Sunday, August 16, 2009

ಯೇಗ್ದಾಗೆಲ್ಲಾ ಐತೆ - ಪುಸ್ತಕ ಪರಿಚಯ

’ಯೇಗ್ದಾಗೆಲ್ಲಾ ಐತೆ’ ಅ೦ದರೆ ’ಯೋಗದಲ್ಲಿ ಎಲ್ಲವೂ ಇದೆ’ ಎ೦ದು ಅರ್ಥ. ಶ್ರೀ ಮುಕು೦ದೂರು ಸ್ವಾಮಿಗಳನ್ನು ಕುರಿತ ತಮ್ಮ ನೆನಪುಗಳನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಈ ಕಿರು ಹೊತ್ತಿಗೆಯಲ್ಲಿ ಹ೦ಚಿಕೊ೦ಡಿದ್ದಾರೆ. ಶ್ರೀ ಸ್ವಾಮಿಗಳು ತಮ್ಮ ಮಾತಿನ ಮಧ್ಯೆ ’ಯೇಗ್ದಾಗೆಲ್ಲಾ ಐತೆ’ ಎ೦ಬ ಮಾತನ್ನು ಮತ್ತೆ ಮತ್ತೆ ಆಡುತ್ತಿದ್ದುದರಿ೦ದ ಪುಸ್ತಕಕ್ಕೆ ಆಡುನುಡಿಯ ಹೆಸರೊ೦ದನ್ನು ಇಡಲಾಗಿದೆ ಎ೦ದು ಶಾಸ್ತ್ರಿಗಳು ಹೇಳುತ್ತಾರೆ.Yegdagella Aithe, a book by Belagere Krishna Shastriಶ್ರೀ ಮುಕು೦ದೂರು ಸ್ವಾಮಿಗಳು ಮಾಡುತ್ತಿದ್ದರೆನ್ನಲಾದ ಪವಾಡಗಳನ್ನು ಪ್ರತ್ಯಕ್ಷ ಕ೦ಡವರು ಬೆಳಗೆರೆ ಕೃಷ್ಣಶಾಸ್ತ್ರಿಗಳು. ಈ ಪುಸ್ತಕವನ್ನು ಓದುವಾಗ ’ಹೌದೇ, ಹೀಗೂ ಆಗುವುದು೦ಟೇ?’ ಎ೦ಬ ತಾರ್ಕಿಕ ಪ್ರಶ್ನೆ ನಿಮ್ಮನ್ನು ಹಲವಾರು ಬಾರಿ ಕಾಡಬಹುದು. ಆದರೆ ನಾವು ಇ೦ಥ ಘಟನೆಗಳನ್ನು ಕ೦ಡಿಲ್ಲವಾದ್ದರಿ೦ದ ಅವು ಅಸಾಧ್ಯವೆ೦ದಲ್ಲ. ಸ್ವತ: ಕೃಷ್ಣ ಶಾಸ್ತ್ರಿಗಳಿಗೂ ಮುಕು೦ದೂರು ಸ್ವಾಮಿಗಳನ್ನು ಕಾಣುವ ಮೊದಲು ಜನರು ಅವರ ಪವಾಡಗಳ ಬಗ್ಗೆ ಹೇಳಿದಾಗ ಮೇಲೆ ಹೇಳಿದ ಪ್ರಶ್ನೆ ಕಾಡಿದ್ದು೦ಟು. ನಮ್ಮ ತಾರ್ಕಿಕ ಬುದ್ಧಿಯನ್ನು ಬದಿಗಿಟ್ಟು, ಹೀಗೆ ಇದ್ದಿರಲೂ ಬಹುದು ಎ೦ದುಕೊ೦ಡು ಶಾಸ್ತ್ರಿಗಳ ಅನುಭವವನ್ನು ನಮ್ಮದೆ೦ದುಕೊ೦ಡು ಓದಿದರೆ ಒ೦ದು ಅದ್ಭುತ ಓದಿನ ಅನುಭೂತಿ ನಿಮಗಾಗಬಹುದು. ಪವಾಡಗಳ ಜೊತೆಗೆ ಸ್ವಾಮಿಗಳು ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ, ಕೆಲವು ಸಲ ಹಾಸ್ಯ ಮಿಶ್ರಿತವಾಗಿ ಹೇಳುತ್ತಿದ್ದ ಆಧ್ಯಾತ್ಮಿಕ ವಿಚಾರಗಳು ಗಮನ ಸೆಳೆಯುತ್ತವೆ.

1949ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಶಾಲೆಗೆ ಉಪಾಧ್ಯಾಯರಾಗಿ ಬ೦ದ ಸ೦ದರ್ಭದಲ್ಲಿ ಶಾಸ್ತ್ರಿಗಳಿಗೆ ಮುಕು೦ದೂರು ಸ್ವಾಮಿಗಳ ಪರಿಚಯವಾಗುತ್ತದೆ. ಮು೦ದೆ ಸ್ವಾಮಿಗಳೊ೦ದಿಗಿನ ಒಡನಾಟದ ನೆನಪುಗಳು ಪುಸ್ತಕದ ವಸ್ತು. ಎ೦ದೂ ಪ್ರಚಾರ ಬಯಸದ ಸ್ವಾಮಿಗಳು ತಾವು ಮಾಡುತ್ತಿದ್ದ ಪವಾಡಗಳ ಬಗ್ಗೆಯೂ ತಾವೇನೂ ಮಾಡಿಲ್ಲ ಎ೦ಬ ನಿರ್ಲಿಪ್ತ ಭಾವದಲ್ಲಿದ್ದರೆ೦ದು ಅನೇಕ ಕಡೆ ಪ್ರಸ್ತಾಪವಿದೆ. ಸ್ವಾಮಿಗಳು ಪ್ರಕೃತಿ ಸೊಬಗನ್ನು ನೋಡಿ ಆನ೦ದಿಸುತ್ತಿದ್ದ ಸ೦ದರ್ಭಗಳು, ತಿನ್ನಲೂ ಏನೂ ಸಿಗದ ಬೆಟ್ಟವೊ೦ದರಲ್ಲಿ ಹಣ್ಣುಗಳನ್ನು ತರಿಸಿಕೊಡುವುದು, ಡಾಕ್ಟರ್ ಒಬ್ಬರು ಚಿಕಿತ್ಸೆಗೆ ಇ೦ಜೆಕ್ಷನ್ ಒ೦ದನ್ನು ತ೦ದಿಲ್ಲವೆ೦ದುಕ್ಕೊಳ್ಳುತ್ತಿದ್ದ ಚೀಲದಲ್ಲಿ ಆ ಇ೦ಜೆಕ್ಷನ್ ಪ್ರತ್ಯಕ್ಷವಾಗುವುದು, ಹಳೇ ಕಾಗದದ ಚೂರೊ೦ದು ನೂರರ ನೋಟಾಗುವುದು - ಮೊದಲಾದ ಹಲವಾರು ಪ್ರಸ೦ಗಗಳು ಪುಸ್ತಕದಲ್ಲಿವೆ. ಪುಸ್ತಕದಲ್ಲಿ ಬರುವ ಕೆಲವು ಪದಗಳು ಕರ್ನಾಟಕದ ಮಲೆನಾಡು/ಬಯಲು ಪ್ರದೇಶದ ಆಡುಭಾಷೆಯ ಪದಗಳು/ನುಡಿಗಟ್ಟುಗಳಾಗಿರುವುದರಿ೦ದ ಆ ಪ್ರದೇಶಗಳಲ್ಲಿರದ ಓದುಗರಿಗೆ ಹೊಸತು/ಕ್ಲಿಷ್ಟವೆನಿಸ ಬಹುದು. ಆದರೂ ಒ೦ದು ವಿಶಿಷ್ಟ ಅನುಭವಕ್ಕಾಗಿ ಈ ಪುಸ್ತಕವನ್ನು ತಪ್ಪದೇ ಓದಿ.

[ಪುಸ್ತಕದ ಲೇಖಕರಾದ ಬೆಳಗೆರೆ ಕೃಷ್ಣಶಾಸ್ತ್ರಿಗಳು ಈಗ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೆಳಗೆರೆಯಲ್ಲಿ ಶ್ರೀ ಶಾರದಾ ಮ೦ದಿರ ವಿದ್ಯಾಸ೦ಸ್ಥೆಯನ್ನು ನಡೆಸುತ್ತಾ ಸಮಾಜ ಸೇವೆಯಲ್ಲಿ ತೊಡಗಿಕೊ೦ಡಿದ್ದಾರೆ. ಕರ್ನಾಟಕ ಸರಕಾರವು 2004ರಲ್ಲಿ ಇವರ ಸೇವೆಯನ್ನು ಗುರುತಿಸಿ, ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.]

2 comments:

  1. Hi this is is Gireesh ,I got this informmation yesterday while going to shimoga,One of my co-passenger was studying a book "Himalayada mahatmara sannidhiyalli" he told me to study this this book and about the Swamiji.

    ReplyDelete
  2. folks,

    stop talking about 'pavaada' (miracles) performed by mukudooru swami. Mukundooru swami did not like to talk about it. He denounced, downplayed them. In his own words, this whole world is a miracle. That is the right spirit of spirituality! To me, what is most important is his words, his conduct, low key personality, his experience of the world and his world view. An extremely rare individual of immense maturity. An extremely rare personality with extremely rare mental makeup.
    Truly amazing that such a person lived!

    Ravi

    ReplyDelete

LinkWithin

Related Posts with Thumbnails