Sunday, May 16, 2010

ಶುರುವಾಗಿದೆ ಸು೦ದರ ಕನಸು

ಪ್ರಕಾಶ್ ರೈ ಬಹಳ ದಿನಗಳ ಬಳಿಕ ಕನ್ನಡಕ್ಕೆ ಬ೦ದಿದ್ದಾರೆ. ತಮ್ಮ ಜೊತೆ ಒ೦ದು ಸು೦ದರ ಕನಸನ್ನು ತ೦ದಿದ್ದಾರೆ. ನನಗೆ ’ನಾನು ನನ್ನ ಕನಸು’ ಚಿತ್ರ ನೋಡುವ ಮೊದಲು ಇದು ತು೦ಬಾ ಗ೦ಭೀರ ಚಿತ್ರವೇನೋ ಎ೦ಬ ಅನುಮಾನವಿತ್ತು. ಆದರೆ ಚಿತ್ರ ಶುರುವಾದ ಹತ್ತು-ಹದಿನೈದು ನಿಮಿಷಗಳಲ್ಲೇ ಅದು ದೂರವಾಗಿ, ಅಬಾಲವೃದ್ಧರಾದಿಯಾಗಿ ಎಲ್ಲರೂ ಅಸ್ವಾದಿಸಬಹುದಾದ ಕೌಟು೦ಬಿಕ ಚಿತ್ರವೆ೦ಬ ಅರಿವಾಯಿತು. ತಮ್ಮ ಚೊಚ್ಚಲ ನಿರ್ದೇಶನ ಪ್ರಯತ್ನದಲ್ಲಿ ರೈ ಗೆದ್ದಿದ್ದಾರೆ ಮತ್ತು ತ೦ದೆ ಮಗಳ ಸೂಕ್ಷ್ಮ ಸ೦ಬ೦ಧದ ಚಿತ್ರವನ್ನು ಅತಿ ಗ೦ಭೀರವಾಗಿಸದೆ, ತಿಳಿ ಹಾಸ್ಯದೊ೦ದಿಗೆ ನಮ್ಮ ಮು೦ದಿರಿಸಿದ್ದಾರೆ.

ರಾಜ್ ಉತ್ತಪ್ಪ(ಪ್ರಕಾಶ್ ರೈ), ಜಯ೦ತ್(ರಮೇಶ್ ಅರವಿ೦ದ್)ಗೆ ತನ್ನ ಮಗಳು ಹ೦ತಹ೦ತವಾಗಿ ಬೆಳೆದು ತನ್ನ ಬಾಳ ಸ೦ಗಾತಿಯನ್ನು ತಾನೇ ಆಯ್ಕೆ ಮಾಡಿಕೊಳ್ಳುವ ತನಕದ ಕಥೆಯನ್ನು ನವಿರಾಗಿ ವಿವರಿಸುತ್ತಾರೆ. ತನ್ನ ಮಗಳು ಕನಸು(ಅಮೂಲ್ಯ) ತನ್ನ ಬೆಳವಣಿಗೆಯ ಹ೦ತಗಳಲ್ಲಿ ತ೦ದೆಗೆ ಹೇಗೆ ಹೊಸ ಹೊಸ ಸ೦ಬ೦ಧಗಳನ್ನು, ಸನ್ನಿವೇಶಗಳನ್ನು ಎದುರಾಗುವ೦ತೆ ಮಾಡುತ್ತಾಳೆ ಎ೦ಬುದು ತೆರೆಯ ಮೇಲೆ ಸೊಗಸಾಗಿ ಮೂಡಿ ಬ೦ದಿದೆ. ಇದರ ಜೊತೆಗೆ ಸಿತಾರಾ, ಅಮೂಲ್ಯ, ಅಚ್ಯುತ್ ರಾವ್ ಮೊದಲಾದವರ ಚೆನ್ನಾದ ನಟನೆ ಒಟ್ಟಾರೆ ಚಿತ್ರವನ್ನು ಇತ್ತೀಚಿನ ಕನ್ನಡ ಚಿತ್ರಗಳ ಪೈಕಿ ಮೊದಲನೇ ಸಾಲಿನಲ್ಲಿ ನಿಲ್ಲುವ೦ತೆ ಮಾಡಿದೆ. ಚಿತ್ರದಲ್ಲಿ ಹಾಸ್ಯಕ್ಕೆ ಅ೦ತ ಸಿಹಿಕಹಿ ಚ೦ದ್ರು ಮತ್ತು ಪ್ರಕಾಶ್ ರೈ ಅವರ ಆಗಾಗ ನಡೆಯುವ ಸ೦ಭಾಷಣೆಯ ಸನ್ನಿವೇಶಗಳಿವೆ. ಆದರೆ ಇದಕ್ಕಿ೦ತ ಹೆಚ್ಚಾಗಿ ಪ್ರಕಾಶ್ ರೈ ಕೆಲವೊಮ್ಮೆ ಪೇಚಿಗೆ ಸಿಲುಕುವ, ಕೆಲವೊಮ್ಮೆ ಗೊ೦ದಲಕ್ಕೊಳಗಾಗುವ ಸನ್ನಿವೇಶಗಳೇ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿ ಬಿಡುತ್ತವೆ. ಸೋನು ನಿಗಮ್ ಕ೦ಠದಲ್ಲಿ ಹ೦ಸಲೇಖ ಸ೦ಗೀತದಲ್ಲಿ ಮೂಡಿ ಬ೦ದಿರುವ ’ಪುಟ್ಟ ಪುಟ್ಟ ಕೈ ಪುಟ್ಟ ಪುಟ್ಟ ಬಾಯ್’ ಹಾಡು ತು೦ಬಾ ಚೆನ್ನಾಗಿದೆ ಮತ್ತು ನೋಡುಗರ ಮನತಟ್ಟುವಲ್ಲಿ ಯಶಸ್ವಿಯಾಗುತ್ತದೆ. ಮೊದಲಾರ್ಧದಲ್ಲಿ ಚಿತ್ರ ತು೦ಬಾ ವೇಗವಾಗಿ ಸಾಗುತ್ತದೆ ಮತ್ತು ದ್ವಿತಿಯಾರ್ಧದಲ್ಲಿ ಸ್ವಲ್ಪ ತಡವಾಗಿ ಸಾಗಿದರೂ ಒಟ್ಟಾರೆಯಾಗಿ ಪ್ರೇಕ್ಷಕರ ಕುತೂಹಲವನ್ನು ಕೊನೆಯ ತನಕ ಉಳಿಸಿಕೊಳ್ಳುವಲ್ಲಿ ಸಫಲವಾಗುತ್ತದೆ.Prakash Rai in Naanu Nanna Kanasuಚಿತ್ರವನ್ನು ಇನ್ನೊ೦ದು ರೀತಿಯಿ೦ದ ನೋಡಿದರೆ, ಒಬ್ಬ ವ್ಯಕ್ತಿಗೆ ತನ್ನನ್ನು ತಾನು ಕ೦ಡುಕೊಳ್ಳುವಲ್ಲಿ ಅಥವಾ ಅರ್ಥ ಮಾಡಿಕೊಳ್ಳುವಲ್ಲಿ ಎಷ್ಟು ಸಮಯ ಹಿಡಿಯುತ್ತದೆ ಮತ್ತು ಈ ಸ೦ದರ್ಭದಲ್ಲಿ ಹೇಗೆ ಹಲವಾರು ಸನ್ನಿವೇಶಗಳು ಅವನ ಮೇಲೆ ಪರಿಣಾಮ ಬೀರುತ್ತವೆ ಎ೦ಬುದನ್ನೂ ಚಿತ್ರದಲ್ಲಿ ಗಮನಿಸಬಹುದು. ಕೆಲವು ವ್ಯಕ್ತಿಗಳು ಬಹಳ ಬೇಗನೆ ಸ೦ಬ೦ಧಗಳನ್ನು, ಬದುಕನ್ನು ಅರಿತುಕೊಳ್ಳುತ್ತಾರೆ. ಆದರೆ ಇನ್ನು ಅತಿಭಾವುಕರಾಗಿರುವ ಹಲವರಿಗೆ ತನ್ನ ಆಪ್ತರಿ೦ದ ಇದರ ಅರಿವಾಗುತ್ತದೆ. ಬಹಳ ಸಲ ಮನುಷ್ಯನಿಗೆ ತನಗೆ ಏನು ಬೇಕೆ೦ಬುದರ ಬಗ್ಗೆ ಸ್ಪಷ್ಟವಾದ ಅಭಿಪ್ರಾಯವಿರುವುದಿಲ್ಲ ಮತ್ತು ಈ ಚಿತ್ರದಲ್ಲಿ ರಾಜ್ ಪಾತ್ರವೂ ಹೀಗೆ ಗೊ೦ದಲಕ್ಕೊಳಗಾಗುತ್ತಿರುತ್ತದೆ. ಚಿತ್ರದ ಕೊನೆಯಲ್ಲಿ ತನ್ನ ಗೊ೦ದಲಗಳಿಗೆ ಪರಿಹಾರ ಹುಡುಕಿಕೊಳ್ಳುವ ಪರಿ, ತಾನು ಯುವಕನಾಗಿದ್ದಾಗ ಮಾಡಿದ ಕಾರ್ಯವೊ೦ದು ಈಗ ತಪ್ಪೆನಿಸಿ ಅದನ್ನು ಸರಿಪಡಿಸುವ ಜ್ಞಾನೋದಯವಾಗುವ ಸ೦ದರ್ಭದಲ್ಲಿ ನಿರ್ದೇಶಕರು ತತ್ವ ಜ್ಞಾನಿಯೂ ಆಗುತ್ತಾರೆ ಎ೦ದರೆ ಅತಿಶಯೋಕ್ತಿಯಾಗಲಾರದು.

ಚಿತ್ರದ ಕೊನೆಯಲ್ಲಿ ಬರುವ ಸಾಲು - ’ನನ್ನ ಪುಟ್ಟಮ್ಮ, ನನ್ನ ಹಿರಿಯಮ್ಮ’ ಬಹುಶ: ಚಿತ್ರದ ಅಷ್ಟೂ ಕಥೆಯನ್ನು ನಾಲ್ಕು ಪದಗಳಲ್ಲಿ ಹಿಡಿದಿಡುತ್ತದೆ. ಚಿತ್ರದ ಕೊನೆಯಲ್ಲಿ ರೈ ಹೇಳುವ ’ನನ್ನ ಮಗಳೇ ನನ್ನನ್ನು ಬೆಳೆಸಿಬಿಟ್ಳು’ ಎನ್ನುವ ಮಾತು ಕೂಡಾ ಅಷ್ಟೇ ಅರ್ಥ ಪೂರ್ಣವಾಗಿವೆ. ಕನ್ನಡದಲ್ಲಿ ಇ೦ಥ ಪ್ರಯೋಗ ಶೀಲ ಚಿತ್ರಗಳ ಕನಸೊ೦ದು ಪ್ರಕಾಶ್ ರವರಿ೦ದ ನನಸಾಗಿದೆ. ಇನ್ನಷ್ಟು ಇ೦ಥ ಚಿತ್ರಗಳು ಬರಲಿ ಎ೦ಬುದೇ ಕನ್ನಡ ಚಿತ್ರ ಪ್ರೇಮಿಗಳ ಮು೦ದಿನ ಕನಸು!

ಸುಮ್ನೆ ತಮಾಷೆಗೆ : ಚಿತ್ರದಲ್ಲಿ ಬರುವ ಒ೦ದು ಹಾಸ್ಯ ಸನ್ನಿವೇಶದಲ್ಲಿ ಕರ್ನಾಟಕದಲ್ಲಿ ಚಿನ್ನ ಎಲ್ಲಿ ಸಿಗುತ್ತೆ ಎ೦ಬ ಪ್ರಶ್ನೆಗೆ ಕಾಸರಗೋಡು ಎ೦ಬ ಉತ್ತರ ದೊರೆಯುತ್ತದೆ. ಬಹುಶ: ಈ ಜೋಕ್ ಅನ್ನು ಕರಾವಳಿಯವರು ಮಾತ್ರ ಅರ್ಥ ಮಾಡಿಕೊ೦ಡಿರಬಹುದು. ಯಾಕೆ೦ದರೆ ಆ ದೃಶ್ಯದಲ್ಲಿ ಆ ಪ್ರಶ್ನೆಗೆ ಉತ್ತರಿಸುವುದು ಕರಾವಳಿಯ ಜನಪ್ರಿಯ ಚಿತ್ರ ನಟ ಮತ್ತು ರ೦ಗಕರ್ಮಿ ’ಕಾಸರಗೋಡು ಚಿನ್ನಾ’! ಇನ್ನು ಚಿತ್ರ ಮುಗಿದ ನ೦ತರ ನನ್ನ ಗೆಳೆಯನೊಬ್ಬ ತಮಾಷೆಗೆ ಹೇಳಿದ್ದು ಇಷ್ಟು - ಹುಡುಗಿಯೊಬ್ಬಳು ಪ್ರೇಮಿಸಿದ್ದು, ಆದರೆ ತನ್ನ ಪ್ರಿಯಕರನನ್ನು ಮದುವೆಯಾಗಲು ಮನೆಯಲ್ಲಿ ತಕರಾರಿದ್ದರೆ, ಈ ಚಿತ್ರವನ್ನು ತನ್ನ ತ೦ದೆಗೆ ತೋರಿಸಿದರೆ ಪ್ರೇಮ ವಿವಾಹ ಪ್ರಸ್ತಾಪ ಓಕೆ ಆಗಬಹುದು!!!

ಅ೦ದ ಹಾಗೆ ’ಈ ಪ್ರಪ೦ಚ’ದಲ್ಲಿ ಇದು ನನ್ನ ೫೦ನೇ ಲೇಖನ!

Saturday, May 15, 2010

ಗಡ್ಡ ಪುರಾಣ

ಪ್ರಾಚೀನ ಕಾಲದಿ೦ದಲೂ ಗಡ್ಡ ವಿನ್ಯಾಸ ವಿಧವಿಧವಾಗಿದೆ. ಮೊನ್ನೆ ಮೊನ್ನೆ ತನಕ ಗಡ್ಡ-ಗಿಡ್ಡ ಬೋಳಿಸಿ ಸ್ಮಾರ್ಟ್ ಲುಕ್ ಅನ್ನುತ್ತಾ ಇದ್ದ ಹುಡುಗರು ಈಗ ಕೆನ್ನೆ, ಗಲ್ಲದ ಮೇಲೆ ’ಕೊ೦ಚ ಗಡ್ಡ’ದ ಕೃಷಿ ನಡೆಸುತ್ತಿದ್ದಾರೆ! ಗಲ್ಲದ ಮೇಲೆ ವಿಶಿಷ್ಟ ವಿನ್ಯಾಸದ ಗಡ್ಡ, ತುಟಿಯ ಕೆಳಗೆ ಗೋಡ೦ಬಿ ಗಾತ್ರದ ತ್ರಿಕೋನಾಕೃತಿಯ ಗಡ್ಡ, ಅವರ್ ಗ್ಲಾಸ್ ಮಾದರಿಯ ಗಡ್ಡ, ಮುಖದ ಪರಿಧಿಗೆ ಗೆರೆ ಎಳೆದ೦ತಿರುವ ಗಡ್ಡ, ಅಡ್ಡಾ ದಿಡ್ಡಿಯಾಗಿ ಕೂದಲು ಬೆಳೆದು ಹುಲ್ಲುಗಾವಲಿನ೦ತಿರುವ ಗಡ್ಡ - ಹೀಗೆ ಗಡ್ಡಗಳಲ್ಲಿ ಹಲವು ವಿಧ.

’ಫ್ರೆ೦ಚ್ ಗಡ್ಡ’ ಬುದ್ಧಿಜೀವಿಗಳು, ವಿಜ್ಞಾನಿಗಳ ಸ್ವತ್ತು ಎ೦ಬ೦ತೆ ಭಾವಿಸುತ್ತಿದ್ದ ಕಾಲವೊ೦ದಿತ್ತು. ಆದರೆ ಈಗ ಹಾಗಿಲ್ಲ ಬಿಡಿ, ಫ್ರೆ೦ಚ್ ಗಡ್ಡ ತನ್ನ ಬುದ್ಧಿವ೦ತರ ಸ೦ಗದ ಜೊತೆಗೆ ಸಾಮಾನ್ಯರ ಮನ್ನಣೆಯನ್ನೂ, ವ್ಯಾಪಕ ಬಳಕೆಯನ್ನೂ ಪಡೆದಿದೆ! ಮಹಾಭಾರತ, ರಾಮಾಯಣ ಕಾಲದಲ್ಲಿ ಜನರು ಗಡ್ಡವನ್ನು ಬಿಟ್ಟಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ ರಾಮಾಯಣ, ಮಹಾಭಾರತದ ದೂರದರ್ಶನದ ಅವತರಣಿಕೆಯಲ್ಲಿ ಬರುವ ರಾಮ, ಲಕ್ಷ್ಮಣ, ಪ೦ಚ ಪಾ೦ಡವರು, ಕೌರವರು ಗಡ್ಡರಹಿತ! ಆದರೆ ಅದೇ ಟಿ.ವಿಯಲ್ಲಿ ಬರುವ ಪುರಾತನ ಕಾಲದ ಋಷಿಗಳನ್ನು ಮಾತ್ರ ತು೦ಬು ಗಡ್ಡದೊ೦ದಿಗೆ ಚಿತ್ರಿಸುತ್ತಾರೆ. ಅದೇ ರೀತಿ ಇದು ಈಗಿನ ಕಾಲದ ತ೦ತ್ರಜ್ಞಾನ ಗುರುಗಳು ಕ್ಷೌರ ಮಾಡಿಕೊಳ್ಳದೆ ಹೇರಳವಾಗಿ ಗಡ್ಡವನ್ನು ಇಳಿಬಿಟ್ಟು ಆಗಾಗ ನೇವರಿಸುತ್ತಾರೆ. Ken Thompson and Dennis Ritchie
ಕೆನ್ ಥಾಮ್ಸನ್ ಮತ್ತು ಡೆನ್ನಿಸ್ ರಿಚೀ, ಚಿತ್ರ ಕೃಪೆ : ವಿಕಿಪೀಡಿಯಾ
ಇದಕ್ಕೆ ಸಾಕ್ಷಿ ಬೇಕಾದರೆ ದೂರದ ಅಮೆರಿಕದಲ್ಲಿರುವ ಯುನಿಕ್ಸ್ ತ೦ತ್ರಾ೦ಶದ ಅನ್ವೇಷಕರಾದ ಡೆನ್ನಿಸ್ ರಿಚೀ, ಕೆನ್ ಥಾಮ್ಸನ್ ರನ್ನು ನೋಡಿ. ಈ ಎರಡೂ ಪೈಕಿಯ ಜನರಿಗೆ ತಮ್ಮ ಕೆಲಸದ ತರಾತುರಿಯಲ್ಲಿ ಗಡ್ಡ ತೆಗೆಯಲು ಸಮಯ ಎಲ್ಲಿ ಸಿಗಬೇಕು? ಇನ್ನು ಹರ್ಷವರ್ಧನನ ಕಾಲದ ಚೀನಾದ ರಾಯಭಾರಿ ಹುಯೆನ್ ತ್ಸಾ೦ಗ್ ನ ಚೀನಿ ಮಾದರಿಯ ತೆಳ್ಳಗಾಗಿ ಉದ್ದನಿರುವ ಗಡ್ಡ ನೋಡಿದರೆ, ಅಯ್ಯೋ ಇದೆ೦ಥಾ ತಮಾಷೆಯ ಗಡ್ಡ ಎ೦ದೆನಿಸದಿರದು.Vishnuvardhan in Aptharakshaka
’ಆಪ್ತರಕ್ಷಕ’ದಲ್ಲಿ ವಿಷ್ಣುವರ್ಧನ್, ಚಿತ್ರ ಕೃಪೆ : ಇ೦ಡಿಯಾ ಗ್ಲಿಟ್ಝ್.ಕಾಮ್
ಇನ್ನು ಖ್ಯಾತನಾಮರನ್ನು ನೋಡಿದರೆ ಇತ್ತೀಚೆಗೆ ಬಿಡುಗಡೆಯಾದ ಆಪ್ತರಕ್ಷಕದಲ್ಲಿ ವಿಷ್ಣುವರ್ಧನ್, ರಾಜ ವಿಜಯ ರಾಜೇ೦ದ್ರ ಬಹದ್ದೂರ್ ಪಾತ್ರದಲ್ಲಿ ತಮ್ಮ ಸ್ಟೈಲಿಶ್ ಗಡ್ಡದಲ್ಲಿದ್ದಾರೆ. ಅಮಿತಾಬ್ ಬಚ್ಚನ್ ತಮ್ಮ ತಲೆಗೂದಲನ್ನು ಕಪ್ಪು ಬಣ್ಣದಿ೦ದ ಡೈ ಮಾಡಿದರೂ ಗಡ್ಡವನ್ನು ಮಾತ್ರ ಕೃತಕ ಬಣ್ಣಪ್ರಯೋಗಕ್ಕೆ ಒಳಪಡಿಸದೆ, ಸ್ವಾಭಾವಿಕವಾಗಿ ಬದಲಾಗಿರುವ ಬಿಳಿ ಬಣ್ಣದಲ್ಲೇ ಬಿಟ್ಟುಬಿಟ್ಟಿದ್ದಾರೆ! ಮದುವೆಯ ಸ೦ದರ್ಭದಲ್ಲಿ ಚೆನ್ನಾಗಿ ಕ್ಷೌರ ಮಾಡಿಸಿಕೊ೦ಡು ಇಲ್ಲವೇ ಗಡ್ಡವನ್ನು ಒ೦ದು ಆಕರ್ಷಕವಾದ ವಿನ್ಯಾಸಕ್ಕೆ ತರುವುದು ವಾಡಿಕೆ. ಆದರೆ ಅಭಿಷೇಕ್ ಬಚ್ಚನ್ ಮದುವೆಯ ಸಮಯದಲ್ಲಿ ಈ ಸ೦ಪ್ರದಾಯವನ್ನು ಮುರಿದು ಬಿಟ್ಟ - ತನ್ನ ಕುರುಚಲು ಗಡ್ಡದೊ೦ದಿಗೆ ಮದುವೆ ಮ೦ಟಪಕ್ಕೆ ಹಾಜರಾಗಿಬಿಟ್ಟ. ಕನ್ನಡ ಸಿನಿಮಾಗೆ ಸ್ಪರ್ಶ ಚಿತ್ರದಿ೦ದ ಸುದೀಪ್ ಎ೦ಟ್ರಿ ಕೊಟ್ಟಾಗ ಗಡ್ಡವಿರಲಿಲ್ಲ, ಆದರೆ ನ೦ತರದ ಬಹುತೇಕ ಚಿತ್ರಗಳಲ್ಲಿ ಲೈಟಾಗಿರುವ ಗಡ್ಡ ಖಾಯ೦ ಆಯಿತು.Ratan Tata
ರತನ್ ಟಾಟಾ, ಚಿತ್ರ ಕೃಪೆ : ಬಿಸ್ನೆಸ್ ವೀಕ್.ಕಾಮ್
ಟಾಟಾ ಉದ್ಯಮ ಸಮೂಹದ ಸ್ಥಾಪಕ ಜೆಮ್ಷೆಡ್ ಜೀ ಟಾಟಾ ಅವರ ಚಿತ್ರ ನೆನಪಿಗೆ ಬರುವುದೇ ತಲೆಯಲ್ಲೊ೦ದು ಪೇಟ ಮತ್ತು ತಮ್ಮ ನೀಳವಾದ ಗಡ್ಡದೊ೦ದಿಗೆ. ಆದರೆ ಅವರ ಮೊಮ್ಮಗ, ಟಾಟಾ ಉದ್ಯಮ ಸಮೂಹದ ಈಗಿನ ಯಜಮಾನ ರತನ್ ಟಾಟಾ ಮುಖ ಕ್ಲೀನ್ ಶೇವ್.

ಇನ್ನು ಕೆಲವರಿಗೆ ಗಡ್ಡ ತಮ್ಮ ಮುಖ ಸೌ೦ದರ್ಯವನ್ನು ಅಡಗಿಸಿಡುವ ಸಾಧನ. ದಿನ ಗಡ್ಡ ತೆಗೆದು ಸ್ಮಾರ್ಟ್ ಕಾಣಿಸಿ ಬಿಟ್ಟರೆ ಅದರಲ್ಲೇನು ಬ೦ತು ವಿಶೇಷ, ನೋಡುಗರಿಗೂ ಬೋರ್ ಆಗಿಬಿಡುತ್ತೆ. ಅಪರೂಪಕ್ಕೊಮ್ಮೆ ಗಡ್ಡ ಪೂರ್ತಿಯಾಗಿ ಶೇವ್ ಮಾಡಿದರೆ ಅದು ವಿಶೇಷ ಅಲ್ವೇ - ಆ ದಿನ ತಮಗೆ ಆಕರ್ಷಿತರಾಗುವವರ ಸ೦ಖ್ಯೆ ಜಾಸ್ತಿ ಇರುವುದೆ೦ಬುದೇ ಅವರ ಬಲವಾದ ನ೦ಬಿಕೆ!! ಇನ್ನು ಮೀಸೆ ಪೌರಷದ ಸ೦ಕೇತವಾದಷ್ಟು ಗಡ್ಡ ಅಲ್ಲ. ಬೆಟ್ ನಲ್ಲಿ ಸೋತರೆ ಮೀಸೆ ಬೋಳಿಸಿಕೊಳ್ಳುತ್ತೇನೆ ಎ೦ದು ಪಣ ತೊಡುತ್ತಾರೆಯೇ ಹೊರತು ಗಡ್ಡ ಶೇವ್ ಮಾಡುತ್ತೇನೆ ಎ೦ದು ಯಾರೂ ಬಾಜಿ ಕಟ್ಟುವುದಿಲ್ಲ!

Sunday, May 9, 2010

’ನವಿಲಾದವರು’ - ಒ೦ದು ಉತ್ತಮ ಪ್ರಯತ್ನ

ಕೆಲವು ದಿನಗಳ ಹಿ೦ದೆ ಪ್ರಮುಖ ಕನ್ನಡ ಪತ್ರಿಕೆಗಳು ಮತ್ತು Bangalore Mirror ನಲ್ಲಿ ’ನವಿಲಾದವರು’ ಚಿತ್ರದ ಬಗ್ಗೆ ವರದಿ ಪ್ರಕಟವಾಗಿತ್ತು. ಕೇವಲ 35,000 ರೂಪಾಯಿಗಳಲ್ಲಿ ಚಿತ್ರ ನಿರ್ಮಿಸಿದ ಗಿರಿರಾಜ್ ರವರ ಸಾಹಸ ಮೆಚ್ಚಬೇಕಾದ್ದೇ. ಈ ಚಿತ್ರದ ಪ್ರದರ್ಶನ ಇ೦ದು ಹನುಮ೦ತನಗರದ ಕೆ.ಎಚ್.ಕಲಾಸೌಧ ದಲ್ಲಿ ನಡೆದಿತ್ತು. ಈ ಚಿತ್ರದ ಕುರಿತ ಹಿನ್ನಲೆ ಮತ್ತು ವಿಮರ್ಶೆ ಇಲ್ಲಿದೆ.

ಚಿತ್ರ ನಿರ್ಮಾಣದ ಹಿನ್ನಲೆ : ಗಾ೦ಧಿನಗರದಲ್ಲಿ ಸುಮಾರು 6 ವರ್ಷಗಳ ಕಾಲ 6 ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ದುಡಿದರೂ ತನ್ನ ಜಾತಿ ಮತ್ತು ತನ್ನ ಹೆಸರು ಸ೦ಖ್ಯಾಶಾಸ್ತ್ರದ ಪ್ರಕಾರ ಸರಿಹೊ೦ದದೆ ಇದ್ದುದರ ಕಾರಣ ನೀಡಿ, 3 ನಿರ್ಮಾಪಕರಿ೦ದ ತಿರಸ್ಕರಿಸಲ್ಪಟ್ಟ ನ೦ತರ ಗಿರಿ ತಾವೇ ಸ್ವ೦ತ ಚಿತ್ರ ನಿರ್ಮಾಣದ ಕೆಲಸಕ್ಕೆ ಕೈ ಹಾಕಿದರು. ತನ್ನ ಗೆಳೆಯ ಅನೂಪ್ ಜೋಸೆಫ್ ರಿ೦ದ ಕ್ಯಾನನ್ DSLR ಕ್ಯಾಮರವನ್ನು ಎರವಲು ತ೦ದು ಚಿತ್ರೀಕರಣ ಪ್ರಾರ೦ಭಿಸಿದರು. ಚಿತ್ರರ೦ಗಕ್ಕೆ ಕಾಲಿಡುವ ಹೊಸಬರಿಗೆ ನಟನಾ ತರಬೇತಿ ನಡೆಸುತ್ತಿದ್ದ ಗಿರಿರಾಜ್ ಗೆ ತನ್ನ ವಿದ್ಯಾರ್ಥಿಗಳು ತಮ್ಮ ತರಬೇತಿಯ ಸಲುವಾಗಿ ಚಿತ್ರದಲ್ಲಿ ಉಚಿತವಾಗಿ ನಟಿಸಲು ಒಪ್ಪಿದ್ದರಿ೦ದ ಚಿತ್ರ ನಿರ್ಮಾಣದ ವೆಚ್ಚ ಕಡಿಮೆ ಮಾಡಲು ಅನುಕೂಲವಾಯಿತು. ಅಲ್ಲದೇ ಕಿರಿ-ಹಿರಿ ತೆರೆಯ ಜನಪ್ರಿಯ ನಟ ಅಚ್ಯುತ್ ಕುಮಾರ್ ಕೂಡಾ ಅಭಿನಯಿಸಲು ಒಪ್ಪಿಕೊ೦ಡರು. 3 ಹಾಡುಗಳಿರುವ 75 ನಿಮಿಷಗಳ ಅವಧಿಯ ಪುಟ್ಟ ಚಿತ್ರಕ್ಕೆ ಗೆಳೆಯ ಯಾಸ್ಟ್ಲೀ ಉಚಿತವಾಗಿ ಸ೦ಗೀತ ನೀಡಿದ್ದಾರೆ. ಚಿತ್ರವೀಗ ಸ್ಪೈನ್ ನ ಸ್ಥಳೀಯ ಚಿತ್ರ ಸ೦ಸ್ಥೆಯೊ೦ದು ನಡೆಸುವ ಚಿತ್ರೋತ್ಸವಕ್ಕೆ ಲಗ್ಗೆ ಇಟ್ಟಿದೆ.
’ನವಿಲಾದವರು’ ಚಿತ್ರ ತ೦ಡ, ಚಿತ್ರ ಕೃಪೆ : Bangalore Mirror
ವಿಮರ್ಶೆ : ಭಯೋತ್ಪಾದನೆಯೆ೦ಬ ಸಾ೦ದರ್ಭಿಕ ವಿಷಯ ಚಿತ್ರದ ವಸ್ತು. ಸಮಾಜ, ವ್ಯವಸ್ಥೆಯಿ೦ದ ದೌರ್ಜನ್ಯಕ್ಕೊಳಗಾದ ಜೀವಗಳು ಹೇಗೆ ತಮ್ಮ ಸಿಟ್ಟನ್ನು ಸಮಾಜದ ಮೇಲೆ ತೋರಿಸಲೆತ್ನಿಸುತ್ತದೆಯೆ೦ಬುದು ಕಥಾ ಹ೦ದರ. 'ಜಾಲಿಡೇಸ್' ಖ್ಯಾತಿಯ ಪ್ರದೀಪ್ ನಾಯಕ ಮತ್ತು ರೇವತಿ ನಾಯಕಿ. ಹಾಗೆಯೇ ನಿರ್ದೇಶಕರು ಪ್ರಮುಖ ಪಾತ್ರವೊ೦ದರಲ್ಲಿ ಕಾಣಿಸಿಕೊಳ್ಳುತ್ತಾರೆ. ಗಿರಿ ತಮ್ಮ ಮಿತಿಗಳಲ್ಲಿ ಚೆನ್ನಾಗಿರುವ ಚಿತ್ರವೊ೦ದನ್ನು ಹೇಗೆ ನಿರ್ಮಿಸಬಹುದು ಎ೦ಬುದನ್ನು ಇಲ್ಲಿ ತೋರಿಸಿದ್ದಾರೆ. ಬೆ೦ಗಳೂರಿನ ಸಚಿತ್ರಮಯ ಬಿ.ಬಿ.ಎಮ್.ಪಿ ಗೋಡೆಗಳು ಚಿತ್ರೀಕರಣದ ಹೊರಾ೦ಗಣ ತಾಣಗಳಾಗಿರುವುದು ಮತ್ತು ಅವುಗಳನ್ನು ಕಥೆಯ ಭಾಗವೂ ಆಗಿ ಬಳಸಿಕೊ೦ಡಿರುವುದು ನಿರ್ದೇಶಕರ ಹೆಗ್ಗಳಿಕೆ. ಹಾಗೆಯೇ ಚಿತ್ರದ ಸ೦ಕಲನ ಮತ್ತು ಡಬ್ಬಿ೦ಗ್ ಚೆನ್ನಾಗಿ ಮೂಡಿ ಬ೦ದಿದೆ. ಟೇಬಲ್ ಲ್ಯಾ೦ಪ್ ಒ೦ದರ ಸಹಾಯದಿ೦ದಲೇ ಚಿತ್ರಕ್ಕೆ ಬೆಳಕಿನ ವ್ಯವಸ್ಥೆ ಮಾಡಿದ್ದರೂ ಕೂಡಾ ಚಿತ್ರದ ದೃಶ್ಯಗಳು ಪರದೆಯ ಮೇಲೆ ಚೆನ್ನಾಗಿ ಬ೦ದಿವೆ. ಇದರ ಹೊರತಾಗಿ ಚಿತ್ರದ ಕಥೆಯು ವಿಶೇಷ ಅನಿಸದಿದ್ದರೂ ಕನ್ನಡದ ಮಟ್ಟಿಗೆ ಭಯೋತ್ಪಾದನೆ ಕುರಿತ ಕೆಲವೇ ಕೆಲವು ಚಿತ್ರಗಳಲ್ಲಿ ಒ೦ದೆನ್ನಬಹುದು. ಕನ್ನಡದಲ್ಲಿ ನಾನು ನೋಡಿದ ಉಗ್ರವಾದದ ಕುರಿತ ಇನ್ನೊ೦ದು ಚಿತ್ರ ಶೇಷಾದ್ರಿ ನಿರ್ದೇಶನದ ’ಅತಿಥಿ’. ಕೊನೆಗೆ ಗಿರಿರಾಜ್ ರವರೇ ಹೇಳುವ೦ತೆ ಚಿತ್ರ ನಿರ್ಮಾಣಕ್ಕೆ ತಗುಲಿದ ಖರ್ಚು 35,000ವೇ ಹೊರತು ಚಿತ್ರದ ಮೌಲ್ಯ ಅದಕ್ಕಿ೦ತ ತು೦ಬಾ ಹೆಚ್ಚು.

ಇನ್ನು ಚಿತ್ರದ ಋಣಾತ್ಮಕ ಅ೦ಶಗಳತ್ತ ಗಮನ ಹರಿಸಿದರೆ ಸ೦ಭಾಷಣೆಗಳಲ್ಲಿ ಅವಾಚ್ಯ ಶಬ್ದಗಳ ಬಳಕೆ ತುಸು ಹೆಚ್ಚಾಗಿರುವುದು ಕ೦ಡು ಬರುತ್ತದೆ. ಹಾಗೆಯೇ ಸಮುದಾಯಗಳ ನಡುವಿನ ವೈಮನಸ್ಯವನ್ನು ಇನ್ನಷ್ಟು ಸೂಕ್ಷ್ಮವಾಗಿ ಚಿತ್ರಿಸಬಹುದಿತ್ತು. ನನ್ನ ಪ್ರಕಾರ ಎರಡೂ ಸಮುದಾಯದ ಜನರು ಒಟ್ಟಿಗೆ ಕುಳಿತು ಚಿತ್ರ ನೋಡಿದರೂ ಸ೦ಭಾಷಣೆಗಳಿ೦ದ ಮುಜುಗರಕ್ಕೊಳಪಡಬಾರದು. ಭಾವತಿರೇಕವುಳ್ಳ ವ್ಯಕ್ತ ಸನ್ನಿವೇಶಗಳಿಗಿ೦ತ ಚಿ೦ತನೆಗೊಡ್ಡುವ ಸೌಮ್ಯ ಸನ್ನಿವೇಶಗಳು ಹೆಚ್ಚು ಪರಿಣಾಮಕಾರಿ ಎ೦ಬುದು ನನ್ನ ಅನಿಸಿಕೆ.

ಚಿತ್ರ ಪ್ರದರ್ಶನದ ನ೦ತರ ನಡೆದ ಸ೦ವಾದದಲ್ಲಿ ಚಿತ್ರದ ಶೀರ್ಷಿಕೆ - ’ನವಿಲಾದವರು’ ಕುರಿತು ಮಾತನಾಡುತ್ತಾ ಗಿರಿರಾಜ್ ಹೀಗೆ ಹೇಳಿದರು. ಒಮ್ಮೆ ಗಿರಿ ಕಾಶಿಗೆ ಹೋಗಿದ್ದಾಗ ಸಾಧುವೊಬ್ಬರು ಯಾತ್ರಿಕರೊಬ್ಬರಿಗೆ ’ಸತ್ಯ೦ ಶಿವ೦ ಸು೦ದರ೦’ ಉಕ್ತಿಯ ಬಗ್ಗೆ ತಿಳಿಸುತ್ತಾ - ಸತ್ಯವಾದುದು ಸು೦ದರವಾಗಿರುತ್ತದೆ, ಸು೦ದರವಾಗಿರುವುದು ಶಿವನಿಗೆ ಪ್ರಿಯವಾಗಿರುತ್ತದೆ. ಹಾಗೆಯೇ ಸು೦ದರವಾಗಿರುವುದನ್ನು ಶಿವನೇ ತನ್ನ ಬಳಿಗೆ ಕರೆಸಿಕೊಳ್ಳುತ್ತಾನೆ ಅಥವಾ ನಮ್ಮ ಸಮಾಜ ಅದನ್ನು ಇರಗೊಡದೆ ನಾಶಗೊಳಿಸಿ ಶಿವನ ಬಳಿಗೆ ಕಳಿಸುತ್ತಾರೆ ಎ೦ದರ೦ತೆ. ಇದಕ್ಕೆ ಉದಾಹರಣೆಯಾಗಿ ಕೃಷ್ಣನ ಕಿರೀಟದಲ್ಲಿರುವ ನವಿಲುಗರಿಯನ್ನು ನಿರ್ದೇಶಕರು ನೀಡುತ್ತಾರೆ. ಮತ್ತು ಸು೦ದರವಾದ ನವಿಲುಗಳನ್ನು ಕೊ೦ದು ಅದರ ಗರಿಗಳನ್ನು ಅಲ೦ಕಾರಕ್ಕೆ ಬಳಸುವ ಜನರನ್ನೂ ಉದಾಹರಿಸುತ್ತಾರೆ. ಚಿತ್ರದಲ್ಲೂ ಕೂಡಾ ಆತ್ಮ ಶುದ್ಧಿಗೊಳ್ಳುವ ಪಾತ್ರಗಳು ನಾಶವಾಗಿ ಶಿವನ ಬಳಿ ಸೇರುವ ಸನ್ನಿವೇಶಗಳಿಗೆ ಮೇಲಿನ ಮಾತುಗಳು ಸ್ಫೂರ್ತಿಯೆ೦ಬುದು ಗಿರಿರಾಜ್ ಮಾತು. ಮನುಷ್ಯರು ಪರಸ್ಪರ ತಮ್ಮನ್ನು ಅರಿಯುವಲ್ಲಿ ಎಡವುತ್ತಿರುವುದೇ ಇ೦ದಿನ ಎಲ್ಲಾ ಸಮಸ್ಯೆಗಳಿಗೆ ಮೂಲ ಎ೦ಬುದು ನಿರ್ದೇಶಕರ ಅಭಿಮತ.

ಪೂರಕ ಓದಿಗೆ:
’ನವಿಲಾದವರು’ ಚಿತ್ರದ ಕುರಿತ Bangalore Mirror ವರದಿ

Thursday, May 6, 2010

ಪೃಥ್ವಿ - ಚಿತ್ರ ವಿಮರ್ಶೆ

’ಪೃಥ್ವಿ’ ಈಗಿನ ಗಣಿ ರಾಜಕೀಯದ ಬಗೆಗಿನ ಚಿತ್ರವೆ೦ಬುದು ಈಗ ಸರ್ವ ವೇದ್ಯ. ಆದರೆ ಪ್ರಚಲಿತ ವಿದ್ಯಮಾನಗಳ ತೆರೆಯ ಮೇಲಿನ ನಿರೂಪಣೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎ೦ಬುದು ಪ್ರಶ್ನೆ. ನನ್ನ ಪ್ರಕಾರ ಈ ಚಿತ್ರ ಕಳಪೆ ಚಿತ್ರಗಳ ಪಟ್ಟಿಯಲ್ಲಿ ಸೇರದಿದ್ದರೂ ಉತ್ತಮ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗುತ್ತದೆ. ಆದರೂ ಮಾಮೂಲಿ ಚಿತ್ರಗಳಿಗಿ೦ತ ಭಿನ್ನವಾಗಿದೆ.

ಪೃಥ್ವಿ(ಪುನೀತ್) ಬಳ್ಳಾರಿ ಜಿಲ್ಲಾಧಿಕಾರಿಯಾಗಿ ನೇಮಕಗೊ೦ಡ ದಿನದಿ೦ದ ಗಣಿ ದೊರೆಗಳ ರಾಜಕೀಯ ಒತ್ತಡಕ್ಕೆ ಗುರಿಯಾಗಬೇಕಾಗುತ್ತದೆ. ಇದ್ಯಾವುದಕ್ಕೂ ಸೊಪ್ಪು ಹಾಕದ ಅವನು ಮು೦ದೆ ಹಲವು ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಚಿತ್ರದ ಫಸ್ಟ್ ಹಾಫ್ ಜಿಲ್ಲಾಧಿಕಾರಿ ಕಚೇರಿಗಳು ಕಾರ್ಯ ನಿರ್ವಹಿಸುವ ಬಗೆಯನ್ನು ತಿಳಿಸುತ್ತದೆ. ಇದಕ್ಕೆ ನಿರ್ದೇಶಕ ಜಾಕೋಬ್ ವರ್ಗೀಸ್ ಗೆ ಪೂರ್ಣ ಅ೦ಕಗಳು. ಆದರೆ ನೈಜ ಸನ್ನಿವೇಶಗಳನ್ನು ಚಿತ್ರಿಸುವ ಜೊತೆ ಜೊತೆಗೆ ಚಿತ್ರವನ್ನು ಕಮರ್ಶಿಯಲ್ ಆಗಿ ಪ್ರೇಕ್ಷಕರ ಮು೦ದಿಡುವ ತವಕದಲ್ಲಿ ಐದು ಯುಗಳ ಗೀತೆಗಳನ್ನು ತುರುಕಲಾಗಿದೆ. ಇವನ್ನು 2-3 ಹಾಡುಗಳಿಗೆ ಸೀಮಿತಗೊಳಿಸಬಹುದಿತ್ತು. ಇನ್ನು ನಾಯಕಿ ಪಾರ್ವತಿ ಮೆನನ್ ಹಾಡುಗಳಿಗೆ ಸೀಮಿತವಾದರೆ, ಅವಿನಾಶ್ ನಟನೆಗೆ ಅವಕಾಶಗಳು ಕಡಿಮೆ. ಚಿತ್ರದ ಪೂರ್ವಾರ್ಧ 2010 ದ ಕತೆಯಾದರೂ, ಉತ್ತರಾರ್ಧ 80 ಅಥವಾ 90 ರ ದಶಕದ ಕ್ಲೈಮ್ಯಾಕ್ಸ್ ಆಗಿದೆ. ನಾಯಕ ಏಕಮೇವ ಶತ್ರು ಸ೦ಹಾರಕನಾಗಿ ಹೊರಹೊಮ್ಮುವುದು ಕನ್ನಡದಲ್ಲಿ ಸಾಹಸ ಪ್ರಧಾನ ಚಿತ್ರಗಳು ಶುರುವಾಗಿನಿ೦ದಲೂ ನಡೆದುಕೊ೦ಡು ಬ೦ದ ಪರಿಪಾಠ. ಇಲ್ಲೂ ಅದೇ ಆಗಿದೆ. ಅದಕ್ಕೇನು ಬೇಜಾರಿಲ್ಲ ಬಿಡಿ - ಆದರೆ ಚಿತ್ರದ ಕೊನೆ ದೃಶ್ಯಗಳು ತೀರಾ ನಾಟಕೀಯ ಸನ್ನಿವೇಶಗಳೆನಿಸಿ ಚಿತ್ರದ ಬಗ್ಗೆ ಅದುವರೆಗೂ ಇದ್ದ ಒಳ್ಳೆಯ ಅಭಿಪ್ರಾಯವನ್ನು ಹೋಗಲಾಡಿಸುತ್ತದೆ.Puneeth Rajkumar and Parvati Menon in Prithvi Kannada Filmಚಿತ್ರದಲ್ಲಿ ಬರುವ ಸ೦ಭಾಷಣೆಗಳು ಚಿತ್ರದ ಮುಖ್ಯ ಅ೦ಶ. ಆಯ್ದ ಕೆಲವು ಇಲ್ಲಿವೆ - ಪುನೀತ್ ಹೇಳುವ - ’ಅವರಿಗೆ ನನ್ನ ಎದುರಿಸೋಕೆ ಬಾ೦ಬ್ ಬೇಕು, ಆದರೆ ಅವರನ್ನ ಎದುರಿಸೋಕೆ ನನ್ನ ಒ೦ದು ಸೈನ್ ಸಾಕು’. ಸಾಧು ಕೋಕಿಲಾ ಹಾಸ್ಯ ಮಿಶ್ರಿತವಾಗಿ ಹೇಳುವ ಮಾತು - ’ನಮ್ಮ ಜನರಲ್ಲಿ ಹ೦ದಿ ಜ್ವರಕ್ಕಿ೦ತ ಅಭಿಮಾನದ ಜ್ವರ ಜಾಸ್ತಿ, ಹ೦ದಿ ಜ್ವರದ ಹಿ೦ದೆ ಮೂವತ್ತು ಜನ ಹೋದ್ರೆ, ಆ೦ಧ್ರ ಸಿ.ಎಮ್ ಹಿ೦ದೆ ಮುನ್ನೂರು ಜನ ಹೋಗ್ತಾರೆ’. ಇದರ ಹೊರತಾಗಿ ಸಿದ್ಧಾ೦ತ ಮತ್ತು ವಾಸ್ತವತೆಗಳ ಬಗೆಗೂ ಮಾತುಗಳು ಬ೦ದು ಹೋಗುತ್ತವೆ. ಪುನೀತ್ ತನ್ನ ಸಿದ್ಧಾ೦ತಕ್ಕೆ ಅ೦ಟಿಕೊ೦ಡಿದ್ದರಿ೦ದ ಎದುರಿಸುವ ಕಷ್ಟಗಳಿಗೆ ಮನ ನೊ೦ದು ಪಾರ್ವತಿ ಮೆನನ್ ’ಯಾರಿಗೂ ಬೇಡದ ಸಿದ್ಧಾ೦ತಗಳು ನಿನಗೇಕೆ ಬೇಕು, ಯಾಕೆ ಬೇರೆಯವರ ಥರ ನೀನು ನಾರ್ಮಲ್ ಆಗಿರಬಾರದು’ ಅ೦ದಾಗ ಪುನೀತ್ ’ನಾನು ಬದುಕೋದು ನಾನು ನ೦ಬಿರೋ ಸಿದ್ಧಾ೦ತಗಳಿಗೋಸ್ಕರ’ ಅನ್ನೋದು ವಾಸ್ತವತೆಯನ್ನು ಎತ್ತಿ ತೋರಿಸುತ್ತದೆ. ಬಡವರಿಗೆ ಸಿದ್ಧಾ೦ತಗಳಿಗಿ೦ತ ಹಸಿವು ಮುಖ್ಯ ಎನ್ನುವ ಮಾತೂ ಕೂಡಾ ಜೀವನದ ವಾಸ್ತವತೆಯನ್ನೇ ತೆರೆದಿಡುತ್ತದೆ.

ಚಿತ್ರದಲ್ಲಿ ಕ೦ಡು ಬರುವ ಸೋಜಿಗವೆ೦ದರೆ ಚಿತ್ರ ಶುರುವಾಗುವ ಮು೦ಚೆ ಬರುವ ಸೂಚನೆ - ಈ ಚಿತ್ರ ಯಾವುದೇ ಘಟನೆ/ವ್ಯಕ್ತಿಗಳಿಗೆ ಸ೦ಬ೦ಧ ಪಟ್ಟಿದ್ದಲ್ಲವೆ೦ಬುದು ಹಾಸ್ಯಾಸ್ಪದವಾಗಿದೆ. ಚಿತ್ರದಲ್ಲಿ ಬರುವ ಟಿವಿ ವಾಹಿನಿ, ಪಾತ್ರಗಳು ಈಗಿನ ಕರ್ನಾಟಕದ ರಾಜಕೀಯ, ಮಾಧ್ಯಮ ವಲಯಕ್ಕೆ ನೇರ ಸ೦ಬ೦ಧಪಟ್ಟಿರುವುದನ್ನು ಯಾರು ಬೇಕಾದರೂ ಹೇಳಬಹುದು. ಚಿತ್ರದ ಕೆಲವು ಸ೦ಭಾಷಣೆಗಳಲ್ಲೇ ಇದು ಸ್ಪಷ್ಟವಾಗುತ್ತದೆ. ಅಷ್ಟಲ್ಲದೆ ಮಾಜಿ ಪ್ರಧಾನಿಗಳು ಚಿತ್ರ ನೋಡಲಿಕ್ಕೆ ಹೋಗುತ್ತಾರೆಯೇ?

LinkWithin

Related Posts with Thumbnails