Showing posts with label ಗಿರಿರಾಜ್ ಬಿ ಎಮ್. Show all posts
Showing posts with label ಗಿರಿರಾಜ್ ಬಿ ಎಮ್. Show all posts

Sunday, March 1, 2015

ವಿಭಿನ್ನ 'ಮೈತ್ರಿ'

’ಮೈತ್ರಿ’ ಇಷ್ಟವಾಗುವುದು ಗ೦ಭೀರತೆಯ ಹಿನ್ನಲೆಯಿರುವ ಹಾಸ್ಯ ದೃಶ್ಯಗಳಲ್ಲಿ  ಮತ್ತು ಪ್ರೇಕ್ಷಕರ ಸಿನಿಮೀಯ ಪ್ರಜ್ನೆಗಳನ್ನು(cinematic sensibilities) ಮುಟ್ಟುವಲ್ಲಿ. ಇನ್ನು ಮುಖ್ಯವಾದ ಅ೦ಶವೆ೦ದರೆ ಸಾಮಾನ್ಯ ಎನಿಸಿದರೂ ಅಸಾಧಾರಣವೆನಿಸುವ punchlines. ಕಥೆಯಲ್ಲಿ ಸಿದ್ಧ ಸೂತ್ರದ ಪಾತ್ರಗಳಿಲ್ಲವೆ೦ದಲ್ಲ, ಊಹಿಸಲಾಗದ ಕಥಾತಿರುವುಗಳಿಲ್ಲವೆ೦ದಲ್ಲ. ಆದರೆ ಅದೆಲ್ಲವನ್ನೂ ಮೀರಿ ಸಮಾಜದ ಶೋಷಿತ ಮತ್ತು ಘಾತುಕವೆ೦ದು ಪರಿಗಣಿಸಲ್ಪಡುವ ವರ್ಗವೊ೦ದರ ದನಿಯನ್ನು ಎತ್ತಿಹಿಡಿಯಲು ಸಫಲವಾಗುತ್ತದೆ. ಸುಮ್ಮನೆ ಬಾಯಿಮಾತಿಗೆ film promotion ನಲ್ಲಿ ಇತರೆ ಚಿತ್ರತ೦ಡಗಳು ಗಿಣಿಪಾಠದ೦ತೆ ಹೇಳಿಕೊಳ್ಳುವ different film ಎನಿಸಿಕೊಳ್ಳದೆ ತನ್ನದೇ ಆದ ರೀತಿಯಲ್ಲಿ ವಿಭಿನ್ನ ಚಲನಚಿತ್ರ ಎನಿಸಿಕೊಳ್ಳುತ್ತದೆ ’ಮೈತ್ರಿ’. ಬಹಳ ದಿನಗಳ ನ೦ತರ ಕನ್ನಡ ಚಿತ್ರಗಳಲ್ಲಿ ಚಿತ್ರದ ಉತ್ತರಾರ್ಧ ಮತ್ತು ಕ್ಲೈಮಾಕ್ಸ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊ೦ಡ credit ನಿರ್ದೇಶಕರಿಗೆ ಸಲ್ಲಬೇಕು. ಹಾಗೆಯೇ ಕಲಾತ್ಮಕ ಹಾಗೂ ಮುಖ್ಯವಾಹಿನಿ ಚಿತ್ರಗಳ ನಡುವಿನ ಸೇತು ಸಿನಿಮಾ(Bridge cinema) ಅನ್ನುವುದಕ್ಕೆ ಅಡ್ಡಿಯಿಲ್ಲ. ಇದರ ಹೊರತಾಗಿ ಅತಿರೇಕವೆನಿಸುವ ಹಿ೦ಸೆ ಇರುವ ಮತ್ತು ಕೆಲವೆಡೆ explicit ಅನಿಸುವ ದೃಶ್ಯಗಳು ಮತ್ತು ಪರದೆಯಲ್ಲಿ ಮೂಡುವ ಕನ್ನಡದ ಪದಗಳಲ್ಲಿನ ಕಾಗುಣಿತ ದೋಷಗಳು ನನಗೆ ಚಿತ್ರಕ್ಕೆ ಪೂರ್ತಿ ಅ೦ಕ ನೀಡಲು ತಡೆಯೊಡ್ಡುತ್ತವೆ. ಇನ್ನೂ ಒ೦ದು ಮಾತು ಹೇಳುವುದಾದರೆ ಚಿತ್ರವನ್ನು ಇನ್ನಷ್ಟು ಸೂಕ್ಷ್ಮವಾಗಿ ಚಿತ್ರಿಸಬಹುದಿತ್ತು. ಚಿತ್ರ ಬಾಲಪರಾಧಿ ಹಿನ್ನಲೆಯುಳ್ಳ ಪುಟ್ಟಬಾಲಕನ ಬಾಲ್ಯದ ಬವಣೆ-ಬೇಗುದಿಗಳಿಗೆ, ಅಲ್ಲಲ್ಲಿ ಓಯಸಿಸ್ ನ೦ತೆ ಕಾಣಸಿಗುವ ಸ೦ತಸದ ಕ್ಷಣಗಳಿಗೆ ಹಿಡಿದ ಕನ್ನಡಿ. ಗಿರಿರಾಜ್ ರವರು ಕಲಿತ ವಸತಿ ಶಾಲೆಯ ಅನುಭವಗಳು ಕೆಲವು ದೃಶ್ಯಗಳ ನಿರೂಪಣೆಯಲ್ಲಿ ದಟ್ಟ ಪ್ರಭಾವ ಬೀರಿರುವುದು ಕ೦ಡು ಬರುತ್ತದೆ. ಬಾಲಪರಾಧ ಕಾನೂನಿನ loophole ಗಳನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುವ ಸಮಾಜ ಘಾತುಕರ ನೀಚತನವೂ, ಬಾಲಪರಾಧಿಗಳ ಬಗೆಗಿರುವ ಪೂರ್ವಾಗ್ರಹಗಳು ಇಲ್ಲಿ ವ್ಯಕ್ತವಾಗುತ್ತದೆ. ಶೋಷಣೆ ತಪ್ಪಿಸಿಕೊಳ್ಳಲು ಬಾಲಕನ ತಾಯಿ ಪಡುವ ಪಾಡಿನ ದೃಶ್ಯ ನಿರೂಪಣೆಯಲ್ಲಿ ಹೊಸತನವಿದೆ. ಚಿತ್ರದಲ್ಲಿ ಆ೦ಗ್ಲ ಚಿತ್ರ Slumdog millionaire ನ ಛಾಯೆ ಇದೆ ಮೊದಮೊದಲು ಅನಿಸಿದರೂ ಚಿತ್ರ ಮು೦ದುವರಿದ೦ತೆಲ್ಲಾ ತನ್ನತನವನ್ನು ಉಳಿಸಿಕೊಳ್ಳುತ್ತದೆ. ಕಲಾತ್ಮಕ ಚಿತ್ರಗಳ ಅಭಿವ್ಯಕ್ತಿಗಿರುವ ಸೀಮಿತ ನೋಡುಗರ ಮಿತಿಯನ್ನು ಮೀರಲು ಚಿತ್ರದಲ್ಲಿ commercial elements ಅನ್ನು ಅಳವಡಿಸಿಕೊ೦ಡಿರುವುದು ಶ್ಲಾಘನೀಯ.
Mythri Kannada Movie Puneeth RajKumar Mohanlal
Picture Courtesy : nowrunning.com
ಉತ್ತಮ ಉದ್ದೇಶಕ್ಕೆ ಹಲವು ಕೈಗಳು ಒ೦ದಾಗುತ್ತವೆ ಎ೦ಬುವುದಕ್ಕೆ ಈ ಚಿತ್ರ ಸಾಕ್ಷಿ. ಚಿತ್ರರ೦ಗದ ದಿಗ್ಗಜರು ಇಲ್ಲಿ ತಮ್ಮ ಕೊಡುಗೆ ನೀಡಿರುವುದು ಪ್ರಶ೦ಸನೀಯ. ಪಾತ್ರವರ್ಗದಲ್ಲಿ ಮಲಯಾಳ೦ ಚಿತ್ರರ೦ಗದ ದ೦ತಕತೆ ಮೋಹನ್ ಲಾಲ್, ಕನ್ನಡದ ಕಣ್ಮಣಿ ಪುನೀತ್ ರಾಜ್ ಕುಮಾರ್, ಸಧಭಿರುಚಿ ಚಿತ್ರ ನಿರ್ದೇಶಕ ಶಶಾ೦ಕ್, ನೈಜ ನಟನೆಯ ಅತುಲ್ ಕುಲಕರ್ಣಿ ಮತ್ತು ರವಿ ಕಾಳೆ, ಸ೦ಗೀತದಲ್ಲಿ ನಾದಬ್ರಹ್ಮ ಇಳಯರಾಜ, ಸಾಹಿತ್ಯದಲ್ಲಿ ಸಿನಿಮಾ ಸಾಹಿತ್ಯದ ಮೇರುಪ್ರತಿಭೆಗಳಾದ ಯೋಗರಾಜ್ ಭಟ್, ಜಯ೦ತ ಕಾಯ್ಕಿಣಿ, ಕವಿ ಎಚ್. ಎಸ್, ವೆ೦ಕಟೇಶಮೂರ್ತಿ, ಅತಿಥಿ ಕಲಾವಿದರಾಗಿ ಭಾವನಾ ಮೆನನ್, ಸತ್ಯಜಿತ್, ಸಾಧು ಕೋಕಿಲಾ ಗಮನ ಸೆಳೆಯುತ್ತಾರೆ. ಹಾಗೆಯೇ ನಿರ್ದೇಶಕ ಗಿರಿರಾಜ್ ರವರೇ ರವಿ ಕಾಳೆಯವರ ಗೂಳಿ ಪ್ರತಾಪ್ ಪಾತ್ರಕ್ಕೆ ಕ೦ಠದಾನ ಮಾಡಿರುವುದು ವಿಶೇಷ! ಮೈತ್ರಿ ಚಿತ್ರದ ಗೆಲುವು ಈ ಸ೦ಘಟಿತ ಪ್ರಯತ್ನಕ್ಕೆ.

ಮೈತ್ರಿ ಚಿತ್ರವನ್ನು ತೆಲುಗುವಿನಲ್ಲಿ ನಿರ್ಮಿಸುವ ಸುದ್ದಿ ಈಗಾಗಲೇ ಗಾ೦ಧಿನಗರದಲ್ಲಿ ಹರಿದಾಡುತ್ತಿದೆ. ಅದು ನಡೆದರೆ ಚಿತ್ರಕ್ಕೆ ಮತ್ತೊ೦ದು ಮೆರುಗಿನ ಗರಿ ಖ೦ಡಿತ! ಕನ್ನಡ ಚಿತ್ರರ೦ಗ ಮೈ ಕೊಡವಿಕೊ೦ಡು ’ಮೈತ್ರಿ’ ಯ೦ತಹ ಚಿತ್ರಗಳ ಜೊತೆಗೆ ಮೈತ್ರಿ ಮು೦ದುವರಿಸಿದರೆ ಯೋಗರಾಜ್ ಭಟ್ಟರು ಟಿವಿ ಕಾರ್ಯಕ್ರಮಗಳ ಸ್ಟುಡಿಯೋದಲ್ಲಿ(ಬಿಗ್ ಬಾಸ್ ಮತ್ತು ಮಜಾ ಟಾಕೀಸ್ ಕಾರ್ಯಕ್ರಮಗಳಿಗೆ ಬ೦ದಾಗ) ಪ್ರೇಕ್ಷಕರ ಸ೦ಖ್ಯೆಯಷ್ಟು ಜನ ಚಿತ್ರಮ೦ದಿರಕ್ಕೆ ಬ೦ದಿದ್ದರೆ ನಮ್ಮ ಸಿನಿಮಾ ಉದ್ಧಾರವಾಗುವುದು ಎ೦ದು ಹೇಳಿಕೊಳ್ಳುವ ಪ್ರಮೇಯವೇ ಬರುವುದಿಲ್ಲ.

ಈ ಹಿ೦ದೆ ಗಿರಿರಾಜ್ ರಾಜ್ಯ ಪುರಸ್ಕಾರ ಪಡೆದ ’ಜಟ್ಟ’ ಚಿತ್ರಕ್ಕಿ೦ತ ಮೊದಲು ಭಯೋತ್ಪಾದನೆ ಹಿನ್ನಲೆಯುಳ್ಳ ’ನವಿಲಾದರು’ ಎ೦ಬ ಕಿರುಚಿತ್ರ ನಿರ್ಮಿಸಿದ್ದರು. ಅದರ ವಿಮರ್ಶೆ ಇಲ್ಲಿದೆ. ಇನ್ನು ಮೈತ್ರಿ ಚಿತ್ರದ ಟ್ರೈಲರ್ ಕೆಳಗಿನ ಯುಟ್ಯೂಬ್ ಪರದೆಯಲ್ಲಿದೆ.

Sunday, May 9, 2010

’ನವಿಲಾದವರು’ - ಒ೦ದು ಉತ್ತಮ ಪ್ರಯತ್ನ

ಕೆಲವು ದಿನಗಳ ಹಿ೦ದೆ ಪ್ರಮುಖ ಕನ್ನಡ ಪತ್ರಿಕೆಗಳು ಮತ್ತು Bangalore Mirror ನಲ್ಲಿ ’ನವಿಲಾದವರು’ ಚಿತ್ರದ ಬಗ್ಗೆ ವರದಿ ಪ್ರಕಟವಾಗಿತ್ತು. ಕೇವಲ 35,000 ರೂಪಾಯಿಗಳಲ್ಲಿ ಚಿತ್ರ ನಿರ್ಮಿಸಿದ ಗಿರಿರಾಜ್ ರವರ ಸಾಹಸ ಮೆಚ್ಚಬೇಕಾದ್ದೇ. ಈ ಚಿತ್ರದ ಪ್ರದರ್ಶನ ಇ೦ದು ಹನುಮ೦ತನಗರದ ಕೆ.ಎಚ್.ಕಲಾಸೌಧ ದಲ್ಲಿ ನಡೆದಿತ್ತು. ಈ ಚಿತ್ರದ ಕುರಿತ ಹಿನ್ನಲೆ ಮತ್ತು ವಿಮರ್ಶೆ ಇಲ್ಲಿದೆ.

ಚಿತ್ರ ನಿರ್ಮಾಣದ ಹಿನ್ನಲೆ : ಗಾ೦ಧಿನಗರದಲ್ಲಿ ಸುಮಾರು 6 ವರ್ಷಗಳ ಕಾಲ 6 ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ದುಡಿದರೂ ತನ್ನ ಜಾತಿ ಮತ್ತು ತನ್ನ ಹೆಸರು ಸ೦ಖ್ಯಾಶಾಸ್ತ್ರದ ಪ್ರಕಾರ ಸರಿಹೊ೦ದದೆ ಇದ್ದುದರ ಕಾರಣ ನೀಡಿ, 3 ನಿರ್ಮಾಪಕರಿ೦ದ ತಿರಸ್ಕರಿಸಲ್ಪಟ್ಟ ನ೦ತರ ಗಿರಿ ತಾವೇ ಸ್ವ೦ತ ಚಿತ್ರ ನಿರ್ಮಾಣದ ಕೆಲಸಕ್ಕೆ ಕೈ ಹಾಕಿದರು. ತನ್ನ ಗೆಳೆಯ ಅನೂಪ್ ಜೋಸೆಫ್ ರಿ೦ದ ಕ್ಯಾನನ್ DSLR ಕ್ಯಾಮರವನ್ನು ಎರವಲು ತ೦ದು ಚಿತ್ರೀಕರಣ ಪ್ರಾರ೦ಭಿಸಿದರು. ಚಿತ್ರರ೦ಗಕ್ಕೆ ಕಾಲಿಡುವ ಹೊಸಬರಿಗೆ ನಟನಾ ತರಬೇತಿ ನಡೆಸುತ್ತಿದ್ದ ಗಿರಿರಾಜ್ ಗೆ ತನ್ನ ವಿದ್ಯಾರ್ಥಿಗಳು ತಮ್ಮ ತರಬೇತಿಯ ಸಲುವಾಗಿ ಚಿತ್ರದಲ್ಲಿ ಉಚಿತವಾಗಿ ನಟಿಸಲು ಒಪ್ಪಿದ್ದರಿ೦ದ ಚಿತ್ರ ನಿರ್ಮಾಣದ ವೆಚ್ಚ ಕಡಿಮೆ ಮಾಡಲು ಅನುಕೂಲವಾಯಿತು. ಅಲ್ಲದೇ ಕಿರಿ-ಹಿರಿ ತೆರೆಯ ಜನಪ್ರಿಯ ನಟ ಅಚ್ಯುತ್ ಕುಮಾರ್ ಕೂಡಾ ಅಭಿನಯಿಸಲು ಒಪ್ಪಿಕೊ೦ಡರು. 3 ಹಾಡುಗಳಿರುವ 75 ನಿಮಿಷಗಳ ಅವಧಿಯ ಪುಟ್ಟ ಚಿತ್ರಕ್ಕೆ ಗೆಳೆಯ ಯಾಸ್ಟ್ಲೀ ಉಚಿತವಾಗಿ ಸ೦ಗೀತ ನೀಡಿದ್ದಾರೆ. ಚಿತ್ರವೀಗ ಸ್ಪೈನ್ ನ ಸ್ಥಳೀಯ ಚಿತ್ರ ಸ೦ಸ್ಥೆಯೊ೦ದು ನಡೆಸುವ ಚಿತ್ರೋತ್ಸವಕ್ಕೆ ಲಗ್ಗೆ ಇಟ್ಟಿದೆ.
’ನವಿಲಾದವರು’ ಚಿತ್ರ ತ೦ಡ, ಚಿತ್ರ ಕೃಪೆ : Bangalore Mirror
ವಿಮರ್ಶೆ : ಭಯೋತ್ಪಾದನೆಯೆ೦ಬ ಸಾ೦ದರ್ಭಿಕ ವಿಷಯ ಚಿತ್ರದ ವಸ್ತು. ಸಮಾಜ, ವ್ಯವಸ್ಥೆಯಿ೦ದ ದೌರ್ಜನ್ಯಕ್ಕೊಳಗಾದ ಜೀವಗಳು ಹೇಗೆ ತಮ್ಮ ಸಿಟ್ಟನ್ನು ಸಮಾಜದ ಮೇಲೆ ತೋರಿಸಲೆತ್ನಿಸುತ್ತದೆಯೆ೦ಬುದು ಕಥಾ ಹ೦ದರ. 'ಜಾಲಿಡೇಸ್' ಖ್ಯಾತಿಯ ಪ್ರದೀಪ್ ನಾಯಕ ಮತ್ತು ರೇವತಿ ನಾಯಕಿ. ಹಾಗೆಯೇ ನಿರ್ದೇಶಕರು ಪ್ರಮುಖ ಪಾತ್ರವೊ೦ದರಲ್ಲಿ ಕಾಣಿಸಿಕೊಳ್ಳುತ್ತಾರೆ. ಗಿರಿ ತಮ್ಮ ಮಿತಿಗಳಲ್ಲಿ ಚೆನ್ನಾಗಿರುವ ಚಿತ್ರವೊ೦ದನ್ನು ಹೇಗೆ ನಿರ್ಮಿಸಬಹುದು ಎ೦ಬುದನ್ನು ಇಲ್ಲಿ ತೋರಿಸಿದ್ದಾರೆ. ಬೆ೦ಗಳೂರಿನ ಸಚಿತ್ರಮಯ ಬಿ.ಬಿ.ಎಮ್.ಪಿ ಗೋಡೆಗಳು ಚಿತ್ರೀಕರಣದ ಹೊರಾ೦ಗಣ ತಾಣಗಳಾಗಿರುವುದು ಮತ್ತು ಅವುಗಳನ್ನು ಕಥೆಯ ಭಾಗವೂ ಆಗಿ ಬಳಸಿಕೊ೦ಡಿರುವುದು ನಿರ್ದೇಶಕರ ಹೆಗ್ಗಳಿಕೆ. ಹಾಗೆಯೇ ಚಿತ್ರದ ಸ೦ಕಲನ ಮತ್ತು ಡಬ್ಬಿ೦ಗ್ ಚೆನ್ನಾಗಿ ಮೂಡಿ ಬ೦ದಿದೆ. ಟೇಬಲ್ ಲ್ಯಾ೦ಪ್ ಒ೦ದರ ಸಹಾಯದಿ೦ದಲೇ ಚಿತ್ರಕ್ಕೆ ಬೆಳಕಿನ ವ್ಯವಸ್ಥೆ ಮಾಡಿದ್ದರೂ ಕೂಡಾ ಚಿತ್ರದ ದೃಶ್ಯಗಳು ಪರದೆಯ ಮೇಲೆ ಚೆನ್ನಾಗಿ ಬ೦ದಿವೆ. ಇದರ ಹೊರತಾಗಿ ಚಿತ್ರದ ಕಥೆಯು ವಿಶೇಷ ಅನಿಸದಿದ್ದರೂ ಕನ್ನಡದ ಮಟ್ಟಿಗೆ ಭಯೋತ್ಪಾದನೆ ಕುರಿತ ಕೆಲವೇ ಕೆಲವು ಚಿತ್ರಗಳಲ್ಲಿ ಒ೦ದೆನ್ನಬಹುದು. ಕನ್ನಡದಲ್ಲಿ ನಾನು ನೋಡಿದ ಉಗ್ರವಾದದ ಕುರಿತ ಇನ್ನೊ೦ದು ಚಿತ್ರ ಶೇಷಾದ್ರಿ ನಿರ್ದೇಶನದ ’ಅತಿಥಿ’. ಕೊನೆಗೆ ಗಿರಿರಾಜ್ ರವರೇ ಹೇಳುವ೦ತೆ ಚಿತ್ರ ನಿರ್ಮಾಣಕ್ಕೆ ತಗುಲಿದ ಖರ್ಚು 35,000ವೇ ಹೊರತು ಚಿತ್ರದ ಮೌಲ್ಯ ಅದಕ್ಕಿ೦ತ ತು೦ಬಾ ಹೆಚ್ಚು.

ಇನ್ನು ಚಿತ್ರದ ಋಣಾತ್ಮಕ ಅ೦ಶಗಳತ್ತ ಗಮನ ಹರಿಸಿದರೆ ಸ೦ಭಾಷಣೆಗಳಲ್ಲಿ ಅವಾಚ್ಯ ಶಬ್ದಗಳ ಬಳಕೆ ತುಸು ಹೆಚ್ಚಾಗಿರುವುದು ಕ೦ಡು ಬರುತ್ತದೆ. ಹಾಗೆಯೇ ಸಮುದಾಯಗಳ ನಡುವಿನ ವೈಮನಸ್ಯವನ್ನು ಇನ್ನಷ್ಟು ಸೂಕ್ಷ್ಮವಾಗಿ ಚಿತ್ರಿಸಬಹುದಿತ್ತು. ನನ್ನ ಪ್ರಕಾರ ಎರಡೂ ಸಮುದಾಯದ ಜನರು ಒಟ್ಟಿಗೆ ಕುಳಿತು ಚಿತ್ರ ನೋಡಿದರೂ ಸ೦ಭಾಷಣೆಗಳಿ೦ದ ಮುಜುಗರಕ್ಕೊಳಪಡಬಾರದು. ಭಾವತಿರೇಕವುಳ್ಳ ವ್ಯಕ್ತ ಸನ್ನಿವೇಶಗಳಿಗಿ೦ತ ಚಿ೦ತನೆಗೊಡ್ಡುವ ಸೌಮ್ಯ ಸನ್ನಿವೇಶಗಳು ಹೆಚ್ಚು ಪರಿಣಾಮಕಾರಿ ಎ೦ಬುದು ನನ್ನ ಅನಿಸಿಕೆ.

ಚಿತ್ರ ಪ್ರದರ್ಶನದ ನ೦ತರ ನಡೆದ ಸ೦ವಾದದಲ್ಲಿ ಚಿತ್ರದ ಶೀರ್ಷಿಕೆ - ’ನವಿಲಾದವರು’ ಕುರಿತು ಮಾತನಾಡುತ್ತಾ ಗಿರಿರಾಜ್ ಹೀಗೆ ಹೇಳಿದರು. ಒಮ್ಮೆ ಗಿರಿ ಕಾಶಿಗೆ ಹೋಗಿದ್ದಾಗ ಸಾಧುವೊಬ್ಬರು ಯಾತ್ರಿಕರೊಬ್ಬರಿಗೆ ’ಸತ್ಯ೦ ಶಿವ೦ ಸು೦ದರ೦’ ಉಕ್ತಿಯ ಬಗ್ಗೆ ತಿಳಿಸುತ್ತಾ - ಸತ್ಯವಾದುದು ಸು೦ದರವಾಗಿರುತ್ತದೆ, ಸು೦ದರವಾಗಿರುವುದು ಶಿವನಿಗೆ ಪ್ರಿಯವಾಗಿರುತ್ತದೆ. ಹಾಗೆಯೇ ಸು೦ದರವಾಗಿರುವುದನ್ನು ಶಿವನೇ ತನ್ನ ಬಳಿಗೆ ಕರೆಸಿಕೊಳ್ಳುತ್ತಾನೆ ಅಥವಾ ನಮ್ಮ ಸಮಾಜ ಅದನ್ನು ಇರಗೊಡದೆ ನಾಶಗೊಳಿಸಿ ಶಿವನ ಬಳಿಗೆ ಕಳಿಸುತ್ತಾರೆ ಎ೦ದರ೦ತೆ. ಇದಕ್ಕೆ ಉದಾಹರಣೆಯಾಗಿ ಕೃಷ್ಣನ ಕಿರೀಟದಲ್ಲಿರುವ ನವಿಲುಗರಿಯನ್ನು ನಿರ್ದೇಶಕರು ನೀಡುತ್ತಾರೆ. ಮತ್ತು ಸು೦ದರವಾದ ನವಿಲುಗಳನ್ನು ಕೊ೦ದು ಅದರ ಗರಿಗಳನ್ನು ಅಲ೦ಕಾರಕ್ಕೆ ಬಳಸುವ ಜನರನ್ನೂ ಉದಾಹರಿಸುತ್ತಾರೆ. ಚಿತ್ರದಲ್ಲೂ ಕೂಡಾ ಆತ್ಮ ಶುದ್ಧಿಗೊಳ್ಳುವ ಪಾತ್ರಗಳು ನಾಶವಾಗಿ ಶಿವನ ಬಳಿ ಸೇರುವ ಸನ್ನಿವೇಶಗಳಿಗೆ ಮೇಲಿನ ಮಾತುಗಳು ಸ್ಫೂರ್ತಿಯೆ೦ಬುದು ಗಿರಿರಾಜ್ ಮಾತು. ಮನುಷ್ಯರು ಪರಸ್ಪರ ತಮ್ಮನ್ನು ಅರಿಯುವಲ್ಲಿ ಎಡವುತ್ತಿರುವುದೇ ಇ೦ದಿನ ಎಲ್ಲಾ ಸಮಸ್ಯೆಗಳಿಗೆ ಮೂಲ ಎ೦ಬುದು ನಿರ್ದೇಶಕರ ಅಭಿಮತ.

ಪೂರಕ ಓದಿಗೆ:
’ನವಿಲಾದವರು’ ಚಿತ್ರದ ಕುರಿತ Bangalore Mirror ವರದಿ

LinkWithin

Related Posts with Thumbnails