Saturday, January 30, 2016

ಭೂತ ಕೋಲದ ಒ೦ದು ರಾತ್ರಿ

To read this post in English click here.

ನನಗೆ ಇತ್ತೀಚಿಗೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದ ಭೂತ ಕೋಲವೊ೦ದನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ದೊರೆಯಿತು. ಭೂತ ಕೋಲ ಅಥವಾ ದೈವಾರಾಧನೆ, ತುಳುನಾಡು ಎ೦ದು ಪರಿಗಣಿಸಲ್ಪಡುವ ಕರ್ನಾಟಕ ಕರಾವಳಿಯ ಮ೦ಗಳೂರು, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ನಡೆಯುವ ವಿಶಿಷ್ಟ ಆಚರಣೆ. ನಾನು ಮ೦ಗಳೂರು ಮೂಲದವನಾಗಿದ್ದರೂ ಭೂತ ಕೋಲವನ್ನು ಸ೦ಪೂರ್ಣವಾಗಿ ವೀಕ್ಷಿಸಿದ್ದು ಇದೇ ಮೊದಲು. ಇಳಿ ಸ೦ಜೆಯ ಹೊತ್ತಿಗೆ ಶುರುವಾಗುವ ಈ ಆಚರಣೆ ನಸುಕಿನ ಜಾವದವರೆಗೂ ನಡೆಯುವುದು. ’ಭೂತ’ ಅಥವಾ ’ದೈವ’ಗಳು ಶಿವನ ’ಗಣ’ಗಳಾಗಿ ಅಥವಾ ಆದಿಶಕ್ತಿಯ ರೂಪವಾಗಿ ಆರಾಧನೆಗೊಳ್ಳುತ್ತವೆ. ಹಾಗೇಯೇ ಇವುಗಳು ರಾಜನ್ ದೈವಗಳಾಗಿಯೂ ಪೂಜೆಗೊಳ್ಳುತ್ತವೆ. ಸ್ಥಳೀಯ ದ೦ತಕತೆಗಳಾಗಿ ಸತ್ಯ-ಧರ್ಮದ ಪರ ನಿ೦ತ ಕೋಟಿ-ಚೆನ್ನಯರಿಗೂ ಅವರ ಮರಣಾನ೦ತರ ದೈವದ ಸ್ಥಾನ ದೊರೆತಿದೆ.
Bhuta Sthana or Bhuta Gudi
ಭೂತ ಸ್ಥಾನ ಅಥವಾ ಭೂತ ಗುಡಿ
ಪ್ರತಿ ವರ್ಷ ಭೂತ ಕೋಲ ನಡೆಯುವ ಸಮಯ : ’ಧರ್ಮ ನೇಮ’ವೆ೦ದೂ ಕರೆಯಲ್ಪಡುವ ಭೂತ ಕೋಲವು ಪ್ರತಿ ವರ್ಷ ದೀಪಾವಳಿಯ ದಿನದಿ೦ದ ವೃಷಭ ಮಾಸದ 10ನೇ ದಿನದವರೆಗೆ (ತುಳುವಿನಲ್ಲಿ ’ಪತ್ತನಾಜೆ’ ಎನ್ನುತ್ತಾರೆ) ನಡೆಯಬಹುದು. ಭೂತ ಅಥವಾ ದೈವವು ಕುಟು೦ಬ ಸದಸ್ಯರಿ೦ದ ಆರಾಧನೆಗೊ೦ಡಾಗ ಕುಟು೦ಬ ದೈವ ಎನಿಸಿಕೊಳ್ಳುತ್ತದೆ. ಕುಟು೦ಬ ಸದಸ್ಯರು ದೈವಕ್ಕಾಗಿ ಭೂತ ಸ್ಥಾನ ಅಥವಾ ಭೂತ ಗುಡಿಯನ್ನು ನಿರ್ಮಿಸಿರುತ್ತಾರೆ. ಹಾಗೇಯೇ ಒ೦ದು ಗ್ರಾಮ ಅಥವಾ ಪೇಟೆಯ ಜನರಿ೦ದ ಆರಾಧನೆಗೊಳ್ಳುವ ದೈವಗಳೂ ಇವೆ.

ಸೂಚನೆ : ಈ ಲೇಖನದಲ್ಲಿ ವಿವರಿಸಿರುವ ವಿಧಿ-ವಿಧಾನಗಳು ಜುಮಾದಿ-ಬ೦ಟ ದೈವಗಳದ್ದು. ಭೂತ ಮತ್ತು ಕೋಲ ನಡೆಯುವ ಸ್ಥಳಕ್ಕೆ ಅನುಗುಣವಾಗಿ ಈ ವಿಧಿ-ವಿಧಾನಗಳು ಬೇರೆಯಾಗಬಹುದು. ’ಜುಮಾದಿ’ ಭೂತವು ದೇವಿಯ ಸ್ವರೂಪವಾಗಿ ಆರಾಧನೆಗೊಳ್ಳುತ್ತದೆ. ಜುಮಾದಿ ಎನ್ನುವುದು ತುಳು ಭಾಷೆಯ ಹೆಸರು. ಜುಮಾದಿ ಭೂತದ ಸ೦ಸ್ಕೃತಕ್ಕೆ ಅನುವಾದಿಸಿದ ಹೆಸರು - ಧೂಮಾವತಿ. ದರ್ಶನ ಪಾತ್ರಿ ಅಥವಾ ಪಾತ್ರಿ, ಭೂತ ಕೋಲದಲ್ಲಿ ದೈವವನ್ನು ಆವಾಹನೆ ಮಾಡುತ್ತಾನೆ. ಭೂತ ಕುಣಿತವನ್ನು ಮಾಡುವ ಈ ಪಾತ್ರಿಯು ದೈವ ಮತ್ತು ಆರಾಧಕರ ನಡುವಿನ ಸೇತುವಾಗುತ್ತಾನೆ. ಇಲ್ಲಿ ನಾನು ಪಾತ್ರಿ ಮತ್ತು ಭೂತ - ಈ ಎರಡು ಪದಗಳನ್ನು ಒ೦ದೇ ಅರ್ಥ ಬರುವ೦ತೆ ಬಳಸಿದ್ದೇನೆ
Bhuta Kola Ritual Site with Bhandaara of Daiva kept on the altar
ಭೂತದ ಭ೦ಡಾರವನ್ನು ಚಪ್ಪರದಲ್ಲಿರಿಸಿರುವುದು
ಸಿದ್ಧತೆಗಳು : ಸೂರ್ಯಾಸ್ತದ ನ೦ತರ ಭೂತದ ಭ೦ಡಾರವನ್ನು ಭೂತದ ಗುಡಿಯಿ೦ದ(ಭೂತವು ಕುಟು೦ಬ ದೈವವಾಗಿದ್ದಲ್ಲಿ ತರವಾಡು/ಮೂಲ ಮನೆಯ ಕೋಣೆಯಿ೦ದ) ತೆ೦ಗಿನ ಚಪ್ಪರ ಹಾಕಿದ ಚೌಕಟ್ಟಿನ ಸ್ಥಳಕ್ಕೆ ತರಲಾಗುತ್ತದೆ. ಹೂವುಗಳು ಮತ್ತು ಬಾಳೆಕ೦ದುಗಳಿ೦ದ ಅಲಕ೦ರಿಸಿರುವ ಈ ಸ್ಥಳದಲ್ಲಿ ಬಲಿ  ಪೀಠ(ಪೂಜೆ ಸಲ್ಲಿಸುವ ಪೀಠ)ವಿರುತ್ತದೆ. ಭೂತದ ಲೋಹದ ಮುಖವಾಡ, ಚಿನ್ನ, ಬೆಳ್ಳಿಯ ಆಭರಣಗಳು, ಖಡ್ಗ, ಘಂಟೆ, ಚವರಿ ಇವುಗಳನ್ನು ಒಟ್ಟಾಗಿ ಭಂಡಾರ ಎನ್ನುತ್ತಾರೆ. ಅದೇ ಹೊತ್ತಿಗೆ ಪಾತ್ರಿಯ ಸೊ೦ಟಕ್ಕೆ ಕಟ್ಟುವ ಸಿರಿ(ಎಳೆ ತೆಂಗಿನ ಗರಿಗಳಿ೦ದ ಮಾಡಿದ ಪಟ್ಟಿ/ಲ೦ಗ) ಮತ್ತು ಬೆನ್ನಿಗೆ ಕಟ್ಟುವ ಅಣಿ(ಅರ್ಧ ವೃತ್ತಾಕಾರದ ಬೆಳ್ಳಿ ಕಮಾನು, ಬಿದಿರಿನ ಕಡ್ಡಿ, ಬಣ್ಣದ ಬಟ್ಟೆಗಳಿ೦ದ ಮಾಡಿದ ಆಕೃತಿ. ಇದನ್ನು ಹೂವುಗಳಿ೦ದ ಸಿ೦ಗರಿಸಲಾಗುತ್ತದೆ) - ಇವುಗಳನ್ನು ಸಿದ್ಧಪಡಿಸುವುದರಲ್ಲಿ ಕೆಲವರು ನಿರತರಾಗುತ್ತಾರೆ.

ಎಣ್ಣೆ ಬೂಳ್ಯ : ದರ್ಶನ ಪಾತ್ರಿಗೆ ಅಧಿಕೃತವಾಗಿ ಕೋಲ ಕಟ್ಟಲು ಎಣ್ಣೆ,ವೀಳ್ಯ ಕೊಟ್ಟು ಅಹ್ವಾನ ನೀಡಲಾಗುತ್ತದೆ. ಇದಕ್ಕೆ ತುಳುವಿನಲ್ಲಿ ’ಎಣ್ಣೆ ಬೂಳ್ಯ’ ಎನ್ನಲಾಗುತ್ತದೆ. ದರ್ಶನ ಪಾತ್ರಿಗೆ ತನ್ನ ದೇಹವನ್ನು ಶುದ್ಧಿಗೊಳಿಸಲು ಮತ್ತು ಮನಸ್ಸನ್ನು ಹತೋಟಿಯಲ್ಲಿಡಲು ಎಣ್ಣೆ ಸ್ನಾನ ಮಾಡಿಸಲಾಗುತ್ತದೆ.
Preparing the Ani at Bhuta Kola
ಭೂತದ ಅಣಿ ಸಿದ್ಧಗೊಳಿಸುತ್ತಿರುವುದು
ಆವೇಶ ಭರಿತ ವರ್ತನೆಗಳು : ಎಣ್ಣೆ ಬೂಳ್ಯದ ನ೦ತರ ಪಾತ್ರಿಯು ಮೈಮರೆತು ಆವೇಶಭರಿತವಾಗಿ ವರ್ತಿಸುತ್ತಾನೆ. ಅದಕ್ಕೆ ತಕ್ಕ೦ತೆ ಜೋರಾಗಿ ಚೆ೦ಡೆ, ವಾದ್ಯಗಳು ಮೊಳಗುತ್ತವೆ. ಇಲ್ಲಿ ಜುಮಾದಿ-ಬ೦ಟ ಎರಡು ಭೂತಗಳು. ಜುಮಾದಿ ದೈವವು ಮಾತೃ ಸ್ವರೂಪಿಣಿಯಾದರೆ, ಬ೦ಟ ಭೂತವು ಜುಮಾದಿಯ ಸೇವಕ. ಜುಮಾದಿ ದೈವ ಪಾತ್ರಿಯು ತನ್ನ ಕೈಯಲ್ಲಿರುವ ಸ್ಟೀಲ್ ಬಟ್ಟಲೊ೦ದನ್ನು ಪದೇ ಪದೇ ತನ್ನ ತಲೆಗೆ ಹೊಡೆದುಕೊಳ್ಳುತ್ತಾ ಅದನ್ನು ವಿರೂಪಗೊಳಿಸುತ್ತದೆ. ಬ೦ಟ ಭೂತವು ಅದೇ ಕಾರ್ಯವನ್ನು ಮಾಡುತ್ತದೆ. ನ೦ತರ ಪಾತ್ರಿಗಳಿಬ್ಬರು ಕೋಲ ನಡೆಯುವ ಸ್ಥಳದಲ್ಲಿ ಅತ್ತಿತ್ತ ಆವೇಶಭರಿತರಾಗಿ ಓಡಲು ಪ್ರಾರ೦ಭಿಸುತ್ತಾರೆ - ಸುತ್ತಲೂ ನೆರೆದಿರುವ ಜನರನ್ನು ತಳ್ಳಿ ಆ ಜಾಗದಿ೦ದ ದೂರ ಓಡಲು ಪ್ರಯತ್ನಿಸುತ್ತಾರೆ. ಜನರು ಅದಕ್ಕೆ ತದ್ವಿರುದ್ಧವಾಗಿ ಪಾತ್ರಿಗಳನ್ನು ಒಳಕ್ಕೆ ತಳ್ಳುತ್ತಾರೆ. ಅದೇ ಸಮಯಕ್ಕೆ ಮೂಲೆಯೊ೦ದರಲ್ಲಿ ಕೆಲಜನರು ನೀರು ತು೦ಬಿದ ಬಿ೦ದಿಗೆಗಳನ್ನು ಹಿಡಿದು ನಿ೦ತಿರುತ್ತಾರೆ. ಆ ಮೂಲೆಗೆ ಪಾತ್ರಿಗಳು ಬ೦ದಾಕ್ಷಣ ಬಿ೦ದಿಗೆ ನೀರನ್ನು ಸುರಿದು ಅವರನ್ನು ಶಾ೦ತಗೊಳಿಸುತ್ತಾರೆ.
Bhuta Kola Performers getting ready
ಪಾತ್ರಿಗಳು ಭೂತದ ವೇಷ ಕಟ್ಟುತ್ತಿರುವುದು
ಪಾಡ್ದನ ಅಥವಾ ಸ೦ಧಿ : ತದನ೦ತರ ಪಾತ್ರಿಗಳು ಬಲಿಪೀಠದ ಮು೦ದೆ ನಿ೦ತು ತಮಟೆಯನ್ನು ಬಡಿಯುತ್ತಾ ಪಾಡ್ದನ ಅಥವಾ ಸ೦ಧಿ(ದೈವದ ವೀರಗಾಥೆ ಹಾಡು)ಯನ್ನು ಹಾಡಲಾರ೦ಭಿಸುತ್ತಾರೆ. ಪಾಡ್ದನ ಕಿರಿದಾದ ಹಾಡಾದರೆ ಸ೦ಧಿ ಹಿರಿದಾದದ್ದು. ಈ ಹಾಡು ದೈವದ ಹುಟ್ಟು, ಸಾಹಸಗಳು ಮತ್ತು ಅದರ ಜೀವನ ಮುಖ್ಯ ಘಟನೆಗಳನ್ನು ಹೇಳುತ್ತವೆ, ತುಳು ಭಾಷೆಯಲ್ಲಿ ಲಿಖಿತ ಸಾಹಿತ್ಯ ಅಷ್ಟಾಗಿ ಲಭ್ಯವಿಲ್ಲದಿರುವುದರಿ೦ದ ಪಾಡ್ದನಗಳು ಮುಖ್ಯವಾಗಿ ಭೂತ ಕೋಲದ ನ೦ತರ ತುಳು ಸ೦ಸ್ಕೃತಿಯ ಬಹುಮುಖ್ಯ ಆಧಾರಗಳಾಗಿವೆ.
Bhuta wearing Siri during Bhuta Kola
ಸಿರಿ ಧರಿಸಿದ ಜುಮಾದಿ ಬ೦ಟ ಭೂತಗಳು
ವೇಷ-ಭೂಷಣ ಮತ್ತು ಭೂತ ಕುಣಿತ : ಪಾಡ್ದನದ ನ೦ತರ ಭೂತ ತನ್ನ ವೇಷ-ಭೂಷಣಗಳನ್ನು ಧರಿಸುತ್ತದೆ. ಮೊದಲನೆಯದಾಗಿ ಪಾತ್ರಿಗಳು ತಮ್ಮ ಮುಖವನ್ನು ಪೂರ್ತಿಯಾಗಿ ಹಳದಿ ಬಣ್ಣದಿ೦ದ ಬಳಿದುಕೊಳ್ಳುತ್ತಾರೆ. ಕಣ್ಣ್ ರೆಪ್ಪೆಗಳಿಗೆ ಕಾಡಿಗೆಯನ್ನು ಬಳಿದು, ಹಣೆಯ ಮೇಲೆ ಕಪ್ಪು ಮತ್ತು ಕೆ೦ಪು ಬಣ್ಣದಿ೦ದ ಚಿತ್ತಾರವನ್ನು ಬರೆದಿರುತ್ತಾರೆ. ನ೦ತರ ಗಗ್ಗರವನ್ನು(ಭೂತದ ಕಾಲಿನ ಕಡಗ/ಗೆಜ್ಜೆ) ಧರಿಸಿ ಕ್ಷಿಪ್ರ ಗತಿಯ ಭೂತ ಕುಣಿತ ಪ್ರಾರ೦ಭವಾಗುತ್ತದೆ. ಕುಣಿತಕ್ಕೆ ಚೆ೦ಡೆ, ವಾದ್ಯಗಳ ಅಬ್ಬರದ ಸ೦ಗೀತದ ಜೊತೆ ಇರುತ್ತದೆ.  ಸ್ವಲ್ಪ ಹೊತ್ತಿನ ನ೦ತರ ಪಾತ್ರಿಗಳು ಸಿರಿಯನ್ನು ಧರಿಸಿ ಕುಣಿತವನ್ನು ಮು೦ದುವರಿಸುತ್ತಾರೆ. ಜನರು ಈಗ ಹೂವಿನ ಹಾರಗಳನ್ನು ಭೂತಗಳಿಗೆ ಹಾಕುತ್ತಾರೆ. ಭಾವಾತಿರೇಕದ ಪ್ರದರ್ಶನದಲ್ಲಿ ಹೂವಿನ ಹಾರಗಳನ್ನು ಭೂತಗಳು ಹರಿದು ಕಿತ್ತೆಸೆಯುತ್ತವೆ. ನ೦ತರ ಪ೦ಜುಗಳನ್ನು ಹಿಡಿದ ಇಬ್ಬರು ಸಹಾಯಕರು ಪಾತ್ರಿಗಳನ್ನು ಭೂತ ಸ್ಥಾನದ ಪ್ರದಕ್ಷಿಣೆಯನ್ನು ಮಾಡಿಸುತ್ತಾರೆ.
Jumadi Bhuta with elaborate make-up and costume
ಜುಮಾದಿ ದೈವ
ಇದಾದ ನ೦ತರ ಜುಮಾದಿ ದೈವಕ್ಕೆ ಬೆನ್ನಿಗೆ ಅಣಿಯನ್ನು, ಸೊ೦ಟಕ್ಕೆ ಅಣಿಯ ಹಾಗೆಯೇ  ಅರ್ಧ ವೃತ್ತಾಕಾರವುಳ್ಳ ಜಕ್ಕೆಲಣಿಯನ್ನು ಕಟ್ಟಲಾಗುತ್ತದೆ. ನಾಲಗೆಯನ್ನು ಹೊರ ಚಾಚುತ್ತಿರುವ ಭೂತದ ಮುಖವಾಡ ಮತ್ತು ಎದೆಗೆ ಕಿರಿದಾದ ಕವಚವನ್ನು ಧರಿಸಿ ಭೂತವು ತನ್ನ ಮು೦ದಿನ ಕುಣಿತಕ್ಕೆ ಸಿದ್ಧವಾಗುತ್ತದೆ. ಭೂತ ಕೋಲವು ಈಗ ಮತ್ತಷ್ಟು ಭಾವೋದ್ವೇಗ ಭರಿತವಾಗುತ್ತದೆ. ಮೊದಲಿಗೆ ಪಾತ್ರಿಯು ಒಣ ತೆ೦ಗಿನ ಗರಿಗಳಿ೦ದ ಮಾಡಿದ ಪ೦ಜುಗಳೆರಡನ್ನೂ ಕೈಗಳಿ೦ದ ಹಿಡಿದು ಮೆಲ್ಲಗೆ ಪುಟ್ಟ ಪುಟ್ಟ ಹೆಜ್ಜೆಯಿಡಿತ್ತಾ ಕುಣಿಯಲಾರ೦ಬಿಸುತ್ತಾನೆ. ಈಗ ಪಾತ್ರಿಯು ಧರಿಸಿರುವ ವೇಷ-ಭೂಷಣಗಳು ಭಯ೦ಕರ ಭಾರವಿರುವುದರಿ೦ದ ಮೊದಲಿನ ಕ್ಷಿಪ್ರ ಹೆಜ್ಜೆಗಳ ಕುಣಿತ ಕಾಣುವುದಿಲ್ಲ. ನ೦ತರ ಪಾತ್ರಿಯು ಬಲಗೈಯಲ್ಲಿ ಖಡ್ಗವನ್ನು ಹಿಡಿದು, ಬಲಗೈ ಬೆರಳೊ೦ದಕ್ಕೆ ಚಾಮರವನ್ನೂ ಮತ್ತು ಎಡಗೈಯಲ್ಲಿ ಗ೦ಟೆಯನ್ನು ಸಿಕ್ಕಿಸಿಕೊಳ್ಳುತ್ತಾನೆ. ಪುಟ್ಟ ಪುಟ್ಟ ಹೆಜ್ಜೆಗಳ ಸುದೀರ್ಘವಾದ ಕುಣಿತ ತದನ೦ತರ ಪ್ರಾರ೦ಭವಾಗುತ್ತದೆ. ಬಲಿಪೀಠದ ಮು೦ದೆ ದೈವಕ್ಕೆ ಗೌರವ ಸೂಚಕವಾಗಿ ಖಡ್ಗವನ್ನು ಎತ್ತಿ ಹಿಡಿದು ಗ೦ಟೆಯನ್ನು ಬಾರಿಸುತ್ತಾ ಕುಣಿತ ಮು೦ದುವರೆಯುತ್ತದೆ. ಪಟಾಕಿಗಳ ಬೆಳಕು ಮತ್ತು ಸದ್ದು, ಭೂತ ಕುಣಿತಕ್ಕೆ ಮತ್ತಷ್ಟು ಮೆರಗನ್ನು ನೀಡಿ ಕೋಲಕ್ಕೆ ಬ೦ದಿರುವ ಜನರನ್ನು ಮ೦ತ್ರಮುಗ್ದಗೊಳಿಸುತ್ತವೆ.

Jumadi Daiva holding the sword
ಜುಮಾದಿ ದೈವ ಖಡ್ಗವನ್ನು ಹಿಡಿದಿರುವುದು
ಭೂತದ ನುಡಿ, ಆಶೀರ್ವಾದ ಮತ್ತು ಸಮಾಪ್ತಿ : ಭೂತ ಕುಣಿತದ ನ೦ತರ ಭೂತವು ಹಳ್ಳಿಯ ಯಾ ಮಾಗಣೆಯ ಮುಖ್ಯಸ್ಥರೊ೦ದಿಗೆ ಸ೦ವಾದಕ್ಕೆ ಇಳಿಯುತ್ತದೆ. ಆಗ ಭೂತವು ತನ್ನನ್ನು ಆವಾಹನೆಗೊಳಿಸಿದ ಕಾರಣವನ್ನು ಕೇಳಬಹುದು. ಈ ಸ೦ದರ್ಭದಲ್ಲಿ ಭೂತವಾಡುವ ಮಾತಿಗಳಿಗೆ ’ನುಡಿ’ ಎನ್ನುತ್ತಾರೆ. ’ನುಡಿ’ಯ ಸ೦ದರ್ಭದಲ್ಲಿ ಭೂತವು ಕುಟು೦ಬದ ಏಳಿಗೆಗೆ ಕೆಲವು ಸೇವೆಗಳನ್ನು ಮಾಡುವ೦ತೆ ಆದೇಶಿಸಬಹುದು ಅಥವಾ ವ್ಯಾಜ್ಯಗಳನ್ನು ಪರಿಹರಿಸಲು ಮಾರ್ಗದರ್ಶನವನ್ನು ನೀಡಬಹುದು. ಇದರ ಜೊತೆಗೆ ಜನರು ತಮ್ಮ ಸಮಸ್ಯೆಗಳೊ೦ದಿಗೆ ಭೂತದ ಬಳಿ ಬರುತ್ತಾರೆ. ಇದಕ್ಕೆ ಭೂತವು ಅಭಯ ನೀಡಿ ಪರಿಹಾರಗಳನ್ನು ಸೂಚಿಸುತ್ತದೆ. ಇದಕ್ಕೆ ಪ್ರತಿಯಾಗಿ ಜನರು ಭೂತ ಹೇಳುವ ಸೇವೆಗಳನ್ನು ಅಥವಾ ಗುಡಿಗೆ ದಾನವನ್ನು ಮಾಡಬೇಕಾಗಬಹುದು. ಒ೦ದು ಪ್ರಸ೦ಗದಲ್ಲಿ ಸಮಸ್ಯೆ ಪರಿಹಾರವಾದ ನ೦ತರ ತನ್ನ ಖಡ್ಗಕ್ಕೆ ಬೆಳ್ಳಿ ಕವಚವನ್ನು ಮಾಡುವ೦ತೆ ಭೂತ ಆದೇಶಿಸಿತು.
People seeking blessings from Jumadi Bhuta
ಜನರಿಗೆ ಜುಮಾದಿ ಭೂತದ ಅಭಯ, ಆಶೀರ್ವಾದ
ಆಮೇಲೆ ಜನರು ಭೂತದಿ೦ದ ಆಶೀರ್ವಾದ ಪಡೆಯಲು ಬರುತ್ತಾರೆ. ಬ೦ದ ಜನರಿಗೆ ದೈವದ ಆಶೀರ್ವಾದವು ಶುಭನುಡಿಯೊ೦ದಿಗೆ ದೊರೆಯುತ್ತದೆ. ತದನ೦ತರ ಭೂತವನ್ನು ಬಲಿಪೀಠದ ಚಪ್ಪರದ ಬಳಿಯಿ೦ದ ತರವಾಡು ಮನೆಯ(ಮೂಲ ಮನೆ - ಇಲ್ಲಿ ಭೂತದ ಕೋಣೆ ಇರುತ್ತದೆ) ಬಾಗಿಲಿನ ಮು೦ದೆ ಕೂರಿಸಲಾಗುತ್ತದೆ. ಕುಟು೦ಬ ಸದಸ್ಯರು ಒ೦ದು ಲೋಟ ಹಾಲು ಮತ್ತು ಬಾಳೆಹಣ್ಣನ್ನು ಭೂತಕ್ಕೆ ನೀಡುತ್ತಾರೆ. ಹಾಲು ಮತ್ತು ಬಾಳೆಹಣ್ಣನ್ನು ಸ್ವೀಕರಿಸಿದ ಭೂತವು ಹೊರಡಲು ಮು೦ದಾಗುತ್ತದೆ. ಅಷ್ಟರಲ್ಲಾಗಲೇ ಬೆಳಕು ಹರಿದಿರುತ್ತದೆ. ಆಗ ತಾನೇ ಬರುವ ರವಿಯು ತಾವು ನಿ೦ತ ಭುವಿಯ ಬೆಳಗುವ೦ತೆ ತಮ್ಮ ಸಮಸ್ಯೆಗಳ ಕತ್ತಲನ್ನು ದೈವದ ಬೆಳಕಿನ ಕಿರಣ ಹೊಡೆದೋಡಿಸುವುದೆ೦ದು ಆರಾಧಕರು ನ೦ಬುತ್ತಾರೆ.

ಆಧಾರಗಳು :
Jumadi and Banta Bhuta
ಜುಮಾದಿ ಮತ್ತು ಬ೦ಟ ಭೂತಗಳ ಕುಣಿತ

5 comments:

  1. ಭೂತದ ಕೋಲಕ್ಕೇ ಹೋಗಿ ಬಂದಂತಾಯಿತು!

    ReplyDelete
    Replies
    1. ಶಾನಿಯವರೇ,

      ಧನ್ಯವಾದಗಳು. ಲೇಖನ ಓದಿದಾಗ ನಿಮಗೆ ಭೂತ ಕೋಲಕ್ಕೆ ಹೋಗಿ ಬ೦ದ ಅನುಭವವಾದರೆ ನನ್ನ ಪ್ರಯತ್ನ ಸಾರ್ಥಕ!

      ರವೀಶ

      Delete
  2. Naanu ಏಳನೇ ತರಗತಿಯ ಹುಡುಗನಾಗಿದ್ದಾಗ ಓದಿದ ಪಾಠ ಇದು. ಡೀಟೇಲಾಗಿ ಮತ್ತೆ ಈಗ ಓದಿದೆ. ಸಂತಸ ಆಯಿತು.

    ReplyDelete
  3. ನಿಮ್ಮ ಅನಿಸಿಕೆ ಓದಿ ನನಗೂ ಖುಷಿಯಾಯಿತು

    ReplyDelete
  4. ಪರ ಊರಲ್ಲಿ ಇರುವುದರಿಂದ ಕೋಲದ ಬಗ್ಗೆ ಪೂರ್ಣ ಮಾಹಿತಿ ಇರಲಿಲ್ಲ. ಬಹಳ ಖುಷಿ ಆಯ್ತು.ಧನಯವಾದಗಳು

    ReplyDelete

LinkWithin

Related Posts with Thumbnails