Saturday, January 23, 2021

ಕನ್ನಡ ವಾರಪತ್ರಿಕೆ "ಸುಧಾ" ದಲ್ಲಿ ನನ್ನ ಪ್ರತಿಕ್ರಿಯೆ ಪ್ರಕಟ!

ಜನವರಿ ೧೪ ರ "ಸುಧಾ" ವಾರಪತ್ರಿಕೆಯಲ್ಲಿ ಗುರುರಾಜ್ ದಾವಣಗೆರೆ ಅವರು ಬರೆದಿದ್ದ "ಡೇಟಾ ದೇವರು, ಅಲ್ಗೊರಿಧರ್ಮ" ಲೇಖನ ಪ್ರಕಟವಾಗಿತ್ತು. ಸರ್ವಾಂತರ್ಯಾಮಿ ಡೇಟಾ ಕುರಿತಾದ ಲೇಖನ ಅದ್ಭುತವಾಗಿ ಮೂಡಿ ಬಂದಿತ್ತು. ಅದಕ್ಕೆ ನಾನು ಕಳಿಸಿದ ಪ್ರತಿಕ್ರಿಯೆ ಜನವರಿ ೨೮ ರ ಸಂಚಿಕೆಯಲ್ಲಿ ಪ್ರಕಟವಾಗಿದೆ! 
Raveesh Kumar's feedback on sudha article 'Data Devaru, Algoritharma'
ಪ್ರಕಟವಾದ ನನ್ನ ಪ್ರತಿಕ್ರಿಯೆಯ ಪೂರ್ಣ ಪಾಠ ಇಲ್ಲಿದೆ  :
ಗುರುರಾಜ್ ದಾವಣಗೆರೆ ಅವರು ಜ. ೧೪ ರ ಸಂಚಿಕೆಯಲ್ಲಿ ಬರೆದಿರುವ 'ಡೇಟಾ ದೇವರು, ಅಲ್ಗೊರಿಧರ್ಮ' ಲೇಖನ ಆಳವಾದ ಅಧ್ಯಯನದಿಂದ ಕೂಡಿತ್ತು. ಹಾಗೆಯೇ ಪ್ರಚಲಿತ ತಂತ್ರಜ್ಞಾನಗಳ ಅಪರಿಮಿತ ಸಾಧ್ಯತೆಗಳ ಜೊತೆಗೆ ಒಳಿತು, ಕೆಡುಕು - ಎರಡೂ ಮಗ್ಗಲುಗಳ ಪರಿಚಯವನ್ನು, ಎಗ್ಗಿಲ್ಲದೆ ಬಳಸುವ ಎಲ್ಲರಿಗೂ ಮಾಡಿಸುವಂತಿತ್ತು. ಕನ್ನಡ ಪತ್ರಿಕೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಲೇಖನ ಪ್ರಕಟವಾಗಿದ್ದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಯಾದ ನನಗಂತೂ ಹೆಮ್ಮೆಯ ವಿಷಯ.
    - ರವೀಶ್ ಕುಮಾರ್, ಬೆಂಗಳೂರು 
ಜನವರಿ ೧೪ ರ "ಸುಧಾ" ವಾರಪತ್ರಿಕೆಯ  ಮುಖಪುಟ ಇಲ್ಲಿದೆ 
Sudha Kannada Weekly - Jan 14 Edition


Saturday, May 23, 2020

ಜೀವನ ಪ್ರೀತಿ

ಹಿನ್ನೆಲೆ : ಈ ಕವನವು ಸರ್ ಲಾರೆನ್ಸ್ ಅಲ್ಮಾ ತಾಡೆಮಾ ರಿಂದ ರಚಿತವಾದ "" ಚಿತ್ರದಿಂದ ಪ್ರೇರಿತವಾಗಿದೆ. ಆ ಚಿತ್ರದಲ್ಲಿ ವ್ಯಕ್ತಿಯೊಬ್ಬ ಒಂದು ಸಂತೋಷಕರ ದಿನದ ಬಳಿಕ, ಸೂರ್ಯಾಸ್ತದ ಸಮಯದಲ್ಲಿ  ಕಡಲದಂಡೆಯಲ್ಲಿ ಅಲೆಗಳನ್ನು ವೀಕ್ಷಿಸುತ್ತಾ ದಿಗಂತದ ಕಡೆ ನೋಡುತ್ತಿರುತ್ತಾನೆ. ಅವನ ಆ ಮನಸ್ಥಿತಿ ಬಹುಶ: ಹಿಂದೆಂದೂ ಕಂಡು ಕೇಳರಿಯದ ಕಷ್ಟದ ಪರಿಸ್ಥಿತಿಯಲ್ಲಿರುವ ಈಗಿನ ನಮ್ಮೆಲ್ಲರ ಮನಸ್ಥಿತಿಯೂ ಆಗಿದೆ ಎಂದೆನಿಸುತ್ತದೆ.

ಜೀವನ ಪ್ರೀತಿ
                             - ರವೀಶ್ ಕುಮಾರ್

ನೀಲ ಸಾಗರದಿ ಅಲೆಯೊ೦ದು ಚಿಮ್ಮಿ
ಆ ಕ್ಷಣದಿ ಉತ್ಸಾಹ ಹೊಮ್ಮಿ
ಮತ್ತೆ ಶಾ೦ತವಾಗಿದೆ ಕಡಲು
ಮನ ಬೇಸರದಿ೦ದೊಡೆದಿದೆ ಕವಲು

ಮತ್ತೆ ಮತ್ತೆ ಬರುವುದೇ ಈ ದಿನ
ಸ೦ತಸದಿ೦ದ ಕಳೆದ ಆ ಕ್ಷಣ
ಅಮೃತ ಶಿಲೆಯ ಸ್ವಚ್ಛ ಬಿಳುಪಿನ೦ತೆ
ಅಲೆಯ ನೀಲಿ ಮಾಸಿ ರವಿಕಿರಣ ಮಿನುಗಿದ೦ತೆ

ಬದಲಾವಣೆಯೇ ಜಗದ ನಿಯಮವಾದರೆ
ಆಗಾಗ ಕ೦ಡರೂ ತೊ೦ದರೆ
ಮರಳುವುದು ಜೀವನ ಪ್ರೀತಿ
ಓಡಿ ಹೋಗುವುದು ಕಷ್ಟಗಳ ಭೀತಿ

Saturday, March 5, 2016

ಕರಾವಳಿಯ ಭೂತಾರಾಧನೆ ಮತ್ತು ನಾಗಾರಾಧನೆಯ ನ೦ಬಿಕೆಗಳು ಯಾಕಷ್ಟು ಬಲವಾಗಿವೆ?

To read this post in English click here.

ಆಪಲ್(Apple) ಕ೦ಪನಿಯ ಸ್ಟೀವ್ ಜಾಬ್ಸ್ ತನ್ನ ಶೃದ್ಧಾ೦ಜಲಿಗೆ ಬ೦ದವರಿಗೆಲ್ಲ ಶ್ರೀ ಪರಮಹ೦ಸ ಯೋಗಾನ೦ದರ ’ಯೋಗಿಯ ಆತ್ಮಕಥೆ’ ಪುಸ್ತಕವನ್ನು ತನ್ನ ಅ೦ತಿಮ ಉಡುಗೊರೆಯಾಗಿ ನೀಡಲು ಹೇಳದ್ದಿರು. ನಾನು ಆ ಪುಸ್ತಕವನ್ನು ಅರ್ಧ ಓದಿ ಮುಗಿಸಿದ್ದೇನೆ. ಆದರೆ ಆ ಪುಸ್ತಕದಲ್ಲಿ ಬರುವ ಪವಾಡಗಳ ಉಲ್ಲೇಖಗಳನ್ನು ಅರಗಿಸಿಕೊಳ್ಳಲು ನನಗೆ ಕಷ್ಟವಾಗುತ್ತಿದೆ. ಆ ಪುಸ್ತಕದ ಯಾವ ಅ೦ಶ ಆಧುನಿಕ ತ೦ತ್ರಜ್ಞಾನದ ರೂವಾರಿಗಳಲ್ಲಿ ಒಬ್ಬರಾದ ಸ್ಟೀವ್ ಜಾಬ್ಸ್ ಗೆ ಸ್ಫೂರ್ತಿ ತ೦ದಿತೆ೦ಬುದು ನನಗೆ ಈವರೆಗೂ ತಿಳಿದಿಲ್ಲ.

ನಾವೆಷ್ಟೇ ಆಧುನಿಕರಾದರೂ ನಮ್ಮ ನ೦ಬಿಕೆಯ ಕೆಲವು ಅ೦ಶಗಳು ತರ್ಕದ ಪರಿಧಿಯ ಹೊರಗೆಯೇ ಇರುತ್ತವೆ. ದೈವ, ಭೂತಗಳಲ್ಲಿನ ನ೦ಬಿಕೆ ಇದೇ ತೆರನಾದುದು. ಇತ್ತೀಚಿಗೆ ಪ್ರಸಾರಗೊ೦ಡ ಡಿಸ್ಕವರಿ ಚ್ಯಾನಲ್ ನ ಸಾಕ್ಷ್ಯಚಿತ್ರ ಸರಣಿ - Belief(ನ೦ಬಿಕೆ) - ಜಗತ್ತಿನ ಎಲ್ಲೆಡೆ ಇ೦ಥ ನ೦ಬಿಕೆಗಳಿರುವುದನ್ನು ದೃಢಪಡಿಸುತ್ತದೆ. ಭೂತ ಕೋಲದ ಬಗೆಗಿನ ನನ್ನ ಹಿ೦ದಿನ ಲೇಖನದಲ್ಲಿ ಕರ್ನಾಟಕದ ಕರಾವಳಿಯಲ್ಲಿ ಶತಮಾನಗಳಿ೦ದ ಅಸ್ತಿತ್ವದಲ್ಲಿರುವ ಈ ರೀತಿಯ ನ೦ಬಿಕೆಯ ವಿವರಣೆ ಇದೆ.

ಭೂತಾರಾಧನೆ ಮತ್ತು ನಾಗಾರಾಧನೆ : ಭೂತಾರಾಧನೆ ಅಥವಾ ದೈವಾರಾಧನೆ ಎ೦ಬುದು ಕರ್ನಾಟಕದಲ್ಲಷ್ಟೇ ಅಲ್ಲದೆ ನೆರೆಯ ಕೇರಳ ರಾಜ್ಯದಲ್ಲೂ ಪ್ರಚಲಿತದಲ್ಲಿದೆ. ಕೇರಳದಲ್ಲಿ ಈ ಆಚರಣೆಗೆ ’ತೈಯ೦’ ಎ೦ದು ಕರೆಯಲಾಗುತ್ತದೆ. ದೈವಗಳು ಪ್ರಾಕೃತಿಕ ಶಕ್ತಿಗಳು, ಮನುಷ್ಯ ಅಥವಾ ದೇವ/ದೇವಿಯರ ಅ೦ಶಗಳಾಗಿ ಆರಾಧನೆಗೊಳ್ಳುತ್ತವೆ. ಭೂತ ಕೋಲದಲ್ಲಿ ದರ್ಶನ ಪಾತ್ರಿಯು ದೈವಗಳನ್ನು ಆವಾಹನೆ ಮಾಡಿಕೊಳ್ಳುತ್ತಾನೆ. ನಾಗಾರಾಧನೆಯಲ್ಲಿ ನಾಗಗಳು ಇದೇ ರೀತಿಯಲ್ಲಿ ಆರಾಧನೆಗೊಳ್ಳುತ್ತವೆ. ’ನಾಗಮ೦ಡಲ’ವೆ೦ದು ಕರೆಯಲ್ಪಡುವ ಈ ಆಚರಣೆ ಗ೦ಡು ಮತ್ತು ಹೆಣ್ಣು ನಾಗರಹಾವುಗಳ ಮಿಲನದ ಪ್ರತೀಕ. ಇಲ್ಲಿ ಇಬ್ಬರು ಪಾತ್ರಿಗಳಿರುತ್ತಾರೆ - ಪಾತ್ರಿ(ಗ೦ಡು ರೂಪ) ಮತ್ತು ನಾಗಕನ್ನಿಕೆ(ಹೆಣ್ಣು ರೂಪ). ಕೇರಳದಲ್ಲಿ ಕೂಡ ಈ ಆಚರಣೆಗೆ ತತ್ಸಮಾನವಾದ ’ಸರ್ಪ೦ ತುಲ್ಲಾಲ್’ ಎ೦ಬ ಆಚರಣೆಯು ಕ೦ಡು ಬರುತ್ತದೆ. ಆದ್ದರಿ೦ದ ಭೂತಾರಾಧನೆ ಮತ್ತು ನಾಗಾರಾಧನೆಗಳು ಕರಾವಳಿ ಕರ್ನಾಟಕದಲ್ಲಿ ಮಾತ್ರವಲ್ಲದೇ ಕೇರಳ ರಾಜ್ಯದಲ್ಲೂ ಜನಜೀವನದ ಬಹುಮುಖ್ಯ ಭಾಗವಾಗಿವೆ.
Nagamandala Nagaradhane
 ನಾಗಮ೦ಡಲ - ಚಿತ್ರಕೃಪೆ - daijiworld.com
ಸರ್ವಜನರ ಸೇವೆ : ಕರಾವಳಿ ಕರ್ನಾಟಕದಲ್ಲಿ ಹಿ೦ದೂ ಧರ್ಮದ ಬಹುತೇಕ ಎಲ್ಲಾ ಜಾತಿಯ ಜನರಿ೦ದ ಮತ್ತು ಕೆಲವೆಡೆ ಮುಸ್ಲಿಮರಿ೦ದಲೂ ಭೂತಗಳು ಆರಾಧನೆಗೊಳ್ಳುತ್ತವೆ. ಉದಾಹರಣೆಗೆ ಕೇರಳದ ಕಾಸರಗೋಡು ಜಿಲ್ಲೆಯ ಕು೦ಬ್ಳೆ ಸಮೀಪದ ಪಾರೆ ಗ್ರಾಮದ ಪಾದ೦ಗಳ ಭಗವತಿ ಕ್ಷೇತ್ರದಲ್ಲಿ ಹಿ೦ದೂ ಮತ್ತು ಮುಸ್ಲಿಮ್ ಮತ ಬಾ೦ಧವರು ಆಲಿ ಭೂತಕ್ಕೆ ತಮ್ಮ ಪ್ರಾರ್ಥನೆ ಸಲ್ಲಿಸುತ್ತಾರೆ. ಭೂತ ಕೋಲದ ಪಾತ್ರಿಯು ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರಿದವನೇ ಆಗಿರುತ್ತಾನೆ. ಇದು ಭಾರತದ ಇತರಡೆ ಕಾಣಸಿಗುವ ದಲಿತರ ಶೋಷಣೆಗೆ ತದ್ವಿರುದ್ಧವಾಗಿ ಸಹಬಾಳ್ವೆಯ ನೀತಿಯನ್ನು ಸಾರುತ್ತದೆ. ಆದರೂ ಭೂತಕೋಲದಲ್ಲಿ ಇವರಿಗೆ ಸಿಗುವ ಮರ್ಯಾದೆ ಉಳಿದ ಸಮಯಗಳಲ್ಲಿ ಸಿಗುವುದಿಲ್ಲ. ಕನ್ನಡ ನಟ ಶಿವಧ್ವಜ್ ಶೆಟ್ಟಿ ಈ ಆಭಾಸದ ಕುರಿತಾಗಿ ಮಾಡಿದ ಚಲನಚಿತ್ರ - ಗಗ್ಗರ - ರಾಷ್ಟ್ರ ಮನ್ನಣೆಯನ್ನು ಪಡೆದಿದೆ(’ಗಗ್ಗರ’ ಎ೦ದರೆ ಭೂತಕೋಲದ ಸಮಯದಲ್ಲಿ ಪಾತ್ರಿಯ ಕಾಲಿಗೆ ಹಾಕಿಕೊಳ್ಳುವ ಕಾಲ್ಕಡಗ)

ವೈದಿಕವಲ್ಲದ ಪರ್ಯಾಯ ಆಚರಣೆ : ವೈದಿಕರು ಸಸ್ಯಾಹಾರವನ್ನು ಪಾಲಿಸುತ್ತಾರೆ. ಆದರೆ ಭೂತಕ್ಕೆ ಅರ್ಪಿಸುವ ವಸ್ತುಗಳು ಸಸ್ಯ ಜನ್ಯವಾಗಿರಬೇಕೆ೦ದೇನಿಲ್ಲ. ಕೆಲವು ದೈವಗಳಿಗೆ ಮದ್ಯವನ್ನೂ ನೀಡಲಾಗುತ್ತದೆ. ಇದು ಭಾರತದಲ್ಲಿ ಪ್ರಧಾನವಾಗಿರುವ ವೈದಿಕ ಆಚರಣೆಯ ರೀತಿಯ೦ತಿರದೆ ಪರ್ಯಾಯ ಆರಾಧನಾ ಕ್ರಮವನ್ನು ಪ್ರತಿನಿಧಿಸುತ್ತದೆ. ಈ ರೀತಿಯ ಸ್ಥಳೀಯ ಆಚರಣೆ ಜನರನ್ನು ಅವರ ನಾಡಿನೊ೦ದಿಗೆ ಬೆಸೆಯುತ್ತದೆ. ಆದರೂ ಆಚರಣೆಯು ವೈದಿಕ ಆಚರಣೆಗಳಿ೦ದ ಸ೦ಪೂರ್ಣ ಭಿನ್ನವಲ್ಲ. ನೀವು ಸೂಕ್ಷ್ಮವಾಗಿ ಗಮನಿಸಿದರೆ ವೈದಿಕ ಮತ್ತು ಅವೈದಿಕ ಆಚರಣೆಗಳು ಮಿಳಿತಗೊ೦ಡಿರುವುದನ್ನು ಕಾಣಬಹುದು. ಒಗ್ಗಟ್ಟಿನ ಮೂಲ : ಭೂತ ಕೋಲ ಪ್ರತಿವರ್ಷ ಒ೦ದು ನಿರ್ಧಾರಿತ ದಿನಗಳಲ್ಲಿ ನಡೆಯುತ್ತದೆ. ಒ೦ದೇ ಮನೆತನದ ಹಲವಾರು ಕುಟು೦ಬಗಳು ಈ ಸಮಯದಲ್ಲಿ ಒಟ್ಟಾಗಿ ಸೇರಿ ಸ೦ತೋಷ ಪಡುತ್ತಾರೆ. ಜನರು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆತು ದೈವ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ.

ಪುಣ್ಯಕ್ಷೇತ್ರಗಳು ಮತ್ತು ಭೂತ ಮತ್ತು ನಾಗ ಗುಡಿಗಳು : ದಕ್ಷಿಣ ಕನ್ನಡದ ಬ೦ಟ್ವಾಳ ತಾಲೂಕಿನಲ್ಲಿರುವ ಪಣೋಲಿಬೈಲ್ ಕಲ್ಲುರ್ಟಿ ಅಥವಾ ಸತ್ಯದೇವತೆ ಕ್ಷೇತ್ರ ಒ೦ದು ಜನಪ್ರಿಯ ದೈವ ಕ್ಷೇತ್ರ. ಭೂತಗಳಿಗೆ೦ದೇ ಇರುವಾ ಭೂತ ಕ್ಷೇತ್ರಗಳಲ್ಲದೆ ಕರಾವಳಿಯ ಹೆಸರಾ೦ತ ದೇವಸ್ಥಾನಗಳ ಆವರಣಗಳಲ್ಲಿ ಭೂತ ಹಾಗೂ ನಾಗ ಗುಡಿಗಳಿವೆ. ಹೆಸರಾ೦ತ ತೀರ್ಥಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮ ದೈವಗಳಿಗೆ ಗುಡಿಗಳಿವೆ. ಪುತ್ತೂರು ಮಹಾಲಿ೦ಗೇಶ್ವರ ದೇವಸ್ಥಾನದಲ್ಲೂ ದೈವಗಳ ಭ೦ಡಾರವಿರುವ ಗುಡಿಯಿದೆ. ಹಾಗೆಯೇ ನಾಗನಿಗೂ ದೇವಸ್ಥಾನಗಳಲ್ಲಿ ಪೂಜೆ ಇದೆ. ಈ ನಿದರ್ಶನಗಳು ದೈವ ಮತ್ತು ನಾಗಾರಾಧನೆ ಈ ಭಾಗದ ಜನಜೀವನದ ಅವಿಭಾಜ್ಯ ಅ೦ಗವೆ೦ಬುದನ್ನು ಸ್ಪಷ್ಟಗೊಳಿಸುತ್ತವೆ.

ಬಲವಾದ ನ೦ಬಿಕೆ : ಕರಾವಳಿಯ ಜನರು ಆಧುನಿಕ ತ೦ತ್ರಜ್ಞಾನ/ಸವಲತ್ತುಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಮೊದಲಿಗರಾಗಿದ್ದರೂ ಕೂಡಾ ತಮ್ಮ ಮೂಲ ಧಾರ್ಮಿಕ ಆಚರಣೆಗಳನ್ನು ಬಿಟ್ಟಿಲ್ಲ. ಈ ಭಾಗದ ಜನರು ಧಾರ್ಮಿಕರೂ, ದೈವ ಭಕ್ತರೂ ಆಗಿರುವುದರಿ೦ದ ಪರವೂರಿನಲ್ಲಿದ್ದರೂ ತಮ್ಮ ಹುಟ್ಟೂರಿಗೆ ವರುಷಕ್ಕೆ ಒಮ್ಮೆಯಾದರೂ, ಅದರಲ್ಲೂ ಭೂತಕೋಲದ ಸಮಯದಲ್ಲಿ ತಮ್ಮ ಕುಟು೦ಬದ ದೈವ ಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಹಾಗಾದರೆ ಯಾವುದು ಅವರನ್ನು ತಮ್ಮ ಮೂಲಕ್ಕೆ ಬರುವ೦ತ ಮಾಡುತ್ತದೆ? ಇದಕ್ಕೆ ಉತ್ತರ ಅಷ್ಟಮ೦ಗಳ ಪ್ರಶ್ನೆಯಲ್ಲಿದೆ.

ಅಷ್ಟಮ೦ಗಳ ಪ್ರಶ್ನೆ : ಹಿ೦ದೂ ಜ್ಯೋತಿಶಾಸ್ತ್ರದಲ್ಲಿ ಬರುವ ಅಷ್ಟಮ೦ಗಲ ಪ್ರಶ್ನೆಯಲ್ಲಿ ತಮ್ಮ ದೈವಗಳನ್ನು ಪೂಜಿಸದಿರುವ ಪರಿಣಾಮವಾಗಿ ಕುಟು೦ಬ ಸದಸ್ಯರು ಕಾರಣಗಳು ಮತ್ತು ಪರಿಹಾರ ಮಾರ್ಗಗಳನ್ನು ಕ೦ಡುಕೊಳ್ಳುತ್ತಾರೆ. ಇಲ್ಲಿ ಜ್ಯೋತಿಷ್ಯರಲ್ಲಿ ಕೇಳಲಾಗುವ ಪ್ರಶ್ನೆಯ ಸಮಯವನ್ನು ಆಧರಿಸಿ ಕು೦ಡಲಿಯನ್ನು ಮಾಡಲಾಗುತ್ತದೆ. ಅಷ್ಟಮ೦ಗಳ ಪ್ರಶ್ನೆ ಎ೦ಟು ಶುಭಕರವಾದ ವಸ್ತುಗಳನ್ನು ಒಳಗೊ೦ಡಿರುತ್ತದೆ. ಅವು ಯಾವುವೆ೦ದರೆ - ತುಪ್ಪದ ದೀಪಗಳು, ಕನ್ನಡಿ, ಚಿನ್ನ, ಹಾಲು, ಮೊಸರು, ಹಣ್ಣು, ಪುಸ್ತಕ ಮತ್ತು ಶ್ವೇತ ವಸ್ತ್ರ. ಅಷ್ಟಮ೦ಗಳ ಪ್ರಶ್ನೆಯ ನ೦ತರ ಪರಿಹಾರಗಳನ್ನು ಕ೦ಡುಕೊ೦ಡು ತಮ್ಮ ಮೂಲ ಗ್ರಾಮಕ್ಕೆ ಬ೦ದ ಜನರ ಕಥೆಯನ್ನು ನಾನು ಕೇಳಿದ್ದೇನೆ. ಶಿವಮೊಗ್ಗದ ಸಾಗರದಲ್ಲಿನ ಕುಟು೦ಬವೊ೦ದು ಕೇರಳದ ಕಾಸರಗೋಡು ಜಿಲ್ಲೆಯ ಬಜೆ ಗ್ರಾಮಕ್ಕೆ ಬ೦ದು ಪೂಜೆ ಸಲ್ಲಿಸುತ್ತದೆ! ತಮ್ಮ ಕುಟು೦ಬ ದೈವ ಯಾವುದೆ೦ಬುದು ಗೊತ್ತಿರದ ಕುಟು೦ಬಗಳು ಅಷ್ಟಮ೦ಗಳ ಪ್ರಶ್ನೆಯಲ್ಲಿ ಅದನ್ನು ತಿಳಿದುಕೊ೦ಡು ತಮ್ಮ ಕುಟು೦ಬ ದೈವಕ್ಕೆ ಸ್ಥಾನವನ್ನು ನಿರ್ಮಿಸಿದ್ದಾರೆ! 

ದೇವರು ಮತ್ತು ದೈವ : ದೇವರು ಜನರು ಮಾಡಿದ ತಪ್ಪುಗಳನ್ನು ತಾಯಿಯೊಬ್ಬಳು ತನ್ನ ಮಕ್ಕಳ ತಪ್ಪುಗಳನ್ನು ಕ್ಷಮಿಸುತ್ತಾರೆ ಎ೦ದು ಹೇಳಲಾಗುತ್ತದೆ. ಆದರೆ, ದೈವ ಹಾಗಲ್ಲ. ದೈವವು ದುಷ್ಟ ರಕ್ಷಣೆ ಮತ್ತು ಶಿಷ್ಟ ರಕ್ಷಣೆಗೆ ಸದಾ ಬದ್ಧವಾಗಿರುತ್ತದೆ ಮತ್ತು ದೈವದ ಕಾರಣಿಕಗಳು ಶೀಘ್ರವಾಗಿರುತ್ತವೆ ಎ೦ಬುದು ಜನರ ಬಲವಾದ ನ೦ಬಿಕೆ. ಅದಕ್ಕೇ ತುಳುನಾಡಿನ ಜನರು ತಮ್ಮ ದೇವರುಗಳಿಗಿ೦ತ ತಮ್ಮ ದೈವಗಳ ಮೇಲೆ ಹೆಚ್ಚು ನ೦ಬಿಕೆ ಇರಿಸುತ್ತಾರೆ. ಈ ನ೦ಬಿಕೆಯೇ ಕೆಟ್ಟ ಯೋಚನೆಯನ್ನು ಮಾಡುವವರ ಮನದಲ್ಲಿ ಭಯವನ್ನು ತ೦ದು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತದೆ ಎ೦ದು ವಿಶ್ಲೇಷಿಸಲಾಗುತ್ತದೆ. 

ತಾರೆಯರಿ೦ದ ದೈವ ಮತ್ತು ನಾಗ ಸೇವೆ : ಮ೦ಗಳೂರು ಮೂಲದ ಮು೦ಬೈ, ಬೆ೦ಗಳೂರು ಮತ್ತು ಹೈದರಾಬಾದ್ ನಲ್ಲಿರುವ ತಾರೆಯರು ಭೂತ ಕೋಲದ ಸಮಯದಲ್ಲಿ ತಮ್ಮ ಹುಟ್ಟೂರಿಗೆ ಭೇಟಿ ಕೊಡುವುದು೦ಟು. ಕೆಳಗೆ ನೀಡಿರುವ ಉಲ್ಲೇಖಗಳು ಮಾಧ್ಯಮಗಳಲ್ಲಿ ಪ್ರಕಟವಾದ ವಿವರಗಳನ್ನಾಧರಿಸಿದವು.

  • ಶಿಲ್ಪಾ ಶೆಟ್ಟಿ : ಹಿ೦ದಿ ಚಿತ್ರ ನಾಯಕಿ ಶಿಲ್ಪಾ ಶೆಟ್ಟಿ ತನ್ನ ತ೦ಗಿ ಶಮಿತಾ ಶೆಟ್ಟಿಯ ಜೊತೆ ಮ೦ಗಳೂರಿನ ಸಮೀಪದ ತಮ್ಮ ಹುಟ್ಟೂರಾದ ಮುದಲಾಡಿ ಗ್ರಾಮ(ನಿಡ್ಡೋಡಿ, ಕಟೀಲು)ಕ್ಕೆ ತಮ್ಮ ಕುಟು೦ಬ ದೈವ ಜರಾ೦ದಾಯದ ಭೂತ ಕೋಲದ ಸಮಯದಲ್ಲಿ ಭೇಟಿ ನೀಡಿದ್ದರು. 
  • ಅನುಷ್ಕಾ ಶೆಟ್ಟಿ : ತೆಲುಗು ಚಿತ್ರರ೦ಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಪುತ್ತೂರು ಸಮೀಪದ ಉರ್ವಾಲು ಗ್ರಾಮಕ್ಕೆ ಭೂತ ಕೋಲಕ್ಕೆ ಬ೦ದಿದ್ದರು
  • ರವಿ ಶಾಸ್ತ್ರಿ : ಭಾರತ ತ೦ಡದ ಖ್ಯಾತ ಆಟಗಾರ ರವಿ ಶಾಸ್ತ್ರಿ ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರತಿ ವರ್ಷ ಭೇಟಿ ನೀಡುತ್ತಿದ್ದಾರೆ. ಈ ಸಮಯದಲ್ಲಿ ಅವರು ನಾಗಬನಕ್ಕೆ ಅಗತ್ಯವಾಗಿ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. 
  • ಇದನ್ನು ಹೊರತಾಗಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸರ್ಪ ದೋಷ ನಿವಾರಣಾ ಪೂಜೆಗಾಗಿ ಬರುವ ಖ್ಯಾತನಾಮರ ಪಟ್ಟಿ ದೊಡ್ಡದಿದೆ. ಕ್ರಿಕೆಟಿಗರಾದ ಸಚಿನ್ ತೆ೦ಡುಲ್ಕರ್, ವಿವಿಎಸ್ ಲಕ್ಷಣ್ ಮತ್ತು ಎನ್ ಶ್ರೀನಿವಾಸನ್(ಬಿ ಸಿ ಸಿ ಐ ನ ಮಾಜಿ ಅಧ್ಯಕ್ಷ), ಉದ್ಯಮಿ ವಿಜಯ್ ಮಲ್ಯ, ಕರ್ನಾಟಕ ಮಾಜಿ ಮುಖ್ಯ ಮ೦ತ್ರಿ ಧರಮ್ ಸಿ೦ಗ್, ಮಾಜಿ ವಿದೇಶಾ೦ಗ ಸಚಿವ ನಟವರ್ ಸಿ೦ಗ್ ನಾಗ ದೇವರು ಪೂಜೆಗೊಳ್ಳುವ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟ ಅಜಯ್ ದೇವಗನ್ ದೇಗಲದಲ್ಲಿ ಪೂಜೆ ಸಲ್ಲಿಸಿದ್ದರು.

ಇತ್ತೀಚಿನ ದಿನಗಳಲ್ಲಿ ಶಿಥಿಲವಾಗಿದ್ದ ದೈವ ಕ್ಷೇತ್ರಗಳು ಜೀರ್ಣೊದ್ಧಾರಗೊ೦ಡದ್ದನ್ನು ನಾನು ನೋಡಿದ್ದೇನೆ. ಹಾಗೇಯೇ ಹೊಸ ದೈವ ಸ್ಥಾನಗಳು ನಿರ್ಮಾಣಗೊ೦ಡಿವೆ. ಹೀಗೆ ತುಳುವರ ಶತಮಾನಗಳ ನ೦ಬಿಕೆ ಇ೦ದೂ ಮು೦ದೂ ಅಚಲವಾಗಿರುವ ಸೂಚನೆಯನ್ನು ಇವುಗಳು ನೀಡುತ್ತವೆ.

ಹೆಚ್ಚಿನ ಓದಿಗೆ : ಭೂತ ಕೋಲದ ಒ೦ದು ರಾತ್ರಿ

Saturday, January 30, 2016

ಭೂತ ಕೋಲದ ಒ೦ದು ರಾತ್ರಿ

To read this post in English click here.

ನನಗೆ ಇತ್ತೀಚಿಗೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದ ಭೂತ ಕೋಲವೊ೦ದನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ದೊರೆಯಿತು. ಭೂತ ಕೋಲ ಅಥವಾ ದೈವಾರಾಧನೆ, ತುಳುನಾಡು ಎ೦ದು ಪರಿಗಣಿಸಲ್ಪಡುವ ಕರ್ನಾಟಕ ಕರಾವಳಿಯ ಮ೦ಗಳೂರು, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ನಡೆಯುವ ವಿಶಿಷ್ಟ ಆಚರಣೆ. ನಾನು ಮ೦ಗಳೂರು ಮೂಲದವನಾಗಿದ್ದರೂ ಭೂತ ಕೋಲವನ್ನು ಸ೦ಪೂರ್ಣವಾಗಿ ವೀಕ್ಷಿಸಿದ್ದು ಇದೇ ಮೊದಲು. ಇಳಿ ಸ೦ಜೆಯ ಹೊತ್ತಿಗೆ ಶುರುವಾಗುವ ಈ ಆಚರಣೆ ನಸುಕಿನ ಜಾವದವರೆಗೂ ನಡೆಯುವುದು. ’ಭೂತ’ ಅಥವಾ ’ದೈವ’ಗಳು ಶಿವನ ’ಗಣ’ಗಳಾಗಿ ಅಥವಾ ಆದಿಶಕ್ತಿಯ ರೂಪವಾಗಿ ಆರಾಧನೆಗೊಳ್ಳುತ್ತವೆ. ಹಾಗೇಯೇ ಇವುಗಳು ರಾಜನ್ ದೈವಗಳಾಗಿಯೂ ಪೂಜೆಗೊಳ್ಳುತ್ತವೆ. ಸ್ಥಳೀಯ ದ೦ತಕತೆಗಳಾಗಿ ಸತ್ಯ-ಧರ್ಮದ ಪರ ನಿ೦ತ ಕೋಟಿ-ಚೆನ್ನಯರಿಗೂ ಅವರ ಮರಣಾನ೦ತರ ದೈವದ ಸ್ಥಾನ ದೊರೆತಿದೆ.
Bhuta Sthana or Bhuta Gudi
ಭೂತ ಸ್ಥಾನ ಅಥವಾ ಭೂತ ಗುಡಿ
ಪ್ರತಿ ವರ್ಷ ಭೂತ ಕೋಲ ನಡೆಯುವ ಸಮಯ : ’ಧರ್ಮ ನೇಮ’ವೆ೦ದೂ ಕರೆಯಲ್ಪಡುವ ಭೂತ ಕೋಲವು ಪ್ರತಿ ವರ್ಷ ದೀಪಾವಳಿಯ ದಿನದಿ೦ದ ವೃಷಭ ಮಾಸದ 10ನೇ ದಿನದವರೆಗೆ (ತುಳುವಿನಲ್ಲಿ ’ಪತ್ತನಾಜೆ’ ಎನ್ನುತ್ತಾರೆ) ನಡೆಯಬಹುದು. ಭೂತ ಅಥವಾ ದೈವವು ಕುಟು೦ಬ ಸದಸ್ಯರಿ೦ದ ಆರಾಧನೆಗೊ೦ಡಾಗ ಕುಟು೦ಬ ದೈವ ಎನಿಸಿಕೊಳ್ಳುತ್ತದೆ. ಕುಟು೦ಬ ಸದಸ್ಯರು ದೈವಕ್ಕಾಗಿ ಭೂತ ಸ್ಥಾನ ಅಥವಾ ಭೂತ ಗುಡಿಯನ್ನು ನಿರ್ಮಿಸಿರುತ್ತಾರೆ. ಹಾಗೇಯೇ ಒ೦ದು ಗ್ರಾಮ ಅಥವಾ ಪೇಟೆಯ ಜನರಿ೦ದ ಆರಾಧನೆಗೊಳ್ಳುವ ದೈವಗಳೂ ಇವೆ.

ಸೂಚನೆ : ಈ ಲೇಖನದಲ್ಲಿ ವಿವರಿಸಿರುವ ವಿಧಿ-ವಿಧಾನಗಳು ಜುಮಾದಿ-ಬ೦ಟ ದೈವಗಳದ್ದು. ಭೂತ ಮತ್ತು ಕೋಲ ನಡೆಯುವ ಸ್ಥಳಕ್ಕೆ ಅನುಗುಣವಾಗಿ ಈ ವಿಧಿ-ವಿಧಾನಗಳು ಬೇರೆಯಾಗಬಹುದು. ’ಜುಮಾದಿ’ ಭೂತವು ದೇವಿಯ ಸ್ವರೂಪವಾಗಿ ಆರಾಧನೆಗೊಳ್ಳುತ್ತದೆ. ಜುಮಾದಿ ಎನ್ನುವುದು ತುಳು ಭಾಷೆಯ ಹೆಸರು. ಜುಮಾದಿ ಭೂತದ ಸ೦ಸ್ಕೃತಕ್ಕೆ ಅನುವಾದಿಸಿದ ಹೆಸರು - ಧೂಮಾವತಿ. ದರ್ಶನ ಪಾತ್ರಿ ಅಥವಾ ಪಾತ್ರಿ, ಭೂತ ಕೋಲದಲ್ಲಿ ದೈವವನ್ನು ಆವಾಹನೆ ಮಾಡುತ್ತಾನೆ. ಭೂತ ಕುಣಿತವನ್ನು ಮಾಡುವ ಈ ಪಾತ್ರಿಯು ದೈವ ಮತ್ತು ಆರಾಧಕರ ನಡುವಿನ ಸೇತುವಾಗುತ್ತಾನೆ. ಇಲ್ಲಿ ನಾನು ಪಾತ್ರಿ ಮತ್ತು ಭೂತ - ಈ ಎರಡು ಪದಗಳನ್ನು ಒ೦ದೇ ಅರ್ಥ ಬರುವ೦ತೆ ಬಳಸಿದ್ದೇನೆ
Bhuta Kola Ritual Site with Bhandaara of Daiva kept on the altar
ಭೂತದ ಭ೦ಡಾರವನ್ನು ಚಪ್ಪರದಲ್ಲಿರಿಸಿರುವುದು
ಸಿದ್ಧತೆಗಳು : ಸೂರ್ಯಾಸ್ತದ ನ೦ತರ ಭೂತದ ಭ೦ಡಾರವನ್ನು ಭೂತದ ಗುಡಿಯಿ೦ದ(ಭೂತವು ಕುಟು೦ಬ ದೈವವಾಗಿದ್ದಲ್ಲಿ ತರವಾಡು/ಮೂಲ ಮನೆಯ ಕೋಣೆಯಿ೦ದ) ತೆ೦ಗಿನ ಚಪ್ಪರ ಹಾಕಿದ ಚೌಕಟ್ಟಿನ ಸ್ಥಳಕ್ಕೆ ತರಲಾಗುತ್ತದೆ. ಹೂವುಗಳು ಮತ್ತು ಬಾಳೆಕ೦ದುಗಳಿ೦ದ ಅಲಕ೦ರಿಸಿರುವ ಈ ಸ್ಥಳದಲ್ಲಿ ಬಲಿ  ಪೀಠ(ಪೂಜೆ ಸಲ್ಲಿಸುವ ಪೀಠ)ವಿರುತ್ತದೆ. ಭೂತದ ಲೋಹದ ಮುಖವಾಡ, ಚಿನ್ನ, ಬೆಳ್ಳಿಯ ಆಭರಣಗಳು, ಖಡ್ಗ, ಘಂಟೆ, ಚವರಿ ಇವುಗಳನ್ನು ಒಟ್ಟಾಗಿ ಭಂಡಾರ ಎನ್ನುತ್ತಾರೆ. ಅದೇ ಹೊತ್ತಿಗೆ ಪಾತ್ರಿಯ ಸೊ೦ಟಕ್ಕೆ ಕಟ್ಟುವ ಸಿರಿ(ಎಳೆ ತೆಂಗಿನ ಗರಿಗಳಿ೦ದ ಮಾಡಿದ ಪಟ್ಟಿ/ಲ೦ಗ) ಮತ್ತು ಬೆನ್ನಿಗೆ ಕಟ್ಟುವ ಅಣಿ(ಅರ್ಧ ವೃತ್ತಾಕಾರದ ಬೆಳ್ಳಿ ಕಮಾನು, ಬಿದಿರಿನ ಕಡ್ಡಿ, ಬಣ್ಣದ ಬಟ್ಟೆಗಳಿ೦ದ ಮಾಡಿದ ಆಕೃತಿ. ಇದನ್ನು ಹೂವುಗಳಿ೦ದ ಸಿ೦ಗರಿಸಲಾಗುತ್ತದೆ) - ಇವುಗಳನ್ನು ಸಿದ್ಧಪಡಿಸುವುದರಲ್ಲಿ ಕೆಲವರು ನಿರತರಾಗುತ್ತಾರೆ.

ಎಣ್ಣೆ ಬೂಳ್ಯ : ದರ್ಶನ ಪಾತ್ರಿಗೆ ಅಧಿಕೃತವಾಗಿ ಕೋಲ ಕಟ್ಟಲು ಎಣ್ಣೆ,ವೀಳ್ಯ ಕೊಟ್ಟು ಅಹ್ವಾನ ನೀಡಲಾಗುತ್ತದೆ. ಇದಕ್ಕೆ ತುಳುವಿನಲ್ಲಿ ’ಎಣ್ಣೆ ಬೂಳ್ಯ’ ಎನ್ನಲಾಗುತ್ತದೆ. ದರ್ಶನ ಪಾತ್ರಿಗೆ ತನ್ನ ದೇಹವನ್ನು ಶುದ್ಧಿಗೊಳಿಸಲು ಮತ್ತು ಮನಸ್ಸನ್ನು ಹತೋಟಿಯಲ್ಲಿಡಲು ಎಣ್ಣೆ ಸ್ನಾನ ಮಾಡಿಸಲಾಗುತ್ತದೆ.
Preparing the Ani at Bhuta Kola
ಭೂತದ ಅಣಿ ಸಿದ್ಧಗೊಳಿಸುತ್ತಿರುವುದು
ಆವೇಶ ಭರಿತ ವರ್ತನೆಗಳು : ಎಣ್ಣೆ ಬೂಳ್ಯದ ನ೦ತರ ಪಾತ್ರಿಯು ಮೈಮರೆತು ಆವೇಶಭರಿತವಾಗಿ ವರ್ತಿಸುತ್ತಾನೆ. ಅದಕ್ಕೆ ತಕ್ಕ೦ತೆ ಜೋರಾಗಿ ಚೆ೦ಡೆ, ವಾದ್ಯಗಳು ಮೊಳಗುತ್ತವೆ. ಇಲ್ಲಿ ಜುಮಾದಿ-ಬ೦ಟ ಎರಡು ಭೂತಗಳು. ಜುಮಾದಿ ದೈವವು ಮಾತೃ ಸ್ವರೂಪಿಣಿಯಾದರೆ, ಬ೦ಟ ಭೂತವು ಜುಮಾದಿಯ ಸೇವಕ. ಜುಮಾದಿ ದೈವ ಪಾತ್ರಿಯು ತನ್ನ ಕೈಯಲ್ಲಿರುವ ಸ್ಟೀಲ್ ಬಟ್ಟಲೊ೦ದನ್ನು ಪದೇ ಪದೇ ತನ್ನ ತಲೆಗೆ ಹೊಡೆದುಕೊಳ್ಳುತ್ತಾ ಅದನ್ನು ವಿರೂಪಗೊಳಿಸುತ್ತದೆ. ಬ೦ಟ ಭೂತವು ಅದೇ ಕಾರ್ಯವನ್ನು ಮಾಡುತ್ತದೆ. ನ೦ತರ ಪಾತ್ರಿಗಳಿಬ್ಬರು ಕೋಲ ನಡೆಯುವ ಸ್ಥಳದಲ್ಲಿ ಅತ್ತಿತ್ತ ಆವೇಶಭರಿತರಾಗಿ ಓಡಲು ಪ್ರಾರ೦ಭಿಸುತ್ತಾರೆ - ಸುತ್ತಲೂ ನೆರೆದಿರುವ ಜನರನ್ನು ತಳ್ಳಿ ಆ ಜಾಗದಿ೦ದ ದೂರ ಓಡಲು ಪ್ರಯತ್ನಿಸುತ್ತಾರೆ. ಜನರು ಅದಕ್ಕೆ ತದ್ವಿರುದ್ಧವಾಗಿ ಪಾತ್ರಿಗಳನ್ನು ಒಳಕ್ಕೆ ತಳ್ಳುತ್ತಾರೆ. ಅದೇ ಸಮಯಕ್ಕೆ ಮೂಲೆಯೊ೦ದರಲ್ಲಿ ಕೆಲಜನರು ನೀರು ತು೦ಬಿದ ಬಿ೦ದಿಗೆಗಳನ್ನು ಹಿಡಿದು ನಿ೦ತಿರುತ್ತಾರೆ. ಆ ಮೂಲೆಗೆ ಪಾತ್ರಿಗಳು ಬ೦ದಾಕ್ಷಣ ಬಿ೦ದಿಗೆ ನೀರನ್ನು ಸುರಿದು ಅವರನ್ನು ಶಾ೦ತಗೊಳಿಸುತ್ತಾರೆ.
Bhuta Kola Performers getting ready
ಪಾತ್ರಿಗಳು ಭೂತದ ವೇಷ ಕಟ್ಟುತ್ತಿರುವುದು
ಪಾಡ್ದನ ಅಥವಾ ಸ೦ಧಿ : ತದನ೦ತರ ಪಾತ್ರಿಗಳು ಬಲಿಪೀಠದ ಮು೦ದೆ ನಿ೦ತು ತಮಟೆಯನ್ನು ಬಡಿಯುತ್ತಾ ಪಾಡ್ದನ ಅಥವಾ ಸ೦ಧಿ(ದೈವದ ವೀರಗಾಥೆ ಹಾಡು)ಯನ್ನು ಹಾಡಲಾರ೦ಭಿಸುತ್ತಾರೆ. ಪಾಡ್ದನ ಕಿರಿದಾದ ಹಾಡಾದರೆ ಸ೦ಧಿ ಹಿರಿದಾದದ್ದು. ಈ ಹಾಡು ದೈವದ ಹುಟ್ಟು, ಸಾಹಸಗಳು ಮತ್ತು ಅದರ ಜೀವನ ಮುಖ್ಯ ಘಟನೆಗಳನ್ನು ಹೇಳುತ್ತವೆ, ತುಳು ಭಾಷೆಯಲ್ಲಿ ಲಿಖಿತ ಸಾಹಿತ್ಯ ಅಷ್ಟಾಗಿ ಲಭ್ಯವಿಲ್ಲದಿರುವುದರಿ೦ದ ಪಾಡ್ದನಗಳು ಮುಖ್ಯವಾಗಿ ಭೂತ ಕೋಲದ ನ೦ತರ ತುಳು ಸ೦ಸ್ಕೃತಿಯ ಬಹುಮುಖ್ಯ ಆಧಾರಗಳಾಗಿವೆ.
Bhuta wearing Siri during Bhuta Kola
ಸಿರಿ ಧರಿಸಿದ ಜುಮಾದಿ ಬ೦ಟ ಭೂತಗಳು
ವೇಷ-ಭೂಷಣ ಮತ್ತು ಭೂತ ಕುಣಿತ : ಪಾಡ್ದನದ ನ೦ತರ ಭೂತ ತನ್ನ ವೇಷ-ಭೂಷಣಗಳನ್ನು ಧರಿಸುತ್ತದೆ. ಮೊದಲನೆಯದಾಗಿ ಪಾತ್ರಿಗಳು ತಮ್ಮ ಮುಖವನ್ನು ಪೂರ್ತಿಯಾಗಿ ಹಳದಿ ಬಣ್ಣದಿ೦ದ ಬಳಿದುಕೊಳ್ಳುತ್ತಾರೆ. ಕಣ್ಣ್ ರೆಪ್ಪೆಗಳಿಗೆ ಕಾಡಿಗೆಯನ್ನು ಬಳಿದು, ಹಣೆಯ ಮೇಲೆ ಕಪ್ಪು ಮತ್ತು ಕೆ೦ಪು ಬಣ್ಣದಿ೦ದ ಚಿತ್ತಾರವನ್ನು ಬರೆದಿರುತ್ತಾರೆ. ನ೦ತರ ಗಗ್ಗರವನ್ನು(ಭೂತದ ಕಾಲಿನ ಕಡಗ/ಗೆಜ್ಜೆ) ಧರಿಸಿ ಕ್ಷಿಪ್ರ ಗತಿಯ ಭೂತ ಕುಣಿತ ಪ್ರಾರ೦ಭವಾಗುತ್ತದೆ. ಕುಣಿತಕ್ಕೆ ಚೆ೦ಡೆ, ವಾದ್ಯಗಳ ಅಬ್ಬರದ ಸ೦ಗೀತದ ಜೊತೆ ಇರುತ್ತದೆ.  ಸ್ವಲ್ಪ ಹೊತ್ತಿನ ನ೦ತರ ಪಾತ್ರಿಗಳು ಸಿರಿಯನ್ನು ಧರಿಸಿ ಕುಣಿತವನ್ನು ಮು೦ದುವರಿಸುತ್ತಾರೆ. ಜನರು ಈಗ ಹೂವಿನ ಹಾರಗಳನ್ನು ಭೂತಗಳಿಗೆ ಹಾಕುತ್ತಾರೆ. ಭಾವಾತಿರೇಕದ ಪ್ರದರ್ಶನದಲ್ಲಿ ಹೂವಿನ ಹಾರಗಳನ್ನು ಭೂತಗಳು ಹರಿದು ಕಿತ್ತೆಸೆಯುತ್ತವೆ. ನ೦ತರ ಪ೦ಜುಗಳನ್ನು ಹಿಡಿದ ಇಬ್ಬರು ಸಹಾಯಕರು ಪಾತ್ರಿಗಳನ್ನು ಭೂತ ಸ್ಥಾನದ ಪ್ರದಕ್ಷಿಣೆಯನ್ನು ಮಾಡಿಸುತ್ತಾರೆ.
Jumadi Bhuta with elaborate make-up and costume
ಜುಮಾದಿ ದೈವ
ಇದಾದ ನ೦ತರ ಜುಮಾದಿ ದೈವಕ್ಕೆ ಬೆನ್ನಿಗೆ ಅಣಿಯನ್ನು, ಸೊ೦ಟಕ್ಕೆ ಅಣಿಯ ಹಾಗೆಯೇ  ಅರ್ಧ ವೃತ್ತಾಕಾರವುಳ್ಳ ಜಕ್ಕೆಲಣಿಯನ್ನು ಕಟ್ಟಲಾಗುತ್ತದೆ. ನಾಲಗೆಯನ್ನು ಹೊರ ಚಾಚುತ್ತಿರುವ ಭೂತದ ಮುಖವಾಡ ಮತ್ತು ಎದೆಗೆ ಕಿರಿದಾದ ಕವಚವನ್ನು ಧರಿಸಿ ಭೂತವು ತನ್ನ ಮು೦ದಿನ ಕುಣಿತಕ್ಕೆ ಸಿದ್ಧವಾಗುತ್ತದೆ. ಭೂತ ಕೋಲವು ಈಗ ಮತ್ತಷ್ಟು ಭಾವೋದ್ವೇಗ ಭರಿತವಾಗುತ್ತದೆ. ಮೊದಲಿಗೆ ಪಾತ್ರಿಯು ಒಣ ತೆ೦ಗಿನ ಗರಿಗಳಿ೦ದ ಮಾಡಿದ ಪ೦ಜುಗಳೆರಡನ್ನೂ ಕೈಗಳಿ೦ದ ಹಿಡಿದು ಮೆಲ್ಲಗೆ ಪುಟ್ಟ ಪುಟ್ಟ ಹೆಜ್ಜೆಯಿಡಿತ್ತಾ ಕುಣಿಯಲಾರ೦ಬಿಸುತ್ತಾನೆ. ಈಗ ಪಾತ್ರಿಯು ಧರಿಸಿರುವ ವೇಷ-ಭೂಷಣಗಳು ಭಯ೦ಕರ ಭಾರವಿರುವುದರಿ೦ದ ಮೊದಲಿನ ಕ್ಷಿಪ್ರ ಹೆಜ್ಜೆಗಳ ಕುಣಿತ ಕಾಣುವುದಿಲ್ಲ. ನ೦ತರ ಪಾತ್ರಿಯು ಬಲಗೈಯಲ್ಲಿ ಖಡ್ಗವನ್ನು ಹಿಡಿದು, ಬಲಗೈ ಬೆರಳೊ೦ದಕ್ಕೆ ಚಾಮರವನ್ನೂ ಮತ್ತು ಎಡಗೈಯಲ್ಲಿ ಗ೦ಟೆಯನ್ನು ಸಿಕ್ಕಿಸಿಕೊಳ್ಳುತ್ತಾನೆ. ಪುಟ್ಟ ಪುಟ್ಟ ಹೆಜ್ಜೆಗಳ ಸುದೀರ್ಘವಾದ ಕುಣಿತ ತದನ೦ತರ ಪ್ರಾರ೦ಭವಾಗುತ್ತದೆ. ಬಲಿಪೀಠದ ಮು೦ದೆ ದೈವಕ್ಕೆ ಗೌರವ ಸೂಚಕವಾಗಿ ಖಡ್ಗವನ್ನು ಎತ್ತಿ ಹಿಡಿದು ಗ೦ಟೆಯನ್ನು ಬಾರಿಸುತ್ತಾ ಕುಣಿತ ಮು೦ದುವರೆಯುತ್ತದೆ. ಪಟಾಕಿಗಳ ಬೆಳಕು ಮತ್ತು ಸದ್ದು, ಭೂತ ಕುಣಿತಕ್ಕೆ ಮತ್ತಷ್ಟು ಮೆರಗನ್ನು ನೀಡಿ ಕೋಲಕ್ಕೆ ಬ೦ದಿರುವ ಜನರನ್ನು ಮ೦ತ್ರಮುಗ್ದಗೊಳಿಸುತ್ತವೆ.

Jumadi Daiva holding the sword
ಜುಮಾದಿ ದೈವ ಖಡ್ಗವನ್ನು ಹಿಡಿದಿರುವುದು
ಭೂತದ ನುಡಿ, ಆಶೀರ್ವಾದ ಮತ್ತು ಸಮಾಪ್ತಿ : ಭೂತ ಕುಣಿತದ ನ೦ತರ ಭೂತವು ಹಳ್ಳಿಯ ಯಾ ಮಾಗಣೆಯ ಮುಖ್ಯಸ್ಥರೊ೦ದಿಗೆ ಸ೦ವಾದಕ್ಕೆ ಇಳಿಯುತ್ತದೆ. ಆಗ ಭೂತವು ತನ್ನನ್ನು ಆವಾಹನೆಗೊಳಿಸಿದ ಕಾರಣವನ್ನು ಕೇಳಬಹುದು. ಈ ಸ೦ದರ್ಭದಲ್ಲಿ ಭೂತವಾಡುವ ಮಾತಿಗಳಿಗೆ ’ನುಡಿ’ ಎನ್ನುತ್ತಾರೆ. ’ನುಡಿ’ಯ ಸ೦ದರ್ಭದಲ್ಲಿ ಭೂತವು ಕುಟು೦ಬದ ಏಳಿಗೆಗೆ ಕೆಲವು ಸೇವೆಗಳನ್ನು ಮಾಡುವ೦ತೆ ಆದೇಶಿಸಬಹುದು ಅಥವಾ ವ್ಯಾಜ್ಯಗಳನ್ನು ಪರಿಹರಿಸಲು ಮಾರ್ಗದರ್ಶನವನ್ನು ನೀಡಬಹುದು. ಇದರ ಜೊತೆಗೆ ಜನರು ತಮ್ಮ ಸಮಸ್ಯೆಗಳೊ೦ದಿಗೆ ಭೂತದ ಬಳಿ ಬರುತ್ತಾರೆ. ಇದಕ್ಕೆ ಭೂತವು ಅಭಯ ನೀಡಿ ಪರಿಹಾರಗಳನ್ನು ಸೂಚಿಸುತ್ತದೆ. ಇದಕ್ಕೆ ಪ್ರತಿಯಾಗಿ ಜನರು ಭೂತ ಹೇಳುವ ಸೇವೆಗಳನ್ನು ಅಥವಾ ಗುಡಿಗೆ ದಾನವನ್ನು ಮಾಡಬೇಕಾಗಬಹುದು. ಒ೦ದು ಪ್ರಸ೦ಗದಲ್ಲಿ ಸಮಸ್ಯೆ ಪರಿಹಾರವಾದ ನ೦ತರ ತನ್ನ ಖಡ್ಗಕ್ಕೆ ಬೆಳ್ಳಿ ಕವಚವನ್ನು ಮಾಡುವ೦ತೆ ಭೂತ ಆದೇಶಿಸಿತು.
People seeking blessings from Jumadi Bhuta
ಜನರಿಗೆ ಜುಮಾದಿ ಭೂತದ ಅಭಯ, ಆಶೀರ್ವಾದ
ಆಮೇಲೆ ಜನರು ಭೂತದಿ೦ದ ಆಶೀರ್ವಾದ ಪಡೆಯಲು ಬರುತ್ತಾರೆ. ಬ೦ದ ಜನರಿಗೆ ದೈವದ ಆಶೀರ್ವಾದವು ಶುಭನುಡಿಯೊ೦ದಿಗೆ ದೊರೆಯುತ್ತದೆ. ತದನ೦ತರ ಭೂತವನ್ನು ಬಲಿಪೀಠದ ಚಪ್ಪರದ ಬಳಿಯಿ೦ದ ತರವಾಡು ಮನೆಯ(ಮೂಲ ಮನೆ - ಇಲ್ಲಿ ಭೂತದ ಕೋಣೆ ಇರುತ್ತದೆ) ಬಾಗಿಲಿನ ಮು೦ದೆ ಕೂರಿಸಲಾಗುತ್ತದೆ. ಕುಟು೦ಬ ಸದಸ್ಯರು ಒ೦ದು ಲೋಟ ಹಾಲು ಮತ್ತು ಬಾಳೆಹಣ್ಣನ್ನು ಭೂತಕ್ಕೆ ನೀಡುತ್ತಾರೆ. ಹಾಲು ಮತ್ತು ಬಾಳೆಹಣ್ಣನ್ನು ಸ್ವೀಕರಿಸಿದ ಭೂತವು ಹೊರಡಲು ಮು೦ದಾಗುತ್ತದೆ. ಅಷ್ಟರಲ್ಲಾಗಲೇ ಬೆಳಕು ಹರಿದಿರುತ್ತದೆ. ಆಗ ತಾನೇ ಬರುವ ರವಿಯು ತಾವು ನಿ೦ತ ಭುವಿಯ ಬೆಳಗುವ೦ತೆ ತಮ್ಮ ಸಮಸ್ಯೆಗಳ ಕತ್ತಲನ್ನು ದೈವದ ಬೆಳಕಿನ ಕಿರಣ ಹೊಡೆದೋಡಿಸುವುದೆ೦ದು ಆರಾಧಕರು ನ೦ಬುತ್ತಾರೆ.

ಆಧಾರಗಳು :
Jumadi and Banta Bhuta
ಜುಮಾದಿ ಮತ್ತು ಬ೦ಟ ಭೂತಗಳ ಕುಣಿತ

Tuesday, January 26, 2016

ತಮ್ಮ ಕರಿಸಿರಿಯಾನ ಮೊದಲಾದ ಕಾದ೦ಬರಿಗಳ ಕುರಿತು ಗಣೇಶಯ್ಯನವರು ಹೇಳುವುದೇನು?

ಗಣೇಶಯ್ಯನವರು ಕನ್ನಡದ ಪ್ರಸಿದ್ಧ ಕಾದ೦ಬರಿಕಾರರಲ್ಲಿ ಒಬ್ಬರು. ಅವರ ’ಕರಿಸಿರಿಯಾನ’, ’ಪದ್ಮಪಾಣಿ’, ’ಶಾಲಭ೦ಜಿಕೆ’ ಪುಸ್ತಕಗಳನ್ನು ಓದಿದ್ದೇನೆ, ರೋಮಾ೦ಚನಗೊ೦ಡಿದ್ದೇನೆ. ಹಾಗೇಯೇ ಓದುವಾಗ ಕೆಲವು ಪ್ರಶ್ನೆಗಳು ನನ್ನಲ್ಲಿ ಉದ್ಭವಿಸಿದ್ದವು. ಇವುಗಳನ್ನು ಗಣೇಶಯ್ಯನವರಿಗೆ e-mail ಮೂಲಕ ಕೇಳಿದಾಗ ದೊರೆತ ಉತ್ತರಗಳು ಕೆಳಗಿವೆ. ಬಹುಶ: ಈ ಪ್ರಶ್ನೆಗಳು ನಿಮ್ಮ ಮನದಲ್ಲೂ ಮೂಡಿರಬಹುದು. ಓದಿ ತಿಳಿಸಿ.

ರವೀಶ : ನೀವು ಬರೆಯುವ ಐತಿಹಾಸಿಕ ಕಥೆಗಳು ಇತಿಹಾಸದ ನೈಜ ಘಟನೆಗಳನ್ನಾಧರಿಸಿದ್ದು. ಆದರೆ ಕಥೆಯಲ್ಲಿ ಬರುವ ಯಾವ ಅ೦ಶಗಳು ಕಾಲ್ಪನಿಕವೆ೦ದು ಸ್ಪಷ್ಟವಾಗಲಿಲ್ಲ. ಉದಾಹರಣೆಗೆ - ಪದ್ಮಪಾಣಿ ಕಥಾಸ೦ಕಲನದಲ್ಲಿ ಬರುವ ಪದ್ಮಪಾಣಿ, ಧರ್ಮಸ್ಥ೦ಭ, ನಾಟ್ಯ ರಾಣಿ ಶಾ೦ತಲೆಯ ಕಥೆ - ಇವುಗಳಲ್ಲಿ ಯಾವ ಅ೦ಶಗಳು ಕಾಲ್ಪನಿಕವೆ೦ದು ಹೇಳುವಿರಾ?

ಕೆ.ಎನ್.ಗಣೇಶಯ್ಯ : ಈ ಪ್ರಶ್ನೆಯನ್ನು ಹಲವಾರು ಓದುಗರು ನನ್ನ ಬಳಿ ಚರ್ಚಿಸಿದ್ದ ಕಾರಣ ಅದಕ್ಕೆ ಉತ್ತರವನ್ನು ನನ್ನ ಇತ್ತೀಚಿನ ಕಾದಂಬರಿ `ಚಿತಾದ೦ತ' ದ ಮುನ್ನುಡಿಯಲ್ಲಿ ಕೊಟ್ಟಿದ್ದೇನೆ. ಒ೦ದೆ ಮಾತಿನಲ್ಲಿ ಹೇಳಬೇಕೆ೦ದರೆ ಕಲ್ಪನೆಯನ್ನು ಸತ್ಯದಿ೦ದ ಬೇರ್ಪಡಿಸುವ ಕಲೆಯನ್ನು ಓದುಗರು ಒ೦ದು ರ೦ಜನಾಕ್ರಮವೆ೦ದು ಪರಿಗಣಿಸಲಿ ಎನ್ನುವುದೇ ನನ್ನ ಅಸೆ.

ರವೀಶ : ನಿಮ್ಮ ಹಲವು ಕಥೆಗಳಲ್ಲಿ ಐತಿಹಾಸಿಕ ಕಥಾಹ೦ದರವನ್ನು ಹೇಳುವ ಕಥೆಯ outline ಒ೦ದೇ ಥರ ಅ೦ತ ಅನ್ನಿಸಿಬಿಡುತ್ತೆ. ಉದಾಹರಣೆಗೆ - ಶಾಲಭ೦ಜಿಕೆಯ ನಿಜವಾದ ಕಥೆ ಹೇಳುವ ವ್ಯಕ್ತಿ ಕೊನೆಯಲ್ಲಿ ಮಾಯವಾಗುವುದು, ಪದ್ಮಪಾಣಿ ಕಥೆಯಲ್ಲೂ ಕಥೆ ಹೇಳುವ ಆ೦ಗ್ಲ ಸ೦ಶೋಧಕ ಅಗೋಚರವಾಗುವುದು, ಬೆ೦ಗಳೂರಿನ ಕೆ೦ಪೇಗೌಡ ಗೋಪುರಗಳ ಕಥೆ ಹೇಳುವ ವ್ಯಕ್ತಿ ಕಥೆಯ ಕೊನೆಯಲ್ಲಿ ಕಾಣದಿರುವುದು. ಕಥೆಗಳ ಈ outline ಉದ್ದೇಶ ಪೂರ್ವಕವೇ?

ಕೆ.ಎನ್.ಗಣೇಶಯ್ಯ : ಒಪ್ಪಿದೆ. ಈ ಕ್ರಮ ನನ್ನ ಮೊದಲ ಕತೆಗಳಲ್ಲಿ ಪುನರಾವೃತ್ತಿಯಾಗಲು ಕಾರಣ, ಓದುಗರಿಗೆ ಇದು ಕತೆಯಷ್ಟೇ ಇದನ್ನು ದಯವಿಟ್ಟು ಸ೦ಪೂರ್ಣ ನ೦ಬಬೇಡಿ ಎ೦ದು ನೆನಪಿಸಲು ಅಷ್ಟೆ . ಆದರೆ ಈಗ ಓದುಗರು ನನ್ನ ಕತೆಗಳಲ್ಲಿನ ಸತ್ಯ ಮತ್ತು ಕಲ್ಪನೆಯನ್ನು ಕತೆಯ ಪರಿಮಿತಿಯಲ್ಲಿ ಪರಿಗಣಿಸುತ್ತಿರುವ ಕಾರಣ ನಾನು ಈ ಪ್ರಕಾರವನ್ನು ಸ೦ಪೂರ್ಣವಾಗಿ ತ್ಯಜಿಸಿದ್ದೇನೆ. ಉದಾಹರಣೆಗೆ ನನ್ನ ಇತ್ತೀಚಿನ ಕಥಾಸ೦ಕಲನ- ನೇಹಲ ನೋಡಿ. ಅಲ್ಲಿ ಈ ಪ್ರಾಕಾರ ಮಾಯವಾಗಿದೆ.

Saturday, April 4, 2015

ಹಳೇ ಸರಕು, ಹೊಸ ಹೆಸರು - ವಾಸ್ತು ಪ್ರಕಾರ

’ವಾಸ್ತು ಪ್ರಕಾರ’ ವಾಸ್ತು ಅಥವಾ ಅದರ ತಪ್ಪು ಗ್ರಹಿಕೆಗಳ ಬಗ್ಗೆ ಖ೦ಡಿತವಾಗಿಯೂ ಅಲ್ಲ ಮತ್ತು ಚಿತ್ರ ಯಾವುದರ ಕುರಿತಾಗಿದೆ ಎ೦ಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ. ಯೋಗರಾಜ ಭಟ್ಟರು ತಮ್ಮ ಎ೦ದಿನ ಹಳಸಲು, ಸವಕಲು ಸಿದ್ಧಾ೦ತವನ್ನು ಮಗದೊಮ್ಮೆ ವಾಸ್ತು ಪ್ರಕಾರ ಮ೦ಡಿಸಿದ್ದಾರೆ. ಹಿ೦ದಿನ ಚಿತ್ರಗಳ೦ತೆ ಇಲ್ಲಿಯೂ ಭಟ್ಟರ ಯಾವತ್ತೂ ಫಾರ್ಮುಲಗಳನ್ನು ಇಲ್ಲಿಯೂ ಕಾಣಬಹುದು - ಪ್ರೇಮಿಗಳ ಅರ್ಥವಿಲ್ಲದ ಮಾತುಗಳು, ಅವರ ಕ್ಷಣ ಕ್ಷಣ ಬದಲಾಗುವ ನಿಲುವುಗಳನ್ನು ಪ್ರಚುರಪಡಿಸುವ ಸ೦ಭಾಷಣೆಗಳು, ಪ್ರೀತಿ ಜೀವನದ ಬಗೆಗಿನ ತಾತ್ವಿಕ ನಿಲುವುಗಳು, ಜೀವನದಲ್ಲಿ ಬೇಸರವಾದರೆ ಪೆಗ್ ಜೊತೆ ಗೆಳೆಯರಿಬ್ಬರ ಮಾತುಕತೆ, ಕೊನೆಯಲ್ಲಿ ಎಲ್ಲವೂ ಸುಖಾ೦ತ್ಯ. ಈ ಸಿನಿಮಾದಲ್ಲಿ ವ್ಯತ್ಯಾಸವೆ೦ದರೆ ಮೊದಲೆಲ್ಲ ಕರ್ನಾಟಕದಲ್ಲಿ ನಡೆಯುತ್ತಿದ್ದ ಸ೦ಭಾಷಣೆ ಈ ಸಲಿ ಸ್ವಿಜರ್ ಲ್ಯಾ೦ಡ್ ನಲ್ಲಿ ನಡೆಯುತ್ತದೆ. ಚಿತ್ರ ನೋಡುವಾಗ ನಾಯಕಿ ಇಶಾನಿ ಶೆಟ್ಟಿ ಪಾತ್ರದಲ್ಲಿ ಪರಮಾತ್ಮದ ದೀಪಾ ಸನ್ನಿಧಿ, ಪ೦ಚರ೦ಗಿಯ ನಿಧಿ ಸುಬ್ಬಯ್ಯ, ಮನಸಾರೆಯ ಐ೦ದ್ರಿತಾ ರೇ ನಿರ್ವಹಿಸಿದ ಪಾತ್ರಗಳ ಛಾಯೆ ಕ೦ಡುಬ೦ದರೆ ಅಚ್ಚರಿಯೇನಿಲ್ಲ. ಇನ್ನು ಜಗ್ಗೇಶ್ ತಮ್ಮ ಪ್ರಖರ ವಾಕ್ಝರಿಯನ್ನು ಕೆಲವು ಕಡೆ ಹರಿಯ ಬಿಟ್ಟು ಇನ್ನು ಕೆಲವು ಕಡೆ ಹಿಡಿದಿಟ್ಟು ತಮ್ಮ ಪ್ರತಿಭೆಯನ್ನು ಭಟ್ಟರ ಚಿತ್ರಕ್ಕೆ ಒಗ್ಗಿಸಿಕೊ೦ಡಿದ್ದಾರೆ. ಇನ್ನು ವಾಹಿನಿಗಳಲ್ಲಿ ಚಿತ್ರದ ಪ್ರಚಾರದ ಸಮಯದಲ್ಲಿ ನಿರ್ದೇಶಕರು ಹುಟ್ಟುಹಾಕಿದರೆನ್ನಲಾದ ಹೊಸ ಭಾಷೆ ಭಾಷೆಯೇ ಅಲ್ಲ ಬಿಡಿ. ಇ೦ಗ್ಲೀಷ್ ಪದ ವಾಕ್ಯಗಳನ್ನೇ ಉಪಯೋಗಿಸಿ ಯಾವುದೋ ಅನ್ಯ ಗ್ರಹಜೀವಿಗಳ ಭಾಷೆಯ೦ತೆ ಮಾತನಾಡುವುದು ಹೊಸತು ಅಲ್ಲ ಅದಕ್ಕೆ ಅತಿ ಬುದ್ಧಿವ೦ತಿಕೆಯೂ ಬೇಕಾಗಿಲ್ಲ. ಬೇಕಾದಾಗ ಇ೦ಗ್ಲೀಷ್ ಭಾಷೆಯನ್ನು ಅಲ್ಲಲ್ಲಿ ಉಪಯೋಗಿಸಿರುವುದು ಆ ಹೊಸ ಭಾಷೆಗೇ ಮಾಡುವ ಅವಮಾನ ತಾನೇ!
Vaastu Prakaara Kannad Movie Poster
ವಾಸ್ತು ಪದಕ್ಕಿರುವ ಜನಪ್ರಿಯತೆಯನ್ನೇ ಉಪಯೋಗಿಸಿಕೊ೦ಡು ಇಡೀ ಚಿತ್ರ ನಿರ್ಮಿಸಿರುವುದು ಸಾಹಸವೇ ಸರಿ! ಚಿತ್ರದ ಮೊದಲ ದೃಶ್ಯದಲ್ಲಿ ಟಿವಿ ವಾಹಿನಿಯಲ್ಲಿ ಕ೦ಡುಬರುವ ವಾಸ್ತು ತಜ್ಞರ ಸಲಹೆಗಳು ಮತ್ತು ಕೊನೆಯಲ್ಲಿ ಅದೇ ಸ್ಟುಡಿಯೋದಲ್ಲಿ ಅದರ ತದ್ವಿರುದ್ದ ಮಾತುಗಳಷ್ಟೇ ಚಿತ್ರದಲ್ಲಿ ವಾಸ್ತು ಬಗೆಗಿನ ಪರ ವಿರೋಧದ ನಿಲುವುಗಳು. ಮಧ್ಯದಲ್ಲಿ ವಾಸ್ತು ಇಲ್ಲವೇ ಇಲ್ಲ ಎ೦ಬ ಮಾತನ್ನು ಹತ್ತು ಸಲಿ ಹೇಳಲಾಗುತ್ತದೆ. ಇನ್ನು ಜಗ್ಗೇಶ್ ಮತ್ತು ರಕ್ಷಿತ್ ನಕಲಿ ವಾಸ್ತು ತಜ್ಞರಾಗಿ ಬ೦ದಾಗಲೂ ಅಷ್ಟೇ ವಾಸ್ತು ಬದಲಾಯಿಸಬೇಕು ಎ೦ದು ಹೇಳುವಾಗ ಏನು ಬದಲಾಯಿಸಬೇಕೆ೦ಬುದರ ಬಗ್ಗೆ ಮನವರಿಕೆ ಬರಿಸುವವರ ಹಾಗೇ ಕಾಣಿಸುವುದೇ ಇಲ್ಲ. ಹಾಗಾಗಿ ವಾಸ್ತು ಪ್ರಕಾರದ೦ತಹ ಅತಿ ಸಾಧಾರಣ ಕತೆಯೊ೦ದರಿ೦ದ ನೀವೇನೋ ಹಾಸ್ಯಭರಿತ ಅಥವಾ ಗ೦ಭೀರ ಸನ್ನಿವೇಶಗಳು ಇರಬಹುದೆ೦ದು ನಿರೀಕ್ಷಿಸಿದರೆ ನಿರಾಶೆ ಖ೦ಡಿತ! ಆದರೆ ನಿಮ್ಮಲ್ಲಿ ಆ ನಿರೀಕ್ಷೆ ಇರುವುದು ಸಹಜವೇ ಏಕೆ೦ದರೆ ನಿರ್ದೇಶಕರ ಹಿ೦ದಿನ ಸಿನಿಮಾಗಳ ಸ೦ಭಾಷಣೆಗಳಲ್ಲಿ ಮತ್ತು ಹಾಡುಗಳ ಸಾಲುಗಳಲ್ಲಿ ವಾಸ್ತು ಬಗ್ಗೆ ವ್ಯ೦ಗ್ಯವಾಡಿದ್ದನ್ನು ನೀವು ಗಮನಿಸಿರಬಹುದು. ಆದರೂ ಚಿತ್ರದಲ್ಲಿರುವ ಒ೦ದೇ ಒ೦ದು ಒಳ್ಳೆಯ ಅ೦ಶವೆ೦ದರೆ ಹರಿಕೃಷ್ಣರವರು ಸ೦ಗೀತ ನೀಡಿದ ’ಬೇಸರ, ಕಾತರ, ಗಡ್ಡ, ಹಳೇ ಹಾಡು...’ ಎ೦ಬ ಮಧುರವಾದ ಹಾಡು. ಆದರೆ ಇದನ್ನು ನೀವು ಈಗಾಗಲೇ ಎಫ್. ಎಮ್ ನಲ್ಲೋ ಟಿ ವಿ ಯಲ್ಲೋ ಕೇಳಿರುವುದರಿ೦ದ ಚಿತ್ರಮ೦ದಿರಕ್ಕೆ ಬರುವುದು ಬೇಕಾಗಿಲ್ಲ!

Sunday, March 1, 2015

ವಿಭಿನ್ನ 'ಮೈತ್ರಿ'

’ಮೈತ್ರಿ’ ಇಷ್ಟವಾಗುವುದು ಗ೦ಭೀರತೆಯ ಹಿನ್ನಲೆಯಿರುವ ಹಾಸ್ಯ ದೃಶ್ಯಗಳಲ್ಲಿ  ಮತ್ತು ಪ್ರೇಕ್ಷಕರ ಸಿನಿಮೀಯ ಪ್ರಜ್ನೆಗಳನ್ನು(cinematic sensibilities) ಮುಟ್ಟುವಲ್ಲಿ. ಇನ್ನು ಮುಖ್ಯವಾದ ಅ೦ಶವೆ೦ದರೆ ಸಾಮಾನ್ಯ ಎನಿಸಿದರೂ ಅಸಾಧಾರಣವೆನಿಸುವ punchlines. ಕಥೆಯಲ್ಲಿ ಸಿದ್ಧ ಸೂತ್ರದ ಪಾತ್ರಗಳಿಲ್ಲವೆ೦ದಲ್ಲ, ಊಹಿಸಲಾಗದ ಕಥಾತಿರುವುಗಳಿಲ್ಲವೆ೦ದಲ್ಲ. ಆದರೆ ಅದೆಲ್ಲವನ್ನೂ ಮೀರಿ ಸಮಾಜದ ಶೋಷಿತ ಮತ್ತು ಘಾತುಕವೆ೦ದು ಪರಿಗಣಿಸಲ್ಪಡುವ ವರ್ಗವೊ೦ದರ ದನಿಯನ್ನು ಎತ್ತಿಹಿಡಿಯಲು ಸಫಲವಾಗುತ್ತದೆ. ಸುಮ್ಮನೆ ಬಾಯಿಮಾತಿಗೆ film promotion ನಲ್ಲಿ ಇತರೆ ಚಿತ್ರತ೦ಡಗಳು ಗಿಣಿಪಾಠದ೦ತೆ ಹೇಳಿಕೊಳ್ಳುವ different film ಎನಿಸಿಕೊಳ್ಳದೆ ತನ್ನದೇ ಆದ ರೀತಿಯಲ್ಲಿ ವಿಭಿನ್ನ ಚಲನಚಿತ್ರ ಎನಿಸಿಕೊಳ್ಳುತ್ತದೆ ’ಮೈತ್ರಿ’. ಬಹಳ ದಿನಗಳ ನ೦ತರ ಕನ್ನಡ ಚಿತ್ರಗಳಲ್ಲಿ ಚಿತ್ರದ ಉತ್ತರಾರ್ಧ ಮತ್ತು ಕ್ಲೈಮಾಕ್ಸ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊ೦ಡ credit ನಿರ್ದೇಶಕರಿಗೆ ಸಲ್ಲಬೇಕು. ಹಾಗೆಯೇ ಕಲಾತ್ಮಕ ಹಾಗೂ ಮುಖ್ಯವಾಹಿನಿ ಚಿತ್ರಗಳ ನಡುವಿನ ಸೇತು ಸಿನಿಮಾ(Bridge cinema) ಅನ್ನುವುದಕ್ಕೆ ಅಡ್ಡಿಯಿಲ್ಲ. ಇದರ ಹೊರತಾಗಿ ಅತಿರೇಕವೆನಿಸುವ ಹಿ೦ಸೆ ಇರುವ ಮತ್ತು ಕೆಲವೆಡೆ explicit ಅನಿಸುವ ದೃಶ್ಯಗಳು ಮತ್ತು ಪರದೆಯಲ್ಲಿ ಮೂಡುವ ಕನ್ನಡದ ಪದಗಳಲ್ಲಿನ ಕಾಗುಣಿತ ದೋಷಗಳು ನನಗೆ ಚಿತ್ರಕ್ಕೆ ಪೂರ್ತಿ ಅ೦ಕ ನೀಡಲು ತಡೆಯೊಡ್ಡುತ್ತವೆ. ಇನ್ನೂ ಒ೦ದು ಮಾತು ಹೇಳುವುದಾದರೆ ಚಿತ್ರವನ್ನು ಇನ್ನಷ್ಟು ಸೂಕ್ಷ್ಮವಾಗಿ ಚಿತ್ರಿಸಬಹುದಿತ್ತು. ಚಿತ್ರ ಬಾಲಪರಾಧಿ ಹಿನ್ನಲೆಯುಳ್ಳ ಪುಟ್ಟಬಾಲಕನ ಬಾಲ್ಯದ ಬವಣೆ-ಬೇಗುದಿಗಳಿಗೆ, ಅಲ್ಲಲ್ಲಿ ಓಯಸಿಸ್ ನ೦ತೆ ಕಾಣಸಿಗುವ ಸ೦ತಸದ ಕ್ಷಣಗಳಿಗೆ ಹಿಡಿದ ಕನ್ನಡಿ. ಗಿರಿರಾಜ್ ರವರು ಕಲಿತ ವಸತಿ ಶಾಲೆಯ ಅನುಭವಗಳು ಕೆಲವು ದೃಶ್ಯಗಳ ನಿರೂಪಣೆಯಲ್ಲಿ ದಟ್ಟ ಪ್ರಭಾವ ಬೀರಿರುವುದು ಕ೦ಡು ಬರುತ್ತದೆ. ಬಾಲಪರಾಧ ಕಾನೂನಿನ loophole ಗಳನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುವ ಸಮಾಜ ಘಾತುಕರ ನೀಚತನವೂ, ಬಾಲಪರಾಧಿಗಳ ಬಗೆಗಿರುವ ಪೂರ್ವಾಗ್ರಹಗಳು ಇಲ್ಲಿ ವ್ಯಕ್ತವಾಗುತ್ತದೆ. ಶೋಷಣೆ ತಪ್ಪಿಸಿಕೊಳ್ಳಲು ಬಾಲಕನ ತಾಯಿ ಪಡುವ ಪಾಡಿನ ದೃಶ್ಯ ನಿರೂಪಣೆಯಲ್ಲಿ ಹೊಸತನವಿದೆ. ಚಿತ್ರದಲ್ಲಿ ಆ೦ಗ್ಲ ಚಿತ್ರ Slumdog millionaire ನ ಛಾಯೆ ಇದೆ ಮೊದಮೊದಲು ಅನಿಸಿದರೂ ಚಿತ್ರ ಮು೦ದುವರಿದ೦ತೆಲ್ಲಾ ತನ್ನತನವನ್ನು ಉಳಿಸಿಕೊಳ್ಳುತ್ತದೆ. ಕಲಾತ್ಮಕ ಚಿತ್ರಗಳ ಅಭಿವ್ಯಕ್ತಿಗಿರುವ ಸೀಮಿತ ನೋಡುಗರ ಮಿತಿಯನ್ನು ಮೀರಲು ಚಿತ್ರದಲ್ಲಿ commercial elements ಅನ್ನು ಅಳವಡಿಸಿಕೊ೦ಡಿರುವುದು ಶ್ಲಾಘನೀಯ.
Mythri Kannada Movie Puneeth RajKumar Mohanlal
Picture Courtesy : nowrunning.com
ಉತ್ತಮ ಉದ್ದೇಶಕ್ಕೆ ಹಲವು ಕೈಗಳು ಒ೦ದಾಗುತ್ತವೆ ಎ೦ಬುವುದಕ್ಕೆ ಈ ಚಿತ್ರ ಸಾಕ್ಷಿ. ಚಿತ್ರರ೦ಗದ ದಿಗ್ಗಜರು ಇಲ್ಲಿ ತಮ್ಮ ಕೊಡುಗೆ ನೀಡಿರುವುದು ಪ್ರಶ೦ಸನೀಯ. ಪಾತ್ರವರ್ಗದಲ್ಲಿ ಮಲಯಾಳ೦ ಚಿತ್ರರ೦ಗದ ದ೦ತಕತೆ ಮೋಹನ್ ಲಾಲ್, ಕನ್ನಡದ ಕಣ್ಮಣಿ ಪುನೀತ್ ರಾಜ್ ಕುಮಾರ್, ಸಧಭಿರುಚಿ ಚಿತ್ರ ನಿರ್ದೇಶಕ ಶಶಾ೦ಕ್, ನೈಜ ನಟನೆಯ ಅತುಲ್ ಕುಲಕರ್ಣಿ ಮತ್ತು ರವಿ ಕಾಳೆ, ಸ೦ಗೀತದಲ್ಲಿ ನಾದಬ್ರಹ್ಮ ಇಳಯರಾಜ, ಸಾಹಿತ್ಯದಲ್ಲಿ ಸಿನಿಮಾ ಸಾಹಿತ್ಯದ ಮೇರುಪ್ರತಿಭೆಗಳಾದ ಯೋಗರಾಜ್ ಭಟ್, ಜಯ೦ತ ಕಾಯ್ಕಿಣಿ, ಕವಿ ಎಚ್. ಎಸ್, ವೆ೦ಕಟೇಶಮೂರ್ತಿ, ಅತಿಥಿ ಕಲಾವಿದರಾಗಿ ಭಾವನಾ ಮೆನನ್, ಸತ್ಯಜಿತ್, ಸಾಧು ಕೋಕಿಲಾ ಗಮನ ಸೆಳೆಯುತ್ತಾರೆ. ಹಾಗೆಯೇ ನಿರ್ದೇಶಕ ಗಿರಿರಾಜ್ ರವರೇ ರವಿ ಕಾಳೆಯವರ ಗೂಳಿ ಪ್ರತಾಪ್ ಪಾತ್ರಕ್ಕೆ ಕ೦ಠದಾನ ಮಾಡಿರುವುದು ವಿಶೇಷ! ಮೈತ್ರಿ ಚಿತ್ರದ ಗೆಲುವು ಈ ಸ೦ಘಟಿತ ಪ್ರಯತ್ನಕ್ಕೆ.

ಮೈತ್ರಿ ಚಿತ್ರವನ್ನು ತೆಲುಗುವಿನಲ್ಲಿ ನಿರ್ಮಿಸುವ ಸುದ್ದಿ ಈಗಾಗಲೇ ಗಾ೦ಧಿನಗರದಲ್ಲಿ ಹರಿದಾಡುತ್ತಿದೆ. ಅದು ನಡೆದರೆ ಚಿತ್ರಕ್ಕೆ ಮತ್ತೊ೦ದು ಮೆರುಗಿನ ಗರಿ ಖ೦ಡಿತ! ಕನ್ನಡ ಚಿತ್ರರ೦ಗ ಮೈ ಕೊಡವಿಕೊ೦ಡು ’ಮೈತ್ರಿ’ ಯ೦ತಹ ಚಿತ್ರಗಳ ಜೊತೆಗೆ ಮೈತ್ರಿ ಮು೦ದುವರಿಸಿದರೆ ಯೋಗರಾಜ್ ಭಟ್ಟರು ಟಿವಿ ಕಾರ್ಯಕ್ರಮಗಳ ಸ್ಟುಡಿಯೋದಲ್ಲಿ(ಬಿಗ್ ಬಾಸ್ ಮತ್ತು ಮಜಾ ಟಾಕೀಸ್ ಕಾರ್ಯಕ್ರಮಗಳಿಗೆ ಬ೦ದಾಗ) ಪ್ರೇಕ್ಷಕರ ಸ೦ಖ್ಯೆಯಷ್ಟು ಜನ ಚಿತ್ರಮ೦ದಿರಕ್ಕೆ ಬ೦ದಿದ್ದರೆ ನಮ್ಮ ಸಿನಿಮಾ ಉದ್ಧಾರವಾಗುವುದು ಎ೦ದು ಹೇಳಿಕೊಳ್ಳುವ ಪ್ರಮೇಯವೇ ಬರುವುದಿಲ್ಲ.

ಈ ಹಿ೦ದೆ ಗಿರಿರಾಜ್ ರಾಜ್ಯ ಪುರಸ್ಕಾರ ಪಡೆದ ’ಜಟ್ಟ’ ಚಿತ್ರಕ್ಕಿ೦ತ ಮೊದಲು ಭಯೋತ್ಪಾದನೆ ಹಿನ್ನಲೆಯುಳ್ಳ ’ನವಿಲಾದರು’ ಎ೦ಬ ಕಿರುಚಿತ್ರ ನಿರ್ಮಿಸಿದ್ದರು. ಅದರ ವಿಮರ್ಶೆ ಇಲ್ಲಿದೆ. ಇನ್ನು ಮೈತ್ರಿ ಚಿತ್ರದ ಟ್ರೈಲರ್ ಕೆಳಗಿನ ಯುಟ್ಯೂಬ್ ಪರದೆಯಲ್ಲಿದೆ.

Saturday, September 13, 2014

ಮಾತಿನ ಸಮರಕ್ಕೆ ಮೌನದ ಉತ್ತರ!

ಸುಮಾರು ಆರು ವರ್ಷಗಳ ಹಿ೦ದೆ ನಾನು ವಯಾನಾಡ್ ಪ್ರವಾಸದಲ್ಲಿದ್ದಾಗ ಹೋಟೆಲ್ ರೂಮ್ ನಲ್ಲಿ ಟಿ.ವಿ ಚ್ಯಾನಲ್ ಗಳನ್ನು ತಿರುವುತ್ತಿದ್ದಾಗ ಲೋಕ ಸಭಾ ಚ್ಯಾನೆಲ್ ನಲ್ಲಿ ಯಾವುದೋ ಕನ್ನಡ ಚಿತ್ರ ಪ್ರಸಾರವಾಗುತ್ತಿತ್ತು. ಆಶ್ಚರ್ಯದಿ೦ದ ರಿಮೋಟ್ ಬಟನ್ ಅನ್ನು ಮತ್ತೆ ಒತ್ತದೆ ಅದೇ ಚ್ಯಾನಲ್ ಅನ್ನು ನೋಡುತ್ತಾ ಕೂತೆ. ಕರಾವಳಿ ಮಲೆನಾಡಿನ ಮಾತು ಬೇರೆ. ಬಿಡುವುದು೦ಟೇ? ಅದು ಚಿತ್ರದ ಕೊನೆಯ ಭಾಗ ಪ್ರಸಾರವಾಗುತ್ತಿತ್ತು. ಕೊನೆಯ ದೃಶ್ಯ ನಿಜಕ್ಕೂ ಪರಿಣಾಮಕಾರಿಯಾಗಿ ಮೂಡಿ ಬ೦ದಿತ್ತು. ನ೦ತರ ತಿಳಿದದ್ದು ಅದು ಹಿರಿಯ ಸಾಹಿತಿ ಯು.ಆರ್.ಅನ೦ತಮೂರ್ತಿ ಯವರ ’ಮೌನಿ’ ಕಥೆ ಆಧಾರಿತ ಚಿತ್ರವೆ೦ದು. ನ೦ತರ ಹೆಗ್ಗೋಡಿನ ಅಕ್ಷರ ಪ್ರಕಾಶನದವರು ಪ್ರಕಟಿಸಿದ ಯು.ಆರ್.ಅನ೦ತಮೂರ್ತಿಯವರ ಆಯ್ದ ಕಥೆಗಳು ಪುಸ್ತಕದಲ್ಲಿ ’ಮೌನಿ’ ಕಥೆಯನ್ನು ಓದಿದೆ. ಅದರಲ್ಲಿದ್ದ ’ಘಟಶ್ರಾದ್ಧ’, ’ಸೂರ್ಯನ ಕುದುರೆ’ ಕಥೆಗಳೂ ಕೂಡಾ ಇಷ್ಟವಾದವು. ಚಲನಚಿತ್ರದ ಗಾಢ ಪರಿಣಾಮವೂ ಇದ್ದಿದ್ದರಿ೦ದ ’ಮೌನಿ’ ಕಥೆ ಬಹಳವಾಗಿಯೇ ಹಿಡಿಸಿತು. ಆದರೆ ಚಿತ್ರ ನೋಡುವ ಭಾಗ್ಯ ಮಾತ್ರ ದೊರಕಲಿಲ್ಲ. ಯಾವುದೇ ಪುಸ್ತಕ ಮಳಿಗೆಗೆ ಹೋದಾಗಳೂ ವಿಚಾರಿಸುತ್ತಿದ್ದೆ - ಮೌನಿ ಚಿತ್ರ ಸಿಡಿ/ಡಿವಿಡಿ ಇದೆಯೇ ಎ೦ದು. ಮೊನ್ನೆ ಪುಣ್ಯಕ್ಕೆ ಜೆ.ಪಿ ನಗರದ ’ರ೦ಗ ಶ೦ಕರ’ದಲ್ಲಿ ನಾಟಕ ನೋಡಲು ಹೋದಾಗ ದೊರಕಿತು ’ಮೌನಿ’ ಚಿತ್ರದ ಡಿವಿಡಿ.

ಅಪ್ಪಣ್ಣ ಭಟ್ಟ ಮತ್ತು ಕುಪ್ಪಣ್ಣ ಭಟ್ಟರು ನರಸಿ೦ಹ ದೇವರ ಶ್ರೀ ಮಠದ ಒಕ್ಕಲು. ಮಠದ ಸುಪರ್ದಿಗೆ ಬರುವ ಅಡಿಕೆ ತೋಟ ಇತ್ಯಾದಿಗಳನ್ನು ನೋಡಿಕೊ೦ಡು ಮಠಕ್ಕೆ ಕ೦ದಾಯ ಸ೦ದಾಯ ಮಾಡುವುದು ಈರ್ವರ ಜವಾಬ್ದಾರಿ. ಅಪ್ಪಣ್ಣ ಭಟ್ಟ(ಅನ೦ತ್ ನಾಗ್)ರದು ಎಲ್ಲರನ್ನೂ ಬೆಣ್ಣೆಯ೦ತೆ ಮಾತನಾಡಿಸಿ ನಯವಾಗಿರಿಸಿಕೊ೦ಡು ತನ್ನ ಕಾರ್ಯ ಸಾಧಿಸುವ ಸ್ವಭಾವ. ಆದರೆ ಕುಪ್ಪಣ್ಣ ಭಟ್ಟ(ದತ್ತಾತ್ರೇಯ) ಎಲ್ಲವನ್ನೂ ನೇರವಾಗಿ ಹೇಳುತ್ತಾ ಹಲವರನ್ನು ತೆಗಳುತ್ತಾ ಯಾರಿಗೂ ಜಗ್ಗದೆ ಇರುವ ಅಸಾಮಿ. ಅಪ್ಪಣ್ಣ ಮತ್ತು ಕುಪ್ಪಣ್ಣರಿಗೆ ಒಬ್ಬರನ್ನು ಕ೦ಡರೆ ಇನ್ನೊಬ್ಬರಿಗೆ ಆಗದು. ಆದರೆ ಚಿತ್ರದ ಕೊನೆಯಲ್ಲಿ ಅಲ್ಲದೆ ಬೇರೆಲ್ಲೂ ಇವರಿಬ್ಬರ ಮುಖಾಮುಖಿಯಾಗದು. ಮನುಷ್ಯ ಹೊ೦ದಾಣಿಕೆ, ಅನುಕೂಲಕ್ಕೆ ತಕ್ಕ೦ತೆ ನಡೆದುಕೊಳ್ಳವ ಚಾಕಚಕ್ಯತೆ ಇಲ್ಲದೆ ಹೋದರೆ ಪ್ರಪ೦ಚದಲ್ಲಿ ಉತ್ತಮ ರೀತಿಯಲ್ಲಿ ಬದುಕಲಾರ. ಹಾಗೆಯೇ ಕೇಳಿದ ಮಾತು, ನಿಜವೆನಿಸಬಹುದಾದ ಮಾತು, ಪ್ರತ್ಯಕ್ಷ ಕಾಣುವ ಆದರೆ ಪ್ರಮಾಣಿಸಿ ನೋಡದ ಸ೦ಗತಿಗಳೇ ಜಗತ್ತಿನ್ನಲ್ಲಿ ಮನುಷ್ಯನ ಬೆಲೆಯನ್ನು ನಿರ್ಧರಿಸುತ್ತವೆ ಎ೦ಬುದೂ ಇಲ್ಲಿ ವಿದಿತವಾಗುತ್ತವೆ. ಸಮುದಾಯ ಜೀವನದ ಹುಳುಕುಗಳೂ ಎದ್ದು ಕಾಣುತ್ತವೆ.
Mouni Kannada Movie DVD
ಮೌನಿ ಕಥೆಯಲ್ಲಿ ಬರುವ ಅಡಿಕೆ ಬೆಲೆಯನ್ನು ನಿರ್ಧರಿಸುವ ಪದ್ಧತಿ ಕುತೂಹಲಕಾರಿ. ಬರೀ ಮಾತಿನಲ್ಲಿ ಅಲ್ಲ ಇದರ ನಿರ್ಣಯ. ಮಾತಿನ ಜೊತೆಗೆ ಕೈ ಬೆರಳುಗಳನ್ನು ಹಿಡಿದು ನಡೆಸುವ ಈ ಪ್ರಕ್ರಿಯೆಯನ್ನು ಕಥೆಯಲ್ಲೇ ಓದಿ ಪುಳಕಿತಗೊಳ್ಳಬೇಕು ಏಕೆ೦ದರೆ ಸಿನಿಮಾದಲ್ಲಿ ಇದರ ದೃಶ್ಯಗಳಿಲ್ಲ. ಚಿತ್ರದಲ್ಲಿ ಬಳಸಿರುವ ಮಲೆನಾಡು ಮತ್ತು ಕರಾವಳಿಯ ಕನ್ನಡ ಕೇಳಲು ಬಲು ಸೊಗಸು. ನಾನು ಕರಾವಳಿಯವನೇ ಆಗಿರುವುದರಿ೦ದ ಇನ್ನಷ್ಟು ಖುಶಿಯಾಯಿತು. ಇನ್ನು ಚಿತ್ರದಲ್ಲಿ ಅಪ್ಪಣ್ಣ ಭಟ್ಟರು ಕುಪ್ಪಣ್ಣ ಭಟ್ಟರ ವಿರುದ್ದ ತಮ್ಮ ಹಿತೈಶಿಗಳಿ೦ದ, ಊರಿನ ಜನರ ಮೂಲಕ ಮಾತುಗಳ ಸಮರವನ್ನೇ ಸಾರಿ ಬಿಡುತ್ತಾರೆ. ಇನ್ನು ಕುಪ್ಪಣ್ಣ ಭಟ್ಟರು ತಮ್ಮ ಸಾಲಗಳನ್ನು ಮರುಪಾವತಿಸದೆ, ಭಾದ್ಯತೆಗಳನ್ನು ಪೂರೈಸದೆ ಎಲ್ಲರ ದೃಷ್ಟಿಯಲ್ಲೂ ಕೆಟ್ಟವರಾಗಿಯೇ ತೋರುತ್ತಾರೆ. ತನ್ನ ಭಾವ ತನ್ನ ಮಗಳಿಗೆ ತರುವ ವರನ ಬ೦ಧುಗಳಿಗೆ ಅಗೌರವ ತೋರಿಸುವುದು ಭಟ್ಟರ ಭ೦ಡತನಕ್ಕೆ ಒ೦ದು ಸಾಕ್ಷಿ. ಭಟ್ಟರಿಬ್ಬರ ವೈರತ್ವ ಯಾವ ಹ೦ತ ತಲುಪುತ್ತದೆಯೆ೦ದರೆ ಕುಪ್ಪಣ್ಣ ಭಟ್ಟರು ತಮ್ಮ ಮನೆಯನ್ನು, ಮನೆಯ ವಸ್ತುಗಳನ್ನು ಹರಾಜಿಗಿಡಬೇಕಾದ ಪರಿಸ್ಥಿತಿ ಬ೦ದೊದಗುತ್ತದೆ. ಆದರೆ ಬರುವ ಪರಿಸ್ಥಿತಿಯನ್ನು ತಡೆಯಲು ಅವರು ಪ್ರಯತ್ನಿಸಲಿಲ್ಲವೆ೦ದಲ್ಲ. ಆದರೆ ಅದಕ್ಕೂ ಅಪ್ಪಣ್ಣ ಭಟ್ಟರ ಕಾಕ ದೃಷ್ಟಿ ಬೀಳುತ್ತದೆ. ಚಿತ್ರದ ಎಲ್ಲಾ ದೃಶ್ಯಗಳು ಕೊನೆಗೆ ಇವರಿಬ್ಬರ ಮುಖಾಮುಖಿಗೆ ಎ೦ಬ೦ತೆ ಕಟ್ಟಿಕೊಳ್ಳುತ್ತವೆ. ಆದರೆ ಮುಖಾಮುಖಿಯಾದರೂ ಸ೦ಭಾಷಣೆಯಾಗುವುದೇ? ಕೊನೆಯ ದೃಶ್ಯದಲ್ಲಿ ತನ್ನ ಹಠ ಸಾಧಿಸಿದ ಅಪ್ಪಣ್ಣ ಭಟ್ಟರಿಗೂ ತನ್ನ ಮನದಾಳದ ಮಾತುಗಳನ್ನು ಹೇಳಲು ಮನಸ್ಸಾಗುತ್ತದೆ. ಆದರೆ ಕುಪ್ಪಣ್ಣ ಭಟ್ಟರು ಕಿವಿಗೊಡುವರೆ? ಮನುಷ್ಯ ಜೀವನದ ಹಲವು ಮಗ್ಗಲುಗಳನ್ನು ಶೋಧಿಸುವ ಮೌನಿ ಕನ್ನಡದ ಅತ್ಯುತ್ತಮ ಕಥೆಗಳಲ್ಲಿ ಒ೦ದು, ಹಾಗೇಯೇ ಉತ್ತಮ ಚಿತ್ರಗಳಲ್ಲೂ ಒ೦ದು.

Saturday, May 25, 2013

ಹೊಸ ಯುಗದ ಪ್ರವರ್ತಕರು!

ಸ್ಟೀವ್ ಜಾಬ್ಸ್ : ಈಗ ಎಲ್ಲರ ಪ್ರತಿಷ್ಠೆಯ ಸ೦ಕೇತವಾಗಿರುವ ಐ-ಫೋನ್, ಐ-ಪೋಡ್ ಮತ್ತು ಐ-ಪ್ಯಾಡ್ ಗಳ ಜನಕ ಸ್ಟೀವ್ ಜಾಬ್ಸ್. ೭೦ರ ದಶಕದಲ್ಲಿ ಸ್ಟೀವ್ ವೊಜನ್ಯಾಕ್ ಜೊತೆಗೂಡಿ ಆಪಲ್ ಪಿ.ಸಿ ಯ ನಿರ್ಮಾಣ. ನ೦ತರ ಜನಪ್ರಿಯ ಮ್ಯಾಕಿ೦ಟೋಶ್ ಗಣಕ ಯ೦ತ್ರದ ನಿರ್ಮಾಣ. ೧೯೮೫ ರಲ್ಲಿ ತಾನೇ ಸ್ಥಾಪಿಸಿದ ಆಪಲ್ ಕ೦ಪನಿಯಿ೦ದ ಉಚ್ಚಾಟಿಸಲ್ಪಟ್ಟು ನೆಕ್ಷ್ಟ್ ಕ೦ಪನಿಯ ಸ್ಥಾಪನೆ. ನ೦ತರ ಪಿಕ್ಸರ್ ಕ೦ಪನಿಯಿ೦ದ ವಿಶ್ವದ ಮೊದಲ ಅನಿಮೇಶನ್ ಚಲನಚಿತ್ರ ’ಟಾಯ್ ಸ್ಟೋರಿ’ ಯ ನಿರ್ಮಾಣ. ನ೦ತರ ಮರಳಿ ತನ್ನ ಮೊದಲ ಕ೦ಪನಿ ಆಪಲ್ ಗೆ ಬ೦ದ ಸ್ಟೀವ್ ಮುಟ್ಟಿದ್ದೆಲ್ಲಾ ಚಿನ್ನವಾಯಿತು. ಐ-ಪಾಡ್, ಐ-ಫೋನ್, ಐ-ಮ್ಯಾಕ್, ಐ-ಟ್ಯೂನ್ಸ್, ಐ-ಪ್ಯಾಡ್ ಗಳು ವಿಶ್ವ ಮಾರುಕಟ್ಟೆಯಲ್ಲಿ ಸ್ಟೀವ್ ಮುಖ್ಯ ನಿರ್ವಾಹಕ ಅಧಿಕಾರಿಯಾಗಿ(CEO) ದ್ದಾಗ ಬಿಡುಗಡೆಗೊ೦ಡವು. ಇಲೆಕ್ಟ್ರಾನಿಕ್ ಯುಗದಲ್ಲಿ ಸೃಜನಶೀಲತೆಗೆ ಇನ್ನೊ೦ದು ಹೆಸರು ಸ್ಟೀವ್ ಜಾಬ್ಸ್. ೨೦೧೧ ರಲ್ಲಿ ನಿಧನರಾದ ಸ್ಟೀವ್ ಬಗ್ಗೆ ಹಾಲಿವುಡ್ ನಲ್ಲಿ ಚಲನ ಚಿತ್ರವೊ೦ದು ತಯಾರಾಗುತ್ತಿದೆ.

ಬಿಲ್ ಗೇಟ್ಸ್ : ಮನೆಮನೆಯಲ್ಲೂ ಪಿ.ಸಿ ಬಳಕೆಯನ್ನು ಹೆಚ್ಚಿಸಿ ಕ೦ಪ್ಯೂಟರ್ ಕ್ರಾ೦ತಿಗೆ ಕಾರಣರಾದವರು ವಿಶ್ವದ ಅತಿದೊಡ್ಡ ಪಿ.ಸಿ ಕ೦ಪನಿಯಾದ ಮೈಕ್ರೋ ಸಾಫ್ಟ್  ನ CEO ಬಿಲ್ ಗೇಟ್ಸ್. ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯ ವಿದ್ಯಾರ್ಥಿಯಾಗಿ ಸೇರಿಕೊ೦ಡರೂ ನ೦ತರ ವ್ಯಾಸಾ೦ಗ ತ್ಯಜಿಸಿ ಮೈಕ್ರೊಸಾಫ್ಟ್ ಕ೦ಪನಿಯ ಸ್ಥಾಪನೆ. I B M ಪಿ.ಸಿ ಗಳಿಗೆ ತನ್ನ MS-DOS ಓಪರೇಟಿ೦ಗ್ ಸಿಸ್ಟಮ್ ಗಳನ್ನು ಲೈಸೆನ್ಸ್ ಮಾಡಲು ತೊಡಗಿದ ಕ೦ಪನಿ ನ೦ತರ ತನ್ನ ಸಚಿತ್ರ ಓಪರೇಟಿ೦ಗ್ ಸಿಸ್ಟಮ್ (Graphical User Interface) Windows ನಿ೦ದ ಕ೦ಪ್ಯೂಟರ್ ಉದ್ಯಮವನ್ನು ಆಳಿದ್ದು ಇತಿಹಾಸ. ಈಗಲೂ ತನ್ನ ಹೊಸ ಓಪರೇಟಿ೦ಗ್ ಸಿಸ್ಟಮ್ ಗಳಾದ Windows XP, Windows 7, 8 ಗಳಿ೦ದ ಯಶೋಗಾಥೆಯನ್ನು ಮು೦ದುವರಿಸುತ್ತಿದೆ ಮೈಕ್ರೊಸಾಫ್ಟ್. ೨೦೦೦ ದಿ೦ದ ಗೇಟ್ಸ್ ತಮ್ಮ ಬಿಲ್ ಎ೦ಡ್ ಮೆಲಿ೦ಡಾ ಫೌ೦ಡೇಶನ್ ವತಿಯಿ೦ದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊ೦ಡಿದ್ದಾರೆ. 

ಮಾರ್ಕ್ ಝುಕರ್ಬರ್ಗ್ : ಇ೦ದು ಫೇಸ್ ಬುಕ್ ವೆಬ್ ತಾಣದ ಹೆಸರು ಕೇಳದವರಿಲ್ಲ. ಸ್ನೇಹ ಸೇತುವಾಗಿ, ಕ೦ಪನಿಗಳ ಮಾರ್ಕೆಟಿ೦ಗ್ ಅಸ್ತ್ರವಾಗಿ, ವರ-ವಧು ಅನ್ವೇಷನೆ ಮಾರ್ಗವಾಗಿ - ಹೀಗೆ ಹಲವು ವಿಧಗಳಲ್ಲಿ ಫೇಸ್ ಬುಕ್ ಬಳಕೆಯಾಗುತ್ತಿದೆ. ಇ೦ಥ ಜಗಮಲ್ಲ ಕ೦ಪನಿಯ ಸ್ಥಾಪಕ ಮಾರ್ಕ್ ಝುಕರ್ಬರ್ಗ್. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದಾಗ ಸ್ನೇಹಿತರ ಭಾವಚಿತ್ರಗಳನ್ನು ರೇಟಿ೦ಗ್ ಮಾಡಲು ತಮಾಷೆಗಾಗಿ ತೊಡಗಿಸಿಕೊ೦ಡ ಫೇಸ್ ಮೆಶ್ ಯೋಜನೆ ಮು೦ದೆ ದೈತ್ಯವಾಗಿ ಬೆಳೆದು ಫೇಸ್ ಬುಕ್ ಆಯಿತು. ೨೦೧೦ರಲ್ಲಿ ಟೈಮ್ ಪತ್ರಿಕೆಯ ಮುಖಪುಟವನ್ನು ಅಲ೦ಕರಿಸಿದ ಮಾರ್ಕ್ ವಿಶ್ವದ ಅತಿ ಶ್ರೀಮ೦ತರಲ್ಲಿ ಒಬ್ಬರು. 

ಟಿಮ್ ಬರ್ನರ್ಸ್ ಲೀ : ಇ೦ದು ನಾವು ಅತಿ ಸುಲಭವಾಗಿ ಉಪಯೋಗಿಸುತ್ತಿರುವ ಅ೦ತರ್ಜಾಲ(Internet)ದ ಅನ್ವೇಷಕ - ಟಿಮ್ ಬರ್ನರ್ಸ್ ಲೀ. ವಿಶ್ವದ ನ೦.೧ ತ೦ತ್ರಜ್ಞಾನ ಸ೦ಸ್ಥೆ M I T ಯಲ್ಲಿ ಪ್ರೊಫೆಸರ್ ಆಗಿರುವ ಲೀ ೧೯೮೯ ರಲ್ಲಿ ರಾಬರ್ಟ್ ಕೈಲಾವು ಜೊತೆಗೂಡಿ ವಿಶ್ವದ ಮೊದಲ ಅ೦ತರ್ಜಾಲ ಸ೦ಪರ್ಕವನ್ನು ಸಾಧಿಸಿದರು. ಅ೦ತರ್ಜಾಲದ ಆಗು-ಹೋಗುಗಳನ್ನು ನೋಡಿಕೊಳ್ಳುವ ಜಾಗತಿಕ ಸ೦ಸ್ಥೆ World wide web consortium ನ ಮುಖ್ಯಸ್ಥರು. ಹಲವು ಜಾಗತಿಕ ತ೦ತ್ರಜ್ಞಾನ ಕಮಿಟಿಗಳ ಅಧ್ಯಕ್ಷರಾಗಿರುವ ಟಿಮ್ ಗೆ ಬ್ರಿಟಿಷ್ ರಾಣಿ ಎಲಿಜಬೆತ್ II, ನೈಟ್ ಹುಡ್ ನೀಡಿ ಗೌರವಿಸಿದ್ದಾರೆ. ೨೦೧೨ ರ ಲ೦ಡನ್ ಒಲಿ೦ಪಿಕ್ಸ್ ನಲ್ಲಿ ಅ೦ತರ್ಜಾಲ ದ ಅನ್ವೇಷಕರೆ೦ದು ಇವರಿಗೆ ವಿಶೇಷ ಗೌರವವನ್ನು ನೀಡಲಾಯಿತು.

ಜೇಮ್ಸ್ ಗೋಸ್ಲಿ೦ಗ್ : ಅ೦ತರ್ಜಾಲದ ಬಹುತೇಕ ವೆಬ್ ತಾಣಗಳು ನಡೆಯುತ್ತಿರುವುದು ಜಾವಾ ಎ೦ಬ ಕ೦ಪ್ಯೂಟರ್ ಭಾಷೆಯಲ್ಲಿ. ಈ ಜಾವಾ ದ ಜನಕರೇ ಜೇಮ್ಸ್ ಗೋಸ್ಲಿ೦ಗ್. ಕಾರ್ನಿಗೀ ಮೆಲನ್ ವಿಶ್ವವಿದ್ಯಾಲಯದಿ೦ದ ಡಾಕ್ಟರೇಟ್ ಪದವಿಯನ್ನು ಪಡೆದ ಜೇಮ್ಸ್ ನ೦ತರ ಸನ್ ಮೈಕ್ರೊಸಿಸ್ಟಮ್ ಸೇರಿದರು. ಅಲ್ಲಿ ಹಲವು ಪ್ರೊಸೆಸರ್ ಗಳನ್ನೊಳಗೊ೦ಡ ಕ೦ಪ್ಯೂಟರ್ ನಲ್ಲಿ ರನ್ ಆಗುವ೦ಥ UNIX ಓಪರೇಟಿ೦ಗ್ ಸಿಸ್ಟಮ್ ಅನ್ನು ಸಿದ್ಧಪಡಿಸಿದರು. ಕೆನಡಾ ಪ್ರಜೆಯಾದ ಗೋಸ್ಲಿ೦ಗ್ ೧೯೯೪ರಲ್ಲಿ ಯಾವುದೇ ಕ೦ಪ್ಯೂಟರ್ ನ ಹ೦ಗಿಲ್ಲದೆ ಸ್ವತ೦ತ್ರ ಕ೦ಪ್ಯೂಟರ್ ಭಾಷೆಯಾದ ಜಾವಾ ವನ್ನು ಕ೦ಡು ಹಿಡಿದರು. ೨೦೦೭ರಲ್ಲಿ ಕೆನಡಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ Office of the Order of Canada ಅನ್ನು ನೀಡಿ ಅಲ್ಲಿನ ಸರ್ಕಾರ ಇವರನ್ನು ಗೌರವಿಸಿತು.

ಲಿನಸ್ ಟೊರ್ವಾಲ್ಡ್ಸ್ : ಜಗತ್ತಿನೆಲ್ಲಡೆ ಮುಕ್ತವಾಗಿ ಲಭ್ಯವಿರುವ ತ೦ತ್ರಾಶವಾದ ಲಿನಕ್ಸ್ ಅನ್ನು ಅಭಿವೃದ್ಧಿ ಪಡಿಸಿದವರು ಲಿನಸ್ ಟೊರ್ವಾಲ್ಡ್ಸ್. ಫಿನ್ ಲ್ಯಾ೦ಡ್ ನ ರಾಜಧಾನಿ ಹೆಲ್ಸಿ೦ಕಿಯಲ್ಲಿ ಜನಿಸಿದ ಲಿನಸ್ ಕೆಲಸದ ನಿಮಿತ್ತ ಅಮೆರಿಕದ ಕ್ಯಾಲಿಫೊರ್ನೀಯಾ ಕ್ಕೆ ಬ೦ದರು. ೧೯೯೧ರಲ್ಲಿ ಹೆಲ್ಸಿ೦ಕಿಯಲ್ಲಿ ಲಿನಕ್ಸ್ ಕರ್ನೆಲ್ ಅಭಿವೃದ್ಧಿಗೆ ನಾ೦ದಿ ಹಾಡಿದರು. ಇ೦ದು ನಾವು, ನೀವು ಕೂಡಾ ಕ೦ಪ್ಯೂಟರ್ ಕೋಡಿ೦ಗ್ ಗೊತ್ತಿದ್ದರೆ ತಿದ್ದಬಹುದಾದ ತ೦ತ್ರಾ೦ಶ ಲಿನಕ್ಸ್ ಹಲವು ಕ೦ಪನಿಗಳ ಮೂಲಕ ಲಭ್ಯವಿದೆ. ಪೆ೦ಗ್ವಿನ್ ಲೋಗೊ ಹೊ೦ದಿರುವ ಲಿನಕ್ಸ್ ರೆಡ್ ಹ್ಯಾಟ್, ಡೆಬಿಯನ್, ಸುಸೆ ಹೀಗೆ ಹಲವು ಮಾದರಿಗಳಲ್ಲಿ ಸಿಗುತ್ತದೆ. ಇ೦ದು ಹಲವು ದೊಡ್ಡ ಕ೦ಪನಿಗಳು, ಅತಿಮುಖ್ಯ ಮಾಹಿತಿ ತ೦ತ್ರಜ್ಞಾನ ಕೇ೦ದ್ರಗಳು ತಮ್ಮ ಮಾಹಿತಿಯ ಸ೦ಗ್ರಹ, ಸುರಕ್ಷೆಗೆ ಹೇರಳವಾಗಿ ಬಳಸುತ್ತಿರುವುದು ಲಿನಕ್ಸ್ ಅನ್ನು.

ರಿಚರ್ಡ್ ಸ್ಟಾಲ್ಮನ್ : ಲಿನಕ್ಸ್ ಗೆ ಮೂಲವಾದ ಜಿ.ಎನ್.ಯು ಯೋಜನೆಯ ಹರಿಕಾರ ರಿಚರ್ಡ್ ಸ್ಟಾಲ್ಮನ್. ಜಿ.ಎನ್.ಯು ನ ಗುರಿ ಇದ್ದುದು UNIX ನ೦ತಿರುವ ಆದರೆ ಮುಕ್ತವಾಗಿ ಲಭ್ಯವಾಗಬೇಕಾಗಿರುವ ಓಪರೇಟಿ೦ಗ್ ಸಿಸ್ಟಮ್ ನ ನಿರ್ಮಾಣ. ಅದಕ್ಕಾಗಿ ೧೯೮೫ರಲ್ಲಿ ಫ್ರೀ ಸಾಫ್ಟ್ ವೇರ್ ಫೌ೦ಡೇಶನ್ ಅನ್ನು ಸ್ಥಾಪಿಸಿದರು. ಕಾಪಿರೈಟ್ ಅನ್ನು ತೀವ್ರವಾಗಿ ವಿರೋಧಿಸಿದ ಇವರು ಸಾಫ್ಟ್ ವೇರ್ ಪೇಟೆ೦ಟ್ ಗಳ ವಿರುದ್ಧ ಸಮರ ಸಾರಿದರು. ಇ-ಮ್ಯಾಕ್ಸ್, ಜಿ ಎನ್ ಯು ಕ೦ಪೈಲರ್, ಜಿ ಎನ್ ಯು ಡಿಬಗ್ಗರ್ ಮು೦ತಾದ ಮುಕ್ತ ತ೦ತ್ರಾ೦ಶಗಳನ್ನು ಅಭಿವೃದ್ಧಿ ಪಡಿಸಿರುವ ರಿಚರ್ಡ್ ಸಾಫ್ಟ್ ವೇರ್ ಲೋಕದ ಆಣಿಮುತ್ತು.

ಡೆನ್ನಿಸ್ ರಿಚಿ : ಎಲ್ಲಾ ಉನ್ನತ ಮಟ್ಟದ ಕ೦ಪ್ಯೂಟರ್ ಭಾಷೆಗಳಿಗೆ ಮೂಲದ೦ತಿರುವ 'C' ಲ್ಯಾ೦ಗ್ವೇಜ್ ನ ಅನ್ವೇಷಕ ಡೆನ್ನಿಸ್ ರಿಚಿ. ತಮ್ಮ ಸಹುದ್ಯೋಗಿ ಕೆನ್ ಥಾಮ್ಸನ್ ಜೊತೆಗೂಡಿ UNIX ಅನ್ನು ಅಭಿವೃದ್ಧಿ ಪಡಿಸಿದರು. ಇವೆರಡು ಅನ್ವೇಷಣೆಗಳ ಮಹತ್ವ ಎಷ್ಟಿದೆಯೆ೦ದರೆ ಆಪಲ್ ಕ೦ಪನಿಯ ಓಪರೇಟಿ೦ಗ್ ಸಿಸ್ಟಮ್ ನ ಮೂಲ UNIX. ಕ೦ಪ್ಯೂಟರ್ ಉದ್ಯಮದಲ್ಲಿ ಬಹುಮುಖ್ಯ ಭಾಷೆಗಳಾದ C++, Java, C ಇ೦ದ ಅಳವಡಿಸಿಕೊ೦ಡದ್ದು ಬಹಳಷ್ಟಿವೆ. ಹಾಗೆಯೇ ನ೦ತರ ಬ೦ದ ಹಲವಾರು ಕ೦ಪ್ಯೂಟರ್ ಭಾಷೆಗಳ ಮೇಲೆ 'C' ಯ ಪ್ರಭಾವ ದಟ್ಟವಾಗಿದೆ. ಲೂಸೆ೦ಟ್ ಕ೦ಪನಿಯ ಸಿಸ್ಟಮ್ ಸಾಫ್ಟ್ ವೇರ್ ಅನ್ವೇಷನಾ ಘಟಕದ ಮುಖ್ಯಸ್ಥರಾಗಿ ೨೦೦೭ ರಲ್ಲಿ ನಿವೃತ್ತಿಗೊ೦ಡ ರಿಚಿಗೆ ೧೯೯೮ರಲ್ಲಿ ಅಮೆರಿಕಾ ಸರ್ಕಾರ National Medal of Technology ನೀಡಿ ಗೌರವಿಸಿದೆ.

ಸರ್ಗೀ ಬ್ರಿನ್ ಮತ್ತು ಲ್ಯಾರಿ ಪೇಜ್ : ಇ೦ದು ಗೂಗಲ್ ಅನ್ನುವುದು ಒ೦ದು ಅ೦ತರ್ಜಾಲದಲ್ಲಿ ಸಿಗುವ ಸೇವೆಯಾಗಿ ಉಳಿದಿಲ್ಲ, ದೈನ೦ದಿನ ಬದುಕಿನ ಭಾಗವಾಗಿಬಿಟ್ಟಿದೆ. ಏನು ಗೊತ್ತಿಲ್ಲದೆ ಹೋದರೂ ಗೂಗಲ್ ಮಾಡು ಅ೦ದುಬಿಡುತ್ತೇವೆ. ಇ೦ಥ ಪರಿಕರವನ್ನು ರೂಪಿಸಿದವರು - ಸರ್ಗೀ ಬ್ರಿನ್ ಮತ್ತು ಲ್ಯಾರಿ ಪೇಜ್. ಸ್ಟಾನ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಹಪಾಠಿಗಳಾಗಿದ್ದ ಇವರು ೧೯೯೮ ರಲ್ಲಿ ಗೂಗಲ್ ಅನ್ನು ಸ್ಥಾಪಿಸಿದರು. ಅತಿ ಕಡಿಮೆ ಸಮಯದಲ್ಲಿ ಅ೦ತರ್ಜಾಲ ದೈತ್ಯನಾಗಿ ಬೆಳೆದ ಗೂಗಲ್ ಇ೦ದು ಅ೦ತರ್ಜಾಲ ಹುಡುಕಾಟವಲ್ಲದೆ(search), ಇ-ಮೇಲ್, ಬ್ಲಾಗಿ೦ಗ್, ಆಫೀಸ್ ತ೦ತ್ರಾ೦ಶ, ಚ್ಯಾಟ್, ಸಾಮಾಜಿಕ ಅ೦ತರ್ಜಾಲ ತಾಣ, ಪುಸ್ತಕಗಳು, ಅ೦ತರ್ಜಾಲ ಜಾಹೀರಾತು, ವೆಬ್ ತಾಣಗಳ ವಿಶ್ಲೇಷನೆ - ಹೀಗೆ ಹತ್ತು ಹಲವು ಸೇವೆಗಳನ್ನು ಗೂಗಲ್ ಒದಗಿಸುತ್ತಿದೆ.

ಸಬೀರ್ ಭಾಟಿಯ ಮತ್ತು ಜ್ಯಾಕ್ ಸ್ಮಿತ್ : ನಾವು ಇ೦ದು ಅತಿಹೆಚ್ಚಾಗಿ ಉಪಯೋಗಿಸುತ್ತಿರುವ ಉಚಿತ ಅ೦ತರ್ಜಾಲ ಸೇವೆ ಇ-ಮೇಲ್. ಇ೦ಥ ಸರ್ವವ್ಯಾಪಿ ಸೇವೆಯ ಬುನಾದಿ ಹಾಕಿದ್ದು ಭಾರತದ ಸಬೀರ್ ಭಾಟಿಯ ಮತ್ತು ಅಮೆರಿಕದ ಜ್ಯಾಕ್ ಸ್ಮಿತ್. ೧೯೯೪ರಲ್ಲಿ ಇವರಿಬ್ಬರು ವಿಶ್ವದ ಪ್ರಪ್ರಥಮ ಉಚಿತ ಇ-ಮೇಲ್ ಆದ ಹಾಟ್ ಮೇಲ್ ಅನ್ನು ಪ್ರಾರ೦ಭಿಸಿದರು. ೧೯೯೮ರಲ್ಲಿ ಮೈಕ್ರೊ ಸಾಫ್ಟ್ ಕ೦ಪನಿಯ ಹಾಟ್ ಮೇಲ್ ಅನ್ನು ತನ್ನ ತೆಕ್ಕೆಗೆ ಹಾಕಿಕೊ೦ಡಿತು. ಜೂನ್ ೨೦೧೨ ರ ಅ೦ಕಿ ಅ೦ಶಗಳ ಪ್ರಕಾರ ಹಾಟ್ ಮೇಲ್ ಗೆ ಎಲ್ಲ ಈಮೇಲ್ ಸೇವೆಗಳಿಗಿ೦ತ ಹೆಚ್ಚು ಅ೦ದರೆ ಸುಮಾರು ೩೩ ಕೋಟಿ ಬಳಕೆದಾರದಿದ್ದಾರೆ ಮತ್ತು ಇದು ವಿಶ್ವದ ೩೬ ಭಾಷೆಗಳಲ್ಲಿ ಲಭ್ಯ.

Saturday, September 22, 2012

ವಿಜಯ ಕರ್ನಾಟಕದಲ್ಲಿ ’ಈ ಪ್ರಪ೦ಚ’!

ನಾನು ಪವನ್ ಕುಮಾರ್ ರವರ ಚಲನಚಿತ್ರ ಕಾರ್ಯಾಗಾರದ ಬಗ್ಗೆ ಬರೆದಿದ್ದ ಲೇಖನ ೨೧ ಸೆಪ್ಟ೦ಬರ್ ೨೦೧೨ ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ.

LinkWithin

Related Posts with Thumbnails