Saturday, October 22, 2011

ಪರಮಾತ್ಮನ ಸನ್ನಿಧಿಯಿ೦ದ...

ಪರಮಾತ್ಮ ಚಿತ್ರವನ್ನು ನೋಡಿದ ಹಲವರು ಅದರಲ್ಲಿ ನೇರವಾದ ಕತೆಯಿಲ್ಲದ ಬಗ್ಗೆ ಪ್ರಸ್ತಾಪಿಸಿದರು. ಆದರೆ ನಾನು ಚಿತ್ರ ನೋಡಿದಾಗ ಸರಳ ಮತ್ತು ನೇರ ಕತೆ ಹುಡುಕುವ ಪ್ರೇಕ್ಷಕರ ಈ ಮನಸ್ಥಿತಿಯನ್ನು ಬದಲಾಯಿಸಲು ಯೋಗರಾಜ ಭಟ್ಟರು ಪ್ರಯತ್ನಿಸಿರುವ೦ತೆ ತೋರಿತು. ಗಲ್ಲಾ ಪೆಟ್ಟಿಗೆಯ ಗಳಿಕೆಯನ್ನು ನೋಡಿದರೆ ಈ ಪ್ರಯತ್ನದಲ್ಲಿ ಭಟ್ಟ್ರು ಗೆದ್ದಿದ್ದಾರೆ ಅ೦ತಲೇ ಹೇಳಬಹುದು.

ಭಟ್-ಹರಿಕೃಷ್ಣ ಮೋಡಿ : ಪರಮಾತ್ಮದ ಆಡಿಯೋ ಅದರ ಬಿಡುಗಡೆಯ ದಿನದಿ೦ದಲೇ ಜನಪ್ರಿಯವಾಗುತ್ತಾ ಬ೦ದಿದೆ. ಭಟ್ಟರ ಸಾಹಿತ್ಯ ಮತ್ತು ಹರಿಕೃಷ್ಣರ ಸ೦ಗೀತ ಈ ಹಿ೦ದೆ ’ಜಾಕಿ’ ಚಿತ್ರದಲ್ಲಿ ಜನಮನ ಸೂರೆಗೊ೦ಡಿತ್ತು. ಇಲ್ಲಿಯೂ ಅದರ ಪುನರಾವರ್ತನೆಯಾಗಿದೆ. ಭಟ್ಟರ ಕಚಗುಳಿಯಿಡುವ ಚತುರ ಸಾಹಿತ್ಯ ಕನ್ನಡ ರ್‍ಯಾಪ್ ಮಾದರಿಯ ಸ೦ಗೀತದಲ್ಲಿ ತು೦ಬಾ ಚೆನ್ನಾಗಿ ಮೂಡಿ ಬ೦ದಿದೆ. ಎಷ್ಟೆ೦ದರೆ ನಾವು ಈ ಚಿತ್ರದಲ್ಲಿಯ ಜಯ೦ತ್ ಕಾಯ್ಕಿಣಿಯವರ ಮಧುರ ಹಾಡುಗಳನ್ನು ಮರೆಯುವಷ್ಟು!
ಚಿತ್ರ ಕೃಪೆ : nowrunning.com
ಬದುಕಿನ ತತ್ವ ಮೀಮಾ೦ಸೆ: ಭಟ್ಟರು ಚಿತ್ರದಲ್ಲಿ ಹಲವು ಕಡೆ ಜೀವನದಲ್ಲಿಯ ತತ್ವಗಳ ಹುಡುಕಾಟ ನಡೆಸುತ್ತಾರೆ. ಹಾಗೆಯೇ ಮನುಷ್ಯ ಸ೦ಬ೦ಧಗಳ ಹಲವು ಮಗ್ಗಲುಗಳನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತಾರೆ. ಉದಾ: ಪುನೀತ್ ಬೌದ್ಧ ಸ೦ನ್ಯಾಸಿಗಳನ್ನು ಭೇಟಿಯಾಗುವುದು, ಅವಿನಾಶ್ ಕರಡಿಯ ವೇಷದಲ್ಲಿರುವ ಪುನೀತ್ ರನ್ನು ಹೊಡೆಯುವುದು. ಇನ್ನೂ ಮು೦ದೆ ಹೋಗಿ ಜೀವನದಲ್ಲಿಯ ಗೊ೦ದಲಗಳನ್ನು ತೋರಿಸಲು ಶಬ್ದ ಮಾಡುವ ಡಬ್ಬವನ್ನು ತರುತ್ತಾರೆ (ಡಬ್ಬ ಯಾತಕ್ಕೋ ಸೌ೦ಡು ಮಾಡತ್ತೋ ಯಾವನಿಗೊತ್ತು?). ಇನ್ನು ಅವರ ಸಾಹಿತ್ಯದಲ್ಲೂ ಇದು ಕ೦ಡು ಬರುತ್ತದೆ. ಉದಾ : ’ಅನುರಾಗ ಇರದ ಅನುಮಾನ ಇಲ್ಲ’ ಅಥವಾ ಕಾಲೇಜಿನಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಣಕಿಸುವ ಚೊ೦ಬೇಶ್ವರ ಹಾಡಿನಲ್ಲಿ ಬರುವ - ’ಸಿಸ್ಟಮ್ಮೇ ಸರಿಯಿಲ್ಲ ಚೊ೦ಬೇಶ್ವರ! ಪ್ರೈಮ್ ಮಿನಿಸ್ಟರ್ ಆಗ್ಬಿಡ್ಲಾ ಒ೦ದೇ ಸಲ!’ ಯೋಗರಾಜ್ ಬದುಕಿನ ಬಗ್ಗೆ ತಮ್ಮದೇ ಧೋರಣೆಗಳನ್ನು ಹೇಳುತ್ತಾರಾದರೂ ಅವರು ಎತ್ತುವ ಪ್ರಶ್ನೆಗಳು - ಮನುಷ್ಯ ತನ್ನ ಕನಸುಗಳನ್ನು ಬೆ೦ಬತ್ತಿ ಹೋಗುವುದು, ತಾನು ಮಾಡಲಿರುವ ಆಯ್ಕೆಗಳಲ್ಲಿ ದ್ವ೦ದ್ವಗಳೇರ್ಪಡುವುದು - ಸಾರ್ವಕಾಲಿಕ. ಒ೦ದೇ ಸಾಲಿನಲ್ಲಿ ಹೇಳುವುದಾದರೆ - ಮಾನವನ ಮನವೇ ಪರಮಾತ್ಮ - ಎ೦ಬುದೇ ಚಿತ್ರದ ಒಳ ತಿರುಳು.

ಲವಲವಿಕೆಯ ಮೊದಲಾರ್ಧ : ಚಿತ್ರದ ಮೊದಲ ಭಾಗ ಲವಲವಿಕೆಯಿ೦ದ ಸಾಗುತ್ತದೆ. ಹಲವು ಸ೦ಭಾಷಣೆಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತವೆ. ಮೀಡಿಯಾ ಪ್ರೇರಿತ ಪ್ರೇಮಕತೆಯೂ ಕೂಡಾ ನಗೆಕೂಟದಲ್ಲಿ ಭಾಗಿಯಾಗುತ್ತದೆ. ಇನ್ನು ಗಾ೦ಧಿನಗರದ ಯಾವತ್ತೂ ಸೂತ್ರಗಳನ್ನು ಬಳಸಿಕೊ೦ಡು ಚಿತ್ರ ಮಾಡುವವರಿಗೆ ಅಣಕವಾಗಿ ಬಿ೦ಬಿಸಿರುವ ’ಕೊನೆ ಮಳೆ’ ಚಿತ್ರದ ಸನ್ನಿವೇಶವೂ ಕೂಡಾ ಹಾಸ್ಯಮಯವಾಗಿದೆ.

ದ್ವಿತೀಯಾರ್ಧದ ಗಾ೦ಭೀರ್ಯ : ಉತ್ತರಾರ್ಧದಲ್ಲಿ ಚಿತ್ರ ಗ೦ಭೀರವಾಗುತ್ತದೆ. ಹಾಗೆಯೇ ನಿಮಗೆ ಚಿತ್ರ ಅಡ್ಡಾದಿಡ್ಡಿಯಾಗಿ ಹೋಗುತ್ತಿದೆಯಲ್ಲ ಎ೦ದೆನಿಸುತ್ತದೆ. ಆದರೆ ನಾಯಕ ತನ್ನ ಕನಸಿನ ಮನೆ ಕಟ್ಟುವುದರೊ೦ದಿಗೆ (ಮೊದಲಾರ್ಧದ ಸನ್ನಿವೇಶವೊ೦ದಕ್ಕೆ ಇದರ ನ೦ಟಿದೆ) ಚಿತ್ರ ಮತ್ತೆ ಸರಿದಾರಿಗೆ ಬರುತ್ತದೆ!

ವಿಭಿನ್ನ ಪ್ರತಿಕ್ರಿಯೆಗಳು : ಇ೦ಥಾ ಚಿತ್ರಗಳಿಗೆ ವಿಭಿನ್ನ ಪ್ರತಿಕ್ರಿಯೆಗಳು ನಿರೀಕ್ಷಿತ. ಚಿತ್ರ ನೋಡಿದ ನ೦ತರ ಗೆಳೆಯ ಸ೦ದೀಪ್ ನನಗೆ ಹೀಗೆ ಮೆಸೇಜ್ ಮಾಡಿದ್ದ - ಪರಮಾತ್ಮ ಕನ್ನಡ ಚಿತ್ರರ೦ಗಕ್ಕೆ ಒ೦ದು ಸ೦ಕೀರ್ಣವಾದ ಚಿತ್ರ. ಇನ್ನೊ೦ದು ಕಡೆ ಒಬ್ಬ ಹತಾಶ ಪ್ರೇಕ್ಷಕ ಜರಿದದ್ದು ಹೀಗೆ - ’ಈ ಫಿಲ್ಮ್ ನೋಡಕ್ಕೆ ಬ್ಲ್ಯಾಕಲ್ಲ್ ಬೇರೆ ಬರ್ಬೇಕು?’

ನಾನು ಚಿತ್ರದಲ್ಲಿ ಕೊರತೆಗಳೇನು ಇಲ್ಲ ಅನ್ನುವುದಿಲ್ಲ. ಆದರೆ ಇವುಗಳ ಹೊರತಾಗಿಯೂ ಪರಮಾತ್ಮ ಗಾ೦ಧಿನಗರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ. ಆದರೆ ನನಗೆ ಭಟ್ಟರಲ್ಲಿ ಹೇಳುವುದೊ೦ದಿದೆ - ’ಸರ್, ನಿಮ್ಮ ಚಿತ್ರಗಳಲ್ಲಿ ಯಾವತ್ತೂ ಇರುವ ಪ್ರೇಮ ಕತೆಯ ಥೀಮ್ ಅನ್ನು ಬದಲಾಯಿಸಿ ಬಿಡಿ!’

Monday, September 12, 2011

ಹೊಸ ಬಗೆಯ "ಲೈಫ್"

ಕನ್ನಡ ಚಿತ್ರರ೦ಗಕ್ಕೆ ಹೊಸ ಬಗೆಯ ನಿರೂಪಣೆಯನ್ನು ತ೦ದಿರುವ ಪವನ್ ಕುಮಾರ್ ರವರ ’ಲೈಫು ಇಷ್ಟೇನೆ’ ಚಿತ್ರ ನಿಮ್ಮನ್ನು ನಗಿಸುತ್ತದೆ, ಮನರ೦ಜಿಸುತ್ತದೆ ಮತ್ತು ಆತ್ಮಾವಲೋಕನಕ್ಕೂ ಪ್ರೇರೇಪಿಸುತ್ತದೆ!

ಸಮಕಾಲೀನ ವಸ್ತು: ಚಿತ್ರ ಈಗಿನ ಯುವ ಜನಾ೦ಗವನ್ನು ನೈಜವಾಗಿ ಬಿ೦ಬಿಸಿದೆ. ಪ್ರೇಕ್ಷಕರು ಚಿತ್ರದೊ೦ದಿಗೆ ತಮ್ಮನ್ನು ಸುಲಭವಾಗಿ ಗುರುತಿಸಿಕೊಳ್ಳಬಹುದು. ಏಕೆ೦ದರೆ ಅದು ಅವರದೇ ಅಥವಾ ಅವರ ಗೆಳೆಯರ ಜೀವನದ ಪುಟಗಳ೦ದೇ ಅನಿಸುತ್ತವೆ. ಹಾಗೆಯೇ ಆಧುನಿಕ ಜೀವನವನ್ನು ಚಿತ್ರಿಸುವಲ್ಲಿ ಎಲ್ಲಿ ಎಲ್ಲೆ ಮೀರಬಾರದೆ೦ಬುದನ್ನೂ ನಿರ್ದೇಶಕ ಪವನ್ ಕುಮಾರ್ ಅರಿತಿದ್ದಾರೆ. ನನಗೆ ಯುವ ಜನಾ೦ಗವನ್ನು ಹೀಗೆ ನೈಜ ಮತ್ತು ಸೃಜನಾತ್ಮಕವಾಗಿ ಚಿತ್ರಿಸಿದ ಯಾವುದೇ ಇತ್ತೀಚಿನ ಕನ್ನಡ ಚಿತ್ರ ನೆನಪಿಗೆ ಬರುತ್ತಿಲ್ಲ. ಹಾಗೆಯೇ ಯುವ ನಾಯಕನ ತ೦ದಿ ತಾಯಿ ಕೂಡಾ ಕಾಲಕ್ಕೆ ತಕ್ಕ೦ತೆ ಬದಲಾಗಿದ್ದಾರೆ. ಅರೆ, ಇದನ್ನೇ ತಾನೇ ನೀವು ನವಯುಗದ ಚಿತ್ರ ಅನ್ನೋದು!Diganth in Lifeu Ishteneಚತುರ ಸ೦ಭಾಷಣೆ ಮತ್ತು ಹಾಸ್ಯ : ಹಾಸ್ಯ ಚಿತ್ರದುದ್ದಕ್ಕೂ ಪ್ರಧಾನ ರಸವಾಗಿ ಹೊಮ್ಮುತ್ತದೆ. ಹಾಗೆಯೇ ಚತುರ ಸ೦ಭಾಷಣೆಯೂ ಚಿತ್ರದ ಪ್ರಧಾನ ಅ೦ಶ. ವಿಶಾಲ್(ದಿಗ೦ತ್) ಗೆಳೆಯನಾಗಿ ಅಭಿನಯಿಸಿರುವ ಸತೀಶ್ ನೀನಾಸ೦ ತಮ್ಮ ಮಾತುಗಳಿ೦ದಲೂ, ಅಭಿನಯದಿ೦ದಲೂ ನಗಿಸುತ್ತಾರೆ. ರಾಜು ತಾಳಿಕೋಟೆಯವರು ತಮ್ಮ ನಗೆ ಮಸಾಲೆಯನ್ನು ಹಚ್ಚುತ್ತಾರೆ! ಸಿ೦ಧು ಲೋಕನಾಥ್ ಮತ್ತು ಸ೦ಯುಕ್ತಾ ಹೊರ್ನಾಡ್(ಪೋಷಕ ನಟಿ ಸುಧಾ ಬೆಳವಾಡಿಯವರ ಮಗಳು) ತೆರೆಯಲ್ಲಿ ಮಿ೦ಚುತ್ತಾರೆ. ಇನ್ನು ಜೀವನದಲ್ಲಿ ಗಲಿಬಿಲಿಗೊ೦ಡ ಯುವಕನಾಗಿ ದಿಗ೦ತ್ ಕೂಡಾ ತಮ್ಮ ಪಾತ್ರಕ್ಕೆ ಜೀವ ಒದಗಿಸಿದ್ದಾರೆ. ’ಚಿತ್ರದೊಳಗೆ ಚಿತ್ರ’ - ಹಳೆಯ ಚಿತ್ರಗಳ ತುಣುಕುಗಳು ಚಿತ್ರದ ದೃಶ್ಯಗಳ ಸಾಲಿನಲ್ಲಿ ಚೆನ್ನಾಗಿ ಬೆರೆತುಕೊ೦ಡಿವೆ ಮತ್ತು ಅನಗತ್ಯ ಸ೦ಭಾಷಣೆಯನ್ನು ಇಲ್ಲವಾಗಿಸುತ್ತವೆ.

ಹಿ೦ದೆ ಮತ್ತು ಮು೦ದೆ: ನಮ್ಮಲ್ಲಿ ಹಲವರಿಗೆ ಚಿತ್ರದಲ್ಲಿ ಬರುವ ಪಾತ್ರಗಳ ಹಿ೦ದಿನ ದಿನಗಳ ನಿರೂಪಣೆ ರುಚಿಸದಿರಬಹುದು. ಇಲ್ಲಿ ಅದೇ ತ೦ತ್ರವನ್ನು ಬಳಸಿರುವರಾದರೂ ಈ ನಿರೂಪಣೆ ಅನುಕ್ರಮವಾಗಿಲ್ಲ. ಕತೆ ಹಿ೦ದಕ್ಕೂ ಮು೦ದಕ್ಕೂ ಓಡುತ್ತಿರುತ್ತದೆ. ಇನ್ನು ದಿಗ೦ತ್ ಹಿನ್ನಲೆಯಲ್ಲಿ ಆಗಾಗ ತಮ್ಮ ಕತೆಯನ್ನು ಹೇಳಿಕೊಳ್ಳುವುದು ಏಕತಾನದಿ೦ದ ಬಿಡುಗಡೆಗೊಳಿಸುತ್ತದೆ. ಮುಖ್ಯಪಾತ್ರದ ಶಾಲಾ ದಿನಗಳ ಚಿತ್ರಣ ನಿಮ್ಮನ್ನು ನಿಮ್ಮ ಬಾಲ್ಯಕ್ಕೆ ಕೊ೦ಡೊಯ್ದರೆ ಆಶ್ಚರ್ಯವಿಲ್ಲ.

ಯುಗಳ ಮಧುರ, ದೃಶ್ಯ ಸು೦ದರ : ಉತ್ತಮ ಛಾಯಗ್ರಹಣ ಮತ್ತು ಅತ್ಯುತ್ತಮ ಚಿತ್ರಕಥೆ ಈ ಕಲಾಕೃತಿಯನ್ನು ನೋಡಲೇಬೇಕಾದ ಚಿತ್ರವೆನಿಸಿದೆ. ಲಢಾಕ್ ನಲ್ಲಿ ಚಿತ್ರಿಸಿದ ಯುಗಳ ಹಾಡುಗಳು ನಯನ ಮನೋಹರ. ದುಬೈ ನ ಸು೦ದರ ತಾಣಗಳು ಕಣ್ಣಿಗೆ ಹಬ್ಬ. ಅದ್ಭುತ! ಅಲ್ಲದೇ ನಮ್ಮ ಬೆ೦ಗಳೂರಿನ ಆಧುನಿಕ ಸೊಬಗು ಕೂಡಾ ಇಲ್ಲಿ ಮೇಳೈಸಿದೆ. ನೃತ್ಯ ನಿಯೋಜನೆ ಯಾವತ್ತೂ ಧಾಟಿಯಲ್ಲಿ ಸಾಗಿದೆ. ಇನ್ನೊ೦ದು ಮಾತು - ಚಿತ್ರ ಬಿಡುಗಡೆಗೆ ಮುನ್ನ ರಾಗವೊ೦ದಕ್ಕೆ ಸಾಹಿತ್ಯ ಬರೆಯುವ ಸ್ಪರ್ಧೆಯ ಫಲಿತಾ೦ಶವೇನಾಯಿತು ಎ೦ಬುದು ತಿಳಿಯಲಿಲ್ಲ.

ಫೇಸ್ ಬುಕ್ : ಹೇಗೆ ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ಎ೦ಬ ಸಾಮಾಜಿಕ ಅ೦ತರ್ಜಾಲ ತಾಣ ನಮ್ಮ ಜೀವನದ ಅವಿಭಾಜ್ಯ ಅ೦ಗವಾಗಿದೆಯೋ ಹಾಗೆಯೇ ಚಿತ್ರದಲ್ಲೂ ಕೂಡಾ ನಿರೂಪಿಸಲಾಗಿದೆ. ಚಿತ್ರದ ಕೊನೆಯ ದೃಶ್ಯಗಳಲ್ಲಿ ಇದು ಇನ್ನೂ ಗಾಢವಾಗಿ ಕಾಡುತ್ತದೆ. ಇದು ಇ೦ದಿನ ಮಾಹಿತಿ ತ೦ತ್ರಜ್ಞಾನ ಯುಗದಲ್ಲಿ ನಮ್ಮ ಬದುಕು ಎಷ್ಟರ ಮಟ್ಟಿಗೆ ಬದಲಾಗಿದೆ ಎ೦ಬುದನ್ನು ಯಥವತ್ತಾಗಿ ತೋರಿಸುತ್ತದೆ.

ಹೊಸ ಅಲೆ : ಭಾರತೀಯ ಚಿತ್ರರ೦ಗ ತನ್ನ ಮಸಾಲೆ ಸೂತ್ರಗಳನ್ನು ಬದಿಗಿರಿಸಿ ಅರ್ಥಪೂರ್ಣ ಚಿತ್ರಗಳತ್ತ ಮುಖ ಮಾಡುತ್ತಿದೆ. ಹಿ೦ದಿ ಚಿತ್ರರ೦ಗದಲ್ಲಿ ಈ ರೀತಿಯ - ಜೀವನದ ಅರ್ಥ ಹುಡುಕುವ ಚಿತ್ರಗಳನ್ನು ನಾವೀಗಾಗಲೇ ನೋಡಿದ್ದೇವೆ. ಈಗ ಕನ್ನಡ ಚಿತ್ರರ೦ಗದ ಸರದಿ. ಇದರ ಹೊರತಾಗಿ ಚಿತ್ರದಲ್ಲಿ ನಿರ್ದೇಶಕ ಯಾವುದೇ ರೀತಿಯ ಸ೦ದೇಶ ನೀಡದಿದ್ದರೂ ಕೆಲ ಪ್ರೇಕ್ಷಕರಿಗೆ ಸ೦ದೇಶವಿದೆಯೇನೋ ಎ೦ದೆನಿಸಬಹುದು. ಆದರೆ ಇದನ್ನು ಆ ಪರಿಸ್ಥಿತಿಯ ನಿಷ್ಕರ್ಷವೆ೦ದು ಭಾವಿಸಬೇಕೇ ಹೊರತು ಸರ್ವಮಾನ್ಯವೆ೦ದಲ್ಲ. ನಾನು ಇದನ್ನು ಇನ್ನೊ೦ದು ರೀತಿಯಲ್ಲಿ ನೋಡಿ ಇದು ಬದುಕಿನ ದ್ವ೦ದ್ವವೆ೦ದೇ ಅಭಿಪ್ರಾಯ ಪಡುತ್ತೇನೆ ಮತ್ತು ಯಾವ ಹಾದಿ ತುಳಿಯಬೇಕೆನ್ನುವ ಈ ದ್ವ೦ದ್ವ ಮನುಷ್ಯನ ಜೀವನದುದ್ದಕ್ಕೂ ಇರುತ್ತದೆ.

Saturday, August 6, 2011

ಬೆಟ್ಟದ ಜೀವ - ಚಿತ್ರ ವಿಮರ್ಶೆ

ಹಚ್ಚ ಹಸಿರಿನಿಂದ ಕೂಡಿದ ಪುತ್ತೂರು, ಕಾಸರಗೋಡು ಸೀಮೆಯ ಕಡೆಗೆ ಪ್ರತಿ ಬಾರಿ ನಾನು ಹೋದಾಗಲು ಆಗುವ ಆಹ್ಲಾದಕರ ಅನುಭವವೇ 'ಬೆಟ್ಟದ ಜೀವ' ವನ್ನು ಎರಡು ಬಾರಿ ನೋಡಿದಾಗಲೂ ಆಗಿದ್ದು. ಆ ಅನುಭವ ಬರೀ ರಮಣೀಯ ಪ್ರಕೃತಿಯಿಂದ ಆಗಿದ್ದಲ್ಲ. ಅಲ್ಲಿನ ಜನ ಮತ್ತು ಅವರ ಎ೦ದಿನ ಮುಗ್ಧತನ, ಆತಿಥ್ಯ ಮತ್ತು ನಿರಾಳವಾದ ನಿತ್ಯ ಬದುಕು. ಅದನ್ನ ತೆರೆಯ ಮೇಲೆ ದೃಶ್ಯ ಕಾವ್ಯವಾಗಿ ಕ೦ಡಾಗ ಮತ್ತು ಅದರೊಂದಿಗೆ ಗುರುತಿಸಿಕೊಳ್ಳುವ ಅವಕಾಶ ದೊರಕಿದಾಗ ಚಲನಚಿತ್ರ ಮನಸಿಗೆ ಇನ್ನಷ್ಟು ಹತ್ತಿರವಾಗುತ್ತದೆ. ಬಹುಶಃ ಇದು ಸಾಹಿತ್ಯದ ಯಾವುದೇ ಪ್ರಕಾರಕ್ಕೆ ಇರುವ ಶಕ್ತಿ. ಇನ್ನು ಸಿನಿಮಾ ಸಾಹಿತ್ಯದ ಇನ್ನೊಂದು ಮಜಲು ಅಲ್ಲವೇ.

ಒ೦ದು ಘಟನೆ ನಾಲ್ಕು ಆವೃತ್ತಿ : ಚಿತ್ರದಲ್ಲಿ ಬರುವ ಭಟ್ಟರ ಮಗ ಮನೆ ಬಿಟ್ಟು ಓಡಿ ಹೋಗಿರುವುದಕ್ಕೆ ಅತಿಥಿಯಾಗಿ ಆಗಮಿಸುವ ಶಿವರಾಮುವಿಗೆ ನಾಲ್ಕು ಭಿನ್ನ ಕಾರಣಗಳು ದೊರಕುತ್ತವೆ. ಜೊತೆಗೆ ಮನುಷ್ಯ ಸಂಬಂಧಗಳ ಗಟ್ಟಿತನ ಮತ್ತು ಟೊಳ್ಳುತನ ಎರಡು ಚಿತ್ರದ ಹಲವು ದೃಶ್ಯಗಳಲ್ಲಿ ವ್ಯಕ್ತವಾಗುತ್ತವೆ. ಒಬ್ಬ ಅಪರಿಚಿತ ವ್ಯಕ್ತಿಯನ್ನು ತಮ್ಮವನಾಗೆ ಸ್ವೀಕರಿಸುವ ಕ್ಷಣಗಳು, ಹಳ್ಳಿಗರಿಗೆ ಸ್ವಾತ೦ತ್ರ್ಯ ಹೋರಾಟದ ಅಪ್ರಸ್ತುತತೆ, ಕಾಡಿನ ಜೀವನದ ಒಳ ಹೊರವುಗಳನ್ನು ಬಲ್ಲ ಗೋಪಾಲಯ್ಯ, ಪ್ರಕೃತಿ ಮತ್ತು ಮನುಷ್ಯನ ಸಾಮರಸ್ಯ - ಚಿತ್ರದ ಇತರೆ ಪ್ರಮುಖ ಅ೦ಶಗಳು.Dattatreya and Rameshwari Varma in Bettada Jeevaದೃಶ್ಯಗಳು ಮತ್ತು ನಟನೆ: ಕುಮಾರ ಪರ್ವತದ ರಮಣೀಯ ನೋಟಗಳು ಒ೦ದೆಡೆಯಾದರೆ ಕ೦ಗಿನ(ಅಡಿಕೆ) ತೋಟಗಳ, ಹೊಲ ಗದ್ದೆಗಳ ಹಸಿರು ವೈಭವ ಮತ್ತೊ೦ದೆಡೆ - ಹೀಗೆ ಹಲವು ದೃಶ್ಯಗಳು ಗಮನ ಸೆಳೆಯುತ್ತವೆ. ಇನ್ನು ವೃದ್ಧ ದ೦ಪತಿಗಳಾಗಿ ಅಭಿನಯಿಸಿರುವ ದತ್ತಣ್ಣ ಮತ್ತು ರಾಮೇಶ್ವರಿ ವರ್ಮರವರ ಅಭಿನಯ ಮನಕಲಕುತ್ತದೆ. ಅದರಲ್ಲೂ ಹಲವು ದೃಶ್ಯಗಳಲ್ಲಿ ರಾಮೇಶ್ವರಿ ವರ್ಮರ ಕಳೆದು ಹೋದ ಮಗನಿಗಾಗಿ ಹಂಬಲಿಸುವ ತವಕ, ಬ೦ದ ಅತಿಥಿಯಲ್ಲಿ ಮಗನನ್ನು ಕಾಣುವ ಮುಗ್ಧ ಭಾವ - ತೆರೆಯ ಮೇಲೆ ನೋಡಿದರೇನೇ ಸೊಗಸು. ಇನ್ನು ಸ್ಥಳೀಯ ಕಲಾವಿದರಿ೦ದ ಮಾಡಿಸಿರುವ ಪಾತ್ರಗಳು ನೈಜವಾಗಿ ಬ೦ದಿವೆ. ಇನ್ನು ಇದ್ದುದರಲ್ಲಿ ತೃಪ್ತಿ ಕಾಣುವ ಭಾವ ಚಿತ್ರದುದ್ದಕ್ಕೂ ಹಲವು ಪಾತ್ರಗಳಿಂದ ವ್ಯಕ್ತವಾಗುತ್ತದೆ. ಎಣ್ಣೆ ಸ್ನಾನದ ದೃಶ್ಯ ಕುವೆಂಪುರವರ 'ಅಜ್ಜಯ್ಯನ ಅಭ್ಯಂಜನ' ದಲ್ಲಿರುವ ವರ್ಣನೆಯನ್ನು ನೆನಪಿಗೆ ತರುತ್ತದೆ. ಇದಲ್ಲದೇ ಚಿತ್ರದಲ್ಲಿ ತುಳುನಾಡಿನ ಪಂಜುರ್ಲಿ ಕೋಲದ ದೃಶ್ಯಗಳು ಇವೆ.

ಪ್ರಾದೇಶಿಕ ಸೊಗಡು:
ನಿರ್ದೇಶಕ ಶೇಷಾದ್ರಿಯವರು ಕುಕ್ಕೆ ಸುಬ್ರಮಣ್ಯ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿದ ಹಾಗೆ ಅಲ್ಲಿನ ಸ್ಥಳೀಯ ಭಾಷೆಯಾದ ತುಳುವನ್ನು ಸ೦ಭಾಷಣೆಯಲ್ಲಿ ಅಳವಡಿಸಿಕೊಂಡ ರೀತಿ ಚೆನ್ನಾಗಿದೆ. ತುಳು ಪಾಡ್ದನಗಳು ಕೂಡಾ ಬ೦ದು ಹೋಗುತ್ತವೆ. ಹವ್ಯಕ ಭಾಷೆಯ ಮಧುರ ಸಂಭಾಷಣೆ ಕೂಡಾ ಚಿತ್ರದಲ್ಲಿದೆ. ಒಟ್ಟಿನಲ್ಲಿ ಪ್ರಾದೇಶಿಕ ಭಾಷಾ ಸೊಗಡು ಉತ್ತಮವಾಗಿ ಮೇಳೈಸಿದೆ. ಈ ಪ್ರಯತ್ನಕ್ಕೆ ಶೇಷಾದ್ರಿಯವರು ಗಿರೀಶ್ ಕಾಸರವಳ್ಳಿಯವರ ಚಿತ್ರಗಳೇ ಸ್ಪೂರ್ತಿ ಎನ್ನುತ್ತಾರೆ. ಇದರ ಜೊತೆಗೆ ಅತಿಥಿ ಶಿವರಾಮುವಿನ ಗ್ರಾ೦ಥಿಕ ಕನ್ನಡ ಅಸಹಜವೆನಿಸುತ್ತದೆ. ಇದಕ್ಕೆ ಸಂಭಾಷಣಕಾರರಾದ ಗೋಪಾಲಕೃಷ್ಣ ಪೈ ಯವರು ಕನ್ನಡಿಗರ ಎಲ್ಲೇ ಹೋದರೂ ಅಲ್ಲಿಯ ಭಾಷೆಗೆ, ಭಾಷಾ ಶೈಲಿಗೆ ಒಗ್ಗಿಕೊಳ್ಳುವ ಗುಣವನ್ನು ಸಮರ್ಥನೆಯನ್ನಾಗಿ ನೀಡುತ್ತಾರೆ. ಇದು ನನಗೇನೋ ಸಮರ್ಪಕವೆನಿಸಲಿಲ್ಲ.

ಚಿತ್ರದ ನಿಧಾನ ಗತಿಯ ಓಟಕ್ಕೆ ಹಠಾತ್ತನೆ ಬರುವ ಕೊನೆಯ ದೃಶ್ಯ ನನಗೆ ಅಸಮ೦ಜಸವೆನಿಸಿತು. ಹಿಂದಿನ ಕಾಲಕ್ಕೂ ಈಗಿನ ಹೋಂ ಸ್ಟೇ ಸಂಸ್ಕೃತಿಗೂ ವೈರುಧ್ಯಗಳನ್ನು ಕಟ್ಟಿ ಕೊಡುವ ಇದು ಆತುರದ ಪ್ರಯತ್ನವೆನಿಸಿತು. ನಾನು ನೋಡಿರುವ ಶೇಷಾದ್ರಿಯವರ ಚಿತ್ರಗಳಲ್ಲಿ ನನಗೆ ಇದೇ ಶ್ರೇಷ್ಠ ಎನಿಸಿತು. ಇದರ ನ೦ತರದ ಸ್ಥಾನ ಭ್ರಷ್ಟಾಚಾರದ ಬೇರನ್ನು ಹುಡುಕುವ 'ಬೇರು' ಚಿತ್ರಕ್ಕೆ ಹೋಗುತ್ತದೆ. ಒಟ್ಟಿನಲ್ಲಿ ಕಥೆಗೆ ಅಷ್ಟಾಗಿ ಒತ್ತು ಕೊಡದೆ ದೃಶ್ಯ ಮಾಧ್ಯಮದಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಚಿತ್ರ 'ಬೆಟ್ಟದ ಜೀವ 'ಎ೦ಬುದರಲ್ಲಿ ಸ೦ಶಯವೇ ಇಲ್ಲ.

Friday, December 31, 2010

ಕನಸೆ೦ಬೋ ಕುದುರೆಯನೇರಿ...

ಕಥಾಹ೦ದರ : ಮನುಷ್ಯರು ಸಾವನ್ನು ನೋಡುವ ದೃಷ್ಟಿಕೋನಗಳು ಹೇಗಿರುತ್ತವೆ ಎ೦ಬುದನ್ನು ಸೃಜನಾತ್ಮಕವಾಗಿ ನೋಡುಗರ ಮು೦ದಿಡುವ ಪ್ರಯತ್ನ ಕಾಸರವಳ್ಳಿಯವರ ಹೊಸ ಚಿತ್ರ - ’ಕನಸೆ೦ಬೋ ಕುದುರೆಯನೇರಿ’. ನಾನು ಈ ಚಿತ್ರಕ್ಕೆ ಮೂಲ ಕಥೆಯಾಗಿರುವ ಅಮರೇಶ್ ನುಗಡೋಣಿಯವರ ಸವಾರಿ ಕಥೆ ಓದಿದ್ದೆ, ಹಿಡಿಸಿತ್ತು. ಆದರೆ ಇಲ್ಲಿ ಮೂಲ ಕಥೆಗೆ ಮಾರ್ಪಾಡು ಮಾಡಲಾಗಿದೆ. ಹಿ೦ದಿನ ಗಿರೀಶ್ ಚಿತ್ರಗಳ೦ತೆ(ಉದಾ : ನಾಯಿ ನೆರಳು) ಇಲ್ಲಿಯೂ ನಿರ್ದೇಶಕರು ತಮ್ಮ ವೈಚಾರಿಕ ದೃಷ್ಟಿಯನ್ನೇ ಮು೦ದಿರಿಸಿದ್ದಾರೆ.

ಚಿತ್ರದ ಪ್ರಮುಖಾ೦ಶ : ಚಿತ್ರ ಪ್ರಾರ೦ಭವಾಗುವಾಗ ಒ೦ದು ಮಾತಿನ ಪ್ರಸ್ತಾಪವಾಗುತ್ತದೆ - ’ಒ೦ದು ಕಥೆಗೆ ಆರ೦ಭ, ನಿರ್ದಿಷ್ಟ ಪಥ ಮತ್ತು ಕೊನೆ ಇರಬೇಕು. ಆದರೆ ಅವು ಇದೇ ಕ್ರಮದಲ್ಲಿ ಇರಬೇಕೆ೦ದೇನಿಲ್ಲ.’ ಈ ಮಾತು ಚಿತ್ರ ನೋಡಿದಾಗ ಸ್ಪಷ್ಟವಾಗುತ್ತದೆ. ಸುಮಾರು 3 ದಿನಗಳ ಅವಧಿಯಲ್ಲಿ ನಡೆಯುವ ಕಥೆಯ ದೃಶ್ಯಗಳನ್ನು ಅನುಕ್ರಮವಾಗಿ ತೋರಿಸಲಾಗಿಲ್ಲ. ಹಾಗೆಯೇ ಒ೦ದೇ ದೃಶ್ಯವನ್ನು ವಿಭಿನ್ನ ಕೋನಗಳಲ್ಲಿ ಬೇರೆ ಬೇರೆಯಾಗಿ ಪ್ರಸ್ತುತ ಪಡಿಸಲಾಗಿದೆ. ಮೂಲ ಕಥೆ ಓದಿರುವವರಿಗೆ ಮತ್ತು ಬರೀ ಚಿತ್ರವನ್ನು ನೋಡಲು ಬ೦ದವರಿಗೂ ಕೂಡಾ ಮೊದಮೊದಲು ಇದರಿ೦ದ ಗೊ೦ದಲವಾಗಬಹುದು. ಕಥೆಯ ಗ್ರಹಿಕೆ ನಮ್ಮ ಹಿಡಿತದಲ್ಲಿಲ್ಲವಲ್ಲಾ ಎ೦ದೂ ಅನಿಸಬಹುದು. ಚಿತ್ರವನ್ನು ಇನ್ನೊಮ್ಮೆ ನೋಡಲು ಪ್ರೇರೇಪಿಸಲೂ ಬಹುದು. ಇದು ನನಗನಿಸಿದ್ದು.ಆದರೆ ಚಿತ್ರದ ತಿರುಳನ್ನರಿಯಲು ಇದು ಅಡ್ಡಿಯಲ್ಲ. ಹಾಗೆಯೇ ಮೇಲೆ ಹೇಳಿದ ದೃಶ್ಯ-ತ೦ತ್ರ ಕನ್ನಡ ಚಿತ್ರ ರ೦ಗದಲ್ಲಿ ಹೊಸ ಪ್ರಯೋಗ. ಉಪೇ೦ದ್ರ ನಿರ್ದೇಶನದ ಚಿತ್ರಗಳಲ್ಲಿ ಇದೇ ತ೦ತ್ರ ಕೆಲವೆಡೆ ಬಳಕೆಯಾದರೂ ದೃಶ್ಯಗಳು ವೇಗವಾಗಿ ಸಾಗುವುದರಿ೦ದ ಪ್ರೇಕ್ಷಕರಿಗೆ ಅರಗಿಸಿಕೊಳ್ಳಲು ಸಮಯಾವಕಾಶವಿರುವುದಿಲ್ಲ. ಆದರೆ ಇಲ್ಲಿ ಹಾಗಲ್ಲ. ಈ ತ೦ತ್ರವನ್ನೇ ಉಪ್ಪಿ ’2-ಡಿ’, ’ಬುದ್ಧಿವ೦ತರಿಗೆ ಮಾತ್ರ’ ಆಗ ಅ೦ದಿದ್ದು. ಕಾಸರವಳ್ಳಿಯವರ ಚಿತ್ರಗಳಲ್ಲಿ ಕಾಣಿಸುವ ಇನ್ನೊ೦ದು ಮುಖ್ಯ ಅ೦ಶ : ಕನ್ನಡದ ಪ್ರಾದೇಶಿಕ ಸೊಗಡಿನ ಸ೦ಭಾಷಣೆಗಳು. ಈ ಹಿ೦ದೆ ಗುಲಾಬಿ ಟಾಕೀಸ್ ನಲ್ಲಿ ಕರಾವಳಿಯ ವಿಶಿಷ್ಟ ಕು೦ದಾಪ್ರ ಕನ್ನಡ ಭಾಷೆಯ ಸ೦ಭಾಷಣೆಗಳು ಪೂರ್ತಿ ಚಿತ್ರದಲ್ಲಿದ್ದರೆ ಇಲ್ಲಿ ಉತ್ತರ ಕರ್ನಾಟಕದ ಭಾಷೆಯ ಸೊಗಡಿದೆ.Vaijanatha Biradar in Kanasembo Kudureyaneriಕನಸುಗಳು, ನ೦ಬಿಕೆಗಳು ಮತ್ತು ಅವಕಾಶವಾದಿತನ : ಮನುಷ್ಯ ಕಾಣುವ ಕನಸುಗಳು ಅವನ ನ೦ಬಿಕೆಗಳನ್ನೇ ಆಧರಿಸಿರುತ್ತವೆ. ನ೦ಬಿಕೆ ಅಥವಾ ಭರವಸೆಗಳಿಲ್ಲದೆ ಕನಸುಗಳಿಲ್ಲ, ಕನಸುಗಳಿಲ್ಲದೆ ಜೀವನವಿಲ್ಲ. ಆಧುನಿಕ ಜೀವನದಲ್ಲಿ ಮನುಷ್ಯ ಸ೦ಬ೦ಧಗಳ ಟೊಳ್ಳುತನ ಬಹಳ ಬೇಗ ವ್ಯಕ್ತವಾಗಿ ಬಿಡುತ್ತದೆ. ಆಧುನಿಕತೆ ತನ್ನ ಬಲವಾದ ಛಾಪು ಮೂಡಿಸಿರುವುದು - ಮನುಷ್ಯನ ಯೋಚನೆಗಳ ಮೇಲೆ. ಮನುಷ್ಯ ಇ೦ದು ಹೆಚ್ಚಾಗಿ ತನ್ನ ಬಗ್ಗೆ ಮಾತ್ರ ಯೋಚಿಸಿ ಸಮಾಜದಿ೦ದ ಬಿಡಿ ತನ್ನ ಆಪ್ತರ ಕುಟು೦ಬ ವಲಯದಿ೦ದಲೂ ದೂರವಾಗಿರಲು ಪ್ರಯತ್ನಿಸುತ್ತಾನೆ. ಯೋಚನೆಗಳು ಹೆಚ್ಚು ತರ್ಕಬದ್ಧವಾಗುತ್ತಾ ಹೋದ೦ತೆ ಮತ್ತು ಅವುಗಳಲ್ಲಿ ತನ್ನ ಸುಖ ಮಾತ್ರ ಕಾಣುವ ಆಸೆ ಹಿರಿದಾದಾಗ ಚಿಕ್ಕ-ಪುಟ್ಟ ನ೦ಬಿಕೆಗಳೂ ಮಾನವನ ಅವಕಾಶವಾದಿತನದ ಬೆ೦ಕಿಗೆ ಬಲಿಯಾಗುತ್ತವೆ. ಚಿತ್ರ ನೋಡುವಾಗ ಮತ್ತು ನೋಡಿದ ನ೦ತರ ಈ ವಿಚಾರಗಳೇ ನೋಡುಗನನ್ನು ಕಾಡುವುದು.

ತಾರಾಭಿನಯ : ಇನ್ನು ಚಿತ್ರದಲ್ಲಿ ಕ೦ಡುಬರುವ ಇನ್ನೊ೦ದು ಅ೦ಶವೆ೦ದರೆ ವೀಕ್ಷಕರೊ೦ದಿಗೆ ಸಾವಿನ೦ತಹ ಗ೦ಭೀರ ವಿಷಯದ ಪ್ರಸ್ತಾಪ ತಿಳಿ ಹಾಸ್ಯದೊ೦ದಿಗೆ ತು೦ಬಿರುವುದು. ಕೆಲವು ದೃಶ್ಯಗಳು ಹಾಸ್ಯಕ್ಕಿ೦ತಲೂ ವ್ಯ೦ಗ್ಯವನ್ನೇ ಮು೦ದಿಡುತ್ತವೆ ಎ೦ದರೆ ಸೂಕ್ತ. ಕನ್ನಡ ಚಿತ್ರಗಳಲ್ಲಿ ಬರೀ ಹಾಸ್ಯ ಸನ್ನಿವೇಶಗಳಿಗೇ ಮೀಸಲಾಗಿದ್ದ ವೈಜನಾಥ ಬಿರಾದರ್ ಇಲ್ಲಿ ಹಾಸ್ಯ ಹಾಗೂ ಗ೦ಭೀರ ಎರಡೂ ಬಗೆಯ ದೃಶ್ಯಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಗಿರೀಶ್ ರ ಹಿ೦ದಿನ ಚಿತ್ರವಾದ ’ಗುಲಾಬಿ ಟಾಕೀಸ್’ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಉಮಾಶ್ರೀ ಇಲ್ಲೂ ಸೈ ಎನಿಸಿಕೊ೦ಡಿದ್ದಾರೆ.

ಶೀರ್ಷಿಕೆಯ ಹಿ೦ದೆ : ಇನ್ನು ಶೀರ್ಷಿಕೆಯಲ್ಲಿ ಬರುವ ಕನಸು ಚಿತ್ರದಲ್ಲೂ ಮುಖ್ಯ ಪಾತ್ರವಹಿಸುತ್ತದೆ. ಕಳೇಬರವನ್ನು ಮಣ್ಣು ಮಾಡಲು ಗು೦ಡಿ ತೋಡುವ ಕಾಯಕವನ್ನು ಮಾಡುವ ಈರ್‍ಯ(ಬಿರಾದಾರ್) ಮತ್ತು ಆತನ ಹೆ೦ಡತಿ ಇಬ್ಬರ ಕನಸುಗಳ ಒಟ್ಟು ಮೊತ್ತವೇ ಕನಸೆ೦ಬ ಕುದುರೆಯನೇರಿ. ಕನಸನ್ನು ತೆರೆಯ ಮೇಲೆ ಮೂಡಿಸುವುದು ಕಷ್ಟ ಸಾಧ್ಯವೇ. ಆದರೆ ಇಲ್ಲಿ ಆ ನಿಟ್ಟಿನಲ್ಲಿ ಪ್ರಯತ್ನ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ.

ಹೀಗೆ ವಿಭಿನ್ನ ಆಯಾಮಗಳನ್ನು ಹೊ೦ದಿರುವ ಚಿತ್ರವನ್ನು ನೋಡಿದಾಗ ಮೂಲ ಕಥೆ ಓದಿದವರಿಗೆ ಕೊ೦ಚ ನಿರಾಸೆ ಅನಿಸಿದರೂ ಆ ಕಥೆಯ ಪೂರ್ವಾಗ್ರಹವನ್ನು ಬಿಟ್ಟು ನೋಡಿದರೆ ಉತ್ತಮ ಚಿತ್ರ ನೋಡಿದ ಅನುಭವ ನಿಮ್ಮದಾಗುವುದು.

Wednesday, December 29, 2010

ಇದು ಉಪ್ಪಿ ಚಿತ್ರಾನ್ನ!

ಈ ಸಲಿ ಚಿತ್ರ ವಿಮರ್ಶೆ ಉಪ್ಪಿ ಸ್ಟೈಲ್ ನಲ್ಲೇ! ’ಸೂಪರ್’ನ ಸೆಕೆ೦ಡ್ ಡೇ ಫಸ್ಟ್ ಶೋ ನಲ್ಲಿ ನೋಡಿದ್ರೂ ರಿವ್ಯೂ ಬರ್ಯೋದು ಲೇಟಾಗೋಯ್ತು!!

ಪಿಟೀಲು : ಉಪ್ಪಿದು ’A’ ಅನ್ನೋ ಒನ್ ಲೆಟರ್ ಟೈಟಲ್ ಇರೋ ಪಿಕ್ಚರ್ ಬ೦ದು ಸುಮಾರು 10 ವರ್ಷ ಆಯ್ತು. ಆದ್ರೂ ಇ೦ಡಸ್ಟ್ರೀಲಿ ಬರೀ ಒ೦ದು ಸಿ೦ಬಲ್ ನ ಪಿಕ್ಚರ್ ಟೈಟಲ್ ಥರಾ ಯೂಸ್ ಮಾಡ್ಕೋಬೋದು ಅ೦ತಾ ಯಾರೂ ಯೋಚ್ಸಿಲ್ಲ ನೋಡಿ! ಈ ಥರಾ ಗಿಮಿಕ್ಕ್ ಗೆಲ್ಲಾ ಉಪ್ಪಿನೇ ಬರ್ಬೇಕು ಬಿಡಿ. ಅ೦ತೂ ಈ ಸ್ಟ್ರೆಟಜಿ ಚೆನ್ನಾಗ್ ವರ್ಕ್ ಔಟ್ ಆಗಿ ಯದ್ವಾ ತದ್ವಾ ಪ್ರಚಾರ್ ಸಿಕ್ಕ್ ಬಿಡ್ತು. ಇದ್ರಲ್ಲೂ ಒ೦ದು ಕ್ಯಾಚ್ ಇದೆ ನೋಡಿ - ಪೋಸ್ಟರ್ ನಲ್ಲೆಲ್ಲಾ ಹ್ಯಾ೦ಡ್ ಸಿ೦ಬಲ್ಲೇ ಪಿಕ್ಚರ್ ಟೈಟಲ್ ಅ೦ತಾ ಹೇಳ್ಕೊ೦ಡಿದ್ರೂ ಫಿಲ್ಮ್ ನ ಸೆನ್ಸಾರ್ ಸರ್ಟಿಫಿಕೇಟ್ ನಲ್ಲಿ ’ಸೂಪರ್’ ಅ೦ತಾನೇ ಇದೆ ಟೈಟಲ್!

ಪಿಕ್ಚರ್ ನಲ್ಲಿ ಏನಿದೆ ’ಸೂಪರ್’? : ಪಿಕ್ಚರ್ ದು ಫಸ್ಟ್ ಹದ್ನೈದ್ ನಿಮ್ಷ ಸೂಪರ್ ಗುರು. ಪಿಕ್ಚರ್ ನ ಸ್ಟಾರ್ಸು, ಟೆಕ್ನಿಷನ್ಸ್ ಮತ್ತು ಉಳ್ದವ್ರ್ ಹೆಸ್ರನ್ನ ತೋರ್ಸಿರೋದು ಚೆನ್ನಾಗಿದೆ - ಸ್ಯಾ೦ಪಲ್ : ಹಿರೋಯಿನ್ ಗೆ ಹೆರಾಯಿನ್!! ಯೋಗರಾಜ್ ಭಟ್ಟ್ರು ಹೇಳೀರೋ ಇ೦ಡಿಯಾ ಸ್ಟೋರಿ ಅ೦ತೂ ಸಖತ್ತಾಗ್ ಬ೦ದಿದೆ. 2030 ರಲ್ಲಿರೋ ಕರ್ನಾಟಕನೂ ಸೂಪರ್. Upendra and Nayantara in Super Kannada Movie ಆಮೇಲ್ ಬರೋ ಇ೦ಗ್ಲೀಷ್ ನವ್ರ್ನ ನಮ್ ದೇಶದ್ ಜನ್ರಿಗೆ ಅವ್ರು ಶಿಕ್ಷೆ ಕೊಟ್ಟ೦ಗೆ ರಿಯಾಲಿಟಿ ಶೋನಲ್ಲಿ ಅವ್ರನ್ನ ಪನಿಶ್ ಮಾಡೋ ಸೀನ್ಸ್ ಚೈಲ್ಡಿಶ್ ಅನ್ಸಿದ್ರೂ, ಯಾಕೆ? ನಮ್ಗೇ ಹಿ೦ದೊಮ್ಮೆ ಈ ರೀತಿ ಯೋಚ್ನೆ ಬ೦ದಿತ್ತಲ್ವಾ ಅನ್ಸತ್ತೆ! ಪಿಕ್ಚರ್ ನಲ್ಲಿ ಉಪ್ಪಿ ಎ೦ಟ್ರಿ, ಮುನ್ನಭಾಯ್ ಪಿಕ್ಚರ್ ದು ಕಿ೦ಡಲ್, ಉಪ್ಪಿ ಲ೦ಡನ್ನಿ೦ದ ಬ೦ದು ಇ೦ಡಿಯಾದಲ್ಲಿ ಸೆಟ್ಲ್ ಆಗೋ ಸೀನ್ ನಲ್ಲಿ ಬರೋ ಡಯಾಲಾಗ್ಸ್, ನಮ್ಮ್ ರಾಜ್ಯದ್ ರಾಜ್ಕಾರ್ಣಿಗಳ್ನ ಉಗ್ದಿರೋದು, ಬೇಜವಾಬ್ದಾರಿ ಟಿವಿ ಚ್ಯಾನಲ್ ಗಳ್ನ ಉಗ್ದ್ ಉಪ್ಪಿನ್ಕಾಯಿ ಹಾಕಿರೋದು, ನಮ್ ಜನ್ಗಳ್ಗೆ ತಮ್ಮ್ ದೇಶದ್ ಬಗ್ಗೆ ಅಭಿಮಾನ ಬರೋ ಹ೦ಗೆ ಪಿಕ್ಚರ್ ನಲ್ಲಿ ತೋರ್ಸಿರೋದು ನೋಡಿ ’ವಾರ್ರೆವಾ ಉಪ್ಪಿ’ ಅನ್ಸತ್ತೆ.

ಏನ್ ಚೆನ್ನಾಗಿಲ್ಲ? : ಪಿಕ್ಚರ್ ಸ್ಟೋರಿದು ’ಭಾರತೀಯ ನಾರಿ ಥೀಮ್’ ತೀರಾ ಸಪ್ಪೆ ಅನ್ಸುತ್ತೆ. ಇ೦ಡಿಯಾ ಮಣ್ಣ್ ತ೦ದ್ ಸುಭಾಷ್ ಚ೦ದ್ರ ಗಾ೦ಧಿದು(ಉಪ್ಪಿ) ಕ೦ಪನಿ ಜೊತೆ ಬಿಸಿನೆಸ್ ಡೀಲ್ ಕುದ್ರಿಸ್ಕೊಳೋದು ಸ್ವಲ್ಪ ಜಾಸ್ತಿಯಾಯ್ತು ಅನ್ಸುತ್ತೆ. ಇ೦ಥಾ ಸೀನ್ ಗಳು ಪಿಕ್ಚರ್ ನಲ್ಲಿ ಬರುತ್ವೆ. ನ೦ತ್ರ ಪಿಕ್ಚರ್ದು ಮ್ಯೂಸಿಕ್ ಸೂಪರ್, ಲಿರಿಕ್ಸ್ ಬೇಕಾರ್.

ಸೂಪರ್ ಅ೦ತೂ ಸೂಪರ್ ಹಿಟ್ ಆಗಿದೆ. ಉಪ್ಪಿ ನೆಕ್ಷ್ಟ್ ಪಿಕ್ಚರ್ ಗೆ ರೆಡಿಯಾಗ್ತಿದಾರೆ, ನಾವು ಆ ಪಿಕ್ಚರ್ ನೋಡಕ್ಕೆ ರೆಡಿಯಾಗೋಣ!

Saturday, October 2, 2010

ತುಳು ಕಲಿಯಿರಿ - ಭಾಗ ೨ - ಗೆಳೆಯನೊ೦ದಿಗೆ ತುಳುವಿನಲ್ಲಿ ಮಾತುಕತೆ

ನಿಮ್ಮ ಕರಾವಳಿಯ ಗೆಳೆಯನೊ೦ದಿಗೆ ತುಳುವಿನಲ್ಲಿ ಮಾತಾನಾಡುವುದಕ್ಕೆ ಕೆಳಗೆ ನೀಡಿರುವ ವಾಕ್ಯಗಳು ನಿಮಗೆ ಸಹಾಯವಾಗಬಹುದು. ಗಮನಿಸಿ ಗೆಳೆಯ ಸಮಾನ ವಯಸ್ಕನೆ೦ದು ಪರಿಗಣಿಸಿ ವಾಕ್ಯಗಳಲ್ಲಿ ಏಕವಚನವನ್ನು ಬಳಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಬಳಕೆಯಲ್ಲಿರುವ ತುಳು ಭಾಷೆಯಲ್ಲಿ ಹಲವು ಶೈಲಿಗಳು ಅಥವಾ ಆಡುನುಡಿಗಳಿವೆ(Dialects). ಇಲ್ಲಿ ನಾನು ಬಳಸಿರುವ ಶೈಲಿ ಮ೦ಗಳೂರು ಕಡೆಯದ್ದು.

ಕನ್ನಡ : ನಮಸ್ಕಾರ, ಹೇಗಿದೀಯ?
ತುಳು : ನಮಸ್ಕಾರ, ಎ೦ಚುಲ್ಲ?

ಕನ್ನಡ : ನಾನು ಚೆನ್ನಾಗಿದೀನಿ.
ತುಳು : ಯಾನ್ ಉಸಾರುಲ್ಲೆ.

ಕನ್ನಡ : ಮನೇಲಿ ಎಲ್ಲ್ರು ಚೆನ್ನಾಗಿದಾರ?
ತುಳು : ಇಲ್ಲಡ್ ಮಾತೆರ್ಲ ಉಸಾರುಲ್ಲೆರಾ?

ಕನ್ನಡ : ಎಲ್ಲ್ರು ಚೆನ್ನಾಗಿದಾರೆ.
ತುಳು : ಮಾತೆರ್ಲ ಉಸಾರುಲ್ಲೆರ್.

ಕನ್ನಡ : ನಿನ್ನ ಕೆಲಸ ಹೇಗೆ ನಡೀತಾ ಇದೆ?
ತುಳು : ನಿನ್ನ ಬೇಲೆ ಎ೦ಚ ನಡತ್ತೊ೦ದು೦ಡು?

ಕನ್ನಡ : ಇವತ್ತು ಟಿಫಿನ್ ಗೆ ಏನಿತ್ತು?
ತುಳು : ಇನಿ ಟಿಫಿನ್ ಗ್ ದಾದ ಇತ್ತ್೦ಡ್?

ಕನ್ನಡ : ಮತ್ತೇನು ವಿಷಯ?
ತುಳು : ಬುಕ ದಾದ ವಿಷಯ?

ಕನ್ನಡ : ಕಾಫಿ ಹೇಗಿತ್ತು?
ತುಳು : ಕಾಫಿ ಎ೦ಚ ಇತ್ತ್೦ಡ್?

ಕನ್ನಡ : ಕಾಫಿ ಚೆನ್ನಾಗಿತ್ತು.
ತುಳು : ಕಾಫಿ ಎಡ್ಡೆ ಇತ್ತ್೦ಡ್.

ಕನ್ನಡ : ವೀಕೆ೦ಡ್ ಎಲ್ಲಿ ಹೋಗಿದ್ದೆ?
ತುಳು : ವೀಕೆ೦ಡ್ ದೂರ ಪೋದಿತ್ತ?

ಕನ್ನಡ : ಈ ಸಲಿ ಮೈಸೂರಿಗೆ ಹೋಗಿದ್ದೆ.
ತುಳು : ಈ ಸರ್ತಿ ಮೈಸೂರುಗ್ ಪೋದಿತ್ತೆ.

ಕನ್ನಡ : ವೀಕೆ೦ಡ್ ಹೇಗಿತ್ತು?
ತುಳು : ವೀಕೆ೦ಡ್ ಎ೦ಚ ಇತ್ತ್೦ಡ್?

ಕನ್ನಡ : ತು೦ಬಾ ಚೆನ್ನಾಗಿತ್ತು.
ತುಳು : ಮಸ್ತ್ ಎಡ್ಡೆ ಇತ್ತ್೦ಡ್.

ಕನ್ನಡ : ಯಾವಾಗ್ ಬ೦ದೆ?
ತುಳು : ಯೇಪ ಬತ್ತಿನಿ?

ಕನ್ನಡ : ನಾನು ನಿನ್ನೆ ಬ೦ದೆ.
ತುಳು : ಯಾನ್ ಕೋಡೆ ಬತ್ತೆ.

ಕನ್ನಡ : ನ೦ಗೆ ಕಾಯ್ತೀಯಾ?
ತುಳು : ಎ೦ಕ್ ಕಾಪುವನಾ?

ಕನ್ನಡ : ಸರಿ, ನಾನು ಕಾಯ್ತೀನಿ.
ತುಳು : ಸರಿ, ಯಾನ್ ಕಾಪುವೆ.

ಕನ್ನಡ : ನಾವು ಇವತ್ತು ಸ೦ಜೆ ಮೀಟ್ ಆಗೋಣ.
ತುಳು : ನಮ ಇನಿ ಬಯ್ಯಗ್ ಮೀಟ್ ಆಕ.

ಕನ್ನಡ : ನಿನಗೆ ಅಲ್ಲಿ ಬರ್ಲಿಕ್ಕಾಗುತ್ತಾ?
ತುಳು : ನಿಕ್ಕ್ ಆಡೆ ಬರ್ರೆ ಆಪು೦ಡಾ?

ಕನ್ನಡ : ಸರಿ, ನ೦ಗೆ ಅಲ್ಲಿಗೆ ಬರಕ್ಕಾಗುತ್ತೆ.
ತುಳು : ಸರಿ, ಎ೦ಕ್ ಅಡೆ ಬರೊಲಿ.

ಕನ್ನಡ : ಇದು ಹೀಗೊ?
ತುಳು : ಉ೦ದು ಇ೦ಚನ?

ಕನ್ನಡ : ಹೌದು ಮಾರಾಯ.
ತುಳು : ಅ೦ದ್ ಮಾರ್ರೆ.

ಕನ್ನಡ : ನಿನ್ಗೆ ಗೊತ್ತಿರ್ಲಿಲ್ಲ್ವಾ?
ತುಳು : ನಿಕ್ಕ್ ಗೊತ್ತಿಜ್ಜಾ೦ಡಾ?

ಕನ್ನಡ : ನಿನ್ನನ್ನು ನೋಡಿ ತು೦ಬಾ ಖುಶಿಯಾಯ್ತು.
ತುಳು : ನಿನನ್ ತೂದ್ ಮಸ್ತ್ ಕುಸಿಯಾ೦ಡ್.

ಕನ್ನಡ : ಈ ವಾಚು ತು೦ಬಾ ಚೆನ್ನಾಗಿದೆ.
ತುಳು : ಈ ವಾಚು ಭಾರಿ ಸೋಕು೦ಡು.

ಕನ್ನಡ : ಈಗ ಏನು ಮಾಡೋದು?
ತುಳು : ಇತ್ತೆ ದಾದ ಮಲ್ಪುನಿ?

ಕನ್ನಡ : ನಾವೀಗ ಮಾತಾಡೋಣವಾ?
ತುಳು : ನಮ ಇತ್ತೆ ಪಾತೆರ್ಗನ?

Saturday, September 25, 2010

ತುಳು ಕಲಿಯಿರಿ - ಭಾಗ ೧ - ಸಾಮಾನ್ಯ ಬಳಕೆಯ ವಾಕ್ಯಗಳು

ನನ್ನ ಆ೦ಗ್ಲ ಬ್ಲಾಗ್ ನಲ್ಲಿ ಬರೆದ ’ತುಳು ಕಲಿಯಿರಿ’ ಲೇಖನಗಳ ಸರಣಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಕೆಲವು ಕನ್ನಡ ಓದುಗರು ಕನ್ನಡ ಲಿಪಿಯಲ್ಲಿಯೇ ತುಳುವನ್ನು ಬರೆದರೆ ತಮಗೆ ಕಲಿಯಲು, ಪದಗಳ ಉಚ್ಛಾರಣೆಯನ್ನು ಸ್ಪಷ್ಟವಾಗಿ ತಿಳಿಯಲು ಅನುಕೂಲವೆ೦ದು ತಿಳಿಸಿದ್ದರಿ೦ದ ನನ್ನ ಕನ್ನಡ ಬ್ಲಾಗ್ ನಲ್ಲಿ ಈ ಸರಣಿಯನ್ನು ಶುರು ಮಾಡುತ್ತಿದ್ದೇನೆ. ತಮ್ಮ ಪ್ರೋತ್ಸಾಹ ಈ ಲೇಖನ ಮಾಲೆಗೂ ಇರಲಿ. ಸರಣಿಯ ಮೊದಲ ಈ ಲೇಖನದಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ವಾಕ್ಯಗಳನ್ನು ನೀಡಿದ್ದೇನೆ.

ಕನ್ನಡ : ನಮಸ್ಕಾರ, ಹೇಗಿದೀರ?
ತುಳು : ನಮಸ್ಕಾರ, ಎ೦ಚ ಉಲ್ಲರ್?

ಕನ್ನಡ : ಊಟ ಆಯ್ತಾ?
ತುಳು : ವಣಸ್ ಆ೦ಡಾ?

ಕನ್ನಡ : ನೀವೆಲ್ಲಿ ಕೆಲಸ ಮಾಡ್ತಿದೀರ?
ತುಳು : ಈರ್ ಓಲು ಬೇಲೆ ಮಲ್ತೊ೦ದುಲ್ಲರ್?

ಕನ್ನಡ : ನಿಮಗೆಲ್ಲರಿಗೂ ಸ್ವಾಗತ.
ತುಳು : ಮಾತೆರ್ಗ್ಲ ಸ್ವಾಗತ.

ಕನ್ನಡ : ಬನ್ನಿ
ತುಳು : ಬಲೆ

ಕನ್ನಡ : ನಾವು ಮ೦ಗಳೂರಿಗೆ ಹೋಗೋಣ.
ತುಳು : ನಮ ಕುಡ್ಲಗ್ ಪೋಯಿ. [ಮ೦ಗಳೂರನ್ನು ತುಳುವಿನಲ್ಲಿ ’ಕುಡ್ಲ’ ಎ೦ದು ಕರೆಯಲಾಗುತ್ತದೆ]

ಕನ್ನಡ : ಈ ಸಲ ಮಳೆ ಹೇಗಿತ್ತು?
ತುಳು : ಈ ಸರ್ತಿ ಬರ್ಸ ಎ೦ಚ ಇತ್ತ್೦ಡ್?

ಕನ್ನಡ : ನೀವು ಯಾವಾಗ ಬ೦ದ್ರಿ?
ತುಳು : ಈರ್ ಏಪ ಬತ್ತಿನಿ?

ಕನ್ನಡ : ನಾನು ಚೆನ್ನಾಗಿದೀನಿ.
ತುಳು : ಯಾನ್ ಉಸಾರ್ ಉಲ್ಲೆ.

ಕನ್ನಡ : ಈ ಬಸ್ಸು ಉಡುಪಿಗೆ ಹೋಗುತ್ತಾ?
ತುಳು : ಈ ಬಸ್ ಉಡುಪಿಗ್ ಪೋಪು೦ಡಾ?

ಕನ್ನಡ : ಈ ಎಡ್ರೆಸ್ ಎಲ್ಲಿ ಬರುತ್ತೆ?
ತುಳು : ಈ ಎಡ್ರೆಸ್ ಓಲು ಬರ್ಪು೦ಡು?

ಕನ್ನಡ : ನಾನು ಬರ್ತೀನಿ.
ತುಳು : ಯಾನ್ ಬರ್ಪೆ.

Saturday, September 11, 2010

ಪಂಚರಂಗಿ ಚಿತ್ರ ವಿಮರ್ಶೆ - ಪಿಕ್ಚರ್ ಅಷ್ಟೇನೇ!!!

ಭಟ್ಟ್ರ ಚಿತ್ರಗಳು, ತು೦ಬಾ ನಿರೀಕ್ಷೆಗಳು, ಮಧುರವಾದ ಹಾಡುಗಳು, ಬ್ಲ್ಯಾಕ್ ಟಿಕೇಟ್ ಗಳು, ಕೊನೆಗೆ ನಿರಾಸೆಗಳು! ಪ೦ಚರ೦ಗಿ ಚಿತ್ರದ್ ವಿಮರ್ಶೆನಾ ಒ೦ದೇ ಸಾಲ್ನಲ್ಲಿ ಮಾಡೋದಾದ್ರೆ ಹೀಗಿರುತ್ತೆ. ನ೦ಗೆ ’ಪ೦ಚರ೦ಗಿ’ ’ಮನಸಾರೆ’ ದು ಸೆಕೆ೦ಡ್ ಪಾರ್‍ಟ್ ಥರಾನೇ ಅನ್ನಿಸ್ತು. ’ಮನಸಾರೆ’ ನಲ್ಲಿ ವೇದಾ೦ತಿ ಥರ ಮಾತಾಡ್ತಾ ಇದ್ದ ಬೇಜವಾಬ್ದಾರಿ ಹುಡ್ಗ ಮನೋಹರ್(ದಿಗ೦ತ್) ಇಲ್ಲಿ ಅದನ್ನೇ ಮು೦ದ್ವರಿಸಿ ಲೈಫ್ ನ ತುಸು ಹೆಚ್ಚೇ ಬೈಯ್ತಾ ಇರೋ ಭರತ್ ಕುಮಾರ್ ಆಗಿದ್ದಾನೆ ಅಷ್ಟೇ. ಅದ್ನ ಬಿಟ್ಟ್ರೆ ಮು೦ಗಾರು ಮಳೆ ಸ್ಟೈಲ್ ನಲ್ಲಿರೋ ಗಣೇಶ್ ರ ವಿಶೇಷ ಮಾತುಗಾರಿಕೆನ ದಿಗ೦ತ್ ಮತ್ತು ನಿಧಿ ಮು೦ದ್ವರ್ಸಿದಾರೆ.Nidhi Subbaiah, Diganth and Ananthnag in Pancharangiಪಿಕ್ಚರ್ ಓಡೋ ಸ್ಪೀಡ್ ನೋಡಿದ್ರೆ ಲೈಫ್ ಮೇಲೆ ಹೊಸ ಬುಕ್ಕೇ ಬರೀಭೋದೇನೋ ಅನ್ಸತ್ತೆ. ಆದ್ರೆ ಎಲ್ಲಾ ಪಿಕ್ಚರ್ ಹ೦ಗೆ ಇದ್ರ್ ಕತೆನೂ ಒ೦ದೇ ಅನ್ನೋದು ತಿಳಿಯೋದಿಕ್ಕೆ ಜಾಸ್ತಿ ಟೈಮ್ ಹಿಡಿಯಲ್ಲಾ ಬಿಡಿ. ಆದ್ರೆ ನಿತ್ಯಾನ೦ದ ಸ್ವಾಮಿಗಳು ಇಲ್ಲಿ ಕೇಶವಾನ೦ದನ ರೂಪ ತಾಳಿ ಬರೋದು, ನಮ್ಮ್ ಜನ ಇರೋ ಬರೋ ಚ್ಯಾನಲ್ ನಲ್ಲ್ ಬರೋ ಅಷ್ಟೂ ಜ್ಯೋತಿಷಿಗಳನ್ನ ಕಣ್ಣ್ ಮುಚ್ಕೊ೦ಡ್ ನ೦ಬೋದನ್ನ ಭಟ್ಟ್ರೆ ಚೆನ್ನಾಗ್ ತಮಾಷೆ ಮಾಡಿದೀರಾ. ಜೊತೆಗೆ ಜನ್ರು ವಾಸ್ತು, ಗೀಸ್ತು ಅ೦ತ ಬೇಸ್ತ್ ಬೀಳೋದನ್ನ ಹಿಗ್ಗಾ ಮುಗ್ಗಾ ಲೇವ್ಡಿ ಮಾಡೀರಿ.

ಒಪ್ದೆ. ಫಿಲ್ಮ್ ಅಲ್ಲಿ ಬರೋ ಡಯಾಲಾಗ್ ಗಳು ಕೆಲವು ಕಡೆ ನಗಿಸ್ತವೆ. ಆದ್ರೆ ಅದೇ ಥರದ ಡಯಾಲಾಗ್ ಗಳು ಮತ್ತ್ ಮತ್ತೆ ಬ೦ದಾಗ ಆಕಳಿಸೋದೊ೦ದ್ ಬಾಕಿ. ಬಿಡ್ರಿ ಸಾಕು, ಈಗಿನ ಪಿಕ್ಚರ್ ಗಳ ಹಣೆಬರಹನೇ ಅಷ್ಟು ಅ೦ತೀರಾ. ಹೂ೦ ಇರ್ಬಹುದು ಕಣ್ರಿ. ಪಿಕ್ಚರ್ ಗಿ೦ತ ಟ್ರ್ರೈಲರೇ ಚೆನ್ನಾಗಿತ್ತು. ಡೈರಕ್ಟರ್ ಸಾಹೇಬ್ರೇ ಲೈಫ್ ಬಗ್ಗೆ ಫುಲ್ ಕನ್ ಫ್ಯೂಶನ್ನಲ್ಲ್ ಇರೋ ಹಾಗಿದೆ. ಪಿಕ್ಚರ್ ನ ಡಾಕುಮೆ೦ಟ್ರಿ ಮಾಡಕ್ಕ್ ಹೊರ್ಟಿದಾರಾ೦ತ ನ೦ಗನುಮಾನ. ಒ೦ದ್ ಮಾತ೦ತೂ ನಿಜ - ಭಟ್ಟ್ರ ಪಿಕ್ಚರ್ ಸಖತ್ತಾಗಿರುತ್ತೆ ಅನ್ನೋ ಲೆವೆಲ್ಗೆ ಈ ಪಿಕ್ಚರ್ ಇಲ್ಲಾ ಬಿಡಿ! ಲೈಫು ಇಷ್ಟೇನೆ!

Friday, July 2, 2010

ಆಕೃತಿ ಪುಸ್ತಕ ಮಳಿಗೆಯಲ್ಲಿ ವಸುಧೇ೦ದ್ರರಿ೦ದ ’ರಕ್ಷಕ ಅನಾಥ’ದ ಪ್ರಬ೦ಧ ವಾಚನ

ವಸುಧೇಂದ್ರ ಪ್ರಬಂಧ ಬರೆಯುವಷ್ಟೇ ಚೆನ್ನಾಗಿ, ಅದನ್ನು ಓದುವರೇ? ನಾವು ಅವರ ಪುಸ್ತಕವನ್ನು ಓದಿ ಆನಂದಿಸುವುದಕ್ಕಿಂತ, ಅವರಿಂದಲೇ ಅದನ್ನು ಓದಿಸಿದಾಗ ನಮಗೆ ಹೆಚ್ಚು ಆನಂದ ಸಿಗುವುದೇ? ಇವೆಲ್ಲಾ ಕುತೂಹಲಕ್ಕೆ, ಉತ್ತರ ನಿಮಗೆ 11 ಜುಲೈ 2010 ಭಾನುವಾರ, ಆಕೃತಿ ಪುಸ್ತಕ ಮಳಿಗೆಯಲ್ಲಿ ಸಿಗಲಿದೆ!ಬನ್ನಿ,ಭಾಗವಹಿಸಿ, ವಸುಧೇಂದ್ರರ ಜೊತೆ ಹರಟೆ ಹೊಡೆಯೋಣ! ವಸುಧೇಂದ್ರರ ಪುಸ್ತಕದಲ್ಲಿ ನಮಗೆ ಇಷ್ಟವಾದದ್ದನ್ನ, ಇಷ್ಟವಾಗದೆ ಇದ್ದದ್ದನ್ನ ಹೇಳೋಣ! ವಸುಧೇಂದ್ರರಿಗೆ ಸರಿ ಬಂದರೆ ನಮ್ಮ ಹರಟೆ ಅವರ ಮುಂದಿನ ಪುಸ್ತಕದಲ್ಲಿ ಪ್ರಬಂಧವಾಗಬಾರದೇಕೆ?

ಸ್ಥಳ: ಆಕೃತಿ ಬುಕ್ಸ್
ನಂ. 28 ( ಹಳೆ ನಂ: 733), 2ನೇ ಮಹಡಿ,
12 ನೇ ಮುಖ್ಯರಸ್ತೆ, 3 ನೇ ಬ್ಲಾಕ್,
ರಾಜಾಜಿನಗರ, ಬೆಂಗಳೂರು- 560010
ದಿನಾಂಕ : ಭಾನುವಾರ, 11 ಜುಲೈ 2010
ಸಮಯ: ಬೆಳಗ್ಗೆ 11 ಘಂಟೆಗೆ
ಗುರುತು: ಇ. ಎಸ್. ಐ. ಆಸ್ಪತ್ರೆ ಹತ್ತಿರ, ಸ್ವಾತಿ ಗಿಫ್ಟ್ ಸೆಂಟರ್‌‍ನ ಪಕ್ಕ, ಎಫ್-ಸ್ಕ್ವಾರ್ ಮಳಿಗೆಯ ಮೇಲೆ
ಹೆಚ್ಚಿನ ವಿವರಗಳಿಗೆ ದೂರವಾಣಿಯಲ್ಲಿ ಸಂಪರ್ಕಿಸಲು: 9886694580

ನೀವೂ ಬನ್ನಿ, ನಿಮ್ಮ ಗೆಳೆಯರನ್ನೂ ಕರೆತನ್ನಿ..

LinkWithin

Related Posts with Thumbnails