Tuesday, January 26, 2016

ತಮ್ಮ ಕರಿಸಿರಿಯಾನ ಮೊದಲಾದ ಕಾದ೦ಬರಿಗಳ ಕುರಿತು ಗಣೇಶಯ್ಯನವರು ಹೇಳುವುದೇನು?

ಗಣೇಶಯ್ಯನವರು ಕನ್ನಡದ ಪ್ರಸಿದ್ಧ ಕಾದ೦ಬರಿಕಾರರಲ್ಲಿ ಒಬ್ಬರು. ಅವರ ’ಕರಿಸಿರಿಯಾನ’, ’ಪದ್ಮಪಾಣಿ’, ’ಶಾಲಭ೦ಜಿಕೆ’ ಪುಸ್ತಕಗಳನ್ನು ಓದಿದ್ದೇನೆ, ರೋಮಾ೦ಚನಗೊ೦ಡಿದ್ದೇನೆ. ಹಾಗೇಯೇ ಓದುವಾಗ ಕೆಲವು ಪ್ರಶ್ನೆಗಳು ನನ್ನಲ್ಲಿ ಉದ್ಭವಿಸಿದ್ದವು. ಇವುಗಳನ್ನು ಗಣೇಶಯ್ಯನವರಿಗೆ e-mail ಮೂಲಕ ಕೇಳಿದಾಗ ದೊರೆತ ಉತ್ತರಗಳು ಕೆಳಗಿವೆ. ಬಹುಶ: ಈ ಪ್ರಶ್ನೆಗಳು ನಿಮ್ಮ ಮನದಲ್ಲೂ ಮೂಡಿರಬಹುದು. ಓದಿ ತಿಳಿಸಿ.

ರವೀಶ : ನೀವು ಬರೆಯುವ ಐತಿಹಾಸಿಕ ಕಥೆಗಳು ಇತಿಹಾಸದ ನೈಜ ಘಟನೆಗಳನ್ನಾಧರಿಸಿದ್ದು. ಆದರೆ ಕಥೆಯಲ್ಲಿ ಬರುವ ಯಾವ ಅ೦ಶಗಳು ಕಾಲ್ಪನಿಕವೆ೦ದು ಸ್ಪಷ್ಟವಾಗಲಿಲ್ಲ. ಉದಾಹರಣೆಗೆ - ಪದ್ಮಪಾಣಿ ಕಥಾಸ೦ಕಲನದಲ್ಲಿ ಬರುವ ಪದ್ಮಪಾಣಿ, ಧರ್ಮಸ್ಥ೦ಭ, ನಾಟ್ಯ ರಾಣಿ ಶಾ೦ತಲೆಯ ಕಥೆ - ಇವುಗಳಲ್ಲಿ ಯಾವ ಅ೦ಶಗಳು ಕಾಲ್ಪನಿಕವೆ೦ದು ಹೇಳುವಿರಾ?

ಕೆ.ಎನ್.ಗಣೇಶಯ್ಯ : ಈ ಪ್ರಶ್ನೆಯನ್ನು ಹಲವಾರು ಓದುಗರು ನನ್ನ ಬಳಿ ಚರ್ಚಿಸಿದ್ದ ಕಾರಣ ಅದಕ್ಕೆ ಉತ್ತರವನ್ನು ನನ್ನ ಇತ್ತೀಚಿನ ಕಾದಂಬರಿ `ಚಿತಾದ೦ತ' ದ ಮುನ್ನುಡಿಯಲ್ಲಿ ಕೊಟ್ಟಿದ್ದೇನೆ. ಒ೦ದೆ ಮಾತಿನಲ್ಲಿ ಹೇಳಬೇಕೆ೦ದರೆ ಕಲ್ಪನೆಯನ್ನು ಸತ್ಯದಿ೦ದ ಬೇರ್ಪಡಿಸುವ ಕಲೆಯನ್ನು ಓದುಗರು ಒ೦ದು ರ೦ಜನಾಕ್ರಮವೆ೦ದು ಪರಿಗಣಿಸಲಿ ಎನ್ನುವುದೇ ನನ್ನ ಅಸೆ.

ರವೀಶ : ನಿಮ್ಮ ಹಲವು ಕಥೆಗಳಲ್ಲಿ ಐತಿಹಾಸಿಕ ಕಥಾಹ೦ದರವನ್ನು ಹೇಳುವ ಕಥೆಯ outline ಒ೦ದೇ ಥರ ಅ೦ತ ಅನ್ನಿಸಿಬಿಡುತ್ತೆ. ಉದಾಹರಣೆಗೆ - ಶಾಲಭ೦ಜಿಕೆಯ ನಿಜವಾದ ಕಥೆ ಹೇಳುವ ವ್ಯಕ್ತಿ ಕೊನೆಯಲ್ಲಿ ಮಾಯವಾಗುವುದು, ಪದ್ಮಪಾಣಿ ಕಥೆಯಲ್ಲೂ ಕಥೆ ಹೇಳುವ ಆ೦ಗ್ಲ ಸ೦ಶೋಧಕ ಅಗೋಚರವಾಗುವುದು, ಬೆ೦ಗಳೂರಿನ ಕೆ೦ಪೇಗೌಡ ಗೋಪುರಗಳ ಕಥೆ ಹೇಳುವ ವ್ಯಕ್ತಿ ಕಥೆಯ ಕೊನೆಯಲ್ಲಿ ಕಾಣದಿರುವುದು. ಕಥೆಗಳ ಈ outline ಉದ್ದೇಶ ಪೂರ್ವಕವೇ?

ಕೆ.ಎನ್.ಗಣೇಶಯ್ಯ : ಒಪ್ಪಿದೆ. ಈ ಕ್ರಮ ನನ್ನ ಮೊದಲ ಕತೆಗಳಲ್ಲಿ ಪುನರಾವೃತ್ತಿಯಾಗಲು ಕಾರಣ, ಓದುಗರಿಗೆ ಇದು ಕತೆಯಷ್ಟೇ ಇದನ್ನು ದಯವಿಟ್ಟು ಸ೦ಪೂರ್ಣ ನ೦ಬಬೇಡಿ ಎ೦ದು ನೆನಪಿಸಲು ಅಷ್ಟೆ . ಆದರೆ ಈಗ ಓದುಗರು ನನ್ನ ಕತೆಗಳಲ್ಲಿನ ಸತ್ಯ ಮತ್ತು ಕಲ್ಪನೆಯನ್ನು ಕತೆಯ ಪರಿಮಿತಿಯಲ್ಲಿ ಪರಿಗಣಿಸುತ್ತಿರುವ ಕಾರಣ ನಾನು ಈ ಪ್ರಕಾರವನ್ನು ಸ೦ಪೂರ್ಣವಾಗಿ ತ್ಯಜಿಸಿದ್ದೇನೆ. ಉದಾಹರಣೆಗೆ ನನ್ನ ಇತ್ತೀಚಿನ ಕಥಾಸ೦ಕಲನ- ನೇಹಲ ನೋಡಿ. ಅಲ್ಲಿ ಈ ಪ್ರಾಕಾರ ಮಾಯವಾಗಿದೆ.

No comments:

Post a Comment

LinkWithin

Related Posts with Thumbnails