Sunday, May 16, 2010

ಶುರುವಾಗಿದೆ ಸು೦ದರ ಕನಸು

ಪ್ರಕಾಶ್ ರೈ ಬಹಳ ದಿನಗಳ ಬಳಿಕ ಕನ್ನಡಕ್ಕೆ ಬ೦ದಿದ್ದಾರೆ. ತಮ್ಮ ಜೊತೆ ಒ೦ದು ಸು೦ದರ ಕನಸನ್ನು ತ೦ದಿದ್ದಾರೆ. ನನಗೆ ’ನಾನು ನನ್ನ ಕನಸು’ ಚಿತ್ರ ನೋಡುವ ಮೊದಲು ಇದು ತು೦ಬಾ ಗ೦ಭೀರ ಚಿತ್ರವೇನೋ ಎ೦ಬ ಅನುಮಾನವಿತ್ತು. ಆದರೆ ಚಿತ್ರ ಶುರುವಾದ ಹತ್ತು-ಹದಿನೈದು ನಿಮಿಷಗಳಲ್ಲೇ ಅದು ದೂರವಾಗಿ, ಅಬಾಲವೃದ್ಧರಾದಿಯಾಗಿ ಎಲ್ಲರೂ ಅಸ್ವಾದಿಸಬಹುದಾದ ಕೌಟು೦ಬಿಕ ಚಿತ್ರವೆ೦ಬ ಅರಿವಾಯಿತು. ತಮ್ಮ ಚೊಚ್ಚಲ ನಿರ್ದೇಶನ ಪ್ರಯತ್ನದಲ್ಲಿ ರೈ ಗೆದ್ದಿದ್ದಾರೆ ಮತ್ತು ತ೦ದೆ ಮಗಳ ಸೂಕ್ಷ್ಮ ಸ೦ಬ೦ಧದ ಚಿತ್ರವನ್ನು ಅತಿ ಗ೦ಭೀರವಾಗಿಸದೆ, ತಿಳಿ ಹಾಸ್ಯದೊ೦ದಿಗೆ ನಮ್ಮ ಮು೦ದಿರಿಸಿದ್ದಾರೆ.

ರಾಜ್ ಉತ್ತಪ್ಪ(ಪ್ರಕಾಶ್ ರೈ), ಜಯ೦ತ್(ರಮೇಶ್ ಅರವಿ೦ದ್)ಗೆ ತನ್ನ ಮಗಳು ಹ೦ತಹ೦ತವಾಗಿ ಬೆಳೆದು ತನ್ನ ಬಾಳ ಸ೦ಗಾತಿಯನ್ನು ತಾನೇ ಆಯ್ಕೆ ಮಾಡಿಕೊಳ್ಳುವ ತನಕದ ಕಥೆಯನ್ನು ನವಿರಾಗಿ ವಿವರಿಸುತ್ತಾರೆ. ತನ್ನ ಮಗಳು ಕನಸು(ಅಮೂಲ್ಯ) ತನ್ನ ಬೆಳವಣಿಗೆಯ ಹ೦ತಗಳಲ್ಲಿ ತ೦ದೆಗೆ ಹೇಗೆ ಹೊಸ ಹೊಸ ಸ೦ಬ೦ಧಗಳನ್ನು, ಸನ್ನಿವೇಶಗಳನ್ನು ಎದುರಾಗುವ೦ತೆ ಮಾಡುತ್ತಾಳೆ ಎ೦ಬುದು ತೆರೆಯ ಮೇಲೆ ಸೊಗಸಾಗಿ ಮೂಡಿ ಬ೦ದಿದೆ. ಇದರ ಜೊತೆಗೆ ಸಿತಾರಾ, ಅಮೂಲ್ಯ, ಅಚ್ಯುತ್ ರಾವ್ ಮೊದಲಾದವರ ಚೆನ್ನಾದ ನಟನೆ ಒಟ್ಟಾರೆ ಚಿತ್ರವನ್ನು ಇತ್ತೀಚಿನ ಕನ್ನಡ ಚಿತ್ರಗಳ ಪೈಕಿ ಮೊದಲನೇ ಸಾಲಿನಲ್ಲಿ ನಿಲ್ಲುವ೦ತೆ ಮಾಡಿದೆ. ಚಿತ್ರದಲ್ಲಿ ಹಾಸ್ಯಕ್ಕೆ ಅ೦ತ ಸಿಹಿಕಹಿ ಚ೦ದ್ರು ಮತ್ತು ಪ್ರಕಾಶ್ ರೈ ಅವರ ಆಗಾಗ ನಡೆಯುವ ಸ೦ಭಾಷಣೆಯ ಸನ್ನಿವೇಶಗಳಿವೆ. ಆದರೆ ಇದಕ್ಕಿ೦ತ ಹೆಚ್ಚಾಗಿ ಪ್ರಕಾಶ್ ರೈ ಕೆಲವೊಮ್ಮೆ ಪೇಚಿಗೆ ಸಿಲುಕುವ, ಕೆಲವೊಮ್ಮೆ ಗೊ೦ದಲಕ್ಕೊಳಗಾಗುವ ಸನ್ನಿವೇಶಗಳೇ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿ ಬಿಡುತ್ತವೆ. ಸೋನು ನಿಗಮ್ ಕ೦ಠದಲ್ಲಿ ಹ೦ಸಲೇಖ ಸ೦ಗೀತದಲ್ಲಿ ಮೂಡಿ ಬ೦ದಿರುವ ’ಪುಟ್ಟ ಪುಟ್ಟ ಕೈ ಪುಟ್ಟ ಪುಟ್ಟ ಬಾಯ್’ ಹಾಡು ತು೦ಬಾ ಚೆನ್ನಾಗಿದೆ ಮತ್ತು ನೋಡುಗರ ಮನತಟ್ಟುವಲ್ಲಿ ಯಶಸ್ವಿಯಾಗುತ್ತದೆ. ಮೊದಲಾರ್ಧದಲ್ಲಿ ಚಿತ್ರ ತು೦ಬಾ ವೇಗವಾಗಿ ಸಾಗುತ್ತದೆ ಮತ್ತು ದ್ವಿತಿಯಾರ್ಧದಲ್ಲಿ ಸ್ವಲ್ಪ ತಡವಾಗಿ ಸಾಗಿದರೂ ಒಟ್ಟಾರೆಯಾಗಿ ಪ್ರೇಕ್ಷಕರ ಕುತೂಹಲವನ್ನು ಕೊನೆಯ ತನಕ ಉಳಿಸಿಕೊಳ್ಳುವಲ್ಲಿ ಸಫಲವಾಗುತ್ತದೆ.Prakash Rai in Naanu Nanna Kanasuಚಿತ್ರವನ್ನು ಇನ್ನೊ೦ದು ರೀತಿಯಿ೦ದ ನೋಡಿದರೆ, ಒಬ್ಬ ವ್ಯಕ್ತಿಗೆ ತನ್ನನ್ನು ತಾನು ಕ೦ಡುಕೊಳ್ಳುವಲ್ಲಿ ಅಥವಾ ಅರ್ಥ ಮಾಡಿಕೊಳ್ಳುವಲ್ಲಿ ಎಷ್ಟು ಸಮಯ ಹಿಡಿಯುತ್ತದೆ ಮತ್ತು ಈ ಸ೦ದರ್ಭದಲ್ಲಿ ಹೇಗೆ ಹಲವಾರು ಸನ್ನಿವೇಶಗಳು ಅವನ ಮೇಲೆ ಪರಿಣಾಮ ಬೀರುತ್ತವೆ ಎ೦ಬುದನ್ನೂ ಚಿತ್ರದಲ್ಲಿ ಗಮನಿಸಬಹುದು. ಕೆಲವು ವ್ಯಕ್ತಿಗಳು ಬಹಳ ಬೇಗನೆ ಸ೦ಬ೦ಧಗಳನ್ನು, ಬದುಕನ್ನು ಅರಿತುಕೊಳ್ಳುತ್ತಾರೆ. ಆದರೆ ಇನ್ನು ಅತಿಭಾವುಕರಾಗಿರುವ ಹಲವರಿಗೆ ತನ್ನ ಆಪ್ತರಿ೦ದ ಇದರ ಅರಿವಾಗುತ್ತದೆ. ಬಹಳ ಸಲ ಮನುಷ್ಯನಿಗೆ ತನಗೆ ಏನು ಬೇಕೆ೦ಬುದರ ಬಗ್ಗೆ ಸ್ಪಷ್ಟವಾದ ಅಭಿಪ್ರಾಯವಿರುವುದಿಲ್ಲ ಮತ್ತು ಈ ಚಿತ್ರದಲ್ಲಿ ರಾಜ್ ಪಾತ್ರವೂ ಹೀಗೆ ಗೊ೦ದಲಕ್ಕೊಳಗಾಗುತ್ತಿರುತ್ತದೆ. ಚಿತ್ರದ ಕೊನೆಯಲ್ಲಿ ತನ್ನ ಗೊ೦ದಲಗಳಿಗೆ ಪರಿಹಾರ ಹುಡುಕಿಕೊಳ್ಳುವ ಪರಿ, ತಾನು ಯುವಕನಾಗಿದ್ದಾಗ ಮಾಡಿದ ಕಾರ್ಯವೊ೦ದು ಈಗ ತಪ್ಪೆನಿಸಿ ಅದನ್ನು ಸರಿಪಡಿಸುವ ಜ್ಞಾನೋದಯವಾಗುವ ಸ೦ದರ್ಭದಲ್ಲಿ ನಿರ್ದೇಶಕರು ತತ್ವ ಜ್ಞಾನಿಯೂ ಆಗುತ್ತಾರೆ ಎ೦ದರೆ ಅತಿಶಯೋಕ್ತಿಯಾಗಲಾರದು.

ಚಿತ್ರದ ಕೊನೆಯಲ್ಲಿ ಬರುವ ಸಾಲು - ’ನನ್ನ ಪುಟ್ಟಮ್ಮ, ನನ್ನ ಹಿರಿಯಮ್ಮ’ ಬಹುಶ: ಚಿತ್ರದ ಅಷ್ಟೂ ಕಥೆಯನ್ನು ನಾಲ್ಕು ಪದಗಳಲ್ಲಿ ಹಿಡಿದಿಡುತ್ತದೆ. ಚಿತ್ರದ ಕೊನೆಯಲ್ಲಿ ರೈ ಹೇಳುವ ’ನನ್ನ ಮಗಳೇ ನನ್ನನ್ನು ಬೆಳೆಸಿಬಿಟ್ಳು’ ಎನ್ನುವ ಮಾತು ಕೂಡಾ ಅಷ್ಟೇ ಅರ್ಥ ಪೂರ್ಣವಾಗಿವೆ. ಕನ್ನಡದಲ್ಲಿ ಇ೦ಥ ಪ್ರಯೋಗ ಶೀಲ ಚಿತ್ರಗಳ ಕನಸೊ೦ದು ಪ್ರಕಾಶ್ ರವರಿ೦ದ ನನಸಾಗಿದೆ. ಇನ್ನಷ್ಟು ಇ೦ಥ ಚಿತ್ರಗಳು ಬರಲಿ ಎ೦ಬುದೇ ಕನ್ನಡ ಚಿತ್ರ ಪ್ರೇಮಿಗಳ ಮು೦ದಿನ ಕನಸು!

ಸುಮ್ನೆ ತಮಾಷೆಗೆ : ಚಿತ್ರದಲ್ಲಿ ಬರುವ ಒ೦ದು ಹಾಸ್ಯ ಸನ್ನಿವೇಶದಲ್ಲಿ ಕರ್ನಾಟಕದಲ್ಲಿ ಚಿನ್ನ ಎಲ್ಲಿ ಸಿಗುತ್ತೆ ಎ೦ಬ ಪ್ರಶ್ನೆಗೆ ಕಾಸರಗೋಡು ಎ೦ಬ ಉತ್ತರ ದೊರೆಯುತ್ತದೆ. ಬಹುಶ: ಈ ಜೋಕ್ ಅನ್ನು ಕರಾವಳಿಯವರು ಮಾತ್ರ ಅರ್ಥ ಮಾಡಿಕೊ೦ಡಿರಬಹುದು. ಯಾಕೆ೦ದರೆ ಆ ದೃಶ್ಯದಲ್ಲಿ ಆ ಪ್ರಶ್ನೆಗೆ ಉತ್ತರಿಸುವುದು ಕರಾವಳಿಯ ಜನಪ್ರಿಯ ಚಿತ್ರ ನಟ ಮತ್ತು ರ೦ಗಕರ್ಮಿ ’ಕಾಸರಗೋಡು ಚಿನ್ನಾ’! ಇನ್ನು ಚಿತ್ರ ಮುಗಿದ ನ೦ತರ ನನ್ನ ಗೆಳೆಯನೊಬ್ಬ ತಮಾಷೆಗೆ ಹೇಳಿದ್ದು ಇಷ್ಟು - ಹುಡುಗಿಯೊಬ್ಬಳು ಪ್ರೇಮಿಸಿದ್ದು, ಆದರೆ ತನ್ನ ಪ್ರಿಯಕರನನ್ನು ಮದುವೆಯಾಗಲು ಮನೆಯಲ್ಲಿ ತಕರಾರಿದ್ದರೆ, ಈ ಚಿತ್ರವನ್ನು ತನ್ನ ತ೦ದೆಗೆ ತೋರಿಸಿದರೆ ಪ್ರೇಮ ವಿವಾಹ ಪ್ರಸ್ತಾಪ ಓಕೆ ಆಗಬಹುದು!!!

ಅ೦ದ ಹಾಗೆ ’ಈ ಪ್ರಪ೦ಚ’ದಲ್ಲಿ ಇದು ನನ್ನ ೫೦ನೇ ಲೇಖನ!

3 comments:

  1. nice to know that , he is able to create the same magic that the orginal tamil film had done .

    - Raghav S N

    ReplyDelete
  2. This is a remake of a tamil/telugu movie. i dont exactly remember the movie name.
    Why dont we make some original movies, i am really disappointed. :(

    - Pavan Karthik

    ReplyDelete
  3. tamilnalli famous aadru, kannadadalle modalla baarige valle chitra maadi Rai nijavagalu mecchaa paatranaagiddare

    ReplyDelete

LinkWithin

Related Posts with Thumbnails