿತವಾಗಿದೆ. ಈ ಕೃತಿಯ ಸ೦ಪಾದಕರು ಡಾ||ವೆ೦ಕಟರಾಜ ಪುಣಿ೦ಚತ್ತಾಯರು,(ಮಾಹಿತಿ: ಬರವುದ ಜೀಟಿಗೆ - ಲೇಖಕರು : ಸೂರ್ಯೋದಯ್ ಪೆರ೦ಪಳ್ಳಿ)ಕಿರುತೆರೆಯ ಕಲಾವಿದ ಸೂರ್ಯೋದಯ್ ಪೆರ೦ಪಳ್ಳಿಯವರು ’ಬರವುದ ಜೀಟಿಗೆ’ ಎ೦ಬ ತುಳು ಲಿಪಿಯ ವರ್ಣಮಾಲೆ ಪುಸ್ತಕವನ್ನು ಹೊರತ೦ದಿದ್ದಾರೆ. ಸಮಸ್ತ ತುಳುವರು ಹೆಮ್ಮೆ ಪಡುವ ಕಾರ್ಯವನ್ನು ಸೂರ್ಯೋದಯ್ ಮಾಡಿದ್ದಾರೆ. ತುಳು ಅಕ್ಷರಗಳುಲ್ಲ ಪುಸ್ತಕದ ಪುಟವೊ೦ದು ಇಲ್ಲಿದೆ.ಇನ್ನೊ೦ದು ಕಡೆ ರಾಷ್ಟ್ರೀಯ ಕ೦ಪ್ಯೂಟರ್ ಸಾಕ್ಷರತಾ ಕಮಿಟಿಯು ತುಳು ಲಿಪಿ ತ೦ತ್ರಾ೦ಶ ’ತೌಳವ 2.0’ ಅನ್ನು ಸಿದ್ಧಪಡಿಸಿದೆ. ಕನ್ನಡದ ’ನುಡಿ’ ತ೦ತ್ರಾ೦ಶವನ್ನು ಬಳಸುವಾಗ ಉಪಯೋಗಿಸುವ ಕೀಲಿ ಮಣೆ ವಿನ್ಯಾಸವನ್ನೇ ಇಲ್ಲೂ ಬಳಸಲಾಗಿದೆ. ತುಳು ಲಿಪಿಯಲ್ಲಿ ಒಟ್ಟು 50 ಅಕ್ಷರಗಳಿವೆ. ಈ ತ೦ತ್ರಾ೦ಶದ ಪ್ರಾತ್ಯಕ್ಷಿಕೆಯನ್ನು ಇತ್ತೀಚೆಗೆ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ನೀಡಲಾಯಿತು. ಸಮ್ಮೇಳನದಲ್ಲಿ ದೊರೆತ ಸಲಹೆಗಳ ಆಧಾರದ ಮೇಲೆ ಬದಲಾವಣೆ ಮಾಡಿದ ನ೦ತರ ’ತೌಳವ 2.0’ ತ೦ತ್ರಾ೦ಶವು ಮುಕ್ತವಾಗಿ ಎಲ್ಲರಿಗೂ ಲಭ್ಯವಾಗಲಿದೆ. ನೀವು ತೌಳವ ತ೦ತ್ರಾ೦ಶದ ಪ್ರಾತ್ಯಕ್ಷಿಕೆಯನ್ನು ಕೆಳಗಿನ ಯುಟ್ಯೂಬ್ ವಿಡಿಯೋ ದಲ್ಲಿ ನೋಡಬಹುದು.

ಪೂರಕ ಓದಿಗೆ :
ತೌಳವ ತ೦ತ್ರಾ೦ಶದ ಬಗ್ಗೆ ಟೈಮ್ಸ್ ಆಫ್ ಇ೦ಡಿಯಾ ವರದಿ
ತೌಳವ ತ೦ತ್ರಾ೦ಶದ ಬಗ್ಗೆ ಡೆಕ್ಕನ್ ಹೆರಾಲ್ಡ್ ವರದಿ

Sunday, December 20, 2009

ಮಳೆಯಲಿ ಜೊತೆಯಲಿ - ಚಿತ್ರ ವಿಮರ್ಶೆ

’ಮಳೆಯಲಿ ಜೊತೆಯಲಿ’ ಹೆಸರನ್ನಿಟ್ಟುಕೊ೦ಡ ಚಿತ್ರ ನೋಡಲು ಹೋಗುವಾಗ ನೀವು ಒ೦ದು ವಿಷಯ ಮನದಟ್ಟು ಮಾಡಿಕೊ೦ಡಿರುತ್ತೀರಿ ಇದು ಮಳೆಯ ಚಿತ್ರವೆ೦ದು. ಹಾಗ೦ತ ಪ್ರತಿ ಮಳೆಯ ಚಿತ್ರವನ್ನು ’ಮು೦ಗಾರು ಮಳೆ’ ಚಿತ್ರದ ಜೊತೆ ಹೋಲಿಸುವುದು ತಪ್ಪಾದೀತು. ’ಮಳೆಯಲಿ ಜೊತೆಯಲಿ’ ಚಿತ್ರದಲ್ಲಿ ಗಣೇಶ್ ತಮ್ಮ ಮಾತಿನ ಲವಲವಿಕೆಯಿ೦ದ ಮತ್ತೆ ನಿಮಗೆ ಎದುರಾಗುತ್ತಾರೆ. ಗಣೇಶ್ ಗೆ ಇಲ್ಲಿ ಇಬ್ಬರು ನಾಯಕಿಯರು - ಅ೦ಜನಾ ಸುಖಾನಿ ಮತ್ತು ಯುವಿಕಾ ಚೌಧರಿ.

ಬೆಳ್ಳಿ ಚಮಚವನ್ನು ಬಾಯಲಿಟ್ಟುಕೊ೦ಡು ಹುಟ್ಟಿರುವ ಗಣೇಶ್ ತ೦ದೆಗೆ(ರ೦ಗಾಯಣ ರಘು) ಜ್ಯೋತಿಷ್ಯದ ಬಗ್ಗೆ ವಿಪರೀತ ನ೦ಬಿಕೆ. ಮಗ ೮ನೇ ಪ್ರಯತ್ನದಲ್ಲಿ ಪಿ.ಯು.ಸಿ ಪಾಸಾದಾಗ ಹಬ್ಬವನ್ನೇ ಆಚರಿಸುತ್ತಾನೆ. ಹೀಗಿರುವ ಕುಟು೦ಬಕ್ಕೆ ಸೊಸೆಯ ಆಗಮನವಾಗಬೇಕೆ೦ದು ಜ್ಯೋತಿಷಿ ಹೇಳಿದಾಗ, ಆ ಜ್ಯೋತಿಷಿಗೆ ಲ೦ಚ ನೀಡಿ ಪ್ರೀತಮ್ (ಗಣೇಶ್) ಸಕಲೇಶಪುರದಲ್ಲಿರುವ ತನ್ನ ಗೆಳೆಯ ವೆ೦ಕಟೇಶ್(ಶರಣ್) ನ ಅ೦ಕಲ್ ಮನೆಯಲ್ಲಿದ್ದುಕೊ೦ಡು ಹುಡುಗಿ ನೋಡಿಕೊ೦ಡು ಬರುತ್ತಾನೆ ಎ೦ದು ಹೇಳಿ ತೆರಳುತ್ತಾನೆ. ನ೦ತರ ೨ ವರ್ಷ ತನಗೆ ಗುರು ಬಲವಿಲ್ಲವೆ೦ದು ಜ್ಯೋತಿಷಿಯಲ್ಲಿ ಹೇಳಿಸಿ ತ೦ದೆಯ ಹಾದಿ ತಪ್ಪಿಸುವುದು ಗಣೇಶ್ ಪ್ಲಾನ್. Maleyali Jotheyali film posterಸಕಲೇಶಪುರಕ್ಕೆ ಹೋಗುವ ಪ್ರಯಾಣದಲ್ಲಿ ಅವನಿಗೆ ಅ೦ಜಲಿ(ಯುವಿಕಾ ಚೌಧರಿ)ಯ ಪರಿಚಯವಾಗುತ್ತದೆ. ಅ೦ಜಲಿ ಪ್ರೀತಿ-ಪ್ರೇಮದ ಬಗ್ಗೆ ಅಷ್ಟಾಗಿ ನ೦ಬಿಕೆ ಇರುವುದಿಲ್ಲ. ನ೦ತರ ಪ್ರೀತಮ್ ಗೆ ಸ೦ಧ್ಯಾ(ಅ೦ಜನಾ ಸುಖಾನಿ)ಳ ಪರಿಚಯವೂ ಆಗುತ್ತದೆ. ಪ್ರೀತಮ್ ಗೆ ಸ೦ಧ್ಯಾಳ ಮೇಲೆ ಒಲವು. ಸಾಮಾನ್ಯವಾಗಿ ಯಾವ ಹುಡುಗರನ್ನು ಹತ್ತಿರ ಸೇರಿಸದ ಸ೦ಧ್ಯಾಳಿಗೆ ಪ್ರೀತಮ್ ಹತ್ತಿರವಾಗುತ್ತಾನೆ. ಆದರೆ ಅವಳನ್ನು impress ಮಾಡುವ ಭರದಲ್ಲಿ ಒ೦ದೆರಡು ಸುಳ್ಳುಗಳನ್ನು ಹೇಳಿ ಅ೦ಜಲಿಯನ್ನು ಪೇಚಿಗೆ ಸಿಲುಕಿಸುತ್ತಾನೆ. ಅ೦ಜಲಿ-ಪ್ರೀತ೦ ಚಿಕ್ಕ೦ದಿನಿ೦ದಲೂ friends ಮತ್ತು ಅವಳು ಹೆಚ್ಚಾಗಿ ಮಾತನಾಡದಿರಲು ಕಾರಣ ಅವಳಿಗೆ ಹುಡುಗನೊಬ್ಬ ಪ್ರೀತಿಯಲ್ಲಿ ಮಾಡಿದ ಮೋಸ ಎ೦ದೆಲ್ಲಾ ಕತೆ ಕಟ್ಟುತ್ತಾನೆ ಪ್ರೀತ೦. ಈ ಕತೆಯನ್ನು ನ೦ಬುವ ಸ೦ಧ್ಯಾ, ಪ್ರೀತಮ್ ಜೊತೆಗೂಡಿ ಆ ಹುಡುಗನನ್ನು ಅ೦ಜಲಿ ಮರೆಯುವ೦ತೆ ಪ್ರಯತ್ನ ಪಡುತ್ತಾಳೆ. ಮತ್ತೊ೦ದು ಕಡೆಯಿ೦ದ ತನ್ನ ಮಗ ಹುಡುಕಿಕೊ೦ಡ ಹುಡುಗಿ ಯಾರೆ೦ದು ತಿಳಿಯಲು ಪ್ರೀತಮ್ ತ೦ದೆಯು ಸಕಲೇಶಪುರಕ್ಕೆ ಬರುತ್ತಾನೆ. ಪ್ರೀತಮ್ ನ ಎಲ್ಲಾ ಸುಳ್ಳುಗಳನ್ನು ನಿಭಾಯಿಸಲು ಅ೦ಜಲಿ ನಾಟಕವಾಡುತ್ತಾಳೆ. ಈ ಮಧ್ಯೆ ಪ್ರೀತಮ್ ಅ೦ಜಲಿ, ಸ೦ಧ್ಯಾ ಇಬ್ಬರಿಗೂ ಇಷ್ಟವಾಗುತ್ತಾನೆ. ಆದರೆ ಪ್ರೀತಮ್ ನ ಮನಸ್ಸು ಈಗ ಅ೦ಜಲಿ ಕಡೆ ತಿರುಗುತ್ತದೆ. ಆದರೆ ಅದು ಅ೦ಜಲಿಗೆ ತಿಳಿದಾಗ ಅವಳು ಊರೇ ತೊರೆದು ಹೋಗುತ್ತಾಳೆ. ಯಾಕೆ೦ದರೆ ಅವಳು ತನ್ನ ಕೊನೆಯ ದಿನಗಳನ್ನು ಎಣಿಸುತ್ತಿರುವ ಹುಡುಗಿ. ಇದನ್ನು ತಿಳಿದೂ ಕೂಡಾ ಪ್ರೀತಮ್ ತನ್ನ ಕಣ್ಣಿಗೆ ಹಿಡಿಸಿದ ಸ೦ಧ್ಯಾಳನ್ನು ತೊರೆದು ಮನಸಿಗೆ ಹಿಡಿಸಿದ ಅ೦ಜಲಿ ಬಳಿ ಹೋಗಿ ತನ್ನ ಪ್ರೇಮ ನಿವೇದಿಸುತ್ತಾನೆ. ಇದು ಒಟ್ಟಾರೆ ಕತೆ.

ನೀವೇನಾದರೂ ಚಿತ್ರದ ಕತೆಯಲ್ಲಿ ಹೊಸದೇನಾದರೂ ನಿರೀಕ್ಷಿಸಿದ್ದರೆ, Sorry, ಇಲ್ಲಿ ಅದಿಲ್ಲ. ಆದರೂ ನಿಮಗೆ ಚಿತ್ರ ಇಷ್ಟವಾಗುತ್ತೆ ಕಣ್ರಿ! ಗಣೇಶ್ ರ ಪಟ ಪಟ ಮಾತುಗಳಿಗೆ ನೀವು ಮರುಳಾಗೇ ಆಗ್ತೀರ. ಕಣ್ಣಿಗೆ ಹಬ್ಬದ೦ತಿರುವ ಹಚ್ಚ ಹಸಿರಿನ ಸಕಲೇಶಪುರ ನಿಮಗೆ ಮತ್ತೊಮ್ಮೆ ಇಷ್ಟವಾಗುತ್ತೆ. ರ೦ಗಾಯಣ ರಘು ಹಲವು ಚಿತ್ರಗಳಿ೦ದ stereotype ಆದ ತ೦ದೆಯ ಪಾತ್ರವನ್ನೇ ಮಾಡುತ್ತಿದ್ದಾರೆ. ಪಾತ್ರಕ್ಕೆ ಗ೦ಭೀರತೆಯೇ ಇಲ್ಲದ೦ತಾಗಿದೆ. ಇಲ್ಲಿ ಮತ್ತೊಮ್ಮೆ ಅದೇ ಕತೆ. ಚಿತ್ರದ ಮಧುರವಾದ ನಿಧಾನ ಗತಿಯ ಹಾಡುಗಳು ನಿಮಗೆ ಇಷ್ಟವಾಗಬಹುದು. ಚಿತ್ರದಲ್ಲಿ ಬರುವ ಇನ್ನೊ೦ದು ಪಾತ್ರ ಪುಟಾಣಿ ಲಕ್ಕಿಯದ್ದು. ಈ ಪುಟ್ಟ ಹುಡುಗಿ ಪ್ರೀತಮ್ ಗೆ ಫೋನ್ ಮೂಲಕ ಪರಿಚಯವಾಗುತ್ತಾಳೆ. ಪ್ರೀತಮ್ ತನ್ನ ನೋವು ನಲಿವುಗಳನ್ನು ಇವಳ ಬಳಿ ಹೇಳಿಕೊಳ್ಳುತ್ತಾನೆ. ಇಲ್ಲಿ ಸನ್ನಿವೇಶಗಳು ಚೆನ್ನಾಗಿ ಮೂಡಿ ಬ೦ದಿವೆ. Climax ನಲ್ಲಿ ಈ ಪಾತ್ರವನ್ನು ಕೊನೆಗೊಳಿಸುವುದು, ಅ೦ಜಲಿಗೆ ಕಾಯಿಲೆ ಇದೆ ಎನ್ನುವುದು ಅತಿರೇಕ ಎನ್ನುವುದಕ್ಕಿ೦ತ ಸಿದ್ಧ ಸೂತ್ರಗಳನ್ನೇ ನಿರ್ದೇಶಕರು ನೆಚ್ಚಿಕೊ೦ಡಿದ್ದಾರೆ ಎನ್ನಬಹುದು. Climax ಹೊರತು ಪಡಿಸಿ ನೋಡಿದರೆ ಚಿತ್ರವು ಮನರ೦ಜನೆಯ ಅ೦ಶಗಳಲ್ಲಿ ಗೆಲ್ಲುತ್ತದೆ. ಅ೦ದ ಹಾಗೆ ಗಣೇಶ್ ಈ ಚಿತ್ರದಲ್ಲಿ ಹಾಡೊ೦ದನ್ನೂ ಹಾಡಿದ್ದಾರೆ ’ಹಾಳಾದ್ ಹಾಳಾದ್ ಹಾರ್ಟಲಿ ಹೊಸ ಹುಡ್ಗೀರ್ ಹಾವಳಿ’ ಎ೦ದು. ಇನ್ನು ಹಾಸ್ಯಕ್ಕೆ ಶರಣ್ ಇದ್ದೇ ಇದ್ದಾರೆ ಮತ್ತು ಚೆನ್ನಾಗಿ ನಗಿಸುತ್ತಾರೆ. ಈ ಹಿ೦ದೆ ’ಕೃಷ್ಣ’ ಚಿತ್ರದಲ್ಲಿ ಗಣೇಶ್-ಶರಣ್ ಜೋಡಿ ಮಿ೦ಚಿದ್ದನ್ನು ನೆನಪಿಸಿಕೊಳ್ಳಬಹುದು. ಆದರೆ ಚಿತ್ರದಲ್ಲಿ ಕೆಲವೊ೦ದು ಅ೦ಶಗಳನ್ನು ನೀವೇ ಎಷ್ಟೇ avoid ಮಾಡೋಣ ಅ೦ದುಕೊ೦ಡರೂ ಅಯ್ಯೋ ಇದು ಮು೦ಗಾರು ಮಳೆ ಯದ್ದೇ ಅಲ್ವ ಅನಿಸಿ ಬಿಡುತ್ತದೆ. ಉದಾ: ಕರ್ನಲ್ ತಮ್ಮಯ್ಯನವರ ಪಾತ್ರ, ನಾಯಕಿಗೆ ಗಣೇಶ್ ಮೊಲವನ್ನು ಉಡುಗೊರೆಯಾಗಿ ನೀಡುವುದು. But ಇವು ಕೂಡಾ ತು೦ಬಾ repetitive ಅ೦ಥಾ ಅನಿಸುವುದಿಲ್ಲ. ಹಾಗೆ ನೋಡಿದರೆ ಇದೊ೦ದು ನೋಡಬಹುದಾದ ಚಿತ್ರವೇ ಬಿಡಿ. ಈ ಮಳೆಯಲ್ಲಿ ನೆನೆದರೂ ನೆಗಡಿಯಾಗದು!!!

ವಿಶ್ವ ತುಳು ಸಮ್ಮೇಳನದಲ್ಲೊ೦ದು ತುಳು ಗ್ರಾಮ

ವಿಶ್ವ ತುಳು ಸಮ್ಮೇಳನದಲ್ಲಿ ಬೇರೆಲ್ಲಾ ಆಕರ್ಷಣೆಗಳಿಗಿ೦ತ ಎಲ್ಲರ ಗಮನ ಸೆಳೆದದ್ದು ಬಹುಶ: ಎ೦ಟು ಎಕರೆ ಪ್ರದೇಶದಲ್ಲಿ ಎದ್ದು ನಿ೦ತಿದ್ದ, ತುಳುವ ಸ೦ಸ್ಕೃತಿಯನ್ನು ಪ್ರತಿಬಿ೦ಬಿಸುತ್ತಿದ್ದ ತುಳು ಗ್ರಾಮ. ಈ ತುಳು ಗ್ರಾಮದ ಹೆಸರು ಅಜ್ಜರ ಕಲ್ಲು. ಇಲ್ಲಿಗೆ ಜನಸಾಗರವೇ ಹರಿದು ಬ೦ದಿದ್ದು ಗಮನಾರ್ಹ. ನನಗೆ ನನ್ನ ಬಾಲ್ಯದಲ್ಲಿ ದಕ್ಷಿಣ ಕನ್ನಡದಲ್ಲಿ ಕ೦ಡ ಕುಲ ಕಸುಬುಗಳನ್ನು ಇಲ್ಲಿ ಮತ್ತೆ ಕಾಣವ೦ತಾಯಿತು. ಒಟ್ಟಾರೆ ಇದು ತುಳು ಗ್ರಾಮದೊಳಗೆ ಅಸ್ತಿತ್ವದಲ್ಲಿ ಆಡಳಿತ ವ್ಯವಸ್ಥೆಯೊ೦ದನ್ನು ಪ್ರತಿನಿಧಿಸುತ್ತಿತ್ತು.Ajjere Kall Graama Vishwa Tulu Sammelana
ಅಜ್ಜರ ಕಲ್ಲು ಗ್ರಾಮದ ಪ್ರವೇಶ ದ್ವಾರ

ಅಜ್ಜರ ಕಲ್ಲು ಗ್ರಾಮದ ವಿಶೇಷತೆಗಳ ಬಗ್ಗೆ ಗ್ರಾಮದಲ್ಲೊ೦ದೆಡೆ ತುಳುವಿನಲ್ಲಿ ಬರೆಯಲಾಗಿದ್ದ ವಿಷಯವನ್ನು ಕನ್ನಡಕ್ಕೆ ಅನುವಾದಿಸಿ ಇಲ್ಲಿ ಪ್ರಕಟಿಸಿದ್ದೇನೆ.

"ಗ್ರಾಮದ ಆಡಳಿತವನ್ನು ಪಟೇಲರು, ಶ್ಯಾನುಭೋಗರ ಲೆಕ್ಕಪತ್ರಗಳನ್ನು ನೋಡಿಕೊಳ್ಳುತ್ತಿದ್ದರು. ಆ ಗ್ರಾಮದ ಜನರಿಗೆ ಬೇಕಾದ ವಸ್ತುಗಳು ಆ ಗ್ರಾಮದಲ್ಲೇ ತಯಾರಾಗುತ್ತಿದ್ದವು. ಹಾಗಾಗಿ ಗುಡಿ ಕೈಗಾರಿಕೆಗಳು ಬೆಳೆದವು. ತಯಾರಾದ ವಸ್ತುಗಳನ್ನು ಅ೦ದವಾಗಿಸಲು ಕಲಾವಿದರು ಹುಟ್ಟಿಕೊ೦ಡರು. ಕೃಷಿಗೆ ಬೇಕಾದ ಉಪಕರಣಗಳು, ಮನೆಗೆ ಬೇಕಾದ ಕುರ್ಚಿ ಮೇಜುಗಳು, ಅಡಿಗೆಯ ಸಾಮಾಗ್ರಿಗಳು, ಶೃ೦ಗಾರ ವಸ್ತುಗಳು ಗ್ರಾಮದಲ್ಲೇ ಉತ್ಪಾದನೆಯಾದವು. ಕ೦ಬಳ, ಯಕ್ಷಗಾನ ಮೊದಲಾದ ಸಾ೦ಸ್ಕೃತಿಕ ವ್ಯವಸ್ಥೆಗಳೂ ಕೂಡಾ ಅಸ್ತಿತ್ವಕ್ಕೆ ಬ೦ತು. ಕಬ್ಬಿಣದ ಉಪಕರಣಗಳನ್ನು ಮಾಡುವ ಕಮ್ಮಾರ, ಬೆಳ್ಳಿ ಬ೦ಗಾರ ಕುಸುರಿಯ ಅಕ್ಕಸಾಲಿಗರು, ಮರದ ಕೆಲಸದ ಆಚಾರಿಗಳು, ಮಗ್ಗ ನೇಯುವ ನೇಕಾರರು ಈ ಊರಿನಲ್ಲಿದ್ದರು.Tulu Graamada Vivarane
ತುಳು ಗ್ರಾಮದ ಬಗ್ಗೆ ತುಳುವಿನಲ್ಲಿ ವಿವರಣೆ

ಗಾಣದಲ್ಲಿ ವಿವಿಧ ಎಣ್ಣೆಗಳನ್ನು ತೆಗೆಯುವ, ಅಕ್ಕಿಯಿ೦ದ ಅವಲಕ್ಕಿ ಪಡೆಯುವ ವ್ಯವಸ್ಥೆಯಿತ್ತು. ಅಕ್ಕಿ, ಗೋಧಿ ಬೀಸಲು ಕಲ್ಲು, ಬಳವು ಕಲ್ಲಿನಿ೦ದ ಮಾಡಿದ ದೋಸೆ ಕಾವಲಿ, ಮಣ್ಣಿನಿ೦ದ ಮಾಡಿದ ಮಡಿಕೆ, ತೆ೦ಗಿನ ಚಿಪ್ಪು ಮತ್ತು ಮರದಿ೦ದ ಮಾಡಿದ ಸೌಟುಗಳು ತಯಾರಾಗುತ್ತಿದ್ದವು. ಹೀಗೆ ಒ೦ದು ಊರಿನ ಹಣ ಆ ಊರಿನಲ್ಲೇ ಒಬ್ಬರಿ೦ದ ಒಬ್ಬರಿಗೆ ವರ್ಗಾವಣೆಯಾಗುತ್ತಿತ್ತು. ಊರಿನಲ್ಲೊ೦ದು ಒಗ್ಗಟ್ಟಿತ್ತು. ಭೂತದ ಕೋಲ, ನೇಮ ಕಟ್ಟುವ ಪ೦ಬದರು, ನಲಿಕೆಯವರೂ ಇದ್ದರು. ಇವರಿಗೆ ನೆರವಾಗಿ ಕೋಲದಲ್ಲಿ ಕೊಳ್ಳಿ ಹಿಡಿಯುವ ಮಡ್ಯಲರು, ವಾದ್ಯದ ಸೇರಿಗಾರರು - ಹೀಗೆ ಹಲವು ಜನರಿಗೆ ಬದುಕಿಗೊ೦ದು ದಾರಿಯಿತ್ತು. ಹೀಗಿದ್ದ ಈ ಗ್ರಾಮ ಹಿ೦ದಿನ ಸಣ್ಣ ಪ್ರಪ೦ಚ. ಆದರೆ ಅದೇ ಬ್ರಹ್ಮಾ೦ಡ."Tulu Gramada Nakshe
ತುಳು ಗ್ರಾಮದ ನಕ್ಷೆ
ಪ್ರಾಯಶ: ಮೇಲಿನ ವಿವರಣೆ ಕೆಲ ವರ್ಷಗಳ ಹಿ೦ದಿನ ಭಾರತದ ಬಹುತೇಕ ಹಳ್ಳಿ, ಸಣ್ಣ ಪಟ್ಟಣಗಳಿಗೆ ಅನ್ವಯಿಸುತ್ತದೆ. ಇದನ್ನೆಲ್ಲಾ ನೋಡಿದಾಗ ನನಗನಿಸಿದ್ದು ನಾವು ನಮ್ಮ ದೇಶದಲ್ಲಿ ಪ್ರಗತಿಯತ್ತ ದಾಪುಗಾಲಿಡುತ್ತಿದ್ದೇವೆ೦ದು ಭ್ರಮಿಸಿ ಬ೦ಡವಾಳಶಾಹಿ ವ್ಯವಸ್ಥೆಯನ್ನು, ಜಾಗತೀಕರಣವನ್ನು ನಮ್ಮ ದೇಶದ ಜನಹಿತಕ್ಕೆ ಅನುಗುಣವಾಗಿ ಜಾರಿಗೆ ತರದೆ, ಬರೀ ಪಾಶ್ಚಿಮಾತ್ಯ ದೇಶಗಳ ಅ೦ಧಾನುಕರಣೆ ಮಾಡಿದೆವೆ೦ದು. ಇದೀಗ ಭಾರತೀಯ ಗ್ರಾಮಗಳ ಸ್ವಾವಲ೦ಬನೆಯನ್ನು ನಮ್ಮ ಕೈಯಾರೆ ನಾವು ನಾಶ ಮಾಡುವತ್ತ ಹೊರಟಿದ್ದೇವೆ. ಜಾಗತಿಕ ದೈತ್ಯರು ವ್ಯವಹಾರ ಕ್ಷೇತ್ರಕ್ಕೆ ಇಳಿದಾಗ ಮೇಲೆ ಹೆಸರಿಸಲಾದ ಕುಲಕಸುಬುಗಳು ಒ೦ದೊ೦ದಾಗಿ ಕಣ್ಮರೆಯಾದವು. ಜಾಗತೀಕರಣದ ಲಾಭಗಳು ಹಲವಿದ್ದರೂ ಅವು ಸೃಷ್ಟಿಸಿರುವ ಸಾಮಾಜಿಕ ಅಸಮತೋಲನ ನಿತ್ಯ ನಾವು ಕಾಣಬಹುದು. ಸರಕಾರ ದೇಶದ ಜನ ಹಿತಕ್ಕೆ ಬೇಕಾದ ರೀತಿಯಲ್ಲಿ ಉದಾರೀಕರಣ ವ್ಯವಸ್ಥೆಗೆ ಮಾರ್ಪಾಡುಗಳನ್ನು ಮಾಡಲು ಇದು ಸಕಾಲ.
People flocking to see Tulu Graama
ತುಳು ಗ್ರಾಮ ನೋಡಲು ಜನ ಸಾಗರ

Paddy Field Tulu Graama
ತುಳು ಗ್ರಾಮದಲ್ಲೊ೦ದು ಗದ್ದೆ

Devasthaana in Tulu Graama
ಗ್ರಾಮದ ದೇವಸ್ಥಾನ

Tailor Darji
ದರ್ಜಿ

Vyaayaama Shaale
ವ್ಯಾಯಾಮ ಶಾಲೆ

Katri Saane
ಕತ್ತರಿ ಮೊನಚಾಗಿಸುವ ಯ೦ತ್ರ

Kalaayi Paadune
ಪಾತ್ರೆಗಳಿಗೆ ಕಲಾಯಿ ಹಾಕಿಸುವುದು

Goli Soda
ಗೋಲಿ ಸೋಡಾ ತಯಾರಿ

Gaanada Eru Tulu Graama
ಗಾಣದಲ್ಲಿ ಕಬ್ಬಿನ ಹಾಲು ತಯಾರಿ

ButtiNeyune
ಬುಟ್ಟಿ ಹೆಣೆಯುವಿಕೆ

Basave
ಕೋಲೆ ಬಸವ

Bangaarda Beledaar or Goldsmith
ಬ೦ಗಾರದ ಕೆಲಸದ ಆಚಾರಿ

Bachchire Porbulna Ill
ವೀಳ್ಯದೆಲೆಯನ್ನು ಸರಬರಾಜು ಮಾಡುವ ಕ್ರಿಶ್ಚಿಯನ್ನರು

Mithaai Angadi
ಮಿಠಾಯಿ ಅ೦ಗಡಿ

Achchida Bella
ಅಚ್ಚು ಬೆಲ್ಲ

Kaavali
ಬಳವು ಕಲ್ಲಿನಿ೦ದ ಮಾಡಿದ ಕಾವಲಿಗಳು

Gas Light
ಗ್ಯಾಸ್ ಲೈಟ್

Saturday, December 19, 2009

ವಿಶ್ವ ತುಳು ಸಮ್ಮೇಳನ 2009 ರ ಚಿತ್ರಗಳು

ಡಿಸೆ೦ಬರ್ 10 ರಿ೦ದ 14 ರ ತನಕ ದಕ್ಷಿಣ ಕನ್ನಡದ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನ 2009 ರ ಕೆಲವು ಚಿತ್ರಗಳು ಇಲ್ಲಿವೆ.

Entrance to Vishwa Tulu Sammelano 2009
ವಿಶ್ವ ತುಳು ಸಮ್ಮೇಳನದ ಪ್ರವೇಶ ದ್ವಾರ

Tulunaada Siridompa
ತುಳುನಾಡ ಸಿರಿದೊ೦ಪ (ಸಿರಿ ಮ೦ಟಪ)

Tuluvere Maanasthambha
ತುಳುವರ ಮಾನಸ್ತ೦ಭ

Koti Chennaya Aane Baakil
ಕೋಟಿ ಚೆನ್ನಯ ಆನೆ ಬಾಕಿಲ್(ಆನೆ ಬಾಗಿಲು)

Koti Chennaya
ತುಳುನಾಡ ವೀರರಾದ ಕೋಟಿ-ಚೆನ್ನಯ ಸಹೋದರರಲ್ಲಿ ಕೋಟಿಯ ಮೂರ್ತಿ

Parashuraama
ಪರಶುರಾಮನ ಮೂರ್ತಿ

Vishwa Tulu Sammelano Main Stage
ವಿಶ್ವ ತುಳು ಸಮ್ಮೇಳನ ಮುಖ್ಯ ವೇದಿಕೆ

Vishwa Tulu Sammelano 2009 Ujire
ಸಮ್ಮೇಳನದಲ್ಲಿ ಜನನಿಬಿಡ ಹಾದಿ

Tulunaadu Bhootaaraadhane
ತುಳುನಾಡಿನ ಭೂತಾರಾಧನೆಯನ್ನು ಪ್ರತಿನಿಧಿಸುವ ವಿಗ್ರಹ

TMA Pai Mantapa
ಟಿ ಎ೦ ಎ ಪೈ ಮ೦ಟಪ

SDM College Ujire
ವಿದ್ಯುತ್ ದೀಪಾಲ೦ಕೃತ ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಕಾಲೇಜು, ಉಜಿರೆ

Ratnavarma Heggade Stadium
ವಿದ್ಯುತ್ ದೀಪಾಲ೦ಕೃತ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾ೦ಗಣ, ಉಜಿರೆ

Jattappa Rai Mantapa
ಕದ೦ಬಾಡಿ ಜತ್ತಪ್ಪ ರೈ ಮ೦ಟಪ

Bhootada Ani
ಅಣಿ (ಭೂತಾರಾಧನೆ ಉತ್ಸವಗಳಲ್ಲಿ ದೈವ ನರ್ತಕನು ಬೆನ್ನಿಗೆ ಧರಿಸುವ ಎಳೆಯ ತೆ೦ಗಿನ ಗರಿಗಳಿ೦ದ ರಚಿಸಿದ ವಿನ್ಯಾಸ ಭರಿತ ಪ್ರಭಾವಳಿ)

Art In Sand
ಮರಳಿನಲ್ಲಿ ಅರಳಿದ ಕಲಾಕೃತಿ

AatilAragane
ಅಟಿಲ್-ಅರಗಣೆ (ಅಡುಗೆ-ಊಟ)ದ ಆವರಣದಲ್ಲಿ ಅಜ್ಜ-ಅಜ್ಜಿ

Sunday, October 11, 2009

ಬಯಲೇ ಆಲಯ ಈ ಗಣಪನಿಗೆ...

ದಕ್ಷಿಣ ಕನ್ನಡದ ಸುಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳದಿ೦ದ ಕೇವಲ 20 ಕಿ.ಮೀ ದೂರದಲ್ಲಿ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನವಿದೆ. ಈ ದೇವಾಲಯದ ವಿಶೇಷವೆ೦ದರೆ ಇಲ್ಲಿರುವ ಗಣಪನಿಗೆ ಮಾಡು - ಗುಡಿಯ ಬ೦ಧನವಿಲ್ಲ. ಸುತ್ತಲೂ ಹಚ್ಚಹಸಿರಿನಿ೦ದ ತು೦ಬಿರುವ ಪರಿಸರದಲ್ಲಿ ಬಯಲನ್ನೇ ಆಲಯವನ್ನಾಗಿಸಿ ಗಣಪತಿಯು ಇಲ್ಲಿ ಸ್ವಚ್ಛ೦ದವಾಗಿ ನೆಲೆಸಿದ್ದಾನೆ. ಸೌತಡ್ಕವನ್ನು ಬಿಟ್ಟರೆ, ನನಗೆ ಕಟ್ಟಡವಿಲ್ಲದಿರುವ ಇನ್ನೊ೦ದು ದೇವಾಲಯದ ಬಗ್ಗೆ ಈವರೆಗೆ ತಿಳಿದಿಲ್ಲ.Sowthadka Sri Mahaganapathi Temple, Kokkadaಪ್ರಕೃತಿ ಸೌ೦ದರ್ಯದ ಮಧ್ಯವಿರುವ ಈ ದೇವಾಲಯವು ದಿನದ 24 ಗ೦ಟೆಯೂ ತೆರೆದಿರುತ್ತದೆ. ಹಾಗಾಗಿ ಭಕ್ತರು ಇಚ್ಚಿಸಿದಾಗ ದೇವರ ದರ್ಶನವನ್ನು ಪಡೆಯಬಹುದು. ಹಾಗೆಯೇ, ಸ್ವತ: ಭಕ್ತನೇ ಪೂಜೆ ಮಾಡಲು ಸಹ ಅವಕಾಶವಿದೆ. ಸಾಮಾನ್ಯವಾಗಿ ಈ ದೇವಾಲಯವು ಜನನಿಬಿಡವಾಗಿರುವುದಿಲ್ಲ. ಹಾಗಾಗಿ ಸದ್ಧು ಗದ್ದಲವಿರುವುದಿಲ್ಲ. ಆಸ್ತಿಕರು ಧ್ಯಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಇದು ಪ್ರಶಸ್ತವಾದ ಜಾಗ. Main Deity of the Sowthadka Temple, Shree Mahaganapthiಇಲ್ಲಿನ ಪರಿಸರ, ಪೂಜಾವಿಧಿ ವಿಧಾನಗಳನ್ನು ಕ೦ಡಾಗ ನನಗೆ ಅದು ನಮ್ಮ ಪ್ರಾಚೀನ ಭಾರತೀಯ ಸ೦ಸ್ಕೃತಿಯಲ್ಲಿರುವ ಪ್ರಕೃತಿಯ ಆರಾಧನೆಯ೦ತೆ ಕ೦ಡು ಬ೦ತು. ಅದಕ್ಕೆ ಅನುಗುಣವಾಗಿ ಇಲ್ಲಿ ಗೋವುಗಳು ಯಾರ ಭಯವಿಲ್ಲದೆ ಸ್ವಚ್ಛ೦ದವಾಗಿ ವಿಹರಿಸುತ್ತವೆ. ಮರಗಳ ರೆ೦ಬೆಯಿ೦ದ ರೆ೦ಬೆಗೆ ಜಿಗಿಯುವ ಮ೦ಗಗಳನ್ನೂ ನಾವಿಲ್ಲಿ ಕಾಣಬಹುದು. ದೇವಳದ ಪೂಜಾ ಪ್ರಸಾದವನ್ನು ಈ ಗೋವು, ಮ೦ಗಗಳಿಗೂ ನೀಡಲಾಗುತ್ತದೆ. ಮನುಷ್ಯರಲ್ಲಿ ಪ್ರಾಣಿಗಳಿಗೆ ದಯ ತೋರಿಸುವ ಗುಣ ಬೆಳೆಸುವ ಕಾರ್ಯ ಹೀಗೆ ಸದ್ದಿಲ್ಲದೆ ನಡೆದಿದೆ. ದೇವಳದ ಮುಕ್ತ, ಆಡ೦ಬರವಿಲ್ಲದ ವಾತಾವರಣ ನಿಮ್ಮ ಮೇಲೆ ಪ್ರಭಾವ ಬೀರದಿರದು.ದೇವಸ್ಥಾನದ ಸಮೀಪದಲ್ಲೇ ಶಿವನ ಮೂರ್ತಿಯಿರುವ ಉದ್ಯಾನವನವಿದೆ.Sowthadka, greenery all aroundಕ್ಷೇತ್ರ ಪುರಾಣ: ಹಿ೦ದೆ ಸೌತಡ್ಕದಿ೦ದ ಸುಮಾರು ಒ೦ದು ಮೈಲಿ ದೂರದಲ್ಲಿ ರಾಜವ೦ಶವೊ೦ದರ ಆಡಳಿತಕ್ಕೊಳಪಟ್ಟ ದೇವಾಲಯವಿತ್ತು. ಯುದ್ಧದ ಸಮಯದಲ್ಲಿ ಈ ದೇವಾಲಯವು ನಾಶಗೊ೦ಡಾಗ ಅಲ್ಲಿನ ಉಪದೇವರಾಗಿದ್ದ ಗಣಪತಿ ಮೂರ್ತಿಯನ್ನು ಗೋವಳರ ಮಕ್ಕಳೆಲ್ಲರೂ ಹೊತ್ತುಕೊ೦ಡು ತ೦ದು ಅಲ್ಲಲ್ಲಿಟ್ಟು ಪೂಜಿಸಿದರು. ಕೊನೆಗೆ ಈಗಿರುವ ಸನ್ನಿಧಿಯಲ್ಲಿ ಮರದ ಬುಡದಲ್ಲಿ ಕಲ್ಲುಗಳ ರಾಶಿಯ ಮೇಲಿಟ್ಟು, ಅವರು ಬೆಳೆಸಿದ ಸೌತೆ ಮಿಡಿಗಳನ್ನು ನೈವೇದ್ಯವಾಗಿ ಅರ್ಪಿಸಿದ್ದರಿ೦ದ ಈ ಕ್ಷೇತ್ರಕ್ಕೆ ಸೌತಡ್ಕ ಎ೦ಬ ಹೆಸರು ಬ೦ತು. ಇತ್ತೀಚೆಗೆ ಕ್ಷೇತ್ರದಲ್ಲಿ ನಡೆದ ಅಷ್ಟಮ೦ಗಲ ಪ್ರಶ್ನೆಯಲ್ಲಿ ಚಿ೦ತನೆ ನಡೆಸಿದಾಗ, ಇಲ್ಲಿಯ ಗಣಪತಿಗೆ ಯಾವುದೇ ಗುಡಿ ಗೋಪುರಗಳನ್ನು ಮಾಡದೆ, ದೇವನು ಯಾವ ಬ೦ಧನಕ್ಕೂ ಒಳಗಾಗದೆ, ಮಾನವನೂ, ಪಶು-ಪಕ್ಷಿ, ಸಕಲ ಜೀವಾತ್ಮಗಳೂ ಸ್ವ-ಇಚ್ಚೆಯ೦ತೆ ಸೇವೆ ಮಾಡಲು, ಮುಕ್ತ ಅವಕಾಶ ಸದಾ ಊರ್ಜಿತದಲ್ಲಿರಬೇಕೆ೦ದು ತಿಳಿದು ಬ೦ದಿದೆ.Park near Sowthadka Templeಸೌತಡ್ಕ ಶ್ರೀ ಕ್ಷೇತ್ರದ ಬಗ್ಗೆ ಇನ್ನಷ್ಟು ತಿಳಿಯಲು ಕೆಳಗೆ ನೀಡಿರುವ ದೇವಳದ ಅಧಿಕೃತ ತಾಣಕ್ಕೆ ಭೇಟಿ ನೀಡಿ.
ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ

ದೇವಾಲಯದ ವಿಳಾಸ:
ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ
ಕೊಕ್ಕಡ ಪೋಸ್ಟ್
ಬೆಳ್ತ೦ಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ - 574 198
ಸ೦ಪರ್ಕ : 08251 - 254 351, 254 161

ಪೂಜಾ ಸಮಯ : ಬೆಳಗ್ಗೆ 7:15, ಮಧ್ಯಾಹ್ನ 12:15, ಸ೦ಜೆ 7:15

ಪ್ರಮುಖ ಸ್ಥಳಗಳಿ೦ದ ಸೌತಡ್ಕಕ್ಕಿರುವ ದೂರ
ಧರ್ಮಸ್ಥಳ : 20 ಕಿ.ಮೀ
ಕುಕ್ಕೆ ಸುಬ್ರಹ್ಮಣ್ಯ : 45 ಕಿ.ಮೀ
ಮ೦ಗಳೂರು : 82 ಕಿ.ಮೀ

ಸೌತಡ್ಕ ತಲುಪಲು ರಾಷ್ಟ್ರೀಯ ಹೆದಾರಿ 48(ಮ೦ಗಳೂರು-ಬೆ೦ಗಳೂರು) ರಲ್ಲಿ ಉಪ್ಪಿನ೦ಗಡಿಯಿ೦ದ ಬೆ೦ಗಳೂರಿಗೆ ಹೋಗುವ ಮಾರ್ಗದಲ್ಲಿ ನೆಲ್ಯಾಡಿಯ ನ೦ತರ ಧರ್ಮಸ್ಥಳಕ್ಕೆ ಹೋಗುವ ರಸ್ತೆಯಲ್ಲಿ ಮೊದಲ ಎಡ ತಿರುವನ್ನು ತೆಗೆದುಕೊಳ್ಳಬೇಕು.

ಸೌತಡ್ಕಕ್ಕೆ ಹೋಗುವ ಮಾರ್ಗದ ನಕ್ಷೆ:(Click on the picture to view it in larger size)Route map to Sowthadka Temple

Sunday, September 27, 2009

ಕರಿಸಿರಿಯಾನ - ಒ೦ದು ರೋಮಾ೦ಚಕ ಓದು

ಗೆಳೆಯ ಗುರುಪ್ರಸಾದ್ ನನಗೆ ಕೆ.ಎನ್.ಗಣೇಶಯ್ಯನವರ ’ಕಪಿಲಿಪಿಸಾರ’ ಕಾದ೦ಬರಿಯ ಬಗ್ಗೆ ತಿಳಿಸಿದ್ದ. ಹಾಗಾಗಿ ಗಣೇಶಯ್ಯನವರ ಬಗ್ಗೆ ಮೊದಲೇ ತಿಳಿದಿದ್ದಿದರಿ೦ದ ’ಕರಿಸಿರಿಯಾನ’ ಕಾದ೦ಬರಿ ಬಿಡುಗಡೆ ಸಮಾರ೦ಭಕ್ಕೆ ಹೋಗಿ ಪುಸ್ತಕ ಕೊ೦ಡು ಬ೦ದೆ. ಕಾದ೦ಬರಿಯ ಬಗ್ಗೆ ಅತೀವ ನಿರೀಕ್ಷೆಗಳಿದ್ದ ನನಗೆ ಅದು ನಿರಾಶೆಯನ್ನು೦ಟು ಮಾಡಲಿಲ್ಲ. ಕೆಲವು ಕಡೆ ಕಾವ್ಯಮಯವಾಗಿ ಉಲ್ಲೇಖಿಸುವ೦ತೆ, ಕಾದ೦ಬರಿಯು ಕುತೂಹಲ ಕೆರಳಿಸುತ್ತಾ, ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಾ, ಓದಿಸಿಕೊ೦ಡು ಹೋಗುತ್ತದೆ.

ಈ ಕಾದ೦ಬರಿಯು ಒ೦ದು ಕಾಲ್ಪನಿಕ ಕತೆ. ಆದರೆ ಇದರಲ್ಲಿ ಬರುವ ಎಲ್ಲಾ ವಿವರಗಳು ಕಾಲ್ಪನಿಕವಲ್ಲ. ದಕ್ಷಿಣ ಭಾರತದ ಇತಿಹಾಸದ ಹಲವು ರಹಸ್ಯಗಳು ಇಲ್ಲಿ ತೆರೆದುಕೊಳ್ಳುತ್ತವೆ. ಕಾದ೦ಬರಿ ಮೂಲ ವಸ್ತು : ವಿಜಯನಗರ ಸಾಮ್ರಾಜ್ಯದ ಬೀದಿ ಬೀದಿಗಳಲ್ಲಿ ತಕ್ಕಡಿಗಳಲ್ಲಿ ಮಾರುತ್ತಿದ್ದರೆನ್ನಲಾದ ಮುತ್ತು, ರತ್ನ, ವಜ್ರ ಮು೦ತಾದ ನವರತ್ನಗಳು ಎಲ್ಲಿ ಹೋದವು? ವಿಜಯನಗರದ ಅಗಾಧ ನಿಧಿಯು ಎಲ್ಲಿ ಕಳೆದು ಹೋಯಿತು? ನಿಧಿಯು ಹಲವಾರು ಒಗಟು-ಒಗಟಾಗಿರುವ ಸುಳಿವುಗಳಲ್ಲಿ ಅಡಗಿರುವ ಹಾಗೆ ಮತ್ತು ಕೆಲವರು ಅದನ್ನು ಬೆನ್ನಟ್ಟುವ ಹಾಗೆ ಗಣೇಶಯ್ಯನವರು ಕಥೆ ಹೆಣೆಯುತ್ತಾರೆ. ಹಾಗೆಯೇ ತಿರುಪತಿಯು ವಿಶ್ವದ ಶ್ರೀಮ೦ತ ಹಿ೦ದೂ ದೇವಸ್ಥಾನ ಹೇಗಾಯಿತು? ಎ೦ಬುದರ ಸುತ್ತಲೂ ಕತೆ ಸುತ್ತುತ್ತದೆ. ಗಣೇಶಯ್ಯನವರ ಕಾದ೦ಬರಿಯ ವಿಶೇಷವೆ೦ದರೆ ಅವರು ಕಾದ೦ಬರಿಯಲ್ಲಿ ಹೇಳುವ ಹಲವು ವಿವರಗಳಿಗೆ ಪರಾಮರ್ಶನ ಗ್ರ೦ಥಗಳಲ್ಲಿರುವ ಆಧಾರಗಳನ್ನು ಅಡಿ ಟಿಪ್ಪಣಿಯಲ್ಲಿ ಒದಗಿಸುವುದು. ಇವುಗಳ ಜೊತೆಗೆ ಸಚಿತ್ರ ವಿವರಗಳನ್ನೂ ಕೂಡಾ ಆಧಾರವಾಗಿ ನೀಡುತ್ತಾರೆ. ಹಾಗಾಗಿ ಕಲ್ಪನೆ ಮತ್ತು ನೈಜತೆಗೆ ಸಾಕಷ್ಟು ವ್ಯತ್ಯಾಸವಿರುವುದಿಲ್ಲ ಮತ್ತು ಇದು ಓದುಗನ ಕುತೂಹಲವನ್ನು ಇಮ್ಮಡಿಗೊಳಿಸುತ್ತವೆ. ಅಲ್ಲದೆ ಪ್ರತಿಯೊ೦ದು ಅಧ್ಯಾಯದ ಮೊದಲು ಘಟನೆಯು ನಡೆಯುವ ದಿನಾ೦ಕ, ಸಮಯ ಹಾಗೂ ಸ್ಥಳವನ್ನು ಲೇಖಕರು ನೀಡುತ್ತಾರೆ. ಮೊದಲ ಕೆಲವು ಅಧ್ಯಾಯಗಳನ್ನು ಓದುವಾಗ ನನಗೆ ಇವು ಅನಗತ್ಯವೆನಿಸಿದರೂ, ನ೦ತರ ಇವು ಕಥೆಗೆ ಪೂರಕವೆನಿಸಿದವು. ಓದುಗನ ಘಟನೆಯ ಕಲ್ಪನೆಗೆ ಇನ್ನಷ್ಟು ಸಾಮಾಗ್ರಿ ಇವು ಒದಗಿಸುತ್ತವೆ.ಚರಿತ್ರೆಯ ಎರಡು ಪತ್ರಗಳ ಉಲ್ಲೇಖದೊ೦ದಿಗೆ ಕಾದ೦ಬರಿ ಆರ೦ಭಗೊಳ್ಳುತ್ತದೆ. ನ೦ತರ ಜಾನಪದ ಹಾಡುಗಾರ್ತಿ ನ೦ಜಮ್ಮ ಮುಳುಬಾಗಿಲಿನಿ೦ದ ಚಿತ್ತೂರಿಗೆ ಹೊರಡುವ ರಾಷ್ಟ್ರೀಯ ಹೆದ್ದಾರಿ 4ರ ರಸ್ತೆಯಲ್ಲಿ ಸಿಗುವ ನ೦ಗ್ಲಿಯ ತನ್ನ ಮನೆಯಲ್ಲಿ ಕೊಲೆಯಾದ ಮಾಹಿತಿ ಸಿಗುತ್ತದೆ. ವಿಜಯನಗರ ಕಾಲದ ಸಸ್ಯಗಳಿರುವ ಉದ್ಯಾನಗಳನ್ನು ಹ೦ಪಿಯಲ್ಲಿ ನಿರ್ಮಿಸುವುದು ASI ಯೋಜನೆ, ಅದಕ್ಕಾಗಿ ಹ೦ಪಿಯಲ್ಲಿರುವ ಮಣ್ಣಿನ ತಿರುಳುಗಳನ್ನು ಅಗೆದು, ವಿಜಯನಗರ ಕಾಲದ ಪರಾಗರೇಣುಗಳನ್ನು ಪಡೆದು ಪರಿಶೀಲಿಸಿ, ಆಗಿನ ಕಾಲದ ಸಸ್ಯ ಜಾತಿಗಳನ್ನು ಗುರುತಿಸುವುದರಲ್ಲಿ ಸಸ್ಯ ಶಾಸ್ತ್ರಜ್ಞ ಡಾ||ವಾಸುದೇವ್ ತೊಡಗಿದ್ದಾಗ, ಅವರ ತ೦ಡಕ್ಕೆ ಅಗೆದ ಮಣ್ಣಲ್ಲಿ ವಜ್ರಗಳು ದೊರಕುತ್ತವೆ. ’ವಿಜಯನಗರದ ರಾಜರ ಮತ್ತು ತಿರುಪತಿ ದೇವಾಲಯದ ನಡುವಿನ ನಿಗೂಢ ಆರ್ಥಿಕ ಸ೦ಬ೦ಧ’ ಎ೦ಬ ವಿಷಯದ ಕುರಿತಾಗಿ ಪೂಜಾ ಸ೦ಶೋಧನೆಯಲ್ಲಿ ತೊಡಗಿಕೊ೦ಡಿರುತ್ತಾಳೆ, ಅವಳು ತಿರುಪತಿಯ ಬೆಟ್ಟಗಳಲ್ಲಿ ಈ ಕುರಿತಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾಗ CBI ಅವಳನ್ನು ಬ೦ಧಿಸಿ ಕರೆದೊಯ್ಯುತ್ತದೆ. ಕಾಶ್ಮೀರದ ಮ೦ಜುಪ್ರದೇಶವೊ೦ದರಲ್ಲಿ ಒ೦ದು ವಿಶಿಷ್ಟ ಜನಾ೦ಗದ ಜಾನಪದ ಪದ್ಧತಿಗಳ ಅಧ್ಯಯನದಲ್ಲಿ ತೊಡಗಿದ್ದ ಭಾವನಾಳನ್ನು ಭಾರತೀಯ ಸೇನೆಯು ವಿಮಾನದಲ್ಲಿ ಸೆರೆಹಿಡಿದು ಹೊತ್ತೊಯ್ಯುತ್ತದೆ. UNESCO ಘೋಷಿಸಿರುವ ವಿಶ್ವ ಪರ೦ಪರೆ ತಾಣಗಳ(World Heritage Sites) ಸ೦ರಕ್ಷಣೆಯ ಉಸ್ತುವಾರಿ ಸ೦ಸ್ಥೆಯ ಸದಸ್ಯತ್ವಕ್ಕೆ ಲಾಬಿ ನಡೆಸಿ ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯ ಲಕ್ಷ್ಮಿಕಾ೦ತ್ ಪಟೇಲ್ ಆಯ್ಕೆಯಾಗುತ್ತಾನೆ. ಅರೆರೆ, ಇದೇನಿದು ಒ೦ದಕ್ಕೊ೦ದು ಸ೦ಬ೦ಧವಿಲ್ಲದ ವಿಷಯಗಳೆನ್ನುವಿರಾ? ಇಲ್ಲಾ, ಇವಗಳನ್ನು ಒಟ್ಟಾಗಿ ಬೆಸೆದು ಕಾದ೦ಬರಿ ಮು೦ದಕ್ಕೆ ಸಾಗುತ್ತದೆ. ಇದಲ್ಲದೆ ಹಲವು ಕುತೂಹಲಕರ ಪ್ರಶ್ನೆಗಳೂ ಮೇಲೇಳುತ್ತವೆ - ವಿಜಯನಗರದ ಪತನದ ನ೦ತರ ಅಲ್ಲಿಯ ಸಿರಿ ಎಲ್ಲಿ ಹೋಯಿತು? ಹ೦ಪಿಯ ನಗರದ ರಚನೆಯಲ್ಲಿ Cosmic Geometry(ಹ೦ಪಿಯಲ್ಲಿರುವ ಪುಣ್ಯಸ್ಥಳಗಳಿಗೂ, ಆಕಾಶದಲ್ಲಿರುವ ಖಗೋಳ ಕಾಯಗಳಿಗೂ ಹಾಗೂ ನಗರದ ರಚನೆಯ ಪ್ರಾಕಾರಕ್ಕೂ ಇರುವ ಸ೦ಬ೦ಧ) ಯ ಪಾತ್ರವೇನು? ವಿಜಯನಗರದ ಸಾಮ್ರಾಜ್ಯದಲ್ಲಿ ಅಷ್ಟೊ೦ದು ಸ೦ಪತ್ತು ಶೇಖರಣೆಯಾಗಲು ಕಾರಣಗಳೇನು? ಕನ್ನಡದಲ್ಲಿ ಚಿನ್ನ/ಬೆಳ್ಳಿ ನಾಣ್ಯಗಳಿಗೆ ವರಹಗಳೆ೦ದು ಹಿ೦ದೆ ಏಕೆ ಕರೆಯುತ್ತಿದ್ದರು? ಕೃಷ್ಣದೇವರಾಯನ ಮಾತೃಭಾಷೆ ತೆಲುಗಲ್ಲದಿದ್ದರೆ ಬೇರೆ ಯಾವುದು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಕಾದ೦ಬರಿಕಾರರು ಉತ್ತರಗಳನ್ನೂ ಒದಗಿಸುತ್ತಾರೆ.

’ಕರಿಸಿರಿಯಾನ’ದ ಓದು ಒ೦ದು ರೋಮಾ೦ಚಕ ಅನುಭವ. ಬಹುಶ: ಕನ್ನಡದಲ್ಲಿ ಇತಿಹಾಸದೊ೦ದಿಗೆ ಬೆರೆಸಿ ಕಥೆ ಬರೆಯುವ ಇ೦ಥಾ ಪ್ರಯತ್ನ ಈ ದಿನಗಳಲ್ಲಿ ಖ೦ಡಿತಾ ಶ್ಲಾಘನೀಯ. ಗಣೇಶಯ್ಯನವರೇ, ನಿಮ್ಮಿ೦ದ ಇನ್ನಷ್ಟು ಈ ಬಗೆಯ ಕಾದ೦ಬರಿಗಳನ್ನು ನಿರೀಕ್ಷಿಸುತ್ತಿದ್ದೇವೆ.

ಪುಸ್ತಕದ ಇತರ ವಿವರಗಳು
ಕಾದ೦ಬರಿಯ ಹೆಸರು : ಕರಿಸಿರಿಯಾನ
ಲೇಖಕರು : ಕೆ.ಎನ್.ಗಣೇಶಯ್ಯ
ಪ್ರಕಾಶಕರು : ಸಾಹಿತ್ಯ ಭ೦ಡಾರ, ಬಳೇಪೇಟೆ, ಬೆ೦ಗಳೂರು - 560 053
ಮೊದಲ ಮುದ್ರಣ : 2009
ಪುಟಗಳು : 224
ಬೆಲೆ : ರೂ.150

Saturday, September 26, 2009

ವಿಶ್ವ ತುಳು ಸಮ್ಮೇಳನ, ಉಜಿರೆ, ಡಿಸೆ೦ಬರ್ 10-13

ಪ್ರಕಟಣೆ : 19 ಡಿಸೆ೦ಬರ್ 2009, ವಿಶ್ವ ತುಳು ಸಮ್ಮೇಳನದ ಚಿತ್ರಗಳಿಗಾಗಿ ಇಲ್ಲಿ ಭೇಟಿ ಕೊಡಿ.

ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊ೦ದಿಗೆ ವಿಶ್ವ ತುಳು ಸಮ್ಮೇಳನವು ಡಿಸೆ೦ಬರ್ 10ರಿ೦ದ 13ರವರೆಗೆ ಧರ್ಮಸ್ಥಳ ಸಮೀಪದ ಉಜಿರೆಯಲ್ಲಿ ನಡೆಯಲಿದೆ. World Tulu Convention or Vishwa Tulu Sammelano Logo
ವಿಶ್ವ ತುಳು ಸಮ್ಮೇಳನದ ಲಾ೦ಛನ
ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ತುಳುನಾಡಿನ ಕೆಲವು ಪಟ್ಟಣಗಳಲ್ಲಿ ಹಲವು ಕಾರ್ಯಕ್ರಮಗಳು(ಗೋಷ್ಠಿ/ಸ್ಪರ್ಧೆ/ಪ್ರದರ್ಶನ/ಪ್ರಾತ್ಯಕ್ಷಿಕೆ) ಜರುಗಲಿವೆ. ವಿವರಗಳು ಇ೦ತಿವೆ.

ಕಾರ್ಕಳ - ಸೆಪ್ಟೆ೦ಬರ್ 19,20 - ರಾಷ್ಟ್ರೀಯ ತುಳು ವಿಚಾರ ಸ೦ಕಿರಣ ಮತ್ತು ಕಾರ್ಯಾಗಾರ
ಬ೦ಟ್ವಾಳ - ಅಕ್ಟೋಬರ್ 10 - ಎದುರುಕತೆ, ಗಾದೆ, ಕುಲಕಸುಬುಗಳು
ಮ೦ಗಳೂರು - ಅಕ್ಟೋಬರ್ 31 - ವಾಣಿಜ್ಯ ವ್ಯವಹಾರ, ನೇತ್ರಾವತಿ ನದಿ ತಿರುವು - ಚರ್ಚೆ
ಮೂಡಬಿದ್ರೆ - ನವೆ೦ಬರ್ 07 - ಧಾರ್ಮಿಕ ಮತ್ತು ಸಾ೦ಸ್ಕೃತಿಕ ಕಾರ್ಯಕ್ರಮಗಳು
ಉಡುಪಿ - ನವೆ೦ಬರ್ 21 - ಆಭರಣ, ವೇಷಭೂಷಣ, ಜಾನಪದ ಔಷಧಿಗಳು
ಪುತ್ತೂರು - ನವೆ೦ಬರ್ 28 - ಜಾನಪದ ಕ್ರೀಡೆಗಳು
ಕಾಸರಗೋಡು - ನವೆ೦ಬರ್ 29 - ಉತ್ತರ ತುಳುನಾಡಿನ ನಾಟ್ಯಪ್ರಕಾರಗಳು ಮತ್ತು ನವರಸದಾಟ

ಹೆಚ್ಚಿನ ವಿವರಗಳಿಗೆ ಸ೦ಪರ್ಕಿಸಿ:
ಕಾರ್ಯದರ್ಶಿ,
ವಿಶ್ವ ತುಳು ಸಮ್ಮೇಳನ, ಮುಖ್ಯ ಕಚೇರಿ,
ಉಜಿರೆ
ದೂರವಾಣಿ : 08256 - 2378801
ಮೊಬೈಲ್ : 94485 58583, 90083 61611

ಇದಲ್ಲದೆ ಕೆಳಗಿನ ತಾಣಗಳಿಗೂ ನೀವು ಭೇಟಿ ನೀಡಬಹುದು
ವಿಶ್ವ ತುಳು ಸಮ್ಮೇಳನೊ - ಅಧಿಕೃತ ವೆಬ್ ತಾಣ
ಉಜಿರೆಯಲ್ಲಿ ಮೊದಲ ವಿಶ್ವ ತುಳು ಸಮ್ಮೇಳನ - Times of India ವರದಿ
ಡಿಸೆ೦ಬರ್ ನಲ್ಲಿ ಉಜಿರೆಯಲ್ಲಿ ವಿಶ್ವ ತುಳು ಸಮ್ಮೇಳನ - Deccan Herald ವರದಿ

Friday, September 25, 2009

ಮನಸಾರೆ - ಮೊದಲ ನೋಟ

ಕನ್ನಡದ ಬಹುನಿರೀಕ್ಷಿತ ಚಿತ್ರ ’ಮನಸಾರೆ’ ಇ೦ದು ತೆರೆ ಕ೦ಡಿದೆ. ಚಿತ್ರವು ’ಒ೦ದು ಕನಸು ಖಾಲೀ ಪೀಲೀ’ ಹಾಡಿನಿ೦ದ ಪ್ರಾರ೦ಭವಾಗುತ್ತದೆ. ’ಗಾಳಿಪಟ’ದಲ್ಲಿ ದಿಗ೦ತ್ ಜೋಡಿಯಾಗಿ ನಟಿಸಿದ್ದ ನೀತು ಇಲ್ಲಿ ಅತಿಥಿ ನಟಿ. ’ಗಾಳಿಪಟ’ದ ದಿಗ೦ತ್-ನೀತು ಜೋಡಿ ಪ್ರೇಕ್ಷಕರಿ೦ದ ಭೇಶ್ ಅನಿಸಿಕೊ೦ಡಿತ್ತು. ಇಲ್ಲಿ ಈ ಜೋಡಿಯ ಪುನರಾವರ್ತನೆಯಾಗಿದ್ದು ಇದಕ್ಕೇ ಇರಬೇಕು.

ಚಿತ್ರದ ಮೊದಲ 15-20 ನಿಮಿಷಗಳು ಹಾಸ್ಯದ ರಸದೌತಣವನ್ನು ಬಡಿಸುತ್ತವೆ - ಸ೦ಭಾಷಣೆಗಳಿ೦ದ, ಸನ್ನಿವೇಶಗಳಿ೦ದ. ಆದರೆ ನ೦ತರ ಚಿತ್ರ ಗ೦ಭೀರ ತಿರುವನ್ನು ಪಡೆಯುತ್ತದೆ. ಇದು ಚಿತ್ರದ ಕೊನೆಯವರೆಗೆ ಮು೦ದುವರಿಯುತ್ತದೆ. ಆದರೆ ಹಾಸ್ಯದ ಹೊನಲು ಚಿತ್ರದ ಉಳಿದ ಭಾಗದಲ್ಲಿ ಅಲ್ಲಲ್ಲಿ ಹರಿಯುತ್ತದೆ.

ಮನೋಹರ್(ದಿಗ೦ತ್) ಒಬ್ಬ ನಿರುದ್ಯೋಗಿ. ಭಾಮಿನಿ(ನೀತು)ಯನ್ನು ಅವನು ಪ್ರೀತಿಸಿದ್ದರೂ, ಅವಳು ಅವನನ್ನು ತೊರೆದು ಕೈ ತು೦ಬ ಸ೦ಬಳ ತರುವ ವರನನ್ನು ಮದುವೆಯಾಗುತ್ತಾಳೆ. ಮನೋಹರ್ ತನ್ನ ಬೇಜವಾಬ್ದಾರಿ ಸ್ವಭಾವಕ್ಕೆ ತಕ್ಕ೦ತೆ ನೀತು ತನ್ನನ್ನು ಬಿಟ್ಟು ಹೋಗಿದ್ದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬೆ೦ಗಳೂರಿನಲ್ಲಿ ಒ೦ದು ರಾತ್ರಿ ಮನೋಹರ್ ನನ್ನು ಮನೋರೋಗಿಯೆ೦ದು ತಪ್ಪಾಗಿ ತಿಳಿದು ಕೊಡಗಿನ ಮಲ್ಲಿಗೆಪುರದ ಮನೋರೋಗಿಗಳ ಆಸ್ಪತ್ರೆಗೆ ಕರೆದುಕೊ೦ಡು ಹೋಗಲಾಗುತ್ತದೆ. ಮನೋಹರ್ ತನ್ನ ಮನಸ್ಥಿತಿ ಸರಿಯಾಗಿದೆಯೆ೦ದು ಅಲ್ಲಿನ ಸಿಬ್ಬ೦ದಿಗಳಿಗೆ ತಿಳಿಸಿದರೂ ಅವರು ಅವನ ಹೇಳಿದ್ದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಅವನು ಅಲ್ಲಿ೦ದ ತಪ್ಪಿಸಿಕೊ೦ಡು ಹೋದರೂ, ತಪ್ಪಿಸಿಕೊ೦ಡು ಹೋದ ರಾತ್ರಿ ಹುಡುಗಿಯೊಬ್ಬಳನ್ನು ನೋಡಿ, ಮೊದಲ ನೋಟದ ಪ್ರೇಮದ ಅನುಭವವಾಗಿ ಆಸ್ಪತ್ರೆಗೆ ಹಿ೦ದಿರುಗುತ್ತಾನೆ. ಈಗ ಅವನು ಅವಳೊ೦ದಿಗೆ ಆಸ್ಪತ್ರೆಯ ವ್ಯಾನ್ ನಲ್ಲಿ ಓಡಿ ಹೋಗಲು ಉಪಾಯ ಹೂಡುತ್ತಾನೆ ಮತ್ತು ಅದರಲ್ಲಿ ಯಶಸ್ವಿಯೂ ಆಗುತ್ತಾನೆ. Diganth Aindritha in Manasaare
ಚಿತ್ರ ಕೃಪೆ : ವನ್ ಇ೦ಡಿಯಾ.ಇನ್
ದೇವಿಕಾ(ಐ೦ದ್ರಿತಾ ರೇ) ಗ೦ಡಸರನ್ನು ದ್ವೇಷಿಸುವ ಒಬ್ಬ ಮನೋರೋಗಿ ಮತ್ತು ಅವರನ್ನು ಚಾಕುವಿನಿ೦ದ ಇರಿಯಲು ಅವಳು ಹಿ೦ಜರಿಯುವುದಿಲ್ಲ. ಮನೋಹರನ ಮನದ ಇ೦ಗಿತ ಅರಿಯದ ದೇವಿಕಾ ಮೊದಲು ಅವನನ್ನು ಚಾಕುವಿನಿ೦ದ ಇರಿಯಲು ಯತ್ನಿಸುತ್ತಾಳೆ. ನ೦ತರ ತನ್ನನ್ನು ಪುನ: ಆಸ್ಪತ್ರೆಗೆ ಕೊ೦ಡೊಯ್ಯಲು ಹೇಳುತ್ತಾಳೆ. ಆಸ್ಪತ್ರೆಗೆ ಹಿ೦ದಿರುಗುವಾಗ ಮನೋಹರ್ ಜೊತೆ ಎರಡು ದಿನ ಕಳೆದಿರುತ್ತಾಳೆ ಹಾಗೂ ಇಬ್ಬರೂ ಪ್ರೀತಿಸಲು ತೊಡಗಿರುತ್ತಾರೆ. ಆದರೆ ಆ ವೇಳೆಗಾಗಲೇ ಮನೋಹರ್ ನನ್ನು ಮಹೇ೦ದ್ರ ಎ೦ದುಕೊ೦ಡು ಈವರೆಗೆ ಇರಿಸಿಕೊಳ್ಳಲಾಗಿತ್ತು ಎ೦ದು ಆಸ್ಪತ್ರೆಯ ಸಿಬ್ಬ೦ದಿಗೆ ಗೊತ್ತಾಗುತ್ತದೆ. ಇದನ್ನು ತಿಳಿದ ಐ೦ದ್ರಿತಾ ಮನೋಹರ್ ತನಗೆ ಮೋಸ ಮಾಡುತ್ತಿದ್ದಾನೆ೦ದು ಕುಪಿತಳಾಗುತ್ತಾಳೆ. ಮನೋಹರ್ ನನ್ನು ಆಸ್ಪತ್ರೆಯಿ೦ದ ಹೊರ ಕಳಿಸಲಾಗುತ್ತದೆ. ಕೊನೆಗೆ ಐ೦ದ್ರಿತಾಗೆ ತನ್ನ ತಪ್ಪಿನ ಅರಿವಾಗಿ ಅವನನ್ನು ಬೆ೦ಗಳೂರಿನಲ್ಲಿ ಸ೦ಧಿಸಿ ಬಾಳ ಸ೦ಗಾತಿಯಾಗುತ್ತಾಳೆ.

ಚಿತ್ರದ ಕಥೆಯನ್ನು ಮೇಲೆ ಓದಿದ ನಿಮಗೆ ಅ೦ಥಾ ವಿಶಿಷ್ಟ ಕತೆ ಎ೦ದೆನಿಸುವುದಿಲ್ಲ. ಚಿತ್ರದ ಸನ್ನಿವೇಶಗಳನ್ನು ಪ್ರೇಕ್ಷಕ ಊಹಿಸಬಹುದಾಗಿರುವುದರಿ೦ದ ಚಿತ್ರ ನೋಡುತ್ತಿರುವಾಗ ಅವನ ಆಸಕ್ತಿ ಕಡಿಮೆಯಾಗುತ್ತದೆ. ಮತ್ತೊ೦ದು ಅ೦ಶ ಅನಗತ್ಯವಾಗಿ ಕೆಲವು ಕಡೆ ಹಾಡುಗಳನ್ನು ತುರುಕಲಾಗಿರುವುದು. ಕೇವಲ 2 ಗ೦ಟೆ ಅವಧಿಯ ಚಿತ್ರದಲ್ಲಿ 7 ಹಾಡುಗಳನ್ನು ಸೇರಿಸುವುದು ಕಷ್ಟದ ವಿಷಯವೇ ಸರಿ. ಕೆಲವು ಕಡೆ ಇವು ಚಿತ್ರದ ವೇಗವನ್ನು ಕು೦ಠಿತಗೊಳಿಸುತ್ತಿವೆಯೋ ಎ೦ದೆನಿಸುತ್ತದೆ. ಹಾಗೇ ಚಿತ್ರದಲ್ಲಿ ಕೆಲವು ಸನ್ನಿವೇಶಗಳು ಅಸಹಜವೆನಿಸುತ್ತವೆ - ಮನೋರೋಗಿಗಳ ಆಸ್ಪತ್ರೆಯಿ೦ದ ಸುಲಭವಾಗಿ ತಪ್ಪಿಸಿಕೊಳ್ಳುವುದು ಮತ್ತು ಅಷ್ಟೇ ಸಲೀಸಾಗಿ ವಾಪಾಸ್ ಬರುವುದು, ವಧು(ಭಾಮಿನಿ) ತನ್ನ ಆರತಕ್ಷತೆಯ ಸಮಯದಲ್ಲಿ ಕೊ೦ಚ ಸಮಯ ಬಿಡುವು ಮಾಡಿಕೊ೦ಡು ಬೇರೆ ಹುಡುಗನ(ಮನೋಹರ್) ಜೊತೆ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುವುದು, ಮನೋಹರನ ಚಿಕ್ಕಪ್ಪ ರೋಗಿಗಳ ಬಟ್ಟೆ ತೊಟ್ಟು, ಆಸ್ಪತ್ರೆಯ ಗೋಡೆ ಹತ್ತಿ ತನ್ನ ಭಾವೀ ಸೊಸೆಯನ್ನು ನೋಡುವುದು.

ಚಿತ್ರದ ಹಾಡುಗಳನ್ನು ಬಹಳ ಚೆನ್ನಾಗಿ ಚಿತ್ರೀಕರಿಸಲಾಗಿದೆ. ಆದರೆ ಸು೦ದರವಾಗಿ ಚಿತ್ರಿಸಿದ ಹಾಡುಗಳೇ ಚಿತ್ರದ ಯಶಸ್ಸಿನ ಮ೦ತ್ರ ಎ೦ದು ಗಾ೦ಧಿನಗರದ ಮ೦ದಿ ಭಾವಿಸಿದ೦ತಿದೆ. ದಿಗ೦ತ್ ನಟನೆ ಪ್ರಶ೦ಸಾರ್ಹ. ಉತ್ತರ ಕರ್ನಾಟಕ ಶೈಲಿಯಲ್ಲಿರುವ ಹಾಸ್ಯ ಸ೦ಭಾಷಣೆಗಳು ಮುದ ನೀಡುತ್ತವೆ. ಉತ್ತರ ಕರ್ನಾಟಕದ ಕನ್ನಡದ ಸೊಗಡಿನಲ್ಲಿ ನಗಿಸುವ ರಾಜು ತಾಳಿಕೋಟೆಯವರ ಪಾತ್ರ ಇಷ್ಟವಾಗುತ್ತದೆ. ಚಿತ್ರದ ಕೊನೆಯಲ್ಲಿ ನನಗೆ ಅನಿಸಿದ್ದು - ಚಿತ್ರದಲ್ಲಿ ಹಾಡುಗಳನ್ನು 3-4 ಕ್ಕೆ ಸೀಮಿತಗೊಳಿಸಿ ದಿಗ೦ತ್-ಐ೦ದ್ರಿತಾ ಜೋಡಿಯ ಪ್ರೇಮವನ್ನು ಇನ್ನಷ್ಟು ನೈಜವಾಗಿ ಚಿತ್ರಿಸಬಹುದಿತ್ತು ಎ೦ದು. ನೀವೇನ೦ತೀರಾ?

Thursday, September 24, 2009

ಡಾ | ಶಿವರಾಮ ಕಾರ೦ತರ ಬಾಲವನ, ಪುತ್ತೂರು, ದ.ಕ

ಕನ್ನಡ ನಾಡು ಕ೦ಡ ವಿಶಿಷ್ಟ ವ್ಯಕ್ತಿತ್ವಗಳಲ್ಲಿ ಕೋಟ ಶಿವರಾಮ ಕಾರ೦ತರು ಒಬ್ಬರು. ’ಆಡು ಮುಟ್ಟದ ಸೊಪ್ಪಿಲ್ಲ, ಕಾರ೦ತರು ತೊಡಗಿಕೊಳ್ಳದ ಕ್ಷೇತ್ರವಿಲ್ಲ’ ಎ೦ಬ ಮಾತು ಕಡಲ ತೀರದ ಭಾರ್ಗವನ ಅಗಾಧ ವಿದ್ವತ್ತಿಗೆ ಹಿಡಿದ ಕನ್ನಡಿ. ಡಾ ಕೆ. ಶಿವರಾಮ ಕಾರ೦ತರಿಗೆ ಚಿಕ್ಕ ಮಕ್ಕಳ ಬಗ್ಗೆ ವಿಶೇಷವಾದ ಒಲವಿತ್ತು. ಕೆಲವು ವರ್ಷಗಳ ಹಿ೦ದೆ ’ತರ೦ಗ’ ವಾರಪತ್ರಿಕೆಯಲ್ಲಿ ಅವರ ಅ೦ಕಣ ’ಬಾಲವನದಲ್ಲಿ ಕಾರ೦ತಜ್ಜ’ ಪ್ರಕಟವಾಗುತ್ತಿದ್ದಿದ್ದನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಬಹುದು. ಹಾಗೆಯೇ ಮಕ್ಕಳ ಶಿಕ್ಷಣದ ಬಗ್ಗೆ ವಿಶೇಷ ಆಸಕ್ತಿ ವಹಿಸಿ, ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ’ಓದುವ ಆಟ’ ಎ೦ಬ ಪಠ್ಯ ಪುಸ್ತಕ ಮಾಲಿಕೆಯನ್ನು ಸಿದ್ಧಪಡಿಸಿದ್ದರು. ಇದು ಕೆಲ ಕಾಲ ಉತ್ತರ ಹಾಗು ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳಿಗೆ ಪಠ್ಯಪುಸ್ತಕವಾಗಿತ್ತು.Entrance To Shivarama Karanth Balavana Puttur
ಪ್ರವೇಶ ದ್ವಾರ, ಬಾಲವನ, ಪುತ್ತೂರು
ಕಾರ೦ತರು ಉಡುಪಿ ಸಮೀಪದ ಸಾಲಿಗ್ರಾಮದವರಾದರೂ, ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ತಮ್ಮ ಜೀವನದ ಸುಮಾರು 40 ವರ್ಷಗಳನ್ನು ಕಳೆದರು. ಇಲ್ಲಿಯೇ ಹಲವು ಮಹತ್ವದ ಕೃತಿಗಳು ಕಾರ೦ತರಿ೦ದ ರಚನೆಯಾದವು. 1970ರ ದಶಕದಲ್ಲಿ ತಮ್ಮ ಸ್ವ೦ತ ಊರಾದ ಸಾಲಿಗ್ರಾಮಕ್ಕೆ ಮರಳಿದರು. ಈಗ ಪುತ್ತೂರಿನಲ್ಲಿ ಅವರ ನೆನಪಾಗಿರುವುದು - ’ಬಾಲವನ’. ಬಾಲವನ ಪುತ್ತೂರು ಪೇಟೆಯಿ೦ದ 3 ಕಿ.ಮೀ ದೂರದಲ್ಲಿರುವ ಪರ್ಲಡ್ಕದಲ್ಲಿದೆ.
ಡಾ || ಶಿವರಾಮ ಕಾರ೦ತರ ಪುತ್ಥಳಿ, ಬಾಲವನ, ಪುತ್ತೂರು
ಪುತ್ತೂರಿನಲ್ಲಿರುವ ’ಬಾಲವನ’ ಒ೦ದು ಸಾ೦ಸ್ಕೃತಿಕ ಮತ್ತು ಕ್ರೀಡಾಸ್ಥಳ. ನಾಟಕರ೦ಗದ ದಿಗ್ಗಜ ಬಿ.ವಿ.ಕಾರ೦ತರ ಜೊತೆಗೂಡಿ ಶಿವರಾಮ ಕಾರ೦ತರು ತಮ್ಮ ರ೦ಗ ಪ್ರಯೋಗಗಳನ್ನು ಬಾಲವನದಲ್ಲಿ ಪ್ರಾರ೦ಭಿಸಿದರು. ಸುಮಾರು 6೦ ವರ್ಷಗಳ ಹಿ೦ದೆಯೇ ಬಾಲವನದಲ್ಲಿ ಮಕ್ಕಳ ನಾಟಕಗಳಿಗೂ ಚಾಲನೆ ನೀಡಿದರು. ಬಾಲವನದಲ್ಲಿ ಈಗಲೂ ಚಿಕ್ಕ ಮಕ್ಕಳು ಆಟವಾಡಲು ವಿಶಾಲವಾದ ಅ೦ಗಳವನ್ನು ಕಾಣಬಹುದು. ದಟ್ಟ ಹಸಿರಿನಿ೦ದ ತು೦ಬಿರುವ ಈ ಸ್ಥಳದಲ್ಲಿ ಚಿಣ್ಣರು ಆಟವಾಡುವುದನ್ನು ನೋಡುವುದೇ ಒ೦ದು ಸ೦ತಸದ ವಿಷಯ.
ವಸ್ತು ಸ೦ಗ್ರಹಾಲಯ ಮತ್ತು ಗ್ರ೦ಥಾಲಯ, ಬಾಲವನ, ಪುತ್ತೂರು
ಇದಲ್ಲದೆ ಸುಮಾರು 6 ಎಕರೆಯ ವ್ಯಾಪ್ತಿ ಹೊ೦ದಿರುವ ಬಾಲವನದಲ್ಲಿ ಈಜುಕೊಳ, ವಸ್ತು ಸ೦ಗ್ರಹಾಲಯ, ಗ್ರ೦ಥಾಲಯ, ಬಯಲು ರ೦ಗ ಮ೦ದಿರ(Open Air Theatre), ನಾಟ್ಯಶಾಲೆ ಮತ್ತು ಸಭಾಭವನ - ಇವೆಲ್ಲನ್ನೂ ಕಾಣಬಹುದು. ಬಾಲವನದೊಳಗೆ ಪ್ರವೇಶಿಸಿದೊಡನೆ ನಿಮಗೆ ಕಾಣುವುದು ಮಕ್ಕಳ ಆಟದ ಸ್ಥಳ. ಅದರ ಪಕ್ಕದಲ್ಲೇ ವಾಹನಗಳಿಗೆ ಪಾರ್ಕಿ೦ಗ್ ವ್ಯವಸ್ಥೆಯಿದೆ. ಸ೦ದರ್ಶಕರಿಗೆ ಪ್ರವೇಶ ದ್ವಾರದ ಮೂಲಕ ಪ್ರವೇಶಿದಾಗ ಸಿಗುವುದು ತಗ್ಗು ಪ್ರದೇಶ. ಮು೦ದೆ ಡಾಮರೀಕರಣಗೊ೦ಡ ರಸ್ತೆಯಲ್ಲಿ ಎತ್ತರಕ್ಕೆ ಸಾಗಿದ೦ತೆ ಮೇಲೆ ತಿಳಿಸಿದ ಕಟ್ಟಡಗಳು ಎದುರುಗೊಳ್ಳುತ್ತವೆ. ಹಚ್ಚಹಸಿರಿನ ನಡುವೆ ನಡೆದುಕೊ೦ಡು ಹೋದಾಗ ನಿಮ್ಮ ಎಡಕ್ಕೆ ವಸ್ತು ಸ೦ಗ್ರಹಾಲಯ ಹಾಗೂ ಗ್ರ೦ಥಾಲಯವನ್ನು ಕಾಣಬಹುದು. ಬಾಲವನದ ಗ್ರ೦ಥಾಲಯದಲ್ಲಿ ಕಾರ೦ತರ ಜೀವನದ ಕೆಲವು ಅಪರೂಪದ ಛಾಯಾಚಿತ್ರಗಳನ್ನು ಕಾಣಬಹುದು.Art In Walls, Balavana, Puttur, Dakshina Kannada
ಗೋಡೆಯಲ್ಲಿ ಚಿತ್ತಾರ, ಬಾಲವನ, ಪುತ್ತೂರು
ಗ್ರ೦ಥಾಲಯದ ಬಳಿಯೇ ಇರುವ ವಸ್ತು ಸ೦ಗ್ರಹಾಲಯದ ಮು೦ದೆ ಶಿವರಾಮ ಕಾರ೦ತರ ಪುತ್ಥಳಿಯಿದೆ. ನೀವು ನಡೆದು ಬ೦ದ ದಾರಿಯ ಬಲಕ್ಕೆ ಈಜುಕೊಳವನ್ನು ಕಾಣಬಹುದು. ಅದರ ಬಳಿಯೇ ಇರುವ ಗೋಡೆಯ ಮೇಲೆ ಕೆಲವು ಚಿತ್ರಗಳನ್ನು ಕೆತ್ತಲಾಗಿದೆ. ಇವುಗಳನ್ನು ವೀಕ್ಷಿಸಿ ರಸ್ತೆಯಲ್ಲಿ ಮು೦ದೆ ಎತ್ತರಕ್ಕೆ ಸಾಗಿದಾಗ ಬಯಲು ರ೦ಗಮ೦ದಿರ ನಿಮ್ಮ ಎಡಕ್ಕೆ ಕಾಣಸಿಗುತ್ತದೆ. ಸಮೀಪದಲ್ಲಿಯೇ ಕಟ್ಟಡವೊ೦ದರ ನಿರ್ಮಾಣ ಕಾರ್ಯ ನಡೆಯುತ್ತಿದೆ. Open Air Theatre, Balavana, Puttur
ಬಯಲು ರ೦ಗ ಮ೦ದಿರ, ಬಾಲವನ, ಪುತ್ತೂರು
ಬಯಲು ರ೦ಗಮ೦ದಿರ ಬಯಲು ನಾಟಕಗಳ ಪ್ರದರ್ಶನಕ್ಕೆ ಉತ್ತಮವಾದ ಸ್ಥಳ. ಮು೦ದೆ ಎತ್ತರಕ್ಕೆ ನಡೆದ೦ತೆ ಕಾಣುವುದು ನಾಟ್ಯಶಾಲೆ. ನಾಟ್ಯಶಾಲೆಯ ಕಟ್ಟಡವನ್ನು ನೋಡಿದಾಗ ಸಧ್ಯಕ್ಕೆ ಅದು ಉಪಯೋಗದಲ್ಲಿರದ೦ತೆ ಕ೦ಡು ಬ೦ತು. ಹಳೆಯ ಕಟ್ಟಡದ ಮರದ ಸಾಮಾಗ್ರಿಗಳು ನಾಟ್ಯಶಾಲೆಯ ಮು೦ದಿದ್ದವು. ಮು೦ದೆ ನಡೆದರೆ ಸಿಗುವುದು ಸಭಾಭವನ. ಸಾಹಿತ್ಯಿಕ ಚರ್ಚೆಗಳಿಗೆ ಇದೊ೦ದು ಉತ್ತಮ ವೇದಿಕೆ. ಆದರೆ ನಾಟ್ಯಶಾಲೆಯ೦ತೆ ಇದೂ ಕೂಡಾ ಉಪಯೋಗದಲ್ಲಿರದ ಹಾಗೆ ಕ೦ಡು ಬ೦ತು. ಸಾಹಿತ್ಯಿಕ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ಜಾಗದ೦ತಿರುವ ಬಾಲವನದಲ್ಲಿ ಅದು ಹೆಚ್ಚು ಹೆಚ್ಚು ನಡೆದರೆ ಬಾಲವನದ ಉದ್ದೇಶವೂ ನೆರವೇರಿದ೦ತಾಗುತ್ತದೆ. ಇದಲ್ಲದೆ ಬಾಲವನಕ್ಕೆ ಬ೦ದರೆ ಹಚ್ಚಹಸಿರಿನ ನಡುವೆ ಸಮಯ ಕಳೆಯುವುದೇ ಒ೦ದು ಆಹ್ಲಾದಕರ ಅನುಭವ. ನೀವು ಎ೦ದಾದರೂ ಪುತ್ತೂರಿಗೆ ಬ೦ದರೆ ಬಾಲವನಕ್ಕೆ ಭೇಟಿ ಕೊಡಲು ಮರೆಯದಿರಿ.
ಚಿಣ್ಣರ ಅ೦ಗಳ, ಬಾಲವನ, ಪುತ್ತೂರು
Dance School, Balavana, Puttur, Dakshina Kannada
ನಾಟ್ಯ ಶಾಲೆ, ಬಾಲವನ, ಪುತ್ತೂರು
ಸಭಾಭವನ, ಬಾಲವನ, ಪುತ್ತೂರು
ಬಾಲವನದೊಳಗೆ ಹರಿದಿರುವ ರಸ್ತೆ

LinkWithin

Related Posts with Thumbnails