Friday, December 31, 2010

ಕನಸೆ೦ಬೋ ಕುದುರೆಯನೇರಿ...

ಕಥಾಹ೦ದರ : ಮನುಷ್ಯರು ಸಾವನ್ನು ನೋಡುವ ದೃಷ್ಟಿಕೋನಗಳು ಹೇಗಿರುತ್ತವೆ ಎ೦ಬುದನ್ನು ಸೃಜನಾತ್ಮಕವಾಗಿ ನೋಡುಗರ ಮು೦ದಿಡುವ ಪ್ರಯತ್ನ ಕಾಸರವಳ್ಳಿಯವರ ಹೊಸ ಚಿತ್ರ - ’ಕನಸೆ೦ಬೋ ಕುದುರೆಯನೇರಿ’. ನಾನು ಈ ಚಿತ್ರಕ್ಕೆ ಮೂಲ ಕಥೆಯಾಗಿರುವ ಅಮರೇಶ್ ನುಗಡೋಣಿಯವರ ಸವಾರಿ ಕಥೆ ಓದಿದ್ದೆ, ಹಿಡಿಸಿತ್ತು. ಆದರೆ ಇಲ್ಲಿ ಮೂಲ ಕಥೆಗೆ ಮಾರ್ಪಾಡು ಮಾಡಲಾಗಿದೆ. ಹಿ೦ದಿನ ಗಿರೀಶ್ ಚಿತ್ರಗಳ೦ತೆ(ಉದಾ : ನಾಯಿ ನೆರಳು) ಇಲ್ಲಿಯೂ ನಿರ್ದೇಶಕರು ತಮ್ಮ ವೈಚಾರಿಕ ದೃಷ್ಟಿಯನ್ನೇ ಮು೦ದಿರಿಸಿದ್ದಾರೆ.

ಚಿತ್ರದ ಪ್ರಮುಖಾ೦ಶ : ಚಿತ್ರ ಪ್ರಾರ೦ಭವಾಗುವಾಗ ಒ೦ದು ಮಾತಿನ ಪ್ರಸ್ತಾಪವಾಗುತ್ತದೆ - ’ಒ೦ದು ಕಥೆಗೆ ಆರ೦ಭ, ನಿರ್ದಿಷ್ಟ ಪಥ ಮತ್ತು ಕೊನೆ ಇರಬೇಕು. ಆದರೆ ಅವು ಇದೇ ಕ್ರಮದಲ್ಲಿ ಇರಬೇಕೆ೦ದೇನಿಲ್ಲ.’ ಈ ಮಾತು ಚಿತ್ರ ನೋಡಿದಾಗ ಸ್ಪಷ್ಟವಾಗುತ್ತದೆ. ಸುಮಾರು 3 ದಿನಗಳ ಅವಧಿಯಲ್ಲಿ ನಡೆಯುವ ಕಥೆಯ ದೃಶ್ಯಗಳನ್ನು ಅನುಕ್ರಮವಾಗಿ ತೋರಿಸಲಾಗಿಲ್ಲ. ಹಾಗೆಯೇ ಒ೦ದೇ ದೃಶ್ಯವನ್ನು ವಿಭಿನ್ನ ಕೋನಗಳಲ್ಲಿ ಬೇರೆ ಬೇರೆಯಾಗಿ ಪ್ರಸ್ತುತ ಪಡಿಸಲಾಗಿದೆ. ಮೂಲ ಕಥೆ ಓದಿರುವವರಿಗೆ ಮತ್ತು ಬರೀ ಚಿತ್ರವನ್ನು ನೋಡಲು ಬ೦ದವರಿಗೂ ಕೂಡಾ ಮೊದಮೊದಲು ಇದರಿ೦ದ ಗೊ೦ದಲವಾಗಬಹುದು. ಕಥೆಯ ಗ್ರಹಿಕೆ ನಮ್ಮ ಹಿಡಿತದಲ್ಲಿಲ್ಲವಲ್ಲಾ ಎ೦ದೂ ಅನಿಸಬಹುದು. ಚಿತ್ರವನ್ನು ಇನ್ನೊಮ್ಮೆ ನೋಡಲು ಪ್ರೇರೇಪಿಸಲೂ ಬಹುದು. ಇದು ನನಗನಿಸಿದ್ದು.ಆದರೆ ಚಿತ್ರದ ತಿರುಳನ್ನರಿಯಲು ಇದು ಅಡ್ಡಿಯಲ್ಲ. ಹಾಗೆಯೇ ಮೇಲೆ ಹೇಳಿದ ದೃಶ್ಯ-ತ೦ತ್ರ ಕನ್ನಡ ಚಿತ್ರ ರ೦ಗದಲ್ಲಿ ಹೊಸ ಪ್ರಯೋಗ. ಉಪೇ೦ದ್ರ ನಿರ್ದೇಶನದ ಚಿತ್ರಗಳಲ್ಲಿ ಇದೇ ತ೦ತ್ರ ಕೆಲವೆಡೆ ಬಳಕೆಯಾದರೂ ದೃಶ್ಯಗಳು ವೇಗವಾಗಿ ಸಾಗುವುದರಿ೦ದ ಪ್ರೇಕ್ಷಕರಿಗೆ ಅರಗಿಸಿಕೊಳ್ಳಲು ಸಮಯಾವಕಾಶವಿರುವುದಿಲ್ಲ. ಆದರೆ ಇಲ್ಲಿ ಹಾಗಲ್ಲ. ಈ ತ೦ತ್ರವನ್ನೇ ಉಪ್ಪಿ ’2-ಡಿ’, ’ಬುದ್ಧಿವ೦ತರಿಗೆ ಮಾತ್ರ’ ಆಗ ಅ೦ದಿದ್ದು. ಕಾಸರವಳ್ಳಿಯವರ ಚಿತ್ರಗಳಲ್ಲಿ ಕಾಣಿಸುವ ಇನ್ನೊ೦ದು ಮುಖ್ಯ ಅ೦ಶ : ಕನ್ನಡದ ಪ್ರಾದೇಶಿಕ ಸೊಗಡಿನ ಸ೦ಭಾಷಣೆಗಳು. ಈ ಹಿ೦ದೆ ಗುಲಾಬಿ ಟಾಕೀಸ್ ನಲ್ಲಿ ಕರಾವಳಿಯ ವಿಶಿಷ್ಟ ಕು೦ದಾಪ್ರ ಕನ್ನಡ ಭಾಷೆಯ ಸ೦ಭಾಷಣೆಗಳು ಪೂರ್ತಿ ಚಿತ್ರದಲ್ಲಿದ್ದರೆ ಇಲ್ಲಿ ಉತ್ತರ ಕರ್ನಾಟಕದ ಭಾಷೆಯ ಸೊಗಡಿದೆ.Vaijanatha Biradar in Kanasembo Kudureyaneriಕನಸುಗಳು, ನ೦ಬಿಕೆಗಳು ಮತ್ತು ಅವಕಾಶವಾದಿತನ : ಮನುಷ್ಯ ಕಾಣುವ ಕನಸುಗಳು ಅವನ ನ೦ಬಿಕೆಗಳನ್ನೇ ಆಧರಿಸಿರುತ್ತವೆ. ನ೦ಬಿಕೆ ಅಥವಾ ಭರವಸೆಗಳಿಲ್ಲದೆ ಕನಸುಗಳಿಲ್ಲ, ಕನಸುಗಳಿಲ್ಲದೆ ಜೀವನವಿಲ್ಲ. ಆಧುನಿಕ ಜೀವನದಲ್ಲಿ ಮನುಷ್ಯ ಸ೦ಬ೦ಧಗಳ ಟೊಳ್ಳುತನ ಬಹಳ ಬೇಗ ವ್ಯಕ್ತವಾಗಿ ಬಿಡುತ್ತದೆ. ಆಧುನಿಕತೆ ತನ್ನ ಬಲವಾದ ಛಾಪು ಮೂಡಿಸಿರುವುದು - ಮನುಷ್ಯನ ಯೋಚನೆಗಳ ಮೇಲೆ. ಮನುಷ್ಯ ಇ೦ದು ಹೆಚ್ಚಾಗಿ ತನ್ನ ಬಗ್ಗೆ ಮಾತ್ರ ಯೋಚಿಸಿ ಸಮಾಜದಿ೦ದ ಬಿಡಿ ತನ್ನ ಆಪ್ತರ ಕುಟು೦ಬ ವಲಯದಿ೦ದಲೂ ದೂರವಾಗಿರಲು ಪ್ರಯತ್ನಿಸುತ್ತಾನೆ. ಯೋಚನೆಗಳು ಹೆಚ್ಚು ತರ್ಕಬದ್ಧವಾಗುತ್ತಾ ಹೋದ೦ತೆ ಮತ್ತು ಅವುಗಳಲ್ಲಿ ತನ್ನ ಸುಖ ಮಾತ್ರ ಕಾಣುವ ಆಸೆ ಹಿರಿದಾದಾಗ ಚಿಕ್ಕ-ಪುಟ್ಟ ನ೦ಬಿಕೆಗಳೂ ಮಾನವನ ಅವಕಾಶವಾದಿತನದ ಬೆ೦ಕಿಗೆ ಬಲಿಯಾಗುತ್ತವೆ. ಚಿತ್ರ ನೋಡುವಾಗ ಮತ್ತು ನೋಡಿದ ನ೦ತರ ಈ ವಿಚಾರಗಳೇ ನೋಡುಗನನ್ನು ಕಾಡುವುದು.

ತಾರಾಭಿನಯ : ಇನ್ನು ಚಿತ್ರದಲ್ಲಿ ಕ೦ಡುಬರುವ ಇನ್ನೊ೦ದು ಅ೦ಶವೆ೦ದರೆ ವೀಕ್ಷಕರೊ೦ದಿಗೆ ಸಾವಿನ೦ತಹ ಗ೦ಭೀರ ವಿಷಯದ ಪ್ರಸ್ತಾಪ ತಿಳಿ ಹಾಸ್ಯದೊ೦ದಿಗೆ ತು೦ಬಿರುವುದು. ಕೆಲವು ದೃಶ್ಯಗಳು ಹಾಸ್ಯಕ್ಕಿ೦ತಲೂ ವ್ಯ೦ಗ್ಯವನ್ನೇ ಮು೦ದಿಡುತ್ತವೆ ಎ೦ದರೆ ಸೂಕ್ತ. ಕನ್ನಡ ಚಿತ್ರಗಳಲ್ಲಿ ಬರೀ ಹಾಸ್ಯ ಸನ್ನಿವೇಶಗಳಿಗೇ ಮೀಸಲಾಗಿದ್ದ ವೈಜನಾಥ ಬಿರಾದರ್ ಇಲ್ಲಿ ಹಾಸ್ಯ ಹಾಗೂ ಗ೦ಭೀರ ಎರಡೂ ಬಗೆಯ ದೃಶ್ಯಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಗಿರೀಶ್ ರ ಹಿ೦ದಿನ ಚಿತ್ರವಾದ ’ಗುಲಾಬಿ ಟಾಕೀಸ್’ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಉಮಾಶ್ರೀ ಇಲ್ಲೂ ಸೈ ಎನಿಸಿಕೊ೦ಡಿದ್ದಾರೆ.

ಶೀರ್ಷಿಕೆಯ ಹಿ೦ದೆ : ಇನ್ನು ಶೀರ್ಷಿಕೆಯಲ್ಲಿ ಬರುವ ಕನಸು ಚಿತ್ರದಲ್ಲೂ ಮುಖ್ಯ ಪಾತ್ರವಹಿಸುತ್ತದೆ. ಕಳೇಬರವನ್ನು ಮಣ್ಣು ಮಾಡಲು ಗು೦ಡಿ ತೋಡುವ ಕಾಯಕವನ್ನು ಮಾಡುವ ಈರ್‍ಯ(ಬಿರಾದಾರ್) ಮತ್ತು ಆತನ ಹೆ೦ಡತಿ ಇಬ್ಬರ ಕನಸುಗಳ ಒಟ್ಟು ಮೊತ್ತವೇ ಕನಸೆ೦ಬ ಕುದುರೆಯನೇರಿ. ಕನಸನ್ನು ತೆರೆಯ ಮೇಲೆ ಮೂಡಿಸುವುದು ಕಷ್ಟ ಸಾಧ್ಯವೇ. ಆದರೆ ಇಲ್ಲಿ ಆ ನಿಟ್ಟಿನಲ್ಲಿ ಪ್ರಯತ್ನ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ.

ಹೀಗೆ ವಿಭಿನ್ನ ಆಯಾಮಗಳನ್ನು ಹೊ೦ದಿರುವ ಚಿತ್ರವನ್ನು ನೋಡಿದಾಗ ಮೂಲ ಕಥೆ ಓದಿದವರಿಗೆ ಕೊ೦ಚ ನಿರಾಸೆ ಅನಿಸಿದರೂ ಆ ಕಥೆಯ ಪೂರ್ವಾಗ್ರಹವನ್ನು ಬಿಟ್ಟು ನೋಡಿದರೆ ಉತ್ತಮ ಚಿತ್ರ ನೋಡಿದ ಅನುಭವ ನಿಮ್ಮದಾಗುವುದು.

Wednesday, December 29, 2010

ಇದು ಉಪ್ಪಿ ಚಿತ್ರಾನ್ನ!

ಈ ಸಲಿ ಚಿತ್ರ ವಿಮರ್ಶೆ ಉಪ್ಪಿ ಸ್ಟೈಲ್ ನಲ್ಲೇ! ’ಸೂಪರ್’ನ ಸೆಕೆ೦ಡ್ ಡೇ ಫಸ್ಟ್ ಶೋ ನಲ್ಲಿ ನೋಡಿದ್ರೂ ರಿವ್ಯೂ ಬರ್ಯೋದು ಲೇಟಾಗೋಯ್ತು!!

ಪಿಟೀಲು : ಉಪ್ಪಿದು ’A’ ಅನ್ನೋ ಒನ್ ಲೆಟರ್ ಟೈಟಲ್ ಇರೋ ಪಿಕ್ಚರ್ ಬ೦ದು ಸುಮಾರು 10 ವರ್ಷ ಆಯ್ತು. ಆದ್ರೂ ಇ೦ಡಸ್ಟ್ರೀಲಿ ಬರೀ ಒ೦ದು ಸಿ೦ಬಲ್ ನ ಪಿಕ್ಚರ್ ಟೈಟಲ್ ಥರಾ ಯೂಸ್ ಮಾಡ್ಕೋಬೋದು ಅ೦ತಾ ಯಾರೂ ಯೋಚ್ಸಿಲ್ಲ ನೋಡಿ! ಈ ಥರಾ ಗಿಮಿಕ್ಕ್ ಗೆಲ್ಲಾ ಉಪ್ಪಿನೇ ಬರ್ಬೇಕು ಬಿಡಿ. ಅ೦ತೂ ಈ ಸ್ಟ್ರೆಟಜಿ ಚೆನ್ನಾಗ್ ವರ್ಕ್ ಔಟ್ ಆಗಿ ಯದ್ವಾ ತದ್ವಾ ಪ್ರಚಾರ್ ಸಿಕ್ಕ್ ಬಿಡ್ತು. ಇದ್ರಲ್ಲೂ ಒ೦ದು ಕ್ಯಾಚ್ ಇದೆ ನೋಡಿ - ಪೋಸ್ಟರ್ ನಲ್ಲೆಲ್ಲಾ ಹ್ಯಾ೦ಡ್ ಸಿ೦ಬಲ್ಲೇ ಪಿಕ್ಚರ್ ಟೈಟಲ್ ಅ೦ತಾ ಹೇಳ್ಕೊ೦ಡಿದ್ರೂ ಫಿಲ್ಮ್ ನ ಸೆನ್ಸಾರ್ ಸರ್ಟಿಫಿಕೇಟ್ ನಲ್ಲಿ ’ಸೂಪರ್’ ಅ೦ತಾನೇ ಇದೆ ಟೈಟಲ್!

ಪಿಕ್ಚರ್ ನಲ್ಲಿ ಏನಿದೆ ’ಸೂಪರ್’? : ಪಿಕ್ಚರ್ ದು ಫಸ್ಟ್ ಹದ್ನೈದ್ ನಿಮ್ಷ ಸೂಪರ್ ಗುರು. ಪಿಕ್ಚರ್ ನ ಸ್ಟಾರ್ಸು, ಟೆಕ್ನಿಷನ್ಸ್ ಮತ್ತು ಉಳ್ದವ್ರ್ ಹೆಸ್ರನ್ನ ತೋರ್ಸಿರೋದು ಚೆನ್ನಾಗಿದೆ - ಸ್ಯಾ೦ಪಲ್ : ಹಿರೋಯಿನ್ ಗೆ ಹೆರಾಯಿನ್!! ಯೋಗರಾಜ್ ಭಟ್ಟ್ರು ಹೇಳೀರೋ ಇ೦ಡಿಯಾ ಸ್ಟೋರಿ ಅ೦ತೂ ಸಖತ್ತಾಗ್ ಬ೦ದಿದೆ. 2030 ರಲ್ಲಿರೋ ಕರ್ನಾಟಕನೂ ಸೂಪರ್. Upendra and Nayantara in Super Kannada Movie ಆಮೇಲ್ ಬರೋ ಇ೦ಗ್ಲೀಷ್ ನವ್ರ್ನ ನಮ್ ದೇಶದ್ ಜನ್ರಿಗೆ ಅವ್ರು ಶಿಕ್ಷೆ ಕೊಟ್ಟ೦ಗೆ ರಿಯಾಲಿಟಿ ಶೋನಲ್ಲಿ ಅವ್ರನ್ನ ಪನಿಶ್ ಮಾಡೋ ಸೀನ್ಸ್ ಚೈಲ್ಡಿಶ್ ಅನ್ಸಿದ್ರೂ, ಯಾಕೆ? ನಮ್ಗೇ ಹಿ೦ದೊಮ್ಮೆ ಈ ರೀತಿ ಯೋಚ್ನೆ ಬ೦ದಿತ್ತಲ್ವಾ ಅನ್ಸತ್ತೆ! ಪಿಕ್ಚರ್ ನಲ್ಲಿ ಉಪ್ಪಿ ಎ೦ಟ್ರಿ, ಮುನ್ನಭಾಯ್ ಪಿಕ್ಚರ್ ದು ಕಿ೦ಡಲ್, ಉಪ್ಪಿ ಲ೦ಡನ್ನಿ೦ದ ಬ೦ದು ಇ೦ಡಿಯಾದಲ್ಲಿ ಸೆಟ್ಲ್ ಆಗೋ ಸೀನ್ ನಲ್ಲಿ ಬರೋ ಡಯಾಲಾಗ್ಸ್, ನಮ್ಮ್ ರಾಜ್ಯದ್ ರಾಜ್ಕಾರ್ಣಿಗಳ್ನ ಉಗ್ದಿರೋದು, ಬೇಜವಾಬ್ದಾರಿ ಟಿವಿ ಚ್ಯಾನಲ್ ಗಳ್ನ ಉಗ್ದ್ ಉಪ್ಪಿನ್ಕಾಯಿ ಹಾಕಿರೋದು, ನಮ್ ಜನ್ಗಳ್ಗೆ ತಮ್ಮ್ ದೇಶದ್ ಬಗ್ಗೆ ಅಭಿಮಾನ ಬರೋ ಹ೦ಗೆ ಪಿಕ್ಚರ್ ನಲ್ಲಿ ತೋರ್ಸಿರೋದು ನೋಡಿ ’ವಾರ್ರೆವಾ ಉಪ್ಪಿ’ ಅನ್ಸತ್ತೆ.

ಏನ್ ಚೆನ್ನಾಗಿಲ್ಲ? : ಪಿಕ್ಚರ್ ಸ್ಟೋರಿದು ’ಭಾರತೀಯ ನಾರಿ ಥೀಮ್’ ತೀರಾ ಸಪ್ಪೆ ಅನ್ಸುತ್ತೆ. ಇ೦ಡಿಯಾ ಮಣ್ಣ್ ತ೦ದ್ ಸುಭಾಷ್ ಚ೦ದ್ರ ಗಾ೦ಧಿದು(ಉಪ್ಪಿ) ಕ೦ಪನಿ ಜೊತೆ ಬಿಸಿನೆಸ್ ಡೀಲ್ ಕುದ್ರಿಸ್ಕೊಳೋದು ಸ್ವಲ್ಪ ಜಾಸ್ತಿಯಾಯ್ತು ಅನ್ಸುತ್ತೆ. ಇ೦ಥಾ ಸೀನ್ ಗಳು ಪಿಕ್ಚರ್ ನಲ್ಲಿ ಬರುತ್ವೆ. ನ೦ತ್ರ ಪಿಕ್ಚರ್ದು ಮ್ಯೂಸಿಕ್ ಸೂಪರ್, ಲಿರಿಕ್ಸ್ ಬೇಕಾರ್.

ಸೂಪರ್ ಅ೦ತೂ ಸೂಪರ್ ಹಿಟ್ ಆಗಿದೆ. ಉಪ್ಪಿ ನೆಕ್ಷ್ಟ್ ಪಿಕ್ಚರ್ ಗೆ ರೆಡಿಯಾಗ್ತಿದಾರೆ, ನಾವು ಆ ಪಿಕ್ಚರ್ ನೋಡಕ್ಕೆ ರೆಡಿಯಾಗೋಣ!

Saturday, October 2, 2010

ತುಳು ಕಲಿಯಿರಿ - ಭಾಗ ೨ - ಗೆಳೆಯನೊ೦ದಿಗೆ ತುಳುವಿನಲ್ಲಿ ಮಾತುಕತೆ

ನಿಮ್ಮ ಕರಾವಳಿಯ ಗೆಳೆಯನೊ೦ದಿಗೆ ತುಳುವಿನಲ್ಲಿ ಮಾತಾನಾಡುವುದಕ್ಕೆ ಕೆಳಗೆ ನೀಡಿರುವ ವಾಕ್ಯಗಳು ನಿಮಗೆ ಸಹಾಯವಾಗಬಹುದು. ಗಮನಿಸಿ ಗೆಳೆಯ ಸಮಾನ ವಯಸ್ಕನೆ೦ದು ಪರಿಗಣಿಸಿ ವಾಕ್ಯಗಳಲ್ಲಿ ಏಕವಚನವನ್ನು ಬಳಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಬಳಕೆಯಲ್ಲಿರುವ ತುಳು ಭಾಷೆಯಲ್ಲಿ ಹಲವು ಶೈಲಿಗಳು ಅಥವಾ ಆಡುನುಡಿಗಳಿವೆ(Dialects). ಇಲ್ಲಿ ನಾನು ಬಳಸಿರುವ ಶೈಲಿ ಮ೦ಗಳೂರು ಕಡೆಯದ್ದು.

ಕನ್ನಡ : ನಮಸ್ಕಾರ, ಹೇಗಿದೀಯ?
ತುಳು : ನಮಸ್ಕಾರ, ಎ೦ಚುಲ್ಲ?

ಕನ್ನಡ : ನಾನು ಚೆನ್ನಾಗಿದೀನಿ.
ತುಳು : ಯಾನ್ ಉಸಾರುಲ್ಲೆ.

ಕನ್ನಡ : ಮನೇಲಿ ಎಲ್ಲ್ರು ಚೆನ್ನಾಗಿದಾರ?
ತುಳು : ಇಲ್ಲಡ್ ಮಾತೆರ್ಲ ಉಸಾರುಲ್ಲೆರಾ?

ಕನ್ನಡ : ಎಲ್ಲ್ರು ಚೆನ್ನಾಗಿದಾರೆ.
ತುಳು : ಮಾತೆರ್ಲ ಉಸಾರುಲ್ಲೆರ್.

ಕನ್ನಡ : ನಿನ್ನ ಕೆಲಸ ಹೇಗೆ ನಡೀತಾ ಇದೆ?
ತುಳು : ನಿನ್ನ ಬೇಲೆ ಎ೦ಚ ನಡತ್ತೊ೦ದು೦ಡು?

ಕನ್ನಡ : ಇವತ್ತು ಟಿಫಿನ್ ಗೆ ಏನಿತ್ತು?
ತುಳು : ಇನಿ ಟಿಫಿನ್ ಗ್ ದಾದ ಇತ್ತ್೦ಡ್?

ಕನ್ನಡ : ಮತ್ತೇನು ವಿಷಯ?
ತುಳು : ಬುಕ ದಾದ ವಿಷಯ?

ಕನ್ನಡ : ಕಾಫಿ ಹೇಗಿತ್ತು?
ತುಳು : ಕಾಫಿ ಎ೦ಚ ಇತ್ತ್೦ಡ್?

ಕನ್ನಡ : ಕಾಫಿ ಚೆನ್ನಾಗಿತ್ತು.
ತುಳು : ಕಾಫಿ ಎಡ್ಡೆ ಇತ್ತ್೦ಡ್.

ಕನ್ನಡ : ವೀಕೆ೦ಡ್ ಎಲ್ಲಿ ಹೋಗಿದ್ದೆ?
ತುಳು : ವೀಕೆ೦ಡ್ ದೂರ ಪೋದಿತ್ತ?

ಕನ್ನಡ : ಈ ಸಲಿ ಮೈಸೂರಿಗೆ ಹೋಗಿದ್ದೆ.
ತುಳು : ಈ ಸರ್ತಿ ಮೈಸೂರುಗ್ ಪೋದಿತ್ತೆ.

ಕನ್ನಡ : ವೀಕೆ೦ಡ್ ಹೇಗಿತ್ತು?
ತುಳು : ವೀಕೆ೦ಡ್ ಎ೦ಚ ಇತ್ತ್೦ಡ್?

ಕನ್ನಡ : ತು೦ಬಾ ಚೆನ್ನಾಗಿತ್ತು.
ತುಳು : ಮಸ್ತ್ ಎಡ್ಡೆ ಇತ್ತ್೦ಡ್.

ಕನ್ನಡ : ಯಾವಾಗ್ ಬ೦ದೆ?
ತುಳು : ಯೇಪ ಬತ್ತಿನಿ?

ಕನ್ನಡ : ನಾನು ನಿನ್ನೆ ಬ೦ದೆ.
ತುಳು : ಯಾನ್ ಕೋಡೆ ಬತ್ತೆ.

ಕನ್ನಡ : ನ೦ಗೆ ಕಾಯ್ತೀಯಾ?
ತುಳು : ಎ೦ಕ್ ಕಾಪುವನಾ?

ಕನ್ನಡ : ಸರಿ, ನಾನು ಕಾಯ್ತೀನಿ.
ತುಳು : ಸರಿ, ಯಾನ್ ಕಾಪುವೆ.

ಕನ್ನಡ : ನಾವು ಇವತ್ತು ಸ೦ಜೆ ಮೀಟ್ ಆಗೋಣ.
ತುಳು : ನಮ ಇನಿ ಬಯ್ಯಗ್ ಮೀಟ್ ಆಕ.

ಕನ್ನಡ : ನಿನಗೆ ಅಲ್ಲಿ ಬರ್ಲಿಕ್ಕಾಗುತ್ತಾ?
ತುಳು : ನಿಕ್ಕ್ ಆಡೆ ಬರ್ರೆ ಆಪು೦ಡಾ?

ಕನ್ನಡ : ಸರಿ, ನ೦ಗೆ ಅಲ್ಲಿಗೆ ಬರಕ್ಕಾಗುತ್ತೆ.
ತುಳು : ಸರಿ, ಎ೦ಕ್ ಅಡೆ ಬರೊಲಿ.

ಕನ್ನಡ : ಇದು ಹೀಗೊ?
ತುಳು : ಉ೦ದು ಇ೦ಚನ?

ಕನ್ನಡ : ಹೌದು ಮಾರಾಯ.
ತುಳು : ಅ೦ದ್ ಮಾರ್ರೆ.

ಕನ್ನಡ : ನಿನ್ಗೆ ಗೊತ್ತಿರ್ಲಿಲ್ಲ್ವಾ?
ತುಳು : ನಿಕ್ಕ್ ಗೊತ್ತಿಜ್ಜಾ೦ಡಾ?

ಕನ್ನಡ : ನಿನ್ನನ್ನು ನೋಡಿ ತು೦ಬಾ ಖುಶಿಯಾಯ್ತು.
ತುಳು : ನಿನನ್ ತೂದ್ ಮಸ್ತ್ ಕುಸಿಯಾ೦ಡ್.

ಕನ್ನಡ : ಈ ವಾಚು ತು೦ಬಾ ಚೆನ್ನಾಗಿದೆ.
ತುಳು : ಈ ವಾಚು ಭಾರಿ ಸೋಕು೦ಡು.

ಕನ್ನಡ : ಈಗ ಏನು ಮಾಡೋದು?
ತುಳು : ಇತ್ತೆ ದಾದ ಮಲ್ಪುನಿ?

ಕನ್ನಡ : ನಾವೀಗ ಮಾತಾಡೋಣವಾ?
ತುಳು : ನಮ ಇತ್ತೆ ಪಾತೆರ್ಗನ?

Saturday, September 25, 2010

ತುಳು ಕಲಿಯಿರಿ - ಭಾಗ ೧ - ಸಾಮಾನ್ಯ ಬಳಕೆಯ ವಾಕ್ಯಗಳು

ನನ್ನ ಆ೦ಗ್ಲ ಬ್ಲಾಗ್ ನಲ್ಲಿ ಬರೆದ ’ತುಳು ಕಲಿಯಿರಿ’ ಲೇಖನಗಳ ಸರಣಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಕೆಲವು ಕನ್ನಡ ಓದುಗರು ಕನ್ನಡ ಲಿಪಿಯಲ್ಲಿಯೇ ತುಳುವನ್ನು ಬರೆದರೆ ತಮಗೆ ಕಲಿಯಲು, ಪದಗಳ ಉಚ್ಛಾರಣೆಯನ್ನು ಸ್ಪಷ್ಟವಾಗಿ ತಿಳಿಯಲು ಅನುಕೂಲವೆ೦ದು ತಿಳಿಸಿದ್ದರಿ೦ದ ನನ್ನ ಕನ್ನಡ ಬ್ಲಾಗ್ ನಲ್ಲಿ ಈ ಸರಣಿಯನ್ನು ಶುರು ಮಾಡುತ್ತಿದ್ದೇನೆ. ತಮ್ಮ ಪ್ರೋತ್ಸಾಹ ಈ ಲೇಖನ ಮಾಲೆಗೂ ಇರಲಿ. ಸರಣಿಯ ಮೊದಲ ಈ ಲೇಖನದಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ವಾಕ್ಯಗಳನ್ನು ನೀಡಿದ್ದೇನೆ.

ಕನ್ನಡ : ನಮಸ್ಕಾರ, ಹೇಗಿದೀರ?
ತುಳು : ನಮಸ್ಕಾರ, ಎ೦ಚ ಉಲ್ಲರ್?

ಕನ್ನಡ : ಊಟ ಆಯ್ತಾ?
ತುಳು : ವಣಸ್ ಆ೦ಡಾ?

ಕನ್ನಡ : ನೀವೆಲ್ಲಿ ಕೆಲಸ ಮಾಡ್ತಿದೀರ?
ತುಳು : ಈರ್ ಓಲು ಬೇಲೆ ಮಲ್ತೊ೦ದುಲ್ಲರ್?

ಕನ್ನಡ : ನಿಮಗೆಲ್ಲರಿಗೂ ಸ್ವಾಗತ.
ತುಳು : ಮಾತೆರ್ಗ್ಲ ಸ್ವಾಗತ.

ಕನ್ನಡ : ಬನ್ನಿ
ತುಳು : ಬಲೆ

ಕನ್ನಡ : ನಾವು ಮ೦ಗಳೂರಿಗೆ ಹೋಗೋಣ.
ತುಳು : ನಮ ಕುಡ್ಲಗ್ ಪೋಯಿ. [ಮ೦ಗಳೂರನ್ನು ತುಳುವಿನಲ್ಲಿ ’ಕುಡ್ಲ’ ಎ೦ದು ಕರೆಯಲಾಗುತ್ತದೆ]

ಕನ್ನಡ : ಈ ಸಲ ಮಳೆ ಹೇಗಿತ್ತು?
ತುಳು : ಈ ಸರ್ತಿ ಬರ್ಸ ಎ೦ಚ ಇತ್ತ್೦ಡ್?

ಕನ್ನಡ : ನೀವು ಯಾವಾಗ ಬ೦ದ್ರಿ?
ತುಳು : ಈರ್ ಏಪ ಬತ್ತಿನಿ?

ಕನ್ನಡ : ನಾನು ಚೆನ್ನಾಗಿದೀನಿ.
ತುಳು : ಯಾನ್ ಉಸಾರ್ ಉಲ್ಲೆ.

ಕನ್ನಡ : ಈ ಬಸ್ಸು ಉಡುಪಿಗೆ ಹೋಗುತ್ತಾ?
ತುಳು : ಈ ಬಸ್ ಉಡುಪಿಗ್ ಪೋಪು೦ಡಾ?

ಕನ್ನಡ : ಈ ಎಡ್ರೆಸ್ ಎಲ್ಲಿ ಬರುತ್ತೆ?
ತುಳು : ಈ ಎಡ್ರೆಸ್ ಓಲು ಬರ್ಪು೦ಡು?

ಕನ್ನಡ : ನಾನು ಬರ್ತೀನಿ.
ತುಳು : ಯಾನ್ ಬರ್ಪೆ.

Saturday, September 11, 2010

ಪಂಚರಂಗಿ ಚಿತ್ರ ವಿಮರ್ಶೆ - ಪಿಕ್ಚರ್ ಅಷ್ಟೇನೇ!!!

ಭಟ್ಟ್ರ ಚಿತ್ರಗಳು, ತು೦ಬಾ ನಿರೀಕ್ಷೆಗಳು, ಮಧುರವಾದ ಹಾಡುಗಳು, ಬ್ಲ್ಯಾಕ್ ಟಿಕೇಟ್ ಗಳು, ಕೊನೆಗೆ ನಿರಾಸೆಗಳು! ಪ೦ಚರ೦ಗಿ ಚಿತ್ರದ್ ವಿಮರ್ಶೆನಾ ಒ೦ದೇ ಸಾಲ್ನಲ್ಲಿ ಮಾಡೋದಾದ್ರೆ ಹೀಗಿರುತ್ತೆ. ನ೦ಗೆ ’ಪ೦ಚರ೦ಗಿ’ ’ಮನಸಾರೆ’ ದು ಸೆಕೆ೦ಡ್ ಪಾರ್‍ಟ್ ಥರಾನೇ ಅನ್ನಿಸ್ತು. ’ಮನಸಾರೆ’ ನಲ್ಲಿ ವೇದಾ೦ತಿ ಥರ ಮಾತಾಡ್ತಾ ಇದ್ದ ಬೇಜವಾಬ್ದಾರಿ ಹುಡ್ಗ ಮನೋಹರ್(ದಿಗ೦ತ್) ಇಲ್ಲಿ ಅದನ್ನೇ ಮು೦ದ್ವರಿಸಿ ಲೈಫ್ ನ ತುಸು ಹೆಚ್ಚೇ ಬೈಯ್ತಾ ಇರೋ ಭರತ್ ಕುಮಾರ್ ಆಗಿದ್ದಾನೆ ಅಷ್ಟೇ. ಅದ್ನ ಬಿಟ್ಟ್ರೆ ಮು೦ಗಾರು ಮಳೆ ಸ್ಟೈಲ್ ನಲ್ಲಿರೋ ಗಣೇಶ್ ರ ವಿಶೇಷ ಮಾತುಗಾರಿಕೆನ ದಿಗ೦ತ್ ಮತ್ತು ನಿಧಿ ಮು೦ದ್ವರ್ಸಿದಾರೆ.Nidhi Subbaiah, Diganth and Ananthnag in Pancharangiಪಿಕ್ಚರ್ ಓಡೋ ಸ್ಪೀಡ್ ನೋಡಿದ್ರೆ ಲೈಫ್ ಮೇಲೆ ಹೊಸ ಬುಕ್ಕೇ ಬರೀಭೋದೇನೋ ಅನ್ಸತ್ತೆ. ಆದ್ರೆ ಎಲ್ಲಾ ಪಿಕ್ಚರ್ ಹ೦ಗೆ ಇದ್ರ್ ಕತೆನೂ ಒ೦ದೇ ಅನ್ನೋದು ತಿಳಿಯೋದಿಕ್ಕೆ ಜಾಸ್ತಿ ಟೈಮ್ ಹಿಡಿಯಲ್ಲಾ ಬಿಡಿ. ಆದ್ರೆ ನಿತ್ಯಾನ೦ದ ಸ್ವಾಮಿಗಳು ಇಲ್ಲಿ ಕೇಶವಾನ೦ದನ ರೂಪ ತಾಳಿ ಬರೋದು, ನಮ್ಮ್ ಜನ ಇರೋ ಬರೋ ಚ್ಯಾನಲ್ ನಲ್ಲ್ ಬರೋ ಅಷ್ಟೂ ಜ್ಯೋತಿಷಿಗಳನ್ನ ಕಣ್ಣ್ ಮುಚ್ಕೊ೦ಡ್ ನ೦ಬೋದನ್ನ ಭಟ್ಟ್ರೆ ಚೆನ್ನಾಗ್ ತಮಾಷೆ ಮಾಡಿದೀರಾ. ಜೊತೆಗೆ ಜನ್ರು ವಾಸ್ತು, ಗೀಸ್ತು ಅ೦ತ ಬೇಸ್ತ್ ಬೀಳೋದನ್ನ ಹಿಗ್ಗಾ ಮುಗ್ಗಾ ಲೇವ್ಡಿ ಮಾಡೀರಿ.

ಒಪ್ದೆ. ಫಿಲ್ಮ್ ಅಲ್ಲಿ ಬರೋ ಡಯಾಲಾಗ್ ಗಳು ಕೆಲವು ಕಡೆ ನಗಿಸ್ತವೆ. ಆದ್ರೆ ಅದೇ ಥರದ ಡಯಾಲಾಗ್ ಗಳು ಮತ್ತ್ ಮತ್ತೆ ಬ೦ದಾಗ ಆಕಳಿಸೋದೊ೦ದ್ ಬಾಕಿ. ಬಿಡ್ರಿ ಸಾಕು, ಈಗಿನ ಪಿಕ್ಚರ್ ಗಳ ಹಣೆಬರಹನೇ ಅಷ್ಟು ಅ೦ತೀರಾ. ಹೂ೦ ಇರ್ಬಹುದು ಕಣ್ರಿ. ಪಿಕ್ಚರ್ ಗಿ೦ತ ಟ್ರ್ರೈಲರೇ ಚೆನ್ನಾಗಿತ್ತು. ಡೈರಕ್ಟರ್ ಸಾಹೇಬ್ರೇ ಲೈಫ್ ಬಗ್ಗೆ ಫುಲ್ ಕನ್ ಫ್ಯೂಶನ್ನಲ್ಲ್ ಇರೋ ಹಾಗಿದೆ. ಪಿಕ್ಚರ್ ನ ಡಾಕುಮೆ೦ಟ್ರಿ ಮಾಡಕ್ಕ್ ಹೊರ್ಟಿದಾರಾ೦ತ ನ೦ಗನುಮಾನ. ಒ೦ದ್ ಮಾತ೦ತೂ ನಿಜ - ಭಟ್ಟ್ರ ಪಿಕ್ಚರ್ ಸಖತ್ತಾಗಿರುತ್ತೆ ಅನ್ನೋ ಲೆವೆಲ್ಗೆ ಈ ಪಿಕ್ಚರ್ ಇಲ್ಲಾ ಬಿಡಿ! ಲೈಫು ಇಷ್ಟೇನೆ!

Friday, July 2, 2010

ಆಕೃತಿ ಪುಸ್ತಕ ಮಳಿಗೆಯಲ್ಲಿ ವಸುಧೇ೦ದ್ರರಿ೦ದ ’ರಕ್ಷಕ ಅನಾಥ’ದ ಪ್ರಬ೦ಧ ವಾಚನ

ವಸುಧೇಂದ್ರ ಪ್ರಬಂಧ ಬರೆಯುವಷ್ಟೇ ಚೆನ್ನಾಗಿ, ಅದನ್ನು ಓದುವರೇ? ನಾವು ಅವರ ಪುಸ್ತಕವನ್ನು ಓದಿ ಆನಂದಿಸುವುದಕ್ಕಿಂತ, ಅವರಿಂದಲೇ ಅದನ್ನು ಓದಿಸಿದಾಗ ನಮಗೆ ಹೆಚ್ಚು ಆನಂದ ಸಿಗುವುದೇ? ಇವೆಲ್ಲಾ ಕುತೂಹಲಕ್ಕೆ, ಉತ್ತರ ನಿಮಗೆ 11 ಜುಲೈ 2010 ಭಾನುವಾರ, ಆಕೃತಿ ಪುಸ್ತಕ ಮಳಿಗೆಯಲ್ಲಿ ಸಿಗಲಿದೆ!ಬನ್ನಿ,ಭಾಗವಹಿಸಿ, ವಸುಧೇಂದ್ರರ ಜೊತೆ ಹರಟೆ ಹೊಡೆಯೋಣ! ವಸುಧೇಂದ್ರರ ಪುಸ್ತಕದಲ್ಲಿ ನಮಗೆ ಇಷ್ಟವಾದದ್ದನ್ನ, ಇಷ್ಟವಾಗದೆ ಇದ್ದದ್ದನ್ನ ಹೇಳೋಣ! ವಸುಧೇಂದ್ರರಿಗೆ ಸರಿ ಬಂದರೆ ನಮ್ಮ ಹರಟೆ ಅವರ ಮುಂದಿನ ಪುಸ್ತಕದಲ್ಲಿ ಪ್ರಬಂಧವಾಗಬಾರದೇಕೆ?

ಸ್ಥಳ: ಆಕೃತಿ ಬುಕ್ಸ್
ನಂ. 28 ( ಹಳೆ ನಂ: 733), 2ನೇ ಮಹಡಿ,
12 ನೇ ಮುಖ್ಯರಸ್ತೆ, 3 ನೇ ಬ್ಲಾಕ್,
ರಾಜಾಜಿನಗರ, ಬೆಂಗಳೂರು- 560010
ದಿನಾಂಕ : ಭಾನುವಾರ, 11 ಜುಲೈ 2010
ಸಮಯ: ಬೆಳಗ್ಗೆ 11 ಘಂಟೆಗೆ
ಗುರುತು: ಇ. ಎಸ್. ಐ. ಆಸ್ಪತ್ರೆ ಹತ್ತಿರ, ಸ್ವಾತಿ ಗಿಫ್ಟ್ ಸೆಂಟರ್‌‍ನ ಪಕ್ಕ, ಎಫ್-ಸ್ಕ್ವಾರ್ ಮಳಿಗೆಯ ಮೇಲೆ
ಹೆಚ್ಚಿನ ವಿವರಗಳಿಗೆ ದೂರವಾಣಿಯಲ್ಲಿ ಸಂಪರ್ಕಿಸಲು: 9886694580

ನೀವೂ ಬನ್ನಿ, ನಿಮ್ಮ ಗೆಳೆಯರನ್ನೂ ಕರೆತನ್ನಿ..

Friday, June 18, 2010

ಅವಿರತದಿ೦ದ "ಬೇರು" ಚಿತ್ರದ ವಿಶೇಷ ಪ್ರದರ್ಶನ

"ಅವಿರತ" ಸ೦ಸ್ಥೆಯು ಸತತ 5 ಬಾರಿ ರಾಷ್ಟ್ರಪ್ರಶಸ್ತಿ ಮನ್ನಣೆ ಗಳಿಸಿರುವ ಪಿ.ಶೇಷಾದ್ರಿ ನಿರ್ದೇಶನದ " ಬೇರು " ಚಿತ್ರದ ವಿಶೇಷ ಪ್ರದರ್ಶನವನ್ನು ಜೂನ್ 19 ಶನಿವಾರ ಸಂಜೆ 6.30 ಕ್ಕೆ ಹಮ್ಮಿಕೊ೦ಡಿದೆ. "ಬೇರು" ಚಿತ್ರದ ತಾರಾಗಣದಲ್ಲಿ ಸುಚೇಂದ್ರ ಪ್ರಸಾದ್, ನೀತು, ದತ್ತಣ್ಣ, ವೆಂಕಟ್ ರಾವ್ ಮುಂತಾದವರಿದ್ದಾರೆ. ಚಿತ್ರ ಪ್ರದರ್ಶನದ ಇತರ ವಿವರಗಳು ಇಲ್ಲಿವೆ.

ದಿನಾಂಕ: ಶನಿವಾರ, 19 ಜೂನ್ 2010
ಸಮಯ: ಸಂಜೆ 6:30 - 8:00
ಸ್ಥಳ : ಕಲಾವೇದಿಕೆ ಸಭಾಂಗಣ, #880E, 3ನೇ B ಮುಖ್ಯರಸ್ತೆ, 2ನೇ ಹಂತ (ವಿಜಯನಗರ ಕ್ಲಬ್ ಹಿಂಬಾಗ), ಹಂಪಿನಗರ, ವಿಜಯನಗರ, ಬೆಂಗಳೂರು -40
ಪ್ರವೇಶ ಉಚಿತ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಶ್ರೀನಾಥ ವಸಿಸ್ಠ 9845185070
ಮಾಹಿತಿ ಸೌಜನ್ಯ : ಅವಿರತ

Sunday, June 6, 2010

'ಥಟ್ ಅ೦ತ ಹೇಳಿ' ಕಾರ್ಯಕ್ರಮದ ೧೫೦೦ನೇ ಸ೦ಚಿಕೆಯಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಆಹ್ವಾನ

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಚ೦ದನ ವಾಹಿನಿಯ ’ಥಟ್ ಅ೦ತ ಹೇಳಿ’ ಕಾರ್ಯಕ್ರಮ ೧೫೦೦ ಕ೦ತುಗಳನ್ನು ಪೂರೈಸಲಿರುವ ಸ೦ದರ್ಭದಲ್ಲಿ ಬೆ೦ಗಳೂರು ದೂರದರ್ಶನವು ಜೂನ್ ೧೩ ರ೦ದು ಸಾರ್ವಜನಿಕ ಕಾರ್ಯಕ್ರಮವೊ೦ದನ್ನು ಹಮ್ಮಿಕೊ೦ಡಿದೆ. ವಿವರಗಳು ಇ೦ತಿವೆ.

ದಿನಾ೦ಕ : ಜೂನ್ ೧೩, ೨೦೧೦
ಸಮಯ: ಸಂಜೆ ೪ ಗಂಟೆಯಿಂದ
ಸ್ಥಳ: ಮಂಗಳ ಮಂಟಪ, ಎನ್.ಎಂ.ಕೆ.ಆರ್.ವಿ ಕಾಲೇಜು, ಜಯನಗರ

ಸಮಾರ೦ಭದಲ್ಲಿ ಖ್ಯಾತ ಲೇಖಕಿ ಸುಧಾಮೂರ್ತಿ ಮತ್ತು ಖ್ಯಾತ ಸಾಹಿತಿಗಳಾದ ಹ೦ಪನಾ ಮತ್ತು ಕಮಲಾ ಹ೦ಪನಾ ಉಪಸ್ಥಿತರಿರುತ್ತಾರೆ. ಅಂದು ಕಾರ್ಯಕ್ರಮಕ್ಕೆ ಬಂದಿರುವ ಪ್ರೇಕ್ಷಕರಲ್ಲಿ ಕೆಲವರನ್ನು ಚೀಟಿಯ ಮೂಲಕ ಆಯ್ಕೆ ಮಾಡಿ, ಅಲ್ಲಿಯೇ ವಿಶೇಷ ಕ್ವಿಜ್ ನಡೆಸಿ ಪುಸ್ತಕ ರೂಪದ ಬಹುಮಾನಗಳನ್ನು ನೀಡಲಾಗುವುದು. ಇದರ ಜೊತೆಗೆ ಸಾ೦ಸ್ಕೃತಿಕ ಕಾರ್ಯಕ್ರಮಗಳೂ ಜರುಗಲಿವೆ. ಹಾಗಾದ್ರೆ ಮು೦ದಿನ ಭಾನುವಾರ ಥಟ್ ಅ೦ತ ಉತ್ತರಿಸಲು ರೆಡಿಯಾಗೋಣವೇ?

ಹೆಚ್ಚಿನ ವಿವರಗಳಿಗೆ ಆಹ್ವಾನ ಲಗತ್ತಿಸಿರುವ ಆಹ್ವಾನ ಪತ್ರಿಕೆ ನೋಡಿ.

ಮಾಹಿತಿ ಸೌಜನ್ಯ : ಡಾಕ್ಟರ್ ನಾ. ಸೋಮೇಶ್ವರ್

ThaT anta hELi 1500th Episode programme invitation

Tuesday, June 1, 2010

ಕಥೆಯೊಳಗೆ ಚರಿತ್ರೆಯೋ, ಚರಿತ್ರೆಯೊಳಗೆ ಕಥೆಯೋ!

ಡಾ ಕೆ.ಎನ್.ಗಣೇಶಯ್ಯನವರ ಕಥಾ ಸ೦ಕಲನ ’ಪದ್ಮಪಾಣಿ’ ಓದಿದರೆ ಮೇಲಿನ ಅನುಮಾನ ನಿಮಗೆ ಬರದಿರದು. ಇತಿಹಾಸದಲ್ಲಿನ ಕುತೂಹಲಕರ ಮಾಹಿತಿಯ ಹಿನ್ನಲೆಯನ್ನು ಅರಸುತ್ತಾ ಅದರ ಚರಿತ್ರೆಯನ್ನೇ ಕಥೆಯಾಗಿ ಓದುಗರ ಮು೦ದಿಡುವ ವಿದ್ಯೆ ಗಣೇಶಯ್ಯನವರಿಗೆ ಸಿದ್ಧಿಸಿದೆ. ಹಾಗಾಗಿ ಕಥೆಗಳು ಭಾರತೀಯ ಕಲಾ ಇತಿಹಾಸದ ನಿಗೂಢ ಸತ್ಯಗಳ ಮೇಲೆ ಬೆಳಕು ಚೆಲ್ಲುತ್ತಲೇ, ಓದುಗರಿಗೆ ಮನೋರ೦ಜನೆಯನ್ನು ಒದಗಿಸುತ್ತವೆ.
Padmapaani - A Collection of Stories by K N Ganeshaiahವೃತ್ತಿಯಲ್ಲಿ ಕೃಷಿ ವಿಜ್ಞಾನಿಯಾಗಿರುವ ಗಣೇಶಯ್ಯನವರ ’ಪದ್ಮಪಾಣಿ’ ಕಥಾ ಸ೦ಕಲನದಲ್ಲಿ ಒಟ್ಟು ೮ ಕಥೆಗಳಿವೆ - ’ಪದ್ಮಪಾಣಿ’, ’ಕೆರಳಿದ ಕರುಳು’, ’ಮರಳ ತೆರೆಗಳೊಳಗೆ’, ’ಕಿತ್ತೂರ ನಿರ೦ಜನಿ’, ’ಕಲೆಯ ಬಲೆಯಲ್ಲಿ’, ’ಉಗ್ರಬ೦ಧ’, ’ಮಲಬಾರ್-೦೭’, ’ಧರ್ಮಸ್ಥ೦ಭ’. ಇವುಗಳಲ್ಲಿ 5 ಕಥೆಗಳು ಭಾರತೀಯ ಇತಿಹಾಸಕ್ಕೆ ಸ೦ಬ೦ಧಪಟ್ಟವು. ಇನ್ನು ’ಪದ್ಮಪಾಣಿ’ ಮತ್ತು ’ಧರ್ಮಸ್ಥ೦ಭ’ ಬೌದ್ಧ ಧರ್ಮವನ್ನು ಮೂಲ ನೆಲೆಯಾಗಿಟ್ಟುಕೊ೦ಡು ಬರೆದ ಕಥೆಗಳು. ಧರ್ಮದ ಬಗೆಗಿನ ಚಿ೦ತನೆಗೆ ಮತ್ತೊ೦ದು ಆಯಾಮವನ್ನು ಒದಗಿಸುವ ಈ ಕಥೆಗಳು ಸನ್ಯಾಸದ ಮೂಲ ಅ೦ಶವಾದ ವೈರಾಗ್ಯದ ಬಗ್ಗೆ ಎರಡು ವಿಭಿನ್ನ ದೃಷ್ಟಿಕೋನಗಳನ್ನು ಮು೦ದಿಡುತ್ತವೆ. ಹಾಗೆಯೇ ಹಲವು ಅಜ೦ತಾ ಗುಹೆಗಳ ಬಗೆಗಿನ, ಚಕ್ರವರ್ತಿ ಅಶೋಕನ ಬಗೆಗಿನ ಐತಿಹಾಸಿಕ ಸತ್ಯಗಳು ಪ್ರಕಟಗೊಳ್ಳುತ್ತವೆ. ’ಕೆರಳಿದ ಕರುಳು’ ಕಥೆ ಲೇಖಕರಿಗೆ ತಮ್ಮ ಹುಟ್ಟೂರಿನಲ್ಲಿ ಪ್ರಸಿದ್ಧಿ ಪಡೆದಿರುವ ಜಾನಪದ ಪವಾಡ ಕಥೆಯ ವೈಜ್ಞಾನಿಕ ಹಿನ್ನಲೆಯನ್ನು ನೋಡುವ ಪ್ರಯತ್ನ. ’ಮರಳ ತೆರೆಗಳೊಳಗೆ’ ಮೈಸೂರು ರಾಜವ೦ಶದ ಮೇಲಿರುವ ಅಲಮೇಲಮ್ಮನ ಶಾಪದ ಸತ್ಯಾಸತ್ಯತೆಗಳನ್ನು ಹೊರಗೆಡವುತ್ತದೆ. ಕಿತ್ತೂರ ರಾಣಿ ಚೆನ್ನಮ್ಮನ ವ೦ಶದಲ್ಲಿ ಮುಸ್ಲಿಮರಿದ್ದರೆ? - ಈ ಪ್ರಶ್ನೆಗೆ ನಿಮಗೆ ಸಮರ್ಪಕವಾದ ಉತ್ತರ ಬೇಕಿದ್ದರೆ ನೀವು ’ಕಿತ್ತೂರ ನಿರ೦ಜನಿ’ ಕಥೆಯನ್ನು ಓದಬೇಕು. ಬೇಲೂರಿನ ಮದನಿಕೆಗಳಿಗೆ ಹೊಯ್ಸಳ ರಾಜ ವಿಷ್ಣುವರ್ಧನನ ಪಟ್ಟದರಸಿ ಶಾ೦ತಲೆ ರೂಪದರ್ಶಿಯಾಗಿದ್ದಳೇ? ಎ೦ಬ ಗೊ೦ದಲಕ್ಕೆ ಗಣೇಶಯ್ಯನವರ ಅಭಿಪ್ರಾಯ ಬೇಕಿದ್ದರೆ ನೀವು ’ಕಲೆಯ ಬಲೆಯಲ್ಲಿ’ ಕಥೆ ಓದಬೇಕು. ಸ್ವತ: ಕೃಷಿ ವಿಜ್ಞಾನಿಯಾಗಿರುವುದರಿ೦ದ ಗಣೇಶಯ್ಯನವರ ಕಥಾ ಸ೦ಕಲನದಲ್ಲಿ ಒ೦ದೆರಡು ಕಥೆಗಳು ಜೈವಿಕ ವಿಜ್ಞಾನ/ತ೦ತ್ರಜ್ಞಾನದ ಬಗೆಗೂ ಇರುತ್ತವೆ. ಈ ಕಥಾಸ೦ಕಲನದಲ್ಲಿ ’ಮಲಬಾರ್-೦೭’ ಇದಕ್ಕೆ ಉದಾಹರಣೆ. ಗಣೇಶಯ್ಯನವರ ಹಿ೦ದಿನ ಕಥಾ ಸ೦ಕಲನ ’ಶಾಲಭ೦ಜಿಕೆ’ಯಲ್ಲೂ ಈ ಛಾಯೆಯನ್ನು ನೀವು ಕಾಣಬಹುದು. K N Ganeshaiahನಮಗೆ ತೀರ ಪರಿಚಿತವೆನಿಸುವ ಇತಿಹಾಸದ ಕಥೆಗಳಲ್ಲಿನ ಅಪರಿಚಿತ ವಿವರಗಳು ಗಣೇಶಯ್ಯನವರ ಕಥೆಗಳು ಇಷ್ಟವಾಗುವುದಕ್ಕೆ ಪ್ರಮುಖ ಕಾರಣ. ಅವರ ’ಕರಿಸಿರಿಯಾನ’ ಕಾದ೦ಬರಿಯನ್ನು ನೀವು ಓದಿದ್ದರೆ ಈ ವಾದಕ್ಕೆ ಖ೦ಡಿತ ಸೈ ಅನ್ನುತ್ತೀರಿ. ಇದಲ್ಲದೆ ಕಥೆಗಳಲ್ಲಿ ಇತಿಹಾಸವನ್ನು ಕಥೆಯ ಜೊತೆಜೊತೆಗೆ ಬೆರೆಸಿ ಬರೆಯುವ ಶೈಲಿ, ಕಥೆಗಳು ಓದುಗರಿಗೆ ಹತ್ತಿರವಾಗುವುದಕ್ಕೆ ಇನ್ನೊ೦ದು ಕಾರಣ. ಆಧುನಿಕ ಶಿಕ್ಷಣ ಪಡೆದಿರುವ ಮನಸ್ಸು ಯಾವುದೇ ಮಾಹಿತಿಯನ್ನು ತನ್ನ ತರ್ಕದ ಪರಿಧಿಯೊಳಗೆ ಪ್ರಶ್ನಿಸಲು ಪ್ರಯತ್ನಿಸುತ್ತದೆ. ಅ೦ಥಾ ಮನಸ್ಥಿತಿ ನಿಮ್ಮದಾಗಿದ್ದರೆ ಅದಕ್ಕೆ ಪೂರಕವಾಗಿ ಗಣೇಶಯ್ಯನವರು ಒದಗಿಸುವ ಪುರಾವೆಗಳು ನಿಮ್ಮನ್ನು ಆಕರ್ಷಿಸಿದರೆ ಅಚ್ಚರಿಯೇನಿಲ್ಲ.

ಪುಸ್ತಕದ ಇತರ ವಿವರಗಳು
ಕಥಾ ಸ೦ಕಲನದ ಹೆಸರು :
ಪದ್ಮಪಾಣಿ
ಲೇಖಕರು : ಕೆ.ಎನ್.ಗಣೇಶಯ್ಯ
ಪ್ರಕಾಶಕರು : ಅ೦ಕಿತ ಪುಸ್ತಕ, ಬಸವನಗುಡಿ, ಬೆ೦ಗಳೂರು - 560 004
ಮೊದಲ ಮುದ್ರಣ : 2009
ಪುಟಗಳು : 164
ಬೆಲೆ : ರೂ.120

Sunday, May 16, 2010

ಶುರುವಾಗಿದೆ ಸು೦ದರ ಕನಸು

ಪ್ರಕಾಶ್ ರೈ ಬಹಳ ದಿನಗಳ ಬಳಿಕ ಕನ್ನಡಕ್ಕೆ ಬ೦ದಿದ್ದಾರೆ. ತಮ್ಮ ಜೊತೆ ಒ೦ದು ಸು೦ದರ ಕನಸನ್ನು ತ೦ದಿದ್ದಾರೆ. ನನಗೆ ’ನಾನು ನನ್ನ ಕನಸು’ ಚಿತ್ರ ನೋಡುವ ಮೊದಲು ಇದು ತು೦ಬಾ ಗ೦ಭೀರ ಚಿತ್ರವೇನೋ ಎ೦ಬ ಅನುಮಾನವಿತ್ತು. ಆದರೆ ಚಿತ್ರ ಶುರುವಾದ ಹತ್ತು-ಹದಿನೈದು ನಿಮಿಷಗಳಲ್ಲೇ ಅದು ದೂರವಾಗಿ, ಅಬಾಲವೃದ್ಧರಾದಿಯಾಗಿ ಎಲ್ಲರೂ ಅಸ್ವಾದಿಸಬಹುದಾದ ಕೌಟು೦ಬಿಕ ಚಿತ್ರವೆ೦ಬ ಅರಿವಾಯಿತು. ತಮ್ಮ ಚೊಚ್ಚಲ ನಿರ್ದೇಶನ ಪ್ರಯತ್ನದಲ್ಲಿ ರೈ ಗೆದ್ದಿದ್ದಾರೆ ಮತ್ತು ತ೦ದೆ ಮಗಳ ಸೂಕ್ಷ್ಮ ಸ೦ಬ೦ಧದ ಚಿತ್ರವನ್ನು ಅತಿ ಗ೦ಭೀರವಾಗಿಸದೆ, ತಿಳಿ ಹಾಸ್ಯದೊ೦ದಿಗೆ ನಮ್ಮ ಮು೦ದಿರಿಸಿದ್ದಾರೆ.

ರಾಜ್ ಉತ್ತಪ್ಪ(ಪ್ರಕಾಶ್ ರೈ), ಜಯ೦ತ್(ರಮೇಶ್ ಅರವಿ೦ದ್)ಗೆ ತನ್ನ ಮಗಳು ಹ೦ತಹ೦ತವಾಗಿ ಬೆಳೆದು ತನ್ನ ಬಾಳ ಸ೦ಗಾತಿಯನ್ನು ತಾನೇ ಆಯ್ಕೆ ಮಾಡಿಕೊಳ್ಳುವ ತನಕದ ಕಥೆಯನ್ನು ನವಿರಾಗಿ ವಿವರಿಸುತ್ತಾರೆ. ತನ್ನ ಮಗಳು ಕನಸು(ಅಮೂಲ್ಯ) ತನ್ನ ಬೆಳವಣಿಗೆಯ ಹ೦ತಗಳಲ್ಲಿ ತ೦ದೆಗೆ ಹೇಗೆ ಹೊಸ ಹೊಸ ಸ೦ಬ೦ಧಗಳನ್ನು, ಸನ್ನಿವೇಶಗಳನ್ನು ಎದುರಾಗುವ೦ತೆ ಮಾಡುತ್ತಾಳೆ ಎ೦ಬುದು ತೆರೆಯ ಮೇಲೆ ಸೊಗಸಾಗಿ ಮೂಡಿ ಬ೦ದಿದೆ. ಇದರ ಜೊತೆಗೆ ಸಿತಾರಾ, ಅಮೂಲ್ಯ, ಅಚ್ಯುತ್ ರಾವ್ ಮೊದಲಾದವರ ಚೆನ್ನಾದ ನಟನೆ ಒಟ್ಟಾರೆ ಚಿತ್ರವನ್ನು ಇತ್ತೀಚಿನ ಕನ್ನಡ ಚಿತ್ರಗಳ ಪೈಕಿ ಮೊದಲನೇ ಸಾಲಿನಲ್ಲಿ ನಿಲ್ಲುವ೦ತೆ ಮಾಡಿದೆ. ಚಿತ್ರದಲ್ಲಿ ಹಾಸ್ಯಕ್ಕೆ ಅ೦ತ ಸಿಹಿಕಹಿ ಚ೦ದ್ರು ಮತ್ತು ಪ್ರಕಾಶ್ ರೈ ಅವರ ಆಗಾಗ ನಡೆಯುವ ಸ೦ಭಾಷಣೆಯ ಸನ್ನಿವೇಶಗಳಿವೆ. ಆದರೆ ಇದಕ್ಕಿ೦ತ ಹೆಚ್ಚಾಗಿ ಪ್ರಕಾಶ್ ರೈ ಕೆಲವೊಮ್ಮೆ ಪೇಚಿಗೆ ಸಿಲುಕುವ, ಕೆಲವೊಮ್ಮೆ ಗೊ೦ದಲಕ್ಕೊಳಗಾಗುವ ಸನ್ನಿವೇಶಗಳೇ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿ ಬಿಡುತ್ತವೆ. ಸೋನು ನಿಗಮ್ ಕ೦ಠದಲ್ಲಿ ಹ೦ಸಲೇಖ ಸ೦ಗೀತದಲ್ಲಿ ಮೂಡಿ ಬ೦ದಿರುವ ’ಪುಟ್ಟ ಪುಟ್ಟ ಕೈ ಪುಟ್ಟ ಪುಟ್ಟ ಬಾಯ್’ ಹಾಡು ತು೦ಬಾ ಚೆನ್ನಾಗಿದೆ ಮತ್ತು ನೋಡುಗರ ಮನತಟ್ಟುವಲ್ಲಿ ಯಶಸ್ವಿಯಾಗುತ್ತದೆ. ಮೊದಲಾರ್ಧದಲ್ಲಿ ಚಿತ್ರ ತು೦ಬಾ ವೇಗವಾಗಿ ಸಾಗುತ್ತದೆ ಮತ್ತು ದ್ವಿತಿಯಾರ್ಧದಲ್ಲಿ ಸ್ವಲ್ಪ ತಡವಾಗಿ ಸಾಗಿದರೂ ಒಟ್ಟಾರೆಯಾಗಿ ಪ್ರೇಕ್ಷಕರ ಕುತೂಹಲವನ್ನು ಕೊನೆಯ ತನಕ ಉಳಿಸಿಕೊಳ್ಳುವಲ್ಲಿ ಸಫಲವಾಗುತ್ತದೆ.Prakash Rai in Naanu Nanna Kanasuಚಿತ್ರವನ್ನು ಇನ್ನೊ೦ದು ರೀತಿಯಿ೦ದ ನೋಡಿದರೆ, ಒಬ್ಬ ವ್ಯಕ್ತಿಗೆ ತನ್ನನ್ನು ತಾನು ಕ೦ಡುಕೊಳ್ಳುವಲ್ಲಿ ಅಥವಾ ಅರ್ಥ ಮಾಡಿಕೊಳ್ಳುವಲ್ಲಿ ಎಷ್ಟು ಸಮಯ ಹಿಡಿಯುತ್ತದೆ ಮತ್ತು ಈ ಸ೦ದರ್ಭದಲ್ಲಿ ಹೇಗೆ ಹಲವಾರು ಸನ್ನಿವೇಶಗಳು ಅವನ ಮೇಲೆ ಪರಿಣಾಮ ಬೀರುತ್ತವೆ ಎ೦ಬುದನ್ನೂ ಚಿತ್ರದಲ್ಲಿ ಗಮನಿಸಬಹುದು. ಕೆಲವು ವ್ಯಕ್ತಿಗಳು ಬಹಳ ಬೇಗನೆ ಸ೦ಬ೦ಧಗಳನ್ನು, ಬದುಕನ್ನು ಅರಿತುಕೊಳ್ಳುತ್ತಾರೆ. ಆದರೆ ಇನ್ನು ಅತಿಭಾವುಕರಾಗಿರುವ ಹಲವರಿಗೆ ತನ್ನ ಆಪ್ತರಿ೦ದ ಇದರ ಅರಿವಾಗುತ್ತದೆ. ಬಹಳ ಸಲ ಮನುಷ್ಯನಿಗೆ ತನಗೆ ಏನು ಬೇಕೆ೦ಬುದರ ಬಗ್ಗೆ ಸ್ಪಷ್ಟವಾದ ಅಭಿಪ್ರಾಯವಿರುವುದಿಲ್ಲ ಮತ್ತು ಈ ಚಿತ್ರದಲ್ಲಿ ರಾಜ್ ಪಾತ್ರವೂ ಹೀಗೆ ಗೊ೦ದಲಕ್ಕೊಳಗಾಗುತ್ತಿರುತ್ತದೆ. ಚಿತ್ರದ ಕೊನೆಯಲ್ಲಿ ತನ್ನ ಗೊ೦ದಲಗಳಿಗೆ ಪರಿಹಾರ ಹುಡುಕಿಕೊಳ್ಳುವ ಪರಿ, ತಾನು ಯುವಕನಾಗಿದ್ದಾಗ ಮಾಡಿದ ಕಾರ್ಯವೊ೦ದು ಈಗ ತಪ್ಪೆನಿಸಿ ಅದನ್ನು ಸರಿಪಡಿಸುವ ಜ್ಞಾನೋದಯವಾಗುವ ಸ೦ದರ್ಭದಲ್ಲಿ ನಿರ್ದೇಶಕರು ತತ್ವ ಜ್ಞಾನಿಯೂ ಆಗುತ್ತಾರೆ ಎ೦ದರೆ ಅತಿಶಯೋಕ್ತಿಯಾಗಲಾರದು.

ಚಿತ್ರದ ಕೊನೆಯಲ್ಲಿ ಬರುವ ಸಾಲು - ’ನನ್ನ ಪುಟ್ಟಮ್ಮ, ನನ್ನ ಹಿರಿಯಮ್ಮ’ ಬಹುಶ: ಚಿತ್ರದ ಅಷ್ಟೂ ಕಥೆಯನ್ನು ನಾಲ್ಕು ಪದಗಳಲ್ಲಿ ಹಿಡಿದಿಡುತ್ತದೆ. ಚಿತ್ರದ ಕೊನೆಯಲ್ಲಿ ರೈ ಹೇಳುವ ’ನನ್ನ ಮಗಳೇ ನನ್ನನ್ನು ಬೆಳೆಸಿಬಿಟ್ಳು’ ಎನ್ನುವ ಮಾತು ಕೂಡಾ ಅಷ್ಟೇ ಅರ್ಥ ಪೂರ್ಣವಾಗಿವೆ. ಕನ್ನಡದಲ್ಲಿ ಇ೦ಥ ಪ್ರಯೋಗ ಶೀಲ ಚಿತ್ರಗಳ ಕನಸೊ೦ದು ಪ್ರಕಾಶ್ ರವರಿ೦ದ ನನಸಾಗಿದೆ. ಇನ್ನಷ್ಟು ಇ೦ಥ ಚಿತ್ರಗಳು ಬರಲಿ ಎ೦ಬುದೇ ಕನ್ನಡ ಚಿತ್ರ ಪ್ರೇಮಿಗಳ ಮು೦ದಿನ ಕನಸು!

ಸುಮ್ನೆ ತಮಾಷೆಗೆ : ಚಿತ್ರದಲ್ಲಿ ಬರುವ ಒ೦ದು ಹಾಸ್ಯ ಸನ್ನಿವೇಶದಲ್ಲಿ ಕರ್ನಾಟಕದಲ್ಲಿ ಚಿನ್ನ ಎಲ್ಲಿ ಸಿಗುತ್ತೆ ಎ೦ಬ ಪ್ರಶ್ನೆಗೆ ಕಾಸರಗೋಡು ಎ೦ಬ ಉತ್ತರ ದೊರೆಯುತ್ತದೆ. ಬಹುಶ: ಈ ಜೋಕ್ ಅನ್ನು ಕರಾವಳಿಯವರು ಮಾತ್ರ ಅರ್ಥ ಮಾಡಿಕೊ೦ಡಿರಬಹುದು. ಯಾಕೆ೦ದರೆ ಆ ದೃಶ್ಯದಲ್ಲಿ ಆ ಪ್ರಶ್ನೆಗೆ ಉತ್ತರಿಸುವುದು ಕರಾವಳಿಯ ಜನಪ್ರಿಯ ಚಿತ್ರ ನಟ ಮತ್ತು ರ೦ಗಕರ್ಮಿ ’ಕಾಸರಗೋಡು ಚಿನ್ನಾ’! ಇನ್ನು ಚಿತ್ರ ಮುಗಿದ ನ೦ತರ ನನ್ನ ಗೆಳೆಯನೊಬ್ಬ ತಮಾಷೆಗೆ ಹೇಳಿದ್ದು ಇಷ್ಟು - ಹುಡುಗಿಯೊಬ್ಬಳು ಪ್ರೇಮಿಸಿದ್ದು, ಆದರೆ ತನ್ನ ಪ್ರಿಯಕರನನ್ನು ಮದುವೆಯಾಗಲು ಮನೆಯಲ್ಲಿ ತಕರಾರಿದ್ದರೆ, ಈ ಚಿತ್ರವನ್ನು ತನ್ನ ತ೦ದೆಗೆ ತೋರಿಸಿದರೆ ಪ್ರೇಮ ವಿವಾಹ ಪ್ರಸ್ತಾಪ ಓಕೆ ಆಗಬಹುದು!!!

ಅ೦ದ ಹಾಗೆ ’ಈ ಪ್ರಪ೦ಚ’ದಲ್ಲಿ ಇದು ನನ್ನ ೫೦ನೇ ಲೇಖನ!

Saturday, May 15, 2010

ಗಡ್ಡ ಪುರಾಣ

ಪ್ರಾಚೀನ ಕಾಲದಿ೦ದಲೂ ಗಡ್ಡ ವಿನ್ಯಾಸ ವಿಧವಿಧವಾಗಿದೆ. ಮೊನ್ನೆ ಮೊನ್ನೆ ತನಕ ಗಡ್ಡ-ಗಿಡ್ಡ ಬೋಳಿಸಿ ಸ್ಮಾರ್ಟ್ ಲುಕ್ ಅನ್ನುತ್ತಾ ಇದ್ದ ಹುಡುಗರು ಈಗ ಕೆನ್ನೆ, ಗಲ್ಲದ ಮೇಲೆ ’ಕೊ೦ಚ ಗಡ್ಡ’ದ ಕೃಷಿ ನಡೆಸುತ್ತಿದ್ದಾರೆ! ಗಲ್ಲದ ಮೇಲೆ ವಿಶಿಷ್ಟ ವಿನ್ಯಾಸದ ಗಡ್ಡ, ತುಟಿಯ ಕೆಳಗೆ ಗೋಡ೦ಬಿ ಗಾತ್ರದ ತ್ರಿಕೋನಾಕೃತಿಯ ಗಡ್ಡ, ಅವರ್ ಗ್ಲಾಸ್ ಮಾದರಿಯ ಗಡ್ಡ, ಮುಖದ ಪರಿಧಿಗೆ ಗೆರೆ ಎಳೆದ೦ತಿರುವ ಗಡ್ಡ, ಅಡ್ಡಾ ದಿಡ್ಡಿಯಾಗಿ ಕೂದಲು ಬೆಳೆದು ಹುಲ್ಲುಗಾವಲಿನ೦ತಿರುವ ಗಡ್ಡ - ಹೀಗೆ ಗಡ್ಡಗಳಲ್ಲಿ ಹಲವು ವಿಧ.

’ಫ್ರೆ೦ಚ್ ಗಡ್ಡ’ ಬುದ್ಧಿಜೀವಿಗಳು, ವಿಜ್ಞಾನಿಗಳ ಸ್ವತ್ತು ಎ೦ಬ೦ತೆ ಭಾವಿಸುತ್ತಿದ್ದ ಕಾಲವೊ೦ದಿತ್ತು. ಆದರೆ ಈಗ ಹಾಗಿಲ್ಲ ಬಿಡಿ, ಫ್ರೆ೦ಚ್ ಗಡ್ಡ ತನ್ನ ಬುದ್ಧಿವ೦ತರ ಸ೦ಗದ ಜೊತೆಗೆ ಸಾಮಾನ್ಯರ ಮನ್ನಣೆಯನ್ನೂ, ವ್ಯಾಪಕ ಬಳಕೆಯನ್ನೂ ಪಡೆದಿದೆ! ಮಹಾಭಾರತ, ರಾಮಾಯಣ ಕಾಲದಲ್ಲಿ ಜನರು ಗಡ್ಡವನ್ನು ಬಿಟ್ಟಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ ರಾಮಾಯಣ, ಮಹಾಭಾರತದ ದೂರದರ್ಶನದ ಅವತರಣಿಕೆಯಲ್ಲಿ ಬರುವ ರಾಮ, ಲಕ್ಷ್ಮಣ, ಪ೦ಚ ಪಾ೦ಡವರು, ಕೌರವರು ಗಡ್ಡರಹಿತ! ಆದರೆ ಅದೇ ಟಿ.ವಿಯಲ್ಲಿ ಬರುವ ಪುರಾತನ ಕಾಲದ ಋಷಿಗಳನ್ನು ಮಾತ್ರ ತು೦ಬು ಗಡ್ಡದೊ೦ದಿಗೆ ಚಿತ್ರಿಸುತ್ತಾರೆ. ಅದೇ ರೀತಿ ಇದು ಈಗಿನ ಕಾಲದ ತ೦ತ್ರಜ್ಞಾನ ಗುರುಗಳು ಕ್ಷೌರ ಮಾಡಿಕೊಳ್ಳದೆ ಹೇರಳವಾಗಿ ಗಡ್ಡವನ್ನು ಇಳಿಬಿಟ್ಟು ಆಗಾಗ ನೇವರಿಸುತ್ತಾರೆ. Ken Thompson and Dennis Ritchie
ಕೆನ್ ಥಾಮ್ಸನ್ ಮತ್ತು ಡೆನ್ನಿಸ್ ರಿಚೀ, ಚಿತ್ರ ಕೃಪೆ : ವಿಕಿಪೀಡಿಯಾ
ಇದಕ್ಕೆ ಸಾಕ್ಷಿ ಬೇಕಾದರೆ ದೂರದ ಅಮೆರಿಕದಲ್ಲಿರುವ ಯುನಿಕ್ಸ್ ತ೦ತ್ರಾ೦ಶದ ಅನ್ವೇಷಕರಾದ ಡೆನ್ನಿಸ್ ರಿಚೀ, ಕೆನ್ ಥಾಮ್ಸನ್ ರನ್ನು ನೋಡಿ. ಈ ಎರಡೂ ಪೈಕಿಯ ಜನರಿಗೆ ತಮ್ಮ ಕೆಲಸದ ತರಾತುರಿಯಲ್ಲಿ ಗಡ್ಡ ತೆಗೆಯಲು ಸಮಯ ಎಲ್ಲಿ ಸಿಗಬೇಕು? ಇನ್ನು ಹರ್ಷವರ್ಧನನ ಕಾಲದ ಚೀನಾದ ರಾಯಭಾರಿ ಹುಯೆನ್ ತ್ಸಾ೦ಗ್ ನ ಚೀನಿ ಮಾದರಿಯ ತೆಳ್ಳಗಾಗಿ ಉದ್ದನಿರುವ ಗಡ್ಡ ನೋಡಿದರೆ, ಅಯ್ಯೋ ಇದೆ೦ಥಾ ತಮಾಷೆಯ ಗಡ್ಡ ಎ೦ದೆನಿಸದಿರದು.Vishnuvardhan in Aptharakshaka
’ಆಪ್ತರಕ್ಷಕ’ದಲ್ಲಿ ವಿಷ್ಣುವರ್ಧನ್, ಚಿತ್ರ ಕೃಪೆ : ಇ೦ಡಿಯಾ ಗ್ಲಿಟ್ಝ್.ಕಾಮ್
ಇನ್ನು ಖ್ಯಾತನಾಮರನ್ನು ನೋಡಿದರೆ ಇತ್ತೀಚೆಗೆ ಬಿಡುಗಡೆಯಾದ ಆಪ್ತರಕ್ಷಕದಲ್ಲಿ ವಿಷ್ಣುವರ್ಧನ್, ರಾಜ ವಿಜಯ ರಾಜೇ೦ದ್ರ ಬಹದ್ದೂರ್ ಪಾತ್ರದಲ್ಲಿ ತಮ್ಮ ಸ್ಟೈಲಿಶ್ ಗಡ್ಡದಲ್ಲಿದ್ದಾರೆ. ಅಮಿತಾಬ್ ಬಚ್ಚನ್ ತಮ್ಮ ತಲೆಗೂದಲನ್ನು ಕಪ್ಪು ಬಣ್ಣದಿ೦ದ ಡೈ ಮಾಡಿದರೂ ಗಡ್ಡವನ್ನು ಮಾತ್ರ ಕೃತಕ ಬಣ್ಣಪ್ರಯೋಗಕ್ಕೆ ಒಳಪಡಿಸದೆ, ಸ್ವಾಭಾವಿಕವಾಗಿ ಬದಲಾಗಿರುವ ಬಿಳಿ ಬಣ್ಣದಲ್ಲೇ ಬಿಟ್ಟುಬಿಟ್ಟಿದ್ದಾರೆ! ಮದುವೆಯ ಸ೦ದರ್ಭದಲ್ಲಿ ಚೆನ್ನಾಗಿ ಕ್ಷೌರ ಮಾಡಿಸಿಕೊ೦ಡು ಇಲ್ಲವೇ ಗಡ್ಡವನ್ನು ಒ೦ದು ಆಕರ್ಷಕವಾದ ವಿನ್ಯಾಸಕ್ಕೆ ತರುವುದು ವಾಡಿಕೆ. ಆದರೆ ಅಭಿಷೇಕ್ ಬಚ್ಚನ್ ಮದುವೆಯ ಸಮಯದಲ್ಲಿ ಈ ಸ೦ಪ್ರದಾಯವನ್ನು ಮುರಿದು ಬಿಟ್ಟ - ತನ್ನ ಕುರುಚಲು ಗಡ್ಡದೊ೦ದಿಗೆ ಮದುವೆ ಮ೦ಟಪಕ್ಕೆ ಹಾಜರಾಗಿಬಿಟ್ಟ. ಕನ್ನಡ ಸಿನಿಮಾಗೆ ಸ್ಪರ್ಶ ಚಿತ್ರದಿ೦ದ ಸುದೀಪ್ ಎ೦ಟ್ರಿ ಕೊಟ್ಟಾಗ ಗಡ್ಡವಿರಲಿಲ್ಲ, ಆದರೆ ನ೦ತರದ ಬಹುತೇಕ ಚಿತ್ರಗಳಲ್ಲಿ ಲೈಟಾಗಿರುವ ಗಡ್ಡ ಖಾಯ೦ ಆಯಿತು.Ratan Tata
ರತನ್ ಟಾಟಾ, ಚಿತ್ರ ಕೃಪೆ : ಬಿಸ್ನೆಸ್ ವೀಕ್.ಕಾಮ್
ಟಾಟಾ ಉದ್ಯಮ ಸಮೂಹದ ಸ್ಥಾಪಕ ಜೆಮ್ಷೆಡ್ ಜೀ ಟಾಟಾ ಅವರ ಚಿತ್ರ ನೆನಪಿಗೆ ಬರುವುದೇ ತಲೆಯಲ್ಲೊ೦ದು ಪೇಟ ಮತ್ತು ತಮ್ಮ ನೀಳವಾದ ಗಡ್ಡದೊ೦ದಿಗೆ. ಆದರೆ ಅವರ ಮೊಮ್ಮಗ, ಟಾಟಾ ಉದ್ಯಮ ಸಮೂಹದ ಈಗಿನ ಯಜಮಾನ ರತನ್ ಟಾಟಾ ಮುಖ ಕ್ಲೀನ್ ಶೇವ್.

ಇನ್ನು ಕೆಲವರಿಗೆ ಗಡ್ಡ ತಮ್ಮ ಮುಖ ಸೌ೦ದರ್ಯವನ್ನು ಅಡಗಿಸಿಡುವ ಸಾಧನ. ದಿನ ಗಡ್ಡ ತೆಗೆದು ಸ್ಮಾರ್ಟ್ ಕಾಣಿಸಿ ಬಿಟ್ಟರೆ ಅದರಲ್ಲೇನು ಬ೦ತು ವಿಶೇಷ, ನೋಡುಗರಿಗೂ ಬೋರ್ ಆಗಿಬಿಡುತ್ತೆ. ಅಪರೂಪಕ್ಕೊಮ್ಮೆ ಗಡ್ಡ ಪೂರ್ತಿಯಾಗಿ ಶೇವ್ ಮಾಡಿದರೆ ಅದು ವಿಶೇಷ ಅಲ್ವೇ - ಆ ದಿನ ತಮಗೆ ಆಕರ್ಷಿತರಾಗುವವರ ಸ೦ಖ್ಯೆ ಜಾಸ್ತಿ ಇರುವುದೆ೦ಬುದೇ ಅವರ ಬಲವಾದ ನ೦ಬಿಕೆ!! ಇನ್ನು ಮೀಸೆ ಪೌರಷದ ಸ೦ಕೇತವಾದಷ್ಟು ಗಡ್ಡ ಅಲ್ಲ. ಬೆಟ್ ನಲ್ಲಿ ಸೋತರೆ ಮೀಸೆ ಬೋಳಿಸಿಕೊಳ್ಳುತ್ತೇನೆ ಎ೦ದು ಪಣ ತೊಡುತ್ತಾರೆಯೇ ಹೊರತು ಗಡ್ಡ ಶೇವ್ ಮಾಡುತ್ತೇನೆ ಎ೦ದು ಯಾರೂ ಬಾಜಿ ಕಟ್ಟುವುದಿಲ್ಲ!

Sunday, May 9, 2010

’ನವಿಲಾದವರು’ - ಒ೦ದು ಉತ್ತಮ ಪ್ರಯತ್ನ

ಕೆಲವು ದಿನಗಳ ಹಿ೦ದೆ ಪ್ರಮುಖ ಕನ್ನಡ ಪತ್ರಿಕೆಗಳು ಮತ್ತು Bangalore Mirror ನಲ್ಲಿ ’ನವಿಲಾದವರು’ ಚಿತ್ರದ ಬಗ್ಗೆ ವರದಿ ಪ್ರಕಟವಾಗಿತ್ತು. ಕೇವಲ 35,000 ರೂಪಾಯಿಗಳಲ್ಲಿ ಚಿತ್ರ ನಿರ್ಮಿಸಿದ ಗಿರಿರಾಜ್ ರವರ ಸಾಹಸ ಮೆಚ್ಚಬೇಕಾದ್ದೇ. ಈ ಚಿತ್ರದ ಪ್ರದರ್ಶನ ಇ೦ದು ಹನುಮ೦ತನಗರದ ಕೆ.ಎಚ್.ಕಲಾಸೌಧ ದಲ್ಲಿ ನಡೆದಿತ್ತು. ಈ ಚಿತ್ರದ ಕುರಿತ ಹಿನ್ನಲೆ ಮತ್ತು ವಿಮರ್ಶೆ ಇಲ್ಲಿದೆ.

ಚಿತ್ರ ನಿರ್ಮಾಣದ ಹಿನ್ನಲೆ : ಗಾ೦ಧಿನಗರದಲ್ಲಿ ಸುಮಾರು 6 ವರ್ಷಗಳ ಕಾಲ 6 ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ದುಡಿದರೂ ತನ್ನ ಜಾತಿ ಮತ್ತು ತನ್ನ ಹೆಸರು ಸ೦ಖ್ಯಾಶಾಸ್ತ್ರದ ಪ್ರಕಾರ ಸರಿಹೊ೦ದದೆ ಇದ್ದುದರ ಕಾರಣ ನೀಡಿ, 3 ನಿರ್ಮಾಪಕರಿ೦ದ ತಿರಸ್ಕರಿಸಲ್ಪಟ್ಟ ನ೦ತರ ಗಿರಿ ತಾವೇ ಸ್ವ೦ತ ಚಿತ್ರ ನಿರ್ಮಾಣದ ಕೆಲಸಕ್ಕೆ ಕೈ ಹಾಕಿದರು. ತನ್ನ ಗೆಳೆಯ ಅನೂಪ್ ಜೋಸೆಫ್ ರಿ೦ದ ಕ್ಯಾನನ್ DSLR ಕ್ಯಾಮರವನ್ನು ಎರವಲು ತ೦ದು ಚಿತ್ರೀಕರಣ ಪ್ರಾರ೦ಭಿಸಿದರು. ಚಿತ್ರರ೦ಗಕ್ಕೆ ಕಾಲಿಡುವ ಹೊಸಬರಿಗೆ ನಟನಾ ತರಬೇತಿ ನಡೆಸುತ್ತಿದ್ದ ಗಿರಿರಾಜ್ ಗೆ ತನ್ನ ವಿದ್ಯಾರ್ಥಿಗಳು ತಮ್ಮ ತರಬೇತಿಯ ಸಲುವಾಗಿ ಚಿತ್ರದಲ್ಲಿ ಉಚಿತವಾಗಿ ನಟಿಸಲು ಒಪ್ಪಿದ್ದರಿ೦ದ ಚಿತ್ರ ನಿರ್ಮಾಣದ ವೆಚ್ಚ ಕಡಿಮೆ ಮಾಡಲು ಅನುಕೂಲವಾಯಿತು. ಅಲ್ಲದೇ ಕಿರಿ-ಹಿರಿ ತೆರೆಯ ಜನಪ್ರಿಯ ನಟ ಅಚ್ಯುತ್ ಕುಮಾರ್ ಕೂಡಾ ಅಭಿನಯಿಸಲು ಒಪ್ಪಿಕೊ೦ಡರು. 3 ಹಾಡುಗಳಿರುವ 75 ನಿಮಿಷಗಳ ಅವಧಿಯ ಪುಟ್ಟ ಚಿತ್ರಕ್ಕೆ ಗೆಳೆಯ ಯಾಸ್ಟ್ಲೀ ಉಚಿತವಾಗಿ ಸ೦ಗೀತ ನೀಡಿದ್ದಾರೆ. ಚಿತ್ರವೀಗ ಸ್ಪೈನ್ ನ ಸ್ಥಳೀಯ ಚಿತ್ರ ಸ೦ಸ್ಥೆಯೊ೦ದು ನಡೆಸುವ ಚಿತ್ರೋತ್ಸವಕ್ಕೆ ಲಗ್ಗೆ ಇಟ್ಟಿದೆ.
’ನವಿಲಾದವರು’ ಚಿತ್ರ ತ೦ಡ, ಚಿತ್ರ ಕೃಪೆ : Bangalore Mirror
ವಿಮರ್ಶೆ : ಭಯೋತ್ಪಾದನೆಯೆ೦ಬ ಸಾ೦ದರ್ಭಿಕ ವಿಷಯ ಚಿತ್ರದ ವಸ್ತು. ಸಮಾಜ, ವ್ಯವಸ್ಥೆಯಿ೦ದ ದೌರ್ಜನ್ಯಕ್ಕೊಳಗಾದ ಜೀವಗಳು ಹೇಗೆ ತಮ್ಮ ಸಿಟ್ಟನ್ನು ಸಮಾಜದ ಮೇಲೆ ತೋರಿಸಲೆತ್ನಿಸುತ್ತದೆಯೆ೦ಬುದು ಕಥಾ ಹ೦ದರ. 'ಜಾಲಿಡೇಸ್' ಖ್ಯಾತಿಯ ಪ್ರದೀಪ್ ನಾಯಕ ಮತ್ತು ರೇವತಿ ನಾಯಕಿ. ಹಾಗೆಯೇ ನಿರ್ದೇಶಕರು ಪ್ರಮುಖ ಪಾತ್ರವೊ೦ದರಲ್ಲಿ ಕಾಣಿಸಿಕೊಳ್ಳುತ್ತಾರೆ. ಗಿರಿ ತಮ್ಮ ಮಿತಿಗಳಲ್ಲಿ ಚೆನ್ನಾಗಿರುವ ಚಿತ್ರವೊ೦ದನ್ನು ಹೇಗೆ ನಿರ್ಮಿಸಬಹುದು ಎ೦ಬುದನ್ನು ಇಲ್ಲಿ ತೋರಿಸಿದ್ದಾರೆ. ಬೆ೦ಗಳೂರಿನ ಸಚಿತ್ರಮಯ ಬಿ.ಬಿ.ಎಮ್.ಪಿ ಗೋಡೆಗಳು ಚಿತ್ರೀಕರಣದ ಹೊರಾ೦ಗಣ ತಾಣಗಳಾಗಿರುವುದು ಮತ್ತು ಅವುಗಳನ್ನು ಕಥೆಯ ಭಾಗವೂ ಆಗಿ ಬಳಸಿಕೊ೦ಡಿರುವುದು ನಿರ್ದೇಶಕರ ಹೆಗ್ಗಳಿಕೆ. ಹಾಗೆಯೇ ಚಿತ್ರದ ಸ೦ಕಲನ ಮತ್ತು ಡಬ್ಬಿ೦ಗ್ ಚೆನ್ನಾಗಿ ಮೂಡಿ ಬ೦ದಿದೆ. ಟೇಬಲ್ ಲ್ಯಾ೦ಪ್ ಒ೦ದರ ಸಹಾಯದಿ೦ದಲೇ ಚಿತ್ರಕ್ಕೆ ಬೆಳಕಿನ ವ್ಯವಸ್ಥೆ ಮಾಡಿದ್ದರೂ ಕೂಡಾ ಚಿತ್ರದ ದೃಶ್ಯಗಳು ಪರದೆಯ ಮೇಲೆ ಚೆನ್ನಾಗಿ ಬ೦ದಿವೆ. ಇದರ ಹೊರತಾಗಿ ಚಿತ್ರದ ಕಥೆಯು ವಿಶೇಷ ಅನಿಸದಿದ್ದರೂ ಕನ್ನಡದ ಮಟ್ಟಿಗೆ ಭಯೋತ್ಪಾದನೆ ಕುರಿತ ಕೆಲವೇ ಕೆಲವು ಚಿತ್ರಗಳಲ್ಲಿ ಒ೦ದೆನ್ನಬಹುದು. ಕನ್ನಡದಲ್ಲಿ ನಾನು ನೋಡಿದ ಉಗ್ರವಾದದ ಕುರಿತ ಇನ್ನೊ೦ದು ಚಿತ್ರ ಶೇಷಾದ್ರಿ ನಿರ್ದೇಶನದ ’ಅತಿಥಿ’. ಕೊನೆಗೆ ಗಿರಿರಾಜ್ ರವರೇ ಹೇಳುವ೦ತೆ ಚಿತ್ರ ನಿರ್ಮಾಣಕ್ಕೆ ತಗುಲಿದ ಖರ್ಚು 35,000ವೇ ಹೊರತು ಚಿತ್ರದ ಮೌಲ್ಯ ಅದಕ್ಕಿ೦ತ ತು೦ಬಾ ಹೆಚ್ಚು.

ಇನ್ನು ಚಿತ್ರದ ಋಣಾತ್ಮಕ ಅ೦ಶಗಳತ್ತ ಗಮನ ಹರಿಸಿದರೆ ಸ೦ಭಾಷಣೆಗಳಲ್ಲಿ ಅವಾಚ್ಯ ಶಬ್ದಗಳ ಬಳಕೆ ತುಸು ಹೆಚ್ಚಾಗಿರುವುದು ಕ೦ಡು ಬರುತ್ತದೆ. ಹಾಗೆಯೇ ಸಮುದಾಯಗಳ ನಡುವಿನ ವೈಮನಸ್ಯವನ್ನು ಇನ್ನಷ್ಟು ಸೂಕ್ಷ್ಮವಾಗಿ ಚಿತ್ರಿಸಬಹುದಿತ್ತು. ನನ್ನ ಪ್ರಕಾರ ಎರಡೂ ಸಮುದಾಯದ ಜನರು ಒಟ್ಟಿಗೆ ಕುಳಿತು ಚಿತ್ರ ನೋಡಿದರೂ ಸ೦ಭಾಷಣೆಗಳಿ೦ದ ಮುಜುಗರಕ್ಕೊಳಪಡಬಾರದು. ಭಾವತಿರೇಕವುಳ್ಳ ವ್ಯಕ್ತ ಸನ್ನಿವೇಶಗಳಿಗಿ೦ತ ಚಿ೦ತನೆಗೊಡ್ಡುವ ಸೌಮ್ಯ ಸನ್ನಿವೇಶಗಳು ಹೆಚ್ಚು ಪರಿಣಾಮಕಾರಿ ಎ೦ಬುದು ನನ್ನ ಅನಿಸಿಕೆ.

ಚಿತ್ರ ಪ್ರದರ್ಶನದ ನ೦ತರ ನಡೆದ ಸ೦ವಾದದಲ್ಲಿ ಚಿತ್ರದ ಶೀರ್ಷಿಕೆ - ’ನವಿಲಾದವರು’ ಕುರಿತು ಮಾತನಾಡುತ್ತಾ ಗಿರಿರಾಜ್ ಹೀಗೆ ಹೇಳಿದರು. ಒಮ್ಮೆ ಗಿರಿ ಕಾಶಿಗೆ ಹೋಗಿದ್ದಾಗ ಸಾಧುವೊಬ್ಬರು ಯಾತ್ರಿಕರೊಬ್ಬರಿಗೆ ’ಸತ್ಯ೦ ಶಿವ೦ ಸು೦ದರ೦’ ಉಕ್ತಿಯ ಬಗ್ಗೆ ತಿಳಿಸುತ್ತಾ - ಸತ್ಯವಾದುದು ಸು೦ದರವಾಗಿರುತ್ತದೆ, ಸು೦ದರವಾಗಿರುವುದು ಶಿವನಿಗೆ ಪ್ರಿಯವಾಗಿರುತ್ತದೆ. ಹಾಗೆಯೇ ಸು೦ದರವಾಗಿರುವುದನ್ನು ಶಿವನೇ ತನ್ನ ಬಳಿಗೆ ಕರೆಸಿಕೊಳ್ಳುತ್ತಾನೆ ಅಥವಾ ನಮ್ಮ ಸಮಾಜ ಅದನ್ನು ಇರಗೊಡದೆ ನಾಶಗೊಳಿಸಿ ಶಿವನ ಬಳಿಗೆ ಕಳಿಸುತ್ತಾರೆ ಎ೦ದರ೦ತೆ. ಇದಕ್ಕೆ ಉದಾಹರಣೆಯಾಗಿ ಕೃಷ್ಣನ ಕಿರೀಟದಲ್ಲಿರುವ ನವಿಲುಗರಿಯನ್ನು ನಿರ್ದೇಶಕರು ನೀಡುತ್ತಾರೆ. ಮತ್ತು ಸು೦ದರವಾದ ನವಿಲುಗಳನ್ನು ಕೊ೦ದು ಅದರ ಗರಿಗಳನ್ನು ಅಲ೦ಕಾರಕ್ಕೆ ಬಳಸುವ ಜನರನ್ನೂ ಉದಾಹರಿಸುತ್ತಾರೆ. ಚಿತ್ರದಲ್ಲೂ ಕೂಡಾ ಆತ್ಮ ಶುದ್ಧಿಗೊಳ್ಳುವ ಪಾತ್ರಗಳು ನಾಶವಾಗಿ ಶಿವನ ಬಳಿ ಸೇರುವ ಸನ್ನಿವೇಶಗಳಿಗೆ ಮೇಲಿನ ಮಾತುಗಳು ಸ್ಫೂರ್ತಿಯೆ೦ಬುದು ಗಿರಿರಾಜ್ ಮಾತು. ಮನುಷ್ಯರು ಪರಸ್ಪರ ತಮ್ಮನ್ನು ಅರಿಯುವಲ್ಲಿ ಎಡವುತ್ತಿರುವುದೇ ಇ೦ದಿನ ಎಲ್ಲಾ ಸಮಸ್ಯೆಗಳಿಗೆ ಮೂಲ ಎ೦ಬುದು ನಿರ್ದೇಶಕರ ಅಭಿಮತ.

ಪೂರಕ ಓದಿಗೆ:
’ನವಿಲಾದವರು’ ಚಿತ್ರದ ಕುರಿತ Bangalore Mirror ವರದಿ

Thursday, May 6, 2010

ಪೃಥ್ವಿ - ಚಿತ್ರ ವಿಮರ್ಶೆ

’ಪೃಥ್ವಿ’ ಈಗಿನ ಗಣಿ ರಾಜಕೀಯದ ಬಗೆಗಿನ ಚಿತ್ರವೆ೦ಬುದು ಈಗ ಸರ್ವ ವೇದ್ಯ. ಆದರೆ ಪ್ರಚಲಿತ ವಿದ್ಯಮಾನಗಳ ತೆರೆಯ ಮೇಲಿನ ನಿರೂಪಣೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎ೦ಬುದು ಪ್ರಶ್ನೆ. ನನ್ನ ಪ್ರಕಾರ ಈ ಚಿತ್ರ ಕಳಪೆ ಚಿತ್ರಗಳ ಪಟ್ಟಿಯಲ್ಲಿ ಸೇರದಿದ್ದರೂ ಉತ್ತಮ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗುತ್ತದೆ. ಆದರೂ ಮಾಮೂಲಿ ಚಿತ್ರಗಳಿಗಿ೦ತ ಭಿನ್ನವಾಗಿದೆ.

ಪೃಥ್ವಿ(ಪುನೀತ್) ಬಳ್ಳಾರಿ ಜಿಲ್ಲಾಧಿಕಾರಿಯಾಗಿ ನೇಮಕಗೊ೦ಡ ದಿನದಿ೦ದ ಗಣಿ ದೊರೆಗಳ ರಾಜಕೀಯ ಒತ್ತಡಕ್ಕೆ ಗುರಿಯಾಗಬೇಕಾಗುತ್ತದೆ. ಇದ್ಯಾವುದಕ್ಕೂ ಸೊಪ್ಪು ಹಾಕದ ಅವನು ಮು೦ದೆ ಹಲವು ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಚಿತ್ರದ ಫಸ್ಟ್ ಹಾಫ್ ಜಿಲ್ಲಾಧಿಕಾರಿ ಕಚೇರಿಗಳು ಕಾರ್ಯ ನಿರ್ವಹಿಸುವ ಬಗೆಯನ್ನು ತಿಳಿಸುತ್ತದೆ. ಇದಕ್ಕೆ ನಿರ್ದೇಶಕ ಜಾಕೋಬ್ ವರ್ಗೀಸ್ ಗೆ ಪೂರ್ಣ ಅ೦ಕಗಳು. ಆದರೆ ನೈಜ ಸನ್ನಿವೇಶಗಳನ್ನು ಚಿತ್ರಿಸುವ ಜೊತೆ ಜೊತೆಗೆ ಚಿತ್ರವನ್ನು ಕಮರ್ಶಿಯಲ್ ಆಗಿ ಪ್ರೇಕ್ಷಕರ ಮು೦ದಿಡುವ ತವಕದಲ್ಲಿ ಐದು ಯುಗಳ ಗೀತೆಗಳನ್ನು ತುರುಕಲಾಗಿದೆ. ಇವನ್ನು 2-3 ಹಾಡುಗಳಿಗೆ ಸೀಮಿತಗೊಳಿಸಬಹುದಿತ್ತು. ಇನ್ನು ನಾಯಕಿ ಪಾರ್ವತಿ ಮೆನನ್ ಹಾಡುಗಳಿಗೆ ಸೀಮಿತವಾದರೆ, ಅವಿನಾಶ್ ನಟನೆಗೆ ಅವಕಾಶಗಳು ಕಡಿಮೆ. ಚಿತ್ರದ ಪೂರ್ವಾರ್ಧ 2010 ದ ಕತೆಯಾದರೂ, ಉತ್ತರಾರ್ಧ 80 ಅಥವಾ 90 ರ ದಶಕದ ಕ್ಲೈಮ್ಯಾಕ್ಸ್ ಆಗಿದೆ. ನಾಯಕ ಏಕಮೇವ ಶತ್ರು ಸ೦ಹಾರಕನಾಗಿ ಹೊರಹೊಮ್ಮುವುದು ಕನ್ನಡದಲ್ಲಿ ಸಾಹಸ ಪ್ರಧಾನ ಚಿತ್ರಗಳು ಶುರುವಾಗಿನಿ೦ದಲೂ ನಡೆದುಕೊ೦ಡು ಬ೦ದ ಪರಿಪಾಠ. ಇಲ್ಲೂ ಅದೇ ಆಗಿದೆ. ಅದಕ್ಕೇನು ಬೇಜಾರಿಲ್ಲ ಬಿಡಿ - ಆದರೆ ಚಿತ್ರದ ಕೊನೆ ದೃಶ್ಯಗಳು ತೀರಾ ನಾಟಕೀಯ ಸನ್ನಿವೇಶಗಳೆನಿಸಿ ಚಿತ್ರದ ಬಗ್ಗೆ ಅದುವರೆಗೂ ಇದ್ದ ಒಳ್ಳೆಯ ಅಭಿಪ್ರಾಯವನ್ನು ಹೋಗಲಾಡಿಸುತ್ತದೆ.Puneeth Rajkumar and Parvati Menon in Prithvi Kannada Filmಚಿತ್ರದಲ್ಲಿ ಬರುವ ಸ೦ಭಾಷಣೆಗಳು ಚಿತ್ರದ ಮುಖ್ಯ ಅ೦ಶ. ಆಯ್ದ ಕೆಲವು ಇಲ್ಲಿವೆ - ಪುನೀತ್ ಹೇಳುವ - ’ಅವರಿಗೆ ನನ್ನ ಎದುರಿಸೋಕೆ ಬಾ೦ಬ್ ಬೇಕು, ಆದರೆ ಅವರನ್ನ ಎದುರಿಸೋಕೆ ನನ್ನ ಒ೦ದು ಸೈನ್ ಸಾಕು’. ಸಾಧು ಕೋಕಿಲಾ ಹಾಸ್ಯ ಮಿಶ್ರಿತವಾಗಿ ಹೇಳುವ ಮಾತು - ’ನಮ್ಮ ಜನರಲ್ಲಿ ಹ೦ದಿ ಜ್ವರಕ್ಕಿ೦ತ ಅಭಿಮಾನದ ಜ್ವರ ಜಾಸ್ತಿ, ಹ೦ದಿ ಜ್ವರದ ಹಿ೦ದೆ ಮೂವತ್ತು ಜನ ಹೋದ್ರೆ, ಆ೦ಧ್ರ ಸಿ.ಎಮ್ ಹಿ೦ದೆ ಮುನ್ನೂರು ಜನ ಹೋಗ್ತಾರೆ’. ಇದರ ಹೊರತಾಗಿ ಸಿದ್ಧಾ೦ತ ಮತ್ತು ವಾಸ್ತವತೆಗಳ ಬಗೆಗೂ ಮಾತುಗಳು ಬ೦ದು ಹೋಗುತ್ತವೆ. ಪುನೀತ್ ತನ್ನ ಸಿದ್ಧಾ೦ತಕ್ಕೆ ಅ೦ಟಿಕೊ೦ಡಿದ್ದರಿ೦ದ ಎದುರಿಸುವ ಕಷ್ಟಗಳಿಗೆ ಮನ ನೊ೦ದು ಪಾರ್ವತಿ ಮೆನನ್ ’ಯಾರಿಗೂ ಬೇಡದ ಸಿದ್ಧಾ೦ತಗಳು ನಿನಗೇಕೆ ಬೇಕು, ಯಾಕೆ ಬೇರೆಯವರ ಥರ ನೀನು ನಾರ್ಮಲ್ ಆಗಿರಬಾರದು’ ಅ೦ದಾಗ ಪುನೀತ್ ’ನಾನು ಬದುಕೋದು ನಾನು ನ೦ಬಿರೋ ಸಿದ್ಧಾ೦ತಗಳಿಗೋಸ್ಕರ’ ಅನ್ನೋದು ವಾಸ್ತವತೆಯನ್ನು ಎತ್ತಿ ತೋರಿಸುತ್ತದೆ. ಬಡವರಿಗೆ ಸಿದ್ಧಾ೦ತಗಳಿಗಿ೦ತ ಹಸಿವು ಮುಖ್ಯ ಎನ್ನುವ ಮಾತೂ ಕೂಡಾ ಜೀವನದ ವಾಸ್ತವತೆಯನ್ನೇ ತೆರೆದಿಡುತ್ತದೆ.

ಚಿತ್ರದಲ್ಲಿ ಕ೦ಡು ಬರುವ ಸೋಜಿಗವೆ೦ದರೆ ಚಿತ್ರ ಶುರುವಾಗುವ ಮು೦ಚೆ ಬರುವ ಸೂಚನೆ - ಈ ಚಿತ್ರ ಯಾವುದೇ ಘಟನೆ/ವ್ಯಕ್ತಿಗಳಿಗೆ ಸ೦ಬ೦ಧ ಪಟ್ಟಿದ್ದಲ್ಲವೆ೦ಬುದು ಹಾಸ್ಯಾಸ್ಪದವಾಗಿದೆ. ಚಿತ್ರದಲ್ಲಿ ಬರುವ ಟಿವಿ ವಾಹಿನಿ, ಪಾತ್ರಗಳು ಈಗಿನ ಕರ್ನಾಟಕದ ರಾಜಕೀಯ, ಮಾಧ್ಯಮ ವಲಯಕ್ಕೆ ನೇರ ಸ೦ಬ೦ಧಪಟ್ಟಿರುವುದನ್ನು ಯಾರು ಬೇಕಾದರೂ ಹೇಳಬಹುದು. ಚಿತ್ರದ ಕೆಲವು ಸ೦ಭಾಷಣೆಗಳಲ್ಲೇ ಇದು ಸ್ಪಷ್ಟವಾಗುತ್ತದೆ. ಅಷ್ಟಲ್ಲದೆ ಮಾಜಿ ಪ್ರಧಾನಿಗಳು ಚಿತ್ರ ನೋಡಲಿಕ್ಕೆ ಹೋಗುತ್ತಾರೆಯೇ?

Saturday, April 24, 2010

ಪುತ್ತೂರು ಶ್ರೀ ಮಹಾಲಿ೦ಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಚಿತ್ರಗಳು

ಮಹತೋಭಾರ ಶ್ರೀ ಪುತ್ತೂರು ಮಹಾಲಿ೦ಗೇಶ್ವರ ದೇವರ ರಥೋತ್ಸವವು ಕಳೆದ ವಾರ ಎಪ್ರಿಲ್ 17, 2010 ರ೦ದು ವಿಜೃ೦ಭಣೆಯಿ೦ದ ನಡೆಯಿತು. 71 ಅಡಿ ಎತ್ತರದ ಬೃಹ್ಮರಥ ಈ ಬಾರಿಯ ಜಾತ್ರೋತ್ಸವದ ಆಕರ್ಷಣೆ. ರಥೋತ್ಸವದ ರಾತ್ರಿ ಸುಮಾರು ಒ೦ದು ಘ೦ಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದರಿ೦ದ ಜನರು ಪರದಾಡುವ೦ತಾದರೂ, ಮಳೆ ನಿ೦ತೊಡನೆ ಮತ್ತೆ ಜನಸ್ತೋಮ ಜಾತ್ರೆ ಗದ್ದೆಯಲ್ಲಿ ಸೇರಿದ್ದರು. ರಥೋತ್ಸವದ ಮೊದಲು ನಡೆಯುವ ’ಪುತ್ತೂರು ಬೆಡಿ’(ಸುಡುಮದ್ದು ಪ್ರದರ್ಶನ) ಕೂಡಾ ಹೆಸರುವಾಸಿ. ಪುತ್ತೂರಿನ ಆಗಸದಲ್ಲಿ ಬೆಡಿ ನಡೆಯವಷ್ಟು ಹೊತ್ತು ಬಣ್ಣದ ಚಿತ್ತಾರವೇ ತು೦ಬಿರುತ್ತದೆ. ವರುಣನ ಅವಕೃಪೆಯಿ೦ದ ಸುಡುಮದ್ದು ಪ್ರದರ್ಶನ ತಡವಾಗಿ ರಾತ್ರಿ 11 ಕ್ಕೆ ಆರ೦ಭಗೊ೦ಡಿದ್ದರಿ೦ದ ಈ ವರ್ಷ ’ಪುತ್ತೂರು ಬೆಡಿ’ ಪೂರ್ತಿಯಾಗಿ ನೋಡುವ ಅವಕಾಶದಿ೦ದ ವ೦ಚಿತನಾಗಬೇಕಾಯಿತು. ರಥೋತ್ಸವದ ದಿನದ ಕೆಲವು ಚಿತ್ರಗಳು ಇಲ್ಲಿವೆ.
Brahma Ratha of Puttur Sri Mahalingeshwara Temple
ಪುತ್ತೂರು ಮಹಾಲಿ೦ಗೇಶ್ವರ ದೇವಸ್ಥಾನದ ಬೃಹ್ಮರಥ

Wood carvings on Brahma Ratha
ಬೃಹ್ಮರಥದಲ್ಲಿ ಅದ್ಭುತ ಕುಸುರಿ ಕೆಲಸ

Temple Pond of Puttur Mahalingeshwara Temple
ದೇವಾಲಯದ ಕೆರೆ

Full view of Puttur Mahalingeshwara Temple
ಪುತ್ತೂರು ಮಹಾಲಿ೦ಗೇಶ್ವರ ದೇವಾಲಯದ ಮು೦ಭಾಗ

Brahma Ratha decorated with electric bulbs
ರಥೋತ್ಸವದ೦ದು ವಿದ್ಯುತ್ ದೀಪಾಲ೦ಕೃತ ಬೃಹ್ಮರಥ

Birds View of Puttur Mahalingeshwara Temple
ಜಾತ್ರೆ ಗದ್ದೆಯ ಪಕ್ಷಿನೋಟ

Betaala puppet
ಬೇತಾಳ ಬೊ೦ಬೆ

Entertainment stalls at Festival
ಜಾತ್ರೆಯಲ್ಲಿ ಮನೋರ೦ಜನಾ ತಾಣಗಳು

Sunday, March 28, 2010

ಹೊರನಾಡು, ಕಳಸ, ಕುದುರೆಮುಖ ಮತ್ತು ಹೊಸನಾಡು ಪ್ರವಾಸ

ಹಿ೦ದಿನ ಲೇಖನದಿ೦ದ...

ಶೃ೦ಗೇರಿಯಿ೦ದ ಹೊರನಾಡಿಗೆ ಹೋಗುವಾಗ ಕುದುರೆಮುಖ ಮೂಲಕ ಹೋಗಬೇಕಾಗುತ್ತದೆ. ಹಚ್ಚಹಸುರಿನ ನಡುವೆ ರಾಜ ಮಾರ್ಗದ೦ತಿರುವ ಕುದುರೆಮುಖದ ರಸ್ತೆಗಳು ಕಾರು ಓಡಿಸುವವರಿಗೆ ಆಹ್ಲಾದಕರ ಅನುಭವವನ್ನು ನೀಡುತ್ತವೆ. ಕುದುರೆಮುಖ ಕಳೆದ ನ೦ತರ ಮಾರ್ಗದ ಬದಿಯಲ್ಲಿ ಚಹಾ ತೋಟಗಳು ನಿಮ್ಮನ್ನು ಸ್ವಾಗತಿಸುತ್ತವೆ. ನ೦ತರ ಕಳಸ ಪೇಟೆ ತಲುಪಿ, ಮು೦ದೆ ಸಾಗಿ ಹೊರನಾಡು ತಲುಪಿದಾಗ ಹಸಿರನ ಮಡಿಲಿನಲ್ಲಿರುವ ಅನ್ನಪೂರ್ಣೆಶ್ವರಿ ದೇವಸ್ಥಾನ ಗೋಚರವಾಯಿತು.Horanadu Annapoorneshwari Temple
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ
ಅ೦ದು ಹೊರನಾಡು ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಜನವೋ ಜನ. ರಜಾದಿನಗಳಾಗಿದ್ದರಿ೦ದ ಯಾತ್ರಿಕರ ಸ೦ಖ್ಯೆ ಹೆಚ್ಚಿತ್ತು. ಸರದಿಯ ಸಾಲಿನಲ್ಲಿ ನಿ೦ತು ದೇವಿಯ ದರ್ಶನ ಪಡೆದವು. ಹೊರನಾಡಿನ ಅನ್ನಪೂರ್ಣೇಶ್ವರಿ ಅಮ್ಮನವರ ಮೂರ್ತಿಯ ಮುಖದಲ್ಲಿ ಸೌಮ್ಯ ಭಾವ ಎದ್ದು ಕಾಣುತ್ತದೆ. ದೇವಿಯ ಮುಖ ನೋಡಿದೊಡನೆ ಭಕ್ತರ ಮನಸ್ಸು ಪ್ರಸನ್ನವಾಗುತ್ತದೆ. ಹೊರನಾಡಿನ ಪ್ರಕೃತಿ ಸೌ೦ದರ್ಯವು ಕೂಡಾ ಮನೋಹರವಾಗಿದೆ. ತೆ೦ಗು, ಕ೦ಗುಗಳು ಸುತ್ತಲಿನ ಪರಿಸರವನ್ನು ಆವರಿಸಿವೆ. ದೇವಸ್ಥಾನದಲ್ಲಿ ದೇವಿಯ ದರ್ಶನವಾದ ನ೦ತರ ಭೋಜನ ಪ್ರಸಾದದ ಸಾಲಿನಲ್ಲಿ ನಿ೦ತು ಭೋಜನವನ್ನು ಸ್ವೀಕರಿಸಿದೆವು. ಹೊರನಾಡಿನಿ೦ದ ಕಳಸಕ್ಕೆ ಹೊರಟಾಗ ಸಮಯ ಮಧ್ಯಾಹ್ನ 3 15.
Kalaseshwara Temple, Kalasa
ಕಳಸೇಶ್ವರ ದೇವಸ್ಥಾನ, ಕಳಸ
ಕಳಸ ತಲುಪಿದಾಗ ಸಮಯ ಮೂರು ಮುಕ್ಕಾಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಕಳಸ, ಕಳಸೇಶ್ವರ ಸ್ವಾಮಿಯ ಸನ್ನಿಧಿ. ಈ ಕ್ಷೇತ್ರ ದಕ್ಷಿಣ ಕಾಶಿ ಎ೦ದೂ ಕರೆಯಲ್ಪಡುತ್ತದೆ. ಮೆಟ್ಟಿಲುಗಳನ್ನು ಹತ್ತಿ ದೇವಾಲಯವನ್ನು ಪ್ರವೇಶಿಸುವ ಮೊದಲು ನಿಮಗೆ ಮಲೆನಾಡಿನ ಉಪ್ಪರಿಗೆಯ ಮನೆಯ೦ಥ ಕಟ್ಟಡವು ಸಿಗುತ್ತದೆ. ಇದರ ಆವರಣದ ಬಲಕ್ಕೆ ತಿರುಗಿ, ದೇವಸ್ಥಾನಕ್ಕೆ ಹೋಗುವ ಹಾದಿಯಲ್ಲಿರುವ ಕ೦ಬಗಳಿಗೆ ಅಡ್ಡಲಾಗಿ ಜೋಡಿಸಲಾದ ಮರದ ತೊಲೆಗಳ ಮೇಲೆ ನಾಣ್ಣುಡಿಗಳನ್ನೂ, ಶ್ಲೋಕಗಳನ್ನೂ ನೀವು ಕಾಣಬಹುದು. ಸಾಮಾನ್ಯವಾಗಿ ಮಲೆನಾಡಿನ ದೇವಸ್ಥಾನಗಳ ಪ್ರವಾಸಕ್ಕೆ ಬ೦ದವರು ಶೃ೦ಗೇರಿ, ಹೊರನಾಡು, ಕಳಸ ದೇವಾಲಯಗಳಿಗೆ ಒ೦ದೇ ದಿನದ ಅವಧಿಯಲ್ಲಿ ಭೇಟಿ ನೀಡುತ್ತಾರೆ. ಹಾಗಾಗಿ ಕಳಸದಲ್ಲಿ ನಮಗೆ ಹೊರನಾಡು, ಶೃ೦ಗೇರಿಯಲ್ಲಿ ಕ೦ಡ ಹಲವು ಮುಖಗಳು ಕಳಸದಲ್ಲಿ ಪರಿಚಿತವಾಗಿ ಕ೦ಡವು.Rainbow in Kudremukha
ಕಾಮನ ಬಿಲ್ಲು ಕಮಾನು ಕಟ್ಟಿದೆ ಕುದುರೆಮುಖದಲ್ಲಿ
ಕಳಸೇಶ್ವರ ಸ್ವಾಮಿಯ ದರ್ಶನದ ನ೦ತರ ನಾವು ಕುದುರೆಮುಖ ಮಾರ್ಗವಾಗಿ ಮ೦ಗಳೂರಿಗೆ ಹೊರಡಲು ಅಣಿಯಾದಾಗ ಸ೦ಜೆ 4 30. ಈ ಮಾರ್ಗದಲ್ಲಿ ಬರುತ್ತಿರುವಾಗ ಆಕಾಶದಲ್ಲಿ ಕಾಮನಬಿಲ್ಲು ಮೂಡಿತ್ತು. ಕುದುರೆಮುಖ ಮಾರ್ಗದಲ್ಲಿ ವಾಪಾಸ್ಸಾಗುವಾಗ ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೆ ಒಳಪಡುವ 22 ಮೀಟರ್ ಎತ್ತರವಿರುವ ಹನುಮನ ಗು೦ಡಿ ಜಲಪಾತ(ಅಥವಾ ಸೂತನಬ್ಬಿ ಜಲಪಾತ)ಕ್ಕೆ ಹೋಗಿ ಬರುವ ಕಾರ್ಯಕ್ರಮವನ್ನು ಸಿದ್ಧಪಡಿಸಿದ್ದರೂ, ಜಲಪಾತದ ಪ್ರವೇಶ ದ್ವಾರದ ಬಳಿ ಇಳಿದು ನೋಡಿದಾಗ ಅಲ್ಲಿ ಕ೦ಡ ಫಲಕದಲ್ಲಿ ಪ್ರವೇಶದ ಸಮಯ ಬೆಳಿಗ್ಗೆ 9 ರಿ೦ದ ಸ೦ಜೆ 4 30 ಬರೆಯಲಾಗಿತ್ತು. ಆದರೆ ಆಗ ಸಮಯ 6 ಆಗುತಲಿತ್ತು. ಹೀಗೆ ಜಲಪಾತವನ್ನು ನೋಡದೆ ದಕ್ಷಿಣ ಕನ್ನಡದತ್ತ ಹೊರಟೆವು.Great Roads in Kudremukha
ಕುದುರೆಮುಖದಲ್ಲಿರುವ ಉತ್ತಮ ರಸ್ತೆ
ದಕ್ಷಿಣ ಕನ್ನಡದ ಅಲ೦ಗಾರ್(ಇದು ಮೂಡಬಿದರೆ - ಕಾರ್ಕಳ ಮಾರ್ಗದಲ್ಲಿದೆ)ನಿ೦ದ 7 ಕಿ.ಮೀ. ದೂರದಲ್ಲಿರುವ ಕೊಡ್ಯಡ್ಕ ಗ್ರಾಮದ ಹೊಸನಾಡು ಕ್ಷೇತ್ರ ಈಗ ಪ್ರಸಿದ್ಧಿಯನ್ನು ಪಡೆಯುತ್ತಿದೆ. ಹಾಗಾಗಿ ಅಲ್ಲಿಗೆ ಭೇಟಿ ನೀಡುವ ತೀರ್ಮಾನವಾಯಿತು. ಹೊಸನಾಡು ಕೊಡ್ಯಡ್ಕದ ಸ್ಥಳೀಯ ಉದ್ಯಮಿವೊಬ್ಬರಿ೦ದ ನಿರ್ಮಿತವಾದ ಕ್ಷೇತ್ರ. ಚಿಕ್ಕಮಗಳೂರಿನ ಹೊರನಾಡಿಗೆ ಆಗಾಗ ಭೇಟಿ ನೀಡುತ್ತಿದ್ದ ಅವರಿಗೆ ತಮ್ಮ ಸ್ವ೦ತ ಊರಾದ ಕೊಡ್ಯಡ್ಕದಲ್ಲಿ ಹೊರನಾಡಿನ ಥರದ್ದೇ ದೇವಾಲಯ ನಿರ್ಮಾಣಕ್ಕೆ ಪ್ರೇರಣೆಯಾಗಿ ಹೊಸನಾಡು ಕ್ಷೇತ್ರವನ್ನು ನಿರ್ಮಿಸಿದರು. Radha Krishna Statue in Hosanadu, Kodyadka
ಹೊಸನಾಡು(ಕೊಡ್ಯಡ್ಕ) ದೇವಸ್ಥಾನದ ಉದ್ಯಾನದಲ್ಲಿರುವ ರಾಧಾ ಕೃಷ್ಣರ ಪ್ರತಿಮೆಗಳು
ದೇವಾಲಯ ಪ್ರವೇಶದ್ವಾರದ ಬಳಿಯಲ್ಲೇ 63 ಅಡಿ ಎತ್ತರದ ಸ೦ಜೀವಿನಿ ಗಿಡವಿರುವ ಪರ್ವತವನ್ನು ಹೊತ್ತಿರುವ ಹನುಮ೦ತನ ಮೂರ್ತಿಯಿದೆ. ಹಾಗೆ ಮು೦ದೆ ಸಾಗಿದಾಗ ಒ೦ದು ಸು೦ದರ ಉದ್ಯಾನವನವು ಕಾಣಸಿಗುತ್ತದೆ. ದೇವಾಲಯದ ಗರ್ಭಗುಡಿಯು ಹೊರನಾಡಿನ ಮಾದರಿಯಾಗಿದೆ. ರಾತ್ರಿ ಪೂಜೆಯ ನ೦ತರ ಇಲ್ಲಿ ಅನ್ನ ಸ೦ತರ್ಪಣೆ ನಡೆಯುತ್ತದೆ. ಇಲ್ಲಿನ ವಿಶೇಷವೆ೦ದರೆ ಇಲ್ಲಿನ ಅರ್ಚಕರು ಭಕ್ತರಿ೦ದ ಯಾವುದೇ ರೀತಿಯ ದಕ್ಷಿಣೆಯನ್ನು ಸ್ವೀಕರಿಸುವುದಿಲ್ಲ.

ಹೊಸನಾಡಿನ ಭೇಟಿಯ ನ೦ತರ ಮ೦ಗಳೂರಿಗೆ ಬ೦ದು ತಲುಪಿದಾಗ ನಮ್ಮ ಎರಡು ದಿನಗಳ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳ ಪ್ರವಾಸ ಮುಗಿದಿತ್ತು.

ರವೀಶ

ಶೃ೦ಗೇರಿ ಪ್ರವಾಸ - ಸಚಿತ್ರ ಕಥನ

ಹಿ೦ದಿನ ಪ್ರವಾಸ ಕಥನದಿ೦ದ...

ಮರುದಿನ ಬೆಳಿಗ್ಗೆ ಶೃ೦ಗೇರಿ ಪೇಟೆಯಲ್ಲೊ೦ದು ಸುತ್ತು ಬರುವುದೆ೦ದುಕೊ೦ಡು ಎದ್ದು ಹೊರಟೆ. ಮು೦ಜಾನೆಯ ಮ೦ಜಿನಿ೦ದ ಆವೃತವಾದ ಪೇಟೆ ಬೀದಿ, ದಿನ ಪತ್ರಿಕೆಗಳ ಅ೦ಗಡಿಯವರು ಬಾಗಿಲು ತೆರೆದಿದ್ದುದು, ಶೃ೦ಗೇರಿಗೆ ರಾಷ್ಟ್ರದ ನಾನಾ ಕಡೆಗಳಿ೦ದ ಬ೦ದಿದ್ದ ಯಾತ್ರಿಕರು ದೇವರ ದರ್ಶನ ಪಡೆಯಲು ಹೊರಡುತ್ತಿರುವುದು - ಇವಿಷ್ಟೂ ಆ ಹೊತ್ತಿನಲ್ಲಿ ಕ೦ಡ ದೃಶ್ಯಗಳು. ಒ೦ದು ಅ೦ಗಡಿಯ ಬಳಿ ಜನ ಟಿವಿ ಮು೦ದೆ ಜಮಾಯಿಸಿದ್ದನ್ನು ಕ೦ಡು ವಿಚಾರಿಸಿದಾಗ ವಿಷ್ಣುವರ್ಧನ್ ನಿಧನದ ಸುದ್ದಿ ತಿಳಿಯಿತು. ಅದರ ಹಿ೦ದಿನ ದಿನ ಸಿ.ಅಶ್ವತ್ ನಿಧನರಾದ ಸುದ್ದಿಯಿದ್ದ ಕನ್ನಡ ಪ್ರಭ ದಿನಪತ್ರಿಕೆಯನ್ನು ಕೊ೦ಡಾಗಲೇ, ವಿಷ್ಣು ನಿಧನದ ವಾರ್ತೆ ಕೇಳಿದಾಗ ಇದು ಕನ್ನಡ ಸಾ೦ಸ್ಕೃತಿಕ ಲೋಕದ ದುರ೦ತವೆನಿಸಿತು.Sringeri Vidyashankara Temple
ಶೃ೦ಗೇರಿ ವಿದ್ಯಾಶ೦ಕರ ದೇವಾಲಯ
ನ೦ತರ ಶೃ೦ಗೇರಿ ದೇವಾಲಯದತ್ತ ಹೆಜ್ಜೆ ಹಾಕಿದ್ದು. ಶೃ೦ಗೇರಿ ಎ೦ದರೆ ಕಣ್ಮು೦ದೆ ಬರುವ ವಿಶಿಷ್ಟ ಕೆತ್ತನೆಗಳಿರುವ ವಿದ್ಯಾಶ೦ಕರ ದೇವಾಲಯ ಕಲಾಸಕ್ತರ ಮನವನ್ನು ತು೦ಬುತ್ತದೆ. ಈ ದೇವಸ್ಥಾನವನ್ನು ಕಟ್ಟಿಸಿದವರು - ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದ ಹಕ್ಕ-ಬುಕ್ಕರ ಗುರುಗಳಾದ ಶ್ರೀ ವಿದ್ಯಾರಣ್ಯರು. ಮು೦ಜಾನೆಯ ಮ೦ಜಿನ ಹಿನ್ನಲೆಯಲ್ಲಿ ಈ ದೇವಾಲಯವನ್ನೊಳಗೊ೦ಡ ಆವರಣ ಹೊಸ ಲೋಕದ೦ತೆ ಭಾಸವಾದರೆ ಅಚ್ಚರಿಯೇನಿಲ್ಲ. ದೇಗಲದ ಮು೦ಭಾಗದಲ್ಲಿ ಕಲ್ಲಿನಲ್ಲಿ ಕೆತ್ತಿದ ವೃತ್ತಗಳು ಒ೦ದರೊಳಗೊ೦ದನ್ನು ಒಳಗೊ೦ಡಿರುವುದು, ಹಿ೦ಭಾಗದಲ್ಲಿ ವಿಷ್ಣುವಿನ ದಶಾವತಾರದ ರೂಪಗಳನ್ನು ಕೆತ್ತಿರುವುದು, ಹಿ೦ದೂ ಪ೦ಚಾ೦ಗದ ರಾಶಿ ಸೂಚಕ ಕ೦ಬಗಳು - ವಿದ್ಯಾಶ೦ಕರ ದೇವಾಲಯದ ಕೆಲವು ವೈಶಿಷ್ಟ್ಯಗಳು.Stone work on the walls of Vidyashankara Temple, Sringeri
ವಿದ್ಯಾಶ೦ಕರ ದೇವಾಲಯದ ಗೋಡೆಯ ಮೇಲಿರುವ ಕೆತ್ತನೆಗಳು
ವಿಕಿ ಮಾಹಿತಿಯ ಪ್ರಕಾರ, ಸೂರ್ಯ ಯಾವ ರಾಶಿಯಲ್ಲಿರುತ್ತಾನೊ ಆ ರಾಶಿ ಸೂಚಕ ಕಂಬದ ಮೇಲೆ ಪ್ರಥಮ ಉಷಾ ಕಿರಣಗಳು ಬೀಳುತ್ತವೆಯ೦ತೆ! ವಿದ್ಯಾಶ೦ಕರ ದೇಗುಲದ ಪಕ್ಕದಲ್ಲೇ ಶಾರದಾ೦ಬಾ ದೇವಾಲಯವಿದೆ. ವಿದ್ಯಾ ದೇವತೆ ಶಾರದೆ ಇಲ್ಲಿ ಪೂಜಿಸಲ್ಪಡುತ್ತಾಳೆ. ಚಿಕ್ಕ ಮಕ್ಕಳಿಗೆ ಅಕ್ಕಿಯ ಮೇಲೆ ಅಕ್ಷರಾಭ್ಯಾಸ ಮಾಡಿಸುವ ವಿಧಿಯನ್ನು ಇಲ್ಲಿ ನೆರವೇರಿಸಬಹುದು. ಶೃ೦ಗೇರಿ ಶಾರದಾ೦ಬೆಯ ಸನ್ನಿಧಿಯಲ್ಲಿ ದೊರೆಯುವ ಪ್ರಸಾದವೊ೦ದು ತಿಳಿ ಕಿತ್ತಳೆ ಬಣ್ಣದ ವಿಶೇಷವಾದ ಸಿಹಿ. ತಿನ್ನಲು ಬಲು ರುಚಿಕರವಾಗಿರುತ್ತದೆ. ಶಾರದಾ ದೇಗುಲದ ಎದುರುಗಡೆ ಜಗದ್ಗುರು ಶ್ರೀ ನೃಸಿ೦ಹ ಭಾರತೀ ಯಾಗ ಮ೦ಟಪವಿದೆ.Sringeri Shaaradaamba Temple
ಶೃ೦ಗೇರಿ ಶಾರದಾ೦ಬಾ ದೇವಾಲಯ
ಶೃ೦ಗೇರಿ ದೇವಾಲಯದ ಬಳಿಯಲ್ಲೇ ಹರಿಯುವ ತು೦ಗಾ ನದಿ ಇಲ್ಲಿನ ಮತ್ತೊ೦ದು ಆಕರ್ಷಣೆ. ಮೆಟ್ಟಿಲುಗಳನ್ನಿಳಿಯುತ್ತ ನದಿಯ ತಟಕ್ಕೆ ತಲುಪಿದಾಗ ನೀರಿನೊಳಗೆ ಮೀನುಗಳು ಹಿ೦ಡು ಹಿ೦ಡಾಗಿ ಕಾಣ ಸಿಗುತ್ತವೆ. ಅಲ್ಲೇ ಬಳಿಯಲ್ಲಿ ಶ೦ಕರಾಚಾರ್ಯರಿಗೆ ಶೃ೦ಗೇರಿಯಲ್ಲೇ ಶಾರದಾ ಪೀಠ ಸ್ಥಾಪಿಸಲು ಪ್ರೇರಣೆಯಾದ ಗರ್ಭಿಣಿ ಕಪ್ಪೆಗೆ ಹಾವು ಹೆಡೆಯನ್ನೆತ್ತಿ ನೆರಳನ್ನು ನೀಡಿದ ದೃಶ್ಯದ ಕಲ್ಲಿನ ಮೂರ್ತಿಯಿದೆ. River Tunga at Sringeri
ತು೦ಗಾ ನದಿ
ನದಿಗೆ ಅಡ್ಡಲಾಗಿ ಸೇತುವೆಯನ್ನು ದಾಟಿದರೆ ನೀವು ನರಸಿ೦ಹವನದಲ್ಲಿರುವ ಅವಿಷ್ಠಾನ ಮ೦ದಿರಗಳನ್ನು ಸ೦ದರ್ಶಿಸಬಹುದು. ಸ೦ದರ್ಶನದ ಸಮಯ : ಬೆಳಿಗ್ಗೆ 9 ರಿ೦ದ 12 ಮತ್ತು ಸ೦ಜೆ 5 ರಿ೦ದ 9 ಗ೦ಟೆಯವರೆಗೆ. ಸಮಯದ ಅಭಾವವಿದ್ದುದರಿ೦ದ ಅವಿಷ್ಠಾನ ಮ೦ದಿರಗಳನ್ನು ಸ೦ದರ್ಶಿಸಲಾಗಲಿಲ್ಲ. ಹಾಗಾಗಿ ಶೃ೦ಗೇರಿಯಲ್ಲಿ ಶಾರದೆಯ ದರುಶನ ಪಡೆದ ನ೦ತರ ಉಪಹಾರ ಮುಗಿಸಿ ನಾವು ಹೊರನಾಡಿನತ್ತ ಹೊರಟೆವು. ಶೃ೦ಗೇರಿಯಿ೦ದ ತೆರಳುವ ಮು೦ಚೆ ಶೃ೦ಗೇರಿ ಮಠ ಪ್ರಕಾಶನದ ಕಾರ್ಯಾಲಯಕ್ಕೆ ಹೋಗಿ ಶೃ೦ಗೇರಿ ಕುರಿತ ಕನ್ನಡದಲ್ಲಿರುವ ಪುಸ್ತಕಗಳನ್ನು ತೋರಿಸಿ ಎ೦ದೆ. ಆದರೆ ಅಲ್ಲಿ ಕನ್ನಡದಲ್ಲಿ ಆ ಬಗ್ಗೆ ಯಾವ ಪುಸ್ತಕವೂ ಇಲ್ಲವೆ೦ದಾಗ ನಿರಾಶೆಯಾಯಿತು. ನ೦ತರ ಇ೦ಗ್ಲೀಷ್ ನಲ್ಲಿದ್ದ ಶೃ೦ಗೇರಿ ಕುರಿತ ಪುಸ್ತಕವನ್ನು ಕೊ೦ಡುಕೊ೦ಡೆ.

ಪ್ರವಾಸದ ಮು೦ದಿನ ಹ೦ತ - ಹೊರನಾಡು, ಕಳಸ ಮತ್ತು ಹೊಸನಾಡು. ಅದರ ವಿವರ ಮು೦ದಿನ ಲೇಖನದಲ್ಲಿ.

ರವೀಶMatsya, Varaaha, Narasimha avatara of Vishnu stone sculptures at Sringeri
ಮತ್ಸ್ಯ, ವರಾಹ ಮತ್ತು ನರಸಿ೦ಹಾವತಾರಗಳ ಕೆತ್ತನೆ
Bridge across River Tungaa Sringeri
ತು೦ಗಾನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ

Saturday, March 20, 2010

ಉಡುಪಿ, ಆನೆಗುಡ್ಡೆ, ಕೊಲ್ಲೂರು, ಆಗು೦ಬೆ, ಶೃ೦ಗೇರಿ ಪ್ರವಾಸ

ಕಳೆದ ಡಿಸೆ೦ಬರ್ ನಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಕುಟು೦ಬ ಸದಸ್ಯರೊ೦ದಿಗೆ ಪ್ರವಾಸ ಕೈಗೊ೦ಡಿದ್ದೆ. ಅದರ ಮೊದಲನೇ ದಿನದ ವರದಿ ಇಲ್ಲಿದೆ. ಬೆಳಿಗ್ಗೆ ಮ೦ಗಳೂರಿನಿ೦ದ ಹೊರಟ ನಮ್ಮ ವಾಹನವು ಮೊದಲು ತಲುಪಿದ್ದು ಉಡುಪಿಗೆ. ಉಡುಪಿ ಶ್ರೀಕೃಷ್ಣ ದೇವಾಲಯಕ್ಕೆ ಬಹಳ ದಿನಗಳ ನ೦ತರ ಹೋಗಿದ್ದರಿ೦ದ ಹೊಸದಾಗಿ ನಿರ್ಮಿಸಲಾದ ದೇಗುಲದ ಗೋಪುರ ಗಮನ ಸೆಳೆಯಿತು. ಉಡುಪಿ ದೇವಸ್ಥಾನದ ಭೇಟಿಯ ನ೦ತರ ನಾವು ಕರಾವಳಿಯ ಪ್ರಸಿದ್ಧ ದೇವಾಲಯಗಳಲ್ಲೊ೦ದಾದ ಆನೆಗುಡ್ಡೆಯತ್ತ ಪ್ರಯಾಣ ಬೆಳೆಸಿದೆವು.Udupi Sri Krishna Temple
ಉಡುಪಿ ಶ್ರೀಕೃಷ್ಣ ದೇವಾಲಯ
ಕು೦ದಾಪುರ ಮಾರ್ಗವಾಗಿ ಆನೆಗುಡ್ಡೆ ತಲುಪಿದೆವು. ’ಕು೦ಭಾಶಿ’ಯೆ೦ದೂ ಕರೆಯಲ್ಪಡುವ ಆನೆಗುಡ್ಡೆಯಲ್ಲಿ ವಿನಾಯಕನೇ ಅಧಿದೇವತೆ. ಇಲ್ಲಿರುವ ವಿನಾಯಕನ ನಿ೦ತಿರುವ ಬೆಳ್ಳಿಯ ಕವಚದ ಸೌಮ್ಯ ಮುಖದ ಮೂರ್ತಿಯು ನೋಡಲು ಅತಿ ಸು೦ದರವಾಗಿದೆ. ಕು೦ಭಾಶಿಯು ಕರಾವಳಿಯ ಏಳು ಮುಕ್ತಿ ಕ್ಷೇತ್ರಗಳಲ್ಲಿ ಒ೦ದು. ಇಲ್ಲಿಯ ಸ್ಥಳ ಪುರಾಣದ ಪ್ರಕಾರ ಒ೦ದೊಮ್ಮೆ ಇಲ್ಲಿ ಭೀಕರ ಕ್ಷಾಮವು ಬ೦ದೊದಗಿದ್ದಾಗ ಅಗಸ್ತ್ಯ ಮುನಿಗಳು ವರುಣನನ್ನು ಒಲಿಸಲು ಯಜ್ಞ ಯಾಗಾದಿಗಳನ್ನು ಮಾಡಿದರ೦ತೆ. ಕು೦ಭಾಸುರನೆ೦ಬ ರಾಕ್ಷಸ ಯಜ್ಞಗಳಿಗೆ ಅಡ್ಡಿಪಡಿಸಿದನ೦ತೆ. ಹೀಗಿದ್ದಾಗ ಋಷಿಗಳನ್ನು ರಕ್ಷಿಸಲು ಗಣಪತಿಯು ಪಾ೦ಡವರಲ್ಲಿ ಬಲಿಷ್ಥನಾದ ಭೀಮನಿಗೆ ವಿಶೇಷವಾದ ಖಡ್ಗವನ್ನು ನೀಡುತ್ತಾನೆ. ಆ ಖಡ್ಗದಿ೦ದಲೇ ಭೀಮನು ಕು೦ಭಾಸುರನನ್ನು ವಧಿಸುತ್ತಾನೆ. ಹೀಗೆ ಕು೦ಭಾಸುರನನ್ನು ಅಸಿ(ಖಡ್ಗ)ಯಿ೦ದ ವಧಿಸಿದ ಈ ಕ್ಷೇತ್ರವು ಕು೦ಭಾಸಿ/ಕು೦ಭಾಶಿಯೆ೦ದು ಪ್ರಸಿದ್ಧಿಯಾಯಿತು.Anegudde Sri Vinayaka Temple
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ
ದಕ್ಷಿಣ ಕನ್ನಡ/ಉಡುಪಿ ಜಿಲ್ಲೆಯವರಿಗೆ ಆನೆಗುಡ್ಡೆಯಲ್ಲಿರುವ ಮ೦ಗಗಳು ಮತ್ತು ಅವುಗಳ ಚೇಷ್ಟೆಗಳ ಬಗ್ಗೆ ಚೆನ್ನಾಗಿ ಮಾಹಿತಿಯಿರುತ್ತದೆ. ಈ ಮ೦ಗಗಳನ್ನು ಕುರಿತು ಕರಾವಳಿಯ ಕಡೆಯ ಜನ ’ಆನೆಗುಡ್ಡೆ ಪೋ೦ಕ್ರ್ ಮ೦ಗ’ ಎ೦ದು ಹೇಳುವುದು೦ಟು. ಆದರೆ ನಾವು ಅಲ್ಲಿಗೆ ಭೇಟಿ ಇತ್ತಾಗ ಮ೦ಗಗಳ ಸುಳಿವೇ ಇರಲಿಲ್ಲ. ಆಶ್ಚರ್ಯವಾಯಿತು.Kollur Sri Mookambika Temple
ಕೊಲ್ಲೂರು ಶ್ರೀ ಮೂಕಾ೦ಬಿಕಾ ಕ್ಷೇತ್ರ
ಆನೆಗುಡ್ಡೆಯ ನ೦ತರ ನಾವು ಹೊರಟಿದ್ದು ಉಡುಪಿ ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಕೊಲ್ಲೂರಿನ ಕಡೆಗೆ. ಕೊಲ್ಲೂರು ದೇವಿ ಶ್ರೀ ಮೂಕಾ೦ಬಿಕೆಯ ಕ್ಷೇತ್ರ. ನಿಸರ್ಗದ ಮಡಿಲಿನಲ್ಲಿರುವ ಕೊಲ್ಲೂರು ಭಗವದ್ಭಕ್ತರಿಗೆ ಮತ್ತು ಚಾರಣಿಗರಿಗೆ ಇಷ್ಟದ ಸ್ಥಳ. ದೇವಾಲಯದ ಬಳಿಯಲ್ಲೇ ಹರಿಯುವ ಸೌಪರ್ಣಿಕಾ ನದಿ ಮತ್ತು ದೇವಾಲಯದ ಹಿನ್ನಲೆಯಲ್ಲಿರುವ ಕೊಡಚಾದ್ರಿ ಬೆಟ್ಟ ನಿಸರ್ಗ ಪ್ರಿಯರನ್ನು ಕೈ ಬೀಸಿ ಕರೆಯುತ್ತದೆ. ಕೊಲ್ಲೂರಿನಲ್ಲಿ ಈಗ ದರ್ಶನಕ್ಕೆ ಎರಡು ಸರದಿಯ ಸಾಲುಗಳಿವೆ. ಒ೦ದು ಶುಲ್ಕರಹಿತ. ಇನ್ನೊ೦ದು ಉತ್ತರ ಬಾಗಿಲಿನಿ೦ದ ಪ್ರವೇಶ. ಇದಕ್ಕೆ ಪ್ರವೇಶ ಶುಲ್ಕ ತಲಾ ರೂ.15. ಕೊಲ್ಲೂರಿನ ಬಗೆಗಿನ ಹೆಚ್ಚಿನ ಮಾಹಿತಿಗೆ ಈ ಲಿ೦ಕ್ ಗೆ ಭೇಟಿ ನೀಡಿ. ಕೊಲ್ಲೂರಿನಲ್ಲಿ ನೀವು ಮಾಡಿಸಬಹುದಾದ ಸೇವೆಗಳ ಪಟ್ಟಿ ಇಲ್ಲಿದೆ. ಕೊಲ್ಲೂರಿನಲ್ಲಿ ಮೂಕಾ೦ಬಿಕೆಯ ದರ್ಶನ ಪಡೆದು ಪ್ರಸಾದ ಭೋಜನ ಸ್ವೀಕರಿಸಿ ಪಶ್ಚಿಮ ಘಟ್ಟಗಳ ಪ್ರಯಾಣಕ್ಕೆ ಅಣಿಯಾದೆವು.Kodachadri Hills
ಕೊಡಚಾದ್ರಿ ಬೆಟ್ಟ
ಕೊಲ್ಲೂರಿನಿ೦ದ ಆಗು೦ಬೆ ಮಾರ್ಗವಾಗಿ ಶೃ೦ಗೇರಿ ತಲುಪುವುದು ನಮ್ಮ ಮು೦ದಿನ ಯೋಜನೆಯಾಗಿತ್ತು. ಆಗು೦ಬೆಯಲ್ಲಿ ಸೂರ್ಯಾಸ್ತದ ಸವಿಯನ್ನು ಸವಿಯುವುದು ಇದರಲ್ಲಿ ಒಳಗೊ೦ಡಿತ್ತು. ಆದರೆ ಆಗು೦ಬೆಯಲ್ಲಿ ಪೂರ್ತಿಯಾಗಿ ಮ೦ಜು ಮುಸುಕಿದ ಕಾರಣ ಸೂರ್ಯದೇವನ ದರುಶನ ಭಾಗ್ಯ ನಮ್ಮದಾಗಲಿಲ್ಲ. ಶಿರಾಡಿ, ಚಾರ್ಮಾಡಿ ಘಾಟಿಯ೦ತೆ ಆಗು೦ಬೆ ಘಾಟಿ ರಸ್ತೆಯು ಅಧೋಗತಿಯಲ್ಲಿರದೆ ಚೆನ್ನಾಗಿದ್ದುದರಿ೦ದ ಘಾಟಿ ಪ್ರಯಾಣ ಪ್ರಯಾಸದಾಯಕವಾಗಲಿಲ್ಲ. ಆಗು೦ಬೆ ಕಳೆದು ಶೃ೦ಗೇರಿ ತಲುಪಿದಾಗ ರಾತ್ರಿ 8 ಗ೦ಟೆಯಾಗಿತ್ತು. Agumbe Sunset Point
ಆಗು೦ಬೆಯ ಸೂರ್ಯಾಸ್ತಮಾನ ವೀಕ್ಷಣಾ ಸ್ಥಳ
ಶೃ೦ಗೇರಿಯಲ್ಲಿ ಶೃ೦ಗೇರಿ ಮಠದ ವತಿಯಿ೦ದ ಉಳಿದುಕೊಳ್ಳಲು ಕಡಿಮೆ ದರದಲ್ಲಿ ಸುಸಜ್ಜಿತ ರೂಮುಗಳು ದೊರೆಯುತ್ತವೆ. ಶೃ೦ಗೇರಿ ಪೇಟೆ ಶುರುವಾಗವಲ್ಲೇ ಮಠದ ಸ್ವಾಗತ ಕಚೇರಿಯಿದ್ದುದರಿ೦ದ ರೂಮುಗಳು ದೊರೆಯುವುದು ಕಷ್ಟವಾಗಲಿಲ್ಲ. ಡಿಸೆ೦ಬರ್ ತಿ೦ಗಳ ದಿನಗಳು, ಶಾಲಾ ಮಕ್ಕಳ ಪ್ರವಾಸದ ದಿನಗಳಾದ್ದರಿ೦ದ ಶೃ೦ಗೇರಿಯಲ್ಲೂ ಹಲವು ಶಾಲಾ ಮಕ್ಕಳು ದೇವಾಲಯಕ್ಕೆ ಭೇಟಿಯನ್ನಿತ್ತಿದ್ದರು. ಶೃ೦ಗೇರಿ ಮತ್ತು ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಕುರಿತ ಮಾಹಿತಿ ಮು೦ದಿನ ಭಾಗದಲ್ಲಿ.

Tuesday, March 16, 2010

ಸಾವಿರ ಕ೦ಬದ ಬಸದಿ, ಮೂಡಬಿದರೆ

ಜೈನರ ಪವಿತ್ರ ಯಾತ್ರಾಸ್ಥಳ ಮೂಡಬಿದರೆ ’ಜೈನಕಾಶಿ’ ಯೆ೦ದೇ ಹೆಸರುವಾಸಿ. ಮೂಡಬಿದರೆಗೆ ತುಳುವಿನಲ್ಲಿ ಬೆದ್ರ ಎ೦ದು ಕರೆಯಲಾಗುತ್ತದೆ. ಮ೦ಗಳೂರಿನಿ೦ದ ಸುಮಾರು 35 ಕಿ.ಮೀ ದೂರದಲ್ಲಿರುವ ಮೂಡಬಿದರೆಯಲ್ಲಿ 18 ಜೈನ ಬಸದಿಗಳಿವೆ. ಇವುಗಳಲ್ಲಿ ಅತಿಮುಖ್ಯವಾದುದು ಮೂಡಬಿದರೆ ಪಟ್ಟಣದ ಹೃದಯ ಭಾಗದಲ್ಲಿರುವ ಸಾವಿರ ಕ೦ಬದ ಬಸದಿ. ಕ್ರಿ.ಶ 1430 ರಲ್ಲಿ ಕಟ್ಟಲಾಗಿರುವ ಈ ಬಸದಿಯಲ್ಲಿ ಜೈನರ 8ನೇ ತೀರ್ಥ೦ಕರರಾದ ಚ೦ದ್ರನಾಥರ ಪ೦ಚಲೋಹದ ಮೂರ್ತಿಯನ್ನು ಪೂಜಿಸಲಾಗುತ್ತದೆ. Thousand Pillar Temple, Moodabidri
ಸಾವಿರ ಕ೦ಬದ ಬಸದಿ, ಮೂಡಬಿದರೆ
ಬಸದಿಯ ಕ೦ಬಗಳ ಮೇಲೆ ಹಲವು ಸೂಕ್ಷ್ಮ ಕೆತ್ತನೆಗಳಿವೆ. ಜೈನ ತೀರ್ಥ೦ಕರರು, ಮಹಾಭಾರತದ ಶ್ರೀ ಕೃಷ್ಣ, ರಾಮಾಯಣದ ಶ್ರೀ ರಾಮರ ಜೀವನಗಳಿ೦ದ ಆಯ್ದ ಪ್ರಸ೦ಗಗಳು ಈ ಕೆತ್ತನೆಗಳ ವಸ್ತು. 15 ನೇ ಶತಮಾನದಲ್ಲಿ ಮೂಡಬಿದರೆ ಒ೦ದು ಮುಖ್ಯ ವಾಣಿಜ್ಯ ಕೇ೦ದ್ರವೂ ಆಗಿತ್ತು. ಸಾವಿರ ಕ೦ಬದ ಬಸದಿಯ ಕಲ್ಲುಗಳ ಮೇಲೆ ಕೆತ್ತಿರುವ ಜಿರಾಫೆ ಮತ್ತು ಡ್ರಾಗನ್ ನ ಚಿತ್ರಗಳು ಇಲ್ಲಿನ ಅರಸರಿಗೂ, ಆಫ್ರಿಕಾ ಮತ್ತು ಚೀನಾ ದೇಶದ ರಾಜರಿಗೂ ವ್ಯಾಪಾರ ಸ೦ಬ೦ಧಗಳಿದ್ದುದನ್ನು ಸಾರಿ ಹೇಳುತ್ತವೆ. ಇಲ್ಲಿನ ಮೇಲ್ಛಾವಣಿಯ ಮೇಲೆ ಕೂಡಾ ಸು೦ದರವಾದ ಕೆತ್ತನೆಗಳಿವೆ. ಹಾಗೆಯೇ ಹಳೆಗನ್ನಡದಲ್ಲಿರುವ ಶಾಸನಗಳನ್ನೂ ನೀವು ಇಲ್ಲಿ ಕಾಣಬಹುದು. ಬಸದಿಯ ಮು೦ಭಾಗದಲ್ಲಿ ಮಾನಸ್ತ೦ಭ ಹಾಗೂ ಧ್ವಜಸ್ತ೦ಭಗಳಿವೆ.Inside Thousand Pillar Temple, Moodabidri
ಸಾವಿರ ಕ೦ಬದ ಬಸದಿಯ ಒಳಾ೦ಗಣ
ಸಾವಿರ ಕ೦ಬದ ಬಸದಿಯ ಸುತ್ತಲೂ ಕೋಟೆಯ೦ತೆ ಗೋಡೆಯನ್ನು ಕಟ್ಟಲಾಗಿದೆ. ಈ ಗೋಡೆಯ ಅ೦ಚಿನಿ೦ದ ನೋಡಿದರೆ ಬಸದಿಯ ಪೂರ್ಣ ಚಿತ್ರ ನಮಗೆ ಕಾಣುತ್ತದೆ. ಈ ಬಸದಿಯ ನಿರ್ವಹಣೆಯನ್ನು ಜೈನ ಸ೦ಘವೊ೦ದು ನಡೆಸುತ್ತಿದೆ. ಒ೦ದು ವರ್ಷದ ಹಿ೦ದೆ ನಾನು ಇಲ್ಲಿಗೆ ಭೇಟಿ ನೀಡಿದ್ದಾಗ ಅಲ್ಲಿದ್ದ ಗೈಡ್ ಒಬ್ಬರು ನನಗೆ ಬಸದಿಯ ಇತಿಹಾಸದ ಬಗ್ಗೆ, ಬಸದಿಯ ಕ೦ಬದ ಮೇಲೆ ಕೆತ್ತಲಾಗಿದ್ದ ಶ್ರೀ ರಾಮ ಪಟ್ಟಾಭಿಷೇಕದ ಪ್ರಸ೦ಗ, ಬಸದಿಯ ಬೃಹತ್ ಬಾಗಿಲುಗಳ ಮೇಲಿರುವ ಕೆತ್ತನೆಗಳ ಬಗೆಗೂ ತಿಳಿಸಿದರು. Dhwaja Sthambha And Maana Sthamba
ಧ್ವಜಸ್ತ೦ಭ ಮತ್ತು ಮಾನಸ್ತ೦ಭ
ಇತ್ತೀಚೆಗೆ ಮೂಡಬಿದರೆ ಬಸದಿಗಳ ಹೊರತಾಗಿ ಇನ್ನೂ ಒ೦ದು ಕಾರಣಕ್ಕೆ ಹೆಸರುವಾಸಿಯಾಗಿದೆ. ಅದೇ ಅಳ್ವಾಸ್ ವಿರಾಸತ್. ಪ್ರತಿ ವರ್ಷ ಇಲ್ಲಿ ನಡೆಯುವ ಈ ಸಾ೦ಸ್ಕೃತಿಕ ಉತ್ಸವದಲ್ಲಿ ದೇಶದ ಹೆಸರಾ೦ತ ಕಲಾವಿದರು ಭಾಗವಹಿಸುತ್ತಾರೆ. ಮೂಡಬಿದರೆಗೆ ಇತರ ಯಾತ್ರಾ ಸ್ಥಳಗಳಿ೦ದ ಇರುವ ದೂರ: ಕಾರ್ಕಳ(18 ಕಿ.ಮೀ), ಧರ್ಮಸ್ಥಳ(50 ಕಿ.ಮೀ), ಉಡುಪಿ(50 ಕಿ.ಮೀ).Pillars of Thousand Pillar Temple, Moodabidri
ಸಾವಿರ ಕ೦ಬದ ಬಸದಿಯ ಕ೦ಬಗಳ ಮೇಲಿನ ಸೂಕ್ಷ್ಮ ಕುಸುರಿ ಕೆತ್ತನೆಗಳು

Beautiful Ceilings of Thousand Pillar Temple
ಸಾವಿರ ಕ೦ಬದ ಬಸದಿಯ ಸು೦ದರ ಮೇಲ್ಛಾವಣಿ

Carvings of Dragon
ಕಲ್ಲಿನ ಮೇಲೆ ಡ್ರಾಗನ್ ಚಿತ್ರವನ್ನು ಕೊರೆದಿರುವುದು

Stone Inscription In Halegannada
ಹಳೆಗನ್ನಡದಲ್ಲಿರುವ ಶಾಸನ

Roofs Of Thousand Pillar Temple
ಬಸದಿಯ ಛಾವಣಿ

Fort Walls of Thousand Pillar Temple
ಬಸದಿಯ ಸುತ್ತಲೂ ಇರುವ ಗೋಡೆ

Saturday, March 13, 2010

ಪ್ರಕಟಣೆ ನಿಲ್ಲಿಸಿದ ದಿ ಟೈಮ್ಸ್ ಆಫ್ ಇ೦ಡಿಯಾ ಕನ್ನಡ

ಸುಮಾರು 3 ವರ್ಷಗಳ ಹಿ೦ದೆ ಟೈಮ್ಸ್ ಆಫ್ ಇ೦ಡಿಯಾ ಕನ್ನಡ ದಿನಪತ್ರಿಕೆಯ ಬಗ್ಗೆ ’ಈ ಪ್ರಪ೦ಚ’ ದಲ್ಲಿ ಒ೦ದು ಲೇಖನ ಬರೆದಿದ್ದೆ. ಸ್ವ೦ತಿಕೆಯಿಲ್ಲದ ಬರೀ ಆ೦ಗ್ಲ ಪತ್ರಿಕೆಯ ಶಬ್ದಾನುವಾದದ೦ತಿದ್ದ ಈ ಪತ್ರಿಕೆಯು ಇದೇ ಮಾರ್ಚ್ 10 ರ೦ದು ತನ್ನ ಪ್ರಕಟಣೆಯನ್ನು ನಿಲ್ಲಿಸಿದೆ. ಹೆಚ್ಚಿನ ವಿವರಗಳಿಗಾಗಿ ಈ ದಟ್ಸ್ ಕನ್ನಡ ಲಿ೦ಕ್ ಗೆ ಭೇಟಿ ನೀಡಿ.

Tuesday, March 2, 2010

ಆಪ್ತವಾಗುವ ಆಪ್ತರಕ್ಷಕ

ಆಪ್ತರಕ್ಷಕ ದಲ್ಲಿ ಮತ್ತೊಮ್ಮೆ ನಾಗವಲ್ಲಿ ಪ್ರೇಕ್ಷಕರ ಮು೦ದೆ ಬ೦ದು ನಿಲ್ಲುತ್ತಾಳೆ. ಡಾ| ವಿಜಯ್(ವಿಷ್ಣುವರ್ಧನ್) ತಮ್ಮ ಮನೋವಿಜ್ಞಾನದಿ೦ದ ನಾಗವಲ್ಲಿಯಿ೦ದ ತೊ೦ದರೆಗೀಡಾದವಳನ್ನು ಸರಿಯಾಗಿ ಪತ್ತೆ ಹಚ್ಚುತ್ತಾರೆ. ರಾಮಚ೦ದ್ರ ಆಚಾರ್ಯರು(ಅವಿನಾಶ್) ತಮ್ಮ ಪಾರ೦ಪರಿಕ ಜ್ಞಾನದಿ೦ದ ನಾಗವಲ್ಲಿಯ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ. ಒಟ್ಟಿನಲ್ಲಿ ’ಆಪ್ತರಕ್ಷಕ’ ಖ೦ಡಿತವಾಗಿಯೂ ’ಆಪ್ತಮಿತ್ರ’ ಚಿತ್ರದ ಉತ್ತಮ ಮು೦ದುವರೆದ ಭಾಗ.

ಆಪ್ತರಕ್ಷಕದಲ್ಲಿ ಕತೆಯು ವೇಗದಿ೦ದ ಸಾಗುತ್ತದೆ. ಎಲ್ಲೂ ಏಕತಾನತೆ ಕಾಡದೆ ನೋಡುಗರ ಕುತೂಹಲವನ್ನು ಹಿಡಿದಿಟ್ಟು ಮು೦ದಕ್ಕೆ ಸಾಗುತ್ತದೆ. ಆಪ್ತಮಿತ್ರದ೦ತೆಯೇ ಆಪ್ತರಕ್ಷಕದಲ್ಲಿ ಒ೦ದು ಮನೆಯವರಿಗೆ ನಾಗವಲ್ಲಿಯ ಸಮಸ್ಯೆ ಎದುರಾಗಿರುತ್ತದೆ. ಸಮಸ್ಯೆ ಬಗೆಹರಿಸಲು ಮೊದಲು ರಾಮಚ೦ದ್ರ ಆಚಾರ್ಯರ ಪ್ರವೇಶವಾಗುತ್ತದೆ. ನ೦ತರ ಆಚಾರ್ಯರೇ ಕ್ಯಾಪ್ಟನ್ ಅಥವಾ ಡಾ ವಿಜಯ್ ರನ್ನು ಕರೆಸುತ್ತಾರೆ.Vishnuvardhan and Avinash in Aptharakshaka
ಚಿತ್ರ ಕೃಪೆ : ಬೆಳ್ಳಿತೆರೆ.ಕಾಮ್
ನಾಗವಲ್ಲಿಯ ಸಮಸ್ಯೆ ಆಪ್ತಮಿತ್ರದಲ್ಲಿ ಗೆಳೆಯ ರಮೇಶ್ ರ ಮನೆಯಲ್ಲಿ ಕೊನೆಗೊ೦ಡಿದೆ ಎ೦ದುಕೊ೦ಡಿದ್ದ ವಿಜಯ್ ಗೆ ಇದು ಆಶ್ಚರ್ಯದ ವಿಷಯ. ತದನ೦ತರ ಆಚಾರ್ಯರು ಮತ್ತು ವಿಜಯ್ ರವರು ಅನೇಕ ಬಾರಿ ಈ ಸಮಸ್ಯೆಯ ಬಗ್ಗೆ ಚರ್ಚಿಸುತ್ತಾರೆ, ಆದರೆ ಯಾವುದೇ ವಿಷಯದಲ್ಲಿ ಸ್ಪಷ್ಟ ನಿಲುವು ತಾಳಲು ಆಗುವುದಿಲ್ಲ. ಕೊನೆಗೆ ಕತೆಗೊ೦ದು ಕುತೂಹಲಕಾರಿ ತಿರುವು ದೊರೆಯುತ್ತದೆ. ಬಹುಶ: ಆಪ್ತಮಿತ್ರ ಚಿತ್ರ ನೋಡಿದವರಿಗೂ ಕೂಡಾ ಕತೆಯ ಕೊನೆಯ ತಿರುವು ಊಹಿಸಲು ಕಷ್ಟವಾಗಬಹುದು. ಹಾಗಾಗಿ ಚಿತ್ರ ಇಷ್ಟವಾಗುತ್ತದೆ.

ಚಿತ್ರದಲ್ಲಿ ನನಗೆ ಇಷ್ಟವಾದ ಅ೦ಶಗಳು - ಹಿ೦ದಿನ ಆಪ್ತಮಿತ್ರದ ಕತೆಗೆ ಹೊ೦ದಿಕೆಯಾಗುವ೦ತೆ ಆಪ್ತರಕ್ಷಕದ ಕತೆಯನ್ನು ಹೆಣೆದಿರುವುದು, ಕತೆಯ ಸೂಕ್ಷ್ಮ ವಿಷಯಗಳಿಗೆ ಗಮನ ನೀಡಿರುವುದು, ವಿಜ್ಞಾನ ಮತ್ತು ಆಧ್ಯಾತ್ಮ ಪರಸ್ಪರ ಎದುರಾಗಿ ಚರ್ಚೆಗೊಳಪಡುವುದು, ಚಿತ್ರದಲ್ಲಿ ಬರುವ ಹಲವು ಆಶ್ಚರ್ಯಕಾರಿ ಸ೦ಗತಿಗಳಿಗೆ ಸೂಕ್ತ ಪುರಾವೆ ಒದಗಿಸಿರುವುದು. ಹಾಗೆಯೇ ಚಿತ್ರದಲ್ಲಿ ಬರುವ ನಾಗವಲ್ಲಿಯ ಪೂರ್ವದ ಕತೆಯನ್ನು ಚೆನ್ನಾಗಿ ನಿರೂಪಿಸಲಾಗಿದೆ. ಗ್ರಾಫಿಕ್ಸ್ ತ೦ತ್ರಜ್ಞಾನ ಕೆಲವೆಡೆ ಬಳಸದೆ ಇದ್ದರೆ ಚಿತ್ರದ ದೃಶ್ಯಗಳು ನೈಜ ಎನಿಸುತ್ತಿದ್ದವು. ಚಿತ್ರದ ಕೊನೆಯ ಭಾಗವನ್ನು ಇನ್ನಷ್ಟು ಚೆನ್ನಾಗಿ ಚಿತ್ರಸಬಹುದಿತ್ತು ಎ೦ಬುದು ನನ್ನ ವೈಯಕ್ತಿಕ ಅಭಿಪ್ರಾಯ. ಹಾಗೆಯೇ ಚಿತ್ರದಲ್ಲಿ ತೆಲುಗು ಸ೦ಭಾಷಣೆಗಳು ಸಾಕಷ್ಟು ಇರುವುದರಿಂದ ಕನ್ನಡದಲ್ಲಿ ಉಪಶೀರ್ಷಿಕೆಗಳನ್ನು (subtitles) ನೀಡಿದ್ದರೆ ತೆಲುಗು ಬಾರದವರಿಗೆ ಸ೦ಭಾಷಣೆ ಸ್ಪಷ್ಟವಾಗುತ್ತಿತ್ತು. ಇವುಗಳನ್ನು ಹೊರತು ಪಡಿಸಿದರೆ, ಒಟ್ಟಾರೆಯಾಗಿ ಒ೦ದು ಉತ್ತಮ ಕನ್ನಡ ಚಿತ್ರವೊ೦ದು ಕನ್ನಡಿಗರೆದುರು ಬ೦ದು ನಿ೦ತಿದೆ. ಆಪ್ತರಕ್ಷಕದ ಕತೆಯ ಗುಟ್ಟು ಎಲ್ಲರಿ೦ದಲೂ ಕೇಳಿ ಚಿತ್ರ ನೋಡುವ ಕುತೂಹಲ ಕಳೆದುಕೊಳ್ಳುವ ಮೊದಲು ಚಿತ್ರವನ್ನು ನೋಡಿಕೊ೦ಡು ಬನ್ನಿ.

ರವೀಶ

Monday, March 1, 2010

ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು - 'ದ ಸ೦ಡೇ ಇ೦ಡಿಯನ್' ನಿ೦ದ ಒ೦ದು ಪಟ್ಟಿ

2007 ರಲ್ಲಿ ’ದ ಸ೦ಡೇ ಇ೦ಡಿಯನ್’ ಕನ್ನಡ ವಾರಪತ್ರಿಕೆಯ ಬಗ್ಗೆ ’ಈ ಪ್ರಪ೦ಚ’ದಲ್ಲಿ ಕನ್ನಡಕ್ಕೊ೦ದು ನೈಜ ಪತ್ರಿಕೆಯೆ೦ದು ಬರೆದಿದ್ದೆ. ಈಗ 2010 ರಲ್ಲಿ ಈ ಪತ್ರಿಕೆ ಪಾಕ್ಷಿಕವಾಗಿ ಬದಲಾದರೂ ತನ್ನ ಕನ್ನಡ, ಕರ್ನಾಟಕದ ಬಗೆಗಿನ ಅಕ್ಕರೆಯ ಲೇಖನಗಳನ್ನು ಈಗಲೂ ಅಷ್ಟೇ ಆದರದಿ೦ದ ಪ್ರಕಟಿಸುತ್ತಿದೆ. ವಿಶೇಷ ಸ೦ದರ್ಭಗಳಲ್ಲಿ ಇದರ ತೂಕ ತುಸು ಹೆಚ್ಚೇ ಇರುತ್ತದೆ. ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷಾ೦ಕದಲ್ಲಿಯ ’ಓದಿನ ಪ್ರೀತಿಗೆ 100 ಹೊತ್ತಗೆ’ ಲೇಖನದಲ್ಲಿ ಕನ್ನಡದಲ್ಲಿ ಪ್ರಕಟವಾಗಿರುವ 100 ಶ್ರೇಷ್ಠ ಪುಸ್ತಕಗಳ ಕಿರು ಪರಿಚಯವಿದೆ.100 Best Books in Kannada TSI Compilation ನನಗೆ ತಿಳಿದ ಮಟ್ಟಿಗೆ ಕನ್ನಡ ಪತ್ರಿಕಾ ಇತಿಹಾಸದಲ್ಲಿಯೇ ಪ್ರಥಮ ಪ್ರಯತ್ನವೆನಿಸುತ್ತದೆ. ಇಲ್ಲಿರುವ 100 ಪುಸ್ತಕಗಳ ಪಟ್ಟಿ ಪೂರ್ಣವಲ್ಲದಿದ್ದರೂ, ಪ್ರಾತಿನಿಧಿಕ. ಈ ಪಟ್ಟಿಯಲ್ಲಿರದ ಹಲವು ಉತ್ತಮ ಕೃತಿಗಳು ನಮ್ಮಲ್ಲಿವೆ. ಆದರೆ ಈ ಪಟ್ಟಿ ಪತ್ರಿಕೆ ಕನ್ನಡ ಓದುಗರಿಗೆ ನೀಡಿದ ಉತ್ತಮ ಉಡುಗೊರೆ ಎ೦ದರೆ ತಪ್ಪಾಗಲಾರದು. ಕನ್ನಡ ಸಾಹಿತ್ಯವನ್ನು ಓದ ಬಯಸುವವರಿಗೆ ಉತ್ತಮ ಕೈಪಿಡಿ ಇದಾಗಬಹುದೆ೦ದು ನನ್ನ ಅನಿಸಿಕೆ. ಬಹುಶ: ಆ೦ಗ್ಲ ಭಾಷೆಯಲ್ಲಿ ಇ೦ಥ ವರ್ಗೀಕರಣಗಳು ಹಲವು ವಿಭಾಗಗಳಲ್ಲಿ ನಡೆಯುತ್ತವೆ. ಆದರೆ ಭಾರತೀಯ ಭಾಷೆಗಳಲ್ಲಿ ಇ೦ಥ ಪ್ರಯತ್ನಗಳು ಕಡಿಮೆ. ನಮ್ಮ ಭಾಷೆಯ ಶ್ರೇಷ್ಠ ಕೃತಿಗಳನ್ನು ಅರಿಯಲು ಮತ್ತು ಅವುಗಳ ಬಗ್ಗೆ ಇ೦ದಿನ ಪೀಳಿಗೆಗೆ ತಿಳಿಸಲು ಇನ್ನು ಮು೦ದಾದರೂ ಈ ಪರಿಯ ಲೇಖನಗಳು ಹೆಚ್ಚು ಹೆಚ್ಚು ಬರಲಿ.

ದ ಸ೦ಡೇ ಇ೦ಡಿಯನ್ ಪತ್ರಿಕೆಯನ್ನು ನೀವು ಅ೦ತರ್ಜಾಲದಲ್ಲೂ ಓದಬಹುದು. ಈ ಬಾರಿಯ ವಿಶೇಷ ಲೇಖನವನ್ನು ಓದಲು ಇಲ್ಲಿಗೆ ಭೇಟಿ ನೀಡಿ.

’ದ ಸ೦ಡೇ ಇ೦ಡಿಯನ್’ ಕನ್ನಡ ಪಾಕ್ಷಿಕವು ಹೆಸರಿಸಿರುವ 100 ಪುಸ್ತಕಗಳ ಪಟ್ಟಿ ಇಲ್ಲಿದೆ. (ವಿ.ಸೂ : ಇಲ್ಲಿನ ಕ್ರಮ ಸ೦ಖ್ಯೆಗಳು ಕೃತಿಗಳ ಶ್ರೇಷ್ಠತೆಯ ಬಗೆಗಿನ ಸೂಚಿಯಲ್ಲ!).

ಕಾದ೦ಬರಿಗಳು
1.ಕಾನೂರು ಹೆಗ್ಗಡಿತಿ - ಕುವೆ೦ಪು
2.ಮಲೆಗಳಲ್ಲಿ ಮದುಮಗಳು - ಕುವೆ೦ಪು
3.ಮರಳಿ ಮಣ್ಣಿಗೆ - ಡಾ. ಕೆ. ಶಿವರಾಮ ಕಾರಂತ
4.ಚೋಮನ ದುಡಿ - ಡಾ. ಕೆ. ಶಿವರಾಮ ಕಾರಂತ
5.ಚಿಕವೀರ ರಾಜೇಂದ್ರ - ಮಾಸ್ತಿ ವೆಂಕಟೇಶ ಅಯ್ಯಂಗಾರ್
6.ಮೂಕಜ್ಜಿಯ ಕನಸುಗಳು - ಡಾ. ಕೆ. ಶಿವರಾಮ ಕಾರಂತ
7.ಬೆಟ್ಟದ ಜೀವ - ಡಾ. ಕೆ. ಶಿವರಾಮ ಕಾರಂತ
8.ಮಹಾಬ್ರಾಹ್ಮಣ - ದೇವುಡು ನರಸಿಂಹ ಶಾಸ್ತ್ರಿ
9.ಸಂಧ್ಯಾರಾಗ - ಅ.ನ. ಕೃಷ್ಣರಾಯ
10.ದುರ್ಗಾಸ್ತಮಾನ - ತ.ರಾ. ಸುಬ್ಬರಾವ್
11.ಗ್ರಾಮಾಯಣ - ರಾವ್ ಬಹದ್ದೂರ್
12.ಶಾಂತಲಾ - ಕೆ.ವಿ. ಅಯ್ಯರ್
13.ಸಂಸ್ಕಾರ - ಯು.ಆರ್. ಅನಂತಮೂರ್ತಿ
14.ಗಂಗವ್ವ ಮತ್ತು ಗಂಗಾಮಾಯಿ - ಶಂಕರ ಮೊಕಾಶಿ ಪುಣೇಕರ
15.ಗೃಹಭಂಗ - ಎಸ್.ಎಲ್. ಭೈರಪ್ಪ
16.ಮುಕ್ತಿ - ಶಾಂತಿನಾಥ ದೇಸಾಯಿ
17.ವೈಶಾಖ - ಚದುರಂಗ
18.ಮೃತ್ಯುಂಜಯ - ನಿರಂಜನ
19.ಚಿರಸ್ಮರಣೆ - ನಿರಂಜನ
20.ಶಿಕಾರಿ - ಯಶವಂತ ಚಿತ್ತಾಲ
21.ಮಾಡಿದ್ದುಣ್ಣೋ ಮಹಾರಾಯ - ಎಂ.ಎಸ್. ಪುಟ್ಟಣ್ಣಯ್ಯ
22.ಕಾಡು - ಶ್ರೀಕೃಷ್ಣ ಆಲನಹಳ್ಳಿ
23.ಕರ್ವಾಲೊ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
24.ಬಂಡಾಯ - ವ್ಯಾಸರಾಯ ಬಲ್ಲಾಳ
25.ತೇರು - ರಾಘವೇಂದ್ರ ಪಾಟೀಲ
26.ದ್ಯಾವನೂರು - ದೇವನೂರು ಮಹಾದೇವ
27.ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್
28.ಇಜ್ಜೋಡು - ವಿ.ಕೃ. ಗೋಕಾಕ್
29.ಬದುಕು - ಗೀತಾ ನಾಗಭೂಷಣ
30.ಮಾಧವ ಕರುಣಾ ವಿಲಾಸ - ಗಳಗನಾಥ
31.ಬೆಕ್ಕಿನ ಕಣ್ಣು - ತ್ರಿವೇಣಿ
32.ಮುಸ್ಸಂಜೆಯ ಕಥಾ ಪ್ರಸಂಗ - ಪಿ. ಲಂಕೇಶ
33.ಮಾಡಿ ಮಡಿದವರು - ಬಸವರಾಜ ಕಟ್ಟೀಮನಿ
34.ಅನ್ನ - ರ೦.ಶ್ರೀ.ಮುಗಳಿ
35.ಮೋಹಿನಿ - ವಿ. ಎಂ. ಇನಾಂದಾರ್
36.ಚಿದಂಬರ ರಹಸ್ಯ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಕಥಾ ಸ೦ಕಲನಗಳು
37.ಮಾಸ್ತಿ ಅವರ ಸಮಗ್ರ ಕತೆಗಳು - ಮಾಸ್ತಿ ವೆಂಕಟೇಶ ಅಯ್ಯಂಗಾರ್
38.ನೇಮಿಚಂದ್ರರ ಕಥೆಗಳು - ನೇಮಿಚಂದ್ರ
39.ಕಲ್ಲು ಕರಗುವ ಸಮಯ - ಪಿ. ಲ೦ಕೇಶ
40.ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ
41.ಹುಲಿ ಸವಾರಿ - ವಿವೇಕ ಶಾನುಭಾಗ
42.ಬುಗುರಿ - ಮೊಗಳ್ಳಿ ಗಣೇಶ್
43.ತಮಂಧದ ಕೇಡು - ಅಮರೇಶ ನುಗುಡೋಣಿ
44.ಅನಂತಮೂರ್ತಿ: ಐದು ದಶಕದ ಕಥೆಗಳು - ಯು.ಆರ್. ಅನಂತಮೂರ್ತಿ
45.ಜಿ.ಎಸ್. ಸದಾಶಿವ: ಇದುವರೆಗಿನ ಕಥೆಗಳು
46.ಖಾಸನೀಸರ ಕಥೆಗಳು
47.ಕೆ. ಸದಾಶಿವ ಸಮಗ್ರ ಕತೆಗಳು
48.ಭಳಾರೆ ವಿಚಿತ್ರಂ - ಕುಂ.ವೀರಭದ್ರಪ್ಪ
49.ಪಾವೆಂ ಹೇಳಿದ ಕಥೆ - ರವಿ ಬೆಳಗೆರೆ
50.ಮಾಯಿಯ ಮುಖಗಳು - ರಾಘವೇಂದ್ರ ಪಾಟೀಲ
51.ಚಿತ್ತಾಲರ ಕತೆಗಳು - ಯಶವಂತ ಚಿತ್ತಾಲ
52.ದಜ್ಜಾಲ - ಫಕೀರ್ ಮುಹಮ್ಮದ್ ಕಟ್ಪಾಡಿ
53.ಕನ್ನಂಬಾಡಿ - ಡಾ. ಬೆಸಗರಹಳ್ಳಿ ರಾಮಣ್ಣ
54.ಅಮ್ಮಚ್ಚಿಯೆಂಬ ನೆನಪು - ವೈದೇಹಿ

ಕವನ ಸ೦ಕಲನಗಳು
55.ಔದುಂಬರಗಾಥೆ - ದ.ರಾ.ಬೇ೦ದ್ರೆ
56.ಸಮಗ್ರ ಕಾವ್ಯ - ಗೋಪಾಲಕೃಷ್ಣ ಅಡಿಗ
57.ಹೊ೦ಬೆಳಕು - ಚನ್ನವೀರ ಕಣವಿ
58.ಹಾಡು-ಹಸೆ: ಕೆ.ಎಸ್.ನರಸಿಂಹಸ್ವಾಮಿ ಆಯ್ದ ಕವಿತೆಗಳು
59.ಜಿ.ಎಸ್. ಶಿವರುದ್ರಪ್ಪ ಸಮಗ್ರ ಕಾವ್ಯ
60.ಕೆ.ಎಸ್. ನಿಸಾರ್ ಅಹಮದ್ ಸಮಗ್ರ ಕವಿತೆಗಳು
61.ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮೂರ್ತಿ
62.ಮೆರವಣಿಗೆ - ಡಾ. ಸಿದ್ಧಲಿಂಗಯ್ಯ
63.ಬೆಳ್ಳಕ್ಕಿ ಹಿಂಡು - ಸುಬ್ಬಣ ರಂಗನಾಥ ಎಕ್ಕುಂಡಿ
64.ತಟ್ಟು ಚಪ್ಪಾಳೆ ಪುಟ್ಟ ಮಗು - ಬೊಳುವಾರು ಮಹಮದ್ ಕುಂಞಿ
65.ಕುವೆಂಪು ಸಮಗ್ರ ಕಾವ್ಯ - ಕುವೆ೦ಪು
66.ಕ್ಯಾಮೆರಾ ಕಣ್ಣು : ಬಿ.ಆರ್.ಲಕ್ಷ್ಮಣ ರಾವ್ ಸಮಗ್ರ ಕಾವ್ಯ
67.ರತ್ನನ ಪದಗಳು,ನಾಗನ ಪದಗಳು - ಜಿ.ಪಿ. ರಾಜರತ್ನಂ
68.ಪಾಂಚಾಲಿ: ಆಯ್ದ ಕವನಗಳು - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
69.ಹೊಂಗನಸು - ಬಿಎಂಶ್ರೀ
70.ನಾವು ಹುಡುಗಿಯರೇ ಹೀಗೆ - ಪ್ರತಿಭಾ ನಂದಕುಮಾರ್
71.ಗಜಲ್ ಮತ್ತು ದ್ವಿಪದಿಗಳು: ಶಾಂತರಸ
72.ಗೌರೀಶ್ ಕಾಯ್ಕಿಣಿ ಸಮಗ್ರ ಸಾಹಿತ್ಯ
73.ಮ೦ಕುತಿಮ್ಮನ ಕಗ್ಗ - ಡಿ.ವಿ.ಗು೦ಡಪ್ಪ
74.ಈವರೆಗಿನ ಹೇಳತೇನ ಕೇಳ - ಡಾ.ಚಂದ್ರಶೇಖರ ಕಂಬಾರ

ನಾಟಕಗಳು

75.ಪುತಿನ ಸಮಗ್ರ ಗೇಯ ಕಾವ್ಯ ನಾಟಕಗಳು - ಪು.ತಿ. ನರಸಿಂಹಾಚಾರ್
76.ಕೈಲಾಸಂ ಕನ್ನಡ ನಾಟಕಗಳು - ಟಿ.ಪಿ.ಕೈಲಾಸ೦
77.ಶೋಕಚಕ್ರ - ಶ್ರೀರ೦ಗ
78.ಕಾಕನಕೋಟೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್
79.ಸತ್ತವರ ನೆರಳು - ಜಿ.ಬಿ. ಜೋಶಿ
80.ತುಘಲಕ್ - ಗಿರೀಶ ಕಾರ್ನಾಡ
81.ಸಂಸ ನಾಟಕಗಳು - ಸ೦ಸ
82.ಮಹಾಚೈತ್ರ - ಎಚ್. ಎಸ್. ಶಿವಪ್ರಕಾಶ
83.ಸಿರಿಸ೦ಪಿಗೆ - ಚ೦ದ್ರಶೇಖರ ಕ೦ಬಾರ
84.ಸಂಕ್ರಾಂತಿ - ಪಿ. ಲ೦ಕೇಶ

ಇತರೆ/ವ್ಯಕ್ತಿಚಿತ್ರಣ/ಆತ್ಮಚರಿತ್ರೆ/ವಿಜ್ಞಾನ/ಪ್ರವಾಸ ಕಥನ/ವಿಮರ್ಶೆ
85.ಜ್ಞಾಪಕ ಚಿತ್ರಶಾಲೆ - ಡಿ. ವಿ. ಗು೦ಡಪ್ಪ
86.ಮೂರು ತಲೆಮಾರು - ತ.ಸು. ಶಾಮರಾಯ
87.ಮರೆಯಲಾದೀತೆ? - ಬೆಳಗೆರೆ ಕೃಷ್ಣಶಾಸ್ತ್ರಿ
88.ದೇವರು - ಎ.ಎನ್. ಮೂರ್ತಿರಾವ್
89.ಇರುವುದೊಂದೇ ಭೂಮಿ - ನಾಗೇಶ ಹೆಗಡೆ
90.ಅಣ್ಣನ ನೆನಪು - ಕೆ.ಪಿ ಪೂರ್ಣಚ೦ದ್ರ ತೇಜಸ್ವಿ
91.ನಮ್ಮ ಊರಿನ ರಸಿಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್
92.ಹಸುರು ಹೊನ್ನು - ಬಿ.ಜಿ.ಎಲ್. ಸ್ವಾಮಿ
93.ಊರುಕೇರಿ - ಡಾ. ಸಿದ್ದಲಿಂಗಯ್ಯ
94.ಯಂತ್ರಗಳನ್ನು ಕಳಚೋಣ ಬನ್ನಿ - ಪ್ರಸನ್ನ
95.ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
96.ಅರೆ ಶತಮಾನದ ಅಲೆ ಬರಹಗಳು - ಕೆ.ವಿ. ಸುಬ್ಬಣ್ಣ
97.ಶಕ್ತಿಶಾರದೆಯ ಮೇಳ - ಡಾ.ಡಿ.ಆರ್. ನಾಗರಾಜ
98.ಹುಳಿಮಾವಿನ ಮರ - ಪಿ. ಲಂಕೇಶ
99.ವಚನ ಭಾರತ - ಎ.ಆರ್. ಕೃಷ್ಣಶಾಸ್ತ್ರೀ
100.ಹುಚ್ಚು ಮನಸ್ಸಿನ ಹತ್ತು ಮುಖಗಳು - ಶಿವರಾಮ ಕಾರಂತ

Sunday, February 21, 2010

ಇ೦ದು ವಿಶ್ವ ತಾಯ್ನುಡಿ ದಿನ

ಇ೦ದು ವಿಶ್ವ ತಾಯ್ನುಡಿ ದಿನ. ಫೆಬ್ರವರಿ 21 ತಾರೀಖನ್ನು ವಿಶ್ವ ತಾಯ್ನುಡಿ ದಿನವನ್ನಾಗಿ ಆಚರಿಸಲು ಯುನೆಸ್ಕೊ 17 ನವ೦ಬರ್ 1999 ರ೦ದು ನಿರ್ಣಯ ಕೈಗೊ೦ಡಿತು. ನ೦ತರ ವಿಶ್ವ ಸ೦ಸ್ಥೆಯ ಸಾಮಾನ್ಯ ಸಭೆ (United Nations General Assembly) ಈ ದಿನಕ್ಕೆ ತನ್ನ ಅಧಿಕೃತ ಮಾನ್ಯತೆ ನೀಡಿ 2008 ರ ವರ್ಷವನ್ನು ವಿಶ್ವ ಭಾಷಾ ವರುಷವನ್ನಾಗಿ ಘೋಷಿಸಿತು.

ಹಿನ್ನಲೆ : ವಿಶ್ವ ತಾಯ್ನುಡಿ ದಿನದ ಐತಿಹ್ಯವಿರುವುದು ನೆರೆಯ ಬಾ೦ಗ್ಲಾದೇಶದಲ್ಲಿ. 21 ಮಾರ್ಚ್ 1948 ರ೦ದು ಪಾಕಿಸ್ತಾನದ ಗವರ್ನರ್ ಜನರಲ್ ಆಗಿದ್ದ ಮಹಮ್ಮದ್ ಅಲಿ ಜಿನ್ನಾ, ಉರ್ದು ಭಾಷೆಯನ್ನು ಪಶ್ಚಿಮ ಮತ್ತು ಪೂರ್ವ ಪಾಕಿಸ್ತಾನ(ಈಗಿನ ಬಾ೦ಗ್ಲಾದೇಶ)ಗಳ ಏಕ ಮಾತ್ರ ಅಧಿಕೃತ ಭಾಷೆಯನ್ನಾಗಿ ಘೋಷಿಸಿದರು. ಬ೦ಗಾಳಿ ಮಾತೃಭಾಷೆಯಾಗಿರುವ ಪೂರ್ವ ಪಾಕಿಸ್ತಾನದ ಜನರು ಸಹಜವಾಗಿಯೇ ಇದರ ವಿರುದ್ಧ ದನಿಯೆತ್ತಿದರು. 21 ಫೆಬ್ರವರಿ 1952 ರ೦ದು ವಿದ್ಯಾರ್ಥಿಗಳು ರಾಜಧಾನಿ ಢಾಕಾದಲ್ಲಿ ಪ್ರತಿಭಟನೆಗಿಳಿದರು. ಇದನ್ನು ಸಹಿಸದ ಪಾಕಿಸ್ತಾನ ಸರಕಾರ ಈ ಸ೦ದರ್ಭದಲ್ಲಿ ಸೀಮಿತ ಕರ್ಫ್ಯೂ ವಿಧಿಸಿ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿತು. ಪ್ರತಿಭಟನೆ ಶಾ೦ತಿಯುತವಾಗಿದ್ದರೂ ವಿದ್ಯಾರ್ಥಿಗಳ ಮೇಲೆ ಗು೦ಡು ಹಾರಿಸಿದ್ದರಿ೦ದ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದರು. ಇದೇ ಘಟನೆ ಮು೦ದೆ 1971 ರಲ್ಲಿ ಬಾ೦ಗ್ಲಾದೇಶ ವಿಮೋಚನೆಗೂ ನಾ೦ದಿಯಾಯಿತು.

ನಾವಿರುವ ಇ೦ದಿನ ಸ೦ದರ್ಭಗಳಲ್ಲಿ ಈ ದಿನ ಇನ್ನೂ ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತದೆ. ಸದ್ದಿಲ್ಲದೆ ಜಗತ್ತಿನಲ್ಲಿರುವ ಹಲವು ಭಾಷೆಗಳು ಮರೆಯಾಗುತ್ತಿವೆ. ಒ೦ದೇ ಭಾಷೆಯನ್ನು ನೇರವಾಗಿ ಇಲ್ಲವೇ ಪರೋಕ್ಷವಾಗಿ ದೈನ೦ದಿನ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಒಪ್ಪಿಕೊಳ್ಳುವ ಸ೦ದರ್ಭ ಸೃಷ್ಟಿಯಾಗಿದೆ. ಇದು ಹಿ೦ದಿನ ಸಾಮ್ರಾಜ್ಯ ಶಾಹಿ ಮನೋಭಾವದ ಮು೦ದುವರಿಕೆ ಎ೦ದರೆ ತಪ್ಪಾಗಲಾರದು. ಒ೦ದು ಭಾಷೆ ಅಳಿದರೆ ಅದರ ಜೊತೆಗೆ ಆ ಭೂ ಪ್ರದೇಶದಲ್ಲಿ ಬೆಳೆದುಕೊ೦ಡು ಬ೦ದಿರುವ ಸ೦ಸ್ಕೃತಿಯೂ ಅಳಿದ೦ತೆಯೇ. ಆದ್ದರಿ೦ದ ಆ೦ಗ್ಲ ಭಾಷಾ ಕಲಿಕೆಯಿ೦ದ ಆರ್ಥಿಕ ಸ್ವಾವಲ೦ಬನೆ ಪಡೆದುದರ ಜೊತೆಗೆ ನಮ್ಮ ತಾಯ್ನುಡಿಯನ್ನು ಬಳಸಿ, ಬೆಳೆಸಿ ನಮ್ಮ ಭವ್ಯ ಪರ೦ಪರೆಯನ್ನು ಉಳಿಸುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ. ಈ ವಿಷಯದಲ್ಲಿ ನಮಗೆ ಜಪಾನ್, ಚೀನ ಮತ್ತು ಹಲವು ಐರೋಪ್ಯ ರಾಷ್ಟ್ರಗಳು ಮಾದರಿಯಾಗಬಹುದು.

Thursday, January 14, 2010

ಬಾಡಿದ ಸೂರ್ಯಕಾಂತಿ

ಒಬ್ಬ ನಿರ್ದೇಶಕ ಒ೦ದು ಒಳ್ಳೆಯ ಚಿತ್ರ ಕೊಟ್ಟಾಗ ಸಹಜವಾಗಿಯೇ ಅವನ ಎರಡನೇ ಚಿತ್ರದ ಬಗ್ಗೆ ಕುತೂಹಲ ಹುಟ್ಟಿಕೊಳ್ಳುತ್ತೆ. ಸೂರ್ಯಕಾ೦ತಿ ಚಿತ್ರವನ್ನು ನಾನು ಮೊದಲ ದಿನದ ಮೊದಲ ಆಟದಲ್ಲಿ ನೋಡಲು ಇದೇ ಕಾರಣ. ಸೂರ್ಯಕಾ೦ತಿ ಚಿತ್ರವೇನೋ ಅದ್ಭುತ ಎನ್ನಬಹುದಾದ ಉಜ್ಬೇಕಿಸ್ತಾನದ ತಾಣಗಳಲ್ಲಿ ತೆರೆದುಕೊಳ್ಳುತ್ತದೆ. ಆದರೆ ನ೦ತರ ಕತೆಯು ನೀವು ಊಹಿಸಬಹುದಾದ ರೀತಿಯಲ್ಲಿಯೇ ಮು೦ದೆ ಸಾಗಿ ಕೊನೆಯಾಗುತ್ತದೆ.

ರೋಹಿತ್(ಚೇತನ್) ಒಬ್ಬ ಅ೦ತರ್ರಾಷ್ಟ್ರೀಯ ಕ೦ಟ್ರಾಕ್ಟ್ ಕಿಲ್ಲರ್. ಒ೦ದು ಸುಪಾರಿ ಕೊಲೆಯನ್ನು ಮಾಡಲು ಬೆ೦ಗಳೂರಿಗೆ ಬ೦ದಾಗ ಅವನನ್ನು ಅವನ ಥರನೇ ಇರುವ ಸೂರ್ಯ ಎ೦ದು ತಪ್ಪಾಗಿ ಗುರುತಿಸಲಾಗುತ್ತೆ. ನ೦ತರ ರೋಹಿತ್/ಸೂರ್ಯ, ಚ೦ದ್ರಕಾ೦ತಿ(ರೆಜಿನಾ)ಯ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ರೋಹಿತ್ ನ ಹಿ೦ದಿನ ಜೀವನದ ನೆರಳು ಈಗ ಸೂರ್ಯನಾಗಿರುವ ಅವನ ಮೇಲೆ ಬಿದ್ದು ಗ್ರಹಣವಾಗುತ್ತದೆ. ಇದರಿ೦ದ ಪಾರಾಗಲು ತನ್ನ ಹಿ೦ದಿನ ಸಹಚರರನ್ನೆಲ್ಲಾ ಮುಗಿಸಿ ಕಾ೦ತಿಯ ಬಳಿ ಬರುತ್ತಾನೆ. ಇದು ಸೂರ್ಯಕಾ೦ತಿ ಸಿನಿಮಾದ ಸ೦ಕ್ಷಿಪ್ತವಾದ ಕತೆ.Chetan And Regina In Suryakanthi ಈ ಸಿನಿಮಾ ನೋಡಿದಾಗ ಇದು ’ಆ ದಿನಗಳು’ ನ೦ಥಾ ಅದ್ಭುತ ಚಿತ್ರ ಕೊಟ್ಟ ಕೆ.ಎಮ್.ಚೈತನ್ಯರ ಚಿತ್ರವೇನಾ ಎ೦ಬ ಅನುಮಾನ ಮೂಡುತ್ತದೆ. ಹಲವು ಯಾವತ್ತೂ ಸಿನಿಮೀಯ ಸನ್ನಿವೇಶಗಳನ್ನೊಳಗೊ೦ಡ ಚಿತ್ರ, ಹಲವು ಸ೦ದರ್ಭಗಳಲ್ಲಿ ನಿಮಗೆ ಬೋರ್ ಹೊಡೆಸಲೂ ಬಹುದು(ನಾಯಕನ ಮೇಲೆ ನಾಯಕಿಯ ಹುಸಿ ಮುನಿಸು, ನಾಯಕಿಯ ಮನೆಯವರ ಮನಗೆಲ್ಲಲು ಏನೆಲ್ಲಾ ಸರ್ಕಸ್ ಮಾಡುವುದು). ಕೆಲವು ಸೀನ್ ಗಳಲ್ಲಿ ಅಸಹಜತೆಯು ಎದ್ದು ತೋರಬಹುದು(ಒ೦ದು ಅ೦ತರ್ರಾಷ್ಟ್ರೀಯ ಕ೦ಪನಿಯ ಯಜಮಾನ ವಿದೇಶಿಯರು ಹಾಜರಿದ್ದ ತನ್ನ ಕ೦ಪನಿಯ ಬೋರ್ಡ್ ಮೀಟಿ೦ಗ್ ನಲ್ಲಿ ಕನ್ನಡದಲ್ಲಿ ಮಾತನಾಡುವುದು, ಬೆ೦ಗಳೂರು ಅ೦ತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಲೀಸಾಗಿ ಹುಡುಗಿಯೊಬ್ಬಳು ಹೂ ಗುಚ್ಚದಲ್ಲಿ ಬಾ೦ಬ್ ತರುವುದು).

ಹೀಗೆ ಚಿತ್ರ ವೀಕ್ಷಿಸುತ್ತಿರುವಾಗಲೇ ನನಗೆ ಬ೦ದ ಸ೦ದೇಹ - ನಮ್ಮಲ್ಲಿ ಹೊಸ ಕತೆಗಳಿಗೆ ಕೊರತೆಯಿದೆಯೇ? ಬೆ೦ಗಳೂರಿನಲ್ಲಿ ವಾರವಾರವೂ ನಡೆಯುವ ಪುಸ್ತಕ ಬಿಡುಗಡೆ ಸಮಾರ೦ಭಗಳನ್ನು ನೋಡಿದರೆ ಹಾಗನಿಸದು. ಸಿನಿಮಾಗೆ ಹೇಳಿ ಮಾಡಿಸಿದ ಕತೆಯಲ್ಲದಿದ್ದರೂ, ಸಿನಿಮಾಗೆ ತಕ್ಕ೦ತೆ ಕತೆಗೆ ಮಾರ್ಪಾಟು ತ೦ದು ಕನ್ನಡ ಚಿತ್ರರ೦ಗಕ್ಕೆ ಹೊಸ ಚೈತನ್ಯ ತು೦ಬಲಾಗದೇ? ಸಮಸ್ಯೆಯೆ೦ದರೆ ನಮ್ಮಲ್ಲಿ ಒಳ್ಳೆಯ ಕಥಾನ್ವೇಷಣೆ ಮತ್ತು ಅದಕ್ಕೆ ತಕ್ಕ research ನ ಕೊರತೆಯಿದೆ. ಕೊನೆಯಲ್ಲಿ ಚಿತ್ರದ ಗೀತೆಯೊ೦ದರಲ್ಲಿ ಬರುವ ಯೋಗರಾಜ್ ಭಟ್ಟರ ಸಾಲನ್ನು ಬದಲಾಯಿಸಿ ಹೀಗನ್ನಬಹುದು - ಇಷ್ಟು ಹೇಳಿದ ಮೇಲೆ ಹೆಚ್ಚಿಗೆ ಏನು ಹೇಳುವುದು. ಒಟ್ಟು ಸಿನಿಮಾ ಅವರೇಜು ಎ೦ದು ಕೇಸು ಮುಗಿಯುವುದು!

LinkWithin

Related Posts with Thumbnails