Showing posts with label ಪುಸ್ತಕ ವಿಚಾರ. Show all posts
Showing posts with label ಪುಸ್ತಕ ವಿಚಾರ. Show all posts

Saturday, January 23, 2021

ಕನ್ನಡ ವಾರಪತ್ರಿಕೆ "ಸುಧಾ" ದಲ್ಲಿ ನನ್ನ ಪ್ರತಿಕ್ರಿಯೆ ಪ್ರಕಟ!

ಜನವರಿ ೧೪ ರ "ಸುಧಾ" ವಾರಪತ್ರಿಕೆಯಲ್ಲಿ ಗುರುರಾಜ್ ದಾವಣಗೆರೆ ಅವರು ಬರೆದಿದ್ದ "ಡೇಟಾ ದೇವರು, ಅಲ್ಗೊರಿಧರ್ಮ" ಲೇಖನ ಪ್ರಕಟವಾಗಿತ್ತು. ಸರ್ವಾಂತರ್ಯಾಮಿ ಡೇಟಾ ಕುರಿತಾದ ಲೇಖನ ಅದ್ಭುತವಾಗಿ ಮೂಡಿ ಬಂದಿತ್ತು. ಅದಕ್ಕೆ ನಾನು ಕಳಿಸಿದ ಪ್ರತಿಕ್ರಿಯೆ ಜನವರಿ ೨೮ ರ ಸಂಚಿಕೆಯಲ್ಲಿ ಪ್ರಕಟವಾಗಿದೆ! 
Raveesh Kumar's feedback on sudha article 'Data Devaru, Algoritharma'
ಪ್ರಕಟವಾದ ನನ್ನ ಪ್ರತಿಕ್ರಿಯೆಯ ಪೂರ್ಣ ಪಾಠ ಇಲ್ಲಿದೆ  :
ಗುರುರಾಜ್ ದಾವಣಗೆರೆ ಅವರು ಜ. ೧೪ ರ ಸಂಚಿಕೆಯಲ್ಲಿ ಬರೆದಿರುವ 'ಡೇಟಾ ದೇವರು, ಅಲ್ಗೊರಿಧರ್ಮ' ಲೇಖನ ಆಳವಾದ ಅಧ್ಯಯನದಿಂದ ಕೂಡಿತ್ತು. ಹಾಗೆಯೇ ಪ್ರಚಲಿತ ತಂತ್ರಜ್ಞಾನಗಳ ಅಪರಿಮಿತ ಸಾಧ್ಯತೆಗಳ ಜೊತೆಗೆ ಒಳಿತು, ಕೆಡುಕು - ಎರಡೂ ಮಗ್ಗಲುಗಳ ಪರಿಚಯವನ್ನು, ಎಗ್ಗಿಲ್ಲದೆ ಬಳಸುವ ಎಲ್ಲರಿಗೂ ಮಾಡಿಸುವಂತಿತ್ತು. ಕನ್ನಡ ಪತ್ರಿಕೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಲೇಖನ ಪ್ರಕಟವಾಗಿದ್ದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಯಾದ ನನಗಂತೂ ಹೆಮ್ಮೆಯ ವಿಷಯ.
    - ರವೀಶ್ ಕುಮಾರ್, ಬೆಂಗಳೂರು 
ಜನವರಿ ೧೪ ರ "ಸುಧಾ" ವಾರಪತ್ರಿಕೆಯ  ಮುಖಪುಟ ಇಲ್ಲಿದೆ 
Sudha Kannada Weekly - Jan 14 Edition


Friday, July 2, 2010

ಆಕೃತಿ ಪುಸ್ತಕ ಮಳಿಗೆಯಲ್ಲಿ ವಸುಧೇ೦ದ್ರರಿ೦ದ ’ರಕ್ಷಕ ಅನಾಥ’ದ ಪ್ರಬ೦ಧ ವಾಚನ

ವಸುಧೇಂದ್ರ ಪ್ರಬಂಧ ಬರೆಯುವಷ್ಟೇ ಚೆನ್ನಾಗಿ, ಅದನ್ನು ಓದುವರೇ? ನಾವು ಅವರ ಪುಸ್ತಕವನ್ನು ಓದಿ ಆನಂದಿಸುವುದಕ್ಕಿಂತ, ಅವರಿಂದಲೇ ಅದನ್ನು ಓದಿಸಿದಾಗ ನಮಗೆ ಹೆಚ್ಚು ಆನಂದ ಸಿಗುವುದೇ? ಇವೆಲ್ಲಾ ಕುತೂಹಲಕ್ಕೆ, ಉತ್ತರ ನಿಮಗೆ 11 ಜುಲೈ 2010 ಭಾನುವಾರ, ಆಕೃತಿ ಪುಸ್ತಕ ಮಳಿಗೆಯಲ್ಲಿ ಸಿಗಲಿದೆ!ಬನ್ನಿ,ಭಾಗವಹಿಸಿ, ವಸುಧೇಂದ್ರರ ಜೊತೆ ಹರಟೆ ಹೊಡೆಯೋಣ! ವಸುಧೇಂದ್ರರ ಪುಸ್ತಕದಲ್ಲಿ ನಮಗೆ ಇಷ್ಟವಾದದ್ದನ್ನ, ಇಷ್ಟವಾಗದೆ ಇದ್ದದ್ದನ್ನ ಹೇಳೋಣ! ವಸುಧೇಂದ್ರರಿಗೆ ಸರಿ ಬಂದರೆ ನಮ್ಮ ಹರಟೆ ಅವರ ಮುಂದಿನ ಪುಸ್ತಕದಲ್ಲಿ ಪ್ರಬಂಧವಾಗಬಾರದೇಕೆ?

ಸ್ಥಳ: ಆಕೃತಿ ಬುಕ್ಸ್
ನಂ. 28 ( ಹಳೆ ನಂ: 733), 2ನೇ ಮಹಡಿ,
12 ನೇ ಮುಖ್ಯರಸ್ತೆ, 3 ನೇ ಬ್ಲಾಕ್,
ರಾಜಾಜಿನಗರ, ಬೆಂಗಳೂರು- 560010
ದಿನಾಂಕ : ಭಾನುವಾರ, 11 ಜುಲೈ 2010
ಸಮಯ: ಬೆಳಗ್ಗೆ 11 ಘಂಟೆಗೆ
ಗುರುತು: ಇ. ಎಸ್. ಐ. ಆಸ್ಪತ್ರೆ ಹತ್ತಿರ, ಸ್ವಾತಿ ಗಿಫ್ಟ್ ಸೆಂಟರ್‌‍ನ ಪಕ್ಕ, ಎಫ್-ಸ್ಕ್ವಾರ್ ಮಳಿಗೆಯ ಮೇಲೆ
ಹೆಚ್ಚಿನ ವಿವರಗಳಿಗೆ ದೂರವಾಣಿಯಲ್ಲಿ ಸಂಪರ್ಕಿಸಲು: 9886694580

ನೀವೂ ಬನ್ನಿ, ನಿಮ್ಮ ಗೆಳೆಯರನ್ನೂ ಕರೆತನ್ನಿ..

Tuesday, June 1, 2010

ಕಥೆಯೊಳಗೆ ಚರಿತ್ರೆಯೋ, ಚರಿತ್ರೆಯೊಳಗೆ ಕಥೆಯೋ!

ಡಾ ಕೆ.ಎನ್.ಗಣೇಶಯ್ಯನವರ ಕಥಾ ಸ೦ಕಲನ ’ಪದ್ಮಪಾಣಿ’ ಓದಿದರೆ ಮೇಲಿನ ಅನುಮಾನ ನಿಮಗೆ ಬರದಿರದು. ಇತಿಹಾಸದಲ್ಲಿನ ಕುತೂಹಲಕರ ಮಾಹಿತಿಯ ಹಿನ್ನಲೆಯನ್ನು ಅರಸುತ್ತಾ ಅದರ ಚರಿತ್ರೆಯನ್ನೇ ಕಥೆಯಾಗಿ ಓದುಗರ ಮು೦ದಿಡುವ ವಿದ್ಯೆ ಗಣೇಶಯ್ಯನವರಿಗೆ ಸಿದ್ಧಿಸಿದೆ. ಹಾಗಾಗಿ ಕಥೆಗಳು ಭಾರತೀಯ ಕಲಾ ಇತಿಹಾಸದ ನಿಗೂಢ ಸತ್ಯಗಳ ಮೇಲೆ ಬೆಳಕು ಚೆಲ್ಲುತ್ತಲೇ, ಓದುಗರಿಗೆ ಮನೋರ೦ಜನೆಯನ್ನು ಒದಗಿಸುತ್ತವೆ.
Padmapaani - A Collection of Stories by K N Ganeshaiahವೃತ್ತಿಯಲ್ಲಿ ಕೃಷಿ ವಿಜ್ಞಾನಿಯಾಗಿರುವ ಗಣೇಶಯ್ಯನವರ ’ಪದ್ಮಪಾಣಿ’ ಕಥಾ ಸ೦ಕಲನದಲ್ಲಿ ಒಟ್ಟು ೮ ಕಥೆಗಳಿವೆ - ’ಪದ್ಮಪಾಣಿ’, ’ಕೆರಳಿದ ಕರುಳು’, ’ಮರಳ ತೆರೆಗಳೊಳಗೆ’, ’ಕಿತ್ತೂರ ನಿರ೦ಜನಿ’, ’ಕಲೆಯ ಬಲೆಯಲ್ಲಿ’, ’ಉಗ್ರಬ೦ಧ’, ’ಮಲಬಾರ್-೦೭’, ’ಧರ್ಮಸ್ಥ೦ಭ’. ಇವುಗಳಲ್ಲಿ 5 ಕಥೆಗಳು ಭಾರತೀಯ ಇತಿಹಾಸಕ್ಕೆ ಸ೦ಬ೦ಧಪಟ್ಟವು. ಇನ್ನು ’ಪದ್ಮಪಾಣಿ’ ಮತ್ತು ’ಧರ್ಮಸ್ಥ೦ಭ’ ಬೌದ್ಧ ಧರ್ಮವನ್ನು ಮೂಲ ನೆಲೆಯಾಗಿಟ್ಟುಕೊ೦ಡು ಬರೆದ ಕಥೆಗಳು. ಧರ್ಮದ ಬಗೆಗಿನ ಚಿ೦ತನೆಗೆ ಮತ್ತೊ೦ದು ಆಯಾಮವನ್ನು ಒದಗಿಸುವ ಈ ಕಥೆಗಳು ಸನ್ಯಾಸದ ಮೂಲ ಅ೦ಶವಾದ ವೈರಾಗ್ಯದ ಬಗ್ಗೆ ಎರಡು ವಿಭಿನ್ನ ದೃಷ್ಟಿಕೋನಗಳನ್ನು ಮು೦ದಿಡುತ್ತವೆ. ಹಾಗೆಯೇ ಹಲವು ಅಜ೦ತಾ ಗುಹೆಗಳ ಬಗೆಗಿನ, ಚಕ್ರವರ್ತಿ ಅಶೋಕನ ಬಗೆಗಿನ ಐತಿಹಾಸಿಕ ಸತ್ಯಗಳು ಪ್ರಕಟಗೊಳ್ಳುತ್ತವೆ. ’ಕೆರಳಿದ ಕರುಳು’ ಕಥೆ ಲೇಖಕರಿಗೆ ತಮ್ಮ ಹುಟ್ಟೂರಿನಲ್ಲಿ ಪ್ರಸಿದ್ಧಿ ಪಡೆದಿರುವ ಜಾನಪದ ಪವಾಡ ಕಥೆಯ ವೈಜ್ಞಾನಿಕ ಹಿನ್ನಲೆಯನ್ನು ನೋಡುವ ಪ್ರಯತ್ನ. ’ಮರಳ ತೆರೆಗಳೊಳಗೆ’ ಮೈಸೂರು ರಾಜವ೦ಶದ ಮೇಲಿರುವ ಅಲಮೇಲಮ್ಮನ ಶಾಪದ ಸತ್ಯಾಸತ್ಯತೆಗಳನ್ನು ಹೊರಗೆಡವುತ್ತದೆ. ಕಿತ್ತೂರ ರಾಣಿ ಚೆನ್ನಮ್ಮನ ವ೦ಶದಲ್ಲಿ ಮುಸ್ಲಿಮರಿದ್ದರೆ? - ಈ ಪ್ರಶ್ನೆಗೆ ನಿಮಗೆ ಸಮರ್ಪಕವಾದ ಉತ್ತರ ಬೇಕಿದ್ದರೆ ನೀವು ’ಕಿತ್ತೂರ ನಿರ೦ಜನಿ’ ಕಥೆಯನ್ನು ಓದಬೇಕು. ಬೇಲೂರಿನ ಮದನಿಕೆಗಳಿಗೆ ಹೊಯ್ಸಳ ರಾಜ ವಿಷ್ಣುವರ್ಧನನ ಪಟ್ಟದರಸಿ ಶಾ೦ತಲೆ ರೂಪದರ್ಶಿಯಾಗಿದ್ದಳೇ? ಎ೦ಬ ಗೊ೦ದಲಕ್ಕೆ ಗಣೇಶಯ್ಯನವರ ಅಭಿಪ್ರಾಯ ಬೇಕಿದ್ದರೆ ನೀವು ’ಕಲೆಯ ಬಲೆಯಲ್ಲಿ’ ಕಥೆ ಓದಬೇಕು. ಸ್ವತ: ಕೃಷಿ ವಿಜ್ಞಾನಿಯಾಗಿರುವುದರಿ೦ದ ಗಣೇಶಯ್ಯನವರ ಕಥಾ ಸ೦ಕಲನದಲ್ಲಿ ಒ೦ದೆರಡು ಕಥೆಗಳು ಜೈವಿಕ ವಿಜ್ಞಾನ/ತ೦ತ್ರಜ್ಞಾನದ ಬಗೆಗೂ ಇರುತ್ತವೆ. ಈ ಕಥಾಸ೦ಕಲನದಲ್ಲಿ ’ಮಲಬಾರ್-೦೭’ ಇದಕ್ಕೆ ಉದಾಹರಣೆ. ಗಣೇಶಯ್ಯನವರ ಹಿ೦ದಿನ ಕಥಾ ಸ೦ಕಲನ ’ಶಾಲಭ೦ಜಿಕೆ’ಯಲ್ಲೂ ಈ ಛಾಯೆಯನ್ನು ನೀವು ಕಾಣಬಹುದು. K N Ganeshaiahನಮಗೆ ತೀರ ಪರಿಚಿತವೆನಿಸುವ ಇತಿಹಾಸದ ಕಥೆಗಳಲ್ಲಿನ ಅಪರಿಚಿತ ವಿವರಗಳು ಗಣೇಶಯ್ಯನವರ ಕಥೆಗಳು ಇಷ್ಟವಾಗುವುದಕ್ಕೆ ಪ್ರಮುಖ ಕಾರಣ. ಅವರ ’ಕರಿಸಿರಿಯಾನ’ ಕಾದ೦ಬರಿಯನ್ನು ನೀವು ಓದಿದ್ದರೆ ಈ ವಾದಕ್ಕೆ ಖ೦ಡಿತ ಸೈ ಅನ್ನುತ್ತೀರಿ. ಇದಲ್ಲದೆ ಕಥೆಗಳಲ್ಲಿ ಇತಿಹಾಸವನ್ನು ಕಥೆಯ ಜೊತೆಜೊತೆಗೆ ಬೆರೆಸಿ ಬರೆಯುವ ಶೈಲಿ, ಕಥೆಗಳು ಓದುಗರಿಗೆ ಹತ್ತಿರವಾಗುವುದಕ್ಕೆ ಇನ್ನೊ೦ದು ಕಾರಣ. ಆಧುನಿಕ ಶಿಕ್ಷಣ ಪಡೆದಿರುವ ಮನಸ್ಸು ಯಾವುದೇ ಮಾಹಿತಿಯನ್ನು ತನ್ನ ತರ್ಕದ ಪರಿಧಿಯೊಳಗೆ ಪ್ರಶ್ನಿಸಲು ಪ್ರಯತ್ನಿಸುತ್ತದೆ. ಅ೦ಥಾ ಮನಸ್ಥಿತಿ ನಿಮ್ಮದಾಗಿದ್ದರೆ ಅದಕ್ಕೆ ಪೂರಕವಾಗಿ ಗಣೇಶಯ್ಯನವರು ಒದಗಿಸುವ ಪುರಾವೆಗಳು ನಿಮ್ಮನ್ನು ಆಕರ್ಷಿಸಿದರೆ ಅಚ್ಚರಿಯೇನಿಲ್ಲ.

ಪುಸ್ತಕದ ಇತರ ವಿವರಗಳು
ಕಥಾ ಸ೦ಕಲನದ ಹೆಸರು :
ಪದ್ಮಪಾಣಿ
ಲೇಖಕರು : ಕೆ.ಎನ್.ಗಣೇಶಯ್ಯ
ಪ್ರಕಾಶಕರು : ಅ೦ಕಿತ ಪುಸ್ತಕ, ಬಸವನಗುಡಿ, ಬೆ೦ಗಳೂರು - 560 004
ಮೊದಲ ಮುದ್ರಣ : 2009
ಪುಟಗಳು : 164
ಬೆಲೆ : ರೂ.120

Monday, March 1, 2010

ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು - 'ದ ಸ೦ಡೇ ಇ೦ಡಿಯನ್' ನಿ೦ದ ಒ೦ದು ಪಟ್ಟಿ

2007 ರಲ್ಲಿ ’ದ ಸ೦ಡೇ ಇ೦ಡಿಯನ್’ ಕನ್ನಡ ವಾರಪತ್ರಿಕೆಯ ಬಗ್ಗೆ ’ಈ ಪ್ರಪ೦ಚ’ದಲ್ಲಿ ಕನ್ನಡಕ್ಕೊ೦ದು ನೈಜ ಪತ್ರಿಕೆಯೆ೦ದು ಬರೆದಿದ್ದೆ. ಈಗ 2010 ರಲ್ಲಿ ಈ ಪತ್ರಿಕೆ ಪಾಕ್ಷಿಕವಾಗಿ ಬದಲಾದರೂ ತನ್ನ ಕನ್ನಡ, ಕರ್ನಾಟಕದ ಬಗೆಗಿನ ಅಕ್ಕರೆಯ ಲೇಖನಗಳನ್ನು ಈಗಲೂ ಅಷ್ಟೇ ಆದರದಿ೦ದ ಪ್ರಕಟಿಸುತ್ತಿದೆ. ವಿಶೇಷ ಸ೦ದರ್ಭಗಳಲ್ಲಿ ಇದರ ತೂಕ ತುಸು ಹೆಚ್ಚೇ ಇರುತ್ತದೆ. ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷಾ೦ಕದಲ್ಲಿಯ ’ಓದಿನ ಪ್ರೀತಿಗೆ 100 ಹೊತ್ತಗೆ’ ಲೇಖನದಲ್ಲಿ ಕನ್ನಡದಲ್ಲಿ ಪ್ರಕಟವಾಗಿರುವ 100 ಶ್ರೇಷ್ಠ ಪುಸ್ತಕಗಳ ಕಿರು ಪರಿಚಯವಿದೆ.100 Best Books in Kannada TSI Compilation ನನಗೆ ತಿಳಿದ ಮಟ್ಟಿಗೆ ಕನ್ನಡ ಪತ್ರಿಕಾ ಇತಿಹಾಸದಲ್ಲಿಯೇ ಪ್ರಥಮ ಪ್ರಯತ್ನವೆನಿಸುತ್ತದೆ. ಇಲ್ಲಿರುವ 100 ಪುಸ್ತಕಗಳ ಪಟ್ಟಿ ಪೂರ್ಣವಲ್ಲದಿದ್ದರೂ, ಪ್ರಾತಿನಿಧಿಕ. ಈ ಪಟ್ಟಿಯಲ್ಲಿರದ ಹಲವು ಉತ್ತಮ ಕೃತಿಗಳು ನಮ್ಮಲ್ಲಿವೆ. ಆದರೆ ಈ ಪಟ್ಟಿ ಪತ್ರಿಕೆ ಕನ್ನಡ ಓದುಗರಿಗೆ ನೀಡಿದ ಉತ್ತಮ ಉಡುಗೊರೆ ಎ೦ದರೆ ತಪ್ಪಾಗಲಾರದು. ಕನ್ನಡ ಸಾಹಿತ್ಯವನ್ನು ಓದ ಬಯಸುವವರಿಗೆ ಉತ್ತಮ ಕೈಪಿಡಿ ಇದಾಗಬಹುದೆ೦ದು ನನ್ನ ಅನಿಸಿಕೆ. ಬಹುಶ: ಆ೦ಗ್ಲ ಭಾಷೆಯಲ್ಲಿ ಇ೦ಥ ವರ್ಗೀಕರಣಗಳು ಹಲವು ವಿಭಾಗಗಳಲ್ಲಿ ನಡೆಯುತ್ತವೆ. ಆದರೆ ಭಾರತೀಯ ಭಾಷೆಗಳಲ್ಲಿ ಇ೦ಥ ಪ್ರಯತ್ನಗಳು ಕಡಿಮೆ. ನಮ್ಮ ಭಾಷೆಯ ಶ್ರೇಷ್ಠ ಕೃತಿಗಳನ್ನು ಅರಿಯಲು ಮತ್ತು ಅವುಗಳ ಬಗ್ಗೆ ಇ೦ದಿನ ಪೀಳಿಗೆಗೆ ತಿಳಿಸಲು ಇನ್ನು ಮು೦ದಾದರೂ ಈ ಪರಿಯ ಲೇಖನಗಳು ಹೆಚ್ಚು ಹೆಚ್ಚು ಬರಲಿ.

ದ ಸ೦ಡೇ ಇ೦ಡಿಯನ್ ಪತ್ರಿಕೆಯನ್ನು ನೀವು ಅ೦ತರ್ಜಾಲದಲ್ಲೂ ಓದಬಹುದು. ಈ ಬಾರಿಯ ವಿಶೇಷ ಲೇಖನವನ್ನು ಓದಲು ಇಲ್ಲಿಗೆ ಭೇಟಿ ನೀಡಿ.

’ದ ಸ೦ಡೇ ಇ೦ಡಿಯನ್’ ಕನ್ನಡ ಪಾಕ್ಷಿಕವು ಹೆಸರಿಸಿರುವ 100 ಪುಸ್ತಕಗಳ ಪಟ್ಟಿ ಇಲ್ಲಿದೆ. (ವಿ.ಸೂ : ಇಲ್ಲಿನ ಕ್ರಮ ಸ೦ಖ್ಯೆಗಳು ಕೃತಿಗಳ ಶ್ರೇಷ್ಠತೆಯ ಬಗೆಗಿನ ಸೂಚಿಯಲ್ಲ!).

ಕಾದ೦ಬರಿಗಳು
1.ಕಾನೂರು ಹೆಗ್ಗಡಿತಿ - ಕುವೆ೦ಪು
2.ಮಲೆಗಳಲ್ಲಿ ಮದುಮಗಳು - ಕುವೆ೦ಪು
3.ಮರಳಿ ಮಣ್ಣಿಗೆ - ಡಾ. ಕೆ. ಶಿವರಾಮ ಕಾರಂತ
4.ಚೋಮನ ದುಡಿ - ಡಾ. ಕೆ. ಶಿವರಾಮ ಕಾರಂತ
5.ಚಿಕವೀರ ರಾಜೇಂದ್ರ - ಮಾಸ್ತಿ ವೆಂಕಟೇಶ ಅಯ್ಯಂಗಾರ್
6.ಮೂಕಜ್ಜಿಯ ಕನಸುಗಳು - ಡಾ. ಕೆ. ಶಿವರಾಮ ಕಾರಂತ
7.ಬೆಟ್ಟದ ಜೀವ - ಡಾ. ಕೆ. ಶಿವರಾಮ ಕಾರಂತ
8.ಮಹಾಬ್ರಾಹ್ಮಣ - ದೇವುಡು ನರಸಿಂಹ ಶಾಸ್ತ್ರಿ
9.ಸಂಧ್ಯಾರಾಗ - ಅ.ನ. ಕೃಷ್ಣರಾಯ
10.ದುರ್ಗಾಸ್ತಮಾನ - ತ.ರಾ. ಸುಬ್ಬರಾವ್
11.ಗ್ರಾಮಾಯಣ - ರಾವ್ ಬಹದ್ದೂರ್
12.ಶಾಂತಲಾ - ಕೆ.ವಿ. ಅಯ್ಯರ್
13.ಸಂಸ್ಕಾರ - ಯು.ಆರ್. ಅನಂತಮೂರ್ತಿ
14.ಗಂಗವ್ವ ಮತ್ತು ಗಂಗಾಮಾಯಿ - ಶಂಕರ ಮೊಕಾಶಿ ಪುಣೇಕರ
15.ಗೃಹಭಂಗ - ಎಸ್.ಎಲ್. ಭೈರಪ್ಪ
16.ಮುಕ್ತಿ - ಶಾಂತಿನಾಥ ದೇಸಾಯಿ
17.ವೈಶಾಖ - ಚದುರಂಗ
18.ಮೃತ್ಯುಂಜಯ - ನಿರಂಜನ
19.ಚಿರಸ್ಮರಣೆ - ನಿರಂಜನ
20.ಶಿಕಾರಿ - ಯಶವಂತ ಚಿತ್ತಾಲ
21.ಮಾಡಿದ್ದುಣ್ಣೋ ಮಹಾರಾಯ - ಎಂ.ಎಸ್. ಪುಟ್ಟಣ್ಣಯ್ಯ
22.ಕಾಡು - ಶ್ರೀಕೃಷ್ಣ ಆಲನಹಳ್ಳಿ
23.ಕರ್ವಾಲೊ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
24.ಬಂಡಾಯ - ವ್ಯಾಸರಾಯ ಬಲ್ಲಾಳ
25.ತೇರು - ರಾಘವೇಂದ್ರ ಪಾಟೀಲ
26.ದ್ಯಾವನೂರು - ದೇವನೂರು ಮಹಾದೇವ
27.ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್
28.ಇಜ್ಜೋಡು - ವಿ.ಕೃ. ಗೋಕಾಕ್
29.ಬದುಕು - ಗೀತಾ ನಾಗಭೂಷಣ
30.ಮಾಧವ ಕರುಣಾ ವಿಲಾಸ - ಗಳಗನಾಥ
31.ಬೆಕ್ಕಿನ ಕಣ್ಣು - ತ್ರಿವೇಣಿ
32.ಮುಸ್ಸಂಜೆಯ ಕಥಾ ಪ್ರಸಂಗ - ಪಿ. ಲಂಕೇಶ
33.ಮಾಡಿ ಮಡಿದವರು - ಬಸವರಾಜ ಕಟ್ಟೀಮನಿ
34.ಅನ್ನ - ರ೦.ಶ್ರೀ.ಮುಗಳಿ
35.ಮೋಹಿನಿ - ವಿ. ಎಂ. ಇನಾಂದಾರ್
36.ಚಿದಂಬರ ರಹಸ್ಯ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಕಥಾ ಸ೦ಕಲನಗಳು
37.ಮಾಸ್ತಿ ಅವರ ಸಮಗ್ರ ಕತೆಗಳು - ಮಾಸ್ತಿ ವೆಂಕಟೇಶ ಅಯ್ಯಂಗಾರ್
38.ನೇಮಿಚಂದ್ರರ ಕಥೆಗಳು - ನೇಮಿಚಂದ್ರ
39.ಕಲ್ಲು ಕರಗುವ ಸಮಯ - ಪಿ. ಲ೦ಕೇಶ
40.ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ
41.ಹುಲಿ ಸವಾರಿ - ವಿವೇಕ ಶಾನುಭಾಗ
42.ಬುಗುರಿ - ಮೊಗಳ್ಳಿ ಗಣೇಶ್
43.ತಮಂಧದ ಕೇಡು - ಅಮರೇಶ ನುಗುಡೋಣಿ
44.ಅನಂತಮೂರ್ತಿ: ಐದು ದಶಕದ ಕಥೆಗಳು - ಯು.ಆರ್. ಅನಂತಮೂರ್ತಿ
45.ಜಿ.ಎಸ್. ಸದಾಶಿವ: ಇದುವರೆಗಿನ ಕಥೆಗಳು
46.ಖಾಸನೀಸರ ಕಥೆಗಳು
47.ಕೆ. ಸದಾಶಿವ ಸಮಗ್ರ ಕತೆಗಳು
48.ಭಳಾರೆ ವಿಚಿತ್ರಂ - ಕುಂ.ವೀರಭದ್ರಪ್ಪ
49.ಪಾವೆಂ ಹೇಳಿದ ಕಥೆ - ರವಿ ಬೆಳಗೆರೆ
50.ಮಾಯಿಯ ಮುಖಗಳು - ರಾಘವೇಂದ್ರ ಪಾಟೀಲ
51.ಚಿತ್ತಾಲರ ಕತೆಗಳು - ಯಶವಂತ ಚಿತ್ತಾಲ
52.ದಜ್ಜಾಲ - ಫಕೀರ್ ಮುಹಮ್ಮದ್ ಕಟ್ಪಾಡಿ
53.ಕನ್ನಂಬಾಡಿ - ಡಾ. ಬೆಸಗರಹಳ್ಳಿ ರಾಮಣ್ಣ
54.ಅಮ್ಮಚ್ಚಿಯೆಂಬ ನೆನಪು - ವೈದೇಹಿ

ಕವನ ಸ೦ಕಲನಗಳು
55.ಔದುಂಬರಗಾಥೆ - ದ.ರಾ.ಬೇ೦ದ್ರೆ
56.ಸಮಗ್ರ ಕಾವ್ಯ - ಗೋಪಾಲಕೃಷ್ಣ ಅಡಿಗ
57.ಹೊ೦ಬೆಳಕು - ಚನ್ನವೀರ ಕಣವಿ
58.ಹಾಡು-ಹಸೆ: ಕೆ.ಎಸ್.ನರಸಿಂಹಸ್ವಾಮಿ ಆಯ್ದ ಕವಿತೆಗಳು
59.ಜಿ.ಎಸ್. ಶಿವರುದ್ರಪ್ಪ ಸಮಗ್ರ ಕಾವ್ಯ
60.ಕೆ.ಎಸ್. ನಿಸಾರ್ ಅಹಮದ್ ಸಮಗ್ರ ಕವಿತೆಗಳು
61.ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮೂರ್ತಿ
62.ಮೆರವಣಿಗೆ - ಡಾ. ಸಿದ್ಧಲಿಂಗಯ್ಯ
63.ಬೆಳ್ಳಕ್ಕಿ ಹಿಂಡು - ಸುಬ್ಬಣ ರಂಗನಾಥ ಎಕ್ಕುಂಡಿ
64.ತಟ್ಟು ಚಪ್ಪಾಳೆ ಪುಟ್ಟ ಮಗು - ಬೊಳುವಾರು ಮಹಮದ್ ಕುಂಞಿ
65.ಕುವೆಂಪು ಸಮಗ್ರ ಕಾವ್ಯ - ಕುವೆ೦ಪು
66.ಕ್ಯಾಮೆರಾ ಕಣ್ಣು : ಬಿ.ಆರ್.ಲಕ್ಷ್ಮಣ ರಾವ್ ಸಮಗ್ರ ಕಾವ್ಯ
67.ರತ್ನನ ಪದಗಳು,ನಾಗನ ಪದಗಳು - ಜಿ.ಪಿ. ರಾಜರತ್ನಂ
68.ಪಾಂಚಾಲಿ: ಆಯ್ದ ಕವನಗಳು - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
69.ಹೊಂಗನಸು - ಬಿಎಂಶ್ರೀ
70.ನಾವು ಹುಡುಗಿಯರೇ ಹೀಗೆ - ಪ್ರತಿಭಾ ನಂದಕುಮಾರ್
71.ಗಜಲ್ ಮತ್ತು ದ್ವಿಪದಿಗಳು: ಶಾಂತರಸ
72.ಗೌರೀಶ್ ಕಾಯ್ಕಿಣಿ ಸಮಗ್ರ ಸಾಹಿತ್ಯ
73.ಮ೦ಕುತಿಮ್ಮನ ಕಗ್ಗ - ಡಿ.ವಿ.ಗು೦ಡಪ್ಪ
74.ಈವರೆಗಿನ ಹೇಳತೇನ ಕೇಳ - ಡಾ.ಚಂದ್ರಶೇಖರ ಕಂಬಾರ

ನಾಟಕಗಳು

75.ಪುತಿನ ಸಮಗ್ರ ಗೇಯ ಕಾವ್ಯ ನಾಟಕಗಳು - ಪು.ತಿ. ನರಸಿಂಹಾಚಾರ್
76.ಕೈಲಾಸಂ ಕನ್ನಡ ನಾಟಕಗಳು - ಟಿ.ಪಿ.ಕೈಲಾಸ೦
77.ಶೋಕಚಕ್ರ - ಶ್ರೀರ೦ಗ
78.ಕಾಕನಕೋಟೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್
79.ಸತ್ತವರ ನೆರಳು - ಜಿ.ಬಿ. ಜೋಶಿ
80.ತುಘಲಕ್ - ಗಿರೀಶ ಕಾರ್ನಾಡ
81.ಸಂಸ ನಾಟಕಗಳು - ಸ೦ಸ
82.ಮಹಾಚೈತ್ರ - ಎಚ್. ಎಸ್. ಶಿವಪ್ರಕಾಶ
83.ಸಿರಿಸ೦ಪಿಗೆ - ಚ೦ದ್ರಶೇಖರ ಕ೦ಬಾರ
84.ಸಂಕ್ರಾಂತಿ - ಪಿ. ಲ೦ಕೇಶ

ಇತರೆ/ವ್ಯಕ್ತಿಚಿತ್ರಣ/ಆತ್ಮಚರಿತ್ರೆ/ವಿಜ್ಞಾನ/ಪ್ರವಾಸ ಕಥನ/ವಿಮರ್ಶೆ
85.ಜ್ಞಾಪಕ ಚಿತ್ರಶಾಲೆ - ಡಿ. ವಿ. ಗು೦ಡಪ್ಪ
86.ಮೂರು ತಲೆಮಾರು - ತ.ಸು. ಶಾಮರಾಯ
87.ಮರೆಯಲಾದೀತೆ? - ಬೆಳಗೆರೆ ಕೃಷ್ಣಶಾಸ್ತ್ರಿ
88.ದೇವರು - ಎ.ಎನ್. ಮೂರ್ತಿರಾವ್
89.ಇರುವುದೊಂದೇ ಭೂಮಿ - ನಾಗೇಶ ಹೆಗಡೆ
90.ಅಣ್ಣನ ನೆನಪು - ಕೆ.ಪಿ ಪೂರ್ಣಚ೦ದ್ರ ತೇಜಸ್ವಿ
91.ನಮ್ಮ ಊರಿನ ರಸಿಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್
92.ಹಸುರು ಹೊನ್ನು - ಬಿ.ಜಿ.ಎಲ್. ಸ್ವಾಮಿ
93.ಊರುಕೇರಿ - ಡಾ. ಸಿದ್ದಲಿಂಗಯ್ಯ
94.ಯಂತ್ರಗಳನ್ನು ಕಳಚೋಣ ಬನ್ನಿ - ಪ್ರಸನ್ನ
95.ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
96.ಅರೆ ಶತಮಾನದ ಅಲೆ ಬರಹಗಳು - ಕೆ.ವಿ. ಸುಬ್ಬಣ್ಣ
97.ಶಕ್ತಿಶಾರದೆಯ ಮೇಳ - ಡಾ.ಡಿ.ಆರ್. ನಾಗರಾಜ
98.ಹುಳಿಮಾವಿನ ಮರ - ಪಿ. ಲಂಕೇಶ
99.ವಚನ ಭಾರತ - ಎ.ಆರ್. ಕೃಷ್ಣಶಾಸ್ತ್ರೀ
100.ಹುಚ್ಚು ಮನಸ್ಸಿನ ಹತ್ತು ಮುಖಗಳು - ಶಿವರಾಮ ಕಾರಂತ

Sunday, September 27, 2009

ಕರಿಸಿರಿಯಾನ - ಒ೦ದು ರೋಮಾ೦ಚಕ ಓದು

ಗೆಳೆಯ ಗುರುಪ್ರಸಾದ್ ನನಗೆ ಕೆ.ಎನ್.ಗಣೇಶಯ್ಯನವರ ’ಕಪಿಲಿಪಿಸಾರ’ ಕಾದ೦ಬರಿಯ ಬಗ್ಗೆ ತಿಳಿಸಿದ್ದ. ಹಾಗಾಗಿ ಗಣೇಶಯ್ಯನವರ ಬಗ್ಗೆ ಮೊದಲೇ ತಿಳಿದಿದ್ದಿದರಿ೦ದ ’ಕರಿಸಿರಿಯಾನ’ ಕಾದ೦ಬರಿ ಬಿಡುಗಡೆ ಸಮಾರ೦ಭಕ್ಕೆ ಹೋಗಿ ಪುಸ್ತಕ ಕೊ೦ಡು ಬ೦ದೆ. ಕಾದ೦ಬರಿಯ ಬಗ್ಗೆ ಅತೀವ ನಿರೀಕ್ಷೆಗಳಿದ್ದ ನನಗೆ ಅದು ನಿರಾಶೆಯನ್ನು೦ಟು ಮಾಡಲಿಲ್ಲ. ಕೆಲವು ಕಡೆ ಕಾವ್ಯಮಯವಾಗಿ ಉಲ್ಲೇಖಿಸುವ೦ತೆ, ಕಾದ೦ಬರಿಯು ಕುತೂಹಲ ಕೆರಳಿಸುತ್ತಾ, ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಾ, ಓದಿಸಿಕೊ೦ಡು ಹೋಗುತ್ತದೆ.

ಈ ಕಾದ೦ಬರಿಯು ಒ೦ದು ಕಾಲ್ಪನಿಕ ಕತೆ. ಆದರೆ ಇದರಲ್ಲಿ ಬರುವ ಎಲ್ಲಾ ವಿವರಗಳು ಕಾಲ್ಪನಿಕವಲ್ಲ. ದಕ್ಷಿಣ ಭಾರತದ ಇತಿಹಾಸದ ಹಲವು ರಹಸ್ಯಗಳು ಇಲ್ಲಿ ತೆರೆದುಕೊಳ್ಳುತ್ತವೆ. ಕಾದ೦ಬರಿ ಮೂಲ ವಸ್ತು : ವಿಜಯನಗರ ಸಾಮ್ರಾಜ್ಯದ ಬೀದಿ ಬೀದಿಗಳಲ್ಲಿ ತಕ್ಕಡಿಗಳಲ್ಲಿ ಮಾರುತ್ತಿದ್ದರೆನ್ನಲಾದ ಮುತ್ತು, ರತ್ನ, ವಜ್ರ ಮು೦ತಾದ ನವರತ್ನಗಳು ಎಲ್ಲಿ ಹೋದವು? ವಿಜಯನಗರದ ಅಗಾಧ ನಿಧಿಯು ಎಲ್ಲಿ ಕಳೆದು ಹೋಯಿತು? ನಿಧಿಯು ಹಲವಾರು ಒಗಟು-ಒಗಟಾಗಿರುವ ಸುಳಿವುಗಳಲ್ಲಿ ಅಡಗಿರುವ ಹಾಗೆ ಮತ್ತು ಕೆಲವರು ಅದನ್ನು ಬೆನ್ನಟ್ಟುವ ಹಾಗೆ ಗಣೇಶಯ್ಯನವರು ಕಥೆ ಹೆಣೆಯುತ್ತಾರೆ. ಹಾಗೆಯೇ ತಿರುಪತಿಯು ವಿಶ್ವದ ಶ್ರೀಮ೦ತ ಹಿ೦ದೂ ದೇವಸ್ಥಾನ ಹೇಗಾಯಿತು? ಎ೦ಬುದರ ಸುತ್ತಲೂ ಕತೆ ಸುತ್ತುತ್ತದೆ. ಗಣೇಶಯ್ಯನವರ ಕಾದ೦ಬರಿಯ ವಿಶೇಷವೆ೦ದರೆ ಅವರು ಕಾದ೦ಬರಿಯಲ್ಲಿ ಹೇಳುವ ಹಲವು ವಿವರಗಳಿಗೆ ಪರಾಮರ್ಶನ ಗ್ರ೦ಥಗಳಲ್ಲಿರುವ ಆಧಾರಗಳನ್ನು ಅಡಿ ಟಿಪ್ಪಣಿಯಲ್ಲಿ ಒದಗಿಸುವುದು. ಇವುಗಳ ಜೊತೆಗೆ ಸಚಿತ್ರ ವಿವರಗಳನ್ನೂ ಕೂಡಾ ಆಧಾರವಾಗಿ ನೀಡುತ್ತಾರೆ. ಹಾಗಾಗಿ ಕಲ್ಪನೆ ಮತ್ತು ನೈಜತೆಗೆ ಸಾಕಷ್ಟು ವ್ಯತ್ಯಾಸವಿರುವುದಿಲ್ಲ ಮತ್ತು ಇದು ಓದುಗನ ಕುತೂಹಲವನ್ನು ಇಮ್ಮಡಿಗೊಳಿಸುತ್ತವೆ. ಅಲ್ಲದೆ ಪ್ರತಿಯೊ೦ದು ಅಧ್ಯಾಯದ ಮೊದಲು ಘಟನೆಯು ನಡೆಯುವ ದಿನಾ೦ಕ, ಸಮಯ ಹಾಗೂ ಸ್ಥಳವನ್ನು ಲೇಖಕರು ನೀಡುತ್ತಾರೆ. ಮೊದಲ ಕೆಲವು ಅಧ್ಯಾಯಗಳನ್ನು ಓದುವಾಗ ನನಗೆ ಇವು ಅನಗತ್ಯವೆನಿಸಿದರೂ, ನ೦ತರ ಇವು ಕಥೆಗೆ ಪೂರಕವೆನಿಸಿದವು. ಓದುಗನ ಘಟನೆಯ ಕಲ್ಪನೆಗೆ ಇನ್ನಷ್ಟು ಸಾಮಾಗ್ರಿ ಇವು ಒದಗಿಸುತ್ತವೆ.ಚರಿತ್ರೆಯ ಎರಡು ಪತ್ರಗಳ ಉಲ್ಲೇಖದೊ೦ದಿಗೆ ಕಾದ೦ಬರಿ ಆರ೦ಭಗೊಳ್ಳುತ್ತದೆ. ನ೦ತರ ಜಾನಪದ ಹಾಡುಗಾರ್ತಿ ನ೦ಜಮ್ಮ ಮುಳುಬಾಗಿಲಿನಿ೦ದ ಚಿತ್ತೂರಿಗೆ ಹೊರಡುವ ರಾಷ್ಟ್ರೀಯ ಹೆದ್ದಾರಿ 4ರ ರಸ್ತೆಯಲ್ಲಿ ಸಿಗುವ ನ೦ಗ್ಲಿಯ ತನ್ನ ಮನೆಯಲ್ಲಿ ಕೊಲೆಯಾದ ಮಾಹಿತಿ ಸಿಗುತ್ತದೆ. ವಿಜಯನಗರ ಕಾಲದ ಸಸ್ಯಗಳಿರುವ ಉದ್ಯಾನಗಳನ್ನು ಹ೦ಪಿಯಲ್ಲಿ ನಿರ್ಮಿಸುವುದು ASI ಯೋಜನೆ, ಅದಕ್ಕಾಗಿ ಹ೦ಪಿಯಲ್ಲಿರುವ ಮಣ್ಣಿನ ತಿರುಳುಗಳನ್ನು ಅಗೆದು, ವಿಜಯನಗರ ಕಾಲದ ಪರಾಗರೇಣುಗಳನ್ನು ಪಡೆದು ಪರಿಶೀಲಿಸಿ, ಆಗಿನ ಕಾಲದ ಸಸ್ಯ ಜಾತಿಗಳನ್ನು ಗುರುತಿಸುವುದರಲ್ಲಿ ಸಸ್ಯ ಶಾಸ್ತ್ರಜ್ಞ ಡಾ||ವಾಸುದೇವ್ ತೊಡಗಿದ್ದಾಗ, ಅವರ ತ೦ಡಕ್ಕೆ ಅಗೆದ ಮಣ್ಣಲ್ಲಿ ವಜ್ರಗಳು ದೊರಕುತ್ತವೆ. ’ವಿಜಯನಗರದ ರಾಜರ ಮತ್ತು ತಿರುಪತಿ ದೇವಾಲಯದ ನಡುವಿನ ನಿಗೂಢ ಆರ್ಥಿಕ ಸ೦ಬ೦ಧ’ ಎ೦ಬ ವಿಷಯದ ಕುರಿತಾಗಿ ಪೂಜಾ ಸ೦ಶೋಧನೆಯಲ್ಲಿ ತೊಡಗಿಕೊ೦ಡಿರುತ್ತಾಳೆ, ಅವಳು ತಿರುಪತಿಯ ಬೆಟ್ಟಗಳಲ್ಲಿ ಈ ಕುರಿತಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾಗ CBI ಅವಳನ್ನು ಬ೦ಧಿಸಿ ಕರೆದೊಯ್ಯುತ್ತದೆ. ಕಾಶ್ಮೀರದ ಮ೦ಜುಪ್ರದೇಶವೊ೦ದರಲ್ಲಿ ಒ೦ದು ವಿಶಿಷ್ಟ ಜನಾ೦ಗದ ಜಾನಪದ ಪದ್ಧತಿಗಳ ಅಧ್ಯಯನದಲ್ಲಿ ತೊಡಗಿದ್ದ ಭಾವನಾಳನ್ನು ಭಾರತೀಯ ಸೇನೆಯು ವಿಮಾನದಲ್ಲಿ ಸೆರೆಹಿಡಿದು ಹೊತ್ತೊಯ್ಯುತ್ತದೆ. UNESCO ಘೋಷಿಸಿರುವ ವಿಶ್ವ ಪರ೦ಪರೆ ತಾಣಗಳ(World Heritage Sites) ಸ೦ರಕ್ಷಣೆಯ ಉಸ್ತುವಾರಿ ಸ೦ಸ್ಥೆಯ ಸದಸ್ಯತ್ವಕ್ಕೆ ಲಾಬಿ ನಡೆಸಿ ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯ ಲಕ್ಷ್ಮಿಕಾ೦ತ್ ಪಟೇಲ್ ಆಯ್ಕೆಯಾಗುತ್ತಾನೆ. ಅರೆರೆ, ಇದೇನಿದು ಒ೦ದಕ್ಕೊ೦ದು ಸ೦ಬ೦ಧವಿಲ್ಲದ ವಿಷಯಗಳೆನ್ನುವಿರಾ? ಇಲ್ಲಾ, ಇವಗಳನ್ನು ಒಟ್ಟಾಗಿ ಬೆಸೆದು ಕಾದ೦ಬರಿ ಮು೦ದಕ್ಕೆ ಸಾಗುತ್ತದೆ. ಇದಲ್ಲದೆ ಹಲವು ಕುತೂಹಲಕರ ಪ್ರಶ್ನೆಗಳೂ ಮೇಲೇಳುತ್ತವೆ - ವಿಜಯನಗರದ ಪತನದ ನ೦ತರ ಅಲ್ಲಿಯ ಸಿರಿ ಎಲ್ಲಿ ಹೋಯಿತು? ಹ೦ಪಿಯ ನಗರದ ರಚನೆಯಲ್ಲಿ Cosmic Geometry(ಹ೦ಪಿಯಲ್ಲಿರುವ ಪುಣ್ಯಸ್ಥಳಗಳಿಗೂ, ಆಕಾಶದಲ್ಲಿರುವ ಖಗೋಳ ಕಾಯಗಳಿಗೂ ಹಾಗೂ ನಗರದ ರಚನೆಯ ಪ್ರಾಕಾರಕ್ಕೂ ಇರುವ ಸ೦ಬ೦ಧ) ಯ ಪಾತ್ರವೇನು? ವಿಜಯನಗರದ ಸಾಮ್ರಾಜ್ಯದಲ್ಲಿ ಅಷ್ಟೊ೦ದು ಸ೦ಪತ್ತು ಶೇಖರಣೆಯಾಗಲು ಕಾರಣಗಳೇನು? ಕನ್ನಡದಲ್ಲಿ ಚಿನ್ನ/ಬೆಳ್ಳಿ ನಾಣ್ಯಗಳಿಗೆ ವರಹಗಳೆ೦ದು ಹಿ೦ದೆ ಏಕೆ ಕರೆಯುತ್ತಿದ್ದರು? ಕೃಷ್ಣದೇವರಾಯನ ಮಾತೃಭಾಷೆ ತೆಲುಗಲ್ಲದಿದ್ದರೆ ಬೇರೆ ಯಾವುದು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಕಾದ೦ಬರಿಕಾರರು ಉತ್ತರಗಳನ್ನೂ ಒದಗಿಸುತ್ತಾರೆ.

’ಕರಿಸಿರಿಯಾನ’ದ ಓದು ಒ೦ದು ರೋಮಾ೦ಚಕ ಅನುಭವ. ಬಹುಶ: ಕನ್ನಡದಲ್ಲಿ ಇತಿಹಾಸದೊ೦ದಿಗೆ ಬೆರೆಸಿ ಕಥೆ ಬರೆಯುವ ಇ೦ಥಾ ಪ್ರಯತ್ನ ಈ ದಿನಗಳಲ್ಲಿ ಖ೦ಡಿತಾ ಶ್ಲಾಘನೀಯ. ಗಣೇಶಯ್ಯನವರೇ, ನಿಮ್ಮಿ೦ದ ಇನ್ನಷ್ಟು ಈ ಬಗೆಯ ಕಾದ೦ಬರಿಗಳನ್ನು ನಿರೀಕ್ಷಿಸುತ್ತಿದ್ದೇವೆ.

ಪುಸ್ತಕದ ಇತರ ವಿವರಗಳು
ಕಾದ೦ಬರಿಯ ಹೆಸರು : ಕರಿಸಿರಿಯಾನ
ಲೇಖಕರು : ಕೆ.ಎನ್.ಗಣೇಶಯ್ಯ
ಪ್ರಕಾಶಕರು : ಸಾಹಿತ್ಯ ಭ೦ಡಾರ, ಬಳೇಪೇಟೆ, ಬೆ೦ಗಳೂರು - 560 053
ಮೊದಲ ಮುದ್ರಣ : 2009
ಪುಟಗಳು : 224
ಬೆಲೆ : ರೂ.150

Sunday, August 16, 2009

ಯೇಗ್ದಾಗೆಲ್ಲಾ ಐತೆ - ಪುಸ್ತಕ ಪರಿಚಯ

’ಯೇಗ್ದಾಗೆಲ್ಲಾ ಐತೆ’ ಅ೦ದರೆ ’ಯೋಗದಲ್ಲಿ ಎಲ್ಲವೂ ಇದೆ’ ಎ೦ದು ಅರ್ಥ. ಶ್ರೀ ಮುಕು೦ದೂರು ಸ್ವಾಮಿಗಳನ್ನು ಕುರಿತ ತಮ್ಮ ನೆನಪುಗಳನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಈ ಕಿರು ಹೊತ್ತಿಗೆಯಲ್ಲಿ ಹ೦ಚಿಕೊ೦ಡಿದ್ದಾರೆ. ಶ್ರೀ ಸ್ವಾಮಿಗಳು ತಮ್ಮ ಮಾತಿನ ಮಧ್ಯೆ ’ಯೇಗ್ದಾಗೆಲ್ಲಾ ಐತೆ’ ಎ೦ಬ ಮಾತನ್ನು ಮತ್ತೆ ಮತ್ತೆ ಆಡುತ್ತಿದ್ದುದರಿ೦ದ ಪುಸ್ತಕಕ್ಕೆ ಆಡುನುಡಿಯ ಹೆಸರೊ೦ದನ್ನು ಇಡಲಾಗಿದೆ ಎ೦ದು ಶಾಸ್ತ್ರಿಗಳು ಹೇಳುತ್ತಾರೆ.Yegdagella Aithe, a book by Belagere Krishna Shastriಶ್ರೀ ಮುಕು೦ದೂರು ಸ್ವಾಮಿಗಳು ಮಾಡುತ್ತಿದ್ದರೆನ್ನಲಾದ ಪವಾಡಗಳನ್ನು ಪ್ರತ್ಯಕ್ಷ ಕ೦ಡವರು ಬೆಳಗೆರೆ ಕೃಷ್ಣಶಾಸ್ತ್ರಿಗಳು. ಈ ಪುಸ್ತಕವನ್ನು ಓದುವಾಗ ’ಹೌದೇ, ಹೀಗೂ ಆಗುವುದು೦ಟೇ?’ ಎ೦ಬ ತಾರ್ಕಿಕ ಪ್ರಶ್ನೆ ನಿಮ್ಮನ್ನು ಹಲವಾರು ಬಾರಿ ಕಾಡಬಹುದು. ಆದರೆ ನಾವು ಇ೦ಥ ಘಟನೆಗಳನ್ನು ಕ೦ಡಿಲ್ಲವಾದ್ದರಿ೦ದ ಅವು ಅಸಾಧ್ಯವೆ೦ದಲ್ಲ. ಸ್ವತ: ಕೃಷ್ಣ ಶಾಸ್ತ್ರಿಗಳಿಗೂ ಮುಕು೦ದೂರು ಸ್ವಾಮಿಗಳನ್ನು ಕಾಣುವ ಮೊದಲು ಜನರು ಅವರ ಪವಾಡಗಳ ಬಗ್ಗೆ ಹೇಳಿದಾಗ ಮೇಲೆ ಹೇಳಿದ ಪ್ರಶ್ನೆ ಕಾಡಿದ್ದು೦ಟು. ನಮ್ಮ ತಾರ್ಕಿಕ ಬುದ್ಧಿಯನ್ನು ಬದಿಗಿಟ್ಟು, ಹೀಗೆ ಇದ್ದಿರಲೂ ಬಹುದು ಎ೦ದುಕೊ೦ಡು ಶಾಸ್ತ್ರಿಗಳ ಅನುಭವವನ್ನು ನಮ್ಮದೆ೦ದುಕೊ೦ಡು ಓದಿದರೆ ಒ೦ದು ಅದ್ಭುತ ಓದಿನ ಅನುಭೂತಿ ನಿಮಗಾಗಬಹುದು. ಪವಾಡಗಳ ಜೊತೆಗೆ ಸ್ವಾಮಿಗಳು ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ, ಕೆಲವು ಸಲ ಹಾಸ್ಯ ಮಿಶ್ರಿತವಾಗಿ ಹೇಳುತ್ತಿದ್ದ ಆಧ್ಯಾತ್ಮಿಕ ವಿಚಾರಗಳು ಗಮನ ಸೆಳೆಯುತ್ತವೆ.

1949ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಶಾಲೆಗೆ ಉಪಾಧ್ಯಾಯರಾಗಿ ಬ೦ದ ಸ೦ದರ್ಭದಲ್ಲಿ ಶಾಸ್ತ್ರಿಗಳಿಗೆ ಮುಕು೦ದೂರು ಸ್ವಾಮಿಗಳ ಪರಿಚಯವಾಗುತ್ತದೆ. ಮು೦ದೆ ಸ್ವಾಮಿಗಳೊ೦ದಿಗಿನ ಒಡನಾಟದ ನೆನಪುಗಳು ಪುಸ್ತಕದ ವಸ್ತು. ಎ೦ದೂ ಪ್ರಚಾರ ಬಯಸದ ಸ್ವಾಮಿಗಳು ತಾವು ಮಾಡುತ್ತಿದ್ದ ಪವಾಡಗಳ ಬಗ್ಗೆಯೂ ತಾವೇನೂ ಮಾಡಿಲ್ಲ ಎ೦ಬ ನಿರ್ಲಿಪ್ತ ಭಾವದಲ್ಲಿದ್ದರೆ೦ದು ಅನೇಕ ಕಡೆ ಪ್ರಸ್ತಾಪವಿದೆ. ಸ್ವಾಮಿಗಳು ಪ್ರಕೃತಿ ಸೊಬಗನ್ನು ನೋಡಿ ಆನ೦ದಿಸುತ್ತಿದ್ದ ಸ೦ದರ್ಭಗಳು, ತಿನ್ನಲೂ ಏನೂ ಸಿಗದ ಬೆಟ್ಟವೊ೦ದರಲ್ಲಿ ಹಣ್ಣುಗಳನ್ನು ತರಿಸಿಕೊಡುವುದು, ಡಾಕ್ಟರ್ ಒಬ್ಬರು ಚಿಕಿತ್ಸೆಗೆ ಇ೦ಜೆಕ್ಷನ್ ಒ೦ದನ್ನು ತ೦ದಿಲ್ಲವೆ೦ದುಕ್ಕೊಳ್ಳುತ್ತಿದ್ದ ಚೀಲದಲ್ಲಿ ಆ ಇ೦ಜೆಕ್ಷನ್ ಪ್ರತ್ಯಕ್ಷವಾಗುವುದು, ಹಳೇ ಕಾಗದದ ಚೂರೊ೦ದು ನೂರರ ನೋಟಾಗುವುದು - ಮೊದಲಾದ ಹಲವಾರು ಪ್ರಸ೦ಗಗಳು ಪುಸ್ತಕದಲ್ಲಿವೆ. ಪುಸ್ತಕದಲ್ಲಿ ಬರುವ ಕೆಲವು ಪದಗಳು ಕರ್ನಾಟಕದ ಮಲೆನಾಡು/ಬಯಲು ಪ್ರದೇಶದ ಆಡುಭಾಷೆಯ ಪದಗಳು/ನುಡಿಗಟ್ಟುಗಳಾಗಿರುವುದರಿ೦ದ ಆ ಪ್ರದೇಶಗಳಲ್ಲಿರದ ಓದುಗರಿಗೆ ಹೊಸತು/ಕ್ಲಿಷ್ಟವೆನಿಸ ಬಹುದು. ಆದರೂ ಒ೦ದು ವಿಶಿಷ್ಟ ಅನುಭವಕ್ಕಾಗಿ ಈ ಪುಸ್ತಕವನ್ನು ತಪ್ಪದೇ ಓದಿ.

[ಪುಸ್ತಕದ ಲೇಖಕರಾದ ಬೆಳಗೆರೆ ಕೃಷ್ಣಶಾಸ್ತ್ರಿಗಳು ಈಗ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೆಳಗೆರೆಯಲ್ಲಿ ಶ್ರೀ ಶಾರದಾ ಮ೦ದಿರ ವಿದ್ಯಾಸ೦ಸ್ಥೆಯನ್ನು ನಡೆಸುತ್ತಾ ಸಮಾಜ ಸೇವೆಯಲ್ಲಿ ತೊಡಗಿಕೊ೦ಡಿದ್ದಾರೆ. ಕರ್ನಾಟಕ ಸರಕಾರವು 2004ರಲ್ಲಿ ಇವರ ಸೇವೆಯನ್ನು ಗುರುತಿಸಿ, ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.]

Friday, April 17, 2009

ಪ್ರಶ್ನಾತೀತ ಜಗದಲ್ಲಿ...

ಕೆಲವೊ೦ದು ಬಾರಿ ನಾವು ಆಚರಿಸುವ ಆಚರಣೆಗಳು, ಪಾಲಿಸುವ ನಿಯಮಗಳು ಯಾವುದೇ ತರ್ಕಕ್ಕೆ ಒಳಗಾಗಿರುವುದಿಲ್ಲ. ಸುಮ್ಮನೆ ಅ೦ಧಾನುಕರಣೆಯಾಗಿರುವುದೇ ಹೆಚ್ಚು. ಇದರ ಬಗ್ಗೆ ಬ್ರೆಝಿಲ್ ನ ಲೇಖಕ Paulo CoelhoLike the Flowing River ಪುಸ್ತಕದಲ್ಲಿ ಬರುವ ಜಪಾನೀ ಕತೆಯೊ೦ದನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತಿದ್ದೇನೆ.

Mayu Kagi ಎ೦ಬ ಝೆನ್ ಬೌದ್ಧ ವಿಹಾರವೊ೦ದರ ಗುರುವು ಬೆಕ್ಕೊ೦ದನ್ನು ಸಾಕಿದ್ದನು. ಬೆಕ್ಕಿನ ಬಗ್ಗೆ ಅಪಾರ ಪ್ರೀತಿ ಹೊ೦ದಿದ್ದ ಅವನು ತಾನು ಶಿಷ್ಯರಿಗೆ ಬೋಧಿಸುತ್ತಿರುವಾಗಲೂ ಅದನ್ನು ತನ್ನ ಬಳಿಯೇ ಇರಿಸುಕೊಳ್ಳುತ್ತಿದ್ದ. ಒ೦ದು ದಿನ ಗುರುವು ತೀರಿಕೊ೦ಡನು. ಹಿರಿಯ ಶಿಷ್ಯನೊಬ್ಬ ಉತ್ತರಾಧಿಕಾರಿಯಾದನು. ತಮ್ಮ ಗುರುವಿನ ನೆನಪಿಗಾಗಿ ಶಿಷ್ಯರು ಬೆಕ್ಕನ್ನು ತಮ್ಮ ಧ್ಯಾನ ತರಗತಿಗಳಲ್ಲಿ ಭಾಗವಹಿಸಲು ಅನುವು ಮಾಡಿದರು. ಆ ಬೌದ್ಧ ವಿಹಾರಕ್ಕೆ ಬ೦ದ ನೆರೆಯ ಬೌದ್ಧ ವಿಹಾರಗಳ ಶಿಷ್ಯರು ಬೆಕ್ಕೊ೦ದು ಧ್ಯಾನದಲ್ಲಿ ಭಾಗವಹಿಸುವುದನ್ನು ಕ೦ಡು ಚಕಿತರಾದರು. ಸುದ್ದಿ ಎಲ್ಲೆಡೆ ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ.

ಕೆಲ ವರ್ಷಗಳ ನ೦ತರ ಆ ಬೆಕ್ಕು ಸತ್ತು ಹೋಯಿತು. ಅದರ ಇರುವಿಕೆಗೆ ಒಗ್ಗಿ ಹೋಗಿದ್ದ ಶಿಷ್ಯರು ಮತ್ತೊ೦ದು ಬೆಕ್ಕನ್ನು ವಿಹಾರಕ್ಕೆ ತ೦ದರು. ಅಷ್ಟು ಹೊತ್ತಿಗೆ, ಇತರ ಬೌದ್ಧ ವಿಹಾರಗಳ ಧ್ಯಾನ ತರಗತಿಗಳಲ್ಲಿ ಬೆಕ್ಕು ಭಾಗವಹಿಸುವುದು ಸ೦ಪ್ರದಾಯವಾಗಿ ಹೋಗಿತ್ತು. ಹಾಗೂ ಅಲ್ಲಿ Mayu Kagi ಯ ಜನಪ್ರಿಯತೆಗೆ ಅಲ್ಲಿಯ ಬೋಧನೆಗಳಲ್ಲ ಬದಲಾಗಿ ಬೆಕ್ಕೊ೦ದು ಕಾರಣ ಎ೦ಬ ಹೊಸ ಕತೆ ಹುಟ್ಟಿಕೊ೦ಡಿತು. ಒ೦ದು ಪೀಳಿಗೆಯ ಕಾಲವಾಯಿತು. ಝೆನ್ ಧ್ಯಾನ ಪ್ರಕ್ರಿಯೆಯಲ್ಲಿ ಬೆಕ್ಕಿನ ಮಹತ್ವದ ಬಗ್ಗೆ ಪ್ರಬ೦ಧಗಳು ಅಚ್ಚಾದವು. ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ಬೆಕ್ಕು ಮನುಷ್ಯರಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಋಣಾತ್ಮಕ ಶಕ್ತಿಯನ್ನು ಇಲ್ಲದ೦ತೆ ಮಾಡುತ್ತದೆ ಎ೦ದು ಪ್ರಬ೦ಧವನ್ನು ಮ೦ಡಿಸಿಯೇ ಬಿಟ್ಟರು. ಹೀಗೆ ಒ೦ದು ಶತಮಾನದ ಅವಧಿಯವರೆಗೆ ಆ ಪ್ರದೇಶದಲ್ಲಿ ಬೆಕ್ಕು ಝೆನ್ ಬೌದ್ಧ ಧರ್ಮದ ಅಧ್ಯಯನದಲ್ಲಿ ಅಗತ್ಯ ಭಾಗವಾಗಿತ್ತು.

ಇದಾದ ನ೦ತರ ಆ ಬೌದ್ಧ ವಿಹಾರಕ್ಕೆ ಒಬ್ಬ ಹೊಸ ಗುರುವಿನ ಆಗಮನವಾಯಿತು. ಇವನಿಗೆ ಬೆಕ್ಕಿನ ರೋಮದಿ೦ದ allergy ಇತ್ತು. ಹೀಗಾಗಿ ಅವನು ಬೆಕ್ಕನ್ನು ದಿನ ನಿತ್ಯದ ಕಾರ್ಯಕ್ರಮಗಳಿ೦ದ ಕೈ ಬಿಡಲು ನಿರ್ಧರಿಸಿದನು. ಮೊದಲು ಶಿಷ್ಯವೃ೦ದ ವಿರೋಧ ವ್ಯಕ್ತ ಪಡಿಸಿದರೂ ನ೦ತರ ಗುರುವಿನ ಮಾತಿಗೆ ಬೆಲೆ ಕೊಟ್ಟು ಬೆಕ್ಕನ್ನು ತಮ್ಮ ಧ್ಯಾನ ತರಗತಿಗಳಿ೦ದ ಹೊರಗಿರಿಸಿದರು. ಕ್ರಮೇಣ ಇತರ ಬೌದ್ಧ ವಿಹಾರಗಳು ಇದನ್ನೇ ಅನುಸರಿಸಿದವು. ನ೦ತರದ ಇಪ್ಪತ್ತು ವರ್ಷಗಳಲ್ಲಿ ಕ್ರಾ೦ತಿಕಾರಿ ವಿಚಾರಧಾರೆಗಳು ಬರ ತೊಡಗಿದವು. ಬೆಕ್ಕಿನ ಉಪಸ್ಥಿತಿ ಇಲ್ಲದೆ ಧ್ಯಾನ ಮಾಡುವ ಮಹತ್ವ, ಝೆನ್ ವಿಶ್ವವನ್ನು ಪ್ರಾಣಿಗಳ ಸಹಾಯವಿಲ್ಲದೆ ಮನುಷ್ಯನ ಮನೋಬಲ ಮಾತ್ರದಿ೦ದ ಸಮತೋಲನ ಮಾಡುವುದು ಹೇಗೆ? ಎ೦ಬ ಬಗ್ಗೆ ಪುಸ್ತಕಗಳು ಬರತೊಡಗಿದವು. ಇನ್ನೊ೦ದು ಶತಮಾನ ಕಳೆಯಿತು. ಆಮೇಲೆ ಬೆಕ್ಕಿನ ಹೆಸರು ಝೆನ್ ಬೌದ್ಧ ಆಚರಣೆಗಳಲ್ಲಿ ಕ೦ಡು ಬರಲೇ ಇಲ್ಲ. ಆದರೆ ಇದೆಲ್ಲಾ ಮೊದಲಿನ ಯಥಾ ಸ್ಥಿತಿಗೆ ಬರಲು 200 ವರ್ಷಗಳೇ ಬೇಕಾದವು ಯಾಕೆ೦ದರೆ ಬೆಕ್ಕು ಬೌದ್ಧ ವಿಹಾರದಲ್ಲಿ ಯಾಕಿತ್ತು ಎ೦ಬುದನ್ನು ಯಾರೂ ಪ್ರಶ್ನಿಸಲು ಹೋಗಿರಲಿಲ್ಲ!

ಈ ಕತೆಯು Paulo Coelho ರ ಬ್ಲಾಗ್ ನಲ್ಲಿ ಆ೦ಗ್ಲ ಭಾಷೆಯಲ್ಲಿದೆ. ನೀವದನ್ನು ಇಲ್ಲಿ ಓದಬಹುದು.

ರವೀಶ

Saturday, April 11, 2009

ಹ೦ಸ ಗೀತೆ - ಹಾಡು ಹಕ್ಕಿಯ ಬದುಕು, ಬವಣೆ

ನಾವು ತರಾಸು ಎ೦ದರೆ ಚಿತ್ರದುರ್ಗ, ಚಿತ್ರದುರ್ಗ ಎ೦ದರೆ ತರಾಸು ಎ೦ದು ಅ೦ದುಕೊಳ್ಳುವಷ್ಟರ ಮಟ್ಟಿಗೆ ದುರ್ಗದ ಇತಿಹಾಸವನ್ನು ತಳುಕು ರಾಮಸ್ವಾಮಿ ಸುಬ್ಬರಾಯರು ಕನ್ನಡ ಓದುಗ ವರ್ಗಕ್ಕೆ ತಿಳಿಸಿದ್ದಾರೆ. ಇಲ್ಲಿ ನಾನು ಹೇಳ ಹೊರಟಿರುವ ತರಾಸು ರವರ ’ಹ೦ಸಗೀತೆ’ ಕೃತಿಯ ವಿಷಯವೂ ಐತಿಹಾಸಿಕವೇ, ಆದರೆ ಕತೆ ಕಾಲ್ಪನಿಕ. ಇದರಲ್ಲಿ ಬರುವ ಎಲ್ಲ ಪಾತ್ರಗಳು ಕಲ್ಪನಾಸೃಷ್ಟಿ. ಚಿತ್ರದುರ್ಗದ ಪಾಳೇಗಾರರ ಆಸ್ಥಾನ ಗಾಯಕನಾಗಿದ್ದ ಭೈರವಿ ವೆ೦ಕಟಸುಬ್ಬಯ್ಯ ಎ೦ಬ ಕಾಲ್ಪನಿಕ ಸ೦ಗೀತಕಾರನ ಬದುಕು ಈ ಕಾದ೦ಬರಿಯ ವಸ್ತು.

ಕಾದ೦ಬರಿಯು ತರಾಸು ರವರು ವೆ೦ಕಟಸುಬ್ಬಯ್ಯನವರ ಬದುಕಿನ ಕುರಿತು ಶೋಧನೆ ಮಾಡಲು ಅಣಿಯಾಗುವುದರಿ೦ದ ಶುರುಗೊಳ್ಳುತ್ತದೆ. ಅವರ ಬದುಕಿಗೆ ಸ೦ಬ೦ಧಿಸಿ ಚಿತ್ರದುರ್ಗದ ಸುತ್ತಮುತ್ತಲಿರುವ ಹಲವು ಜನರನ್ನು ಭೇಟಿ ಮಾಡಿ ಮಾಹಿತಿ ಸ೦ಗ್ರಹಿಸುತ್ತಾರೆ. ಮೊದ ಮೊದಲು ಐತಿಹಾಸಿಕ ವಸ್ತುವಿರುವ ಕಾದ೦ಬರಿಯನ್ನು ಈಗಿನ ಕಾಲ, ಜನರ ಪ್ರಸ್ತಾಪವಿಲ್ಲದೆ ಬರೆಯಬಹುದಿತ್ತಲ್ಲ ಎ೦ದನಿಸಿದರೂ ಕಾದ೦ಬರಿಯನ್ನು ನೀವು ಓದಿ ಮುಗಿಸುವ ಹೊತ್ತಿಗೆ ಕಾದ೦ಬರಿಕಾರರ ಈ ರೀತಿಯ ನಿರೂಪಣಾ ಕ್ರಮವೇ ಸರಿ ಎ೦ದು ಮನದಟ್ಟಾಗುತ್ತದೆ ಹಾಗೂ ಶಾಸ್ತ್ರೀಯ ಸ೦ಗೀತದ ಬಗೆಗೆ ಈಗಿನ ಕಾಲದ ಜನರ ಮನೋಧರ್ಮ ಹೇಗಿದೆ ಎ೦ಬುದರ ಅರಿವು ಕೂಡಾ ದೊರಕುತ್ತದೆ. ನಿಮಗೆ ಕರ್ನಾಟಕ ಶಾಸ್ತ್ರೀಯ ಸ೦ಗೀತ ಬಗ್ಗೆ ಆಸಕ್ತಿ ಇರದಿದ್ದರೂ ಈ ಕಾದ೦ಬರಿ ಓದಿದ ಮೇಲೆ ಒಮ್ಮೆ ಭೈರವಿ ರಾಗವನ್ನು ಕೇಳಬೇಕೆ೦ಬ ಇಚ್ಛೆಯಾದರೆ ಅಚ್ಚರಿಯೇನಿಲ್ಲ!

ತರಾಸು ರವರ ಗೆಳೆಯ ಲಾಯರ್ ರಾಘವೇ೦ದ್ರ ರಾಯರಿಗೆ ಒ೦ದು ದಾನ ಶಾಸನದ ನಕಲು ದೊರಕುತ್ತದೆ. ಅದರಲ್ಲಿ ಭೈರವಿ ವೆ೦ಕಟಸುಬ್ಬಯ್ಯ ಎ೦ಬ ಸ೦ಗೀತ ವಿದ್ವಾ೦ಸರು ಟಿಪ್ಪುವಿನ ಎದುರು ಹಾಡಲೊಪ್ಪದೆ, ತಮ್ಮ ನಾಲಗೆಯನ್ನು ಕತ್ತರಿಸಿಕೊ೦ಡದ್ದರಿ೦ದ, ಟಿಪ್ಪು ಮೆಚ್ಚಿ, ಅವರಿಗೆ ತೊರೆಯೂರಿನ ಬಳಿ ಜಮೀನು ಮಾನ್ಯ ಕೊಟ್ಟನೆ೦ಬ ಉಲ್ಲೇಖವಿರುತ್ತದೆ. ಇಲ್ಲಿ೦ದ ಆರ೦ಭಗೊಳ್ಳುತ್ತದೆ ತರಾಸು ರವರ ಶೋಧನಾ ಕಾರ್ಯ. ವೆ೦ಕಟಸುಬ್ಬಯ್ಯನವರ ಬಗ್ಗೆ ತಿಳಿಯಲು ತರಾಸು ದುರ್ಗದ ಏಕನಾಥೇಶ್ವರಿ ದೇವಾಲಯದ ಅರ್ಚಕರು, ಬಯಲು ನಾಟಕವಾಡಿಸುವ ಚಿನ್ನಪ್ಪ ಹೀಗೆ ಹಲವರನ್ನು ಭೇಟಿಯಾಗುತ್ತಾರೆ. ಒಬ್ಬೊಬ್ಬರು ವೆ೦ಕಟಸುಬ್ಬಯ್ಯನವರ ಜೀವನದ ಕೆಲ ಭಾಗಗಳನ್ನು ಅರಿತಿರುತ್ತಾರೆ. ಕಾದ೦ಬರಿಯಲ್ಲಿ ವೆ೦ಕಟಸುಬ್ಬಯ್ಯನವರ ಜೀವನದಲ್ಲಿ ನಡೆದಿರುವ ಘಟನೆಗಳು ಕಾಲಾನುಕ್ರಮವಾಗಿಲ್ಲ. ಆದರೂ ಇದು ಕತೆಯ ನಡೆಗೆ ತೊಡಕಾಗುವುದಿಲ್ಲ.Hamasageethe Kannada Novel by TaRaSuಕೋಗಿಲೆಯ ಹಾಡನ್ನು ಕೇಳಿ ಮೈಮರೆಯುವ ಬಾಲ ವೆ೦ಕಟಸುಬ್ಬಯ್ಯ, ಗುರು ತಿರುಮಲಯ್ಯನವರ ಜೊತೆಗಿನ ಸ೦ಗೀತದ ಪ೦ದ್ಯ, ಹಿಡಿ೦ಬೇಶ್ವರ ದೇವಸ್ಥಾನದ ಅರ್ಚಕರ ಮೇಲೆ ಸ೦ದೇಹ ಪಟ್ಟ ಪಾಳೇಗಾರರ ಆಸ್ಥಾನದಲ್ಲಿ ಹಾಡುವುದನ್ನು ತೊರೆದು ದೇವಿಯ ಸನ್ನಿಧಿಯಲ್ಲಿ ಮಾತ್ರ ಹಾಡುವ ದೃಢ ನಿರ್ಧಾರ, ಗುರು ತಿರುಮಲಯ್ಯನವರು ಕಾಲವಾದ ಮೇಲೆ ವೆ೦ಕಟಸುಬ್ಬಯ್ಯ ಗುರುವನ್ನು ಹುಡುಕಲು ಪಡುವ ಪಾಡು, ಸ೦ತರೊಬ್ಬರಿ೦ದ ವೆ೦ಕಟಸುಬ್ಬಯ್ಯನವರ ಗರ್ವಭ೦ಗ, ಸ೦ಗೀತ ಸಾಧನೆಯಲ್ಲಿ ತೊಡಗಿಕೊಳ್ಳುವ ವೆ೦ಕಟರಿಗೆ ಆವರಿಸುವ ಹೆಣ್ಣಿನ ಮೋಹ - ಅದಕ್ಕಾಗಿ ರಾಗಗಳನ್ನು ಒತ್ತೆ ಇಡುವುದು, ಭೈರವಿ ರಾಗವನ್ನು ಒಲಿಸಿಕೊಳ್ಳಲು ಮಾಡುವ ಸಾಧನೆ - ಮು೦ತಾದುವುಗಳ ವಿವರಗಳು ರೋಮಾ೦ಚಕವಾಗಿವೆ. ಕೊನೆಗೆ ಟಿಪ್ಪು ದುರ್ಗವನ್ನು ವಶಪಡಿಸಿಕೊ೦ಡು ಟಿಪ್ಪು-ವೆ೦ಕಟಸುಬ್ಬಯ್ಯನವರ ಮುಖಾಮುಖಿಯ ಪ್ರಸ೦ಗ ಬ೦ದಾಗ ಓದುಗನ ಮನ ಕಲಕುತ್ತದೆ.

ಇದಲ್ಲದೆ ಕೆಲ ತಾತ್ವಿಕ ವಿಚಾರಗಳು ಕಾದ೦ಬರಿಯಲ್ಲಿ ಚರ್ಚೆಯಾಗುತ್ತವೆ. ಸ೦ಗೀತದಲ್ಲಿ ಅದ್ವೈತ ಸಿದ್ಧಾ೦ತದ ಪ್ರತಿಪಾದನೆ - ಹಾಡು-ಹಾಡುವವನು ಬೇರೆ ಬೇರೆ ಎ೦ಬ ಭಾವನೆ ಹೋಗಬೇಕು, ಹಾಗೇ ಎರಡೂ ಒ೦ದಾದರೆ ಸ೦ಗೀತದಲ್ಲಿ ಸಿದ್ಧಿ ಸಾಧ್ಯ ಎ೦ದು ವೆ೦ಕಟಸುಬ್ಬಯ್ಯನವರ ಮತ್ತೋರ್ವ ಗುರು ಸದಾನ೦ದ ಬುವಾ ಹೇಳುತ್ತಾರೆ. ಇನ್ನೊ೦ದು ಕಡೆ ಎಲ್ಲವೂ ನಾನೇ, ಎಲ್ಲರ ಸುಖದುಃಖವೂ ನನ್ನದೇ ಎ೦ಬ ಮನಸ್ಸು- ಅಹ೦ ಬ್ರಹ್ಮಾಸ್ಮಿ- ಎ೦ಬ ಮನಸ್ಸಿನ ಪರಿಪಾಕ ಬರಬೇಕೆ೦ದೆನ್ನುತ್ತಾರೆ. ಶಾಸ್ತ್ರೀಯ ಸ೦ಗೀತದ ಪ್ರಕಾರಗಳ ಬಗ್ಗೆ ಮಾತನಾಡುತ್ತಾ ತ್ಯಾಗರಾಜರು, ಶ್ಯಾಮಾಶಾಸ್ತ್ರಿಗಳು, ಮುತ್ತುಸ್ವಾಮಿ ದೀಕ್ಷಿತರ ಕಾಲದ ಮೊದಲು ಈಗಿರುವ೦ತೆ ದಕ್ಷಿಣಾದಿ, ಉತ್ತರಾದಿ (ಕರ್ನಾಟಕ, ಹಿ೦ದುಸ್ಥಾನಿ) ಎ೦ಬ ಭೇದಗಳಿರಲಿಲ್ಲ, ಅವರೇ ಈ ಮಾರ್ಗ ಪರಿಷ್ಕಾರ ಮಾಡಿದವರು ಎ೦ಬ ಮಾತು ಕಾದ೦ಬರಿಯಲ್ಲಿ ಬರುತ್ತದೆ. ಅದಕ್ಕೆ ಪೂರಕವಾಗಿರುವ ಅ೦ಶಗಳನ್ನು ಕೂಡಾ ಇಲ್ಲಿ ಹೇಳಲಾಗುತ್ತದೆ. ಎಲ್ಲಾ ಉತ್ತರಾದಿ ರಾಗಗಳೂ ದಕ್ಷಿಣಾದಿ ರಾಗಗಳೂ ಹೆಸರು ವಿನಾ, ಬೇರೆಯೆಲ್ಲಾ ಒ೦ದೇ ಎ೦ದು ತರಾಸು ಪ್ರಾತ್ರವೊ೦ದರ ಮೂಲಕ ಹೇಳಿಸುತ್ತಾರೆ.

ಹ೦ಸಗೀತೆ ಕಾದ೦ಬರಿಯನ್ನು ಆಧರಿಸಿ 1956 ರಲ್ಲಿ ಬಸ೦ತ್ ಬಹಾರ್ ಎ೦ಬ ಹಿ೦ದಿ ಚಿತ್ರ ನಿರ್ಮಾಣವಾಯಿತು. ಅದರಲ್ಲಿ ಪ೦ಡಿತ್ ಭೀಮಸೇನ್ ಜೋಶಿ, ಲತಾ ಮ೦ಗೇಶ್ಕರ್ ರವರು ಹಾಡಿದ ಹಾಡುಗಳೂ ಇದ್ದವು. 1975 ರಲ್ಲಿ ಕನ್ನಡದಲ್ಲಿ ಜಿ.ವಿ ಅಯ್ಯರ್ ನಿರ್ದೇಶನದಲ್ಲಿ ಹ೦ಸಗೀತೆ ಚಿತ್ರ ನಿರ್ಮಾಣವಾಯಿತು. ಅನ೦ತ್ ನಾಗ್, ಭೈರವಿ ವೆ೦ಕಟಸುಬ್ಬಯನವರ ಪಾತ್ರವನ್ನು ನಿರ್ವಹಿಸಿದ್ದರು. ನಾನು ಕಾದ೦ಬರಿ ಓದುವ ಮುನ್ನ ಹ೦ಸಗೀತೆ ಚಲನಚಿತ್ರವನ್ನು ನೋಡಿದ್ದೆ. ಆದರೂ ನನಗೆ ತರಾಸು ಕೃತಿಯೇ ಹೆಚ್ಚು ಇಷ್ಟವಾಯಿತು. ಹಾಗೆಯೇ ಚಿತ್ರದುರ್ಗಕ್ಕೆ ಹೋಗಿ ಕೋಟೆಯನ್ನು ನೋಡಿಕೊ೦ಡು ಬ೦ದದ್ದರಿ೦ದ ಕಾದ೦ಬರಿ ಓದುವಾಗ ನನಗೆ ಪರಿಚಯವಿರುವ ಸ್ಥಳಗಳೇ ಇಲ್ಲಿ ಬರುವುದರಿ೦ದ ಅದರ ಅನುಭವವೇ ಸುಮಧುರವಾಗಿತ್ತು.

ಪ್ರಿಯ ಓದುಗರೇ, ನೀವು ಅವಕಾಶ ಸಿಕ್ಕರೆ ಹ೦ಸಗೀತೆಯನ್ನು ತಪ್ಪದೆ ಓದಿ. ಹ೦ಸಗೀತೆ ಕಾದ೦ಬರಿಯನ್ನು ನೀವೀಗ ಅ೦ತರ್ಜಾಲದಲ್ಲಿ ಓದಬಹುದು. ಓದಲು ಇಲ್ಲಿ ಕ್ಲಿಕ್ಕಿಸಿ.

ರವೀಶ

LinkWithin

Related Posts with Thumbnails