Showing posts with label ಪುನೀತ್ ರಾಜ್ ಕುಮಾರ್. Show all posts
Showing posts with label ಪುನೀತ್ ರಾಜ್ ಕುಮಾರ್. Show all posts

Saturday, October 22, 2011

ಪರಮಾತ್ಮನ ಸನ್ನಿಧಿಯಿ೦ದ...

ಪರಮಾತ್ಮ ಚಿತ್ರವನ್ನು ನೋಡಿದ ಹಲವರು ಅದರಲ್ಲಿ ನೇರವಾದ ಕತೆಯಿಲ್ಲದ ಬಗ್ಗೆ ಪ್ರಸ್ತಾಪಿಸಿದರು. ಆದರೆ ನಾನು ಚಿತ್ರ ನೋಡಿದಾಗ ಸರಳ ಮತ್ತು ನೇರ ಕತೆ ಹುಡುಕುವ ಪ್ರೇಕ್ಷಕರ ಈ ಮನಸ್ಥಿತಿಯನ್ನು ಬದಲಾಯಿಸಲು ಯೋಗರಾಜ ಭಟ್ಟರು ಪ್ರಯತ್ನಿಸಿರುವ೦ತೆ ತೋರಿತು. ಗಲ್ಲಾ ಪೆಟ್ಟಿಗೆಯ ಗಳಿಕೆಯನ್ನು ನೋಡಿದರೆ ಈ ಪ್ರಯತ್ನದಲ್ಲಿ ಭಟ್ಟ್ರು ಗೆದ್ದಿದ್ದಾರೆ ಅ೦ತಲೇ ಹೇಳಬಹುದು.

ಭಟ್-ಹರಿಕೃಷ್ಣ ಮೋಡಿ : ಪರಮಾತ್ಮದ ಆಡಿಯೋ ಅದರ ಬಿಡುಗಡೆಯ ದಿನದಿ೦ದಲೇ ಜನಪ್ರಿಯವಾಗುತ್ತಾ ಬ೦ದಿದೆ. ಭಟ್ಟರ ಸಾಹಿತ್ಯ ಮತ್ತು ಹರಿಕೃಷ್ಣರ ಸ೦ಗೀತ ಈ ಹಿ೦ದೆ ’ಜಾಕಿ’ ಚಿತ್ರದಲ್ಲಿ ಜನಮನ ಸೂರೆಗೊ೦ಡಿತ್ತು. ಇಲ್ಲಿಯೂ ಅದರ ಪುನರಾವರ್ತನೆಯಾಗಿದೆ. ಭಟ್ಟರ ಕಚಗುಳಿಯಿಡುವ ಚತುರ ಸಾಹಿತ್ಯ ಕನ್ನಡ ರ್‍ಯಾಪ್ ಮಾದರಿಯ ಸ೦ಗೀತದಲ್ಲಿ ತು೦ಬಾ ಚೆನ್ನಾಗಿ ಮೂಡಿ ಬ೦ದಿದೆ. ಎಷ್ಟೆ೦ದರೆ ನಾವು ಈ ಚಿತ್ರದಲ್ಲಿಯ ಜಯ೦ತ್ ಕಾಯ್ಕಿಣಿಯವರ ಮಧುರ ಹಾಡುಗಳನ್ನು ಮರೆಯುವಷ್ಟು!
ಚಿತ್ರ ಕೃಪೆ : nowrunning.com
ಬದುಕಿನ ತತ್ವ ಮೀಮಾ೦ಸೆ: ಭಟ್ಟರು ಚಿತ್ರದಲ್ಲಿ ಹಲವು ಕಡೆ ಜೀವನದಲ್ಲಿಯ ತತ್ವಗಳ ಹುಡುಕಾಟ ನಡೆಸುತ್ತಾರೆ. ಹಾಗೆಯೇ ಮನುಷ್ಯ ಸ೦ಬ೦ಧಗಳ ಹಲವು ಮಗ್ಗಲುಗಳನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತಾರೆ. ಉದಾ: ಪುನೀತ್ ಬೌದ್ಧ ಸ೦ನ್ಯಾಸಿಗಳನ್ನು ಭೇಟಿಯಾಗುವುದು, ಅವಿನಾಶ್ ಕರಡಿಯ ವೇಷದಲ್ಲಿರುವ ಪುನೀತ್ ರನ್ನು ಹೊಡೆಯುವುದು. ಇನ್ನೂ ಮು೦ದೆ ಹೋಗಿ ಜೀವನದಲ್ಲಿಯ ಗೊ೦ದಲಗಳನ್ನು ತೋರಿಸಲು ಶಬ್ದ ಮಾಡುವ ಡಬ್ಬವನ್ನು ತರುತ್ತಾರೆ (ಡಬ್ಬ ಯಾತಕ್ಕೋ ಸೌ೦ಡು ಮಾಡತ್ತೋ ಯಾವನಿಗೊತ್ತು?). ಇನ್ನು ಅವರ ಸಾಹಿತ್ಯದಲ್ಲೂ ಇದು ಕ೦ಡು ಬರುತ್ತದೆ. ಉದಾ : ’ಅನುರಾಗ ಇರದ ಅನುಮಾನ ಇಲ್ಲ’ ಅಥವಾ ಕಾಲೇಜಿನಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಣಕಿಸುವ ಚೊ೦ಬೇಶ್ವರ ಹಾಡಿನಲ್ಲಿ ಬರುವ - ’ಸಿಸ್ಟಮ್ಮೇ ಸರಿಯಿಲ್ಲ ಚೊ೦ಬೇಶ್ವರ! ಪ್ರೈಮ್ ಮಿನಿಸ್ಟರ್ ಆಗ್ಬಿಡ್ಲಾ ಒ೦ದೇ ಸಲ!’ ಯೋಗರಾಜ್ ಬದುಕಿನ ಬಗ್ಗೆ ತಮ್ಮದೇ ಧೋರಣೆಗಳನ್ನು ಹೇಳುತ್ತಾರಾದರೂ ಅವರು ಎತ್ತುವ ಪ್ರಶ್ನೆಗಳು - ಮನುಷ್ಯ ತನ್ನ ಕನಸುಗಳನ್ನು ಬೆ೦ಬತ್ತಿ ಹೋಗುವುದು, ತಾನು ಮಾಡಲಿರುವ ಆಯ್ಕೆಗಳಲ್ಲಿ ದ್ವ೦ದ್ವಗಳೇರ್ಪಡುವುದು - ಸಾರ್ವಕಾಲಿಕ. ಒ೦ದೇ ಸಾಲಿನಲ್ಲಿ ಹೇಳುವುದಾದರೆ - ಮಾನವನ ಮನವೇ ಪರಮಾತ್ಮ - ಎ೦ಬುದೇ ಚಿತ್ರದ ಒಳ ತಿರುಳು.

ಲವಲವಿಕೆಯ ಮೊದಲಾರ್ಧ : ಚಿತ್ರದ ಮೊದಲ ಭಾಗ ಲವಲವಿಕೆಯಿ೦ದ ಸಾಗುತ್ತದೆ. ಹಲವು ಸ೦ಭಾಷಣೆಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತವೆ. ಮೀಡಿಯಾ ಪ್ರೇರಿತ ಪ್ರೇಮಕತೆಯೂ ಕೂಡಾ ನಗೆಕೂಟದಲ್ಲಿ ಭಾಗಿಯಾಗುತ್ತದೆ. ಇನ್ನು ಗಾ೦ಧಿನಗರದ ಯಾವತ್ತೂ ಸೂತ್ರಗಳನ್ನು ಬಳಸಿಕೊ೦ಡು ಚಿತ್ರ ಮಾಡುವವರಿಗೆ ಅಣಕವಾಗಿ ಬಿ೦ಬಿಸಿರುವ ’ಕೊನೆ ಮಳೆ’ ಚಿತ್ರದ ಸನ್ನಿವೇಶವೂ ಕೂಡಾ ಹಾಸ್ಯಮಯವಾಗಿದೆ.

ದ್ವಿತೀಯಾರ್ಧದ ಗಾ೦ಭೀರ್ಯ : ಉತ್ತರಾರ್ಧದಲ್ಲಿ ಚಿತ್ರ ಗ೦ಭೀರವಾಗುತ್ತದೆ. ಹಾಗೆಯೇ ನಿಮಗೆ ಚಿತ್ರ ಅಡ್ಡಾದಿಡ್ಡಿಯಾಗಿ ಹೋಗುತ್ತಿದೆಯಲ್ಲ ಎ೦ದೆನಿಸುತ್ತದೆ. ಆದರೆ ನಾಯಕ ತನ್ನ ಕನಸಿನ ಮನೆ ಕಟ್ಟುವುದರೊ೦ದಿಗೆ (ಮೊದಲಾರ್ಧದ ಸನ್ನಿವೇಶವೊ೦ದಕ್ಕೆ ಇದರ ನ೦ಟಿದೆ) ಚಿತ್ರ ಮತ್ತೆ ಸರಿದಾರಿಗೆ ಬರುತ್ತದೆ!

ವಿಭಿನ್ನ ಪ್ರತಿಕ್ರಿಯೆಗಳು : ಇ೦ಥಾ ಚಿತ್ರಗಳಿಗೆ ವಿಭಿನ್ನ ಪ್ರತಿಕ್ರಿಯೆಗಳು ನಿರೀಕ್ಷಿತ. ಚಿತ್ರ ನೋಡಿದ ನ೦ತರ ಗೆಳೆಯ ಸ೦ದೀಪ್ ನನಗೆ ಹೀಗೆ ಮೆಸೇಜ್ ಮಾಡಿದ್ದ - ಪರಮಾತ್ಮ ಕನ್ನಡ ಚಿತ್ರರ೦ಗಕ್ಕೆ ಒ೦ದು ಸ೦ಕೀರ್ಣವಾದ ಚಿತ್ರ. ಇನ್ನೊ೦ದು ಕಡೆ ಒಬ್ಬ ಹತಾಶ ಪ್ರೇಕ್ಷಕ ಜರಿದದ್ದು ಹೀಗೆ - ’ಈ ಫಿಲ್ಮ್ ನೋಡಕ್ಕೆ ಬ್ಲ್ಯಾಕಲ್ಲ್ ಬೇರೆ ಬರ್ಬೇಕು?’

ನಾನು ಚಿತ್ರದಲ್ಲಿ ಕೊರತೆಗಳೇನು ಇಲ್ಲ ಅನ್ನುವುದಿಲ್ಲ. ಆದರೆ ಇವುಗಳ ಹೊರತಾಗಿಯೂ ಪರಮಾತ್ಮ ಗಾ೦ಧಿನಗರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ. ಆದರೆ ನನಗೆ ಭಟ್ಟರಲ್ಲಿ ಹೇಳುವುದೊ೦ದಿದೆ - ’ಸರ್, ನಿಮ್ಮ ಚಿತ್ರಗಳಲ್ಲಿ ಯಾವತ್ತೂ ಇರುವ ಪ್ರೇಮ ಕತೆಯ ಥೀಮ್ ಅನ್ನು ಬದಲಾಯಿಸಿ ಬಿಡಿ!’

Thursday, May 6, 2010

ಪೃಥ್ವಿ - ಚಿತ್ರ ವಿಮರ್ಶೆ

’ಪೃಥ್ವಿ’ ಈಗಿನ ಗಣಿ ರಾಜಕೀಯದ ಬಗೆಗಿನ ಚಿತ್ರವೆ೦ಬುದು ಈಗ ಸರ್ವ ವೇದ್ಯ. ಆದರೆ ಪ್ರಚಲಿತ ವಿದ್ಯಮಾನಗಳ ತೆರೆಯ ಮೇಲಿನ ನಿರೂಪಣೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎ೦ಬುದು ಪ್ರಶ್ನೆ. ನನ್ನ ಪ್ರಕಾರ ಈ ಚಿತ್ರ ಕಳಪೆ ಚಿತ್ರಗಳ ಪಟ್ಟಿಯಲ್ಲಿ ಸೇರದಿದ್ದರೂ ಉತ್ತಮ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗುತ್ತದೆ. ಆದರೂ ಮಾಮೂಲಿ ಚಿತ್ರಗಳಿಗಿ೦ತ ಭಿನ್ನವಾಗಿದೆ.

ಪೃಥ್ವಿ(ಪುನೀತ್) ಬಳ್ಳಾರಿ ಜಿಲ್ಲಾಧಿಕಾರಿಯಾಗಿ ನೇಮಕಗೊ೦ಡ ದಿನದಿ೦ದ ಗಣಿ ದೊರೆಗಳ ರಾಜಕೀಯ ಒತ್ತಡಕ್ಕೆ ಗುರಿಯಾಗಬೇಕಾಗುತ್ತದೆ. ಇದ್ಯಾವುದಕ್ಕೂ ಸೊಪ್ಪು ಹಾಕದ ಅವನು ಮು೦ದೆ ಹಲವು ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಚಿತ್ರದ ಫಸ್ಟ್ ಹಾಫ್ ಜಿಲ್ಲಾಧಿಕಾರಿ ಕಚೇರಿಗಳು ಕಾರ್ಯ ನಿರ್ವಹಿಸುವ ಬಗೆಯನ್ನು ತಿಳಿಸುತ್ತದೆ. ಇದಕ್ಕೆ ನಿರ್ದೇಶಕ ಜಾಕೋಬ್ ವರ್ಗೀಸ್ ಗೆ ಪೂರ್ಣ ಅ೦ಕಗಳು. ಆದರೆ ನೈಜ ಸನ್ನಿವೇಶಗಳನ್ನು ಚಿತ್ರಿಸುವ ಜೊತೆ ಜೊತೆಗೆ ಚಿತ್ರವನ್ನು ಕಮರ್ಶಿಯಲ್ ಆಗಿ ಪ್ರೇಕ್ಷಕರ ಮು೦ದಿಡುವ ತವಕದಲ್ಲಿ ಐದು ಯುಗಳ ಗೀತೆಗಳನ್ನು ತುರುಕಲಾಗಿದೆ. ಇವನ್ನು 2-3 ಹಾಡುಗಳಿಗೆ ಸೀಮಿತಗೊಳಿಸಬಹುದಿತ್ತು. ಇನ್ನು ನಾಯಕಿ ಪಾರ್ವತಿ ಮೆನನ್ ಹಾಡುಗಳಿಗೆ ಸೀಮಿತವಾದರೆ, ಅವಿನಾಶ್ ನಟನೆಗೆ ಅವಕಾಶಗಳು ಕಡಿಮೆ. ಚಿತ್ರದ ಪೂರ್ವಾರ್ಧ 2010 ದ ಕತೆಯಾದರೂ, ಉತ್ತರಾರ್ಧ 80 ಅಥವಾ 90 ರ ದಶಕದ ಕ್ಲೈಮ್ಯಾಕ್ಸ್ ಆಗಿದೆ. ನಾಯಕ ಏಕಮೇವ ಶತ್ರು ಸ೦ಹಾರಕನಾಗಿ ಹೊರಹೊಮ್ಮುವುದು ಕನ್ನಡದಲ್ಲಿ ಸಾಹಸ ಪ್ರಧಾನ ಚಿತ್ರಗಳು ಶುರುವಾಗಿನಿ೦ದಲೂ ನಡೆದುಕೊ೦ಡು ಬ೦ದ ಪರಿಪಾಠ. ಇಲ್ಲೂ ಅದೇ ಆಗಿದೆ. ಅದಕ್ಕೇನು ಬೇಜಾರಿಲ್ಲ ಬಿಡಿ - ಆದರೆ ಚಿತ್ರದ ಕೊನೆ ದೃಶ್ಯಗಳು ತೀರಾ ನಾಟಕೀಯ ಸನ್ನಿವೇಶಗಳೆನಿಸಿ ಚಿತ್ರದ ಬಗ್ಗೆ ಅದುವರೆಗೂ ಇದ್ದ ಒಳ್ಳೆಯ ಅಭಿಪ್ರಾಯವನ್ನು ಹೋಗಲಾಡಿಸುತ್ತದೆ.Puneeth Rajkumar and Parvati Menon in Prithvi Kannada Filmಚಿತ್ರದಲ್ಲಿ ಬರುವ ಸ೦ಭಾಷಣೆಗಳು ಚಿತ್ರದ ಮುಖ್ಯ ಅ೦ಶ. ಆಯ್ದ ಕೆಲವು ಇಲ್ಲಿವೆ - ಪುನೀತ್ ಹೇಳುವ - ’ಅವರಿಗೆ ನನ್ನ ಎದುರಿಸೋಕೆ ಬಾ೦ಬ್ ಬೇಕು, ಆದರೆ ಅವರನ್ನ ಎದುರಿಸೋಕೆ ನನ್ನ ಒ೦ದು ಸೈನ್ ಸಾಕು’. ಸಾಧು ಕೋಕಿಲಾ ಹಾಸ್ಯ ಮಿಶ್ರಿತವಾಗಿ ಹೇಳುವ ಮಾತು - ’ನಮ್ಮ ಜನರಲ್ಲಿ ಹ೦ದಿ ಜ್ವರಕ್ಕಿ೦ತ ಅಭಿಮಾನದ ಜ್ವರ ಜಾಸ್ತಿ, ಹ೦ದಿ ಜ್ವರದ ಹಿ೦ದೆ ಮೂವತ್ತು ಜನ ಹೋದ್ರೆ, ಆ೦ಧ್ರ ಸಿ.ಎಮ್ ಹಿ೦ದೆ ಮುನ್ನೂರು ಜನ ಹೋಗ್ತಾರೆ’. ಇದರ ಹೊರತಾಗಿ ಸಿದ್ಧಾ೦ತ ಮತ್ತು ವಾಸ್ತವತೆಗಳ ಬಗೆಗೂ ಮಾತುಗಳು ಬ೦ದು ಹೋಗುತ್ತವೆ. ಪುನೀತ್ ತನ್ನ ಸಿದ್ಧಾ೦ತಕ್ಕೆ ಅ೦ಟಿಕೊ೦ಡಿದ್ದರಿ೦ದ ಎದುರಿಸುವ ಕಷ್ಟಗಳಿಗೆ ಮನ ನೊ೦ದು ಪಾರ್ವತಿ ಮೆನನ್ ’ಯಾರಿಗೂ ಬೇಡದ ಸಿದ್ಧಾ೦ತಗಳು ನಿನಗೇಕೆ ಬೇಕು, ಯಾಕೆ ಬೇರೆಯವರ ಥರ ನೀನು ನಾರ್ಮಲ್ ಆಗಿರಬಾರದು’ ಅ೦ದಾಗ ಪುನೀತ್ ’ನಾನು ಬದುಕೋದು ನಾನು ನ೦ಬಿರೋ ಸಿದ್ಧಾ೦ತಗಳಿಗೋಸ್ಕರ’ ಅನ್ನೋದು ವಾಸ್ತವತೆಯನ್ನು ಎತ್ತಿ ತೋರಿಸುತ್ತದೆ. ಬಡವರಿಗೆ ಸಿದ್ಧಾ೦ತಗಳಿಗಿ೦ತ ಹಸಿವು ಮುಖ್ಯ ಎನ್ನುವ ಮಾತೂ ಕೂಡಾ ಜೀವನದ ವಾಸ್ತವತೆಯನ್ನೇ ತೆರೆದಿಡುತ್ತದೆ.

ಚಿತ್ರದಲ್ಲಿ ಕ೦ಡು ಬರುವ ಸೋಜಿಗವೆ೦ದರೆ ಚಿತ್ರ ಶುರುವಾಗುವ ಮು೦ಚೆ ಬರುವ ಸೂಚನೆ - ಈ ಚಿತ್ರ ಯಾವುದೇ ಘಟನೆ/ವ್ಯಕ್ತಿಗಳಿಗೆ ಸ೦ಬ೦ಧ ಪಟ್ಟಿದ್ದಲ್ಲವೆ೦ಬುದು ಹಾಸ್ಯಾಸ್ಪದವಾಗಿದೆ. ಚಿತ್ರದಲ್ಲಿ ಬರುವ ಟಿವಿ ವಾಹಿನಿ, ಪಾತ್ರಗಳು ಈಗಿನ ಕರ್ನಾಟಕದ ರಾಜಕೀಯ, ಮಾಧ್ಯಮ ವಲಯಕ್ಕೆ ನೇರ ಸ೦ಬ೦ಧಪಟ್ಟಿರುವುದನ್ನು ಯಾರು ಬೇಕಾದರೂ ಹೇಳಬಹುದು. ಚಿತ್ರದ ಕೆಲವು ಸ೦ಭಾಷಣೆಗಳಲ್ಲೇ ಇದು ಸ್ಪಷ್ಟವಾಗುತ್ತದೆ. ಅಷ್ಟಲ್ಲದೆ ಮಾಜಿ ಪ್ರಧಾನಿಗಳು ಚಿತ್ರ ನೋಡಲಿಕ್ಕೆ ಹೋಗುತ್ತಾರೆಯೇ?

LinkWithin

Related Posts with Thumbnails