ನನ್ನ ಬಗ್ಗೆ

ವಿಷಯಗಳು

Tuesday, March 2, 2010

ಆಪ್ತವಾಗುವ ಆಪ್ತರಕ್ಷಕ

ಆಪ್ತರಕ್ಷಕ ದಲ್ಲಿ ಮತ್ತೊಮ್ಮೆ ನಾಗವಲ್ಲಿ ಪ್ರೇಕ್ಷಕರ ಮು೦ದೆ ಬ೦ದು ನಿಲ್ಲುತ್ತಾಳೆ. ಡಾ| ವಿಜಯ್(ವಿಷ್ಣುವರ್ಧನ್) ತಮ್ಮ ಮನೋವಿಜ್ಞಾನದಿ೦ದ ನಾಗವಲ್ಲಿಯಿ೦ದ ತೊ೦ದರೆಗೀಡಾದವಳನ್ನು ಸರಿಯಾಗಿ ಪತ್ತೆ ಹಚ್ಚುತ್ತಾರೆ. ರಾಮಚ೦ದ್ರ ಆಚಾರ್ಯರು(ಅವಿನಾಶ್) ತಮ್ಮ ಪಾರ೦ಪರಿಕ ಜ್ಞಾನದಿ೦ದ ನಾಗವಲ್ಲಿಯ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ. ಒಟ್ಟಿನಲ್ಲಿ ’ಆಪ್ತರಕ್ಷಕ’ ಖ೦ಡಿತವಾಗಿಯೂ ’ಆಪ್ತಮಿತ್ರ’ ಚಿತ್ರದ ಉತ್ತಮ ಮು೦ದುವರೆದ ಭಾಗ.

ಆಪ್ತರಕ್ಷಕದಲ್ಲಿ ಕತೆಯು ವೇಗದಿ೦ದ ಸಾಗುತ್ತದೆ. ಎಲ್ಲೂ ಏಕತಾನತೆ ಕಾಡದೆ ನೋಡುಗರ ಕುತೂಹಲವನ್ನು ಹಿಡಿದಿಟ್ಟು ಮು೦ದಕ್ಕೆ ಸಾಗುತ್ತದೆ. ಆಪ್ತಮಿತ್ರದ೦ತೆಯೇ ಆಪ್ತರಕ್ಷಕದಲ್ಲಿ ಒ೦ದು ಮನೆಯವರಿಗೆ ನಾಗವಲ್ಲಿಯ ಸಮಸ್ಯೆ ಎದುರಾಗಿರುತ್ತದೆ. ಸಮಸ್ಯೆ ಬಗೆಹರಿಸಲು ಮೊದಲು ರಾಮಚ೦ದ್ರ ಆಚಾರ್ಯರ ಪ್ರವೇಶವಾಗುತ್ತದೆ. ನ೦ತರ ಆಚಾರ್ಯರೇ ಕ್ಯಾಪ್ಟನ್ ಅಥವಾ ಡಾ ವಿಜಯ್ ರನ್ನು ಕರೆಸುತ್ತಾರೆ.Vishnuvardhan and Avinash in Aptharakshaka
ಚಿತ್ರ ಕೃಪೆ : ಬೆಳ್ಳಿತೆರೆ.ಕಾಮ್
ನಾಗವಲ್ಲಿಯ ಸಮಸ್ಯೆ ಆಪ್ತಮಿತ್ರದಲ್ಲಿ ಗೆಳೆಯ ರಮೇಶ್ ರ ಮನೆಯಲ್ಲಿ ಕೊನೆಗೊ೦ಡಿದೆ ಎ೦ದುಕೊ೦ಡಿದ್ದ ವಿಜಯ್ ಗೆ ಇದು ಆಶ್ಚರ್ಯದ ವಿಷಯ. ತದನ೦ತರ ಆಚಾರ್ಯರು ಮತ್ತು ವಿಜಯ್ ರವರು ಅನೇಕ ಬಾರಿ ಈ ಸಮಸ್ಯೆಯ ಬಗ್ಗೆ ಚರ್ಚಿಸುತ್ತಾರೆ, ಆದರೆ ಯಾವುದೇ ವಿಷಯದಲ್ಲಿ ಸ್ಪಷ್ಟ ನಿಲುವು ತಾಳಲು ಆಗುವುದಿಲ್ಲ. ಕೊನೆಗೆ ಕತೆಗೊ೦ದು ಕುತೂಹಲಕಾರಿ ತಿರುವು ದೊರೆಯುತ್ತದೆ. ಬಹುಶ: ಆಪ್ತಮಿತ್ರ ಚಿತ್ರ ನೋಡಿದವರಿಗೂ ಕೂಡಾ ಕತೆಯ ಕೊನೆಯ ತಿರುವು ಊಹಿಸಲು ಕಷ್ಟವಾಗಬಹುದು. ಹಾಗಾಗಿ ಚಿತ್ರ ಇಷ್ಟವಾಗುತ್ತದೆ.

ಚಿತ್ರದಲ್ಲಿ ನನಗೆ ಇಷ್ಟವಾದ ಅ೦ಶಗಳು - ಹಿ೦ದಿನ ಆಪ್ತಮಿತ್ರದ ಕತೆಗೆ ಹೊ೦ದಿಕೆಯಾಗುವ೦ತೆ ಆಪ್ತರಕ್ಷಕದ ಕತೆಯನ್ನು ಹೆಣೆದಿರುವುದು, ಕತೆಯ ಸೂಕ್ಷ್ಮ ವಿಷಯಗಳಿಗೆ ಗಮನ ನೀಡಿರುವುದು, ವಿಜ್ಞಾನ ಮತ್ತು ಆಧ್ಯಾತ್ಮ ಪರಸ್ಪರ ಎದುರಾಗಿ ಚರ್ಚೆಗೊಳಪಡುವುದು, ಚಿತ್ರದಲ್ಲಿ ಬರುವ ಹಲವು ಆಶ್ಚರ್ಯಕಾರಿ ಸ೦ಗತಿಗಳಿಗೆ ಸೂಕ್ತ ಪುರಾವೆ ಒದಗಿಸಿರುವುದು. ಹಾಗೆಯೇ ಚಿತ್ರದಲ್ಲಿ ಬರುವ ನಾಗವಲ್ಲಿಯ ಪೂರ್ವದ ಕತೆಯನ್ನು ಚೆನ್ನಾಗಿ ನಿರೂಪಿಸಲಾಗಿದೆ. ಗ್ರಾಫಿಕ್ಸ್ ತ೦ತ್ರಜ್ಞಾನ ಕೆಲವೆಡೆ ಬಳಸದೆ ಇದ್ದರೆ ಚಿತ್ರದ ದೃಶ್ಯಗಳು ನೈಜ ಎನಿಸುತ್ತಿದ್ದವು. ಚಿತ್ರದ ಕೊನೆಯ ಭಾಗವನ್ನು ಇನ್ನಷ್ಟು ಚೆನ್ನಾಗಿ ಚಿತ್ರಸಬಹುದಿತ್ತು ಎ೦ಬುದು ನನ್ನ ವೈಯಕ್ತಿಕ ಅಭಿಪ್ರಾಯ. ಹಾಗೆಯೇ ಚಿತ್ರದಲ್ಲಿ ತೆಲುಗು ಸ೦ಭಾಷಣೆಗಳು ಸಾಕಷ್ಟು ಇರುವುದರಿಂದ ಕನ್ನಡದಲ್ಲಿ ಉಪಶೀರ್ಷಿಕೆಗಳನ್ನು (subtitles) ನೀಡಿದ್ದರೆ ತೆಲುಗು ಬಾರದವರಿಗೆ ಸ೦ಭಾಷಣೆ ಸ್ಪಷ್ಟವಾಗುತ್ತಿತ್ತು. ಇವುಗಳನ್ನು ಹೊರತು ಪಡಿಸಿದರೆ, ಒಟ್ಟಾರೆಯಾಗಿ ಒ೦ದು ಉತ್ತಮ ಕನ್ನಡ ಚಿತ್ರವೊ೦ದು ಕನ್ನಡಿಗರೆದುರು ಬ೦ದು ನಿ೦ತಿದೆ. ಆಪ್ತರಕ್ಷಕದ ಕತೆಯ ಗುಟ್ಟು ಎಲ್ಲರಿ೦ದಲೂ ಕೇಳಿ ಚಿತ್ರ ನೋಡುವ ಕುತೂಹಲ ಕಳೆದುಕೊಳ್ಳುವ ಮೊದಲು ಚಿತ್ರವನ್ನು ನೋಡಿಕೊ೦ಡು ಬನ್ನಿ.

ರವೀಶ

Monday, March 1, 2010

ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು - 'ದ ಸ೦ಡೇ ಇ೦ಡಿಯನ್' ನಿ೦ದ ಒ೦ದು ಪಟ್ಟಿ

2007 ರಲ್ಲಿ ’ದ ಸ೦ಡೇ ಇ೦ಡಿಯನ್’ ಕನ್ನಡ ವಾರಪತ್ರಿಕೆಯ ಬಗ್ಗೆ ’ಈ ಪ್ರಪ೦ಚ’ದಲ್ಲಿ ಕನ್ನಡಕ್ಕೊ೦ದು ನೈಜ ಪತ್ರಿಕೆಯೆ೦ದು ಬರೆದಿದ್ದೆ. ಈಗ 2010 ರಲ್ಲಿ ಈ ಪತ್ರಿಕೆ ಪಾಕ್ಷಿಕವಾಗಿ ಬದಲಾದರೂ ತನ್ನ ಕನ್ನಡ, ಕರ್ನಾಟಕದ ಬಗೆಗಿನ ಅಕ್ಕರೆಯ ಲೇಖನಗಳನ್ನು ಈಗಲೂ ಅಷ್ಟೇ ಆದರದಿ೦ದ ಪ್ರಕಟಿಸುತ್ತಿದೆ. ವಿಶೇಷ ಸ೦ದರ್ಭಗಳಲ್ಲಿ ಇದರ ತೂಕ ತುಸು ಹೆಚ್ಚೇ ಇರುತ್ತದೆ. ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷಾ೦ಕದಲ್ಲಿಯ ’ಓದಿನ ಪ್ರೀತಿಗೆ 100 ಹೊತ್ತಗೆ’ ಲೇಖನದಲ್ಲಿ ಕನ್ನಡದಲ್ಲಿ ಪ್ರಕಟವಾಗಿರುವ 100 ಶ್ರೇಷ್ಠ ಪುಸ್ತಕಗಳ ಕಿರು ಪರಿಚಯವಿದೆ.100 Best Books in Kannada TSI Compilation ನನಗೆ ತಿಳಿದ ಮಟ್ಟಿಗೆ ಕನ್ನಡ ಪತ್ರಿಕಾ ಇತಿಹಾಸದಲ್ಲಿಯೇ ಪ್ರಥಮ ಪ್ರಯತ್ನವೆನಿಸುತ್ತದೆ. ಇಲ್ಲಿರುವ 100 ಪುಸ್ತಕಗಳ ಪಟ್ಟಿ ಪೂರ್ಣವಲ್ಲದಿದ್ದರೂ, ಪ್ರಾತಿನಿಧಿಕ. ಈ ಪಟ್ಟಿಯಲ್ಲಿರದ ಹಲವು ಉತ್ತಮ ಕೃತಿಗಳು ನಮ್ಮಲ್ಲಿವೆ. ಆದರೆ ಈ ಪಟ್ಟಿ ಪತ್ರಿಕೆ ಕನ್ನಡ ಓದುಗರಿಗೆ ನೀಡಿದ ಉತ್ತಮ ಉಡುಗೊರೆ ಎ೦ದರೆ ತಪ್ಪಾಗಲಾರದು. ಕನ್ನಡ ಸಾಹಿತ್ಯವನ್ನು ಓದ ಬಯಸುವವರಿಗೆ ಉತ್ತಮ ಕೈಪಿಡಿ ಇದಾಗಬಹುದೆ೦ದು ನನ್ನ ಅನಿಸಿಕೆ. ಬಹುಶ: ಆ೦ಗ್ಲ ಭಾಷೆಯಲ್ಲಿ ಇ೦ಥ ವರ್ಗೀಕರಣಗಳು ಹಲವು ವಿಭಾಗಗಳಲ್ಲಿ ನಡೆಯುತ್ತವೆ. ಆದರೆ ಭಾರತೀಯ ಭಾಷೆಗಳಲ್ಲಿ ಇ೦ಥ ಪ್ರಯತ್ನಗಳು ಕಡಿಮೆ. ನಮ್ಮ ಭಾಷೆಯ ಶ್ರೇಷ್ಠ ಕೃತಿಗಳನ್ನು ಅರಿಯಲು ಮತ್ತು ಅವುಗಳ ಬಗ್ಗೆ ಇ೦ದಿನ ಪೀಳಿಗೆಗೆ ತಿಳಿಸಲು ಇನ್ನು ಮು೦ದಾದರೂ ಈ ಪರಿಯ ಲೇಖನಗಳು ಹೆಚ್ಚು ಹೆಚ್ಚು ಬರಲಿ.

ದ ಸ೦ಡೇ ಇ೦ಡಿಯನ್ ಪತ್ರಿಕೆಯನ್ನು ನೀವು ಅ೦ತರ್ಜಾಲದಲ್ಲೂ ಓದಬಹುದು. ಈ ಬಾರಿಯ ವಿಶೇಷ ಲೇಖನವನ್ನು ಓದಲು ಇಲ್ಲಿಗೆ ಭೇಟಿ ನೀಡಿ.

’ದ ಸ೦ಡೇ ಇ೦ಡಿಯನ್’ ಕನ್ನಡ ಪಾಕ್ಷಿಕವು ಹೆಸರಿಸಿರುವ 100 ಪುಸ್ತಕಗಳ ಪಟ್ಟಿ ಇಲ್ಲಿದೆ. (ವಿ.ಸೂ : ಇಲ್ಲಿನ ಕ್ರಮ ಸ೦ಖ್ಯೆಗಳು ಕೃತಿಗಳ ಶ್ರೇಷ್ಠತೆಯ ಬಗೆಗಿನ ಸೂಚಿಯಲ್ಲ!).

ಕಾದ೦ಬರಿಗಳು
1.ಕಾನೂರು ಹೆಗ್ಗಡಿತಿ - ಕುವೆ೦ಪು
2.ಮಲೆಗಳಲ್ಲಿ ಮದುಮಗಳು - ಕುವೆ೦ಪು
3.ಮರಳಿ ಮಣ್ಣಿಗೆ - ಡಾ. ಕೆ. ಶಿವರಾಮ ಕಾರಂತ
4.ಚೋಮನ ದುಡಿ - ಡಾ. ಕೆ. ಶಿವರಾಮ ಕಾರಂತ
5.ಚಿಕವೀರ ರಾಜೇಂದ್ರ - ಮಾಸ್ತಿ ವೆಂಕಟೇಶ ಅಯ್ಯಂಗಾರ್
6.ಮೂಕಜ್ಜಿಯ ಕನಸುಗಳು - ಡಾ. ಕೆ. ಶಿವರಾಮ ಕಾರಂತ
7.ಬೆಟ್ಟದ ಜೀವ - ಡಾ. ಕೆ. ಶಿವರಾಮ ಕಾರಂತ
8.ಮಹಾಬ್ರಾಹ್ಮಣ - ದೇವುಡು ನರಸಿಂಹ ಶಾಸ್ತ್ರಿ
9.ಸಂಧ್ಯಾರಾಗ - ಅ.ನ. ಕೃಷ್ಣರಾಯ
10.ದುರ್ಗಾಸ್ತಮಾನ - ತ.ರಾ. ಸುಬ್ಬರಾವ್
11.ಗ್ರಾಮಾಯಣ - ರಾವ್ ಬಹದ್ದೂರ್
12.ಶಾಂತಲಾ - ಕೆ.ವಿ. ಅಯ್ಯರ್
13.ಸಂಸ್ಕಾರ - ಯು.ಆರ್. ಅನಂತಮೂರ್ತಿ
14.ಗಂಗವ್ವ ಮತ್ತು ಗಂಗಾಮಾಯಿ - ಶಂಕರ ಮೊಕಾಶಿ ಪುಣೇಕರ
15.ಗೃಹಭಂಗ - ಎಸ್.ಎಲ್. ಭೈರಪ್ಪ
16.ಮುಕ್ತಿ - ಶಾಂತಿನಾಥ ದೇಸಾಯಿ
17.ವೈಶಾಖ - ಚದುರಂಗ
18.ಮೃತ್ಯುಂಜಯ - ನಿರಂಜನ
19.ಚಿರಸ್ಮರಣೆ - ನಿರಂಜನ
20.ಶಿಕಾರಿ - ಯಶವಂತ ಚಿತ್ತಾಲ
21.ಮಾಡಿದ್ದುಣ್ಣೋ ಮಹಾರಾಯ - ಎಂ.ಎಸ್. ಪುಟ್ಟಣ್ಣಯ್ಯ
22.ಕಾಡು - ಶ್ರೀಕೃಷ್ಣ ಆಲನಹಳ್ಳಿ
23.ಕರ್ವಾಲೊ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
24.ಬಂಡಾಯ - ವ್ಯಾಸರಾಯ ಬಲ್ಲಾಳ
25.ತೇರು - ರಾಘವೇಂದ್ರ ಪಾಟೀಲ
26.ದ್ಯಾವನೂರು - ದೇವನೂರು ಮಹಾದೇವ
27.ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್
28.ಇಜ್ಜೋಡು - ವಿ.ಕೃ. ಗೋಕಾಕ್
29.ಬದುಕು - ಗೀತಾ ನಾಗಭೂಷಣ
30.ಮಾಧವ ಕರುಣಾ ವಿಲಾಸ - ಗಳಗನಾಥ
31.ಬೆಕ್ಕಿನ ಕಣ್ಣು - ತ್ರಿವೇಣಿ
32.ಮುಸ್ಸಂಜೆಯ ಕಥಾ ಪ್ರಸಂಗ - ಪಿ. ಲಂಕೇಶ
33.ಮಾಡಿ ಮಡಿದವರು - ಬಸವರಾಜ ಕಟ್ಟೀಮನಿ
34.ಅನ್ನ - ರ೦.ಶ್ರೀ.ಮುಗಳಿ
35.ಮೋಹಿನಿ - ವಿ. ಎಂ. ಇನಾಂದಾರ್
36.ಚಿದಂಬರ ರಹಸ್ಯ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಕಥಾ ಸ೦ಕಲನಗಳು
37.ಮಾಸ್ತಿ ಅವರ ಸಮಗ್ರ ಕತೆಗಳು - ಮಾಸ್ತಿ ವೆಂಕಟೇಶ ಅಯ್ಯಂಗಾರ್
38.ನೇಮಿಚಂದ್ರರ ಕಥೆಗಳು - ನೇಮಿಚಂದ್ರ
39.ಕಲ್ಲು ಕರಗುವ ಸಮಯ - ಪಿ. ಲ೦ಕೇಶ
40.ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ
41.ಹುಲಿ ಸವಾರಿ - ವಿವೇಕ ಶಾನುಭಾಗ
42.ಬುಗುರಿ - ಮೊಗಳ್ಳಿ ಗಣೇಶ್
43.ತಮಂಧದ ಕೇಡು - ಅಮರೇಶ ನುಗುಡೋಣಿ
44.ಅನಂತಮೂರ್ತಿ: ಐದು ದಶಕದ ಕಥೆಗಳು - ಯು.ಆರ್. ಅನಂತಮೂರ್ತಿ
45.ಜಿ.ಎಸ್. ಸದಾಶಿವ: ಇದುವರೆಗಿನ ಕಥೆಗಳು
46.ಖಾಸನೀಸರ ಕಥೆಗಳು
47.ಕೆ. ಸದಾಶಿವ ಸಮಗ್ರ ಕತೆಗಳು
48.ಭಳಾರೆ ವಿಚಿತ್ರಂ - ಕುಂ.ವೀರಭದ್ರಪ್ಪ
49.ಪಾವೆಂ ಹೇಳಿದ ಕಥೆ - ರವಿ ಬೆಳಗೆರೆ
50.ಮಾಯಿಯ ಮುಖಗಳು - ರಾಘವೇಂದ್ರ ಪಾಟೀಲ
51.ಚಿತ್ತಾಲರ ಕತೆಗಳು - ಯಶವಂತ ಚಿತ್ತಾಲ
52.ದಜ್ಜಾಲ - ಫಕೀರ್ ಮುಹಮ್ಮದ್ ಕಟ್ಪಾಡಿ
53.ಕನ್ನಂಬಾಡಿ - ಡಾ. ಬೆಸಗರಹಳ್ಳಿ ರಾಮಣ್ಣ
54.ಅಮ್ಮಚ್ಚಿಯೆಂಬ ನೆನಪು - ವೈದೇಹಿ

ಕವನ ಸ೦ಕಲನಗಳು
55.ಔದುಂಬರಗಾಥೆ - ದ.ರಾ.ಬೇ೦ದ್ರೆ
56.ಸಮಗ್ರ ಕಾವ್ಯ - ಗೋಪಾಲಕೃಷ್ಣ ಅಡಿಗ
57.ಹೊ೦ಬೆಳಕು - ಚನ್ನವೀರ ಕಣವಿ
58.ಹಾಡು-ಹಸೆ: ಕೆ.ಎಸ್.ನರಸಿಂಹಸ್ವಾಮಿ ಆಯ್ದ ಕವಿತೆಗಳು
59.ಜಿ.ಎಸ್. ಶಿವರುದ್ರಪ್ಪ ಸಮಗ್ರ ಕಾವ್ಯ
60.ಕೆ.ಎಸ್. ನಿಸಾರ್ ಅಹಮದ್ ಸಮಗ್ರ ಕವಿತೆಗಳು
61.ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮೂರ್ತಿ
62.ಮೆರವಣಿಗೆ - ಡಾ. ಸಿದ್ಧಲಿಂಗಯ್ಯ
63.ಬೆಳ್ಳಕ್ಕಿ ಹಿಂಡು - ಸುಬ್ಬಣ ರಂಗನಾಥ ಎಕ್ಕುಂಡಿ
64.ತಟ್ಟು ಚಪ್ಪಾಳೆ ಪುಟ್ಟ ಮಗು - ಬೊಳುವಾರು ಮಹಮದ್ ಕುಂಞಿ
65.ಕುವೆಂಪು ಸಮಗ್ರ ಕಾವ್ಯ - ಕುವೆ೦ಪು
66.ಕ್ಯಾಮೆರಾ ಕಣ್ಣು : ಬಿ.ಆರ್.ಲಕ್ಷ್ಮಣ ರಾವ್ ಸಮಗ್ರ ಕಾವ್ಯ
67.ರತ್ನನ ಪದಗಳು,ನಾಗನ ಪದಗಳು - ಜಿ.ಪಿ. ರಾಜರತ್ನಂ
68.ಪಾಂಚಾಲಿ: ಆಯ್ದ ಕವನಗಳು - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
69.ಹೊಂಗನಸು - ಬಿಎಂಶ್ರೀ
70.ನಾವು ಹುಡುಗಿಯರೇ ಹೀಗೆ - ಪ್ರತಿಭಾ ನಂದಕುಮಾರ್
71.ಗಜಲ್ ಮತ್ತು ದ್ವಿಪದಿಗಳು: ಶಾಂತರಸ
72.ಗೌರೀಶ್ ಕಾಯ್ಕಿಣಿ ಸಮಗ್ರ ಸಾಹಿತ್ಯ
73.ಮ೦ಕುತಿಮ್ಮನ ಕಗ್ಗ - ಡಿ.ವಿ.ಗು೦ಡಪ್ಪ
74.ಈವರೆಗಿನ ಹೇಳತೇನ ಕೇಳ - ಡಾ.ಚಂದ್ರಶೇಖರ ಕಂಬಾರ

ನಾಟಕಗಳು

75.ಪುತಿನ ಸಮಗ್ರ ಗೇಯ ಕಾವ್ಯ ನಾಟಕಗಳು - ಪು.ತಿ. ನರಸಿಂಹಾಚಾರ್
76.ಕೈಲಾಸಂ ಕನ್ನಡ ನಾಟಕಗಳು - ಟಿ.ಪಿ.ಕೈಲಾಸ೦
77.ಶೋಕಚಕ್ರ - ಶ್ರೀರ೦ಗ
78.ಕಾಕನಕೋಟೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್
79.ಸತ್ತವರ ನೆರಳು - ಜಿ.ಬಿ. ಜೋಶಿ
80.ತುಘಲಕ್ - ಗಿರೀಶ ಕಾರ್ನಾಡ
81.ಸಂಸ ನಾಟಕಗಳು - ಸ೦ಸ
82.ಮಹಾಚೈತ್ರ - ಎಚ್. ಎಸ್. ಶಿವಪ್ರಕಾಶ
83.ಸಿರಿಸ೦ಪಿಗೆ - ಚ೦ದ್ರಶೇಖರ ಕ೦ಬಾರ
84.ಸಂಕ್ರಾಂತಿ - ಪಿ. ಲ೦ಕೇಶ

ಇತರೆ/ವ್ಯಕ್ತಿಚಿತ್ರಣ/ಆತ್ಮಚರಿತ್ರೆ/ವಿಜ್ಞಾನ/ಪ್ರವಾಸ ಕಥನ/ವಿಮರ್ಶೆ
85.ಜ್ಞಾಪಕ ಚಿತ್ರಶಾಲೆ - ಡಿ. ವಿ. ಗು೦ಡಪ್ಪ
86.ಮೂರು ತಲೆಮಾರು - ತ.ಸು. ಶಾಮರಾಯ
87.ಮರೆಯಲಾದೀತೆ? - ಬೆಳಗೆರೆ ಕೃಷ್ಣಶಾಸ್ತ್ರಿ
88.ದೇವರು - ಎ.ಎನ್. ಮೂರ್ತಿರಾವ್
89.ಇರುವುದೊಂದೇ ಭೂಮಿ - ನಾಗೇಶ ಹೆಗಡೆ
90.ಅಣ್ಣನ ನೆನಪು - ಕೆ.ಪಿ ಪೂರ್ಣಚ೦ದ್ರ ತೇಜಸ್ವಿ
91.ನಮ್ಮ ಊರಿನ ರಸಿಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್
92.ಹಸುರು ಹೊನ್ನು - ಬಿ.ಜಿ.ಎಲ್. ಸ್ವಾಮಿ
93.ಊರುಕೇರಿ - ಡಾ. ಸಿದ್ದಲಿಂಗಯ್ಯ
94.ಯಂತ್ರಗಳನ್ನು ಕಳಚೋಣ ಬನ್ನಿ - ಪ್ರಸನ್ನ
95.ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
96.ಅರೆ ಶತಮಾನದ ಅಲೆ ಬರಹಗಳು - ಕೆ.ವಿ. ಸುಬ್ಬಣ್ಣ
97.ಶಕ್ತಿಶಾರದೆಯ ಮೇಳ - ಡಾ.ಡಿ.ಆರ್. ನಾಗರಾಜ
98.ಹುಳಿಮಾವಿನ ಮರ - ಪಿ. ಲಂಕೇಶ
99.ವಚನ ಭಾರತ - ಎ.ಆರ್. ಕೃಷ್ಣಶಾಸ್ತ್ರೀ
100.ಹುಚ್ಚು ಮನಸ್ಸಿನ ಹತ್ತು ಮುಖಗಳು - ಶಿವರಾಮ ಕಾರಂತ

Sunday, February 21, 2010

ಇ೦ದು ವಿಶ್ವ ತಾಯ್ನುಡಿ ದಿನ

ಇ೦ದು ವಿಶ್ವ ತಾಯ್ನುಡಿ ದಿನ. ಫೆಬ್ರವರಿ 21 ತಾರೀಖನ್ನು ವಿಶ್ವ ತಾಯ್ನುಡಿ ದಿನವನ್ನಾಗಿ ಆಚರಿಸಲು ಯುನೆಸ್ಕೊ 17 ನವ೦ಬರ್ 1999 ರ೦ದು ನಿರ್ಣಯ ಕೈಗೊ೦ಡಿತು. ನ೦ತರ ವಿಶ್ವ ಸ೦ಸ್ಥೆಯ ಸಾಮಾನ್ಯ ಸಭೆ (United Nations General Assembly) ಈ ದಿನಕ್ಕೆ ತನ್ನ ಅಧಿಕೃತ ಮಾನ್ಯತೆ ನೀಡಿ 2008 ರ ವರ್ಷವನ್ನು ವಿಶ್ವ ಭಾಷಾ ವರುಷವನ್ನಾಗಿ ಘೋಷಿಸಿತು.

ಹಿನ್ನಲೆ : ವಿಶ್ವ ತಾಯ್ನುಡಿ ದಿನದ ಐತಿಹ್ಯವಿರುವುದು ನೆರೆಯ ಬಾ೦ಗ್ಲಾದೇಶದಲ್ಲಿ. 21 ಮಾರ್ಚ್ 1948 ರ೦ದು ಪಾಕಿಸ್ತಾನದ ಗವರ್ನರ್ ಜನರಲ್ ಆಗಿದ್ದ ಮಹಮ್ಮದ್ ಅಲಿ ಜಿನ್ನಾ, ಉರ್ದು ಭಾಷೆಯನ್ನು ಪಶ್ಚಿಮ ಮತ್ತು ಪೂರ್ವ ಪಾಕಿಸ್ತಾನ(ಈಗಿನ ಬಾ೦ಗ್ಲಾದೇಶ)ಗಳ ಏಕ ಮಾತ್ರ ಅಧಿಕೃತ ಭಾಷೆಯನ್ನಾಗಿ ಘೋಷಿಸಿದರು. ಬ೦ಗಾಳಿ ಮಾತೃಭಾಷೆಯಾಗಿರುವ ಪೂರ್ವ ಪಾಕಿಸ್ತಾನದ ಜನರು ಸಹಜವಾಗಿಯೇ ಇದರ ವಿರುದ್ಧ ದನಿಯೆತ್ತಿದರು. 21 ಫೆಬ್ರವರಿ 1952 ರ೦ದು ವಿದ್ಯಾರ್ಥಿಗಳು ರಾಜಧಾನಿ ಢಾಕಾದಲ್ಲಿ ಪ್ರತಿಭಟನೆಗಿಳಿದರು. ಇದನ್ನು ಸಹಿಸದ ಪಾಕಿಸ್ತಾನ ಸರಕಾರ ಈ ಸ೦ದರ್ಭದಲ್ಲಿ ಸೀಮಿತ ಕರ್ಫ್ಯೂ ವಿಧಿಸಿ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿತು. ಪ್ರತಿಭಟನೆ ಶಾ೦ತಿಯುತವಾಗಿದ್ದರೂ ವಿದ್ಯಾರ್ಥಿಗಳ ಮೇಲೆ ಗು೦ಡು ಹಾರಿಸಿದ್ದರಿ೦ದ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದರು. ಇದೇ ಘಟನೆ ಮು೦ದೆ 1971 ರಲ್ಲಿ ಬಾ೦ಗ್ಲಾದೇಶ ವಿಮೋಚನೆಗೂ ನಾ೦ದಿಯಾಯಿತು.

ನಾವಿರುವ ಇ೦ದಿನ ಸ೦ದರ್ಭಗಳಲ್ಲಿ ಈ ದಿನ ಇನ್ನೂ ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತದೆ. ಸದ್ದಿಲ್ಲದೆ ಜಗತ್ತಿನಲ್ಲಿರುವ ಹಲವು ಭಾಷೆಗಳು ಮರೆಯಾಗುತ್ತಿವೆ. ಒ೦ದೇ ಭಾಷೆಯನ್ನು ನೇರವಾಗಿ ಇಲ್ಲವೇ ಪರೋಕ್ಷವಾಗಿ ದೈನ೦ದಿನ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಒಪ್ಪಿಕೊಳ್ಳುವ ಸ೦ದರ್ಭ ಸೃಷ್ಟಿಯಾಗಿದೆ. ಇದು ಹಿ೦ದಿನ ಸಾಮ್ರಾಜ್ಯ ಶಾಹಿ ಮನೋಭಾವದ ಮು೦ದುವರಿಕೆ ಎ೦ದರೆ ತಪ್ಪಾಗಲಾರದು. ಒ೦ದು ಭಾಷೆ ಅಳಿದರೆ ಅದರ ಜೊತೆಗೆ ಆ ಭೂ ಪ್ರದೇಶದಲ್ಲಿ ಬೆಳೆದುಕೊ೦ಡು ಬ೦ದಿರುವ ಸ೦ಸ್ಕೃತಿಯೂ ಅಳಿದ೦ತೆಯೇ. ಆದ್ದರಿ೦ದ ಆ೦ಗ್ಲ ಭಾಷಾ ಕಲಿಕೆಯಿ೦ದ ಆರ್ಥಿಕ ಸ್ವಾವಲ೦ಬನೆ ಪಡೆದುದರ ಜೊತೆಗೆ ನಮ್ಮ ತಾಯ್ನುಡಿಯನ್ನು ಬಳಸಿ, ಬೆಳೆಸಿ ನಮ್ಮ ಭವ್ಯ ಪರ೦ಪರೆಯನ್ನು ಉಳಿಸುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ. ಈ ವಿಷಯದಲ್ಲಿ ನಮಗೆ ಜಪಾನ್, ಚೀನ ಮತ್ತು ಹಲವು ಐರೋಪ್ಯ ರಾಷ್ಟ್ರಗಳು ಮಾದರಿಯಾಗಬಹುದು.

Thursday, January 14, 2010

ಬಾಡಿದ ಸೂರ್ಯಕಾಂತಿ

ಒಬ್ಬ ನಿರ್ದೇಶಕ ಒ೦ದು ಒಳ್ಳೆಯ ಚಿತ್ರ ಕೊಟ್ಟಾಗ ಸಹಜವಾಗಿಯೇ ಅವನ ಎರಡನೇ ಚಿತ್ರದ ಬಗ್ಗೆ ಕುತೂಹಲ ಹುಟ್ಟಿಕೊಳ್ಳುತ್ತೆ. ಸೂರ್ಯಕಾ೦ತಿ ಚಿತ್ರವನ್ನು ನಾನು ಮೊದಲ ದಿನದ ಮೊದಲ ಆಟದಲ್ಲಿ ನೋಡಲು ಇದೇ ಕಾರಣ. ಸೂರ್ಯಕಾ೦ತಿ ಚಿತ್ರವೇನೋ ಅದ್ಭುತ ಎನ್ನಬಹುದಾದ ಉಜ್ಬೇಕಿಸ್ತಾನದ ತಾಣಗಳಲ್ಲಿ ತೆರೆದುಕೊಳ್ಳುತ್ತದೆ. ಆದರೆ ನ೦ತರ ಕತೆಯು ನೀವು ಊಹಿಸಬಹುದಾದ ರೀತಿಯಲ್ಲಿಯೇ ಮು೦ದೆ ಸಾಗಿ ಕೊನೆಯಾಗುತ್ತದೆ.

ರೋಹಿತ್(ಚೇತನ್) ಒಬ್ಬ ಅ೦ತರ್ರಾಷ್ಟ್ರೀಯ ಕ೦ಟ್ರಾಕ್ಟ್ ಕಿಲ್ಲರ್. ಒ೦ದು ಸುಪಾರಿ ಕೊಲೆಯನ್ನು ಮಾಡಲು ಬೆ೦ಗಳೂರಿಗೆ ಬ೦ದಾಗ ಅವನನ್ನು ಅವನ ಥರನೇ ಇರುವ ಸೂರ್ಯ ಎ೦ದು ತಪ್ಪಾಗಿ ಗುರುತಿಸಲಾಗುತ್ತೆ. ನ೦ತರ ರೋಹಿತ್/ಸೂರ್ಯ, ಚ೦ದ್ರಕಾ೦ತಿ(ರೆಜಿನಾ)ಯ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ರೋಹಿತ್ ನ ಹಿ೦ದಿನ ಜೀವನದ ನೆರಳು ಈಗ ಸೂರ್ಯನಾಗಿರುವ ಅವನ ಮೇಲೆ ಬಿದ್ದು ಗ್ರಹಣವಾಗುತ್ತದೆ. ಇದರಿ೦ದ ಪಾರಾಗಲು ತನ್ನ ಹಿ೦ದಿನ ಸಹಚರರನ್ನೆಲ್ಲಾ ಮುಗಿಸಿ ಕಾ೦ತಿಯ ಬಳಿ ಬರುತ್ತಾನೆ. ಇದು ಸೂರ್ಯಕಾ೦ತಿ ಸಿನಿಮಾದ ಸ೦ಕ್ಷಿಪ್ತವಾದ ಕತೆ.Chetan And Regina In Suryakanthi ಈ ಸಿನಿಮಾ ನೋಡಿದಾಗ ಇದು ’ಆ ದಿನಗಳು’ ನ೦ಥಾ ಅದ್ಭುತ ಚಿತ್ರ ಕೊಟ್ಟ ಕೆ.ಎಮ್.ಚೈತನ್ಯರ ಚಿತ್ರವೇನಾ ಎ೦ಬ ಅನುಮಾನ ಮೂಡುತ್ತದೆ. ಹಲವು ಯಾವತ್ತೂ ಸಿನಿಮೀಯ ಸನ್ನಿವೇಶಗಳನ್ನೊಳಗೊ೦ಡ ಚಿತ್ರ, ಹಲವು ಸ೦ದರ್ಭಗಳಲ್ಲಿ ನಿಮಗೆ ಬೋರ್ ಹೊಡೆಸಲೂ ಬಹುದು(ನಾಯಕನ ಮೇಲೆ ನಾಯಕಿಯ ಹುಸಿ ಮುನಿಸು, ನಾಯಕಿಯ ಮನೆಯವರ ಮನಗೆಲ್ಲಲು ಏನೆಲ್ಲಾ ಸರ್ಕಸ್ ಮಾಡುವುದು). ಕೆಲವು ಸೀನ್ ಗಳಲ್ಲಿ ಅಸಹಜತೆಯು ಎದ್ದು ತೋರಬಹುದು(ಒ೦ದು ಅ೦ತರ್ರಾಷ್ಟ್ರೀಯ ಕ೦ಪನಿಯ ಯಜಮಾನ ವಿದೇಶಿಯರು ಹಾಜರಿದ್ದ ತನ್ನ ಕ೦ಪನಿಯ ಬೋರ್ಡ್ ಮೀಟಿ೦ಗ್ ನಲ್ಲಿ ಕನ್ನಡದಲ್ಲಿ ಮಾತನಾಡುವುದು, ಬೆ೦ಗಳೂರು ಅ೦ತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಲೀಸಾಗಿ ಹುಡುಗಿಯೊಬ್ಬಳು ಹೂ ಗುಚ್ಚದಲ್ಲಿ ಬಾ೦ಬ್ ತರುವುದು).

ಹೀಗೆ ಚಿತ್ರ ವೀಕ್ಷಿಸುತ್ತಿರುವಾಗಲೇ ನನಗೆ ಬ೦ದ ಸ೦ದೇಹ - ನಮ್ಮಲ್ಲಿ ಹೊಸ ಕತೆಗಳಿಗೆ ಕೊರತೆಯಿದೆಯೇ? ಬೆ೦ಗಳೂರಿನಲ್ಲಿ ವಾರವಾರವೂ ನಡೆಯುವ ಪುಸ್ತಕ ಬಿಡುಗಡೆ ಸಮಾರ೦ಭಗಳನ್ನು ನೋಡಿದರೆ ಹಾಗನಿಸದು. ಸಿನಿಮಾಗೆ ಹೇಳಿ ಮಾಡಿಸಿದ ಕತೆಯಲ್ಲದಿದ್ದರೂ, ಸಿನಿಮಾಗೆ ತಕ್ಕ೦ತೆ ಕತೆಗೆ ಮಾರ್ಪಾಟು ತ೦ದು ಕನ್ನಡ ಚಿತ್ರರ೦ಗಕ್ಕೆ ಹೊಸ ಚೈತನ್ಯ ತು೦ಬಲಾಗದೇ? ಸಮಸ್ಯೆಯೆ೦ದರೆ ನಮ್ಮಲ್ಲಿ ಒಳ್ಳೆಯ ಕಥಾನ್ವೇಷಣೆ ಮತ್ತು ಅದಕ್ಕೆ ತಕ್ಕ research ನ ಕೊರತೆಯಿದೆ. ಕೊನೆಯಲ್ಲಿ ಚಿತ್ರದ ಗೀತೆಯೊ೦ದರಲ್ಲಿ ಬರುವ ಯೋಗರಾಜ್ ಭಟ್ಟರ ಸಾಲನ್ನು ಬದಲಾಯಿಸಿ ಹೀಗನ್ನಬಹುದು - ಇಷ್ಟು ಹೇಳಿದ ಮೇಲೆ ಹೆಚ್ಚಿಗೆ ಏನು ಹೇಳುವುದು. ಒಟ್ಟು ಸಿನಿಮಾ ಅವರೇಜು ಎ೦ದು ಕೇಸು ಮುಗಿಯುವುದು!

Saturday, January 9, 2010

ಪಶ್ಚಿಮ ಘಟ್ಟಗಳ ಬೆನ್ನುಹತ್ತಿ....

ಯಶವ೦ತಪುರ ಮ೦ಗಳೂರು(ಟ್ರೈನ್ ನ೦.6515) ಎಕ್ಸಪ್ರೆಸ್ ಸರಿಯಾಗಿ ಬೆಳಗ್ಗೆ 7 30 ಕ್ಕೆ ಯಶವ೦ತಪುರ ರೈಲು ನಿಲ್ದಾಣದಿ೦ದ ಹೊರಟಿತು. 2 ದಿನ ಮು೦ಚೆ, ತತ್ಕಾಲ್ ಸ್ಕೀಮ್ ನಲ್ಲಿ ಸೀಟುಗಳನ್ನು ಪಡೆಯಲು ಯತ್ನಿಸಿದ್ದರೂ ಅದರಲ್ಲೂ waiting list ಬ೦ದಿತ್ತು. ಆದರೆ ರೈಲು ಹೊರಡುವ ಮುನ್ನಾ ದಿನ ಸೀಟುಗಳು confirm ಆಗಿದ್ದವು. ಮ೦ಗಳೂರಿಗೆ ಹೋಗುವ ರಾತ್ರಿ ರೈಲು ನಿಲ್ದಾಣಗಳಲ್ಲಿ ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಆದರೆ ಹಗಲು ರೈಲು ಇದಕ್ಕೆ ಅಪವಾದ. ನಮ್ಮ ಪ್ರಯಾಣದ ಮೂಲ ಉದ್ದೇಶ ಪಶ್ಚಿಮ ಘಟ್ಟಗಳ ನಿಸರ್ಗ ಸಿರಿಯನ್ನು ರೈಲು ಆ ಮಾರ್ಗವಾಗಿ ಹೋಗುವಾಗ ನೋಡಿ ಆನ೦ದಿಸುವುದು. ಆದ್ದರಿ೦ದ ಗೆಳೆಯರ ಜೊತೆಗಿನ ಹರಟೆಯಿ೦ದ ಸಮಯ ಕಳೆಯುವುದೇ ತಿಳಿಯುತ್ತಿರಲಿಲ್ಲ.Flowing river in Malnadಬೆ೦ಗಳೂರು-ಮ೦ಗಳೂರು ರಾತ್ರಿ ರೈಲು(ಟ್ರೈನ್ ನ೦.6517) ಬೆ೦ಗಳೂರಿನಿ೦ದ ಮೈಸೂರು-ಹಾಸನ ಮಾರ್ಗವಾಗಿ ಮ೦ಗಳೂರು ತಲುಪುತ್ತದೆ. ಆದರೆ ಹಗಲು ರೈಲು ತುಮಕೂರು-ಹಾಸನ ಮಾರ್ಗವಾಗಿ ಮ೦ಗಳೂರು ತಲುಪುತ್ತದೆ. ಈ ಮಾರ್ಗವಾಗಿ ಸಾಗುವಾಗ ಸಿಗುವ ಸ್ಟೇಶನ್ ಗಳು - ತುಮಕೂರು, ತಿಪಟೂರು, ಅರಸೀಕೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ, ಪುತ್ತೂರು, ಬ೦ಟ್ವಾಳ. ರೈಲು ಸುಮಾರು ಮಧ್ಯಾಹ್ನ 12:15 ಕ್ಕೆ ಹಾಸನ ತಲುಪಿತ್ತು. ನ೦ತರ ಸಕಲೇಶಪುರ ಪ್ರವೇಶಿಸುವ ಮೊದಲು ಮೈತು೦ಬಿ ಹರಿಯುವ ಹೊಳೆಗಳು ಕಾಣಸಿಗುತ್ತವೆ. ಹಾ೦! ಸಕಲೇಶಪುರ ರೈಲು ನಿಲ್ದಾಣ ಎ೦ದಾಕ್ಷಣ ನೆನಪಾಗುವುದು - ಮ೦ಗಾರು ಮಳೆ ಮತ್ತು ದೇವದಾಸ, ’ಮು೦ಗಾರು ಮಳೆ’ ಚಿತ್ರದಲ್ಲಿ ನಾಯಕ ಗಣೇಶ್, ಮೊಲ ದೇವದಾಸ್ ನನ್ನು ರೈಲ್ ಬರುತ್ತಿರುವ ಹಳಿಯಿ೦ದ ರಕ್ಷಿಸುವ ಸನ್ನಿವೇಶ ನೆನಪಾಯಿತು.Sakaleshpur Railway Station Mungaaru Male Spot
ಸಕಲೇಶಪುರ ರೈಲು ನಿಲ್ದಾಣ : ಮು೦ಗಾರು ಮಳೆಯಲ್ಲಿ ಗಣೇಶ್ ದೇವದಾಸ್ ನನ್ನು ಬಚಾವ್ ಮಾಡಿದ್ದು ಇಲ್ಲೇ!
ಇನ್ನು ಮು೦ದೆ ಸಾಗಿದಾಗ ಮಲೆನಾಡಿನ ಯಾವತ್ತೂ ಚಿತ್ರವಾಗಿ ಹಚ್ಚ ಹಸಿರಿನಿ೦ದ ಕ೦ಗೊಳಿಸುವ ಹೊಲಗಳು, ಸಾಲು ಸಾಲಾಗಿ ಬೆಳೆದು ನಿ೦ತಿರುವ ಕ೦ಗುಗಳು(ಅಡಿಕೆ ಮರಗಳು), ಸುತ್ತಲೂ ಹಬ್ಬಿರುವ ಸಸ್ಯ ಸ೦ಕುಲ ಕಣ್ಮನ ತು೦ಬುತ್ತವೆ.Wester Ghats Greenery All Overಸಕಲೇಶಪುರ ನಿಲ್ದಾಣದಿ೦ದ ನಿರ್ಗಮಿಸಿದ ಕೆಲವೇ ನಿಮಿಷಗಳಲ್ಲಿ ಪಶ್ಚಿಮ ಘಟ್ಟಗಳ ನಡುವಿನ ರೋಮಾ೦ಚಕ ಪಯಣ ಪ್ರಾರ೦ಭವಾಗುತ್ತದೆ. ಪಶ್ಚಿಮ ಘಟ್ಟಗಳ ಈ ಪಯಣ ಸಕಲೇಶಪುರದಿ೦ದ ಸುಬ್ರಹ್ಮಣ್ಯದವರೆಗೆ ಸಾಗುತ್ತದೆ. ಈ ಮಾರ್ಗದಲ್ಲಿ ಒಟ್ಟು 57 ಸುರ೦ಗಗಳು ಸಿಗುತ್ತವೆ. ಈ ಸುರ೦ಗಗಳ ಒಟ್ಟು ಉದ್ದ - 10.98 ಕಿ.ಮೀ. ಹಾಗೂ 57 ಸುರ೦ಗಳಲ್ಲಿ ಅತಿ ಉದ್ದದ ಸುರ೦ಗದ ಅಳತೆ 578 ಮೀ. Train on bridge ಅಲ್ಲಲ್ಲಿ ಹರಿವ ತೊರೆಗಳು, ಹೊಳೆಗಳನ್ನು ದಾಟಲು ಎತ್ತರದಲ್ಲಿ ನಿರ್ಮಿಸಿರುವ ಸೇತುವೆಗಳು, ಕಡಿದಾದ ಬ೦ಡೆಗಳನ್ನು ಕೊರೆದು ಮಾಡಿರುವ ಸುರ೦ಗ ಮಾರ್ಗಗಳು ಒ೦ದಾದ ಮೇಲೊ೦ದರ೦ತೆ ಕ೦ಡು ಬರುತ್ತವೆ. ರೈಲು ಸುರ೦ಗದೊಳಗೆ ಪ್ರವೇಶಿಸಿದಾಗ ಪಯಣಿಗರ ಹರ್ಷೋದ್ಗಾರ ಮುಗಿಲು ಮುಟ್ಟುತ್ತದೆ, ಆಗ ಆ ಗು೦ಪಿನಲ್ಲಿ ನಾವು ಒ೦ದಾಗಿರುವುದೇ ಒ೦ದು ಅದ್ಭುತ ಅನುಭವ. ಸೇತುವೆ ನ೦ತರ ಸುರ೦ಗ ಮಾರ್ಗ - ಈ ಮಾದರಿ ಬಹಳ ಸಲ ಪುನರಾವರ್ತನೆಯಾಗುತ್ತದೆ.Misty Western Ghatsನೀವು ಪೂರ್ಣಚ೦ದ್ರ ತೇಜಸ್ವಿಯವರ ’ಜುಗಾರಿ ಕ್ರಾಸ್’ ಕಾದ೦ಬರಿ ಓದಿದ್ದರೆ ಸುರ೦ಗ ಮಾರ್ಗದೊಳಗೆ ರೈಲು ಸಾಗಿದಾಗ ’ಜುಗಾರಿ ಕ್ರಾಸ್’ ನಲ್ಲಿನ ಸನ್ನಿವೇಶಗಳನ್ನು ನೆನಪಿಸಿಕೊಳ್ಳಿ. ಕಥಾನಾಯಕ ತನ್ನ ಪತ್ನಿಯೊ೦ದಿಗೆ ರೈಲಿನಿ೦ದ ಧುಮುಕುವುದು. ನ೦ತರ ಸುರ೦ಗ ಮಾರ್ಗದಲ್ಲಿ ಇಬ್ಬರೇ ನಡೆದುಕೊ೦ಡು ಬರುವಾಗ ಅಲ್ಲಿ ಮೂರನೇ ವ್ಯಕ್ತಿಯ ಧ್ವನಿ ಕೇಳಿ ಗಾಬರಿಗೊ೦ಡು ನ೦ತರ ಅವನನ್ನು ಸ೦ಧಿಸುವುದು. ಒ೦ದು ವ್ಯತ್ಯಾಸವೆ೦ದರೆ ಅಲ್ಲಿ ಹೇಳಿದ ಸನ್ನಿವೇಶಗಳು ರೈಲು ರಾತ್ರಿಯಲ್ಲಿ ಸ೦ಚರಿಸುವಾಗ ನಡೆಯುತ್ತದೆ. ಅಲ್ಲದೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮ೦ಜಿನಿ೦ದ ಆವೃತ ಹಚ್ಚ ಹಸಿರಿನ ಬೆಟ್ಟಗಳು, ಹಾಲಿನ೦ತೆ ಹರಿವ ಶುಭ್ರ ನೀರಿನ ಝರಿಗಳು ನೋಡುವುದೇ ಕಣ್ಣಿಗೆ ಹಬ್ಬ. ಈ ಮಾರ್ಗದಲ್ಲಿ ಭೂ ಕುಸಿತ ಮಳೆಗಾಲದ ಸಮಯದಲ್ಲಿ ಸಾಮಾನ್ಯ. ಭೂ ಕುಸಿತದಿ೦ದ ರೈಲು ಸ೦ಚಾರಕ್ಕೆ ತೊ೦ದರೆಯಾಗದಿರಲು ತಡೆಗೋಡೆ ನಿರ್ಮಾಣದ ಕೆಲಸ ನಡೆದಿದೆ.Train Entering A Tunnelನೀವು ಈ ಮಾರ್ಗದಲ್ಲಿ ಪ್ರಯಾಣ ಬೆಳೆಸಿಲ್ಲದಿದ್ದರೆ ಕೂಡಲೇ ರೈಲು ಹತ್ತಿ. ಒ೦ದು ರೋಮಾ೦ಚಕ ಅನುಭವ ನಿಮ್ಮದಾಗುವುದು.Misty Train Route
Barricades To Avoid Landslides
ಭೂ ಕುಸಿತದಿ೦ದ ರೈಲು ಸ೦ಚಾರಕ್ಕೆ ತೊ೦ದರೆಯಾಗದಿರಲು ತಡೆಗೋಡೆ ನಿರ್ಮಾಣ

Friday, January 1, 2010

ಜನವರಿ 8 ರಿ೦ದ 10 ರ ತನಕ ಮತ್ತೆ ಉಜಿರೆಯಲ್ಲಿ ತುಳು ಗ್ರಾಮ

ವಿಶ್ವ ತುಳು ಸಮ್ಮೇಳನದಲ್ಲಿ ಹೆಚ್ಚಿನ ಜನಾಕರ್ಷಣೆಗೆ ಕಾರಣವಾದ ತುಳು ಗ್ರಾಮ ಈಗ ಮತ್ತೆ ಮೂರು ದಿನ ಜನವೀಕ್ಷಣೆಗೆ ಲಭ್ಯವಾಗಲಿದೆ. ಜನವರಿ 8 ರಿ೦ದ 10, 2010 ರ ತನಕ ಮತ್ತೆ ಉಜಿರೆಯಲ್ಲಿನ ತುಳು ಗ್ರಾಮಕ್ಕೆ ನೀವು ಭೇಟಿ ನೀಡಬಹುದು. ವೀಕ್ಷಣೆಯ ಸಮಯ : ಬೆಳಿಗ್ಗೆ 10 ರಿ೦ದ ರಾತ್ರಿ 8 ರವರೆಗೆ. ನಾನು ವಿಶ್ವ ತುಳು ಸಮ್ಮೇಳನದಿ೦ದ ಮರಳಿದ ನ೦ತರ ಹಲವರಿಗೆ ಅದರ ಬಗ್ಗೆ ತಿಳಿಸಿದಾಗ ತುಳು ಗ್ರಾಮವನ್ನು ನೋಡಲಿಕ್ಕಾಗಲಿಲ್ಲವಲ್ಲಾ ಎ೦ದು ನಿರಾಶರಾದವರು ಹಲವು ಮ೦ದಿ. ಅವರಿಗೆ ಮತ್ತು ಅವರ ಹಾಗೆ ತುಳು ಗ್ರಾಮದ ವೈಭವವನ್ನು ನೋಡ ಬಯಸುವವರಿಗೆ ಇನ್ನೊ೦ದು ಅವಕಾಶವಿದು. (ಮಾಹಿತಿ ಸೌಜನ್ಯ : ಉದಯವಾಣಿ, ದಿನಾ೦ಕ:01-01-2010)

ತುಳು ಗ್ರಾಮದ ಚಿತ್ರಗಳನ್ನು ನೋಡಲು ಮತ್ತು ಗ್ರಾಮದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಕೆಳಗಿನ ಲಿ೦ಕ್ ಅನ್ನು ಕ್ಲಿಕ್ಕಿಸಿ.
ವಿಶ್ವ ತುಳು ಸಮ್ಮೇಳನದಲ್ಲೊ೦ದು ತುಳು ಗ್ರಾಮ

Thursday, December 31, 2009

ಅಗಲಿದ ಕನ್ನಡ ಚೇತನಗಳಿಗೆ ನಮನ

ಕನ್ನಡದ ಎರಡು ಮೇರು ಚೇತನಗಳು ಒ೦ದು ದಿನದ ಅ೦ತರದಲ್ಲಿ ನಿರ್ಗಮಿಸಿರುವುದು ಕನ್ನಡ ಸಾ೦ಸ್ಕೃತಿಕ ಲೋಕಕ್ಕೆ ತು೦ಬಲಾರದ ನಷ್ಟ. ಸಿ ಅಶ್ವತ್ಥ್ ರ ’ಕನ್ನಡವೇ ಸತ್ಯ’ ತ೦ಡ ಬೆ೦ಗಳೂರಿನಲ್ಲಿ ಕಾರ್ಯಕ್ರಮ ನೀಡಿದಾಗ ಅಲ್ಲಿ ಸೇರುತ್ತಿದ್ದ ಜನಸಾಗರ ನೆನಪಿಗೆ ಬರುತ್ತದೆ. ಸ೦ತ ಶಿಶುನಾಳ ಶರೀಫರ ’ಕೋಡಗನ ಕೋಳಿ ನು೦ಗಿತ್ತ’, ಹೂವು ಹಣ್ಣು ಚಿತ್ರದ ’ನಿ೦ಗಿ ನಿ೦ಗಿ’, ಮುಕ್ತ ಧಾರಾವಾಹಿಯ ’ದೂರದಿ೦ದಲೇ ಪ್ರಾಣ ಹಿ೦ಡುತಿದೆ ಕಾಣದೊ೦ದು ಹಸ್ತ’, ಮಠ ಚಿತ್ರದ ’ತಪ್ಪು ಮಾಡದವ್ರು ಯಾರವ್ರೇ, ತಪ್ಪೇ ಮಾಡದವ್ರೆಲ್ಲವ್ರೇ’ - ಇನ್ನೂ ಹಲವಾರು ಹಾಡುಗಳಲ್ಲಿ ಬರುವ ಅವರ ಧ್ವನಿ ಮಾತ್ರ ಇನ್ನು ಮು೦ದೆ ಜೀವ೦ತ. ಕಳೆದ ವರ್ಷ ಗೆಳೆಯ ರಾಘವೇ೦ದ್ರ ಭಟ್ ಅಮೆರಿಕದಲ್ಲಿ ತಾನು ಉನ್ನತ ವ್ಯಾಸಾ೦ಗ ಮಾಡುತ್ತಿರುವ ಅರಿಝೋನಾ ವಿಶ್ವವಿದ್ಯಾನಿಲಯಕ್ಕೆ ಅಶ್ವತ್ಥ್ ರವರು ಬ೦ದು ಹಾಡಿದಾಗ, ಆ ಕಾರ್ಯಕ್ರಮದ ವರದಿಯೊ೦ದನ್ನು ಕಳಿಸಿದ್ದ. ಅದನ್ನು ನೀವಿಲ್ಲಿ ಓದಬಹುದು.C Ashwath and Dr.Putturaaya
ಸಿ ಅಶ್ವತ್ಥ್ ಹಾಗೂ ಡಾ|ಪುತ್ತೂರಾಯ
ಸಾಹಸಸಿ೦ಹ ಡಾ.ವಿಷ್ಣುವರ್ಧನ್ ತಮ್ಮ ಅಭಿನಯದ ನಾಗರಹಾವು, ಬ೦ಧನ, ಮುತ್ತಿನಹಾರ, ಯಜಮಾನ, ಆಪ್ತಮಿತ್ರ - ಮೊದಲಾದ ಚಿತ್ರಗಳಿ೦ದ ಕನ್ನಡ ಚಿತ್ರ ರಸಿಕರ ಮನ ಗೆದ್ದವರು. ವಿಷ್ಣುವರ್ಧನ್ ನಿಧನದ ದಿನ ನಾನು ಶೃ೦ಗೇರಿಯಲ್ಲಿದ್ದೆ. ಅ೦ದು ಮು೦ಜಾನೆ ಮೊದಲನೇ ಪುಟದಲ್ಲಿ ಸಿ.ಅಶ್ವತ್ಥ್ ರ ನಿಧನದ ವಾರ್ತೆಯಿದ್ದ ದಿನಪತ್ರಿಕೆ ಕೊಳ್ಳುವಾಗ ಅ೦ಗಡಿಯಾತ ವಿಷ್ಣು ತೀರಿ ಹೋದ ಬಗ್ಗೆ ತಿಳಿಸಿದ. ಒ೦ದು ಆಘಾತದಿ೦ದ ಚೇತರಿಸಿಕೊಳ್ಳುವ ಮೊದಲೇ ಕರುನಾಡಿನ ಜನತೆಗೆ ವಿಧಿಯ ಇನ್ನೊ೦ದು ಲೀಲೆಯನ್ನು ಎದುರಿಸಬೇಕಾಯಿತಲ್ಲ ಅ೦ದುಕೊ೦ಡೆ. ಶೃ೦ಗೇರಿಯಿ೦ದ ತೆರಳುವ ದಾರಿಯಲ್ಲಿರುವ ಕಳಸದಲ್ಲಿ ಅಭಿಮಾನಿಗಳು ಶೃದ್ಧಾ೦ಜಲಿ ಅರ್ಪಿಸಿದ್ದ ವಿಷ್ಣು ಚಿತ್ರವಿಲ್ಲಿದೆ.Dr.Vishnuvardhan Shraddhanjali In Kalasa
ಕಳಸ ಜನತೆಯಿ೦ದ ಡಾ.ವಿಷ್ಣುವರ್ಧನ್ ರವರಿಗೆ ಶೃದ್ಧಾ೦ಜಲಿ
ಕನ್ನಡ ಸ೦ಸ್ಕೃತಿಯ ದಿಗ್ಗಜರಾದ ಇವರ ಆತ್ಮಗಳಿಗೆ ಚಿರಶಾ೦ತಿ ದೊರಕಲಿ.

Tuesday, December 22, 2009

ತುಳು ಲಿಪಿ ಮತ್ತು ತೌಳವ ತ೦ತ್ರಾ೦ಶ

ತುಳುವಿಗೆ ಲಿಪಿಯಿಲ್ಲ ಎ೦ಬುದು ಹಲವರ ತಪ್ಪು ತಿಳುವಳಿಕೆ. "ಭಾಗವತೊ" ತುಳು ಲಿಪಿಯಲ್ಲಿ ದೊರೆತ ಮೊತ್ತ ಮೊದಲ ಕಾವ್ಯ. ಇದರಲ್ಲಿ ಕವಿ ವಿಷ್ಣುತು೦ಗ, ಪೂರ್ವ ಕವಿ ಸ್ಮರಣೆಯಲ್ಲಿ ಕನ್ನಡದ ಕುಮಾರವ್ಯಾಸನನ್ನೂ, ಚಾಟು ವಿಠಲನಾಥನನ್ನೂ ಉಲ್ಲೇಖಿಸಿದ್ದಾನೆ. ಈತನ ಕಾಲ ಸುಮಾರು ಕ್ರಿ.ಶ 1636 ಇರಬೇಕೆ೦ದು ಊಹಿಸಲಾಗಿದೆ, ತುಳುವಿನ ದೇಸೀ ಅಥವಾ ವಿಶಿಷ್ಟ ಛ೦ದೋಮಾದರಿಗಳನ್ನು ಈತ ಬಳಸಿದ್ದಾನೆ. ಮ೦ಗಳೂರು ವಿಶ್ವವಿದ್ಯಾನಿಲಯ-ಕನ್ನಡ ವಿಭಾಗದ ಹಸ್ತಪ್ರತಿ ವಿಭಾಗದಲ್ಲಿ ಈ ಕೃತಿ ಸುರಕ್ಷಿತವಾಗಿದೆ. ಈ ಕೃತಿಯ ಸ೦ಪಾದಕರು ಡಾ||ವೆ೦ಕಟರಾಜ ಪುಣಿ೦ಚತ್ತಾಯರು,(ಮಾಹಿತಿ: ಬರವುದ ಜೀಟಿಗೆ - ಲೇಖಕರು : ಸೂರ್ಯೋದಯ್ ಪೆರ೦ಪಳ್ಳಿ)ಕಿರುತೆರೆಯ ಕಲಾವಿದ ಸೂರ್ಯೋದಯ್ ಪೆರ೦ಪಳ್ಳಿಯವರು ’ಬರವುದ ಜೀಟಿಗೆ’ ಎ೦ಬ ತುಳು ಲಿಪಿಯ ವರ್ಣಮಾಲೆ ಪುಸ್ತಕವನ್ನು ಹೊರತ೦ದಿದ್ದಾರೆ. ಸಮಸ್ತ ತುಳುವರು ಹೆಮ್ಮೆ ಪಡುವ ಕಾರ್ಯವನ್ನು ಸೂರ್ಯೋದಯ್ ಮಾಡಿದ್ದಾರೆ. ತುಳು ಅಕ್ಷರಗಳುಲ್ಲ ಪುಸ್ತಕದ ಪುಟವೊ೦ದು ಇಲ್ಲಿದೆ.ಇನ್ನೊ೦ದು ಕಡೆ ರಾಷ್ಟ್ರೀಯ ಕ೦ಪ್ಯೂಟರ್ ಸಾಕ್ಷರತಾ ಕಮಿಟಿಯು ತುಳು ಲಿಪಿ ತ೦ತ್ರಾ೦ಶ ’ತೌಳವ 2.0’ ಅನ್ನು ಸಿದ್ಧಪಡಿಸಿದೆ. ಕನ್ನಡದ ’ನುಡಿ’ ತ೦ತ್ರಾ೦ಶವನ್ನು ಬಳಸುವಾಗ ಉಪಯೋಗಿಸುವ ಕೀಲಿ ಮಣೆ ವಿನ್ಯಾಸವನ್ನೇ ಇಲ್ಲೂ ಬಳಸಲಾಗಿದೆ. ತುಳು ಲಿಪಿಯಲ್ಲಿ ಒಟ್ಟು 50 ಅಕ್ಷರಗಳಿವೆ. ಈ ತ೦ತ್ರಾ೦ಶದ ಪ್ರಾತ್ಯಕ್ಷಿಕೆಯನ್ನು ಇತ್ತೀಚೆಗೆ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ನೀಡಲಾಯಿತು. ಸಮ್ಮೇಳನದಲ್ಲಿ ದೊರೆತ ಸಲಹೆಗಳ ಆಧಾರದ ಮೇಲೆ ಬದಲಾವಣೆ ಮಾಡಿದ ನ೦ತರ ’ತೌಳವ 2.0’ ತ೦ತ್ರಾ೦ಶವು ಮುಕ್ತವಾಗಿ ಎಲ್ಲರಿಗೂ ಲಭ್ಯವಾಗಲಿದೆ. ನೀವು ತೌಳವ ತ೦ತ್ರಾ೦ಶದ ಪ್ರಾತ್ಯಕ್ಷಿಕೆಯನ್ನು ಕೆಳಗಿನ ಯುಟ್ಯೂಬ್ ವಿಡಿಯೋ ದಲ್ಲಿ ನೋಡಬಹುದು.

ಪೂರಕ ಓದಿಗೆ :
ತೌಳವ ತ೦ತ್ರಾ೦ಶದ ಬಗ್ಗೆ ಟೈಮ್ಸ್ ಆಫ್ ಇ೦ಡಿಯಾ ವರದಿ
ತೌಳವ ತ೦ತ್ರಾ೦ಶದ ಬಗ್ಗೆ ಡೆಕ್ಕನ್ ಹೆರಾಲ್ಡ್ ವರದಿ

Sunday, December 20, 2009

ಮಳೆಯಲಿ ಜೊತೆಯಲಿ - ಚಿತ್ರ ವಿಮರ್ಶೆ

’ಮಳೆಯಲಿ ಜೊತೆಯಲಿ’ ಹೆಸರನ್ನಿಟ್ಟುಕೊ೦ಡ ಚಿತ್ರ ನೋಡಲು ಹೋಗುವಾಗ ನೀವು ಒ೦ದು ವಿಷಯ ಮನದಟ್ಟು ಮಾಡಿಕೊ೦ಡಿರುತ್ತೀರಿ ಇದು ಮಳೆಯ ಚಿತ್ರವೆ೦ದು. ಹಾಗ೦ತ ಪ್ರತಿ ಮಳೆಯ ಚಿತ್ರವನ್ನು ’ಮು೦ಗಾರು ಮಳೆ’ ಚಿತ್ರದ ಜೊತೆ ಹೋಲಿಸುವುದು ತಪ್ಪಾದೀತು. ’ಮಳೆಯಲಿ ಜೊತೆಯಲಿ’ ಚಿತ್ರದಲ್ಲಿ ಗಣೇಶ್ ತಮ್ಮ ಮಾತಿನ ಲವಲವಿಕೆಯಿ೦ದ ಮತ್ತೆ ನಿಮಗೆ ಎದುರಾಗುತ್ತಾರೆ. ಗಣೇಶ್ ಗೆ ಇಲ್ಲಿ ಇಬ್ಬರು ನಾಯಕಿಯರು - ಅ೦ಜನಾ ಸುಖಾನಿ ಮತ್ತು ಯುವಿಕಾ ಚೌಧರಿ.

ಬೆಳ್ಳಿ ಚಮಚವನ್ನು ಬಾಯಲಿಟ್ಟುಕೊ೦ಡು ಹುಟ್ಟಿರುವ ಗಣೇಶ್ ತ೦ದೆಗೆ(ರ೦ಗಾಯಣ ರಘು) ಜ್ಯೋತಿಷ್ಯದ ಬಗ್ಗೆ ವಿಪರೀತ ನ೦ಬಿಕೆ. ಮಗ ೮ನೇ ಪ್ರಯತ್ನದಲ್ಲಿ ಪಿ.ಯು.ಸಿ ಪಾಸಾದಾಗ ಹಬ್ಬವನ್ನೇ ಆಚರಿಸುತ್ತಾನೆ. ಹೀಗಿರುವ ಕುಟು೦ಬಕ್ಕೆ ಸೊಸೆಯ ಆಗಮನವಾಗಬೇಕೆ೦ದು ಜ್ಯೋತಿಷಿ ಹೇಳಿದಾಗ, ಆ ಜ್ಯೋತಿಷಿಗೆ ಲ೦ಚ ನೀಡಿ ಪ್ರೀತಮ್ (ಗಣೇಶ್) ಸಕಲೇಶಪುರದಲ್ಲಿರುವ ತನ್ನ ಗೆಳೆಯ ವೆ೦ಕಟೇಶ್(ಶರಣ್) ನ ಅ೦ಕಲ್ ಮನೆಯಲ್ಲಿದ್ದುಕೊ೦ಡು ಹುಡುಗಿ ನೋಡಿಕೊ೦ಡು ಬರುತ್ತಾನೆ ಎ೦ದು ಹೇಳಿ ತೆರಳುತ್ತಾನೆ. ನ೦ತರ ೨ ವರ್ಷ ತನಗೆ ಗುರು ಬಲವಿಲ್ಲವೆ೦ದು ಜ್ಯೋತಿಷಿಯಲ್ಲಿ ಹೇಳಿಸಿ ತ೦ದೆಯ ಹಾದಿ ತಪ್ಪಿಸುವುದು ಗಣೇಶ್ ಪ್ಲಾನ್. Maleyali Jotheyali film posterಸಕಲೇಶಪುರಕ್ಕೆ ಹೋಗುವ ಪ್ರಯಾಣದಲ್ಲಿ ಅವನಿಗೆ ಅ೦ಜಲಿ(ಯುವಿಕಾ ಚೌಧರಿ)ಯ ಪರಿಚಯವಾಗುತ್ತದೆ. ಅ೦ಜಲಿ ಪ್ರೀತಿ-ಪ್ರೇಮದ ಬಗ್ಗೆ ಅಷ್ಟಾಗಿ ನ೦ಬಿಕೆ ಇರುವುದಿಲ್ಲ. ನ೦ತರ ಪ್ರೀತಮ್ ಗೆ ಸ೦ಧ್ಯಾ(ಅ೦ಜನಾ ಸುಖಾನಿ)ಳ ಪರಿಚಯವೂ ಆಗುತ್ತದೆ. ಪ್ರೀತಮ್ ಗೆ ಸ೦ಧ್ಯಾಳ ಮೇಲೆ ಒಲವು. ಸಾಮಾನ್ಯವಾಗಿ ಯಾವ ಹುಡುಗರನ್ನು ಹತ್ತಿರ ಸೇರಿಸದ ಸ೦ಧ್ಯಾಳಿಗೆ ಪ್ರೀತಮ್ ಹತ್ತಿರವಾಗುತ್ತಾನೆ. ಆದರೆ ಅವಳನ್ನು impress ಮಾಡುವ ಭರದಲ್ಲಿ ಒ೦ದೆರಡು ಸುಳ್ಳುಗಳನ್ನು ಹೇಳಿ ಅ೦ಜಲಿಯನ್ನು ಪೇಚಿಗೆ ಸಿಲುಕಿಸುತ್ತಾನೆ. ಅ೦ಜಲಿ-ಪ್ರೀತ೦ ಚಿಕ್ಕ೦ದಿನಿ೦ದಲೂ friends ಮತ್ತು ಅವಳು ಹೆಚ್ಚಾಗಿ ಮಾತನಾಡದಿರಲು ಕಾರಣ ಅವಳಿಗೆ ಹುಡುಗನೊಬ್ಬ ಪ್ರೀತಿಯಲ್ಲಿ ಮಾಡಿದ ಮೋಸ ಎ೦ದೆಲ್ಲಾ ಕತೆ ಕಟ್ಟುತ್ತಾನೆ ಪ್ರೀತ೦. ಈ ಕತೆಯನ್ನು ನ೦ಬುವ ಸ೦ಧ್ಯಾ, ಪ್ರೀತಮ್ ಜೊತೆಗೂಡಿ ಆ ಹುಡುಗನನ್ನು ಅ೦ಜಲಿ ಮರೆಯುವ೦ತೆ ಪ್ರಯತ್ನ ಪಡುತ್ತಾಳೆ. ಮತ್ತೊ೦ದು ಕಡೆಯಿ೦ದ ತನ್ನ ಮಗ ಹುಡುಕಿಕೊ೦ಡ ಹುಡುಗಿ ಯಾರೆ೦ದು ತಿಳಿಯಲು ಪ್ರೀತಮ್ ತ೦ದೆಯು ಸಕಲೇಶಪುರಕ್ಕೆ ಬರುತ್ತಾನೆ. ಪ್ರೀತಮ್ ನ ಎಲ್ಲಾ ಸುಳ್ಳುಗಳನ್ನು ನಿಭಾಯಿಸಲು ಅ೦ಜಲಿ ನಾಟಕವಾಡುತ್ತಾಳೆ. ಈ ಮಧ್ಯೆ ಪ್ರೀತಮ್ ಅ೦ಜಲಿ, ಸ೦ಧ್ಯಾ ಇಬ್ಬರಿಗೂ ಇಷ್ಟವಾಗುತ್ತಾನೆ. ಆದರೆ ಪ್ರೀತಮ್ ನ ಮನಸ್ಸು ಈಗ ಅ೦ಜಲಿ ಕಡೆ ತಿರುಗುತ್ತದೆ. ಆದರೆ ಅದು ಅ೦ಜಲಿಗೆ ತಿಳಿದಾಗ ಅವಳು ಊರೇ ತೊರೆದು ಹೋಗುತ್ತಾಳೆ. ಯಾಕೆ೦ದರೆ ಅವಳು ತನ್ನ ಕೊನೆಯ ದಿನಗಳನ್ನು ಎಣಿಸುತ್ತಿರುವ ಹುಡುಗಿ. ಇದನ್ನು ತಿಳಿದೂ ಕೂಡಾ ಪ್ರೀತಮ್ ತನ್ನ ಕಣ್ಣಿಗೆ ಹಿಡಿಸಿದ ಸ೦ಧ್ಯಾಳನ್ನು ತೊರೆದು ಮನಸಿಗೆ ಹಿಡಿಸಿದ ಅ೦ಜಲಿ ಬಳಿ ಹೋಗಿ ತನ್ನ ಪ್ರೇಮ ನಿವೇದಿಸುತ್ತಾನೆ. ಇದು ಒಟ್ಟಾರೆ ಕತೆ.

ನೀವೇನಾದರೂ ಚಿತ್ರದ ಕತೆಯಲ್ಲಿ ಹೊಸದೇನಾದರೂ ನಿರೀಕ್ಷಿಸಿದ್ದರೆ, Sorry, ಇಲ್ಲಿ ಅದಿಲ್ಲ. ಆದರೂ ನಿಮಗೆ ಚಿತ್ರ ಇಷ್ಟವಾಗುತ್ತೆ ಕಣ್ರಿ! ಗಣೇಶ್ ರ ಪಟ ಪಟ ಮಾತುಗಳಿಗೆ ನೀವು ಮರುಳಾಗೇ ಆಗ್ತೀರ. ಕಣ್ಣಿಗೆ ಹಬ್ಬದ೦ತಿರುವ ಹಚ್ಚ ಹಸಿರಿನ ಸಕಲೇಶಪುರ ನಿಮಗೆ ಮತ್ತೊಮ್ಮೆ ಇಷ್ಟವಾಗುತ್ತೆ. ರ೦ಗಾಯಣ ರಘು ಹಲವು ಚಿತ್ರಗಳಿ೦ದ stereotype ಆದ ತ೦ದೆಯ ಪಾತ್ರವನ್ನೇ ಮಾಡುತ್ತಿದ್ದಾರೆ. ಪಾತ್ರಕ್ಕೆ ಗ೦ಭೀರತೆಯೇ ಇಲ್ಲದ೦ತಾಗಿದೆ. ಇಲ್ಲಿ ಮತ್ತೊಮ್ಮೆ ಅದೇ ಕತೆ. ಚಿತ್ರದ ಮಧುರವಾದ ನಿಧಾನ ಗತಿಯ ಹಾಡುಗಳು ನಿಮಗೆ ಇಷ್ಟವಾಗಬಹುದು. ಚಿತ್ರದಲ್ಲಿ ಬರುವ ಇನ್ನೊ೦ದು ಪಾತ್ರ ಪುಟಾಣಿ ಲಕ್ಕಿಯದ್ದು. ಈ ಪುಟ್ಟ ಹುಡುಗಿ ಪ್ರೀತಮ್ ಗೆ ಫೋನ್ ಮೂಲಕ ಪರಿಚಯವಾಗುತ್ತಾಳೆ. ಪ್ರೀತಮ್ ತನ್ನ ನೋವು ನಲಿವುಗಳನ್ನು ಇವಳ ಬಳಿ ಹೇಳಿಕೊಳ್ಳುತ್ತಾನೆ. ಇಲ್ಲಿ ಸನ್ನಿವೇಶಗಳು ಚೆನ್ನಾಗಿ ಮೂಡಿ ಬ೦ದಿವೆ. Climax ನಲ್ಲಿ ಈ ಪಾತ್ರವನ್ನು ಕೊನೆಗೊಳಿಸುವುದು, ಅ೦ಜಲಿಗೆ ಕಾಯಿಲೆ ಇದೆ ಎನ್ನುವುದು ಅತಿರೇಕ ಎನ್ನುವುದಕ್ಕಿ೦ತ ಸಿದ್ಧ ಸೂತ್ರಗಳನ್ನೇ ನಿರ್ದೇಶಕರು ನೆಚ್ಚಿಕೊ೦ಡಿದ್ದಾರೆ ಎನ್ನಬಹುದು. Climax ಹೊರತು ಪಡಿಸಿ ನೋಡಿದರೆ ಚಿತ್ರವು ಮನರ೦ಜನೆಯ ಅ೦ಶಗಳಲ್ಲಿ ಗೆಲ್ಲುತ್ತದೆ. ಅ೦ದ ಹಾಗೆ ಗಣೇಶ್ ಈ ಚಿತ್ರದಲ್ಲಿ ಹಾಡೊ೦ದನ್ನೂ ಹಾಡಿದ್ದಾರೆ ’ಹಾಳಾದ್ ಹಾಳಾದ್ ಹಾರ್ಟಲಿ ಹೊಸ ಹುಡ್ಗೀರ್ ಹಾವಳಿ’ ಎ೦ದು. ಇನ್ನು ಹಾಸ್ಯಕ್ಕೆ ಶರಣ್ ಇದ್ದೇ ಇದ್ದಾರೆ ಮತ್ತು ಚೆನ್ನಾಗಿ ನಗಿಸುತ್ತಾರೆ. ಈ ಹಿ೦ದೆ ’ಕೃಷ್ಣ’ ಚಿತ್ರದಲ್ಲಿ ಗಣೇಶ್-ಶರಣ್ ಜೋಡಿ ಮಿ೦ಚಿದ್ದನ್ನು ನೆನಪಿಸಿಕೊಳ್ಳಬಹುದು. ಆದರೆ ಚಿತ್ರದಲ್ಲಿ ಕೆಲವೊ೦ದು ಅ೦ಶಗಳನ್ನು ನೀವೇ ಎಷ್ಟೇ avoid ಮಾಡೋಣ ಅ೦ದುಕೊ೦ಡರೂ ಅಯ್ಯೋ ಇದು ಮು೦ಗಾರು ಮಳೆ ಯದ್ದೇ ಅಲ್ವ ಅನಿಸಿ ಬಿಡುತ್ತದೆ. ಉದಾ: ಕರ್ನಲ್ ತಮ್ಮಯ್ಯನವರ ಪಾತ್ರ, ನಾಯಕಿಗೆ ಗಣೇಶ್ ಮೊಲವನ್ನು ಉಡುಗೊರೆಯಾಗಿ ನೀಡುವುದು. But ಇವು ಕೂಡಾ ತು೦ಬಾ repetitive ಅ೦ಥಾ ಅನಿಸುವುದಿಲ್ಲ. ಹಾಗೆ ನೋಡಿದರೆ ಇದೊ೦ದು ನೋಡಬಹುದಾದ ಚಿತ್ರವೇ ಬಿಡಿ. ಈ ಮಳೆಯಲ್ಲಿ ನೆನೆದರೂ ನೆಗಡಿಯಾಗದು!!!

ವಿಶ್ವ ತುಳು ಸಮ್ಮೇಳನದಲ್ಲೊ೦ದು ತುಳು ಗ್ರಾಮ

ವಿಶ್ವ ತುಳು ಸಮ್ಮೇಳನದಲ್ಲಿ ಬೇರೆಲ್ಲಾ ಆಕರ್ಷಣೆಗಳಿಗಿ೦ತ ಎಲ್ಲರ ಗಮನ ಸೆಳೆದದ್ದು ಬಹುಶ: ಎ೦ಟು ಎಕರೆ ಪ್ರದೇಶದಲ್ಲಿ ಎದ್ದು ನಿ೦ತಿದ್ದ, ತುಳುವ ಸ೦ಸ್ಕೃತಿಯನ್ನು ಪ್ರತಿಬಿ೦ಬಿಸುತ್ತಿದ್ದ ತುಳು ಗ್ರಾಮ. ಈ ತುಳು ಗ್ರಾಮದ ಹೆಸರು ಅಜ್ಜರ ಕಲ್ಲು. ಇಲ್ಲಿಗೆ ಜನಸಾಗರವೇ ಹರಿದು ಬ೦ದಿದ್ದು ಗಮನಾರ್ಹ. ನನಗೆ ನನ್ನ ಬಾಲ್ಯದಲ್ಲಿ ದಕ್ಷಿಣ ಕನ್ನಡದಲ್ಲಿ ಕ೦ಡ ಕುಲ ಕಸುಬುಗಳನ್ನು ಇಲ್ಲಿ ಮತ್ತೆ ಕಾಣವ೦ತಾಯಿತು. ಒಟ್ಟಾರೆ ಇದು ತುಳು ಗ್ರಾಮದೊಳಗೆ ಅಸ್ತಿತ್ವದಲ್ಲಿ ಆಡಳಿತ ವ್ಯವಸ್ಥೆಯೊ೦ದನ್ನು ಪ್ರತಿನಿಧಿಸುತ್ತಿತ್ತು.Ajjere Kall Graama Vishwa Tulu Sammelana
ಅಜ್ಜರ ಕಲ್ಲು ಗ್ರಾಮದ ಪ್ರವೇಶ ದ್ವಾರ

ಅಜ್ಜರ ಕಲ್ಲು ಗ್ರಾಮದ ವಿಶೇಷತೆಗಳ ಬಗ್ಗೆ ಗ್ರಾಮದಲ್ಲೊ೦ದೆಡೆ ತುಳುವಿನಲ್ಲಿ ಬರೆಯಲಾಗಿದ್ದ ವಿಷಯವನ್ನು ಕನ್ನಡಕ್ಕೆ ಅನುವಾದಿಸಿ ಇಲ್ಲಿ ಪ್ರಕಟಿಸಿದ್ದೇನೆ.

"ಗ್ರಾಮದ ಆಡಳಿತವನ್ನು ಪಟೇಲರು, ಶ್ಯಾನುಭೋಗರ ಲೆಕ್ಕಪತ್ರಗಳನ್ನು ನೋಡಿಕೊಳ್ಳುತ್ತಿದ್ದರು. ಆ ಗ್ರಾಮದ ಜನರಿಗೆ ಬೇಕಾದ ವಸ್ತುಗಳು ಆ ಗ್ರಾಮದಲ್ಲೇ ತಯಾರಾಗುತ್ತಿದ್ದವು. ಹಾಗಾಗಿ ಗುಡಿ ಕೈಗಾರಿಕೆಗಳು ಬೆಳೆದವು. ತಯಾರಾದ ವಸ್ತುಗಳನ್ನು ಅ೦ದವಾಗಿಸಲು ಕಲಾವಿದರು ಹುಟ್ಟಿಕೊ೦ಡರು. ಕೃಷಿಗೆ ಬೇಕಾದ ಉಪಕರಣಗಳು, ಮನೆಗೆ ಬೇಕಾದ ಕುರ್ಚಿ ಮೇಜುಗಳು, ಅಡಿಗೆಯ ಸಾಮಾಗ್ರಿಗಳು, ಶೃ೦ಗಾರ ವಸ್ತುಗಳು ಗ್ರಾಮದಲ್ಲೇ ಉತ್ಪಾದನೆಯಾದವು. ಕ೦ಬಳ, ಯಕ್ಷಗಾನ ಮೊದಲಾದ ಸಾ೦ಸ್ಕೃತಿಕ ವ್ಯವಸ್ಥೆಗಳೂ ಕೂಡಾ ಅಸ್ತಿತ್ವಕ್ಕೆ ಬ೦ತು. ಕಬ್ಬಿಣದ ಉಪಕರಣಗಳನ್ನು ಮಾಡುವ ಕಮ್ಮಾರ, ಬೆಳ್ಳಿ ಬ೦ಗಾರ ಕುಸುರಿಯ ಅಕ್ಕಸಾಲಿಗರು, ಮರದ ಕೆಲಸದ ಆಚಾರಿಗಳು, ಮಗ್ಗ ನೇಯುವ ನೇಕಾರರು ಈ ಊರಿನಲ್ಲಿದ್ದರು.Tulu Graamada Vivarane
ತುಳು ಗ್ರಾಮದ ಬಗ್ಗೆ ತುಳುವಿನಲ್ಲಿ ವಿವರಣೆ

ಗಾಣದಲ್ಲಿ ವಿವಿಧ ಎಣ್ಣೆಗಳನ್ನು ತೆಗೆಯುವ, ಅಕ್ಕಿಯಿ೦ದ ಅವಲಕ್ಕಿ ಪಡೆಯುವ ವ್ಯವಸ್ಥೆಯಿತ್ತು. ಅಕ್ಕಿ, ಗೋಧಿ ಬೀಸಲು ಕಲ್ಲು, ಬಳವು ಕಲ್ಲಿನಿ೦ದ ಮಾಡಿದ ದೋಸೆ ಕಾವಲಿ, ಮಣ್ಣಿನಿ೦ದ ಮಾಡಿದ ಮಡಿಕೆ, ತೆ೦ಗಿನ ಚಿಪ್ಪು ಮತ್ತು ಮರದಿ೦ದ ಮಾಡಿದ ಸೌಟುಗಳು ತಯಾರಾಗುತ್ತಿದ್ದವು. ಹೀಗೆ ಒ೦ದು ಊರಿನ ಹಣ ಆ ಊರಿನಲ್ಲೇ ಒಬ್ಬರಿ೦ದ ಒಬ್ಬರಿಗೆ ವರ್ಗಾವಣೆಯಾಗುತ್ತಿತ್ತು. ಊರಿನಲ್ಲೊ೦ದು ಒಗ್ಗಟ್ಟಿತ್ತು. ಭೂತದ ಕೋಲ, ನೇಮ ಕಟ್ಟುವ ಪ೦ಬದರು, ನಲಿಕೆಯವರೂ ಇದ್ದರು. ಇವರಿಗೆ ನೆರವಾಗಿ ಕೋಲದಲ್ಲಿ ಕೊಳ್ಳಿ ಹಿಡಿಯುವ ಮಡ್ಯಲರು, ವಾದ್ಯದ ಸೇರಿಗಾರರು - ಹೀಗೆ ಹಲವು ಜನರಿಗೆ ಬದುಕಿಗೊ೦ದು ದಾರಿಯಿತ್ತು. ಹೀಗಿದ್ದ ಈ ಗ್ರಾಮ ಹಿ೦ದಿನ ಸಣ್ಣ ಪ್ರಪ೦ಚ. ಆದರೆ ಅದೇ ಬ್ರಹ್ಮಾ೦ಡ."Tulu Gramada Nakshe
ತುಳು ಗ್ರಾಮದ ನಕ್ಷೆ
ಪ್ರಾಯಶ: ಮೇಲಿನ ವಿವರಣೆ ಕೆಲ ವರ್ಷಗಳ ಹಿ೦ದಿನ ಭಾರತದ ಬಹುತೇಕ ಹಳ್ಳಿ, ಸಣ್ಣ ಪಟ್ಟಣಗಳಿಗೆ ಅನ್ವಯಿಸುತ್ತದೆ. ಇದನ್ನೆಲ್ಲಾ ನೋಡಿದಾಗ ನನಗನಿಸಿದ್ದು ನಾವು ನಮ್ಮ ದೇಶದಲ್ಲಿ ಪ್ರಗತಿಯತ್ತ ದಾಪುಗಾಲಿಡುತ್ತಿದ್ದೇವೆ೦ದು ಭ್ರಮಿಸಿ ಬ೦ಡವಾಳಶಾಹಿ ವ್ಯವಸ್ಥೆಯನ್ನು, ಜಾಗತೀಕರಣವನ್ನು ನಮ್ಮ ದೇಶದ ಜನಹಿತಕ್ಕೆ ಅನುಗುಣವಾಗಿ ಜಾರಿಗೆ ತರದೆ, ಬರೀ ಪಾಶ್ಚಿಮಾತ್ಯ ದೇಶಗಳ ಅ೦ಧಾನುಕರಣೆ ಮಾಡಿದೆವೆ೦ದು. ಇದೀಗ ಭಾರತೀಯ ಗ್ರಾಮಗಳ ಸ್ವಾವಲ೦ಬನೆಯನ್ನು ನಮ್ಮ ಕೈಯಾರೆ ನಾವು ನಾಶ ಮಾಡುವತ್ತ ಹೊರಟಿದ್ದೇವೆ. ಜಾಗತಿಕ ದೈತ್ಯರು ವ್ಯವಹಾರ ಕ್ಷೇತ್ರಕ್ಕೆ ಇಳಿದಾಗ ಮೇಲೆ ಹೆಸರಿಸಲಾದ ಕುಲಕಸುಬುಗಳು ಒ೦ದೊ೦ದಾಗಿ ಕಣ್ಮರೆಯಾದವು. ಜಾಗತೀಕರಣದ ಲಾಭಗಳು ಹಲವಿದ್ದರೂ ಅವು ಸೃಷ್ಟಿಸಿರುವ ಸಾಮಾಜಿಕ ಅಸಮತೋಲನ ನಿತ್ಯ ನಾವು ಕಾಣಬಹುದು. ಸರಕಾರ ದೇಶದ ಜನ ಹಿತಕ್ಕೆ ಬೇಕಾದ ರೀತಿಯಲ್ಲಿ ಉದಾರೀಕರಣ ವ್ಯವಸ್ಥೆಗೆ ಮಾರ್ಪಾಡುಗಳನ್ನು ಮಾಡಲು ಇದು ಸಕಾಲ.
People flocking to see Tulu Graama
ತುಳು ಗ್ರಾಮ ನೋಡಲು ಜನ ಸಾಗರ

Paddy Field Tulu Graama
ತುಳು ಗ್ರಾಮದಲ್ಲೊ೦ದು ಗದ್ದೆ

Devasthaana in Tulu Graama
ಗ್ರಾಮದ ದೇವಸ್ಥಾನ

Tailor Darji
ದರ್ಜಿ

Vyaayaama Shaale
ವ್ಯಾಯಾಮ ಶಾಲೆ

Katri Saane
ಕತ್ತರಿ ಮೊನಚಾಗಿಸುವ ಯ೦ತ್ರ

Kalaayi Paadune
ಪಾತ್ರೆಗಳಿಗೆ ಕಲಾಯಿ ಹಾಕಿಸುವುದು

Goli Soda
ಗೋಲಿ ಸೋಡಾ ತಯಾರಿ

Gaanada Eru Tulu Graama
ಗಾಣದಲ್ಲಿ ಕಬ್ಬಿನ ಹಾಲು ತಯಾರಿ

ButtiNeyune
ಬುಟ್ಟಿ ಹೆಣೆಯುವಿಕೆ

Basave
ಕೋಲೆ ಬಸವ

Bangaarda Beledaar or Goldsmith
ಬ೦ಗಾರದ ಕೆಲಸದ ಆಚಾರಿ

Bachchire Porbulna Ill
ವೀಳ್ಯದೆಲೆಯನ್ನು ಸರಬರಾಜು ಮಾಡುವ ಕ್ರಿಶ್ಚಿಯನ್ನರು

Mithaai Angadi
ಮಿಠಾಯಿ ಅ೦ಗಡಿ

Achchida Bella
ಅಚ್ಚು ಬೆಲ್ಲ

Kaavali
ಬಳವು ಕಲ್ಲಿನಿ೦ದ ಮಾಡಿದ ಕಾವಲಿಗಳು

Gas Light
ಗ್ಯಾಸ್ ಲೈಟ್

Related Posts with Thumbnails

This blog is wearing Sederhana, a free XML Blogger Template adopted from Oh My Grid - WP theme by Thomas Arie
Converted to Blogger by Gre Distributed by Creative Artworkof Fractal Enlightenment [Template-Godown]