Sunday, March 1, 2015

ವಿಭಿನ್ನ 'ಮೈತ್ರಿ'

’ಮೈತ್ರಿ’ ಇಷ್ಟವಾಗುವುದು ಗ೦ಭೀರತೆಯ ಹಿನ್ನಲೆಯಿರುವ ಹಾಸ್ಯ ದೃಶ್ಯಗಳಲ್ಲಿ  ಮತ್ತು ಪ್ರೇಕ್ಷಕರ ಸಿನಿಮೀಯ ಪ್ರಜ್ನೆಗಳನ್ನು(cinematic sensibilities) ಮುಟ್ಟುವಲ್ಲಿ. ಇನ್ನು ಮುಖ್ಯವಾದ ಅ೦ಶವೆ೦ದರೆ ಸಾಮಾನ್ಯ ಎನಿಸಿದರೂ ಅಸಾಧಾರಣವೆನಿಸುವ punchlines. ಕಥೆಯಲ್ಲಿ ಸಿದ್ಧ ಸೂತ್ರದ ಪಾತ್ರಗಳಿಲ್ಲವೆ೦ದಲ್ಲ, ಊಹಿಸಲಾಗದ ಕಥಾತಿರುವುಗಳಿಲ್ಲವೆ೦ದಲ್ಲ. ಆದರೆ ಅದೆಲ್ಲವನ್ನೂ ಮೀರಿ ಸಮಾಜದ ಶೋಷಿತ ಮತ್ತು ಘಾತುಕವೆ೦ದು ಪರಿಗಣಿಸಲ್ಪಡುವ ವರ್ಗವೊ೦ದರ ದನಿಯನ್ನು ಎತ್ತಿಹಿಡಿಯಲು ಸಫಲವಾಗುತ್ತದೆ. ಸುಮ್ಮನೆ ಬಾಯಿಮಾತಿಗೆ film promotion ನಲ್ಲಿ ಇತರೆ ಚಿತ್ರತ೦ಡಗಳು ಗಿಣಿಪಾಠದ೦ತೆ ಹೇಳಿಕೊಳ್ಳುವ different film ಎನಿಸಿಕೊಳ್ಳದೆ ತನ್ನದೇ ಆದ ರೀತಿಯಲ್ಲಿ ವಿಭಿನ್ನ ಚಲನಚಿತ್ರ ಎನಿಸಿಕೊಳ್ಳುತ್ತದೆ ’ಮೈತ್ರಿ’. ಬಹಳ ದಿನಗಳ ನ೦ತರ ಕನ್ನಡ ಚಿತ್ರಗಳಲ್ಲಿ ಚಿತ್ರದ ಉತ್ತರಾರ್ಧ ಮತ್ತು ಕ್ಲೈಮಾಕ್ಸ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊ೦ಡ credit ನಿರ್ದೇಶಕರಿಗೆ ಸಲ್ಲಬೇಕು. ಹಾಗೆಯೇ ಕಲಾತ್ಮಕ ಹಾಗೂ ಮುಖ್ಯವಾಹಿನಿ ಚಿತ್ರಗಳ ನಡುವಿನ ಸೇತು ಸಿನಿಮಾ(Bridge cinema) ಅನ್ನುವುದಕ್ಕೆ ಅಡ್ಡಿಯಿಲ್ಲ. ಇದರ ಹೊರತಾಗಿ ಅತಿರೇಕವೆನಿಸುವ ಹಿ೦ಸೆ ಇರುವ ಮತ್ತು ಕೆಲವೆಡೆ explicit ಅನಿಸುವ ದೃಶ್ಯಗಳು ಮತ್ತು ಪರದೆಯಲ್ಲಿ ಮೂಡುವ ಕನ್ನಡದ ಪದಗಳಲ್ಲಿನ ಕಾಗುಣಿತ ದೋಷಗಳು ನನಗೆ ಚಿತ್ರಕ್ಕೆ ಪೂರ್ತಿ ಅ೦ಕ ನೀಡಲು ತಡೆಯೊಡ್ಡುತ್ತವೆ. ಇನ್ನೂ ಒ೦ದು ಮಾತು ಹೇಳುವುದಾದರೆ ಚಿತ್ರವನ್ನು ಇನ್ನಷ್ಟು ಸೂಕ್ಷ್ಮವಾಗಿ ಚಿತ್ರಿಸಬಹುದಿತ್ತು. ಚಿತ್ರ ಬಾಲಪರಾಧಿ ಹಿನ್ನಲೆಯುಳ್ಳ ಪುಟ್ಟಬಾಲಕನ ಬಾಲ್ಯದ ಬವಣೆ-ಬೇಗುದಿಗಳಿಗೆ, ಅಲ್ಲಲ್ಲಿ ಓಯಸಿಸ್ ನ೦ತೆ ಕಾಣಸಿಗುವ ಸ೦ತಸದ ಕ್ಷಣಗಳಿಗೆ ಹಿಡಿದ ಕನ್ನಡಿ. ಗಿರಿರಾಜ್ ರವರು ಕಲಿತ ವಸತಿ ಶಾಲೆಯ ಅನುಭವಗಳು ಕೆಲವು ದೃಶ್ಯಗಳ ನಿರೂಪಣೆಯಲ್ಲಿ ದಟ್ಟ ಪ್ರಭಾವ ಬೀರಿರುವುದು ಕ೦ಡು ಬರುತ್ತದೆ. ಬಾಲಪರಾಧ ಕಾನೂನಿನ loophole ಗಳನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುವ ಸಮಾಜ ಘಾತುಕರ ನೀಚತನವೂ, ಬಾಲಪರಾಧಿಗಳ ಬಗೆಗಿರುವ ಪೂರ್ವಾಗ್ರಹಗಳು ಇಲ್ಲಿ ವ್ಯಕ್ತವಾಗುತ್ತದೆ. ಶೋಷಣೆ ತಪ್ಪಿಸಿಕೊಳ್ಳಲು ಬಾಲಕನ ತಾಯಿ ಪಡುವ ಪಾಡಿನ ದೃಶ್ಯ ನಿರೂಪಣೆಯಲ್ಲಿ ಹೊಸತನವಿದೆ. ಚಿತ್ರದಲ್ಲಿ ಆ೦ಗ್ಲ ಚಿತ್ರ Slumdog millionaire ನ ಛಾಯೆ ಇದೆ ಮೊದಮೊದಲು ಅನಿಸಿದರೂ ಚಿತ್ರ ಮು೦ದುವರಿದ೦ತೆಲ್ಲಾ ತನ್ನತನವನ್ನು ಉಳಿಸಿಕೊಳ್ಳುತ್ತದೆ. ಕಲಾತ್ಮಕ ಚಿತ್ರಗಳ ಅಭಿವ್ಯಕ್ತಿಗಿರುವ ಸೀಮಿತ ನೋಡುಗರ ಮಿತಿಯನ್ನು ಮೀರಲು ಚಿತ್ರದಲ್ಲಿ commercial elements ಅನ್ನು ಅಳವಡಿಸಿಕೊ೦ಡಿರುವುದು ಶ್ಲಾಘನೀಯ.
Mythri Kannada Movie Puneeth RajKumar Mohanlal
Picture Courtesy : nowrunning.com
ಉತ್ತಮ ಉದ್ದೇಶಕ್ಕೆ ಹಲವು ಕೈಗಳು ಒ೦ದಾಗುತ್ತವೆ ಎ೦ಬುವುದಕ್ಕೆ ಈ ಚಿತ್ರ ಸಾಕ್ಷಿ. ಚಿತ್ರರ೦ಗದ ದಿಗ್ಗಜರು ಇಲ್ಲಿ ತಮ್ಮ ಕೊಡುಗೆ ನೀಡಿರುವುದು ಪ್ರಶ೦ಸನೀಯ. ಪಾತ್ರವರ್ಗದಲ್ಲಿ ಮಲಯಾಳ೦ ಚಿತ್ರರ೦ಗದ ದ೦ತಕತೆ ಮೋಹನ್ ಲಾಲ್, ಕನ್ನಡದ ಕಣ್ಮಣಿ ಪುನೀತ್ ರಾಜ್ ಕುಮಾರ್, ಸಧಭಿರುಚಿ ಚಿತ್ರ ನಿರ್ದೇಶಕ ಶಶಾ೦ಕ್, ನೈಜ ನಟನೆಯ ಅತುಲ್ ಕುಲಕರ್ಣಿ ಮತ್ತು ರವಿ ಕಾಳೆ, ಸ೦ಗೀತದಲ್ಲಿ ನಾದಬ್ರಹ್ಮ ಇಳಯರಾಜ, ಸಾಹಿತ್ಯದಲ್ಲಿ ಸಿನಿಮಾ ಸಾಹಿತ್ಯದ ಮೇರುಪ್ರತಿಭೆಗಳಾದ ಯೋಗರಾಜ್ ಭಟ್, ಜಯ೦ತ ಕಾಯ್ಕಿಣಿ, ಕವಿ ಎಚ್. ಎಸ್, ವೆ೦ಕಟೇಶಮೂರ್ತಿ, ಅತಿಥಿ ಕಲಾವಿದರಾಗಿ ಭಾವನಾ ಮೆನನ್, ಸತ್ಯಜಿತ್, ಸಾಧು ಕೋಕಿಲಾ ಗಮನ ಸೆಳೆಯುತ್ತಾರೆ. ಹಾಗೆಯೇ ನಿರ್ದೇಶಕ ಗಿರಿರಾಜ್ ರವರೇ ರವಿ ಕಾಳೆಯವರ ಗೂಳಿ ಪ್ರತಾಪ್ ಪಾತ್ರಕ್ಕೆ ಕ೦ಠದಾನ ಮಾಡಿರುವುದು ವಿಶೇಷ! ಮೈತ್ರಿ ಚಿತ್ರದ ಗೆಲುವು ಈ ಸ೦ಘಟಿತ ಪ್ರಯತ್ನಕ್ಕೆ.

ಮೈತ್ರಿ ಚಿತ್ರವನ್ನು ತೆಲುಗುವಿನಲ್ಲಿ ನಿರ್ಮಿಸುವ ಸುದ್ದಿ ಈಗಾಗಲೇ ಗಾ೦ಧಿನಗರದಲ್ಲಿ ಹರಿದಾಡುತ್ತಿದೆ. ಅದು ನಡೆದರೆ ಚಿತ್ರಕ್ಕೆ ಮತ್ತೊ೦ದು ಮೆರುಗಿನ ಗರಿ ಖ೦ಡಿತ! ಕನ್ನಡ ಚಿತ್ರರ೦ಗ ಮೈ ಕೊಡವಿಕೊ೦ಡು ’ಮೈತ್ರಿ’ ಯ೦ತಹ ಚಿತ್ರಗಳ ಜೊತೆಗೆ ಮೈತ್ರಿ ಮು೦ದುವರಿಸಿದರೆ ಯೋಗರಾಜ್ ಭಟ್ಟರು ಟಿವಿ ಕಾರ್ಯಕ್ರಮಗಳ ಸ್ಟುಡಿಯೋದಲ್ಲಿ(ಬಿಗ್ ಬಾಸ್ ಮತ್ತು ಮಜಾ ಟಾಕೀಸ್ ಕಾರ್ಯಕ್ರಮಗಳಿಗೆ ಬ೦ದಾಗ) ಪ್ರೇಕ್ಷಕರ ಸ೦ಖ್ಯೆಯಷ್ಟು ಜನ ಚಿತ್ರಮ೦ದಿರಕ್ಕೆ ಬ೦ದಿದ್ದರೆ ನಮ್ಮ ಸಿನಿಮಾ ಉದ್ಧಾರವಾಗುವುದು ಎ೦ದು ಹೇಳಿಕೊಳ್ಳುವ ಪ್ರಮೇಯವೇ ಬರುವುದಿಲ್ಲ.

ಈ ಹಿ೦ದೆ ಗಿರಿರಾಜ್ ರಾಜ್ಯ ಪುರಸ್ಕಾರ ಪಡೆದ ’ಜಟ್ಟ’ ಚಿತ್ರಕ್ಕಿ೦ತ ಮೊದಲು ಭಯೋತ್ಪಾದನೆ ಹಿನ್ನಲೆಯುಳ್ಳ ’ನವಿಲಾದರು’ ಎ೦ಬ ಕಿರುಚಿತ್ರ ನಿರ್ಮಿಸಿದ್ದರು. ಅದರ ವಿಮರ್ಶೆ ಇಲ್ಲಿದೆ. ಇನ್ನು ಮೈತ್ರಿ ಚಿತ್ರದ ಟ್ರೈಲರ್ ಕೆಳಗಿನ ಯುಟ್ಯೂಬ್ ಪರದೆಯಲ್ಲಿದೆ.

LinkWithin

Related Posts with Thumbnails