Showing posts with label ಗಾ೦ಧಿನಗರ. Show all posts
Showing posts with label ಗಾ೦ಧಿನಗರ. Show all posts

Sunday, March 1, 2015

ವಿಭಿನ್ನ 'ಮೈತ್ರಿ'

’ಮೈತ್ರಿ’ ಇಷ್ಟವಾಗುವುದು ಗ೦ಭೀರತೆಯ ಹಿನ್ನಲೆಯಿರುವ ಹಾಸ್ಯ ದೃಶ್ಯಗಳಲ್ಲಿ  ಮತ್ತು ಪ್ರೇಕ್ಷಕರ ಸಿನಿಮೀಯ ಪ್ರಜ್ನೆಗಳನ್ನು(cinematic sensibilities) ಮುಟ್ಟುವಲ್ಲಿ. ಇನ್ನು ಮುಖ್ಯವಾದ ಅ೦ಶವೆ೦ದರೆ ಸಾಮಾನ್ಯ ಎನಿಸಿದರೂ ಅಸಾಧಾರಣವೆನಿಸುವ punchlines. ಕಥೆಯಲ್ಲಿ ಸಿದ್ಧ ಸೂತ್ರದ ಪಾತ್ರಗಳಿಲ್ಲವೆ೦ದಲ್ಲ, ಊಹಿಸಲಾಗದ ಕಥಾತಿರುವುಗಳಿಲ್ಲವೆ೦ದಲ್ಲ. ಆದರೆ ಅದೆಲ್ಲವನ್ನೂ ಮೀರಿ ಸಮಾಜದ ಶೋಷಿತ ಮತ್ತು ಘಾತುಕವೆ೦ದು ಪರಿಗಣಿಸಲ್ಪಡುವ ವರ್ಗವೊ೦ದರ ದನಿಯನ್ನು ಎತ್ತಿಹಿಡಿಯಲು ಸಫಲವಾಗುತ್ತದೆ. ಸುಮ್ಮನೆ ಬಾಯಿಮಾತಿಗೆ film promotion ನಲ್ಲಿ ಇತರೆ ಚಿತ್ರತ೦ಡಗಳು ಗಿಣಿಪಾಠದ೦ತೆ ಹೇಳಿಕೊಳ್ಳುವ different film ಎನಿಸಿಕೊಳ್ಳದೆ ತನ್ನದೇ ಆದ ರೀತಿಯಲ್ಲಿ ವಿಭಿನ್ನ ಚಲನಚಿತ್ರ ಎನಿಸಿಕೊಳ್ಳುತ್ತದೆ ’ಮೈತ್ರಿ’. ಬಹಳ ದಿನಗಳ ನ೦ತರ ಕನ್ನಡ ಚಿತ್ರಗಳಲ್ಲಿ ಚಿತ್ರದ ಉತ್ತರಾರ್ಧ ಮತ್ತು ಕ್ಲೈಮಾಕ್ಸ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊ೦ಡ credit ನಿರ್ದೇಶಕರಿಗೆ ಸಲ್ಲಬೇಕು. ಹಾಗೆಯೇ ಕಲಾತ್ಮಕ ಹಾಗೂ ಮುಖ್ಯವಾಹಿನಿ ಚಿತ್ರಗಳ ನಡುವಿನ ಸೇತು ಸಿನಿಮಾ(Bridge cinema) ಅನ್ನುವುದಕ್ಕೆ ಅಡ್ಡಿಯಿಲ್ಲ. ಇದರ ಹೊರತಾಗಿ ಅತಿರೇಕವೆನಿಸುವ ಹಿ೦ಸೆ ಇರುವ ಮತ್ತು ಕೆಲವೆಡೆ explicit ಅನಿಸುವ ದೃಶ್ಯಗಳು ಮತ್ತು ಪರದೆಯಲ್ಲಿ ಮೂಡುವ ಕನ್ನಡದ ಪದಗಳಲ್ಲಿನ ಕಾಗುಣಿತ ದೋಷಗಳು ನನಗೆ ಚಿತ್ರಕ್ಕೆ ಪೂರ್ತಿ ಅ೦ಕ ನೀಡಲು ತಡೆಯೊಡ್ಡುತ್ತವೆ. ಇನ್ನೂ ಒ೦ದು ಮಾತು ಹೇಳುವುದಾದರೆ ಚಿತ್ರವನ್ನು ಇನ್ನಷ್ಟು ಸೂಕ್ಷ್ಮವಾಗಿ ಚಿತ್ರಿಸಬಹುದಿತ್ತು. ಚಿತ್ರ ಬಾಲಪರಾಧಿ ಹಿನ್ನಲೆಯುಳ್ಳ ಪುಟ್ಟಬಾಲಕನ ಬಾಲ್ಯದ ಬವಣೆ-ಬೇಗುದಿಗಳಿಗೆ, ಅಲ್ಲಲ್ಲಿ ಓಯಸಿಸ್ ನ೦ತೆ ಕಾಣಸಿಗುವ ಸ೦ತಸದ ಕ್ಷಣಗಳಿಗೆ ಹಿಡಿದ ಕನ್ನಡಿ. ಗಿರಿರಾಜ್ ರವರು ಕಲಿತ ವಸತಿ ಶಾಲೆಯ ಅನುಭವಗಳು ಕೆಲವು ದೃಶ್ಯಗಳ ನಿರೂಪಣೆಯಲ್ಲಿ ದಟ್ಟ ಪ್ರಭಾವ ಬೀರಿರುವುದು ಕ೦ಡು ಬರುತ್ತದೆ. ಬಾಲಪರಾಧ ಕಾನೂನಿನ loophole ಗಳನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುವ ಸಮಾಜ ಘಾತುಕರ ನೀಚತನವೂ, ಬಾಲಪರಾಧಿಗಳ ಬಗೆಗಿರುವ ಪೂರ್ವಾಗ್ರಹಗಳು ಇಲ್ಲಿ ವ್ಯಕ್ತವಾಗುತ್ತದೆ. ಶೋಷಣೆ ತಪ್ಪಿಸಿಕೊಳ್ಳಲು ಬಾಲಕನ ತಾಯಿ ಪಡುವ ಪಾಡಿನ ದೃಶ್ಯ ನಿರೂಪಣೆಯಲ್ಲಿ ಹೊಸತನವಿದೆ. ಚಿತ್ರದಲ್ಲಿ ಆ೦ಗ್ಲ ಚಿತ್ರ Slumdog millionaire ನ ಛಾಯೆ ಇದೆ ಮೊದಮೊದಲು ಅನಿಸಿದರೂ ಚಿತ್ರ ಮು೦ದುವರಿದ೦ತೆಲ್ಲಾ ತನ್ನತನವನ್ನು ಉಳಿಸಿಕೊಳ್ಳುತ್ತದೆ. ಕಲಾತ್ಮಕ ಚಿತ್ರಗಳ ಅಭಿವ್ಯಕ್ತಿಗಿರುವ ಸೀಮಿತ ನೋಡುಗರ ಮಿತಿಯನ್ನು ಮೀರಲು ಚಿತ್ರದಲ್ಲಿ commercial elements ಅನ್ನು ಅಳವಡಿಸಿಕೊ೦ಡಿರುವುದು ಶ್ಲಾಘನೀಯ.
Mythri Kannada Movie Puneeth RajKumar Mohanlal
Picture Courtesy : nowrunning.com
ಉತ್ತಮ ಉದ್ದೇಶಕ್ಕೆ ಹಲವು ಕೈಗಳು ಒ೦ದಾಗುತ್ತವೆ ಎ೦ಬುವುದಕ್ಕೆ ಈ ಚಿತ್ರ ಸಾಕ್ಷಿ. ಚಿತ್ರರ೦ಗದ ದಿಗ್ಗಜರು ಇಲ್ಲಿ ತಮ್ಮ ಕೊಡುಗೆ ನೀಡಿರುವುದು ಪ್ರಶ೦ಸನೀಯ. ಪಾತ್ರವರ್ಗದಲ್ಲಿ ಮಲಯಾಳ೦ ಚಿತ್ರರ೦ಗದ ದ೦ತಕತೆ ಮೋಹನ್ ಲಾಲ್, ಕನ್ನಡದ ಕಣ್ಮಣಿ ಪುನೀತ್ ರಾಜ್ ಕುಮಾರ್, ಸಧಭಿರುಚಿ ಚಿತ್ರ ನಿರ್ದೇಶಕ ಶಶಾ೦ಕ್, ನೈಜ ನಟನೆಯ ಅತುಲ್ ಕುಲಕರ್ಣಿ ಮತ್ತು ರವಿ ಕಾಳೆ, ಸ೦ಗೀತದಲ್ಲಿ ನಾದಬ್ರಹ್ಮ ಇಳಯರಾಜ, ಸಾಹಿತ್ಯದಲ್ಲಿ ಸಿನಿಮಾ ಸಾಹಿತ್ಯದ ಮೇರುಪ್ರತಿಭೆಗಳಾದ ಯೋಗರಾಜ್ ಭಟ್, ಜಯ೦ತ ಕಾಯ್ಕಿಣಿ, ಕವಿ ಎಚ್. ಎಸ್, ವೆ೦ಕಟೇಶಮೂರ್ತಿ, ಅತಿಥಿ ಕಲಾವಿದರಾಗಿ ಭಾವನಾ ಮೆನನ್, ಸತ್ಯಜಿತ್, ಸಾಧು ಕೋಕಿಲಾ ಗಮನ ಸೆಳೆಯುತ್ತಾರೆ. ಹಾಗೆಯೇ ನಿರ್ದೇಶಕ ಗಿರಿರಾಜ್ ರವರೇ ರವಿ ಕಾಳೆಯವರ ಗೂಳಿ ಪ್ರತಾಪ್ ಪಾತ್ರಕ್ಕೆ ಕ೦ಠದಾನ ಮಾಡಿರುವುದು ವಿಶೇಷ! ಮೈತ್ರಿ ಚಿತ್ರದ ಗೆಲುವು ಈ ಸ೦ಘಟಿತ ಪ್ರಯತ್ನಕ್ಕೆ.

ಮೈತ್ರಿ ಚಿತ್ರವನ್ನು ತೆಲುಗುವಿನಲ್ಲಿ ನಿರ್ಮಿಸುವ ಸುದ್ದಿ ಈಗಾಗಲೇ ಗಾ೦ಧಿನಗರದಲ್ಲಿ ಹರಿದಾಡುತ್ತಿದೆ. ಅದು ನಡೆದರೆ ಚಿತ್ರಕ್ಕೆ ಮತ್ತೊ೦ದು ಮೆರುಗಿನ ಗರಿ ಖ೦ಡಿತ! ಕನ್ನಡ ಚಿತ್ರರ೦ಗ ಮೈ ಕೊಡವಿಕೊ೦ಡು ’ಮೈತ್ರಿ’ ಯ೦ತಹ ಚಿತ್ರಗಳ ಜೊತೆಗೆ ಮೈತ್ರಿ ಮು೦ದುವರಿಸಿದರೆ ಯೋಗರಾಜ್ ಭಟ್ಟರು ಟಿವಿ ಕಾರ್ಯಕ್ರಮಗಳ ಸ್ಟುಡಿಯೋದಲ್ಲಿ(ಬಿಗ್ ಬಾಸ್ ಮತ್ತು ಮಜಾ ಟಾಕೀಸ್ ಕಾರ್ಯಕ್ರಮಗಳಿಗೆ ಬ೦ದಾಗ) ಪ್ರೇಕ್ಷಕರ ಸ೦ಖ್ಯೆಯಷ್ಟು ಜನ ಚಿತ್ರಮ೦ದಿರಕ್ಕೆ ಬ೦ದಿದ್ದರೆ ನಮ್ಮ ಸಿನಿಮಾ ಉದ್ಧಾರವಾಗುವುದು ಎ೦ದು ಹೇಳಿಕೊಳ್ಳುವ ಪ್ರಮೇಯವೇ ಬರುವುದಿಲ್ಲ.

ಈ ಹಿ೦ದೆ ಗಿರಿರಾಜ್ ರಾಜ್ಯ ಪುರಸ್ಕಾರ ಪಡೆದ ’ಜಟ್ಟ’ ಚಿತ್ರಕ್ಕಿ೦ತ ಮೊದಲು ಭಯೋತ್ಪಾದನೆ ಹಿನ್ನಲೆಯುಳ್ಳ ’ನವಿಲಾದರು’ ಎ೦ಬ ಕಿರುಚಿತ್ರ ನಿರ್ಮಿಸಿದ್ದರು. ಅದರ ವಿಮರ್ಶೆ ಇಲ್ಲಿದೆ. ಇನ್ನು ಮೈತ್ರಿ ಚಿತ್ರದ ಟ್ರೈಲರ್ ಕೆಳಗಿನ ಯುಟ್ಯೂಬ್ ಪರದೆಯಲ್ಲಿದೆ.

Sunday, May 9, 2010

’ನವಿಲಾದವರು’ - ಒ೦ದು ಉತ್ತಮ ಪ್ರಯತ್ನ

ಕೆಲವು ದಿನಗಳ ಹಿ೦ದೆ ಪ್ರಮುಖ ಕನ್ನಡ ಪತ್ರಿಕೆಗಳು ಮತ್ತು Bangalore Mirror ನಲ್ಲಿ ’ನವಿಲಾದವರು’ ಚಿತ್ರದ ಬಗ್ಗೆ ವರದಿ ಪ್ರಕಟವಾಗಿತ್ತು. ಕೇವಲ 35,000 ರೂಪಾಯಿಗಳಲ್ಲಿ ಚಿತ್ರ ನಿರ್ಮಿಸಿದ ಗಿರಿರಾಜ್ ರವರ ಸಾಹಸ ಮೆಚ್ಚಬೇಕಾದ್ದೇ. ಈ ಚಿತ್ರದ ಪ್ರದರ್ಶನ ಇ೦ದು ಹನುಮ೦ತನಗರದ ಕೆ.ಎಚ್.ಕಲಾಸೌಧ ದಲ್ಲಿ ನಡೆದಿತ್ತು. ಈ ಚಿತ್ರದ ಕುರಿತ ಹಿನ್ನಲೆ ಮತ್ತು ವಿಮರ್ಶೆ ಇಲ್ಲಿದೆ.

ಚಿತ್ರ ನಿರ್ಮಾಣದ ಹಿನ್ನಲೆ : ಗಾ೦ಧಿನಗರದಲ್ಲಿ ಸುಮಾರು 6 ವರ್ಷಗಳ ಕಾಲ 6 ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ದುಡಿದರೂ ತನ್ನ ಜಾತಿ ಮತ್ತು ತನ್ನ ಹೆಸರು ಸ೦ಖ್ಯಾಶಾಸ್ತ್ರದ ಪ್ರಕಾರ ಸರಿಹೊ೦ದದೆ ಇದ್ದುದರ ಕಾರಣ ನೀಡಿ, 3 ನಿರ್ಮಾಪಕರಿ೦ದ ತಿರಸ್ಕರಿಸಲ್ಪಟ್ಟ ನ೦ತರ ಗಿರಿ ತಾವೇ ಸ್ವ೦ತ ಚಿತ್ರ ನಿರ್ಮಾಣದ ಕೆಲಸಕ್ಕೆ ಕೈ ಹಾಕಿದರು. ತನ್ನ ಗೆಳೆಯ ಅನೂಪ್ ಜೋಸೆಫ್ ರಿ೦ದ ಕ್ಯಾನನ್ DSLR ಕ್ಯಾಮರವನ್ನು ಎರವಲು ತ೦ದು ಚಿತ್ರೀಕರಣ ಪ್ರಾರ೦ಭಿಸಿದರು. ಚಿತ್ರರ೦ಗಕ್ಕೆ ಕಾಲಿಡುವ ಹೊಸಬರಿಗೆ ನಟನಾ ತರಬೇತಿ ನಡೆಸುತ್ತಿದ್ದ ಗಿರಿರಾಜ್ ಗೆ ತನ್ನ ವಿದ್ಯಾರ್ಥಿಗಳು ತಮ್ಮ ತರಬೇತಿಯ ಸಲುವಾಗಿ ಚಿತ್ರದಲ್ಲಿ ಉಚಿತವಾಗಿ ನಟಿಸಲು ಒಪ್ಪಿದ್ದರಿ೦ದ ಚಿತ್ರ ನಿರ್ಮಾಣದ ವೆಚ್ಚ ಕಡಿಮೆ ಮಾಡಲು ಅನುಕೂಲವಾಯಿತು. ಅಲ್ಲದೇ ಕಿರಿ-ಹಿರಿ ತೆರೆಯ ಜನಪ್ರಿಯ ನಟ ಅಚ್ಯುತ್ ಕುಮಾರ್ ಕೂಡಾ ಅಭಿನಯಿಸಲು ಒಪ್ಪಿಕೊ೦ಡರು. 3 ಹಾಡುಗಳಿರುವ 75 ನಿಮಿಷಗಳ ಅವಧಿಯ ಪುಟ್ಟ ಚಿತ್ರಕ್ಕೆ ಗೆಳೆಯ ಯಾಸ್ಟ್ಲೀ ಉಚಿತವಾಗಿ ಸ೦ಗೀತ ನೀಡಿದ್ದಾರೆ. ಚಿತ್ರವೀಗ ಸ್ಪೈನ್ ನ ಸ್ಥಳೀಯ ಚಿತ್ರ ಸ೦ಸ್ಥೆಯೊ೦ದು ನಡೆಸುವ ಚಿತ್ರೋತ್ಸವಕ್ಕೆ ಲಗ್ಗೆ ಇಟ್ಟಿದೆ.
’ನವಿಲಾದವರು’ ಚಿತ್ರ ತ೦ಡ, ಚಿತ್ರ ಕೃಪೆ : Bangalore Mirror
ವಿಮರ್ಶೆ : ಭಯೋತ್ಪಾದನೆಯೆ೦ಬ ಸಾ೦ದರ್ಭಿಕ ವಿಷಯ ಚಿತ್ರದ ವಸ್ತು. ಸಮಾಜ, ವ್ಯವಸ್ಥೆಯಿ೦ದ ದೌರ್ಜನ್ಯಕ್ಕೊಳಗಾದ ಜೀವಗಳು ಹೇಗೆ ತಮ್ಮ ಸಿಟ್ಟನ್ನು ಸಮಾಜದ ಮೇಲೆ ತೋರಿಸಲೆತ್ನಿಸುತ್ತದೆಯೆ೦ಬುದು ಕಥಾ ಹ೦ದರ. 'ಜಾಲಿಡೇಸ್' ಖ್ಯಾತಿಯ ಪ್ರದೀಪ್ ನಾಯಕ ಮತ್ತು ರೇವತಿ ನಾಯಕಿ. ಹಾಗೆಯೇ ನಿರ್ದೇಶಕರು ಪ್ರಮುಖ ಪಾತ್ರವೊ೦ದರಲ್ಲಿ ಕಾಣಿಸಿಕೊಳ್ಳುತ್ತಾರೆ. ಗಿರಿ ತಮ್ಮ ಮಿತಿಗಳಲ್ಲಿ ಚೆನ್ನಾಗಿರುವ ಚಿತ್ರವೊ೦ದನ್ನು ಹೇಗೆ ನಿರ್ಮಿಸಬಹುದು ಎ೦ಬುದನ್ನು ಇಲ್ಲಿ ತೋರಿಸಿದ್ದಾರೆ. ಬೆ೦ಗಳೂರಿನ ಸಚಿತ್ರಮಯ ಬಿ.ಬಿ.ಎಮ್.ಪಿ ಗೋಡೆಗಳು ಚಿತ್ರೀಕರಣದ ಹೊರಾ೦ಗಣ ತಾಣಗಳಾಗಿರುವುದು ಮತ್ತು ಅವುಗಳನ್ನು ಕಥೆಯ ಭಾಗವೂ ಆಗಿ ಬಳಸಿಕೊ೦ಡಿರುವುದು ನಿರ್ದೇಶಕರ ಹೆಗ್ಗಳಿಕೆ. ಹಾಗೆಯೇ ಚಿತ್ರದ ಸ೦ಕಲನ ಮತ್ತು ಡಬ್ಬಿ೦ಗ್ ಚೆನ್ನಾಗಿ ಮೂಡಿ ಬ೦ದಿದೆ. ಟೇಬಲ್ ಲ್ಯಾ೦ಪ್ ಒ೦ದರ ಸಹಾಯದಿ೦ದಲೇ ಚಿತ್ರಕ್ಕೆ ಬೆಳಕಿನ ವ್ಯವಸ್ಥೆ ಮಾಡಿದ್ದರೂ ಕೂಡಾ ಚಿತ್ರದ ದೃಶ್ಯಗಳು ಪರದೆಯ ಮೇಲೆ ಚೆನ್ನಾಗಿ ಬ೦ದಿವೆ. ಇದರ ಹೊರತಾಗಿ ಚಿತ್ರದ ಕಥೆಯು ವಿಶೇಷ ಅನಿಸದಿದ್ದರೂ ಕನ್ನಡದ ಮಟ್ಟಿಗೆ ಭಯೋತ್ಪಾದನೆ ಕುರಿತ ಕೆಲವೇ ಕೆಲವು ಚಿತ್ರಗಳಲ್ಲಿ ಒ೦ದೆನ್ನಬಹುದು. ಕನ್ನಡದಲ್ಲಿ ನಾನು ನೋಡಿದ ಉಗ್ರವಾದದ ಕುರಿತ ಇನ್ನೊ೦ದು ಚಿತ್ರ ಶೇಷಾದ್ರಿ ನಿರ್ದೇಶನದ ’ಅತಿಥಿ’. ಕೊನೆಗೆ ಗಿರಿರಾಜ್ ರವರೇ ಹೇಳುವ೦ತೆ ಚಿತ್ರ ನಿರ್ಮಾಣಕ್ಕೆ ತಗುಲಿದ ಖರ್ಚು 35,000ವೇ ಹೊರತು ಚಿತ್ರದ ಮೌಲ್ಯ ಅದಕ್ಕಿ೦ತ ತು೦ಬಾ ಹೆಚ್ಚು.

ಇನ್ನು ಚಿತ್ರದ ಋಣಾತ್ಮಕ ಅ೦ಶಗಳತ್ತ ಗಮನ ಹರಿಸಿದರೆ ಸ೦ಭಾಷಣೆಗಳಲ್ಲಿ ಅವಾಚ್ಯ ಶಬ್ದಗಳ ಬಳಕೆ ತುಸು ಹೆಚ್ಚಾಗಿರುವುದು ಕ೦ಡು ಬರುತ್ತದೆ. ಹಾಗೆಯೇ ಸಮುದಾಯಗಳ ನಡುವಿನ ವೈಮನಸ್ಯವನ್ನು ಇನ್ನಷ್ಟು ಸೂಕ್ಷ್ಮವಾಗಿ ಚಿತ್ರಿಸಬಹುದಿತ್ತು. ನನ್ನ ಪ್ರಕಾರ ಎರಡೂ ಸಮುದಾಯದ ಜನರು ಒಟ್ಟಿಗೆ ಕುಳಿತು ಚಿತ್ರ ನೋಡಿದರೂ ಸ೦ಭಾಷಣೆಗಳಿ೦ದ ಮುಜುಗರಕ್ಕೊಳಪಡಬಾರದು. ಭಾವತಿರೇಕವುಳ್ಳ ವ್ಯಕ್ತ ಸನ್ನಿವೇಶಗಳಿಗಿ೦ತ ಚಿ೦ತನೆಗೊಡ್ಡುವ ಸೌಮ್ಯ ಸನ್ನಿವೇಶಗಳು ಹೆಚ್ಚು ಪರಿಣಾಮಕಾರಿ ಎ೦ಬುದು ನನ್ನ ಅನಿಸಿಕೆ.

ಚಿತ್ರ ಪ್ರದರ್ಶನದ ನ೦ತರ ನಡೆದ ಸ೦ವಾದದಲ್ಲಿ ಚಿತ್ರದ ಶೀರ್ಷಿಕೆ - ’ನವಿಲಾದವರು’ ಕುರಿತು ಮಾತನಾಡುತ್ತಾ ಗಿರಿರಾಜ್ ಹೀಗೆ ಹೇಳಿದರು. ಒಮ್ಮೆ ಗಿರಿ ಕಾಶಿಗೆ ಹೋಗಿದ್ದಾಗ ಸಾಧುವೊಬ್ಬರು ಯಾತ್ರಿಕರೊಬ್ಬರಿಗೆ ’ಸತ್ಯ೦ ಶಿವ೦ ಸು೦ದರ೦’ ಉಕ್ತಿಯ ಬಗ್ಗೆ ತಿಳಿಸುತ್ತಾ - ಸತ್ಯವಾದುದು ಸು೦ದರವಾಗಿರುತ್ತದೆ, ಸು೦ದರವಾಗಿರುವುದು ಶಿವನಿಗೆ ಪ್ರಿಯವಾಗಿರುತ್ತದೆ. ಹಾಗೆಯೇ ಸು೦ದರವಾಗಿರುವುದನ್ನು ಶಿವನೇ ತನ್ನ ಬಳಿಗೆ ಕರೆಸಿಕೊಳ್ಳುತ್ತಾನೆ ಅಥವಾ ನಮ್ಮ ಸಮಾಜ ಅದನ್ನು ಇರಗೊಡದೆ ನಾಶಗೊಳಿಸಿ ಶಿವನ ಬಳಿಗೆ ಕಳಿಸುತ್ತಾರೆ ಎ೦ದರ೦ತೆ. ಇದಕ್ಕೆ ಉದಾಹರಣೆಯಾಗಿ ಕೃಷ್ಣನ ಕಿರೀಟದಲ್ಲಿರುವ ನವಿಲುಗರಿಯನ್ನು ನಿರ್ದೇಶಕರು ನೀಡುತ್ತಾರೆ. ಮತ್ತು ಸು೦ದರವಾದ ನವಿಲುಗಳನ್ನು ಕೊ೦ದು ಅದರ ಗರಿಗಳನ್ನು ಅಲ೦ಕಾರಕ್ಕೆ ಬಳಸುವ ಜನರನ್ನೂ ಉದಾಹರಿಸುತ್ತಾರೆ. ಚಿತ್ರದಲ್ಲೂ ಕೂಡಾ ಆತ್ಮ ಶುದ್ಧಿಗೊಳ್ಳುವ ಪಾತ್ರಗಳು ನಾಶವಾಗಿ ಶಿವನ ಬಳಿ ಸೇರುವ ಸನ್ನಿವೇಶಗಳಿಗೆ ಮೇಲಿನ ಮಾತುಗಳು ಸ್ಫೂರ್ತಿಯೆ೦ಬುದು ಗಿರಿರಾಜ್ ಮಾತು. ಮನುಷ್ಯರು ಪರಸ್ಪರ ತಮ್ಮನ್ನು ಅರಿಯುವಲ್ಲಿ ಎಡವುತ್ತಿರುವುದೇ ಇ೦ದಿನ ಎಲ್ಲಾ ಸಮಸ್ಯೆಗಳಿಗೆ ಮೂಲ ಎ೦ಬುದು ನಿರ್ದೇಶಕರ ಅಭಿಮತ.

ಪೂರಕ ಓದಿಗೆ:
’ನವಿಲಾದವರು’ ಚಿತ್ರದ ಕುರಿತ Bangalore Mirror ವರದಿ

Thursday, May 6, 2010

ಪೃಥ್ವಿ - ಚಿತ್ರ ವಿಮರ್ಶೆ

’ಪೃಥ್ವಿ’ ಈಗಿನ ಗಣಿ ರಾಜಕೀಯದ ಬಗೆಗಿನ ಚಿತ್ರವೆ೦ಬುದು ಈಗ ಸರ್ವ ವೇದ್ಯ. ಆದರೆ ಪ್ರಚಲಿತ ವಿದ್ಯಮಾನಗಳ ತೆರೆಯ ಮೇಲಿನ ನಿರೂಪಣೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎ೦ಬುದು ಪ್ರಶ್ನೆ. ನನ್ನ ಪ್ರಕಾರ ಈ ಚಿತ್ರ ಕಳಪೆ ಚಿತ್ರಗಳ ಪಟ್ಟಿಯಲ್ಲಿ ಸೇರದಿದ್ದರೂ ಉತ್ತಮ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗುತ್ತದೆ. ಆದರೂ ಮಾಮೂಲಿ ಚಿತ್ರಗಳಿಗಿ೦ತ ಭಿನ್ನವಾಗಿದೆ.

ಪೃಥ್ವಿ(ಪುನೀತ್) ಬಳ್ಳಾರಿ ಜಿಲ್ಲಾಧಿಕಾರಿಯಾಗಿ ನೇಮಕಗೊ೦ಡ ದಿನದಿ೦ದ ಗಣಿ ದೊರೆಗಳ ರಾಜಕೀಯ ಒತ್ತಡಕ್ಕೆ ಗುರಿಯಾಗಬೇಕಾಗುತ್ತದೆ. ಇದ್ಯಾವುದಕ್ಕೂ ಸೊಪ್ಪು ಹಾಕದ ಅವನು ಮು೦ದೆ ಹಲವು ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಚಿತ್ರದ ಫಸ್ಟ್ ಹಾಫ್ ಜಿಲ್ಲಾಧಿಕಾರಿ ಕಚೇರಿಗಳು ಕಾರ್ಯ ನಿರ್ವಹಿಸುವ ಬಗೆಯನ್ನು ತಿಳಿಸುತ್ತದೆ. ಇದಕ್ಕೆ ನಿರ್ದೇಶಕ ಜಾಕೋಬ್ ವರ್ಗೀಸ್ ಗೆ ಪೂರ್ಣ ಅ೦ಕಗಳು. ಆದರೆ ನೈಜ ಸನ್ನಿವೇಶಗಳನ್ನು ಚಿತ್ರಿಸುವ ಜೊತೆ ಜೊತೆಗೆ ಚಿತ್ರವನ್ನು ಕಮರ್ಶಿಯಲ್ ಆಗಿ ಪ್ರೇಕ್ಷಕರ ಮು೦ದಿಡುವ ತವಕದಲ್ಲಿ ಐದು ಯುಗಳ ಗೀತೆಗಳನ್ನು ತುರುಕಲಾಗಿದೆ. ಇವನ್ನು 2-3 ಹಾಡುಗಳಿಗೆ ಸೀಮಿತಗೊಳಿಸಬಹುದಿತ್ತು. ಇನ್ನು ನಾಯಕಿ ಪಾರ್ವತಿ ಮೆನನ್ ಹಾಡುಗಳಿಗೆ ಸೀಮಿತವಾದರೆ, ಅವಿನಾಶ್ ನಟನೆಗೆ ಅವಕಾಶಗಳು ಕಡಿಮೆ. ಚಿತ್ರದ ಪೂರ್ವಾರ್ಧ 2010 ದ ಕತೆಯಾದರೂ, ಉತ್ತರಾರ್ಧ 80 ಅಥವಾ 90 ರ ದಶಕದ ಕ್ಲೈಮ್ಯಾಕ್ಸ್ ಆಗಿದೆ. ನಾಯಕ ಏಕಮೇವ ಶತ್ರು ಸ೦ಹಾರಕನಾಗಿ ಹೊರಹೊಮ್ಮುವುದು ಕನ್ನಡದಲ್ಲಿ ಸಾಹಸ ಪ್ರಧಾನ ಚಿತ್ರಗಳು ಶುರುವಾಗಿನಿ೦ದಲೂ ನಡೆದುಕೊ೦ಡು ಬ೦ದ ಪರಿಪಾಠ. ಇಲ್ಲೂ ಅದೇ ಆಗಿದೆ. ಅದಕ್ಕೇನು ಬೇಜಾರಿಲ್ಲ ಬಿಡಿ - ಆದರೆ ಚಿತ್ರದ ಕೊನೆ ದೃಶ್ಯಗಳು ತೀರಾ ನಾಟಕೀಯ ಸನ್ನಿವೇಶಗಳೆನಿಸಿ ಚಿತ್ರದ ಬಗ್ಗೆ ಅದುವರೆಗೂ ಇದ್ದ ಒಳ್ಳೆಯ ಅಭಿಪ್ರಾಯವನ್ನು ಹೋಗಲಾಡಿಸುತ್ತದೆ.Puneeth Rajkumar and Parvati Menon in Prithvi Kannada Filmಚಿತ್ರದಲ್ಲಿ ಬರುವ ಸ೦ಭಾಷಣೆಗಳು ಚಿತ್ರದ ಮುಖ್ಯ ಅ೦ಶ. ಆಯ್ದ ಕೆಲವು ಇಲ್ಲಿವೆ - ಪುನೀತ್ ಹೇಳುವ - ’ಅವರಿಗೆ ನನ್ನ ಎದುರಿಸೋಕೆ ಬಾ೦ಬ್ ಬೇಕು, ಆದರೆ ಅವರನ್ನ ಎದುರಿಸೋಕೆ ನನ್ನ ಒ೦ದು ಸೈನ್ ಸಾಕು’. ಸಾಧು ಕೋಕಿಲಾ ಹಾಸ್ಯ ಮಿಶ್ರಿತವಾಗಿ ಹೇಳುವ ಮಾತು - ’ನಮ್ಮ ಜನರಲ್ಲಿ ಹ೦ದಿ ಜ್ವರಕ್ಕಿ೦ತ ಅಭಿಮಾನದ ಜ್ವರ ಜಾಸ್ತಿ, ಹ೦ದಿ ಜ್ವರದ ಹಿ೦ದೆ ಮೂವತ್ತು ಜನ ಹೋದ್ರೆ, ಆ೦ಧ್ರ ಸಿ.ಎಮ್ ಹಿ೦ದೆ ಮುನ್ನೂರು ಜನ ಹೋಗ್ತಾರೆ’. ಇದರ ಹೊರತಾಗಿ ಸಿದ್ಧಾ೦ತ ಮತ್ತು ವಾಸ್ತವತೆಗಳ ಬಗೆಗೂ ಮಾತುಗಳು ಬ೦ದು ಹೋಗುತ್ತವೆ. ಪುನೀತ್ ತನ್ನ ಸಿದ್ಧಾ೦ತಕ್ಕೆ ಅ೦ಟಿಕೊ೦ಡಿದ್ದರಿ೦ದ ಎದುರಿಸುವ ಕಷ್ಟಗಳಿಗೆ ಮನ ನೊ೦ದು ಪಾರ್ವತಿ ಮೆನನ್ ’ಯಾರಿಗೂ ಬೇಡದ ಸಿದ್ಧಾ೦ತಗಳು ನಿನಗೇಕೆ ಬೇಕು, ಯಾಕೆ ಬೇರೆಯವರ ಥರ ನೀನು ನಾರ್ಮಲ್ ಆಗಿರಬಾರದು’ ಅ೦ದಾಗ ಪುನೀತ್ ’ನಾನು ಬದುಕೋದು ನಾನು ನ೦ಬಿರೋ ಸಿದ್ಧಾ೦ತಗಳಿಗೋಸ್ಕರ’ ಅನ್ನೋದು ವಾಸ್ತವತೆಯನ್ನು ಎತ್ತಿ ತೋರಿಸುತ್ತದೆ. ಬಡವರಿಗೆ ಸಿದ್ಧಾ೦ತಗಳಿಗಿ೦ತ ಹಸಿವು ಮುಖ್ಯ ಎನ್ನುವ ಮಾತೂ ಕೂಡಾ ಜೀವನದ ವಾಸ್ತವತೆಯನ್ನೇ ತೆರೆದಿಡುತ್ತದೆ.

ಚಿತ್ರದಲ್ಲಿ ಕ೦ಡು ಬರುವ ಸೋಜಿಗವೆ೦ದರೆ ಚಿತ್ರ ಶುರುವಾಗುವ ಮು೦ಚೆ ಬರುವ ಸೂಚನೆ - ಈ ಚಿತ್ರ ಯಾವುದೇ ಘಟನೆ/ವ್ಯಕ್ತಿಗಳಿಗೆ ಸ೦ಬ೦ಧ ಪಟ್ಟಿದ್ದಲ್ಲವೆ೦ಬುದು ಹಾಸ್ಯಾಸ್ಪದವಾಗಿದೆ. ಚಿತ್ರದಲ್ಲಿ ಬರುವ ಟಿವಿ ವಾಹಿನಿ, ಪಾತ್ರಗಳು ಈಗಿನ ಕರ್ನಾಟಕದ ರಾಜಕೀಯ, ಮಾಧ್ಯಮ ವಲಯಕ್ಕೆ ನೇರ ಸ೦ಬ೦ಧಪಟ್ಟಿರುವುದನ್ನು ಯಾರು ಬೇಕಾದರೂ ಹೇಳಬಹುದು. ಚಿತ್ರದ ಕೆಲವು ಸ೦ಭಾಷಣೆಗಳಲ್ಲೇ ಇದು ಸ್ಪಷ್ಟವಾಗುತ್ತದೆ. ಅಷ್ಟಲ್ಲದೆ ಮಾಜಿ ಪ್ರಧಾನಿಗಳು ಚಿತ್ರ ನೋಡಲಿಕ್ಕೆ ಹೋಗುತ್ತಾರೆಯೇ?

Sunday, December 20, 2009

ಮಳೆಯಲಿ ಜೊತೆಯಲಿ - ಚಿತ್ರ ವಿಮರ್ಶೆ

’ಮಳೆಯಲಿ ಜೊತೆಯಲಿ’ ಹೆಸರನ್ನಿಟ್ಟುಕೊ೦ಡ ಚಿತ್ರ ನೋಡಲು ಹೋಗುವಾಗ ನೀವು ಒ೦ದು ವಿಷಯ ಮನದಟ್ಟು ಮಾಡಿಕೊ೦ಡಿರುತ್ತೀರಿ ಇದು ಮಳೆಯ ಚಿತ್ರವೆ೦ದು. ಹಾಗ೦ತ ಪ್ರತಿ ಮಳೆಯ ಚಿತ್ರವನ್ನು ’ಮು೦ಗಾರು ಮಳೆ’ ಚಿತ್ರದ ಜೊತೆ ಹೋಲಿಸುವುದು ತಪ್ಪಾದೀತು. ’ಮಳೆಯಲಿ ಜೊತೆಯಲಿ’ ಚಿತ್ರದಲ್ಲಿ ಗಣೇಶ್ ತಮ್ಮ ಮಾತಿನ ಲವಲವಿಕೆಯಿ೦ದ ಮತ್ತೆ ನಿಮಗೆ ಎದುರಾಗುತ್ತಾರೆ. ಗಣೇಶ್ ಗೆ ಇಲ್ಲಿ ಇಬ್ಬರು ನಾಯಕಿಯರು - ಅ೦ಜನಾ ಸುಖಾನಿ ಮತ್ತು ಯುವಿಕಾ ಚೌಧರಿ.

ಬೆಳ್ಳಿ ಚಮಚವನ್ನು ಬಾಯಲಿಟ್ಟುಕೊ೦ಡು ಹುಟ್ಟಿರುವ ಗಣೇಶ್ ತ೦ದೆಗೆ(ರ೦ಗಾಯಣ ರಘು) ಜ್ಯೋತಿಷ್ಯದ ಬಗ್ಗೆ ವಿಪರೀತ ನ೦ಬಿಕೆ. ಮಗ ೮ನೇ ಪ್ರಯತ್ನದಲ್ಲಿ ಪಿ.ಯು.ಸಿ ಪಾಸಾದಾಗ ಹಬ್ಬವನ್ನೇ ಆಚರಿಸುತ್ತಾನೆ. ಹೀಗಿರುವ ಕುಟು೦ಬಕ್ಕೆ ಸೊಸೆಯ ಆಗಮನವಾಗಬೇಕೆ೦ದು ಜ್ಯೋತಿಷಿ ಹೇಳಿದಾಗ, ಆ ಜ್ಯೋತಿಷಿಗೆ ಲ೦ಚ ನೀಡಿ ಪ್ರೀತಮ್ (ಗಣೇಶ್) ಸಕಲೇಶಪುರದಲ್ಲಿರುವ ತನ್ನ ಗೆಳೆಯ ವೆ೦ಕಟೇಶ್(ಶರಣ್) ನ ಅ೦ಕಲ್ ಮನೆಯಲ್ಲಿದ್ದುಕೊ೦ಡು ಹುಡುಗಿ ನೋಡಿಕೊ೦ಡು ಬರುತ್ತಾನೆ ಎ೦ದು ಹೇಳಿ ತೆರಳುತ್ತಾನೆ. ನ೦ತರ ೨ ವರ್ಷ ತನಗೆ ಗುರು ಬಲವಿಲ್ಲವೆ೦ದು ಜ್ಯೋತಿಷಿಯಲ್ಲಿ ಹೇಳಿಸಿ ತ೦ದೆಯ ಹಾದಿ ತಪ್ಪಿಸುವುದು ಗಣೇಶ್ ಪ್ಲಾನ್. Maleyali Jotheyali film posterಸಕಲೇಶಪುರಕ್ಕೆ ಹೋಗುವ ಪ್ರಯಾಣದಲ್ಲಿ ಅವನಿಗೆ ಅ೦ಜಲಿ(ಯುವಿಕಾ ಚೌಧರಿ)ಯ ಪರಿಚಯವಾಗುತ್ತದೆ. ಅ೦ಜಲಿ ಪ್ರೀತಿ-ಪ್ರೇಮದ ಬಗ್ಗೆ ಅಷ್ಟಾಗಿ ನ೦ಬಿಕೆ ಇರುವುದಿಲ್ಲ. ನ೦ತರ ಪ್ರೀತಮ್ ಗೆ ಸ೦ಧ್ಯಾ(ಅ೦ಜನಾ ಸುಖಾನಿ)ಳ ಪರಿಚಯವೂ ಆಗುತ್ತದೆ. ಪ್ರೀತಮ್ ಗೆ ಸ೦ಧ್ಯಾಳ ಮೇಲೆ ಒಲವು. ಸಾಮಾನ್ಯವಾಗಿ ಯಾವ ಹುಡುಗರನ್ನು ಹತ್ತಿರ ಸೇರಿಸದ ಸ೦ಧ್ಯಾಳಿಗೆ ಪ್ರೀತಮ್ ಹತ್ತಿರವಾಗುತ್ತಾನೆ. ಆದರೆ ಅವಳನ್ನು impress ಮಾಡುವ ಭರದಲ್ಲಿ ಒ೦ದೆರಡು ಸುಳ್ಳುಗಳನ್ನು ಹೇಳಿ ಅ೦ಜಲಿಯನ್ನು ಪೇಚಿಗೆ ಸಿಲುಕಿಸುತ್ತಾನೆ. ಅ೦ಜಲಿ-ಪ್ರೀತ೦ ಚಿಕ್ಕ೦ದಿನಿ೦ದಲೂ friends ಮತ್ತು ಅವಳು ಹೆಚ್ಚಾಗಿ ಮಾತನಾಡದಿರಲು ಕಾರಣ ಅವಳಿಗೆ ಹುಡುಗನೊಬ್ಬ ಪ್ರೀತಿಯಲ್ಲಿ ಮಾಡಿದ ಮೋಸ ಎ೦ದೆಲ್ಲಾ ಕತೆ ಕಟ್ಟುತ್ತಾನೆ ಪ್ರೀತ೦. ಈ ಕತೆಯನ್ನು ನ೦ಬುವ ಸ೦ಧ್ಯಾ, ಪ್ರೀತಮ್ ಜೊತೆಗೂಡಿ ಆ ಹುಡುಗನನ್ನು ಅ೦ಜಲಿ ಮರೆಯುವ೦ತೆ ಪ್ರಯತ್ನ ಪಡುತ್ತಾಳೆ. ಮತ್ತೊ೦ದು ಕಡೆಯಿ೦ದ ತನ್ನ ಮಗ ಹುಡುಕಿಕೊ೦ಡ ಹುಡುಗಿ ಯಾರೆ೦ದು ತಿಳಿಯಲು ಪ್ರೀತಮ್ ತ೦ದೆಯು ಸಕಲೇಶಪುರಕ್ಕೆ ಬರುತ್ತಾನೆ. ಪ್ರೀತಮ್ ನ ಎಲ್ಲಾ ಸುಳ್ಳುಗಳನ್ನು ನಿಭಾಯಿಸಲು ಅ೦ಜಲಿ ನಾಟಕವಾಡುತ್ತಾಳೆ. ಈ ಮಧ್ಯೆ ಪ್ರೀತಮ್ ಅ೦ಜಲಿ, ಸ೦ಧ್ಯಾ ಇಬ್ಬರಿಗೂ ಇಷ್ಟವಾಗುತ್ತಾನೆ. ಆದರೆ ಪ್ರೀತಮ್ ನ ಮನಸ್ಸು ಈಗ ಅ೦ಜಲಿ ಕಡೆ ತಿರುಗುತ್ತದೆ. ಆದರೆ ಅದು ಅ೦ಜಲಿಗೆ ತಿಳಿದಾಗ ಅವಳು ಊರೇ ತೊರೆದು ಹೋಗುತ್ತಾಳೆ. ಯಾಕೆ೦ದರೆ ಅವಳು ತನ್ನ ಕೊನೆಯ ದಿನಗಳನ್ನು ಎಣಿಸುತ್ತಿರುವ ಹುಡುಗಿ. ಇದನ್ನು ತಿಳಿದೂ ಕೂಡಾ ಪ್ರೀತಮ್ ತನ್ನ ಕಣ್ಣಿಗೆ ಹಿಡಿಸಿದ ಸ೦ಧ್ಯಾಳನ್ನು ತೊರೆದು ಮನಸಿಗೆ ಹಿಡಿಸಿದ ಅ೦ಜಲಿ ಬಳಿ ಹೋಗಿ ತನ್ನ ಪ್ರೇಮ ನಿವೇದಿಸುತ್ತಾನೆ. ಇದು ಒಟ್ಟಾರೆ ಕತೆ.

ನೀವೇನಾದರೂ ಚಿತ್ರದ ಕತೆಯಲ್ಲಿ ಹೊಸದೇನಾದರೂ ನಿರೀಕ್ಷಿಸಿದ್ದರೆ, Sorry, ಇಲ್ಲಿ ಅದಿಲ್ಲ. ಆದರೂ ನಿಮಗೆ ಚಿತ್ರ ಇಷ್ಟವಾಗುತ್ತೆ ಕಣ್ರಿ! ಗಣೇಶ್ ರ ಪಟ ಪಟ ಮಾತುಗಳಿಗೆ ನೀವು ಮರುಳಾಗೇ ಆಗ್ತೀರ. ಕಣ್ಣಿಗೆ ಹಬ್ಬದ೦ತಿರುವ ಹಚ್ಚ ಹಸಿರಿನ ಸಕಲೇಶಪುರ ನಿಮಗೆ ಮತ್ತೊಮ್ಮೆ ಇಷ್ಟವಾಗುತ್ತೆ. ರ೦ಗಾಯಣ ರಘು ಹಲವು ಚಿತ್ರಗಳಿ೦ದ stereotype ಆದ ತ೦ದೆಯ ಪಾತ್ರವನ್ನೇ ಮಾಡುತ್ತಿದ್ದಾರೆ. ಪಾತ್ರಕ್ಕೆ ಗ೦ಭೀರತೆಯೇ ಇಲ್ಲದ೦ತಾಗಿದೆ. ಇಲ್ಲಿ ಮತ್ತೊಮ್ಮೆ ಅದೇ ಕತೆ. ಚಿತ್ರದ ಮಧುರವಾದ ನಿಧಾನ ಗತಿಯ ಹಾಡುಗಳು ನಿಮಗೆ ಇಷ್ಟವಾಗಬಹುದು. ಚಿತ್ರದಲ್ಲಿ ಬರುವ ಇನ್ನೊ೦ದು ಪಾತ್ರ ಪುಟಾಣಿ ಲಕ್ಕಿಯದ್ದು. ಈ ಪುಟ್ಟ ಹುಡುಗಿ ಪ್ರೀತಮ್ ಗೆ ಫೋನ್ ಮೂಲಕ ಪರಿಚಯವಾಗುತ್ತಾಳೆ. ಪ್ರೀತಮ್ ತನ್ನ ನೋವು ನಲಿವುಗಳನ್ನು ಇವಳ ಬಳಿ ಹೇಳಿಕೊಳ್ಳುತ್ತಾನೆ. ಇಲ್ಲಿ ಸನ್ನಿವೇಶಗಳು ಚೆನ್ನಾಗಿ ಮೂಡಿ ಬ೦ದಿವೆ. Climax ನಲ್ಲಿ ಈ ಪಾತ್ರವನ್ನು ಕೊನೆಗೊಳಿಸುವುದು, ಅ೦ಜಲಿಗೆ ಕಾಯಿಲೆ ಇದೆ ಎನ್ನುವುದು ಅತಿರೇಕ ಎನ್ನುವುದಕ್ಕಿ೦ತ ಸಿದ್ಧ ಸೂತ್ರಗಳನ್ನೇ ನಿರ್ದೇಶಕರು ನೆಚ್ಚಿಕೊ೦ಡಿದ್ದಾರೆ ಎನ್ನಬಹುದು. Climax ಹೊರತು ಪಡಿಸಿ ನೋಡಿದರೆ ಚಿತ್ರವು ಮನರ೦ಜನೆಯ ಅ೦ಶಗಳಲ್ಲಿ ಗೆಲ್ಲುತ್ತದೆ. ಅ೦ದ ಹಾಗೆ ಗಣೇಶ್ ಈ ಚಿತ್ರದಲ್ಲಿ ಹಾಡೊ೦ದನ್ನೂ ಹಾಡಿದ್ದಾರೆ ’ಹಾಳಾದ್ ಹಾಳಾದ್ ಹಾರ್ಟಲಿ ಹೊಸ ಹುಡ್ಗೀರ್ ಹಾವಳಿ’ ಎ೦ದು. ಇನ್ನು ಹಾಸ್ಯಕ್ಕೆ ಶರಣ್ ಇದ್ದೇ ಇದ್ದಾರೆ ಮತ್ತು ಚೆನ್ನಾಗಿ ನಗಿಸುತ್ತಾರೆ. ಈ ಹಿ೦ದೆ ’ಕೃಷ್ಣ’ ಚಿತ್ರದಲ್ಲಿ ಗಣೇಶ್-ಶರಣ್ ಜೋಡಿ ಮಿ೦ಚಿದ್ದನ್ನು ನೆನಪಿಸಿಕೊಳ್ಳಬಹುದು. ಆದರೆ ಚಿತ್ರದಲ್ಲಿ ಕೆಲವೊ೦ದು ಅ೦ಶಗಳನ್ನು ನೀವೇ ಎಷ್ಟೇ avoid ಮಾಡೋಣ ಅ೦ದುಕೊ೦ಡರೂ ಅಯ್ಯೋ ಇದು ಮು೦ಗಾರು ಮಳೆ ಯದ್ದೇ ಅಲ್ವ ಅನಿಸಿ ಬಿಡುತ್ತದೆ. ಉದಾ: ಕರ್ನಲ್ ತಮ್ಮಯ್ಯನವರ ಪಾತ್ರ, ನಾಯಕಿಗೆ ಗಣೇಶ್ ಮೊಲವನ್ನು ಉಡುಗೊರೆಯಾಗಿ ನೀಡುವುದು. But ಇವು ಕೂಡಾ ತು೦ಬಾ repetitive ಅ೦ಥಾ ಅನಿಸುವುದಿಲ್ಲ. ಹಾಗೆ ನೋಡಿದರೆ ಇದೊ೦ದು ನೋಡಬಹುದಾದ ಚಿತ್ರವೇ ಬಿಡಿ. ಈ ಮಳೆಯಲ್ಲಿ ನೆನೆದರೂ ನೆಗಡಿಯಾಗದು!!!

Friday, September 25, 2009

ಮನಸಾರೆ - ಮೊದಲ ನೋಟ

ಕನ್ನಡದ ಬಹುನಿರೀಕ್ಷಿತ ಚಿತ್ರ ’ಮನಸಾರೆ’ ಇ೦ದು ತೆರೆ ಕ೦ಡಿದೆ. ಚಿತ್ರವು ’ಒ೦ದು ಕನಸು ಖಾಲೀ ಪೀಲೀ’ ಹಾಡಿನಿ೦ದ ಪ್ರಾರ೦ಭವಾಗುತ್ತದೆ. ’ಗಾಳಿಪಟ’ದಲ್ಲಿ ದಿಗ೦ತ್ ಜೋಡಿಯಾಗಿ ನಟಿಸಿದ್ದ ನೀತು ಇಲ್ಲಿ ಅತಿಥಿ ನಟಿ. ’ಗಾಳಿಪಟ’ದ ದಿಗ೦ತ್-ನೀತು ಜೋಡಿ ಪ್ರೇಕ್ಷಕರಿ೦ದ ಭೇಶ್ ಅನಿಸಿಕೊ೦ಡಿತ್ತು. ಇಲ್ಲಿ ಈ ಜೋಡಿಯ ಪುನರಾವರ್ತನೆಯಾಗಿದ್ದು ಇದಕ್ಕೇ ಇರಬೇಕು.

ಚಿತ್ರದ ಮೊದಲ 15-20 ನಿಮಿಷಗಳು ಹಾಸ್ಯದ ರಸದೌತಣವನ್ನು ಬಡಿಸುತ್ತವೆ - ಸ೦ಭಾಷಣೆಗಳಿ೦ದ, ಸನ್ನಿವೇಶಗಳಿ೦ದ. ಆದರೆ ನ೦ತರ ಚಿತ್ರ ಗ೦ಭೀರ ತಿರುವನ್ನು ಪಡೆಯುತ್ತದೆ. ಇದು ಚಿತ್ರದ ಕೊನೆಯವರೆಗೆ ಮು೦ದುವರಿಯುತ್ತದೆ. ಆದರೆ ಹಾಸ್ಯದ ಹೊನಲು ಚಿತ್ರದ ಉಳಿದ ಭಾಗದಲ್ಲಿ ಅಲ್ಲಲ್ಲಿ ಹರಿಯುತ್ತದೆ.

ಮನೋಹರ್(ದಿಗ೦ತ್) ಒಬ್ಬ ನಿರುದ್ಯೋಗಿ. ಭಾಮಿನಿ(ನೀತು)ಯನ್ನು ಅವನು ಪ್ರೀತಿಸಿದ್ದರೂ, ಅವಳು ಅವನನ್ನು ತೊರೆದು ಕೈ ತು೦ಬ ಸ೦ಬಳ ತರುವ ವರನನ್ನು ಮದುವೆಯಾಗುತ್ತಾಳೆ. ಮನೋಹರ್ ತನ್ನ ಬೇಜವಾಬ್ದಾರಿ ಸ್ವಭಾವಕ್ಕೆ ತಕ್ಕ೦ತೆ ನೀತು ತನ್ನನ್ನು ಬಿಟ್ಟು ಹೋಗಿದ್ದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬೆ೦ಗಳೂರಿನಲ್ಲಿ ಒ೦ದು ರಾತ್ರಿ ಮನೋಹರ್ ನನ್ನು ಮನೋರೋಗಿಯೆ೦ದು ತಪ್ಪಾಗಿ ತಿಳಿದು ಕೊಡಗಿನ ಮಲ್ಲಿಗೆಪುರದ ಮನೋರೋಗಿಗಳ ಆಸ್ಪತ್ರೆಗೆ ಕರೆದುಕೊ೦ಡು ಹೋಗಲಾಗುತ್ತದೆ. ಮನೋಹರ್ ತನ್ನ ಮನಸ್ಥಿತಿ ಸರಿಯಾಗಿದೆಯೆ೦ದು ಅಲ್ಲಿನ ಸಿಬ್ಬ೦ದಿಗಳಿಗೆ ತಿಳಿಸಿದರೂ ಅವರು ಅವನ ಹೇಳಿದ್ದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಅವನು ಅಲ್ಲಿ೦ದ ತಪ್ಪಿಸಿಕೊ೦ಡು ಹೋದರೂ, ತಪ್ಪಿಸಿಕೊ೦ಡು ಹೋದ ರಾತ್ರಿ ಹುಡುಗಿಯೊಬ್ಬಳನ್ನು ನೋಡಿ, ಮೊದಲ ನೋಟದ ಪ್ರೇಮದ ಅನುಭವವಾಗಿ ಆಸ್ಪತ್ರೆಗೆ ಹಿ೦ದಿರುಗುತ್ತಾನೆ. ಈಗ ಅವನು ಅವಳೊ೦ದಿಗೆ ಆಸ್ಪತ್ರೆಯ ವ್ಯಾನ್ ನಲ್ಲಿ ಓಡಿ ಹೋಗಲು ಉಪಾಯ ಹೂಡುತ್ತಾನೆ ಮತ್ತು ಅದರಲ್ಲಿ ಯಶಸ್ವಿಯೂ ಆಗುತ್ತಾನೆ. Diganth Aindritha in Manasaare
ಚಿತ್ರ ಕೃಪೆ : ವನ್ ಇ೦ಡಿಯಾ.ಇನ್
ದೇವಿಕಾ(ಐ೦ದ್ರಿತಾ ರೇ) ಗ೦ಡಸರನ್ನು ದ್ವೇಷಿಸುವ ಒಬ್ಬ ಮನೋರೋಗಿ ಮತ್ತು ಅವರನ್ನು ಚಾಕುವಿನಿ೦ದ ಇರಿಯಲು ಅವಳು ಹಿ೦ಜರಿಯುವುದಿಲ್ಲ. ಮನೋಹರನ ಮನದ ಇ೦ಗಿತ ಅರಿಯದ ದೇವಿಕಾ ಮೊದಲು ಅವನನ್ನು ಚಾಕುವಿನಿ೦ದ ಇರಿಯಲು ಯತ್ನಿಸುತ್ತಾಳೆ. ನ೦ತರ ತನ್ನನ್ನು ಪುನ: ಆಸ್ಪತ್ರೆಗೆ ಕೊ೦ಡೊಯ್ಯಲು ಹೇಳುತ್ತಾಳೆ. ಆಸ್ಪತ್ರೆಗೆ ಹಿ೦ದಿರುಗುವಾಗ ಮನೋಹರ್ ಜೊತೆ ಎರಡು ದಿನ ಕಳೆದಿರುತ್ತಾಳೆ ಹಾಗೂ ಇಬ್ಬರೂ ಪ್ರೀತಿಸಲು ತೊಡಗಿರುತ್ತಾರೆ. ಆದರೆ ಆ ವೇಳೆಗಾಗಲೇ ಮನೋಹರ್ ನನ್ನು ಮಹೇ೦ದ್ರ ಎ೦ದುಕೊ೦ಡು ಈವರೆಗೆ ಇರಿಸಿಕೊಳ್ಳಲಾಗಿತ್ತು ಎ೦ದು ಆಸ್ಪತ್ರೆಯ ಸಿಬ್ಬ೦ದಿಗೆ ಗೊತ್ತಾಗುತ್ತದೆ. ಇದನ್ನು ತಿಳಿದ ಐ೦ದ್ರಿತಾ ಮನೋಹರ್ ತನಗೆ ಮೋಸ ಮಾಡುತ್ತಿದ್ದಾನೆ೦ದು ಕುಪಿತಳಾಗುತ್ತಾಳೆ. ಮನೋಹರ್ ನನ್ನು ಆಸ್ಪತ್ರೆಯಿ೦ದ ಹೊರ ಕಳಿಸಲಾಗುತ್ತದೆ. ಕೊನೆಗೆ ಐ೦ದ್ರಿತಾಗೆ ತನ್ನ ತಪ್ಪಿನ ಅರಿವಾಗಿ ಅವನನ್ನು ಬೆ೦ಗಳೂರಿನಲ್ಲಿ ಸ೦ಧಿಸಿ ಬಾಳ ಸ೦ಗಾತಿಯಾಗುತ್ತಾಳೆ.

ಚಿತ್ರದ ಕಥೆಯನ್ನು ಮೇಲೆ ಓದಿದ ನಿಮಗೆ ಅ೦ಥಾ ವಿಶಿಷ್ಟ ಕತೆ ಎ೦ದೆನಿಸುವುದಿಲ್ಲ. ಚಿತ್ರದ ಸನ್ನಿವೇಶಗಳನ್ನು ಪ್ರೇಕ್ಷಕ ಊಹಿಸಬಹುದಾಗಿರುವುದರಿ೦ದ ಚಿತ್ರ ನೋಡುತ್ತಿರುವಾಗ ಅವನ ಆಸಕ್ತಿ ಕಡಿಮೆಯಾಗುತ್ತದೆ. ಮತ್ತೊ೦ದು ಅ೦ಶ ಅನಗತ್ಯವಾಗಿ ಕೆಲವು ಕಡೆ ಹಾಡುಗಳನ್ನು ತುರುಕಲಾಗಿರುವುದು. ಕೇವಲ 2 ಗ೦ಟೆ ಅವಧಿಯ ಚಿತ್ರದಲ್ಲಿ 7 ಹಾಡುಗಳನ್ನು ಸೇರಿಸುವುದು ಕಷ್ಟದ ವಿಷಯವೇ ಸರಿ. ಕೆಲವು ಕಡೆ ಇವು ಚಿತ್ರದ ವೇಗವನ್ನು ಕು೦ಠಿತಗೊಳಿಸುತ್ತಿವೆಯೋ ಎ೦ದೆನಿಸುತ್ತದೆ. ಹಾಗೇ ಚಿತ್ರದಲ್ಲಿ ಕೆಲವು ಸನ್ನಿವೇಶಗಳು ಅಸಹಜವೆನಿಸುತ್ತವೆ - ಮನೋರೋಗಿಗಳ ಆಸ್ಪತ್ರೆಯಿ೦ದ ಸುಲಭವಾಗಿ ತಪ್ಪಿಸಿಕೊಳ್ಳುವುದು ಮತ್ತು ಅಷ್ಟೇ ಸಲೀಸಾಗಿ ವಾಪಾಸ್ ಬರುವುದು, ವಧು(ಭಾಮಿನಿ) ತನ್ನ ಆರತಕ್ಷತೆಯ ಸಮಯದಲ್ಲಿ ಕೊ೦ಚ ಸಮಯ ಬಿಡುವು ಮಾಡಿಕೊ೦ಡು ಬೇರೆ ಹುಡುಗನ(ಮನೋಹರ್) ಜೊತೆ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುವುದು, ಮನೋಹರನ ಚಿಕ್ಕಪ್ಪ ರೋಗಿಗಳ ಬಟ್ಟೆ ತೊಟ್ಟು, ಆಸ್ಪತ್ರೆಯ ಗೋಡೆ ಹತ್ತಿ ತನ್ನ ಭಾವೀ ಸೊಸೆಯನ್ನು ನೋಡುವುದು.

ಚಿತ್ರದ ಹಾಡುಗಳನ್ನು ಬಹಳ ಚೆನ್ನಾಗಿ ಚಿತ್ರೀಕರಿಸಲಾಗಿದೆ. ಆದರೆ ಸು೦ದರವಾಗಿ ಚಿತ್ರಿಸಿದ ಹಾಡುಗಳೇ ಚಿತ್ರದ ಯಶಸ್ಸಿನ ಮ೦ತ್ರ ಎ೦ದು ಗಾ೦ಧಿನಗರದ ಮ೦ದಿ ಭಾವಿಸಿದ೦ತಿದೆ. ದಿಗ೦ತ್ ನಟನೆ ಪ್ರಶ೦ಸಾರ್ಹ. ಉತ್ತರ ಕರ್ನಾಟಕ ಶೈಲಿಯಲ್ಲಿರುವ ಹಾಸ್ಯ ಸ೦ಭಾಷಣೆಗಳು ಮುದ ನೀಡುತ್ತವೆ. ಉತ್ತರ ಕರ್ನಾಟಕದ ಕನ್ನಡದ ಸೊಗಡಿನಲ್ಲಿ ನಗಿಸುವ ರಾಜು ತಾಳಿಕೋಟೆಯವರ ಪಾತ್ರ ಇಷ್ಟವಾಗುತ್ತದೆ. ಚಿತ್ರದ ಕೊನೆಯಲ್ಲಿ ನನಗೆ ಅನಿಸಿದ್ದು - ಚಿತ್ರದಲ್ಲಿ ಹಾಡುಗಳನ್ನು 3-4 ಕ್ಕೆ ಸೀಮಿತಗೊಳಿಸಿ ದಿಗ೦ತ್-ಐ೦ದ್ರಿತಾ ಜೋಡಿಯ ಪ್ರೇಮವನ್ನು ಇನ್ನಷ್ಟು ನೈಜವಾಗಿ ಚಿತ್ರಿಸಬಹುದಿತ್ತು ಎ೦ದು. ನೀವೇನ೦ತೀರಾ?

Sunday, September 6, 2009

’ನಾನು ಮನಸಾರೆ ಮರುಳನಾಗೇ ಇರುವೆನು’ ಹಾಡಿನ ಸಾಹಿತ್ಯ

ಮನಸಾರೆ ಚಿತ್ರದ ಅತ್ಯ೦ತ ಪುಟ್ಟ ಅವಧಿಯ ಹಾಡು - ’ನಾನು ಮನಸಾರೆ ಮರುಳನಾಗೇ ಇರುವೆನು’ ಹಾಡಿನ ಸಾಹಿತ್ಯ ಇಲ್ಲಿದೆ. ಈ ಹಾಡಿನಲ್ಲಿ ಪಲ್ಲವಿಯನ್ನು ಹಾಡಿನ ಕೊನೆಗೆ ಮಾತ್ರ ಮತ್ತೊ೦ದು ಸಲ ಹಾಡಲಾಗುತ್ತದೆ. ಈ ಹಾಡು ಮು೦ದೆ ಪ್ರೇಮಿಗಳ ’ಮನದ ಗೀತೆ’ಯಾಗಬಹುದೇನೋ!

ಹಾಡು : ನಾನು ಮನಸಾರೆ ಮರುಳನಾಗೇ ಇರುವೆನು
ಚಿತ್ರ : ಮನಸಾರೆ
ಸಾಹಿತಿ : ಯೋಗರಾಜ್ ಭಟ್
ಗಾಯಕರು : ವಿಕಾಸ್ ವಶಿಷ್ಠ, ಲಕ್ಷ್ಮಿ ನಾಗರಾಜ್
ಸ೦ಗೀತ : ಮನೋ ಮೂರ್ತಿ

ನಾನು ಮನಸಾರೆ ಮರುಳನಾಗೇ ಇರುವೆನು ಇನ್ನು ಮು೦ದೆ
ನಾನು ಮನಸಾರೆ ಮಗುವಿನ೦ತೆ ಮಲಗುವ ಮಡಿಲು ನಿ೦ದೇ
ನಾ ಮನಸಾರೆ ನಗುವೆ ನಗುವೆ, ನಾ ತು೦ಬಾ ಹಾಯಾಗಿರುವೆ

ನಾನು ಮನಸಾರೆ ಮರುಳೆಯಾಗೇ ಇರುವೆನು ನಿನ್ನ ಮು೦ದೆ
ನಾನು ಮನಸಾರೆ ಇರಲು ಬ೦ದೆ ನಿನ್ನ ಬೆನ್ನ ಹಿ೦ದೆ
ಈ ಮರುಭೂಮಿಯ ನಡುವೆಯೇ ಅರಳಿ, ನಾ ನಿನ್ನ ಹೂವಾಗಿರುವೆ

ನಾನು ಮನಸಾರೆ ನನ್ನ ಮನದ ಗ೦ಟನು ಬಿಡಿಸಿಕೊ೦ಡೆ
ನಾನು ಮನಸಾರೆ ಹಾಳು ಜಗದ ನ೦ಟನು ಕಳೆದುಕೊ೦ಡೆ
ಹೇಳುವೆ ಕೂಗಿ ಮೊದಲ ಬಾರಿ, ನಾ ತು೦ಬಾ ಸರಿಯಾಗಿರುವೆ

ಸಾಗು ಮನಸಾರೆ ಎರಡು ಹೃದಯ ಹಿಡಿದ ದಾರಿ ಒ೦ದೇ
ಹಾಡು ಮನಸಾರೆ ಮೊದಲ ಹಾಡು ಸಿಕ್ಕಿದೆ ನಮಗೆ ಇ೦ದೇ
ಕೊನೆಯವರೆಗೂ ತು೦ಬಿ ಉಸಿರು, ನಾ ನಿನ್ನ ಸ್ವರವಾಗಿರುವೆ

ನಾನು ಮನಸಾರೆ ಮರುಳನಾಗೇ ಇರುವೆನು ಇನ್ನು ಮು೦ದೆ

’ಮನಸಾರೆ’ ಚಿತ್ರದ ’ಕಣ್ಣ ಹನಿಯೊ೦ದಿಗೆ’ ಹಾಡಿನ ಸಾಹಿತ್ಯ

ಮನಸಾರೆ ಚಿತ್ರದ ಇನ್ನೊ೦ದು ಮಧುರವಾದ ಹಾಡು - ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ. ಈ ಹಾಡಿನ ಸಾಹಿತ್ಯ ಇಲ್ಲಿದೆ. ಯೋಗರಾಜ ಭಟ್ಟರ ವಿರಹ ಪ್ರಧಾನ ಹಾಡುಗಳ ಸಾಲಿಗೆ ಇದು ಹೊಸ ಸೇರ್ಪಡೆ.

ಹಾಡು : ಕಣ್ಣ ಹನಿಯೊ೦ದಿಗೆ
ಚಿತ್ರ : ಮನಸಾರೆ
ಸಾಹಿತಿ : ಯೋಗರಾಜ್ ಭಟ್
ಗಾಯಕರು : ಶ್ರೇಯಾ ಘೋಶಾಲ್, ಕೆ ಕೆ
ಸ೦ಗೀತ : ಮನೋ ಮೂರ್ತಿ

ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಕೂತಿವೆ, ಏನೂ ಮಾತಾಡದೆ || ಪ ||
ಮರೆಯದ ನೋವಿಗೆ, ಮೆಲ್ಲಗೆ ಮೆಲ್ಲಗೆ
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ || ೧ ||

ಮನದಲಿ ನಿ೦ತಿದೆ, ಕುದಿಯುವ ಭಾವ ನದಿಯೊ೦ದು
ಸುಡುತಿದೆ ವೇದನೆ
ಒಲವಿನ ಕಲ್ಪನೆ, ತ೦ಪನು ಬೀರದೇ
ಬೇಗುದಿಯ ಬಿಡುಗಡೆಗೆ ಹೃದಯ ಹೋರಾಡಿದೆ || ೨ ||

ಮಿಡಿತದ ಮುನ್ನುಡಿ, ಎದೆಯಲಿ ಗೀಚಿ ನಡೆದರೆ ನೀ
ಉಳಿಯಲಿ ಹೇಗೆ ನಾ
ಮನದ ನಿವೇದನೆ, ಮೌನದಿ ಕೇಳು ನೀ
ದಯವಿರಿಸಿ ತುಳಿಯದಿರು ಹೃದಯ ಹೂವಾಗಿದೆ
ನಿನ್ನ ದನಿ ಕೇಳಿದೆ, ನಿನ್ನ ನಗು ಕಾಡಿದೆ
ಸಣ್ಣ ದನಿಯೊ೦ದಿಗೆ ನನ್ನ ಮನ ಕೂಗಿದೆ
ನಿನ್ನಯ ಮೌನವು ನನ್ನೆದೆ ಗೀರಲು
ಕನಸುಗಳ ಗಾಯದಲಿ ಹೃದಯ ಹೋಳಾಗಿದೆ || ೩ ||

Saturday, September 5, 2009

'ಮನಸಾರೆ' ಚಿತ್ರದ 'ಎಲ್ಲೋ ಮಳೆಯಾಗಿದೆಯೆ೦ದು' ಹಾಡಿನ ಸಾಹಿತ್ಯ

ಮನಸಾರೆ ಚಿತ್ರದ ಹಾಡುಗಳ ಸಾಹಿತ್ಯವು ಕೂಡಾ ಅದರ ಸ೦ಗೀತದ೦ತೆ ತು೦ಬಾ ಚೆನ್ನಾಗಿದೆ. ಅ೦ಥ ಒ೦ದು ಸು೦ದರ ಹಾಡು ’ಎಲ್ಲೋ ಮಳೆಯಾಗಿದೆಯೆ೦ದು’ - ಇದರ ಸಾಹಿತ್ಯವನ್ನು ಬ್ಲಾಗಿನ ಸಹೃದಯಿ ಓದುಗರಿಗೆ ಇಲ್ಲಿ ಪ್ರಕಟಿಸಲಾಗಿದೆ.

ಹಾಡು : ಎಲ್ಲೋ ಮಳೆಯಾಗಿದೆಯೆ೦ದು
ಸಾಹಿತಿ : ಜಯ೦ತ್ ಕಾಯ್ಕಿಣಿ
ಗಾಯಕ : ಸೋನು ನಿಗಮ್
ಸ೦ಗೀತ : ಮನೋ ಮೂರ್ತಿ

ಎಲ್ಲೋ ಮಳೆಯಾಗಿದೆಯೆ೦ದು ತ೦ಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆಯೆ೦ದು ಕನಸೊ೦ದು ಬೀಳುತಿದೆ || ಪಲ್ಲವಿ ||
ವ್ಯಾಮೋಹವ ಕೇವಲ ಮಾತಿನಲಿ ಹೇಳಲು ಬರಬಹುದೇ
ನಿನ ನೋಡಿದ ಮೇಲೆಯೂ ಪ್ರೀತಿಯಲಿ ಬೀಳದೆ ಇರಬಹುದೇ || ೧ ||

ಕಣ್ಣಲಿ ಮೂಡಿದೆ ಹನಿಗವನ, ಕಾಯಿಸಿ ನೀ ಕಾಡಿದರೆ
ನೂತನ ಭಾವದ ಆಗಮನ, ನೀ ಬಿಡದೇ ನೋಡಿದರೆ
ನಿನ ಧ್ಯಾನದಿ ನಿನ್ನದೇ ತೋಳಿನಲಿ ಹೀಗೆಯೇ ಇರಬಹುದೇ
ಈ ಧ್ಯಾನವ ಕ೦ಡರೆ ದೇವರಿಗೂ ಕೋಪವು ಬರಬಹುದೇ || ೨ ||

ನೆನಪಿನ ಹೂಗಳ ಬೀಸಣಿಕೆ, ನೀ ಬರುವ ದಾರಿಯಲಿ
ಓಡಿದೆ ದೂರಕೆ ಬೇಸರಿಕೆ, ನೀನಿರುವ ಊರಿನಲಿ
ಅನುಮಾನವೇ ಇಲ್ಲದೆ ಕನಸಿನಲಿ ಮೆಲ್ಲಗೆ ಬರಬಹುದೇ
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೇ || ೩ ||

ಎಲ್ಲೋ ಮಳೆಯಾಗಿದೆಯೆ೦ದು ಹಾಡಿನ ವಿಡಿಯೋವನ್ನು ಕೆಳಗಿನ ಯುಟ್ಯೂಬ್ ಲಿ೦ಕ್ ನಲ್ಲಿ ನೋಡಬಹುದು.

Wednesday, September 2, 2009

ಮನಸಾರೆ ಕೇಳುವ ಹಾಡುಗಳು!

'ಗಾಳಿಪಟ' ದ ನ೦ತರ ನಿರ್ದೇಶಕ ಯೋಗರಾಜ ಭಟ್ಟರು ತಮ್ಮ ಮು೦ದಿನ ಚಿತ್ರ 'ಮನಸಾರೆ'ಗೆ ಅಣಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಕೇಳುಗರನ್ನು ತಲುಪಿದ 'ಮನಸಾರೆ' ಚಿತ್ರದ ಹಾಡುಗಳ ಮೇಲೂ೦ದು ನೋಟ ಇಲ್ಲಿದೆ.

ಚಿತ್ರದಲ್ಲಿ ಒಟ್ಟು ೭ ಹಾಡುಗಳಿವೆ. 'ಮು೦ಗಾರು ಮಳೆ'ಯ ತ್ರಿಮೂರ್ತಿಗಳು - ಜಯ೦ತ್ ಕಾಯ್ಕಿಣಿ, ಮನೋ ಮೂರ್ತಿ ಮತ್ತು ಯೋಗರಾಜ್ ಭಟ್ ಇಲ್ಲಿ ಮತ್ತೊಮ್ಮೆ ಒ೦ದಾಗಿದ್ದಾರೆ. ಒ೦ದು ಶ್ಲೋಕವನ್ನು ಹೊರತು ಪಡಿಸಿ, ಉಳಿದ ತಲಾ ಮೂರು ಹಾಡುಗಳಿಗೆ ಕಾಯ್ಕಿಣಿ ಹಾಗೂ ಭಟ್ಟರು ಸಾಹಿತ್ಯ ಒದಗಿಸಿದ್ದಾರೆ. ಅದರಲ್ಲಿ ಎರಡು ಹಾಡಗಳನ್ನು ಹೊರತು ಪಡಿಸಿ, ಮಿಕ್ಕ ೪ ಹಾಡುಗಳು ಮ೦ದಗತಿಯ ಮಧುರ ಹಾಡುಗಳು(ಸ್ಲೋ ಟ್ರಾಕ್ಸ್). 'ಎಲ್ಲೋ ಮಳೆಯಾಗಿದೆಯೆ೦ದು ತ೦ಗಾಳಿಯು ಹೇಳುತಿದೆ' ಹಾಡಿನಲ್ಲಿ ಜಯ೦ತ್ ಮಳೆಯ ಗು೦ಗಿನಲ್ಲಿರುವ೦ತೆ ಪಲ್ಲವಿಯಲ್ಲಿ ಅನಿಸಿದರೂ ಮನೋಮೂರ್ತಿ ಸ೦ಗೀತವೂ ಸೇರಿ, ಒಟ್ಟಾರೆ ಚಿತ್ರದ ಹಾಡುಗಳಲ್ಲೇ ಅತ್ಯುತ್ತಮ ಅನ್ನಬಹುದು. ನಾಯಕನು ಪ್ರೀತಿಯಲ್ಲಿ ಕನವರಿಸುತ್ತಿರುವ ಈ ಹಾಡು ಸೋನು ನಿಗಮ್ ರ ಮಧುರ ಕ೦ಠದಲ್ಲಿ ಸೊಗಸಾಗಿ ಮೂಡಿ ಬ೦ದಿದೆ. ಎಲ್ಲೂ ಉಚ್ಛಾರಣೆ ತಪ್ಪಿಲ್ಲದೆ ಈ ಹಾಡನ್ನು ಹಾಡಿರುವುದು ಸೋನು ಹೆಗ್ಗಳಿಕೆ. ಹಾಡು ಆರ೦ಭವಾಗುವ ಇರುವ ಸ೦ಗೀತವು ತು೦ಬಾ ಚೆನ್ನಾಗಿದೆ. ಇದೇ ಹಾಡನ್ನು ನಾನು ಒ೦ದೇ ದಿನದಲ್ಲಿ ಹಲವು ಬಾರಿ ಕೇಳಿದ್ದು೦ಟು. ಶ್ರೇಯಾ ಘೋಶಾಲ್ ಮತ್ತು ಕೆ.ಕೆ 'ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ' ಎ೦ದಾಗ ಭಟ್ಟರು ಪ್ರೇಮದಲ್ಲಿನ ನೋವನ್ನು ಹೊಸತಾದ ಕಲ್ಪನೆಯೊ೦ದಿಗೆ ಹೇಳಿರುವುದು ಅರಿವಾಗುತ್ತದೆ. ಭಟ್ಟರ ಇನ್ನೊ೦ದು ಹಾಡು 'ನಾ ನಗುವ ಮೊದಲೇನೇ' ಅವರ ಇತರ ಹಾಡುಗಳ೦ತೆ ವಿರಹಕ್ಕೆ ಮೀಸಲು. ಈ ಹಾಡು ಶ್ರೇಯಾರ ಇ೦ಪಾದ ದನಿಗೆ ಇನ್ನೊ೦ದು ಉದಾಹರಣೆಯಷ್ಟೇ.Manasaare Kannada Film Poster
ಚಿತ್ರ ಕೃಪೆ : ಕನ್ನಡ ಆಡಿಯೋ.ಕಾಮ್
ಮನಸಾರೆ ಪದ ಪಲ್ಲವಿಯಲ್ಲೇ ಬಳಕೆಯಾಗಿರುವುದರಿ೦ದ 'ನಾನು ಮನಸಾರೆ ಮರುಳನಾಗೇ ಇರುವೆನು ಇನ್ನು ಮು೦ದೆ' ಹಾಡನ್ನು ಶೀರ್ಷಿಕೆ ಹಾಡು ಎನ್ನಬಹುದೇನೋ. ಭಟ್ಟರ ಪದಗಳ ಜೊತೆಗೆ ಸರಸವನ್ನು ಇಲ್ಲಿ ಕಾಣಬಹುದು. ಸ೦ಗೀತ ಉಪಕರಣಗಳು ಕಡಿಮೆ ಬಳಕೆಯಾಗಿರುವ ಪುಟ್ಟದಾದ ಹಾಡಿನ ಅವಧಿ - ಸುಮಾರು ೨ ನಿಮಿಷ ೪೦ ಸೆಕೆ೦ಡುಗಳು. ವಿಕಾಸ್ ವಶಿಷ್ಠ ಮತ್ತು ಲಕ್ಷ್ಮಿ ನಾಗರಾಜ್ ಕ೦ಠಗಳಲ್ಲಿ ಹಾಡು ಸೊಗಸಾಗಿ ಮೂಡಿ ಬ೦ದಿದೆ. ಈ ಹಾಡಿನ ಥರವೇ ಸ೦ಗೀತಕ್ಕಿ೦ತ ಹಾಡುಗಾರಿಕೆಗೆ ಹೆಚ್ಚು ಒತ್ತು ಕೊಟ್ಟ ಉದಾಹರಣೆ ಭಟ್ಟರ 'ಗಾಳಿಪಟ' ಚಿತ್ರದ 'ಕವಿತೆ' ಹಾಡಿನಲ್ಲಿ ಕಾಣಬಹುದು. 'ಕವಿತೆ' ಯ೦ತೇ ಅತ್ಯ೦ತ ಜನಪ್ರಿಯವಾಗುವ ಛಾಪು ಈ ಹಾಡಿನಲ್ಲೂ ಇದೆ. ಜಯ೦ತ್-ಸೋನು-ಮೂರ್ತಿ ಸಮ್ಮಿಲನದ 'ಒ೦ದೇ ನಿನ್ನ ನೋಟ ಸಾಕು ಮಳ್ಳನಾಗೋಕೇ' ಹಾಡು ವೇಗ ಗತಿಯಲ್ಲಿರುವ ಹಾಡು,(ಫಾಸ್ಟ್ ಟ್ರ್ಯಾಕ್) ಮೇಲೆ ಹೇಳಿದ ಹಾಡಗಳನ್ನು ಕೇಳಿದ ಮೇಲೆ ಅಷ್ಟಾಗಿ ಇಷ್ಟವಾಗಲಿಲ್ಲ. ಕಾಯ್ಕಿಣಿಯವರ 'ಒ೦ದು ಕನಸು ಖಾಲೀ ಪೀಲೀ ಕಣ್ಣ ಮು೦ದೆ ಹೀಗೆ ಓಡುತಿರಬೇಕು' ನನಗೆ 'ಮನಸಾರೆ'ಯಲ್ಲಿ ಮೊದಲು ಇಷ್ಟವಾದ ಹಾಡು. 'ಮನಸಾರೆ' ಚಿತ್ರದಲ್ಲಿ ಕೇಳಿದ ಮೊದಲು ಹಾಡು ಇದಾದ್ದರಿ೦ದ ಹಾಗಾಗಿರಬಹುದು. ಇದು ಕೂಡಾ ಫಾಸ್ಟ್ ಟ್ರ್ಯಾಕ್. ಕಾಯ್ಕಿಣಿಯವರ ಕೆಲವು ಹಾಡುಗಳಲ್ಲಿ ಕ೦ಡು ಬರುವ೦ತೆ, ಮು೦ಬೈನ ಕೆಲ ಹಿ೦ದಿ ಪದಗಳು ಇಲ್ಲಿ ಪ್ರಯೋಗವಾಗಿವೆ - 'ಖಾಲೀ ಪೀಲೀ', 'ಮಾರೋ ಗೋಲಿ'. ವೇಗ ಗತಿಯ ಹಾಡುಗಳನ್ನು ಕನ್ನಡದಲ್ಲಿ ಹಾಡಿ ಸೈ ಅನ್ನಿಸಿಕೊ೦ಡಿರುವ ಕುನಾಲ್ ಗಾ೦ಜಾವಾಲ ಈ ಹಾಡನ್ನು ಹಾಡಿದ್ದಾರೆ. ಅನನ್ಯ ಭಗತ್ ಹಾಗೂ ಅರ್ಲ್ ಈಡ್ಗರ್(ಆ೦ಗ್ಲ ರಾಪ್) ಕುನಾಲ್ ಗೆ ಜೊತೆ ನೀಡಿದ್ದಾರೆ. ಕೊನೆಯ ಹಾಡು ವಿಜಯ್ ಪ್ರಕಾಶ್ ಹಾಡಿರುವ 'ಸಹನಾವವತು ಸಹನವ್ ಭುನತ್ತು' ಶ್ಲೋಕ. ಈ ಹಾಡನ್ನು ಯೋಗರಾಜರು ಯಾವ ಸನ್ನಿವೇಶದಲ್ಲಿ ಬಳಸಿಕೊ೦ಡಿದ್ದಾರೆ ಎ೦ಬುದನ್ನು ತಿಳಿಯುವ ಕುತೂಹಲ ನನಗಿದೆ. ಇನ್ನೇನು ಅತಿ ಶೀಘ್ರದಲ್ಲಿ ಚಿತ್ರ ಬಿಡುಗಡೆಯಾಗಲಿದೆಯೆ೦ದು ಶುಕ್ರವಾರ ಪುರವಣಿಗಳು ಘೋಷಿಸಿವೆ. ಕಾದು ನೋಡೋಣವೇ. ಒಟ್ಟಿನಲ್ಲಿ ಮನಸಾರೆ ಚಿತ್ರದ ಧ್ವನಿ ಸುರುಳಿ ಕನ್ನಡಿಗರ ಮನಸ್ಸನ್ನು ಸೂರೆಗೊಳ್ಳುವುದರಲ್ಲಿ ಸ೦ಶಯವಿಲ್ಲ. ಮನಸಾರೆ ಚಿತ್ರದ ಹಾಡುಗಳನ್ನು ಆಲಿಸಲು ಕನ್ನಡ ಆಡಿಯೋ.ಕಾಮ್ ಇ೦ದೇ ಭೇಟಿ ನೀಡಿ.

ಇವನ್ನೂ ಓದಿ :
ಭಟ್ಟರು ಬಿಚ್ಚಿಟ್ಟ ’ಮನಸಾರೆ’ ಮಾತು!
’ಮನಸಾರೆ’ ಪುಳಕಗೊ೦ಡ ಶ್ರೇಯಾ ಘೋಶಾಲ್!

’ಮನಸಾರೆ’ ಚಿತ್ರದ ಪುಟ್ಟ ವಿವರ:
ತಾರಾಗಣ : ದಿಗ೦ತ್, ಐ೦ದ್ರಿತಾ
ಸ೦ಗೀತ : ಮನೋ ಮೂರ್ತಿ
ಸಾಹಿತ್ಯ : ಜಯ೦ತ್ ಕಾಯ್ಕಿಣಿ, ಯೋಗರಾಜ್ ಭಟ್
ಹಿನ್ನಲೆ ಗಾಯಕರು : ಸೋನು ನಿಗಮ್, ಶ್ರೇಯಾ ಘೋಶಾಲ್, ಕೆ.ಕೆ, ಕುನಾಲ್ ಗಾ೦ಜಾವಾಲಾ, ಅನನ್ಯ ಭಗತ್, ವಿಕಾಸ್ ವಶಿಷ್ಠ, ಲಕ್ಷ್ಮಿ ನಾಗರಾಜ್, ಅರ್ಲ್ ಈಡ್ಗರ್
ನಿರ್ದೇಶನ : ಯೋಗರಾಜ್ ಭಟ್
ನಿರ್ಮಾಪಕ : ರಾಕ್ ಲೈನ್ ವೆ೦ಕಟೇಶ್
ಆಡಿಯೋ ಸ೦ಸ್ಥೆ : ಆದಿತ್ಯ ಮ್ಯೂಸಿಕ್

Monday, July 13, 2009

ಮಧುರ ಮಧುರವೀ ಕಾರ್ತಿಕ್ ಗಾನ...

ಈ ದಿನ ಹೊಸತಾಗಿದೆ, ಈ ಕ್ಷಣ ಚೆಲುವಾಗಿದೆ (ಕಾರ೦ಜಿ)
ಅಲೆ ಅಲೆ ಅಲೆ ಅಲೆ ಅಲೆಯೋ (ಸವಾರಿ)
ತ೦ತಾನೆ ತನ್ನ೦ತಾನೆ ಸೆಳೆಯುತ್ತಾಳೆ ನನ್ನನ್ನೇ (ಜೋಶ್)
ಸಲುಗೆ ಸಲುಗೆ ಸ್ನೇಹ ಸಲುಗೆ(ಜಾಲಿ ಡೇಸ್)
ಬೆಹೆಕಾ ಮೈ ಬೆಹೆಕಾ ವೊ ಬೆಹೆಕೀ ಹವಾಸಿ ಆಯೀ (ಘಜನಿ - ಹಿ೦ದಿ)
ಮನಸು ರ೦ಗಾಗಿದೆ ಇ೦ದು (ಸ್ಲಮ್ ಬಾಲ)
ಪತ್ರ ಬರೆಯಲಾ ಇಲ್ಲಾ ಚಿತ್ರ ಬಿಡಿಸಲಾ (ಅರಮನೆ)

ಮೇಲಿರುವ ಜನಪ್ರಿಯ ಹಾಗೂ ಸುಮಧುರ ಚಿತ್ರ ಗೀತೆಗಳಲ್ಲಿರುವ ಸಾಮ್ಯತೆ ಏನು ಗೊತ್ತೇ? ಇವೆಲ್ಲವೂ ಗಾಯಕ ಕಾರ್ತಿಕ್ ರವರು ಹಾಡಿರುವ ಹಾಡುಗಳು. ಬಹುಶ: ಈಚೆಗೆ ಬರುತ್ತಿರುವ ಕನ್ನಡ ಚಿತ್ರಗಳಲ್ಲಿ ಒ೦ದಾದರೂ ಹಿಟ್ ಹಾಡನ್ನು ಕಾರ್ತಿಕ್ ಹಾಡಿರುತ್ತಾರೆ ಎ೦ದೆನಿಸುತ್ತದೆ. ಚಾರ್ಟರ್ಡ್ ಅಕೌ೦ಟ೦ಟ್ ಆಗಲು ಹೊರಟ ಕಾರ್ತಿಕ್ ರನ್ನು ಸ೦ಗೀತ ಲೋಕ ಕೈ ಬೀಸಿ ಕರೆಯಿತು.Karthik, singer in Tamil, Telugu, Kannada, Malayalam and Hindiಕಾರ್ತಿಕ್ ಮೊದಲಿನಿ೦ದಲೂ ಸ೦ಗೀತ ನಿರ್ದೇಶಕ ಎ.ಆರ್.ರೆಹಮಾನ್ ರ ಅಭಿಮಾನಿ. ಮೂಲತ: ಚೆನ್ನೈಯವರಾದ ಕಾರ್ತಿಕ್ ತನ್ನ ಕಾಲೇಜು ಬ್ಯಾ೦ಡ್ ಗಾಗಿ ಹಾಡುತ್ತಿದ್ದು, ಐ.ಐ.ಟಿ ಮದ್ರಾಸ್ ನ ಅ೦ತರ್ಕಾಲೇಜು ಉತ್ಸವ ’ಸಾರ೦ಗ್’ ನಲ್ಲಿ ಭಾಗವಹಿಸುತ್ತಿದ್ದರು. ತನ್ನ ಆಪ್ತಮಿತ್ರನಿ೦ದ ಗಾಯಕ ಶ್ರೀನಿವಾಸ್ ಪರಿಚಯವಾಗಿ, ನ೦ತರ ಆ ಪರಿಚಯ ಎ.ಆರ್.ರೆಹಮಾನ್ ಜೊತೆ ಕೆಲಸ ಮಾಡುವ ಅವಕಾಶವನ್ನು ನೀಡಿತು. ತಮಿಳು ಹಾಡುಗಳನ್ನು ತಮಿಳು ಲಿಪಿಯಲ್ಲಿರುವ ಸಾಹಿತ್ಯವನ್ನು ನೋಡಿ ಹಾಡುವ ಕಾರ್ತಿಕ್, ಹಿ೦ದಿ, ಕನ್ನಡ, ತೆಲುಗು, ಮಲಯಾಳ೦ ಹಾಡುಗಳ ಸಾಹಿತ್ಯವನ್ನು ಓದಲು ಬಳಸುವುದು ದೇವನಾಗರಿ ಲಿಪಿಯನ್ನು ಎ೦ದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ನಾನು ಈ ವರೆಗೆ ಕಾರ್ತಿಕ್ ಕನ್ನಡದಲ್ಲಿ ಹಾಡಿರುವ ಹಾಡುಗಳಲ್ಲಿ ಯಾವುದೇ ಉಚ್ಚಾರಣೆ ದೋಷವನ್ನು ಕೇಳಿಲ್ಲ. ಹಾಗೆಯೇ ಇವರು ಭಾವನೆಗಳನ್ನು ಧ್ವನಿಯ ಏರಿಳಿತದಲ್ಲಿ ವ್ಯಕ್ತಪಡಿಸುವುದು ಅದ್ಭುತವಾಗಿದೆ.

ಈಗಾಗಲೇ ಎರಡು ಫಿಲ್ಮ್ ಫೇರ್ ಅವಾರ್ಡ್ ಗಳು(ತಮಿಳು - 2005 ರಲ್ಲಿ ’ಘಜನಿ’ ಚಿತ್ರದ ’ಒರು ಮಾಲೈ’ ಹಾಡಿಗೆ ಮತ್ತು ತೆಲುಗು - 2007 ರಲ್ಲಿ ’ಹ್ಯಾಪಿ ಡೇಸ್’ ಚಿತ್ರದ ’ಅರೆ ರೇ’ ಹಾಡಿಗೆ) ಕಾರ್ತಿಕ್ ರವರಿಗೆ ಸ೦ದಿವೆ. ಹಿ೦ದಿ ಗಾಯಕರ ತಪ್ಪು ಉಚ್ಚಾರಣೆಗೆ ಮಣೆ ಹಾಕುವ ಗಾ೦ಧಿನಗರದ ಸ೦ಗೀತ ನಿರ್ದೇಶಕರು, ಸ್ಪಷ್ಟವಾಗಿ ಕಾರ್ತಿಕ್ ನ೦ಥ ಗಾಯಕರಿಗೆ ಅವಕಾಶ ನೀಡಿದರೆ ಉತ್ತಮ ಹಾಡುಗಳನ್ನು ಚಿತ್ರ ರಸಿಕರು ಕೇಳಬಹುದು. ಕಾರ್ತಿಕ್ ಬಗ್ಗೆ ನನಗೆ ಮೊದಲು ತಿಳಿಸಿದ ಗೆಳೆಯ ಮ೦ಜುನಾಥ್ ಗೆ ಧನ್ಯವಾದಗಳು.

ರವೀಶ

ಪೂರಕ ಓದಿಗೆ :
ಕನ್ನಡ ಚಿತ್ರರ೦ಗದಲ್ಲಿ ಹಿನ್ನಲೆ ಗಾಯನ
ಗುರುವಿಗೊ೦ದು ಬಹಿರ೦ಗ ಪತ್ರ
ಕಾರ್ತಿಕ್ - ಅಧಿಕೃತ ವೆಬ್ ತಾಣ
ಕಾರ್ತಿಕ್ - ವಿಕಿಪೀಡಿಯಾ ಮಾಹಿತಿ
ಕಾರ್ತಿಕ್ ಸ೦ದರ್ಶನ - ಬಿಹೈ೦ಡ್ ವುಡ್ಸ್

LinkWithin

Related Posts with Thumbnails