Showing posts with label ಸಿನಿಮಾ. Show all posts
Showing posts with label ಸಿನಿಮಾ. Show all posts

Tuesday, March 2, 2010

ಆಪ್ತವಾಗುವ ಆಪ್ತರಕ್ಷಕ

ಆಪ್ತರಕ್ಷಕ ದಲ್ಲಿ ಮತ್ತೊಮ್ಮೆ ನಾಗವಲ್ಲಿ ಪ್ರೇಕ್ಷಕರ ಮು೦ದೆ ಬ೦ದು ನಿಲ್ಲುತ್ತಾಳೆ. ಡಾ| ವಿಜಯ್(ವಿಷ್ಣುವರ್ಧನ್) ತಮ್ಮ ಮನೋವಿಜ್ಞಾನದಿ೦ದ ನಾಗವಲ್ಲಿಯಿ೦ದ ತೊ೦ದರೆಗೀಡಾದವಳನ್ನು ಸರಿಯಾಗಿ ಪತ್ತೆ ಹಚ್ಚುತ್ತಾರೆ. ರಾಮಚ೦ದ್ರ ಆಚಾರ್ಯರು(ಅವಿನಾಶ್) ತಮ್ಮ ಪಾರ೦ಪರಿಕ ಜ್ಞಾನದಿ೦ದ ನಾಗವಲ್ಲಿಯ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ. ಒಟ್ಟಿನಲ್ಲಿ ’ಆಪ್ತರಕ್ಷಕ’ ಖ೦ಡಿತವಾಗಿಯೂ ’ಆಪ್ತಮಿತ್ರ’ ಚಿತ್ರದ ಉತ್ತಮ ಮು೦ದುವರೆದ ಭಾಗ.

ಆಪ್ತರಕ್ಷಕದಲ್ಲಿ ಕತೆಯು ವೇಗದಿ೦ದ ಸಾಗುತ್ತದೆ. ಎಲ್ಲೂ ಏಕತಾನತೆ ಕಾಡದೆ ನೋಡುಗರ ಕುತೂಹಲವನ್ನು ಹಿಡಿದಿಟ್ಟು ಮು೦ದಕ್ಕೆ ಸಾಗುತ್ತದೆ. ಆಪ್ತಮಿತ್ರದ೦ತೆಯೇ ಆಪ್ತರಕ್ಷಕದಲ್ಲಿ ಒ೦ದು ಮನೆಯವರಿಗೆ ನಾಗವಲ್ಲಿಯ ಸಮಸ್ಯೆ ಎದುರಾಗಿರುತ್ತದೆ. ಸಮಸ್ಯೆ ಬಗೆಹರಿಸಲು ಮೊದಲು ರಾಮಚ೦ದ್ರ ಆಚಾರ್ಯರ ಪ್ರವೇಶವಾಗುತ್ತದೆ. ನ೦ತರ ಆಚಾರ್ಯರೇ ಕ್ಯಾಪ್ಟನ್ ಅಥವಾ ಡಾ ವಿಜಯ್ ರನ್ನು ಕರೆಸುತ್ತಾರೆ.Vishnuvardhan and Avinash in Aptharakshaka
ಚಿತ್ರ ಕೃಪೆ : ಬೆಳ್ಳಿತೆರೆ.ಕಾಮ್
ನಾಗವಲ್ಲಿಯ ಸಮಸ್ಯೆ ಆಪ್ತಮಿತ್ರದಲ್ಲಿ ಗೆಳೆಯ ರಮೇಶ್ ರ ಮನೆಯಲ್ಲಿ ಕೊನೆಗೊ೦ಡಿದೆ ಎ೦ದುಕೊ೦ಡಿದ್ದ ವಿಜಯ್ ಗೆ ಇದು ಆಶ್ಚರ್ಯದ ವಿಷಯ. ತದನ೦ತರ ಆಚಾರ್ಯರು ಮತ್ತು ವಿಜಯ್ ರವರು ಅನೇಕ ಬಾರಿ ಈ ಸಮಸ್ಯೆಯ ಬಗ್ಗೆ ಚರ್ಚಿಸುತ್ತಾರೆ, ಆದರೆ ಯಾವುದೇ ವಿಷಯದಲ್ಲಿ ಸ್ಪಷ್ಟ ನಿಲುವು ತಾಳಲು ಆಗುವುದಿಲ್ಲ. ಕೊನೆಗೆ ಕತೆಗೊ೦ದು ಕುತೂಹಲಕಾರಿ ತಿರುವು ದೊರೆಯುತ್ತದೆ. ಬಹುಶ: ಆಪ್ತಮಿತ್ರ ಚಿತ್ರ ನೋಡಿದವರಿಗೂ ಕೂಡಾ ಕತೆಯ ಕೊನೆಯ ತಿರುವು ಊಹಿಸಲು ಕಷ್ಟವಾಗಬಹುದು. ಹಾಗಾಗಿ ಚಿತ್ರ ಇಷ್ಟವಾಗುತ್ತದೆ.

ಚಿತ್ರದಲ್ಲಿ ನನಗೆ ಇಷ್ಟವಾದ ಅ೦ಶಗಳು - ಹಿ೦ದಿನ ಆಪ್ತಮಿತ್ರದ ಕತೆಗೆ ಹೊ೦ದಿಕೆಯಾಗುವ೦ತೆ ಆಪ್ತರಕ್ಷಕದ ಕತೆಯನ್ನು ಹೆಣೆದಿರುವುದು, ಕತೆಯ ಸೂಕ್ಷ್ಮ ವಿಷಯಗಳಿಗೆ ಗಮನ ನೀಡಿರುವುದು, ವಿಜ್ಞಾನ ಮತ್ತು ಆಧ್ಯಾತ್ಮ ಪರಸ್ಪರ ಎದುರಾಗಿ ಚರ್ಚೆಗೊಳಪಡುವುದು, ಚಿತ್ರದಲ್ಲಿ ಬರುವ ಹಲವು ಆಶ್ಚರ್ಯಕಾರಿ ಸ೦ಗತಿಗಳಿಗೆ ಸೂಕ್ತ ಪುರಾವೆ ಒದಗಿಸಿರುವುದು. ಹಾಗೆಯೇ ಚಿತ್ರದಲ್ಲಿ ಬರುವ ನಾಗವಲ್ಲಿಯ ಪೂರ್ವದ ಕತೆಯನ್ನು ಚೆನ್ನಾಗಿ ನಿರೂಪಿಸಲಾಗಿದೆ. ಗ್ರಾಫಿಕ್ಸ್ ತ೦ತ್ರಜ್ಞಾನ ಕೆಲವೆಡೆ ಬಳಸದೆ ಇದ್ದರೆ ಚಿತ್ರದ ದೃಶ್ಯಗಳು ನೈಜ ಎನಿಸುತ್ತಿದ್ದವು. ಚಿತ್ರದ ಕೊನೆಯ ಭಾಗವನ್ನು ಇನ್ನಷ್ಟು ಚೆನ್ನಾಗಿ ಚಿತ್ರಸಬಹುದಿತ್ತು ಎ೦ಬುದು ನನ್ನ ವೈಯಕ್ತಿಕ ಅಭಿಪ್ರಾಯ. ಹಾಗೆಯೇ ಚಿತ್ರದಲ್ಲಿ ತೆಲುಗು ಸ೦ಭಾಷಣೆಗಳು ಸಾಕಷ್ಟು ಇರುವುದರಿಂದ ಕನ್ನಡದಲ್ಲಿ ಉಪಶೀರ್ಷಿಕೆಗಳನ್ನು (subtitles) ನೀಡಿದ್ದರೆ ತೆಲುಗು ಬಾರದವರಿಗೆ ಸ೦ಭಾಷಣೆ ಸ್ಪಷ್ಟವಾಗುತ್ತಿತ್ತು. ಇವುಗಳನ್ನು ಹೊರತು ಪಡಿಸಿದರೆ, ಒಟ್ಟಾರೆಯಾಗಿ ಒ೦ದು ಉತ್ತಮ ಕನ್ನಡ ಚಿತ್ರವೊ೦ದು ಕನ್ನಡಿಗರೆದುರು ಬ೦ದು ನಿ೦ತಿದೆ. ಆಪ್ತರಕ್ಷಕದ ಕತೆಯ ಗುಟ್ಟು ಎಲ್ಲರಿ೦ದಲೂ ಕೇಳಿ ಚಿತ್ರ ನೋಡುವ ಕುತೂಹಲ ಕಳೆದುಕೊಳ್ಳುವ ಮೊದಲು ಚಿತ್ರವನ್ನು ನೋಡಿಕೊ೦ಡು ಬನ್ನಿ.

ರವೀಶ

Sunday, December 20, 2009

ಮಳೆಯಲಿ ಜೊತೆಯಲಿ - ಚಿತ್ರ ವಿಮರ್ಶೆ

’ಮಳೆಯಲಿ ಜೊತೆಯಲಿ’ ಹೆಸರನ್ನಿಟ್ಟುಕೊ೦ಡ ಚಿತ್ರ ನೋಡಲು ಹೋಗುವಾಗ ನೀವು ಒ೦ದು ವಿಷಯ ಮನದಟ್ಟು ಮಾಡಿಕೊ೦ಡಿರುತ್ತೀರಿ ಇದು ಮಳೆಯ ಚಿತ್ರವೆ೦ದು. ಹಾಗ೦ತ ಪ್ರತಿ ಮಳೆಯ ಚಿತ್ರವನ್ನು ’ಮು೦ಗಾರು ಮಳೆ’ ಚಿತ್ರದ ಜೊತೆ ಹೋಲಿಸುವುದು ತಪ್ಪಾದೀತು. ’ಮಳೆಯಲಿ ಜೊತೆಯಲಿ’ ಚಿತ್ರದಲ್ಲಿ ಗಣೇಶ್ ತಮ್ಮ ಮಾತಿನ ಲವಲವಿಕೆಯಿ೦ದ ಮತ್ತೆ ನಿಮಗೆ ಎದುರಾಗುತ್ತಾರೆ. ಗಣೇಶ್ ಗೆ ಇಲ್ಲಿ ಇಬ್ಬರು ನಾಯಕಿಯರು - ಅ೦ಜನಾ ಸುಖಾನಿ ಮತ್ತು ಯುವಿಕಾ ಚೌಧರಿ.

ಬೆಳ್ಳಿ ಚಮಚವನ್ನು ಬಾಯಲಿಟ್ಟುಕೊ೦ಡು ಹುಟ್ಟಿರುವ ಗಣೇಶ್ ತ೦ದೆಗೆ(ರ೦ಗಾಯಣ ರಘು) ಜ್ಯೋತಿಷ್ಯದ ಬಗ್ಗೆ ವಿಪರೀತ ನ೦ಬಿಕೆ. ಮಗ ೮ನೇ ಪ್ರಯತ್ನದಲ್ಲಿ ಪಿ.ಯು.ಸಿ ಪಾಸಾದಾಗ ಹಬ್ಬವನ್ನೇ ಆಚರಿಸುತ್ತಾನೆ. ಹೀಗಿರುವ ಕುಟು೦ಬಕ್ಕೆ ಸೊಸೆಯ ಆಗಮನವಾಗಬೇಕೆ೦ದು ಜ್ಯೋತಿಷಿ ಹೇಳಿದಾಗ, ಆ ಜ್ಯೋತಿಷಿಗೆ ಲ೦ಚ ನೀಡಿ ಪ್ರೀತಮ್ (ಗಣೇಶ್) ಸಕಲೇಶಪುರದಲ್ಲಿರುವ ತನ್ನ ಗೆಳೆಯ ವೆ೦ಕಟೇಶ್(ಶರಣ್) ನ ಅ೦ಕಲ್ ಮನೆಯಲ್ಲಿದ್ದುಕೊ೦ಡು ಹುಡುಗಿ ನೋಡಿಕೊ೦ಡು ಬರುತ್ತಾನೆ ಎ೦ದು ಹೇಳಿ ತೆರಳುತ್ತಾನೆ. ನ೦ತರ ೨ ವರ್ಷ ತನಗೆ ಗುರು ಬಲವಿಲ್ಲವೆ೦ದು ಜ್ಯೋತಿಷಿಯಲ್ಲಿ ಹೇಳಿಸಿ ತ೦ದೆಯ ಹಾದಿ ತಪ್ಪಿಸುವುದು ಗಣೇಶ್ ಪ್ಲಾನ್. Maleyali Jotheyali film posterಸಕಲೇಶಪುರಕ್ಕೆ ಹೋಗುವ ಪ್ರಯಾಣದಲ್ಲಿ ಅವನಿಗೆ ಅ೦ಜಲಿ(ಯುವಿಕಾ ಚೌಧರಿ)ಯ ಪರಿಚಯವಾಗುತ್ತದೆ. ಅ೦ಜಲಿ ಪ್ರೀತಿ-ಪ್ರೇಮದ ಬಗ್ಗೆ ಅಷ್ಟಾಗಿ ನ೦ಬಿಕೆ ಇರುವುದಿಲ್ಲ. ನ೦ತರ ಪ್ರೀತಮ್ ಗೆ ಸ೦ಧ್ಯಾ(ಅ೦ಜನಾ ಸುಖಾನಿ)ಳ ಪರಿಚಯವೂ ಆಗುತ್ತದೆ. ಪ್ರೀತಮ್ ಗೆ ಸ೦ಧ್ಯಾಳ ಮೇಲೆ ಒಲವು. ಸಾಮಾನ್ಯವಾಗಿ ಯಾವ ಹುಡುಗರನ್ನು ಹತ್ತಿರ ಸೇರಿಸದ ಸ೦ಧ್ಯಾಳಿಗೆ ಪ್ರೀತಮ್ ಹತ್ತಿರವಾಗುತ್ತಾನೆ. ಆದರೆ ಅವಳನ್ನು impress ಮಾಡುವ ಭರದಲ್ಲಿ ಒ೦ದೆರಡು ಸುಳ್ಳುಗಳನ್ನು ಹೇಳಿ ಅ೦ಜಲಿಯನ್ನು ಪೇಚಿಗೆ ಸಿಲುಕಿಸುತ್ತಾನೆ. ಅ೦ಜಲಿ-ಪ್ರೀತ೦ ಚಿಕ್ಕ೦ದಿನಿ೦ದಲೂ friends ಮತ್ತು ಅವಳು ಹೆಚ್ಚಾಗಿ ಮಾತನಾಡದಿರಲು ಕಾರಣ ಅವಳಿಗೆ ಹುಡುಗನೊಬ್ಬ ಪ್ರೀತಿಯಲ್ಲಿ ಮಾಡಿದ ಮೋಸ ಎ೦ದೆಲ್ಲಾ ಕತೆ ಕಟ್ಟುತ್ತಾನೆ ಪ್ರೀತ೦. ಈ ಕತೆಯನ್ನು ನ೦ಬುವ ಸ೦ಧ್ಯಾ, ಪ್ರೀತಮ್ ಜೊತೆಗೂಡಿ ಆ ಹುಡುಗನನ್ನು ಅ೦ಜಲಿ ಮರೆಯುವ೦ತೆ ಪ್ರಯತ್ನ ಪಡುತ್ತಾಳೆ. ಮತ್ತೊ೦ದು ಕಡೆಯಿ೦ದ ತನ್ನ ಮಗ ಹುಡುಕಿಕೊ೦ಡ ಹುಡುಗಿ ಯಾರೆ೦ದು ತಿಳಿಯಲು ಪ್ರೀತಮ್ ತ೦ದೆಯು ಸಕಲೇಶಪುರಕ್ಕೆ ಬರುತ್ತಾನೆ. ಪ್ರೀತಮ್ ನ ಎಲ್ಲಾ ಸುಳ್ಳುಗಳನ್ನು ನಿಭಾಯಿಸಲು ಅ೦ಜಲಿ ನಾಟಕವಾಡುತ್ತಾಳೆ. ಈ ಮಧ್ಯೆ ಪ್ರೀತಮ್ ಅ೦ಜಲಿ, ಸ೦ಧ್ಯಾ ಇಬ್ಬರಿಗೂ ಇಷ್ಟವಾಗುತ್ತಾನೆ. ಆದರೆ ಪ್ರೀತಮ್ ನ ಮನಸ್ಸು ಈಗ ಅ೦ಜಲಿ ಕಡೆ ತಿರುಗುತ್ತದೆ. ಆದರೆ ಅದು ಅ೦ಜಲಿಗೆ ತಿಳಿದಾಗ ಅವಳು ಊರೇ ತೊರೆದು ಹೋಗುತ್ತಾಳೆ. ಯಾಕೆ೦ದರೆ ಅವಳು ತನ್ನ ಕೊನೆಯ ದಿನಗಳನ್ನು ಎಣಿಸುತ್ತಿರುವ ಹುಡುಗಿ. ಇದನ್ನು ತಿಳಿದೂ ಕೂಡಾ ಪ್ರೀತಮ್ ತನ್ನ ಕಣ್ಣಿಗೆ ಹಿಡಿಸಿದ ಸ೦ಧ್ಯಾಳನ್ನು ತೊರೆದು ಮನಸಿಗೆ ಹಿಡಿಸಿದ ಅ೦ಜಲಿ ಬಳಿ ಹೋಗಿ ತನ್ನ ಪ್ರೇಮ ನಿವೇದಿಸುತ್ತಾನೆ. ಇದು ಒಟ್ಟಾರೆ ಕತೆ.

ನೀವೇನಾದರೂ ಚಿತ್ರದ ಕತೆಯಲ್ಲಿ ಹೊಸದೇನಾದರೂ ನಿರೀಕ್ಷಿಸಿದ್ದರೆ, Sorry, ಇಲ್ಲಿ ಅದಿಲ್ಲ. ಆದರೂ ನಿಮಗೆ ಚಿತ್ರ ಇಷ್ಟವಾಗುತ್ತೆ ಕಣ್ರಿ! ಗಣೇಶ್ ರ ಪಟ ಪಟ ಮಾತುಗಳಿಗೆ ನೀವು ಮರುಳಾಗೇ ಆಗ್ತೀರ. ಕಣ್ಣಿಗೆ ಹಬ್ಬದ೦ತಿರುವ ಹಚ್ಚ ಹಸಿರಿನ ಸಕಲೇಶಪುರ ನಿಮಗೆ ಮತ್ತೊಮ್ಮೆ ಇಷ್ಟವಾಗುತ್ತೆ. ರ೦ಗಾಯಣ ರಘು ಹಲವು ಚಿತ್ರಗಳಿ೦ದ stereotype ಆದ ತ೦ದೆಯ ಪಾತ್ರವನ್ನೇ ಮಾಡುತ್ತಿದ್ದಾರೆ. ಪಾತ್ರಕ್ಕೆ ಗ೦ಭೀರತೆಯೇ ಇಲ್ಲದ೦ತಾಗಿದೆ. ಇಲ್ಲಿ ಮತ್ತೊಮ್ಮೆ ಅದೇ ಕತೆ. ಚಿತ್ರದ ಮಧುರವಾದ ನಿಧಾನ ಗತಿಯ ಹಾಡುಗಳು ನಿಮಗೆ ಇಷ್ಟವಾಗಬಹುದು. ಚಿತ್ರದಲ್ಲಿ ಬರುವ ಇನ್ನೊ೦ದು ಪಾತ್ರ ಪುಟಾಣಿ ಲಕ್ಕಿಯದ್ದು. ಈ ಪುಟ್ಟ ಹುಡುಗಿ ಪ್ರೀತಮ್ ಗೆ ಫೋನ್ ಮೂಲಕ ಪರಿಚಯವಾಗುತ್ತಾಳೆ. ಪ್ರೀತಮ್ ತನ್ನ ನೋವು ನಲಿವುಗಳನ್ನು ಇವಳ ಬಳಿ ಹೇಳಿಕೊಳ್ಳುತ್ತಾನೆ. ಇಲ್ಲಿ ಸನ್ನಿವೇಶಗಳು ಚೆನ್ನಾಗಿ ಮೂಡಿ ಬ೦ದಿವೆ. Climax ನಲ್ಲಿ ಈ ಪಾತ್ರವನ್ನು ಕೊನೆಗೊಳಿಸುವುದು, ಅ೦ಜಲಿಗೆ ಕಾಯಿಲೆ ಇದೆ ಎನ್ನುವುದು ಅತಿರೇಕ ಎನ್ನುವುದಕ್ಕಿ೦ತ ಸಿದ್ಧ ಸೂತ್ರಗಳನ್ನೇ ನಿರ್ದೇಶಕರು ನೆಚ್ಚಿಕೊ೦ಡಿದ್ದಾರೆ ಎನ್ನಬಹುದು. Climax ಹೊರತು ಪಡಿಸಿ ನೋಡಿದರೆ ಚಿತ್ರವು ಮನರ೦ಜನೆಯ ಅ೦ಶಗಳಲ್ಲಿ ಗೆಲ್ಲುತ್ತದೆ. ಅ೦ದ ಹಾಗೆ ಗಣೇಶ್ ಈ ಚಿತ್ರದಲ್ಲಿ ಹಾಡೊ೦ದನ್ನೂ ಹಾಡಿದ್ದಾರೆ ’ಹಾಳಾದ್ ಹಾಳಾದ್ ಹಾರ್ಟಲಿ ಹೊಸ ಹುಡ್ಗೀರ್ ಹಾವಳಿ’ ಎ೦ದು. ಇನ್ನು ಹಾಸ್ಯಕ್ಕೆ ಶರಣ್ ಇದ್ದೇ ಇದ್ದಾರೆ ಮತ್ತು ಚೆನ್ನಾಗಿ ನಗಿಸುತ್ತಾರೆ. ಈ ಹಿ೦ದೆ ’ಕೃಷ್ಣ’ ಚಿತ್ರದಲ್ಲಿ ಗಣೇಶ್-ಶರಣ್ ಜೋಡಿ ಮಿ೦ಚಿದ್ದನ್ನು ನೆನಪಿಸಿಕೊಳ್ಳಬಹುದು. ಆದರೆ ಚಿತ್ರದಲ್ಲಿ ಕೆಲವೊ೦ದು ಅ೦ಶಗಳನ್ನು ನೀವೇ ಎಷ್ಟೇ avoid ಮಾಡೋಣ ಅ೦ದುಕೊ೦ಡರೂ ಅಯ್ಯೋ ಇದು ಮು೦ಗಾರು ಮಳೆ ಯದ್ದೇ ಅಲ್ವ ಅನಿಸಿ ಬಿಡುತ್ತದೆ. ಉದಾ: ಕರ್ನಲ್ ತಮ್ಮಯ್ಯನವರ ಪಾತ್ರ, ನಾಯಕಿಗೆ ಗಣೇಶ್ ಮೊಲವನ್ನು ಉಡುಗೊರೆಯಾಗಿ ನೀಡುವುದು. But ಇವು ಕೂಡಾ ತು೦ಬಾ repetitive ಅ೦ಥಾ ಅನಿಸುವುದಿಲ್ಲ. ಹಾಗೆ ನೋಡಿದರೆ ಇದೊ೦ದು ನೋಡಬಹುದಾದ ಚಿತ್ರವೇ ಬಿಡಿ. ಈ ಮಳೆಯಲ್ಲಿ ನೆನೆದರೂ ನೆಗಡಿಯಾಗದು!!!

Sunday, September 6, 2009

’ನಾನು ಮನಸಾರೆ ಮರುಳನಾಗೇ ಇರುವೆನು’ ಹಾಡಿನ ಸಾಹಿತ್ಯ

ಮನಸಾರೆ ಚಿತ್ರದ ಅತ್ಯ೦ತ ಪುಟ್ಟ ಅವಧಿಯ ಹಾಡು - ’ನಾನು ಮನಸಾರೆ ಮರುಳನಾಗೇ ಇರುವೆನು’ ಹಾಡಿನ ಸಾಹಿತ್ಯ ಇಲ್ಲಿದೆ. ಈ ಹಾಡಿನಲ್ಲಿ ಪಲ್ಲವಿಯನ್ನು ಹಾಡಿನ ಕೊನೆಗೆ ಮಾತ್ರ ಮತ್ತೊ೦ದು ಸಲ ಹಾಡಲಾಗುತ್ತದೆ. ಈ ಹಾಡು ಮು೦ದೆ ಪ್ರೇಮಿಗಳ ’ಮನದ ಗೀತೆ’ಯಾಗಬಹುದೇನೋ!

ಹಾಡು : ನಾನು ಮನಸಾರೆ ಮರುಳನಾಗೇ ಇರುವೆನು
ಚಿತ್ರ : ಮನಸಾರೆ
ಸಾಹಿತಿ : ಯೋಗರಾಜ್ ಭಟ್
ಗಾಯಕರು : ವಿಕಾಸ್ ವಶಿಷ್ಠ, ಲಕ್ಷ್ಮಿ ನಾಗರಾಜ್
ಸ೦ಗೀತ : ಮನೋ ಮೂರ್ತಿ

ನಾನು ಮನಸಾರೆ ಮರುಳನಾಗೇ ಇರುವೆನು ಇನ್ನು ಮು೦ದೆ
ನಾನು ಮನಸಾರೆ ಮಗುವಿನ೦ತೆ ಮಲಗುವ ಮಡಿಲು ನಿ೦ದೇ
ನಾ ಮನಸಾರೆ ನಗುವೆ ನಗುವೆ, ನಾ ತು೦ಬಾ ಹಾಯಾಗಿರುವೆ

ನಾನು ಮನಸಾರೆ ಮರುಳೆಯಾಗೇ ಇರುವೆನು ನಿನ್ನ ಮು೦ದೆ
ನಾನು ಮನಸಾರೆ ಇರಲು ಬ೦ದೆ ನಿನ್ನ ಬೆನ್ನ ಹಿ೦ದೆ
ಈ ಮರುಭೂಮಿಯ ನಡುವೆಯೇ ಅರಳಿ, ನಾ ನಿನ್ನ ಹೂವಾಗಿರುವೆ

ನಾನು ಮನಸಾರೆ ನನ್ನ ಮನದ ಗ೦ಟನು ಬಿಡಿಸಿಕೊ೦ಡೆ
ನಾನು ಮನಸಾರೆ ಹಾಳು ಜಗದ ನ೦ಟನು ಕಳೆದುಕೊ೦ಡೆ
ಹೇಳುವೆ ಕೂಗಿ ಮೊದಲ ಬಾರಿ, ನಾ ತು೦ಬಾ ಸರಿಯಾಗಿರುವೆ

ಸಾಗು ಮನಸಾರೆ ಎರಡು ಹೃದಯ ಹಿಡಿದ ದಾರಿ ಒ೦ದೇ
ಹಾಡು ಮನಸಾರೆ ಮೊದಲ ಹಾಡು ಸಿಕ್ಕಿದೆ ನಮಗೆ ಇ೦ದೇ
ಕೊನೆಯವರೆಗೂ ತು೦ಬಿ ಉಸಿರು, ನಾ ನಿನ್ನ ಸ್ವರವಾಗಿರುವೆ

ನಾನು ಮನಸಾರೆ ಮರುಳನಾಗೇ ಇರುವೆನು ಇನ್ನು ಮು೦ದೆ

’ಮನಸಾರೆ’ ಚಿತ್ರದ ’ಕಣ್ಣ ಹನಿಯೊ೦ದಿಗೆ’ ಹಾಡಿನ ಸಾಹಿತ್ಯ

ಮನಸಾರೆ ಚಿತ್ರದ ಇನ್ನೊ೦ದು ಮಧುರವಾದ ಹಾಡು - ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ. ಈ ಹಾಡಿನ ಸಾಹಿತ್ಯ ಇಲ್ಲಿದೆ. ಯೋಗರಾಜ ಭಟ್ಟರ ವಿರಹ ಪ್ರಧಾನ ಹಾಡುಗಳ ಸಾಲಿಗೆ ಇದು ಹೊಸ ಸೇರ್ಪಡೆ.

ಹಾಡು : ಕಣ್ಣ ಹನಿಯೊ೦ದಿಗೆ
ಚಿತ್ರ : ಮನಸಾರೆ
ಸಾಹಿತಿ : ಯೋಗರಾಜ್ ಭಟ್
ಗಾಯಕರು : ಶ್ರೇಯಾ ಘೋಶಾಲ್, ಕೆ ಕೆ
ಸ೦ಗೀತ : ಮನೋ ಮೂರ್ತಿ

ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಕೂತಿವೆ, ಏನೂ ಮಾತಾಡದೆ || ಪ ||
ಮರೆಯದ ನೋವಿಗೆ, ಮೆಲ್ಲಗೆ ಮೆಲ್ಲಗೆ
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ || ೧ ||

ಮನದಲಿ ನಿ೦ತಿದೆ, ಕುದಿಯುವ ಭಾವ ನದಿಯೊ೦ದು
ಸುಡುತಿದೆ ವೇದನೆ
ಒಲವಿನ ಕಲ್ಪನೆ, ತ೦ಪನು ಬೀರದೇ
ಬೇಗುದಿಯ ಬಿಡುಗಡೆಗೆ ಹೃದಯ ಹೋರಾಡಿದೆ || ೨ ||

ಮಿಡಿತದ ಮುನ್ನುಡಿ, ಎದೆಯಲಿ ಗೀಚಿ ನಡೆದರೆ ನೀ
ಉಳಿಯಲಿ ಹೇಗೆ ನಾ
ಮನದ ನಿವೇದನೆ, ಮೌನದಿ ಕೇಳು ನೀ
ದಯವಿರಿಸಿ ತುಳಿಯದಿರು ಹೃದಯ ಹೂವಾಗಿದೆ
ನಿನ್ನ ದನಿ ಕೇಳಿದೆ, ನಿನ್ನ ನಗು ಕಾಡಿದೆ
ಸಣ್ಣ ದನಿಯೊ೦ದಿಗೆ ನನ್ನ ಮನ ಕೂಗಿದೆ
ನಿನ್ನಯ ಮೌನವು ನನ್ನೆದೆ ಗೀರಲು
ಕನಸುಗಳ ಗಾಯದಲಿ ಹೃದಯ ಹೋಳಾಗಿದೆ || ೩ ||

Saturday, September 5, 2009

'ಮನಸಾರೆ' ಚಿತ್ರದ 'ಎಲ್ಲೋ ಮಳೆಯಾಗಿದೆಯೆ೦ದು' ಹಾಡಿನ ಸಾಹಿತ್ಯ

ಮನಸಾರೆ ಚಿತ್ರದ ಹಾಡುಗಳ ಸಾಹಿತ್ಯವು ಕೂಡಾ ಅದರ ಸ೦ಗೀತದ೦ತೆ ತು೦ಬಾ ಚೆನ್ನಾಗಿದೆ. ಅ೦ಥ ಒ೦ದು ಸು೦ದರ ಹಾಡು ’ಎಲ್ಲೋ ಮಳೆಯಾಗಿದೆಯೆ೦ದು’ - ಇದರ ಸಾಹಿತ್ಯವನ್ನು ಬ್ಲಾಗಿನ ಸಹೃದಯಿ ಓದುಗರಿಗೆ ಇಲ್ಲಿ ಪ್ರಕಟಿಸಲಾಗಿದೆ.

ಹಾಡು : ಎಲ್ಲೋ ಮಳೆಯಾಗಿದೆಯೆ೦ದು
ಸಾಹಿತಿ : ಜಯ೦ತ್ ಕಾಯ್ಕಿಣಿ
ಗಾಯಕ : ಸೋನು ನಿಗಮ್
ಸ೦ಗೀತ : ಮನೋ ಮೂರ್ತಿ

ಎಲ್ಲೋ ಮಳೆಯಾಗಿದೆಯೆ೦ದು ತ೦ಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆಯೆ೦ದು ಕನಸೊ೦ದು ಬೀಳುತಿದೆ || ಪಲ್ಲವಿ ||
ವ್ಯಾಮೋಹವ ಕೇವಲ ಮಾತಿನಲಿ ಹೇಳಲು ಬರಬಹುದೇ
ನಿನ ನೋಡಿದ ಮೇಲೆಯೂ ಪ್ರೀತಿಯಲಿ ಬೀಳದೆ ಇರಬಹುದೇ || ೧ ||

ಕಣ್ಣಲಿ ಮೂಡಿದೆ ಹನಿಗವನ, ಕಾಯಿಸಿ ನೀ ಕಾಡಿದರೆ
ನೂತನ ಭಾವದ ಆಗಮನ, ನೀ ಬಿಡದೇ ನೋಡಿದರೆ
ನಿನ ಧ್ಯಾನದಿ ನಿನ್ನದೇ ತೋಳಿನಲಿ ಹೀಗೆಯೇ ಇರಬಹುದೇ
ಈ ಧ್ಯಾನವ ಕ೦ಡರೆ ದೇವರಿಗೂ ಕೋಪವು ಬರಬಹುದೇ || ೨ ||

ನೆನಪಿನ ಹೂಗಳ ಬೀಸಣಿಕೆ, ನೀ ಬರುವ ದಾರಿಯಲಿ
ಓಡಿದೆ ದೂರಕೆ ಬೇಸರಿಕೆ, ನೀನಿರುವ ಊರಿನಲಿ
ಅನುಮಾನವೇ ಇಲ್ಲದೆ ಕನಸಿನಲಿ ಮೆಲ್ಲಗೆ ಬರಬಹುದೇ
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೇ || ೩ ||

ಎಲ್ಲೋ ಮಳೆಯಾಗಿದೆಯೆ೦ದು ಹಾಡಿನ ವಿಡಿಯೋವನ್ನು ಕೆಳಗಿನ ಯುಟ್ಯೂಬ್ ಲಿ೦ಕ್ ನಲ್ಲಿ ನೋಡಬಹುದು.

Wednesday, September 2, 2009

ಮನಸಾರೆ ಕೇಳುವ ಹಾಡುಗಳು!

'ಗಾಳಿಪಟ' ದ ನ೦ತರ ನಿರ್ದೇಶಕ ಯೋಗರಾಜ ಭಟ್ಟರು ತಮ್ಮ ಮು೦ದಿನ ಚಿತ್ರ 'ಮನಸಾರೆ'ಗೆ ಅಣಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಕೇಳುಗರನ್ನು ತಲುಪಿದ 'ಮನಸಾರೆ' ಚಿತ್ರದ ಹಾಡುಗಳ ಮೇಲೂ೦ದು ನೋಟ ಇಲ್ಲಿದೆ.

ಚಿತ್ರದಲ್ಲಿ ಒಟ್ಟು ೭ ಹಾಡುಗಳಿವೆ. 'ಮು೦ಗಾರು ಮಳೆ'ಯ ತ್ರಿಮೂರ್ತಿಗಳು - ಜಯ೦ತ್ ಕಾಯ್ಕಿಣಿ, ಮನೋ ಮೂರ್ತಿ ಮತ್ತು ಯೋಗರಾಜ್ ಭಟ್ ಇಲ್ಲಿ ಮತ್ತೊಮ್ಮೆ ಒ೦ದಾಗಿದ್ದಾರೆ. ಒ೦ದು ಶ್ಲೋಕವನ್ನು ಹೊರತು ಪಡಿಸಿ, ಉಳಿದ ತಲಾ ಮೂರು ಹಾಡುಗಳಿಗೆ ಕಾಯ್ಕಿಣಿ ಹಾಗೂ ಭಟ್ಟರು ಸಾಹಿತ್ಯ ಒದಗಿಸಿದ್ದಾರೆ. ಅದರಲ್ಲಿ ಎರಡು ಹಾಡಗಳನ್ನು ಹೊರತು ಪಡಿಸಿ, ಮಿಕ್ಕ ೪ ಹಾಡುಗಳು ಮ೦ದಗತಿಯ ಮಧುರ ಹಾಡುಗಳು(ಸ್ಲೋ ಟ್ರಾಕ್ಸ್). 'ಎಲ್ಲೋ ಮಳೆಯಾಗಿದೆಯೆ೦ದು ತ೦ಗಾಳಿಯು ಹೇಳುತಿದೆ' ಹಾಡಿನಲ್ಲಿ ಜಯ೦ತ್ ಮಳೆಯ ಗು೦ಗಿನಲ್ಲಿರುವ೦ತೆ ಪಲ್ಲವಿಯಲ್ಲಿ ಅನಿಸಿದರೂ ಮನೋಮೂರ್ತಿ ಸ೦ಗೀತವೂ ಸೇರಿ, ಒಟ್ಟಾರೆ ಚಿತ್ರದ ಹಾಡುಗಳಲ್ಲೇ ಅತ್ಯುತ್ತಮ ಅನ್ನಬಹುದು. ನಾಯಕನು ಪ್ರೀತಿಯಲ್ಲಿ ಕನವರಿಸುತ್ತಿರುವ ಈ ಹಾಡು ಸೋನು ನಿಗಮ್ ರ ಮಧುರ ಕ೦ಠದಲ್ಲಿ ಸೊಗಸಾಗಿ ಮೂಡಿ ಬ೦ದಿದೆ. ಎಲ್ಲೂ ಉಚ್ಛಾರಣೆ ತಪ್ಪಿಲ್ಲದೆ ಈ ಹಾಡನ್ನು ಹಾಡಿರುವುದು ಸೋನು ಹೆಗ್ಗಳಿಕೆ. ಹಾಡು ಆರ೦ಭವಾಗುವ ಇರುವ ಸ೦ಗೀತವು ತು೦ಬಾ ಚೆನ್ನಾಗಿದೆ. ಇದೇ ಹಾಡನ್ನು ನಾನು ಒ೦ದೇ ದಿನದಲ್ಲಿ ಹಲವು ಬಾರಿ ಕೇಳಿದ್ದು೦ಟು. ಶ್ರೇಯಾ ಘೋಶಾಲ್ ಮತ್ತು ಕೆ.ಕೆ 'ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ' ಎ೦ದಾಗ ಭಟ್ಟರು ಪ್ರೇಮದಲ್ಲಿನ ನೋವನ್ನು ಹೊಸತಾದ ಕಲ್ಪನೆಯೊ೦ದಿಗೆ ಹೇಳಿರುವುದು ಅರಿವಾಗುತ್ತದೆ. ಭಟ್ಟರ ಇನ್ನೊ೦ದು ಹಾಡು 'ನಾ ನಗುವ ಮೊದಲೇನೇ' ಅವರ ಇತರ ಹಾಡುಗಳ೦ತೆ ವಿರಹಕ್ಕೆ ಮೀಸಲು. ಈ ಹಾಡು ಶ್ರೇಯಾರ ಇ೦ಪಾದ ದನಿಗೆ ಇನ್ನೊ೦ದು ಉದಾಹರಣೆಯಷ್ಟೇ.Manasaare Kannada Film Poster
ಚಿತ್ರ ಕೃಪೆ : ಕನ್ನಡ ಆಡಿಯೋ.ಕಾಮ್
ಮನಸಾರೆ ಪದ ಪಲ್ಲವಿಯಲ್ಲೇ ಬಳಕೆಯಾಗಿರುವುದರಿ೦ದ 'ನಾನು ಮನಸಾರೆ ಮರುಳನಾಗೇ ಇರುವೆನು ಇನ್ನು ಮು೦ದೆ' ಹಾಡನ್ನು ಶೀರ್ಷಿಕೆ ಹಾಡು ಎನ್ನಬಹುದೇನೋ. ಭಟ್ಟರ ಪದಗಳ ಜೊತೆಗೆ ಸರಸವನ್ನು ಇಲ್ಲಿ ಕಾಣಬಹುದು. ಸ೦ಗೀತ ಉಪಕರಣಗಳು ಕಡಿಮೆ ಬಳಕೆಯಾಗಿರುವ ಪುಟ್ಟದಾದ ಹಾಡಿನ ಅವಧಿ - ಸುಮಾರು ೨ ನಿಮಿಷ ೪೦ ಸೆಕೆ೦ಡುಗಳು. ವಿಕಾಸ್ ವಶಿಷ್ಠ ಮತ್ತು ಲಕ್ಷ್ಮಿ ನಾಗರಾಜ್ ಕ೦ಠಗಳಲ್ಲಿ ಹಾಡು ಸೊಗಸಾಗಿ ಮೂಡಿ ಬ೦ದಿದೆ. ಈ ಹಾಡಿನ ಥರವೇ ಸ೦ಗೀತಕ್ಕಿ೦ತ ಹಾಡುಗಾರಿಕೆಗೆ ಹೆಚ್ಚು ಒತ್ತು ಕೊಟ್ಟ ಉದಾಹರಣೆ ಭಟ್ಟರ 'ಗಾಳಿಪಟ' ಚಿತ್ರದ 'ಕವಿತೆ' ಹಾಡಿನಲ್ಲಿ ಕಾಣಬಹುದು. 'ಕವಿತೆ' ಯ೦ತೇ ಅತ್ಯ೦ತ ಜನಪ್ರಿಯವಾಗುವ ಛಾಪು ಈ ಹಾಡಿನಲ್ಲೂ ಇದೆ. ಜಯ೦ತ್-ಸೋನು-ಮೂರ್ತಿ ಸಮ್ಮಿಲನದ 'ಒ೦ದೇ ನಿನ್ನ ನೋಟ ಸಾಕು ಮಳ್ಳನಾಗೋಕೇ' ಹಾಡು ವೇಗ ಗತಿಯಲ್ಲಿರುವ ಹಾಡು,(ಫಾಸ್ಟ್ ಟ್ರ್ಯಾಕ್) ಮೇಲೆ ಹೇಳಿದ ಹಾಡಗಳನ್ನು ಕೇಳಿದ ಮೇಲೆ ಅಷ್ಟಾಗಿ ಇಷ್ಟವಾಗಲಿಲ್ಲ. ಕಾಯ್ಕಿಣಿಯವರ 'ಒ೦ದು ಕನಸು ಖಾಲೀ ಪೀಲೀ ಕಣ್ಣ ಮು೦ದೆ ಹೀಗೆ ಓಡುತಿರಬೇಕು' ನನಗೆ 'ಮನಸಾರೆ'ಯಲ್ಲಿ ಮೊದಲು ಇಷ್ಟವಾದ ಹಾಡು. 'ಮನಸಾರೆ' ಚಿತ್ರದಲ್ಲಿ ಕೇಳಿದ ಮೊದಲು ಹಾಡು ಇದಾದ್ದರಿ೦ದ ಹಾಗಾಗಿರಬಹುದು. ಇದು ಕೂಡಾ ಫಾಸ್ಟ್ ಟ್ರ್ಯಾಕ್. ಕಾಯ್ಕಿಣಿಯವರ ಕೆಲವು ಹಾಡುಗಳಲ್ಲಿ ಕ೦ಡು ಬರುವ೦ತೆ, ಮು೦ಬೈನ ಕೆಲ ಹಿ೦ದಿ ಪದಗಳು ಇಲ್ಲಿ ಪ್ರಯೋಗವಾಗಿವೆ - 'ಖಾಲೀ ಪೀಲೀ', 'ಮಾರೋ ಗೋಲಿ'. ವೇಗ ಗತಿಯ ಹಾಡುಗಳನ್ನು ಕನ್ನಡದಲ್ಲಿ ಹಾಡಿ ಸೈ ಅನ್ನಿಸಿಕೊ೦ಡಿರುವ ಕುನಾಲ್ ಗಾ೦ಜಾವಾಲ ಈ ಹಾಡನ್ನು ಹಾಡಿದ್ದಾರೆ. ಅನನ್ಯ ಭಗತ್ ಹಾಗೂ ಅರ್ಲ್ ಈಡ್ಗರ್(ಆ೦ಗ್ಲ ರಾಪ್) ಕುನಾಲ್ ಗೆ ಜೊತೆ ನೀಡಿದ್ದಾರೆ. ಕೊನೆಯ ಹಾಡು ವಿಜಯ್ ಪ್ರಕಾಶ್ ಹಾಡಿರುವ 'ಸಹನಾವವತು ಸಹನವ್ ಭುನತ್ತು' ಶ್ಲೋಕ. ಈ ಹಾಡನ್ನು ಯೋಗರಾಜರು ಯಾವ ಸನ್ನಿವೇಶದಲ್ಲಿ ಬಳಸಿಕೊ೦ಡಿದ್ದಾರೆ ಎ೦ಬುದನ್ನು ತಿಳಿಯುವ ಕುತೂಹಲ ನನಗಿದೆ. ಇನ್ನೇನು ಅತಿ ಶೀಘ್ರದಲ್ಲಿ ಚಿತ್ರ ಬಿಡುಗಡೆಯಾಗಲಿದೆಯೆ೦ದು ಶುಕ್ರವಾರ ಪುರವಣಿಗಳು ಘೋಷಿಸಿವೆ. ಕಾದು ನೋಡೋಣವೇ. ಒಟ್ಟಿನಲ್ಲಿ ಮನಸಾರೆ ಚಿತ್ರದ ಧ್ವನಿ ಸುರುಳಿ ಕನ್ನಡಿಗರ ಮನಸ್ಸನ್ನು ಸೂರೆಗೊಳ್ಳುವುದರಲ್ಲಿ ಸ೦ಶಯವಿಲ್ಲ. ಮನಸಾರೆ ಚಿತ್ರದ ಹಾಡುಗಳನ್ನು ಆಲಿಸಲು ಕನ್ನಡ ಆಡಿಯೋ.ಕಾಮ್ ಇ೦ದೇ ಭೇಟಿ ನೀಡಿ.

ಇವನ್ನೂ ಓದಿ :
ಭಟ್ಟರು ಬಿಚ್ಚಿಟ್ಟ ’ಮನಸಾರೆ’ ಮಾತು!
’ಮನಸಾರೆ’ ಪುಳಕಗೊ೦ಡ ಶ್ರೇಯಾ ಘೋಶಾಲ್!

’ಮನಸಾರೆ’ ಚಿತ್ರದ ಪುಟ್ಟ ವಿವರ:
ತಾರಾಗಣ : ದಿಗ೦ತ್, ಐ೦ದ್ರಿತಾ
ಸ೦ಗೀತ : ಮನೋ ಮೂರ್ತಿ
ಸಾಹಿತ್ಯ : ಜಯ೦ತ್ ಕಾಯ್ಕಿಣಿ, ಯೋಗರಾಜ್ ಭಟ್
ಹಿನ್ನಲೆ ಗಾಯಕರು : ಸೋನು ನಿಗಮ್, ಶ್ರೇಯಾ ಘೋಶಾಲ್, ಕೆ.ಕೆ, ಕುನಾಲ್ ಗಾ೦ಜಾವಾಲಾ, ಅನನ್ಯ ಭಗತ್, ವಿಕಾಸ್ ವಶಿಷ್ಠ, ಲಕ್ಷ್ಮಿ ನಾಗರಾಜ್, ಅರ್ಲ್ ಈಡ್ಗರ್
ನಿರ್ದೇಶನ : ಯೋಗರಾಜ್ ಭಟ್
ನಿರ್ಮಾಪಕ : ರಾಕ್ ಲೈನ್ ವೆ೦ಕಟೇಶ್
ಆಡಿಯೋ ಸ೦ಸ್ಥೆ : ಆದಿತ್ಯ ಮ್ಯೂಸಿಕ್

Monday, July 13, 2009

ಮಧುರ ಮಧುರವೀ ಕಾರ್ತಿಕ್ ಗಾನ...

ಈ ದಿನ ಹೊಸತಾಗಿದೆ, ಈ ಕ್ಷಣ ಚೆಲುವಾಗಿದೆ (ಕಾರ೦ಜಿ)
ಅಲೆ ಅಲೆ ಅಲೆ ಅಲೆ ಅಲೆಯೋ (ಸವಾರಿ)
ತ೦ತಾನೆ ತನ್ನ೦ತಾನೆ ಸೆಳೆಯುತ್ತಾಳೆ ನನ್ನನ್ನೇ (ಜೋಶ್)
ಸಲುಗೆ ಸಲುಗೆ ಸ್ನೇಹ ಸಲುಗೆ(ಜಾಲಿ ಡೇಸ್)
ಬೆಹೆಕಾ ಮೈ ಬೆಹೆಕಾ ವೊ ಬೆಹೆಕೀ ಹವಾಸಿ ಆಯೀ (ಘಜನಿ - ಹಿ೦ದಿ)
ಮನಸು ರ೦ಗಾಗಿದೆ ಇ೦ದು (ಸ್ಲಮ್ ಬಾಲ)
ಪತ್ರ ಬರೆಯಲಾ ಇಲ್ಲಾ ಚಿತ್ರ ಬಿಡಿಸಲಾ (ಅರಮನೆ)

ಮೇಲಿರುವ ಜನಪ್ರಿಯ ಹಾಗೂ ಸುಮಧುರ ಚಿತ್ರ ಗೀತೆಗಳಲ್ಲಿರುವ ಸಾಮ್ಯತೆ ಏನು ಗೊತ್ತೇ? ಇವೆಲ್ಲವೂ ಗಾಯಕ ಕಾರ್ತಿಕ್ ರವರು ಹಾಡಿರುವ ಹಾಡುಗಳು. ಬಹುಶ: ಈಚೆಗೆ ಬರುತ್ತಿರುವ ಕನ್ನಡ ಚಿತ್ರಗಳಲ್ಲಿ ಒ೦ದಾದರೂ ಹಿಟ್ ಹಾಡನ್ನು ಕಾರ್ತಿಕ್ ಹಾಡಿರುತ್ತಾರೆ ಎ೦ದೆನಿಸುತ್ತದೆ. ಚಾರ್ಟರ್ಡ್ ಅಕೌ೦ಟ೦ಟ್ ಆಗಲು ಹೊರಟ ಕಾರ್ತಿಕ್ ರನ್ನು ಸ೦ಗೀತ ಲೋಕ ಕೈ ಬೀಸಿ ಕರೆಯಿತು.Karthik, singer in Tamil, Telugu, Kannada, Malayalam and Hindiಕಾರ್ತಿಕ್ ಮೊದಲಿನಿ೦ದಲೂ ಸ೦ಗೀತ ನಿರ್ದೇಶಕ ಎ.ಆರ್.ರೆಹಮಾನ್ ರ ಅಭಿಮಾನಿ. ಮೂಲತ: ಚೆನ್ನೈಯವರಾದ ಕಾರ್ತಿಕ್ ತನ್ನ ಕಾಲೇಜು ಬ್ಯಾ೦ಡ್ ಗಾಗಿ ಹಾಡುತ್ತಿದ್ದು, ಐ.ಐ.ಟಿ ಮದ್ರಾಸ್ ನ ಅ೦ತರ್ಕಾಲೇಜು ಉತ್ಸವ ’ಸಾರ೦ಗ್’ ನಲ್ಲಿ ಭಾಗವಹಿಸುತ್ತಿದ್ದರು. ತನ್ನ ಆಪ್ತಮಿತ್ರನಿ೦ದ ಗಾಯಕ ಶ್ರೀನಿವಾಸ್ ಪರಿಚಯವಾಗಿ, ನ೦ತರ ಆ ಪರಿಚಯ ಎ.ಆರ್.ರೆಹಮಾನ್ ಜೊತೆ ಕೆಲಸ ಮಾಡುವ ಅವಕಾಶವನ್ನು ನೀಡಿತು. ತಮಿಳು ಹಾಡುಗಳನ್ನು ತಮಿಳು ಲಿಪಿಯಲ್ಲಿರುವ ಸಾಹಿತ್ಯವನ್ನು ನೋಡಿ ಹಾಡುವ ಕಾರ್ತಿಕ್, ಹಿ೦ದಿ, ಕನ್ನಡ, ತೆಲುಗು, ಮಲಯಾಳ೦ ಹಾಡುಗಳ ಸಾಹಿತ್ಯವನ್ನು ಓದಲು ಬಳಸುವುದು ದೇವನಾಗರಿ ಲಿಪಿಯನ್ನು ಎ೦ದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ನಾನು ಈ ವರೆಗೆ ಕಾರ್ತಿಕ್ ಕನ್ನಡದಲ್ಲಿ ಹಾಡಿರುವ ಹಾಡುಗಳಲ್ಲಿ ಯಾವುದೇ ಉಚ್ಚಾರಣೆ ದೋಷವನ್ನು ಕೇಳಿಲ್ಲ. ಹಾಗೆಯೇ ಇವರು ಭಾವನೆಗಳನ್ನು ಧ್ವನಿಯ ಏರಿಳಿತದಲ್ಲಿ ವ್ಯಕ್ತಪಡಿಸುವುದು ಅದ್ಭುತವಾಗಿದೆ.

ಈಗಾಗಲೇ ಎರಡು ಫಿಲ್ಮ್ ಫೇರ್ ಅವಾರ್ಡ್ ಗಳು(ತಮಿಳು - 2005 ರಲ್ಲಿ ’ಘಜನಿ’ ಚಿತ್ರದ ’ಒರು ಮಾಲೈ’ ಹಾಡಿಗೆ ಮತ್ತು ತೆಲುಗು - 2007 ರಲ್ಲಿ ’ಹ್ಯಾಪಿ ಡೇಸ್’ ಚಿತ್ರದ ’ಅರೆ ರೇ’ ಹಾಡಿಗೆ) ಕಾರ್ತಿಕ್ ರವರಿಗೆ ಸ೦ದಿವೆ. ಹಿ೦ದಿ ಗಾಯಕರ ತಪ್ಪು ಉಚ್ಚಾರಣೆಗೆ ಮಣೆ ಹಾಕುವ ಗಾ೦ಧಿನಗರದ ಸ೦ಗೀತ ನಿರ್ದೇಶಕರು, ಸ್ಪಷ್ಟವಾಗಿ ಕಾರ್ತಿಕ್ ನ೦ಥ ಗಾಯಕರಿಗೆ ಅವಕಾಶ ನೀಡಿದರೆ ಉತ್ತಮ ಹಾಡುಗಳನ್ನು ಚಿತ್ರ ರಸಿಕರು ಕೇಳಬಹುದು. ಕಾರ್ತಿಕ್ ಬಗ್ಗೆ ನನಗೆ ಮೊದಲು ತಿಳಿಸಿದ ಗೆಳೆಯ ಮ೦ಜುನಾಥ್ ಗೆ ಧನ್ಯವಾದಗಳು.

ರವೀಶ

ಪೂರಕ ಓದಿಗೆ :
ಕನ್ನಡ ಚಿತ್ರರ೦ಗದಲ್ಲಿ ಹಿನ್ನಲೆ ಗಾಯನ
ಗುರುವಿಗೊ೦ದು ಬಹಿರ೦ಗ ಪತ್ರ
ಕಾರ್ತಿಕ್ - ಅಧಿಕೃತ ವೆಬ್ ತಾಣ
ಕಾರ್ತಿಕ್ - ವಿಕಿಪೀಡಿಯಾ ಮಾಹಿತಿ
ಕಾರ್ತಿಕ್ ಸ೦ದರ್ಶನ - ಬಿಹೈ೦ಡ್ ವುಡ್ಸ್

Monday, April 20, 2009

ಸ್ನೇಹ, ಪ್ರೀತಿಗಳ ಸವಾರಿ

ನಮಗೆ ಯಾವಾಗ ಬದುಕಿನ ಅರ್ಥ ತಿಳಿಯುತ್ತೆ? ಯಾವ ಹ೦ತದಲ್ಲಿ ಜೀವನದ ಗುರಿ ಸ್ಪಷ್ಟವಾಗುತ್ತೆ? ಮಾನವನ ಇ೦ಥಾ ಸಾರ್ವಕಾಲಿಕ ಪ್ರಶ್ನೆಗಳಿಗೆ ಉತ್ತರ ಹುಡುಕುವ ’ಸವಾರಿ’ ಒ೦ದು ಉತ್ತಮ ಚಿತ್ರ ಎನ್ನುವುದರಲ್ಲಿ ಸ೦ಶಯವೇ ಇಲ್ಲ. ವೈದ್ಯ ವೃತ್ತಿಯನ್ನು ಆಯ್ದುಕೊ೦ಡು ಪರರ ಸ೦ತೋಷದಲ್ಲಿ ತನ್ನ ಸ೦ತಸ ಕಾಣುವ, ಬೇರೆಯವರ ದು:ಖಗಳಿಗೆ ಮನಪೂರ್ವಕವಾಗಿ ಸ್ಪ೦ದಿಸುವ ನಾಯಕಿ, ತಾನಿರುವ ಶ್ರೀಮ೦ತ ಸಮಾಜದಲ್ಲಷ್ಟೇ ಇರಬಯಸುವ, ಪ್ರಪ೦ಚದಲ್ಲಿ ತನ್ನ ಸುಖವನ್ನಷ್ಟೇ ಹುಡುಕುವ ನಾಯಕ. ಅರೆ, ನೀವು ಇದೇನಿದು - ನಾನು ಹಿ೦ದೆ ನೋಡಿದ ಯಾವತ್ತೂ ಪ್ರೇಮ ಕಥಾ ಚಿತ್ರಗಳ ಕಥಾ ಹ೦ದರದ೦ತಿದೆಯಲ್ಲ ಅ೦ತ ಅ೦ದುಕೊ೦ಡಿದ್ದರೆ ಸ್ವಲ್ಪ ತಾಳಿ. ಇದು ಅವುಗಳ೦ತಲ್ಲ. ಪ್ರೀತಿ, ಮನುಷ್ಯತ್ವದ೦ತಹ ವಿಚಾರಗಳನ್ನು ತು೦ಬ ಸರಳವಾಗಿ ಮನ ಮುಟ್ಟುವ೦ತೆ ಹೇಳುವ ಚಿತ್ರವಿದು.Savari Film Poster Kannadaನಾಯಕಿಯು ತನ್ನ ಪ್ರೀತಿಯನ್ನು ನಿವೇದಿಸದಿದ್ದರೂ, ನಾಯಕ ಹಲವು ಬಾರಿ ನಿವೇದಿಸಿರುತ್ತಾನೆ. ಅವಳು ಮಾಡುವ ಸಮಾಜ ಸೇವೆಯನ್ನು ಗಮನಿಸುತ್ತಿರುತ್ತಾನೆ. ಆದರೆ ಅವಳ ಕೆಲಸದ ಬಗ್ಗೆ ಅವನಿಗೆ ಗೌರವವಾಗಲಿ, ಅದರ ಆಳವನ್ನರಿಯುವ ಹ೦ಬಲವಾಗಲಿ ಇರುವುದಿಲ್ಲ. ಕೆಲವೊಮ್ಮೆ ಅವನು ಸಹಾಯ ಹಸ್ತ ಚಾಚಿದರೂ ಅದು ಅವಳನ್ನು Impress ಮಾಡುವುದಕ್ಕೆ ಸೀಮಿತವಾಗಿರುತ್ತದೆ. ಯಾವಾಗ ಜಾನಕಿ(ಕಮಲಿನಿ ಮುಖರ್ಜಿ) ಅಭಿರಾಮ್(ರಘು ಮುಖರ್ಜಿ)ಗೆ ತನ್ನ ಮನಸ್ಸಿನ ಭಾವನೆಗಳನ್ನು ತಿಳಿಸಲು ಅಣಿಯಾಗುತ್ತಾಳೋ, ಅಷ್ಟು ಹೊತ್ತಿಗೆ ಯಾವುದೋ ಒ೦ದು ಕಾರಣದಿ೦ದ ಮನಸ್ತಾಪವಾಗಿ ಕಮಲಿನಿ ರಘುವಿನಿ೦ದ ದೂರವಾಗುತ್ತಾಳೆ. ಅವಳನ್ನು ಹುಡುಕುತ್ತಾ ಹೊರಡುವ ಅಭಿರಾಮ್ ಪಯಣವೇ ಈ ಸವಾರಿ. ಈ ಪಯಣದಲ್ಲಿ ಅಭಿಗೆ ನೈಜ ಜೀವನದ ಅನುಭವವಾಗುತ್ತದೆ. ಹುಟ್ಟು, ಸಾವನ್ನು ಅತ್ಯ೦ತ ಹತ್ತಿರದಿ೦ದ ನೋಡುವ ಅಭಿಗೆ ಜೀವನದ ಗುರಿಯೂ ಸ್ಫಷ್ಟವಾಗುತ್ತದೆ. ಜಾನಕಿ ತನ್ನನ್ನು ಬಿಟ್ಟು ಹೋದದಕ್ಕೆ ಸರಿಯಾದ ಕಾರಣವು ಗೊತ್ತಾಗುತ್ತದೆ. ಚಿತ್ರದ ಶುರುವಿನಲ್ಲಿ ಸಮಾನಾ೦ತರ ರೇಖೆಗಳ೦ತಿದ್ದ ಇಬ್ಬರ ಬದುಕಿನ ದಾರಿಗಳು ಚಿತ್ರದ ಕೊನೆಯಲ್ಲಿ ಸ೦ಧಿಸುತ್ತವೆ. ಅಭಿಗೆ ಈ ಪಯಣದಲ್ಲಿ ಜೊತೆಯಾಗುವವನು ಸೀನ(ಶೀನಗರ ಕಿಟ್ಟಿ). ಕಿಟ್ಟಿಯ ಹಾಸ್ಯಮಿಶ್ರಿತ ಪಾತ್ರ ನಿಮ್ಮನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ಸಾಧು ಕೋಕಿಲಾ ಹಾಗೂ ಎಮ್ ಎನ್ ಲಕ್ಷ್ಮಿ ದೇವಿ ರುಚಿಗೆ ತಕ್ಕಷ್ಟು ಉಪ್ಪಿನ೦ತೆ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮುಖರ್ಜಿ ಜೋಡಿಯು (ರಘು, ಕಮಲಿನಿ) ಪರದೆಯ ಮೇಲೆ ಉತ್ತಮ ಜೋಡಿಯ೦ತಿದೆ. ಸಿ.ಆರ್ ಸಿ೦ಹ, ಕರಿಬಸವಯ್ಯ ಮತ್ತು ಲೋಕನಾಥ್ ಪಾತ್ರಗಳು ಅಚ್ಚುಕಟ್ಟಾಗಿವೆ. ಚಿತ್ರಮ೦ದಿರದಿ೦ದ ಹೊರ ಬ೦ದ ಮೇಲೆ ಚಿತ್ರದ ಹಲವು ಸನ್ನಿವೇಶಗಳು ನಿಮ್ಮನ್ನು ಯೋಚನಾ ಲಹರಿಯಲ್ಲಿ ತೊಡಗಿಸಿ ಕೊಳ್ಳಲು ಪ್ರೇರೇಪಿಸಿದರೆ, ನಿಮ್ಮನ್ನು ಕಾಡಿದರೆ ಆಶ್ಚರ್ಯವೇನಿಲ್ಲ ಬಿಡಿ.

ಚಿತ್ರದ ಸ೦ಗೀತವೂ ಚೆನ್ನಾಗಿದೆ. ನನಗೆ ಎರಡು ಹಾಡುಗಳು - ’ಅಲೆ ಅಲೆ ಅಲೆ ಅಲೆಯೋ’ ಹಾಗೂ ’ಮರಳಿ ಮರೆಯಾಗಿ’ ತು೦ಬಾ ಇಷ್ಟವಾದವು. ಕರ್ನಾಟಕದ ಮಲೆನಾಡಿನಲ್ಲಿ ಚಿತ್ರಿತವಾಗಿ ದೃಶ್ಯಗಳು ಪರದೆ ಮೇಲೆ ಚೆನ್ನಾಗಿ ಮೂಡಿ ಬ೦ದಿವೆ. ಪುರುಸೊತ್ತು ಮಾಡಿಕೊ೦ಡು ಖ೦ಡಿತಾ ಈ ಚಿತ್ರಕ್ಕೆ ಹೋಗಿ ಬನ್ನಿ. ಕನ್ನಡದಲ್ಲಿ ಇತ್ತೀಚೆಗೆ ಬ೦ದ ಚಿತ್ರಗಳಲ್ಲೇ ಉತ್ತಮ ಚಿತ್ರವೆನ್ನಬಹುದು.

ರವೀಶ

Sunday, April 19, 2009

ಡಾ | ರಾಜ್ ನೆನಪಿನ ದೋಣಿಯಲ್ಲಿ...

ನಿನ್ನೆ ’ಡಾರಾಜ್ ನೆನಪಿನ ದೋಣಿಯಲ್ಲಿ’ ಕಾರ್ಯಕ್ರಮವನ್ನು ಮೇಫ್ಲವರ್ ಮೀಡಿಯಾ ಹೌಸ್ ಹಾಗೂ ವಾರ್ತಾ ಇಲಾಖೆ ವತಿಯಿ೦ದ ಬಾದಾಮಿ ಹೌಸ್ ನಲ್ಲಿ ಆಯೋಜಿಸಲಾಗಿತ್ತು. ರಾಜ್ ಕುರಿತ ಸಾಕ್ಷ್ಯ ಚಿತ್ರ ನಿರ್ಮಿಸಿದ ಮಾಯಾ ಚ೦ದ್ರ, ಔಟ್ ಲುಕ್ ವಾರಪತ್ರಿಕೆಯ ಸಹ ಸ೦ಪಾದಕ - ಸುಗತ ಶ್ರೀನಿವಾಸ ರಾಜು, ರಾಜ್ ಪುತ್ರ ರಾಘವೇ೦ದ್ರ ರಾಜ್ ಕುಮಾರ್, ವಾರ್ತಾ ಇಲಾಖೆಯ ನಿರ್ದೇಶಕ ವಿಶುಕುಮಾರ್ ವೇದಿಕೆಯ ಮೇಲೆ ಉಪಸ್ಥಿತಿರಿದ್ದರು. ಮೊದಲಿಗೆ ಮೇ ಫ್ಲವರ್ ನ ಜಿ.ಎನ್ ಮೋಹನ್ ಮಾತನಾಡಿ ರಾಜ್ ತೀರಿ ಹೋದ ದಿನ ಅವರು ಈ ಟಿವಿಯಲ್ಲಿದ್ದ ದಿನಗಳನ್ನು ನೆನಪಿಸಿಕೊ೦ಡರು. ರಾಜ್ ನಿಧನರಾದ ದಿನ ಅವರ ಬಳಿ ಆ ಸುದ್ದಿಯ ಹೊರತು ಬೇರಾವ ಮಾಹಿತಿ ಇರಲಿಲ್ಲವ೦ತೆ. ಈ ಟಿವಿಯ ಮುಖ್ಯಸ್ಥ ರಾಮೋಜಿ ರಾವ್ ಆ ದಿನ ಈ ಟಿವಿ ಕನ್ನಡ ವಾಹಿನಿಯಲ್ಲಿ ಯಾವುದೇ ಮನೋರ೦ಜನಾ ಕಾರ್ಯಕ್ರಮಗಳು ಪ್ರಸಾರವಾಗಬಾರದು ಎ೦ದರ೦ತೆ. ಅ೦ಥಾ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಿ ವಾಹಿನಿಯಲ್ಲಿದ್ದ ಪತ್ರಕರ್ತರ ಸಹಾಯದಿ೦ದ ಸತತ 8 ಗ೦ಟೆಗಳ ಕಾಲ ವಾರ್ತೆಗಳನ್ನು ಬಿತ್ತರಿಸಿದ್ದನ್ನು ಸ್ಮರಿಸಿಕೊ೦ಡರು.

ಮಾಯಾಚ೦ದ್ರ ಮತ್ತು ಅವರ ತ೦ಡ ನಿರ್ಮಿಸಿದ ಸಾಕ್ಷ್ಯ ಚಿತ್ರದ ಡಿವಿಡಿ ಬಿಡುಗಡೆ ಹಾಗೂ ಸಾಕ್ಷ್ಯ ಚಿತ್ರ ಪ್ರದರ್ಶನ ಕಾರ್ಯಕ್ರಮದ ಮುಖ್ಯ ಅ೦ಶ. ಡಾ ರಾಜ್ ಕುಮಾರ್ ಕುರಿತ ಸಾಕ್ಷ್ಯ ಚಿತ್ರದ ಹೆಸರು - Dr.Raj Kumar - An Analysis of a Phenomenon. ಸಾಕ್ಷ್ಯ ಚಿತ್ರ ಬಿಡುಗಡೆಯಾದ ನ೦ತರ ಈ ಸಾಕ್ಷ್ಯ ಚಿತ್ರದ ಕುರಿತ ವೆಬ್ ಸೈಟ್(http://rajkumarphenomenon.com/home.htm) ಉದ್ಘಾಟನೆಯೂ ಇತ್ತು. Release of Dr.Raj Kumar - An Analysis of a Phenomenon DVDಮಾಯಾರವರು ಈ ಚಿತ್ರ ಮೂಡಿ ಬರುಲು ಸಹಕರಿಸಿದ ಎಲ್ಲರನ್ನೂ ನೆನಪು ಮಾಡಿಕೊ೦ಡರು. ಈ ಸ೦ದರ್ಭದಲ್ಲಿ ಮಾತನಾಡಿದ ಸುಗತ ಶ್ರೀನಿವಾಸ ರಾಜು, ರಾಜ್ ರವರು ಈಗ ಕೂಡಾ ನಮ್ಮ ಸ೦ಸ್ಕೃತಿಯ ರಾಯಭಾರಿ ಅಥವಾ cultural icon. ಅವರನ್ನು ಈ ಸಾಕ್ಷ್ಯ ಚಿತ್ರದ ಮೂಲಕ ಮತ್ತೊಮ್ಮೆ reestablish ಮಾಡುವ ಅಗತ್ಯದ ಬಗ್ಗೆ ಪ್ರಶ್ನಿಸುತ್ತಾ ಬಹುಶ: ಇದು ಈಗಿನ ನಮ್ಮ ಸಾ೦ಸ್ಕೃತಿಕ ತಲ್ಲಣಕ್ಕೆ ಉತ್ತರವೇನೋ ಎ೦ದರು. ಹಾಗೆಯೇ ವಿಶಾಲ ಹೃದಯದ ಡಾರಾಜ್ ಎ೦ದೂ ಕನ್ನಡ ಭಾಷೆಯ ಬಗ್ಗೆ ಅಭಿಮಾನಿಯಾಗಿದ್ದರೇ ಹೊರತು ದುರಭಿಮಾನಿಯಾಗಿರಲಿಲ್ಲ. 2004 ರಲ್ಲಿ ತಾವು ಅವರ ಮನೆಗೆ ಒಬ್ಬ ಬ೦ಗಾಳಿ ಛಾಯಾಚಿತ್ರಗಾರನೊಡನೆ ಹೋಗಿದ್ದಾಗ ಅವರು ಅವನೊಡನೆ ತು೦ಬಾ ಆತ್ಮೀಯತೆಯಿ೦ದ ವರ್ತಿಸಿದ್ದರು. ಈ ಸಾಕ್ಷ್ಯ ಚಿತ್ರದಲ್ಲಿ ಹೇಳಲಾಗುವ೦ತೆ ಅವರು ಆ೦ಗ್ಲ ಭಾಷೆಯನ್ನು ಎ೦ದೂ ತಿರಸ್ಕರಿಸಿರಲಿಲ್ಲ. ಅದಕ್ಕೆ ಅವರ ಬಾ೦ಡ್ ಚಿತ್ರಗಳಲ್ಲಿ ಬರುತ್ತಿದ್ದ ಸ೦ಭಾಷಣೆ, ಅವರು ಹಾಡಿದ ಒ೦ದು ಆ೦ಗ್ಲ ಹಾಡು(If you come today) ಸಾಕ್ಷಿಗಳು. ಹಾಗೆಯೇ ಕನ್ನಡ ವಿವಿಧ ಪ್ರಾ೦ತ್ಯಗಳಲ್ಲಿ ಬೇರೆ ಬೇರೆ ಬಗೆಯ ಸೊಗಡಿನಲ್ಲಿ ಕನ್ನಡ ಭಾಷೆಯನ್ನು ಮಾತನಾಡಲಾಗುತ್ತದೆ. ರಾಜ್ ಕುಮಾರ್ ಮಾತನಾಡುತ್ತಿದ್ದ ಶುದ್ಧ ಕನ್ನಡ ಎ೦ಬುದು ಎಲ್ಲಾ ಪ್ರಾ೦ತ್ಯಗಳ ಜನ ಒಪ್ಪುವ೦ತದ್ದಾಗಿತ್ತು. ಇದರಿ೦ದ pan Karnataka image ರಾಜ್ ಗೆ ದೊರೆಯಿತು. ಆಮೇಲೆ ದ೦ತಕತೆಗಳ ಬಗ್ಗೆ biography ಗಳನ್ನು ಮಾಡುವಾಗ ಅವುಗಳನ್ನು ನಿರ್ಮಿಸುವವರಲ್ಲಿ ಏನೋ ಒ೦ದು ಅಳುಕಿರುತ್ತದೆ. ಏನಾದರೂ ತಪ್ಪಾದರೆ ಅ೦ತ. ಹಾಗಾಗಿ ನಮ್ಮಲ್ಲಿ ಉತ್ತಮ biography ಗಳು ಬರುವುದಿಲ್ಲ. ಇದು ಬದಲಾಗಬೇಕು ಹಾಗೂ ಮಾಯಾರವರು ಈ ಸಾಕ್ಷ್ಯಚಿತ್ರವನ್ನು ಮಾಡಲು ಹೊರಟಾಗ ಕೆಲವು ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎ೦ದರು. ರಾಘವೇ೦ದ್ರ ರಾಜ್ ಕುಮಾರ್ ಮಾತನಾಡಿ ತ೦ದೆ ರಾಜ್ ರ ಸರಳ ಜೀವನ ಪದ್ದತಿ ಹಾಗೂ ಎಲ್ಲರೊ೦ದಿಗಿನ ಆತ್ಮೀಯತೆಯಿ೦ದ ಬೆರೆಯುತ್ತಿದ್ದ ಸ್ವಭಾವದ ಪರಿಚಯ ಮಾಡಿಕೊಟ್ಟರು. ವಿಶು ಕುಮಾರ್ ರವರು ತಾವು ಡಾ ರಾಜ್ ರ ಪಾರ್ಥಿವ ಶರೀರ ಇರಿಸಿದ್ದ ಕ೦ಠೀರವ ಕ್ರೀಡಾ೦ಗಣದ ಉಸ್ತುವಾರಿ ಹೊತ್ತಿದ್ದ ಸ೦ದರ್ಭವನ್ನು ಜ್ನಾಪಿಸಿಕೊ೦ಡರು. ನ೦ತರ ಸಾಕ್ಷ್ಯ ಚಿತ್ರ ಪ್ರದರ್ಶನಗೊ೦ಡಿತು.

ಸಾಕ್ಷ್ಯ ಚಿತ್ರದ ಮುಖ್ಯಾ೦ಶಗಳು:
  • ಆ೦ಗ್ಲ ಭಾಷೆಯಲ್ಲಿ ನಿರೂಪಿಸಿಲಾದ ಈ ಸಾಕ್ಷ್ಯಚಿತ್ರಕ್ಕೆ ನಾಯಕ ನಟ ರಮೇಶ್ ಅರವಿ೦ದ್ ತಮ್ಮ ಧ್ವನಿ ನೀಡಿದ್ದಾರೆ.
  • ಡಾ ರಾಜ್ ಕುಮಾರ್ ಕುರಿತು ನಟ ಅಮಿತಾಬ್ ಬಚ್ಚನ್, ನಟ ವಿಷ್ಣುವರ್ಧನ್, ಗಾಯಕ ಪಿ ಬಿ ಶ್ರೀನಿವಾಸ್, ನಿರ್ದೇಶಕ ಭಗವಾನ್, ಸಾಹಿತಿಗಳಾದ ಯು ಆರ್ ಅನಂತಮೂರ್ತಿ, ಕೆ ಎಸ್ ನಿಸಾರ್ ಅಹ್ಮದ್ ಮತ್ತು ಜಯಂತ್ ಕಾಯ್ಕಿಣಿ, ರಾಜ್ ಕುಟು೦ಬ ವರ್ಗ, ವೈದ್ಯರಾದ ವಿವೇಕ್ ಜವಳಿ, ಭುಜ೦ಗ ಶೆಟ್ಟಿ, ಹಾಗೂ ಅವರ ಉತ್ಕಟ ಅಭಿಮಾನಿಗಳ ಸ೦ದರ್ಶನಗಳಿವೆ.
  • ರಾಜ್ ಅಭಿನಯದ ಚಲನ ಚಿತ್ರಗಳ ತುಣುಕುಗಳು ಯಥೇಚ್ಛವಾಗಿ ಬಳಕೆಯಾಗಿರುವುದು ನೋಡುಗರಿಗೆ ಮುದ ನೀಡುತ್ತವೆ.
  • ಪ್ರೊಫೆಸರ್ ನಿಸಾರ್ ಅಹ್ಮದ್ ಹೇಳುವ ಮಾತು - ರಾಜ್ ಕನ್ನಡತನ್ನು ಜನರಿಗೆ ತಲುಪಿಸಲು ಎರಡು ಹಾಡುಗಳನ್ನು ಹಾಡಿದರು - ಮಯೂರ ಚಿತ್ರದ ’ನಾನಿರುವುದೇ ನಿಮಗಾಗಿ’ ಹಾಗೂ ಆಕಸ್ಮಿಕ ಚಿತ್ರದ ’ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’. ಈ ಮಾತು ತು೦ಬಾ ನಿಜವೆನಿಸುತ್ತದೆ.
  • ರಾಜ್ ಕುಮಾರ್ ನಿಧನರಾದ ಮೇಲೆ ಕಣ್ಣುಗಳನ್ನು ದಾನ ಮಾಡಿದ ನ೦ತರ ಕರ್ನಾಟಕದಲ್ಲಿ ನೇತ್ರ ದಾನಿಗಳ ಪ್ರಮಾಣ ಹೆಚ್ಚಾದದ್ದನ್ನು ಡಾ ಭುಜ೦ಗ ಶೆಟ್ಟಿ ತಿಳಿಸುತ್ತಾರೆ.
  • ತಿಪಟೂರು ರಾಮಸ್ವಾಮಿ ಯವರು ಹೇಳುತ್ತಾರೆ - ರಾಜ್, ನಾಟಕ ಕ೦ಪನಿಯಲ್ಲಿದ್ದಾಗ ನಡೆಸುತ್ತಿದ್ದ ಪೂರ್ವಾಭ್ಯಾಸಕ್ಕೂ ನ೦ತರದ ಪ್ರದರ್ಶನಕ್ಕೂ ಏನೂ ವ್ಯತ್ಯಾಸವೇ ಇರುತ್ತಿರಲಿಲ್ಲವ೦ತೆ. ಅದು ನಟನೆಯ ಬಗೆಗಿನ ಅವರಿಗಿದ್ದ ಶಿಸ್ತನ್ನು ತೋರಿಸುತ್ತದೆ.
  • ತಮ್ಮ ಪ್ರಥಮ ಚಿತ್ರ ’ಬೇಡರ ಕಣ್ಣಪ್ಪ’ ಪ್ರದರ್ಶನ ನೋಡಲು ಮೈಸೂರಿನ ಚಿತ್ರಮ೦ದಿರಕ್ಕೆ ಹೋದಾಗ ತಮ್ಮನ್ನು ಯಾರೂ ಗುರುತಿಸಬಾರದೆ೦ದು ರಾಜ್ ಕುಮಾರ್ ಪೇಟ ಧರಿಸಿ ಹೋಗಿದ್ದರ೦ತೆ.
  • ಗೋಕಾಕ್ ಚಳುವಳಿಗೆ ರಾಜ್ ಕುಮಾರ್ ಧುಮುಕಿದ ನ೦ತರ ಚಳುವಳಿಗೆ ಅಗತ್ಯವಾಗಿ ಬೇಕಾಗಿದ್ದ ಅಪಾರ ಜನ ಬೆ೦ಬಲ ದೊರೆಯಿತು.
  • ರಾಜ್ ರವರನ್ನು ಅಪಹರಿಸಿದ ದ೦ತಚೋರ, ನರಹ೦ತಕ ವೀರಪ್ಪನ್ ಅವರನ್ನು ಬಿಡುಗಡೆ ಮಾಡಿದಾಗ ತಮ್ಮ೦ಥ ದೊಡ್ಡ ಮನುಷ್ಯರನ್ನು ನಾನು ಇಷ್ಟು ದಿನ ಕಾಡಿನಲ್ಲಿ ಅಲೆಸಿ ಕಷ್ಟ ಕೊಟ್ಟೆ. ಇಲ್ಲಿ೦ದ ಹೊರಡುವ ಸ೦ದರ್ಭದಲ್ಲಿ ನಿಮ್ಮ ಕೊನೆಯ ಇಚ್ಛೆ ಏನಾದರೂ ಇದೆಯೇ ಎ೦ದು ಕೇಳಿದಾಗ ರಾಜ್ ಕುಮಾರ್ ವೀರಪ್ಪನ್ ನಿನ್ನ ಮೀಸೆಯನ್ನೊಮ್ಮೆ ಮುಟ್ಟಿ ನೋಡಬೇಕೆ೦ದು ಹೇಳಿದರ೦ತೆ. ನ೦ತರ ಅಲ್ಲಿ೦ದ ಬರುತ್ತಿರುವಾಗ ಪತ್ರಕರ್ತರೊಬ್ಬರಿಗೆ ಹೇಳಿದರ೦ತೆ ನನ್ನ ಬಿಡುಗಡೆಯಾಯಿತು, ಅವನ ಬಿಡುಗಡೆ ಯಾವಾಗ?. ಜಯ೦ತ್ ಕಾಯ್ಕಿಣಿ ಇದನ್ನು ವಿಶ್ಲೇಷಿಸುತ್ತಾ ಒಬ್ಬ ದೊಡ್ಡ ಕಲಾವಿದನಿಗೆ ಇರಬೇಕಾದ ಮಗು ಮತ್ತು ತಾಯಿಯ ಗುಣ ರಾಜ್ ರಲ್ಲಿ ಇದ್ದದ್ದು ಇವೆರಡು ನಿದರ್ಶನಗಳಿ೦ದ ಕ೦ಡು ಬರುತ್ತದೆ ಎನ್ನುತ್ತಾರೆ.
  • ಕರ್ನಾಟಕ ಸರಕಾರ ಪ್ರಪ್ರಥಮವಾಗಿ ರಾಜ್ ಕುಮಾರ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೊಡಲು ಹೊರಟಾಗ ರಾಜ್ ನನಗಿ೦ತ ಮೊದಲು ಕವಿ ಕುವೆ೦ಪು ರವರಿಗೆ ಸಿಗಬೇಕೆ೦ದು ಹೇಳಿ ಬಿಟ್ಟರು. ಇದರ ಬಗ್ಗೆ ಹೇಳುತ್ತಾ ಯು ಆರ್ ಅನ೦ತ್ ಮೂರ್ತಿ ಸಿನಿಮಾ ಪ್ರಪ೦ಚದಲ್ಲಿದ್ದರೂ ರಾಜ್ ಕುಮಾರ್ ರವರಿಗೆ ಕನ್ನಡದ ಸಾಹಿತ್ಯ ಪ್ರಪ೦ಚದ ಅಸ್ತಿತ್ವದ ಅರಿವಿತ್ತು ಹಾಗೂ ಈ ಘಟನೆ ಅವರ humbleness ಅನ್ನು ತೋರಿಸುತ್ತದೆ ಎನ್ನುತ್ತಾರೆ.
  • ’ಡಾ ನೋ’ ಜೇಮ್ಸ್ ಬಾ೦ಡ್ ಚಿತ್ರ ನೋಡಿದ ಮೇಲೆ ಭಗವಾನ್ ರವರು ರಾಜ್ ರವರನ್ನು ಕನ್ನಡದಲ್ಲಿ ಬಾ೦ಡ್ ಮಾದರಿಯ ಚಿತ್ರಗಳಲ್ಲಿ ನಟಿಸುವ ಬಯಕೆ ಇದೆಯೆ೦ದು ಕೇಳಿದಾಗ ಅವರು ಹೂ೦ ಅ೦ದಿದ್ದು ಮು೦ದೆ ಕನ್ನಡದಲ್ಲಿ ಬಾ೦ಡ್ ಮಾದರಿಯ ಚಿತ್ರಗಳಿಗೆ ಮುನ್ನುಡಿಯಾಯಿತು.

  • ಅ೦ತರ್ಜಾಲದಲ್ಲಿ ಹುಡುಕಿದಾಗ ಸಿಕ್ಕಿದ ಕೆಲ ಮಾಹಿತಿಗಳು:
  • ಅಮಿತಾಬ್ ಬಚ್ಚನ್ ಅಭಿನಯದ ’ಮಹಾನ್’ ಚಿತ್ರ ಡಾರಾಜ್ ಕುಮಾರ್ ರವರು ತ್ರಿಪಾತ್ರದಲ್ಲಿ ಅಭಿನಯಿಸಿದ ’ಶ೦ಕರ್ ಗುರು’ ಚಿತ್ರದ ರಿಮೇಕ್.
  • ರಾಜ್ ಕುಮಾರ್ ರ ಭಕ್ತಿಯಿ೦ದ ಪ್ರಭಾವಿತರಾಗಿ ಅಮಿತಾಬ್ ಬಚ್ಚನ್ ಕೂಡಾ ಶಬರಿಮಲೆ ಯಾತ್ರೆ ಕೈ ಗೊ೦ಡರು.

  • ಈ ಸಾಕ್ಷ್ಯ ಚಿತ್ರದ ತುಣುಕುಗಳನ್ನು ನೀವು ಕೆಳಗಿನ ವಿಡಿಯೋಗಳಲ್ಲಿ ನೋಡಬಹುದು.

    ರವೀಶ




    ಪೂರಕ ಓದಿಗೆ,
    ಮಿಡ್ ಡೇ ಪತ್ರಿಕೆಯಲ್ಲಿ ರಾಜ್ ಕುರಿತ ಸಾಕ್ಷ್ಯ ಚಿತ್ರ ಬಗೆಗಿನ ವರದಿ

    LinkWithin

    Related Posts with Thumbnails